Preface
Read
+
Publisher
Nainoia, Inc.
PO Box 462, Bellefonte, PA 16823
(814) 470-8028
Nainoia Inc, Publisher
LinkedIn/NAINOIA-INC
Third Party Publisher Resources
Request Custom Formatted Verses
Please contact us below
Submit your proposed corrections
I understand that the Aionian Bible republishes public domain and Creative Commons Bible texts and that volunteers may be needed to present the original text accurately. I also understand that apocryphal text is removed and most variant verse numbering is mapped to the English standard. I have entered my corrections under the verse(s) below. Proposed corrections to the Kanada Open Contemporary Bible, 1-Corinthians Chapter 15 https://www.AionianBible.org/Bibles/Kannada---Open-Contemporary/1-Corinthians/15 1) ಪ್ರಿಯರೇ, ನಾನು ನಿಮಗೆ ಸಾರಿದ ಸುವಾರ್ತೆಯನ್ನೂ, ನೀವು ಅದನ್ನು ಸ್ವೀಕರಿಸಿದ್ದನ್ನೂ, ಅದರಲ್ಲಿ ನಿಂತಿರುವುದನ್ನೂ, ಈಗ ನಿಮಗೆ ನೆನಪಿಸುತ್ತೇನೆ. 2) ನಾನು ಸಾರಿದ ಈ ಸುವಾರ್ತೆಯ ವಾಕ್ಯವನ್ನು ನೀವು ಬಿಗಿಯಾಗಿ ಹಿಡಿದುಕೊಂಡರೆ, ನಿಮಗೆ ರಕ್ಷಣೆಯಾಗುತ್ತದೆ. ಇಲ್ಲದಿದ್ದರೆ, ನಿಮ್ಮ ನಂಬಿಕೆ ವ್ಯರ್ಥವಾಗಿ ಹೋಗುತ್ತದೆ. 