< ಅರಣ್ಯಕಾಂಡ 18 >

1 ಆಗ ಯೆಹೋವನು ಆರೋನನಿಗೆ, “ದೇವದರ್ಶನದ ಗುಡಾರದ ವಿಷಯದಲ್ಲಿ ಅಕ್ರಮವೇನಾದರೂ ನಡೆದರೆ ನೀನೂ, ನಿನ್ನ ಸಂತತಿಯವರೂ, ನಿನ್ನ ಕುಲದವರೆಲ್ಲರೂ ಆ ದೋಷದ ಫಲವನ್ನು ಅನುಭವಿಸಬೇಕು. ಯಾಜಕತ್ವದ ವಿಷಯದಲ್ಲಿ ಅಕ್ರಮವೇನಾದರೂ ನಡೆದರೆ ನೀನೂ, ನಿನ್ನ ಸಂತತಿಯವರು ಮಾತ್ರವೇ ಆ ದೋಷದ ಫಲವನ್ನು ಅನುಭವಿಸಬೇಕು.
ಯೆಹೋವ ದೇವರು ಆರೋನನಿಗೆ, “ನೀನೂ, ನಿನ್ನ ಪುತ್ರರೂ, ನಿನ್ನ ಪಿತೃಗಳ ಮನೆಯವರೂ ಪರಿಶುದ್ಧ ಸ್ಥಳಕ್ಕೆ ವಿರೋಧವಾಗಿ ನಡೆಯುವ ಕಾರ್ಯಗಳ ಜವಾಬ್ದಾರಿ ವಹಿಸಬೇಕು. ಯಾಜಕತ್ವಕ್ಕೆ ವಿರೋಧವಾಗಿ ನಡೆಯುವ ಅಕ್ರಮಗಳಿಗೆ ನೀನು ಮತ್ತು ನಿನ್ನ ಪುತ್ರರು ಮಾತ್ರ ಹೊಣೆಯಾಗಿರುತ್ತೀರಿ.
2 ನಿನ್ನ ಕುಲದ ಮೂಲಪುರುಷನಾದ ಲೇವಿ ವಂಶದವರನ್ನು ನೀನು ಹತ್ತಿರಕ್ಕೆ ಕರೆದು ಜೊತೆಯಲ್ಲಿರಿಸಿಕೊಂಡು ನಿನ್ನ ಕೈಕೆಳಗೆ ಸೇವೆಮಾಡಿಸಬೇಕು. ಆದರೆ ಆಜ್ಞಾಶಾಸನಗಳಿರುವ ಗುಡಾರದ ಮುಂದೆ ನೀನೂ, ನಿನ್ನ ಮಕ್ಕಳೂ ಮಾತ್ರ ಸೇವೆಮಾಡಬೇಕು.
ನಿನ್ನ ಗೋತ್ರದ ಮೂಲಪುರುಷನಾದ ಲೇವಿ ವಂಶದವರನ್ನು ಸಹ ನಿನ್ನ ಸಂಗಡ ಸೇರಿಸಿಕೋ. ಏಕೆಂದರೆ ಅವರು ನಿನ್ನ ಕೂಡ ಇದ್ದು, ನಿನಗೆ ಸೇವೆಮಾಡಬೇಕು. ಆದರೆ ನೀನು ಮತ್ತು ನಿನ್ನ ಮಕ್ಕಳ ಸಹಿತವಾಗಿ ಸಾಕ್ಷಿ ಗುಡಾರದ ಮುಂದೆ ಸೇವೆಮಾಡಬೇಕು.
3 ಲೇವಿಯರು ನಿನ್ನ ಅಪ್ಪಣೆಯ ಪ್ರಕಾರ ನಡೆದು ಗುಡಾರವನ್ನು ಕಾಯಬೇಕು. ಆದರೆ ಪವಿತ್ರಸ್ಥಾನದ ವಸ್ತುಗಳ ಹತ್ತಿರವಾಗಲಿ ಅಥವಾ ಯಜ್ಞವೇದಿಯ ಹತ್ತಿರವಾಗಲಿ ಅವರು ಬರಬಾರದು, ಬಂದರೆ ಅವರು ಸಾಯುವುದು ಮಾತ್ರವಲ್ಲದೆ ನೀವೂ ಸಾಯುವಿರಿ.
ಅವರು ನಿನಗೂ ದೇವದರ್ಶನದ ಗುಡಾರದ ಕಾರ್ಯಗಳಿಗೂ ಜವಾಬ್ದಾರರಾಗಿರುವರು. ಆದರೆ ಪರಿಶುದ್ಧಸ್ಥಳದ ಸಲಕರಣೆಗಳ ಹತ್ತಿರವಾಗಲಿ, ಬಲಿಪೀಠದ ಹತ್ತಿರವಾಗಲಿ ಅವರು ಬರಬಾರದು, ಬಂದರೆ ಅವರು ಮಾತ್ರವಲ್ಲ ನೀವೂ ಸಹ ಸಾಯುವಿರಿ.
4 ಅವರೇ ನಿನ್ನ ಜೊತೆಯಲ್ಲಿದ್ದು ದೇವದರ್ಶನದ ಗುಡಾರವನ್ನು ನೋಡಿಕೊಂಡು ಅದರ ಸಕಲ ಸೇವಾಕಾರ್ಯವನ್ನು ಮಾಡಬೇಕು. ಇತರ ಕುಲದವರು ನಿಮ್ಮ ಹತ್ತಿರಕ್ಕೆ ಬರಬಾರದು.
ಆದರೆ ಅವರು ನಿನ್ನ ಸಹಾಯಕರಾಗಿದ್ದು, ದೇವದರ್ಶನದ ಗುಡಾರದ ಎಲ್ಲಾ ಕಾರ್ಯಗಳಿಗೂ ಅದನ್ನು ಕಾಪಾಡುವುದಕ್ಕೂ ಜವಾಬ್ದಾರರಾಗಿರುವರು. ಬೇರೆ ಕುಲದವರು ನಿಮ್ಮ ಸಮೀಪಕ್ಕೆ ಬರಬಾರದು.
5 ಇನ್ನು ಮುಂದೆ ಇಸ್ರಾಯೇಲರ ಮೇಲೆ ದೇವರ ಕೋಪವುಂಟಾಗದಂತೆ, ನೀವೇ ದೇವಸ್ಥಾನದ ವಸ್ತುಗಳನ್ನೂ, ಯಜ್ಞವೇದಿಯನ್ನೂ ನೋಡಿಕೊಳ್ಳಬೇಕು.
“ಇಸ್ರಾಯೇಲರ ಮೇಲೆ ಇನ್ನು ಮುಂದೆ ಎಂದಿಗೂ ನನ್ನ ಕೋಪಾಗ್ನಿಯು ಬಾರದ ಹಾಗೆ ಪರಿಶುದ್ಧ ಸ್ಥಳವನ್ನು ಮತ್ತು ಬಲಿಪೀಠವನ್ನು ನೀವೇ ನೋಡಿಕೊಳ್ಳಬೇಕು.
6 ಇಗೋ, ನಾನು ಇಸ್ರಾಯೇಲರೊಳಗಿಂದ ನಿನ್ನ ಕುಲದವರಾದ ಲೇವಿಯರನ್ನು ಆರಿಸಿಕೊಂಡಿದ್ದೇನೆ. ಅವರು ಯೆಹೋವನಿಗೆ ಸಮರ್ಪಿಸಲ್ಪಟ್ಟ ಕಾಣಿಕೆಯಂತೆ ನಿನ್ನ ವಶದಲ್ಲಿಯೇ ಇದ್ದಾರೆ. ಅವರೇ ದೇವದರ್ಶನದ ಗುಡಾರದ ಸೇವಾಕಾರ್ಯವನ್ನು ಮಾಡಬೇಕು.
ನಾನು ನಿಮ್ಮ ಸಹೋದರರಾದ ಲೇವಿಯರನ್ನು ಇಸ್ರಾಯೇಲರೊಳಗಿಂದ ತೆಗೆದುಕೊಂಡಿದ್ದೇನೆ. ದೇವದರ್ಶನ ಗುಡಾರದ ಸೇವೆಯನ್ನು ಮಾಡುವುದಕ್ಕೆ ಅವರು ಯೆಹೋವ ದೇವರಿಗಾಗಿ ನಿಮಗೆ ಕಾಣಿಕೆಯಾಗಿ ಸಮರ್ಪಿತರಾಗಿದ್ದಾರೆ.
7 ನೀನೂ, ನಿನ್ನ ಸಂತತಿಯವರೂ ಯಾಜಕೋದ್ಯೋಗವನ್ನು ಕೈಕೊಂಡವರಾಗಿ ಯಜ್ಞವೇದಿಯ ಮತ್ತು ತೆರೆಯ ಒಳಗಿನ ಕಾರ್ಯಗಳನ್ನು ನಡೆಸಬೇಕು. ಅವುಗಳ ಸೇವಾಕಾರ್ಯವನ್ನು ನೀವೇ ಮಾಡಬೇಕು. ನಾನು ಯಾಜಕತ್ವವನ್ನು ನಿಮಗೆ ದಾನವಾಗಿ ಅನುಗ್ರಹಿಸಿದ್ದೇನೆ. ಇತರರು ಅದಕ್ಕೆ ಕೈಹಾಕಿದರೆ ಅವರಿಗೆ ಮರಣಶಿಕ್ಷೆಯಾಗಬೇಕು” ಎಂದನು.
ಆದ್ದರಿಂದ ನೀನು ನಿನ್ನ ಪುತ್ರರ ಸಹಿತವಾಗಿ ನಿಮ್ಮ ಯಾಜಕತ್ವವನ್ನು ಕಾಪಾಡಬೇಕು. ಬಲಿಪೀಠದ ಸಮಸ್ತ ಕಾರ್ಯಗಳಿಗೋಸ್ಕರ ತೆರೆಯ ಒಳಗೆ ನೀವು ಸೇವೆಮಾಡಬೇಕು. ನಿಮ್ಮ ಯಾಜಕತ್ವ ಸೇವೆಯನ್ನು ನಿಮಗೆ ದಾನವಾಗಿ ಕೊಟ್ಟಿದ್ದೇನೆ. ಪರಕೀಯನು ಸಮೀಪಕ್ಕೆ ಬಂದರೆ ಮರಣಶಿಕ್ಷೆಯಾಗಬೇಕು,” ಎಂದರು.
8 ಯೆಹೋವನು ಆರೋನನಿಗೆ ಆಜ್ಞಾಪಿಸಿದ್ದೇನೆಂದರೆ, “ಇಸ್ರಾಯೇಲರು ನನಗೋಸ್ಕರ ಪ್ರತ್ಯೇಕಿಸಿ ಸಮರ್ಪಿಸುವ ಪದಾರ್ಥಗಳನ್ನೆಲ್ಲಾ ಹಾಗೂ ದೇವರ ಪರಿಶುದ್ಧ ವಸ್ತುಗಳನ್ನೆಲ್ಲಾ ನಾನು ನಿನ್ನ ಮತ್ತು ನಿನ್ನ ಸಂತತಿಯವರ ಪಾಲಾಗುವುದಕ್ಕೆ ದಾನಮಾಡಿದ್ದೇನೆ. ಅವು ಸದಾಕಾಲವೂ ನಿಮಗೇ ಸಲ್ಲಬೇಕು.