3) ಏಕೆಂದರೆ ನಾನು ಪಡೆದುಕೊಂಡಿದ್ದರಲ್ಲಿ ಬಹು ಪ್ರಾಮುಖ್ಯವಾದದ್ದನ್ನೇ ನಿಮಗೆ ಕೊಟ್ಟಿದ್ದೇನೆ. ಅದೇನೆಂದರೆ, ಪವಿತ್ರ ವೇದದ ಪ್ರಕಾರ ಕ್ರಿಸ್ತನು ನಮ್ಮ ಪಾಪಗಳಿಗಾಗಿ ಸತ್ತರು, 4) ಹೂಣಿಡಲಾದರು, ಪವಿತ್ರ ವೇದದ ಪ್ರಕಾರವೇ ಮೂರನೆಯ ದಿನದಲ್ಲಿ ಎದ್ದು ಬಂದರು. 5) ಕೇಫನಿಗೂ ಆಮೇಲೆ ಹನ್ನೆರಡು ಮಂದಿಗೂ ಕಾಣಿಸಿಕೊಂಡರು. 6) ತರುವಾಯ ಒಂದೇ ಸಮಯದಲ್ಲಿ ಐನೂರಕ್ಕೂ ಹೆಚ್ಚು ಮಂದಿ ಹಿಂಬಾಲಕರಿಗೆ ಕ್ರಿಸ್ತ ಯೇಸು ಕಾಣಿಸಿಕೊಂಡರು. ಅವರಲ್ಲಿ ಕೆಲವರು ಸತ್ತು ಹೋಗಿದ್ದರೂ ಬಹುಜನರು ಇಂದಿಗೂ ಬದುಕಿದ್ದಾರೆ. 7) ತರುವಾಯ ಕ್ರಿಸ್ತ ಯೇಸು ಯಾಕೋಬನಿಗೂ ಆಮೇಲೆ ಅಪೊಸ್ತಲರೆಲ್ಲರಿಗೂ ಕಾಣಿಸಿಕೊಂಡರು. 8) ಕಟ್ಟಕಡೆಗೆ, ದಿನತುಂಬುವ ಮೊದಲೇ ಹುಟ್ಟಿದವನಂತಿರುವ ನನಗೂ ಕಾಣಿಸಿಕೊಂಡರು. 9) ನಾನಾದರೋ ಅಪೊಸ್ತಲರಲ್ಲಿ ಕನಿಷ್ಠನು, ಅಪೊಸ್ತಲನೆನಿಸಿಕೊಳ್ಳುವುದಕ್ಕೆ ನಾನು ಯೋಗ್ಯನಲ್ಲ, ಏಕೆಂದರೆ ನಾನು ದೇವರ ಸಭೆಯನ್ನು ಹಿಂಸೆಪಡಿಸಿದೆನು. 10) ಆದರೆ ನಾನು ಎಂಥವನಾಗಿದ್ದೇನೋ, ಅದು ದೇವರ ಕೃಪೆಯಿಂದಲೇ ಆಗಿರುತ್ತದೆ. ನನಗುಂಟಾದ ದೇವರ ಕೃಪೆಯು ನಿಷ್ಫಲವಾಗಲಿಲ್ಲ. ನಾನು ಅವರೆಲ್ಲರಿಗಿಂತಲೂ ಎಷ್ಟೋ ಹೆಚ್ಚಾಗಿ ಪ್ರಯಾಸಪಟ್ಟೆನು. ಆದರೆ ಪ್ರಯಾಸಪಟ್ಟವನು ನಾನಲ್ಲ, ನನ್ನೊಂದಿಗಿದ್ದ ದೇವರ ಕೃಪೆಯೇ. 11) ಆದ್ದರಿಂದ ನಾನಾದರೇನು, ಅವರಾದರೇನು ಇದನ್ನೇ ನಾವು ಸಾರುವುದು, ಇದನ್ನೇ ನೀವು ನಂಬಿದ್ದೀರಿ. 12) ಆದರೆ ಕ್ರಿಸ್ತ ಯೇಸು ಸತ್ತವರೊಳಗಿಂದ ಎದ್ದು ಬಂದಿರುತ್ತಾರೆಂದು ಸಾರುತ್ತಿರುವಲ್ಲಿ ನಿಮ್ಮೊಳಗೆ ಕೆಲವರು ಸತ್ತವರಿಗೆ ಪುನರುತ್ಥಾನ ಇಲ್ಲ ಎಂದು ಹೇಳುವುದು ಹೇಗೆ? 13) ಈಗ ಸತ್ತವರಿಗೆ ಪುನರುತ್ಥಾನವಿಲ್ಲವಾದರೆ, ಕ್ರಿಸ್ತಯೇಸುವಾದರೂ ಎದ್ದು ಬರಲಿಲ್ಲ. 14) ಕ್ರಿಸ್ತ ಯೇಸು ಎದ್ದು ಬರಲಿಲ್ಲವಾದರೆ, ನಮ್ಮ ಪ್ರಸಂಗವೂ ನಿಮ್ಮ ವಿಶ್ವಾಸವೂ ನಿಷ್ಪ್ರಯೋಜನವಾದದ್ದು. 15) ಅದು ಮಾತ್ರವಲ್ಲ, ದೇವರು ಕ್ರಿಸ್ತ ಯೇಸುವನ್ನು ಸತ್ತವರೊಳಗಿಂದ ಎಬ್ಬಿಸಿದರೆಂದು ದೇವರ ಬಗ್ಗೆ ಸಾಕ್ಷಿಕೊಟ್ಟ ನಾವೂ ಸುಳ್ಳುಸಾಕ್ಷಿಗಳಾಗಿ ಕಂಡುಬರುವೆವು. ದೇವರು ಕ್ರಿಸ್ತನನ್ನು ಎಬ್ಬಿಸದಿದ್ದರೆ ಸತ್ತವರನ್ನೂ ದೇವರು ಎಬ್ಬಿಸುವುದಿಲ್ಲ. 16) ಸತ್ತವರು ಎದ್ದುಬರುವುದಿಲ್ಲವಾದರೆ, ಕ್ರಿಸ್ತ ಯೇಸುವೂ ಎದ್ದುಬಂದಿಲ್ಲ. 17) ಕ್ರಿಸ್ತ ಯೇಸುವು ಎದ್ದುಬಂದಿಲ್ಲವಾದರೆ, ನಿಮ್ಮ ವಿಶ್ವಾಸವೂ ವ್ಯರ್ಥವಾಗಿದೆ, ನೀವು ಇನ್ನೂ ನಿಮ್ಮ ಪಾಪಗಳಲ್ಲಿಯೇ ಇದ್ದೀರಿ. 18) ಅಲ್ಲದೆ, ಕ್ರಿಸ್ತ ಯೇಸುವಿನಲ್ಲಿ ವಿಶ್ವಾಸವಿಟ್ಟು ನಿದ್ರೆ ಹೋದವರು ಸಹ ನಾಶವಾದರು. 19) ನಾವು ಈ ಜೀವನದಲ್ಲಿ ಮಾತ್ರ ಕ್ರಿಸ್ತ ಯೇಸುವಿನಲ್ಲಿ ನಿರೀಕ್ಷೆಯಿಟ್ಟು ಕೊಂಡಿರುವವರಾಗಿದ್ದರೆ, ನಾವು ಎಲ್ಲಾ ಮನುಷ್ಯರಲ್ಲಿಯೂ ಕನಿಕರಪಡತಕ್ಕವರೇ ಆಗುತ್ತೇವೆ. 20) ಆದರೆ ಈಗ ಕ್ರಿಸ್ತ ಯೇಸು ಸತ್ತವರೊಳಗಿಂದ ಎದ್ದು ಬಂದೇ ಇದ್ದಾರೆ. ನಿದ್ರೆ ಹೋದವರಲ್ಲಿ ಪ್ರಥಮಫಲವಾಗಿದ್ದಾರೆ. 21) ಏಕೆಂದರೆ ಒಬ್ಬ ಮನುಷ್ಯನ ಮೂಲಕ ಮರಣವು ಬಂದಂತೆಯೇ, ಒಬ್ಬ ಮನುಷ್ಯನ ಮೂಲಕ ಸತ್ತವರಿಗೆ ಪುನರುತ್ಥಾನವು ಸಹ ಬರುವುದು. 22) ಏಕೆಂದರೆ, ಆದಾಮನಲ್ಲಿ ಎಲ್ಲರೂ ಸತ್ತಂತೆಯೇ, ಕ್ರಿಸ್ತನಲ್ಲಿ ಎಲ್ಲರೂ ಜೀವಂತರಾಗುವರು. 