ಯೆಹೋವ ದೇವರು ಮಾತನಾಡಿ ಆರೋನನಿಗೆ, “ನನಗೆ ಕೊಡುವ ಎಲ್ಲಾ ಕಾಣಿಕೆಗಳ ಮೇಲೆ ನಿನ್ನನ್ನು ನೇಮಿಸಿದ್ದೇನೆ. ಇಸ್ರಾಯೇಲರು ನನಗೆ ಸಮರ್ಪಿಸುವ ಎಲ್ಲಾ ಪರಿಶುದ್ಧವಾದ ಕಾಣಿಕೆಗಳನ್ನೆಲ್ಲಾ ನಿನಗೂ ನಿನ್ನ ಮಕ್ಕಳಿಗೂ ಶಾಶ್ವತ ಪಾಲನ್ನು ನೀಡುತ್ತೇನೆ,” ಎಂದರು.
9 ಬೆಂಕಿಯಲ್ಲಿ ಹೋಮಮಾಡದೆ ಉಳಿದಿರುವ ಮಹಾ ಪರಿಶುದ್ಧ ವಸ್ತುಗಳು ನಿನಗೆ ಕಾಣಿಕೆಯಾಗಿ ಸಲ್ಲಬೇಕು. ಇಸ್ರಾಯೇಲರು ನನಗೆ ಸಮರ್ಪಿಸುವ ಎಲ್ಲಾ ಧಾನ್ಯದ್ರವ್ಯ, ದೋಷಪರಿಹಾರಕ ಯಜ್ಞ, ಪ್ರಾಯಶ್ಚಿತ್ತಯಜ್ಞ ಇವುಗಳಲ್ಲಿ ಹೋಮಶೇಷವು ಮಹಾಪರಿಶುದ್ಧವಾದುದರಿಂದ ನಿನಗೂ ನಿನ್ನ ಸಂತತಿಯವರಿಗೂ ಸಲ್ಲಬೇಕು.
ದಹನಬಲಿಗೆ ಒಳಗಾಗದ ಮಹಾಪರಿಶುದ್ಧವಾದ ವಸ್ತುಗಳು ನಿನಗೆ ಕಾಣಿಕೆಯಾಗಿ ಸಲ್ಲಬೇಕು ಯಾವುವೆಂದರೆ ಇಸ್ರಾಯೇಲರು ನನಗೆ ಸಮರ್ಪಿಸುವ ಧಾನ್ಯ, ದೋಷಪರಿಹಾರಕ ಬಲಿಗಳು ಮತ್ತು ಪ್ರಾಯಶ್ಚಿತ್ತ ಬಲಿಗಳು, ಇವುಗಳಲ್ಲಿ ದಹನವಾಗದೆ ಉಳಿದವುಗಳು ಮಹಾಪರಿಶುದ್ಧವಾದದರಿಂದ ನಿನಗೂ ನಿನ್ನ ಪುತ್ರರಿಗೂ ಸೇರಬೇಕು.
10 ೧೦ ನೀವು ಮಹಾಪರಿಶುದ್ಧವಾದ ಒಂದು ಸ್ಥಳದಲ್ಲಿ ಅವುಗಳನ್ನು ಊಟಮಾಡಬೇಕು. ನಿಮ್ಮಲ್ಲಿರುವ ಗಂಡಸರೆಲ್ಲರೂ ಅವುಗಳನ್ನು ತಿನ್ನಬಹುದು. ಅವು ಮಹಾಪರಿಶುದ್ಧವಾದವುಗಳೆಂದು ನೀವು ತಿಳಿದುಕೊಳ್ಳಬೇಕು.
ಮಹಾಪರಿಶುದ್ಧ ಸ್ಥಳದಲ್ಲಿ ನೀನು ಅದನ್ನು ತಿನ್ನಬೇಕು. ಪುರುಷರು ಅದನ್ನು ತಿನ್ನಬಹುದು. ಅದು ನಿನಗೆ ಪರಿಶುದ್ಧವಾಗಿರುವುದೆಂದು ಪರಿಗಣಿಸಬೇಕು.
11 ೧೧ “ಇದಲ್ಲದೆ ಇಸ್ರಾಯೇಲರು ಮಾಡುವ ಸಮಾಧಾನಯಜ್ಞಗಳಿಂದ ನನಗೋಸ್ಕರ ಪ್ರತ್ಯೇಕಿಸಿಕೊಡುವ ದ್ರವ್ಯಗಳೂ, ನೈವೇದ್ಯವಾಗಿ ನಿವಾಳಿಸುವ ದ್ರವ್ಯಗಳೂ ನಿಮಗೆ ಸೇರಬೇಕು. ಇವು ನಿನಗೂ, ನಿನ್ನ ಸಂತತಿಯವರಾದ ಸ್ತ್ರೀಪುರುಷರೆಲ್ಲರಿಗೂ ಶಾಶ್ವತ ನಿಯಮವಾಗಿ ಸಲ್ಲಬೇಕೆಂದು ಅನುಗ್ರಹಿಸಿದ್ದೇನೆ. ಇವುಗಳನ್ನು ನಿಮ್ಮ ಮನೆಗಳಲ್ಲಿರುವ ಶುದ್ಧರಾದವರೆಲ್ಲರೂ ಊಟ ಮಾಡಬಹುದು.
“ಅವರು ಕೊಟ್ಟ ಅರ್ಪಣೆಯೂ ಇಸ್ರಾಯೇಲರು ನೈವೇದ್ಯವಾಗಿ ನಿವಾಳಿಸುವ ಎಲ್ಲಾ ಸಮರ್ಪಣೆಗಳೂ ನಿನ್ನದಾಗಿರುವುವು. ಅವುಗಳನ್ನು ನಾನು ನಿನಗೂ, ನಿನ್ನ ಪುತ್ರಪುತ್ರಿಯರಿಗೂ ಶಾಶ್ವತ ನಿಯಮವಾಗಿ ಸಲ್ಲಬೇಕೆಂದು ಅನುಗ್ರಹಿಸಿದ್ದೇನೆ. ನಿನ್ನ ಮನೆಯಲ್ಲಿರುವ ಶುದ್ಧನಾದ ಪ್ರತಿಯೊಬ್ಬನೂ ಅದನ್ನು ತಿನ್ನಬಹುದು.
12 ೧೨ ಇಸ್ರಾಯೇಲರು ಯೆಹೋವನಿಗೆ ಸಮರ್ಪಿಸುವ ಪ್ರಥಮಫಲಗಳು ಯಾವುವೆಂದರೆ: ಎಣ್ಣೆ, ದ್ರಾಕ್ಷಾರಸ, ಧಾನ್ಯ ಇವುಗಳಲ್ಲಿ ಶ್ರೇಷ್ಠವಾದದ್ದು ನಿನಗೇ ಸೇರಬೇಕೆಂದು ವಿಧಿಸಿದ್ದೇನೆ.
“ಜನರು ಯೆಹೋವ ದೇವರಿಗೆ ಸಮರ್ಪಿಸುವ ಪ್ರಥಮ ಫಲಗಳನ್ನು ಅಂದರೆ ಎಲ್ಲಾ ಉತ್ತಮವಾದ ಎಣ್ಣೆಯೂ ಉತ್ತಮವಾದ ಹೊಸ ದ್ರಾಕ್ಷಾರಸ, ಧಾನ್ಯವೂ ನಿನಗೆ ಕೊಟ್ಟಿದ್ದೇನೆ.
13 ೧೩ ಅವರು ತಮ್ಮ ದೇಶದ ಎಲ್ಲಾ ಬೆಳೆಗಳಲ್ಲಿ ಯೆಹೋವನಿಗೋಸ್ಕರ ತರುವ ಪ್ರಥಮಫಲಗಳು ನಿನಗೇ ಸಲ್ಲಬೇಕು. ನಿಮ್ಮ ಮನೆಗಳಲ್ಲಿ ಶುದ್ಧರಾಗಿರುವ ಎಲ್ಲರೂ ಅವುಗಳನ್ನು ಊಟಮಾಡಬಹುದು.
ಅವರು ಯೆಹೋವ ದೇವರಿಗೆ ತರುವ ಅವರ ದೇಶದಲ್ಲಿರುವ ಎಲ್ಲವುಗಳ ಪ್ರಥಮ ಫಲಗಳು ನಿನ್ನವುಗಳಾಗಿರುವುವು. ನಿನ್ನ ಮನೆಯಲ್ಲಿರುವ ಶುದ್ಧನಾದ ಪ್ರತಿಯೊಬ್ಬನೂ ಅದನ್ನು ತಿನ್ನಬಹುದು.
14 ೧೪ ಕೇವಲ ಯೆಹೋವನಿಗೋಸ್ಕರ ಇರುವುದಕ್ಕೆ ಇಸ್ರಾಯೇಲರು ಹರಕೆಮಾಡಿ ಸಮರ್ಪಿಸುವುದೆಲ್ಲವೂ ನಿನಗೆ ಸೇರಬೇಕು.
“ಇಸ್ರಾಯೇಲರು ಯೆಹೋವ ದೇವರಿಗೆ ಹರಕೆಮಾಡಿ ಸಮರ್ಪಿಸಿದ ಪ್ರತಿಯೊಂದೂ ನಿನ್ನದಾಗಿದೆ.
15 ೧೫ ಮನುಷ್ಯರಲ್ಲಾಗಲಿ, ಪಶುಗಳಲ್ಲಾಗಲಿ ಅವರು ಯೆಹೋವನಿಗೆ ಸಮರ್ಪಿಸುವ ಸಕಲಪ್ರಾಣಿಗಳಲ್ಲಿ ಚೊಚ್ಚಲಾದದ್ದು ನಿನಗೆ ಸಲ್ಲಬೇಕು. ಆದರೆ ಮನುಷ್ಯರ ಚೊಚ್ಚಲಮಕ್ಕಳಿಗೂ, ಅಪವಿತ್ರವಾದ ಪಶುಗಳ ಮರಿಗಳಿಗೂ ಬದಲಾಗಿ ನೀನು ಈಡನ್ನು ತೆಗೆದುಕೊಂಡು ಅವುಗಳನ್ನು ಬಿಟ್ಟುಬಿಡಬೇಕು.
ಮನುಷ್ಯರಲ್ಲಾಗಲಿ, ಪಶುಗಳಲ್ಲಾಗಲಿ ಯೆಹೋವ ದೇವರಿಗೆ ಸಮರ್ಪಿಸುವ ಚೊಚ್ಚಲಾದದ್ದೆಲ್ಲಾ ನಿನ್ನದಾಗಿರಬೇಕು. ಆದರೆ ಮನುಷ್ಯರ ಚೊಚ್ಚಲಾದದ್ದನ್ನೂ ಅಪವಿತ್ರವಾದ ಗಂಡು ಪಶುಗಳ ಚೊಚ್ಚಲಾದದ್ದನ್ನೂ ನೀನು ವಿಮೋಚಿಸಬೇಕು.