23) ಆದರೆ ಒಬ್ಬೊಬ್ಬರು ತಮ್ಮ ತಮ್ಮ ಕ್ರಮದ ಅನುಸಾರವಾಗಿ ಎದ್ದು ಬರುವರು. ಪ್ರಥಮಫಲವಾಗಿ ಕ್ರಿಸ್ತನು, ತರುವಾಯ ಕ್ರಿಸ್ತನ ಪುನರಾಗಮನದಲ್ಲಿ ಕ್ರಿಸ್ತನಿಗೆ ಸೇರಿದವರು ಎದ್ದು ಬರುವರು. 24) ಆಮೇಲೆ ಕ್ರಿಸ್ತನು ಎಲ್ಲಾ ಆಧಿಪತ್ಯವನ್ನೂ ಎಲ್ಲಾ ಅಧಿಕಾರವನ್ನೂ ಎಲ್ಲಾ ಶಕ್ತಿಯನ್ನೂ ತೆಗೆದುಹಾಕಿ, ರಾಜ್ಯವನ್ನು ತಂದೆ ದೇವರಿಗೆ ಒಪ್ಪಿಸಿಕೊಡುವಾಗ ಸಮಾಪ್ತಿಯಾಗುವುದು. 25) ಏಕೆಂದರೆ, ಕ್ರಿಸ್ತನು ಎಲ್ಲಾ ಶತ್ರುಗಳನ್ನು ತನ್ನ ಪಾದಗಳ ಕೆಳಗೆ ಹಾಕಿಕೊಳ್ಳುವ ತನಕ ಆಳುವುದು ಅವಶ್ಯ. 26) ಕೊನೆಯದಾಗಿ, ನಿರ್ಮೂಲವಾಗುವ ವೈರಿ ಮರಣವೇ. 27) ದೇವರು ಸಮಸ್ತವನ್ನೂ ಕ್ರಿಸ್ತನ ಪಾದಗಳ ಕೆಳಗೆ ಹಾಕಿ ಅವರಿಗೆ ಅಧೀನಮಾಡಿದ್ದಾರೆ. “ಸಮಸ್ತವೂ ಅವರಿಗೆ ಅಧೀನ ಮಾಡಲಾಗಿದೆ” ಎಂದು ಹೇಳುವಾಗ, ಸಮಸ್ತವನ್ನೂ ಕ್ರಿಸ್ತನಿಗೆ ಅಧೀನಮಾಡಿಕೊಟ್ಟ ದೇವರು ಇದರಲ್ಲಿ ಒಳಪಡಲಿಲ್ಲ ಎಂಬುದು ಸ್ಪಷ್ಟವಾಗಿದೆ. 28) ಸಮಸ್ತವೂ ಅವರಿಗೆ ಅಧೀನವಾದ ಮೇಲೆ, ಮಗನೂ ಸಹ ಸಮಸ್ತವನ್ನೂ ತನಗೆ ಅಧೀನಮಾಡಿಕೊಟ್ಟ ದೇವರಿಗೆ ತಾವೇ ಅಧೀನರಾಗುವರು. ಹೀಗೆ ದೇವರು ಸಮಸ್ತರಲ್ಲಿಯೂ ಸಮಸ್ತವೂ ಆಗಿದ್ದಾರೆ. 29) ಸತ್ತವರಿಗೆ ಪುನರುತ್ಥಾನವಿಲ್ಲದಿದ್ದರೆ, ಸತ್ತವರಿಗೋಸ್ಕರ ದೀಕ್ಷಾಸ್ನಾನ ಮಾಡಿಸಿಕೊಳ್ಳುವವರು ಏನು ಮಾಡುವರು? ಸತ್ತವರು ನಿಜವಾಗಿಯೂ ಎದ್ದುಬರುವುದಿಲ್ಲವಾದರೆ, ಅವರಿಗೋಸ್ಕರ ದೀಕ್ಷಾಸ್ನಾನ ಮಾಡಿಸಿಕೊಳ್ಳುವುದು ಏಕೆ? 30) ನಾವು ಸಹ ಪ್ರತಿ ಗಳಿಗೆಯಲ್ಲಿಯೂ ಅಪಾಯದಲ್ಲಿರುವುದೇಕೆ? 31) ಸಹೋದರರೇ ನಮ್ಮ ಕರ್ತ ಆಗಿರುವ ಕ್ರಿಸ್ತ ಯೇಸುವಿನಲ್ಲಿ ನನಗೆ ನಿಮ್ಮ ಬಗ್ಗೆ ನಿಶ್ಚಯವಾಗಿರುವ ಹೆಮ್ಮೆಯಿಂದ ನಾನು ದಿನದಿನವು ಸಾಯುತ್ತಲಿದ್ದೇನೆ. 