16 ೧೬ ಹೀಗೆ ಬಿಟ್ಟುಬಿಡಬೇಕಾದ ಶಿಶುಗಳು ಒಂದು ತಿಂಗಳಿನ ಪ್ರಾಯಕ್ಕೆ ಬಂದಾಗ, ನೀವು ಗೊತ್ತು ಮಾಡಿದ ಈಡನ್ನು ದೇವರ ಸೇವೆಗೆ ನೇಮಕವಾದ ಇಪ್ಪತ್ತು ಗೇರಾ ತೂಕದ ಶೆಕೆಲ್ ಪ್ರಕಾರ ಐದು ಶೆಕೆಲ್ ತೆಗೆದುಕೊಂಡು ಅವುಗಳನ್ನು ಬಿಟ್ಟುಬಿಡಬೇಕು.
ಅವು ಒಂದು ತಿಂಗಳಿನ ಪ್ರಾಯಕ್ಕೆ ಬಂದಾಗ, ದೇವರ ಸೇವೆಗೆ ನಿಗದಿಯಾದ ಇಪ್ಪತ್ತು ಗೇರಾ ತೂಕದ ನಾಣ್ಯದ ಮೇರೆಗೆ ಐದು ಶೆಕೆಲ್ ನಾಣ್ಯವನ್ನು ತೆಗೆದುಕೊಂಡು ಅವುಗಳನ್ನು ವಿಮೋಚಿಸಿಕೊಳ್ಳಬೇಕು.
17 ೧೭ “ಆಕಳಿನ ಮತ್ತು ಆಡುಕುರಿಗಳ ಚೊಚ್ಚಲುಮರಿಗಳು ದೇವರ ಸೊತ್ತಾಗಿರುವುದರಿಂದ ಅವುಗಳನ್ನು ಬಿಡಬಾರದು. ಅವುಗಳ ರಕ್ತವನ್ನು ಯಜ್ಞವೇದಿಗೆ ಚಿಮುಕಿಸಿಬೇಕು, ಅವುಗಳ ಕೊಬ್ಬನ್ನು ಯೆಹೋವನಿಗೆ ಸುಗಂಧಹೋಮಮಾಡಬೇಕು.
“ಆದರೆ ಆಕಳಿನ ಚೊಚ್ಚಲನ್ನಾದರೂ ಕುರಿಯ ಚೊಚ್ಚಲನ್ನಾದರೂ ಮೇಕೆಯ ಚೊಚ್ಚಲನ್ನಾದರೂ ನೀನು ಬಿಟ್ಟುಬಿಡಬಾರದು. ಅವು ಪರಿಶುದ್ಧವಾಗಿವೆ, ಅವುಗಳ ರಕ್ತವನ್ನು ಬಲಿಪೀಠದ ಮೇಲೆ ಚಿಮುಕಿಸಬೇಕು, ಅವುಗಳ ಕೊಬ್ಬನ್ನು ಯೆಹೋವ ದೇವರಿಗೆ ಸುವಾಸನೆಯ ದಹನಬಲಿ ಮಾಡಬೇಕು.
18 ೧೮ ಅವುಗಳ ಮಾಂಸವು ಸಮಾಧಾನಯಜ್ಞಗಳಲ್ಲಿ ನೈವೇದ್ಯವಾಗಿ ನಿವಾಳಿಸುವ ಎದೆಯ ಭಾಗದಂತೆಯೂ, ಬಲತೊಡೆಯಂತೆಯೂ ನಿನಗೇ ಸಲ್ಲಬೇಕು.
ನೈವೇದ್ಯವಾಗಿ ನಿವಾಳಿಸುವ ಎದೆಯೂ ಬಲಭುಜವೂ ನಿನ್ನದಾಗಿರುವ ಪ್ರಕಾರ ಅವುಗಳ ಮಾಂಸವೂ ನಿನ್ನದಾಗಿರಬೇಕು.
19 ೧೯ ಇಸ್ರಾಯೇಲರು ಯೆಹೋವನಿಗೋಸ್ಕರ ಪ್ರತ್ಯೇಕಿಸಿ ಸಮರ್ಪಿಸುವ ದೇವರ ವಸ್ತುಗಳೆಲ್ಲಾ ನಿನಗೂ, ನಿನ್ನ ಸಂತತಿಯವರಾದ ಸ್ತ್ರೀಪುರುಷರೆಲ್ಲರಿಗೂ ಸದಾಕಾಲವೂ ಸಲ್ಲಬೇಕೆಂದು ನಾನು ಅನುಗ್ರಹಮಾಡಿದ್ದೇನೆ. ಇದು ಯೆಹೋವನ ಸನ್ನಿಧಿಯಲ್ಲಿ ನಿನ್ನೊಡನೆಯೂ, ನಿನ್ನ ಸಂತತಿಯೊಡನೆಯೂ ಮಾಡಲ್ಪಟ್ಟ ಶಾಶ್ವತವಾದ ಉಪ್ಪಿನ ಒಡಂಬಡಿಕೆಯಾಗಬೇಕು” ಎಂದು ಹೇಳಿದನು.
ಇಸ್ರಾಯೇಲರು ಯೆಹೋವ ದೇವರಿಗೆ ನೈವೇದ್ಯ ಮಾಡುವ ಪರಿಶುದ್ಧವಾದ ಬಲಿಗಳನ್ನೆಲ್ಲಾ ನಿನಗೂ ನಿನ್ನ ಪುತ್ರಪುತ್ರಿಯರಿಗೂ ಕ್ರಮ ಪ್ರಕಾರವಾದ ಭಾಗವಾಗಿ ಕೊಟ್ಟಿದ್ದೇನೆ. ಇದು ಯೆಹೋವ ದೇವರ ಮುಂದೆ ನಿನಗೂ ನಿನ್ನ ಸಂಗಡ ಇರುವ ನಿನ್ನ ಸಂತತಿಗೂ ಶಾಶ್ವತವಾದ ಉಪ್ಪಿನ ಒಡಂಬಡಿಕೆಯಾಗಿರಬೇಕು,” ಎಂದರು.
20 ೨೦ ಇದಲ್ಲದೆ ಯೆಹೋವನು ಆರೋನನಿಗೆ ಹೇಳಿದ್ದೇನೆಂದರೆ, “ಇಸ್ರಾಯೇಲರ ದೇಶದಲ್ಲಿ ನಿನ್ನ ಸ್ವಂತಕ್ಕಾಗಿ ಯಾವ ಸ್ವತ್ತು ಇರಬಾರದು. ಅವರೊಂದಿಗೆ ನಿನಗೆ ಪಾಲು ಇರುವುದಿಲ್ಲ. ಇಸ್ರಾಯೇಲರ ಮಧ್ಯದಲ್ಲಿ ನಾನೇ ನಿನಗೆ ಪಾಲಾಗಿಯೂ ಮತ್ತು ಸ್ವತ್ತಾಗಿಯೂ ಇದ್ದೇನೆ.
ಯೆಹೋವ ದೇವರು ಆರೋನನಿಗೆ, “ನಿನಗೆ ಅವರ ದೇಶದಲ್ಲಿ ಯಾವ ಸ್ವಾಸ್ತ್ಯವೂ ಇರಬಾರದು, ನಿನಗೆ ಅವರ ಮಧ್ಯದಲ್ಲಿ ಯಾವ ಪಾಲೂ ಇರಬಾರದು. ನಾನೇ ಇಸ್ರಾಯೇಲರ ಮಧ್ಯದಲ್ಲಿ ನಿನ್ನ ಪಾಲೂ ನಿನ್ನ ಸ್ವಾಸ್ತ್ಯವೂ ಆಗಿದ್ದೇನೆ.
21 ೨೧ “ಲೇವಿಯರು ದೇವದರ್ಶನದ ಗುಡಾರದ ಸೇವಾಕಾರ್ಯವನ್ನು ಮಾಡುವುದಕ್ಕಾಗಿ ಇಸ್ರಾಯೇಲರಿಂದ ಸಕಲ ಪದಾರ್ಥಗಳ ಹತ್ತನೆಯ ಪಾಲನ್ನು ಗೊತ್ತುಮಾಡಿ ಕೊಟ್ಟಿದ್ದೇನೆ.
“ಅವರು ದೇವದರ್ಶನ ಗುಡಾರದ ಸೇವೆಯನ್ನೂ ಮಾಡುವುದರಿಂದ ನಾನು ಲೇವಿಯ ಮಕ್ಕಳಿಗೆ ಅವರ ಸೇವೆಗೋಸ್ಕರ ಇಸ್ರಾಯೇಲರಲ್ಲಿ ಹತ್ತನೆಯ ಭಾಗವನ್ನು ಸೊತ್ತಾಗಿ ಕೊಟ್ಟಿದ್ದೇನೆ.
22 ೨೨ ಇನ್ನು ಮುಂದೆ ಇಸ್ರಾಯೇಲರು ದೇವದರ್ಶನದ ಗುಡಾರದ ಹತ್ತಿರಕ್ಕೆ ಬರಬಾರದು, ಬಂದರೆ ಅವರು ಆ ದೋಷದಿಂದ ಸತ್ತುಹೋಗುವರು.
ಇನ್ನು ಮೇಲೆ ಇಸ್ರಾಯೇಲರು ಪಾಪವನ್ನು ಹೊತ್ತುಕೊಂಡು ಸಾಯದ ಹಾಗೆ ದೇವದರ್ಶನದ ಗುಡಾರದ ಸಮೀಪಕ್ಕೆ ಬರಬಾರದು.
23 ೨೩ ಲೇವಿಯರೇ ದೇವದರ್ಶನದ ಗುಡಾರದ ಸೇವಾಕಾರ್ಯವನ್ನು ಮಾಡಬೇಕು. ಅದರ ಸಂಬಂಧವಾಗಿ ಅವರು ಮಾಡುವ ಪಾಪಫಲವನ್ನು ತಾವೇ ಅನುಭವಿಸಬೇಕು. ಇದು ನಿಮಗೂ, ನಿಮ್ಮ ಸಂತತಿಯವರಿಗೂ ಶಾಶ್ವತ ನಿಯಮವಾಗಿರಬೇಕು. ಆದರೆ ಇಸ್ರಾಯೇಲರ ಮಧ್ಯದಲ್ಲಿ ಲೇವಿಯರಿಗೆ ಸ್ವಂತವಾದ ಸ್ವತ್ತು ಇರುವುದಿಲ್ಲ.