32) ನಾನು ಎಫೆಸದಲ್ಲಿ ಕಾಡು ಮೃಗಗಳೊಂದಿಗೆ ಹೋರಾಟ ಮಾಡಿದ್ದು ಕೇವಲ ಮಾನವ ಕಾರಣಗಳಿಂದ ಮಾತ್ರವಾಗಿದ್ದರೆ, ಅದರಿಂದ ನನಗೇನು ಪ್ರಯೋಜನ? ಸತ್ತವರು ಎದ್ದುಬರುವುದಿಲ್ಲವಾದರೆ, “ತಿನ್ನೋಣ, ಕುಡಿಯೋಣ, ನಾಳೆ ಮರಣ ಹೊಂದೋಣ.” 33) ಮೋಸಹೋಗಬೇಡಿರಿ. ಏಕೆಂದರೆ, “ದುಸ್ಸಹವಾಸವು ಸದಾಚಾರವನ್ನು ಕೆಡಿಸುತ್ತದೆ.” 34) ಸ್ವಸ್ಥಚಿತ್ತರಾಗಿರಿ, ಪಾಪಮಾಡುವುದನ್ನು ನಿಲ್ಲಿಸಿರಿ. ಕೆಲವರಂತೂ ದೇವರನ್ನೇ ಅಲಕ್ಷ್ಯಮಾಡುವವರಾಗಿದ್ದಾರೆ. ನಿಮಗೆ ನಾಚಿಕೆಯಾಗಬೇಕೆಂದು ನಾನು ಇದನ್ನು ಹೇಳುತ್ತೇನೆ. 35) “ಸತ್ತವರು ಎದ್ದೇಳುವುದು ಹೇಗೆ? ಎಂಥ ದೇಹದಿಂದ ಎದ್ದು ಬರುತ್ತಾರೆ?” ಎಂದು ಯಾರಾದರೂ ಕೇಳಬಹುದು. 36) ಮತಿಹೀನ ಮನುಷ್ಯನೇ! ನೀನು ಬಿತ್ತುವ ಬೀಜವು ಸಾಯದಿದ್ದರೆ, ಅದು ಜೀವಂತವಾಗುವುದಿಲ್ಲ. 37) ನೀನು ಒಂದು ವೇಳೆ ಗೋಧಿಯನ್ನಾಗಲಿ, ಬೇರೆ ಯಾವುದೇ ಬೀಜವನ್ನಾಗಲಿ ಬಿತ್ತುವಾಗ, ಬರೀ ಕಾಳನ್ನೇ ಹೊರತು ಮುಂದೆ ಆಗಬೇಕಾದ ದೇಹವನ್ನು ಬಿತ್ತುವುದಿಲ್ಲ. 38) ಆದರೆ ದೇವರು ತಾನು ನಿರ್ಣಯಿಸಿದಂತೆ ಅದಕ್ಕೆ ದೇಹವನ್ನು ಕೊಡುತ್ತಾರೆ ಮತ್ತು ಒಂದೊಂದು ಬೀಜಕ್ಕೂ ಅದರದರ ದೇಹವನ್ನು ಕೊಡುತ್ತಾರೆ. 39) ಎಲ್ಲಾ ದೇಹಗಳು ಒಂದೇ ವಿಧವಾಗಿಲ್ಲ. ಮನುಷ್ಯನ ದೇಹ ಬೇರೆ, ಪಶುಗಳ ದೇಹ ಬೇರೆ, ಪಕ್ಷಿಗಳ ದೇಹ ಬೇರೆ, ಮೀನುಗಳದೇ ಬೇರೆ. 40) ಪರಲೋಕದ ದೇಹಗಳಿವೆ, ಭೂಲೋಕದ ದೇಹಗಳಿವೆ. ಆದರೆ ಪರಲೋಕದ ದೇಹಗಳ ಮಹಿಮೆಯೇ ಬೇರೆ, ಭೂಲೋಕದ ದೇಹಗಳ ಮಹಿಮೆಯೇ ಬೇರೆ. 41) ಸೂರ್ಯನ ಮಹಿಮೆ ಬೇರೆ, ಚಂದ್ರನ ಮಹಿಮೆಯೇ ಬೇರೆ ವಿಧ, ನಕ್ಷತ್ರಗಳ ಮಹಿಮೆ ಇನ್ನೊಂದು ವಿಧ. ಏಕೆಂದರೆ, ನಕ್ಷತ್ರ ನಕ್ಷತ್ರಕ್ಕೆ ಮಹಿಮೆಯಲ್ಲಿ ವ್ಯತ್ಯಾಸವಾಗಿರುವುದು. 42) ಸತ್ತವರಿಗಾಗುವ ಪುನರುತ್ಥಾನವು ಸಹ ಹಾಗೆಯೇ ಇರುವುದು. ದೇಹವು ಅಳಿಯುವ ಅವಸ್ಥೆಯಲ್ಲಿ ಬಿತ್ತಲಾಗುತ್ತದೆ. ಅಮರತ್ವ ಅವಸ್ಥೆಯಲ್ಲಿ ಎದ್ದು ಬರುವುದು. 43) ದೇಹವು ಹೀನಾವಸ್ಥೆಯಲ್ಲಿ ಬಿತ್ತಲಾಗುತ್ತದೆ. ಮಹಿಮೆಯಲ್ಲಿ ಎದ್ದು ಬರುವುದು. ಬಲಹೀನತೆಯಲ್ಲಿ ಬಿತ್ತಲಾಗುತ್ತದೆ, ಶಕ್ತಿಯಲ್ಲಿ ಎದ್ದು ಬರುವುದು. 44) ಪ್ರಾಕೃತ ದೇಹವಾಗಿ ಬಿತ್ತಲಾಗುತ್ತದೆ, ಆತ್ಮಿಕ ದೇಹವಾಗಿ ಎದ್ದು ಬರುವುದು. ಪ್ರಾಕೃತ ದೇಹವಿರುವುದಾದರೆ, ಆತ್ಮಿಕ ದೇಹವೂ ಇರುವುದು. 45) “ಮೊದಲನೆಯ ಮನುಷ್ಯನಾದ ಆದಾಮನು ಜೀವಿಸುವ ವ್ಯಕ್ತಿಯಾದನು,” ಎಂದು ಬರೆದಿದೆಯಲ್ಲವೇ? ಕಡೇ ಆದಾಮನು ಜೀವಕೊಡುವ ಆತ್ಮನಾದನು. 46) ಆತ್ಮಿಕವಾದದ್ದು ಮೊದಲು ಬರಲಿಲ್ಲ, ಪ್ರಾಕೃತವಾದದ್ದೇ ಮೊದಲನೆಯದು, ಅನಂತರ ಆತ್ಮಿಕವಾದದ್ದು. 47) ಮೊದಲನೆಯ ಮನುಷ್ಯ, ಭೂಮಿಯ ಮಣ್ಣಿನವನಾಗಿದ್ದಾನೆ, ಎರಡನೆಯ ಮನುಷ್ಯನು ಪರಲೋಕದಿಂದ ಬಂದವನು. 48) ಮಣ್ಣಿನ ಮನುಷ್ಯನು ಎಂಥವನೋ, ಮಣ್ಣಿಗೆ ಸೇರಿದವರೂ ಅಂಥವರೇ. ಪರಲೋಕದ ಮನುಷ್ಯನು ಎಂಥವನೋ, ಪರಲೋಕಕ್ಕೆ ಸಂಬಂಧಿಸಿದವರೂ ಅಂಥವರಾಗಿರುವರು. 49) ನಾವು ಮಣ್ಣಿನ ಮನುಷ್ಯನ ಸಾರೂಪ್ಯವನ್ನು ಧರಿಸಿಕೊಂಡಿರುವ ಪ್ರಕಾರ, ಪರಲೋಕದ ಮನುಷ್ಯನ ಸಾರೂಪ್ಯವನ್ನೂ ಧರಿಸಿಕೊಳ್ಳುವೆವು. 50) ಪ್ರಿಯರೇ, ನಾನು ಹೇಳುವುದೇನೆಂದರೆ, ರಕ್ತಮಾಂಸವು ದೇವರ ರಾಜ್ಯಕ್ಕೆ ಬಾಧ್ಯವಾಗಲಾರವು. ಅಳಿಯುವಂಥದ್ದು ಅಮರತ್ವಕ್ಕೆ ಬಾಧ್ಯವಾಗಲಾರದು. 