ಆದರೆ ಲೇವಿಯರೇ ದೇವದರ್ಶನ ಗುಡಾರದ ಸೇವೆಯನ್ನು ಮಾಡಬೇಕು. ಅವರು ಅಲ್ಲಿ ಅಕ್ರಮವಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊತ್ತಿರಬೇಕು. ಇದು ನಿಮ್ಮ ಸಂತತಿಗಳಿಗೆ ಶಾಶ್ವತ ಕಟ್ಟಳೆಯಾಗಿದೆ, ಇಸ್ರಾಯೇಲರ ಮಧ್ಯದಲ್ಲಿ ಲೇವಿಯರಿಗೆ ಸ್ವಾಸ್ತ್ಯ ಇರಬಾರದು.
24 ೨೪ ಇಸ್ರಾಯೇಲರು ಪ್ರತ್ಯೇಕಿಸಿ ಯೆಹೋವನಿಗೆ ಸಮರ್ಪಿಸುವ ಹತ್ತನೆಯ ಒಂದು ಭಾಗವನ್ನು ಲೇವಿಯರಿಗೆ ಸ್ವತ್ತಾಗಿ ಕೊಟ್ಟಿದ್ದೇನೆ. ಆದುದರಿಂದ ಲೇವಿಯರಿಗೆ ‘ಇತರ ಇಸ್ರಾಯೇಲರೊಂದಿಗೆ ಪಾಲು ದೊರೆಯುವುದಿಲ್ಲ’” ಎಂದು ಹೇಳಿದ ಮಾತಿಗೆ ಇದೇ ಕಾರಣ.
ಇಸ್ರಾಯೇಲರು ಯೆಹೋವ ದೇವರಿಗೆ ಬಲಿಯಾಗಿ ಅರ್ಪಿಸುವ ಹತ್ತನೆಯ ಒಂದು ಪಾಲನ್ನು ಲೇವಿಯರಿಗೆ ಸ್ವಾಸ್ತ್ಯಕ್ಕಾಗಿ ಕೊಟ್ಟಿದ್ದೇನೆ. ಆದಕಾರಣ, ‘ಇಸ್ರಾಯೇಲರ ಮಧ್ಯದಲ್ಲಿ ಅವರಿಗೆ ಸೊತ್ತು ಇರಬಾರದು ಎಂದು ನಾನು ಅವರಿಗೆ ಹೇಳಿದ್ದೇನೆ,’” ಎಂದರು.
25 ೨೫ ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ,
ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ,
26 ೨೬ “ನೀನು ಲೇವಿಯರಿಗೆ ಹೀಗೆ ಆಜ್ಞಾಪಿಸಬೇಕು, ‘ಇಸ್ರಾಯೇಲರ ಸ್ವಂತಕ್ಕಾಗಿ ನಾನು ನೇಮಿಸಿರುವ ಹತ್ತನೆಯ ಒಂದು ಭಾಗವನ್ನು ಪ್ರತ್ಯೇಕಿಸಿ ಯೆಹೋವನಿಗೆ ಸಮರ್ಪಿಸಬೇಕು.
“ನೀನು ಲೇವಿಯರಿಗೆ ಹೇಳಬೇಕಾದದ್ದೇನೆಂದರೆ, ‘ನಿಮಗೆ ಸ್ವಾಸ್ತ್ಯಕ್ಕಾಗಿ ಕೊಟ್ಟ ಹತ್ತನೆಯ ಒಂದು ಪಾಲನ್ನು ಇಸ್ರಾಯೇಲರಿಂದ ನೀವು ತೆಗೆದುಕೊಳ್ಳುವಾಗ ಅದರಲ್ಲಿ ಹತ್ತನೆಯದರಿಂದ ಒಂದು ಪಾಲನ್ನು ಪ್ರತ್ಯೇಕಿಸಿ ಯೆಹೋವ ದೇವರಿಗೆ ಸಮರ್ಪಿಸಬೇಕು.
27 ೨೭ ನೀವು ಹೀಗೆ ಸಮರ್ಪಿಸಿದ ಹತ್ತನೆಯ ಒಂದು ಭಾಗದ ಕಣದಲ್ಲಿನ ಧಾನ್ಯವನ್ನೂ, ದ್ರಾಕ್ಷಿತೊಟ್ಟಿಯ ರಸದಿಂದ ಬರಬೇಕಾದ ದಶಮಾಂಶವೆಂದು ಪರಿಗಣಿಸಲ್ಪಡುವುದು.
ಈ ನಿಮ್ಮ ಸಮರ್ಪಣೆಯನ್ನು ಕಣದ ಧಾನ್ಯದ ಹಾಗೆಯೂ ದ್ರಾಕ್ಷಿತೊಟ್ಟಿಯ ರಸದಂತೆಯೂ ಪರಿಗಣಿಸಲಾಗುವುದು.
28 ೨೮ ಇಸ್ರಾಯೇಲರಿಂದ ನಿಮಗೆ ಸಲ್ಲುವ ಹತ್ತನೆಯ ಒಂದು ಭಾಗವನ್ನು ಯೆಹೋವನಿಗೆ ಪ್ರತ್ಯೇಕಿಸಿ ಯಾಜಕನಾದ ಆರೋನನಿಗೆ ಒಪ್ಪಿಸಬೇಕು.
ಈ ಪ್ರಕಾರ ನೀವು ಸಹ ಇಸ್ರಾಯೇಲರ ಕಡೆಯಿಂದ ತೆಗೆದುಕೊಳ್ಳುವ ನಿಮ್ಮ ಎಲ್ಲಾ ಹತ್ತನೆಯ ಒಂದು ಭಾಗವನ್ನು ಯೆಹೋವ ದೇವರಿಗೆ ಕಾಣಿಕೆಯಾಗಿ ಅರ್ಪಿಸಬೇಕು, ನೀವು ಅದರಿಂದ ಯೆಹೋವ ದೇವರ ಯಾಜಕನಾದ ಆರೋನನಿಗೆ ಕೊಡಬೇಕು.
29 ೨೯ ನಿಮಗೆ ಕೊಡಲ್ಪಡುವ ಸಕಲ ಪದಾರ್ಥಗಳಲ್ಲಿಯೂ ನೀವು ಉತ್ತಮ ಭಾಗವನ್ನೇ ದೇವರ ವಸ್ತುವಾಗುವುದಕ್ಕೆ ಯೋಗ್ಯಭಾಗವನ್ನೇ ಯೆಹೋವನಿಗೋಸ್ಕರ ಪ್ರತ್ಯೇಕಿಸಿ ಸಮರ್ಪಿಸಬೇಕು’
ನಿಮ್ಮ ಎಲ್ಲಾ ಕಾಣಿಕೆಗಳಲ್ಲಿ ಅದರ ಒಂದೊಂದರ ಉತ್ತಮವಾದದ್ದನ್ನು ಅದರೊಳಗಿನ ಪರಿಶುದ್ಧವಾದ ಭಾಗವನ್ನೇ ಯೆಹೋವ ದೇವರಿಗೆ ಸಮರ್ಪಣೆಯಾಗಿ ಅರ್ಪಿಸಬೇಕು.’
30 ೩೦ ಆದುದರಿಂದ ನೀನು ಲೇವಿಯರಿಗೆ ಹೀಗೆ ಹೇಳಬೇಕು, ‘ನಿಮಗೆ ದೊರಕಿದ್ದರಲ್ಲಿ ನೀವು ಉತ್ತಮವಾದದ್ದನ್ನೇ ಪ್ರತ್ಯೇಕಿಸಿ ಸಮರ್ಪಿಸಿದ ಮೇಲೆ ಉಳಿದದ್ದನ್ನು ಕಣದಲ್ಲಿನ ದವಸದ ಹಾಗೂ, ದ್ರಾಕ್ಷಿತೊಟ್ಟಿಯ ರಸವೆಂದು ಭಾವಿಸಿ ಉಪಯೋಗಿಸಿಕೊಳ್ಳಬಹುದು.
“ನೀನು ಲೇವಿಯರಿಗೆ ಹೇಳಬೇಕಾದದ್ದೇನೆಂದರೆ, ‘ನೀವು ಅದರಲ್ಲಿ ಉತ್ತಮವಾದದ್ದನ್ನು ಸಮರ್ಪಿಸಿದ ನಂತರ ಉಳಿದವುಗಳನ್ನು ಕಣದಲ್ಲಿನ ದವಸದಂತೆಯೂ ದ್ರಾಕ್ಷಿತೊಟ್ಟಿಯ ರಸದಂತೆಯೂ ಪರಿಗಣಿಸಲಾಗುತ್ತದೆ.
31 ೩೧ ನೀವೂ, ನಿಮ್ಮ ಮನೆಯವರೂ ಅದನ್ನು ಎಲ್ಲಾ ಸ್ಥಳಗಳಲ್ಲಿ ಊಟಮಾಡಬಹುದು. ನೀವು ದೇವದರ್ಶನದ ಗುಡಾರದ ಸೇವಾಕಾರ್ಯವನ್ನು ಮಾಡಿದ್ದಕ್ಕೆ ಅದು ನಿಮಗೆ ದೊರೆಯುವ ಪ್ರತಿಫಲ.
ನೀವೂ ನಿಮ್ಮ ಮನೆಯವರೂ ಅದನ್ನು ಸಕಲ ಸ್ಥಳಗಳಲ್ಲಿ ತಿನ್ನಬಹುದು. ಏಕೆಂದರೆ ದೇವದರ್ಶನದ ಗುಡಾರದಲ್ಲಿ ನೀವು ಮಾಡುವ ಸೇವೆಗೋಸ್ಕರ ಅದು ನಿಮಗೆ ಪ್ರತಿಫಲವಾಗಿದೆ.
32 ೩೨ ಅದರಲ್ಲಿ ಉತ್ತಮ ಭಾಗವನ್ನು ಯೆಹೋವನಿಗೋಸ್ಕರ ಪ್ರತ್ಯೇಕಿಸಿದ ನಂತರ ನೀವು ಉಳಿದ ವಿಷಯದಲ್ಲಿ ಯಾವ ದೋಷಕ್ಕೂ ಗುರಿಯಾಗುವುದಿಲ್ಲ. ಇಸ್ರಾಯೇಲರು ಸಮರ್ಪಿಸುವ ದೇವರ ವಸ್ತುಗಳನ್ನು ಅಪವಿತ್ರಮಾಡಿದರೆ ನೀವು ಸಾಯುವಿರಿ’” ಎಂದನು.
ಆದಕಾರಣ ನೀವು ಅದರಲ್ಲಿ ಉತ್ತಮವಾದದ್ದನ್ನು ಅರ್ಪಿಸಿದಾಗ, ಅದರ ದೆಸೆಯಿಂದ ಯಾವ ದೋಷಕ್ಕೂ ನೀವು ಗುರಿಯಾಗುವುದಿಲ್ಲ. ಇಸ್ರಾಯೇಲರು ಸಮರ್ಪಿಸುವ ಪರಿಶುದ್ಧವಾದವುಗಳನ್ನು ಅಪವಿತ್ರ ಮಾಡದಿದ್ದರೆ ನೀವು ಸಾಯುವುದಿಲ್ಲ,’” ಎಂದರು.

< ಅರಣ್ಯಕಾಂಡ 18 >