51) ನಾನು ರಹಸ್ಯವಾಗಿದ್ದ ಸಂಗತಿಯನ್ನು ನಿಮಗೆ ಹೇಳುತ್ತೇನೆ ಕೇಳಿರಿ: ನಾವೆಲ್ಲರೂ ನಿದ್ರೆ ಹೋಗುವುದಿಲ್ಲ, ನಾವೆಲ್ಲರೂ ರೂಪಾಂತರವಾಗುವೆವು. 52) ಆದರೆ ಒಂದು ಕ್ಷಣದಲ್ಲೇ, ರೆಪ್ಪೆ ಬಡಿಯುವಷ್ಟರಲ್ಲಿ, ಕಡೇ ತುತೂರಿಯು ಊದಲಾಗುವುದು. ತುತೂರಿ ಧ್ವನಿಯಾಗುವಾಗ, ಸತ್ತವರು ಅಮರತ್ವಪಡೆದು ಎಬ್ಬಿಸಲಾಗುವರು, ನಾವು ರೂಪಾಂತರವಾಗುವೆವು. 53) ಅಳಿಯುವ ಈ ದೇಹವು ಅಮರತ್ವವನ್ನು ಧರಿಸಿಕೊಳ್ಳುವುದು, ಮರಣಾಧೀನವಾಗಿರುವ ಈ ದೇಹವು ಅಮರತ್ವವನ್ನು ಧರಿಸಿಕೊಳ್ಳುವುದು. 54) ನಶಿಸಿಹೋಗುವಂಥದ್ದು ನಶಿಸಿಹೋಗದಂಥದ್ದನ್ನೂ, ಮರಣಾಧೀನವಾದ ಈ ದೇಹವು ಅಮರತ್ವವನ್ನೂ ಧರಿಸಿಕೊಳ್ಳುವಾಗ, ಬರೆದಿರುವ ಈ ಮಾತುಗಳು ನೆರವೇರುವುದು: “ಮರಣವು ನುಂಗಿಯೇ ಹೋಯಿತು, ಜಯವಾಯಿತು.” 55) “ಓ ಮರಣವೇ, ನಿನ್ನ ಜಯವು ಎಲ್ಲಿ? ಓ ಮರಣವೇ, ನಿನ್ನ ವಿಷದ ಕೊಂಡಿ ಎಲ್ಲಿ?” (Hadēs g86) 56) ಮರಣದ ಕೊಂಡಿ ಪಾಪವೇ ಮತ್ತು ಪಾಪದ ಶಕ್ತಿಯು ನಿಯಮವೇ. 57) ಆದರೆ ನಮ್ಮ ಕರ್ತ ಆಗಿರುವ ಯೇಸುಕ್ರಿಸ್ತರ ಮೂಲಕ ನಮಗೆ ಜಯವನ್ನು ಕೊಡುವ ದೇವರಿಗೆ ಸ್ತೋತ್ರ. 58) ಆದ್ದರಿಂದ, ನನ್ನ ಪ್ರಿಯ ಸಹೋದರರೇ, ಸ್ಥಿರವಾಗಿ ನಿಲ್ಲಿರಿ. ಯಾವುದೂ ನಿಮ್ಮನ್ನು ಕದಲಿಸದಿರಲಿ. ಕರ್ತನಲ್ಲಿ ನಿಮ್ಮ ಪ್ರಯಾಸವು ನಿಷ್ಫಲವಾಗುವುದಿಲ್ಲವೆಂದು ತಿಳಿದು, ಕರ್ತನ ಕೆಲಸಕ್ಕೆ ಯಾವಾಗಲೂ ನಿಮ್ಮನ್ನು ಸಂಪೂರ್ಣವಾಗಿ ಒಪ್ಪಿಸಿಕೊಡಿರಿ. Additional comments?
Refresh Captcha
The world's first Holy Bible un-translation!