< ಅರಣ್ಯಕಾಂಡ 28 >

1 ಯೆಹೋವನು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನೆಂದರೆ,
ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ,
2 “ನೀನು ಇಸ್ರಾಯೇಲರಿಗೆ ಆಜ್ಞಾಪಿಸಿ ಅವರಿಗೆ, ‘ನನಗೆ ಸುಗಂಧಹೋಮಮಾಡುವುದಕ್ಕಾಗಿ ಇಸ್ರಾಯೇಲರು ನನಗೋಸ್ಕರ ತರುವ ಆಹಾರವನ್ನು ನೇಮಕವಾದ ಕಾಲಗಳಲ್ಲಿ ತಂದು ಎಚ್ಚರಿಕೆಯಿಂದ ಸಮರ್ಪಿಸಬೇಕೆಂದು ಅವರಿಗೆ ಆಜ್ಞಾಪಿಸು.’
“ನೀನು ಇಸ್ರಾಯೇಲರಿಗೆ ಆಜ್ಞಾಪಿಸಿ ಅವರಿಗೆ, ‘ನನಗೆ ಸುವಾಸನೆಗೋಸ್ಕರ ಅರ್ಪಿಸುವ ಅಂದರೆ, ದಹನಬಲಿಗಾಗಿ ಆಹಾರವನ್ನು ಅದರ ನೇಮಕವಾದ ಸಮಯದಲ್ಲಿ ನನಗೆ ಅರ್ಪಿಸುವಂತೆ ನೀವು ನೋಡಿಕೊಳ್ಳಿರಿ.’
3 ಇದರ ವಿಷಯದಲ್ಲಿ ನೀನು ಹೇಳಬೇಕಾದುದೇನೆಂದರೆ, ‘ನೀವು ಪ್ರತಿದಿನವೂ ಯೆಹೋವನಿಗೆ ಸರ್ವಾಂಗಹೋಮಕ್ಕಾಗಿ ದೋಷವಿಲ್ಲದ ಒಂದು ವರ್ಷದ ಎರಡು ಕುರಿಮರಿಗಳನ್ನು ಸಮರ್ಪಿಸಬೇಕು.
ನೀನು ಅವರಿಗೆ ಹೇಳಬೇಕಾದದ್ದು: ‘ನೀವು ಯೆಹೋವ ದೇವರಿಗೆ ಅರ್ಪಿಸಬೇಕಾದ ಅರ್ಪಣೆ ಏನೆಂದರೆ, ನಿಯಮಿತವಾಗಿ ಪ್ರತಿದಿನ ದೋಷರಹಿತ ಒಂದು ವರ್ಷದ ಎರಡು ಕುರಿಮರಿಗಳನ್ನು ದಹನಬಲಿಯಾಗಿ ಅರ್ಪಿಸಬೇಕು.
4 ಹೊತ್ತಾರೆಯಲ್ಲಿ ಒಂದು ಕುರಿಯನ್ನು, ಸಾಯಂಕಾಲದಲ್ಲಿ ಒಂದು ಕುರಿಯನ್ನೂ ಸಮರ್ಪಿಸಬೇಕು.
ಒಂದು ಕುರಿಮರಿಯನ್ನು ಮುಂಜಾನೆಯಲ್ಲಿಯೂ ಮತ್ತೊಂದನ್ನು ಸಾಯಂಕಾಲದಲ್ಲಿಯೂ ಸಮರ್ಪಿಸಬೇಕು.
5 ನೀವು ಧಾನ್ಯನೈವೇದ್ಯಕ್ಕಾಗಿ ಒಂದುವರೆ ಸೇರು ಶ್ರೇಷ್ಠವಾದ ಎಣ್ಣೆಯನ್ನೂ, ಮೂರು ಸೇರು ಹಿಟ್ಟನ್ನು ಬೆರೆಸಿ ಸಮರ್ಪಿಸಬೇಕು.
ಧಾನ್ಯ ಅರ್ಪಣೆಗಾಗಿ ಸುಮಾರು ಒಂದು ಲೀಟರ್ ಕುಟ್ಟಿ ತೆಗೆದ ಓಲಿವ್ ಎಣ್ಣೆಯನ್ನು ಸುಮಾರು ಒಂದುವರೆ ಕಿಲೋಗ್ರಾಂ ಗೋಧಿಹಿಟ್ಟಿಗೆ ಬೆರೆಸಿ ಸಮರ್ಪಿಸಬೇಕು.
6 ನೀವು ಪ್ರತಿನಿತ್ಯವೂ ಯೆಹೋವನಿಗೆ ಸುಗಂಧಕರವಾದ ಈ ಸರ್ವಾಂಗಹೋಮವನ್ನು ಮಾಡಬೇಕೆಂಬುದಾಗಿ ಸೀನಾಯಿ ಬೆಟ್ಟದಲ್ಲಿ ನೇಮಕವಾಯಿತು.
ಇದು ಸೀನಾಯಿ ಪರ್ವತದಲ್ಲಿ ಯೆಹೋವ ದೇವರಿಗೆ ಸುವಾಸನೆಯ ದಹನಬಲಿಗಾಗಿ ನೇಮಿಸಿದ ನಿತ್ಯ ದಹನಬಲಿಯು.
7 ಒಂದು ಕುರಿಮರಿಯೊಂದಿಗೆ ಪರಿಶುದ್ಧ ಸ್ಥಳದಲ್ಲಿ ಒಂದುವರೆ ಸೇರು ಅಮಲೇರುವ ದ್ರಾಕ್ಷಾರಸದ ಪಾನದ್ರವ್ಯ ಅರ್ಪಣೆಗಾಗಿ, ಯೆಹೋವನಿಗೋಸ್ಕರ ಹೊಯ್ದುಬಿಡಬೇಕು.
ಒಂದು ಕುರಿಮರಿಯೊಂದಿಗೆ ಪರಿಶುದ್ಧ ಸ್ಥಳದಲ್ಲಿ ಒಂದು ಲೀಟರ್ ಹುದುಗಿದ ದ್ರಾಕ್ಷಾರಸದ ಪಾನದ ಅರ್ಪಣೆಯನ್ನು ಯೆಹೋವ ದೇವರಿಗೋಸ್ಕರ ಸುರಿಯಬೇಕು.
8 ಸಾಯಂಕಾಲದಲ್ಲಿ ಇನ್ನೊಂದು ಕುರಿಯನ್ನು ಹೋಮಮಾಡುವಾಗ ಹೊತ್ತಾರೆಯಲ್ಲಿ ಮಾಡಿದ ಪ್ರಕಾರವೇ ಅದರೊಂದಿಗೆ ಧಾನ್ಯದ್ರವ್ಯ, ಪಾನದ್ರವ್ಯಗಳನ್ನೂ ಸಮರ್ಪಿಸಬೇಕು. ಅದು ಯೆಹೋವನಿಗೆ ಸುಗಂಧಕರ ಹೋಮವಾಗಿರುವುದು.
ಎರಡನೆಯ ಕುರಿಮರಿಯನ್ನು ಸಂಜೆಯಲ್ಲಿ ಅರ್ಪಿಸಬೇಕು. ಅದರ ಧಾನ್ಯ ಸಮರ್ಪಣೆಯನ್ನೂ ಪಾನದ ಅರ್ಪಣೆಯನ್ನೂ ಬೆಳಿಗ್ಗೆ ಮಾಡಿದಂತೆಯೇ, ಯೆಹೋವ ದೇವರಿಗೆ ಸುವಾಸನೆಯಾಗಿರುವಂತೆ ಬೆಂಕಿಯಿಂದ ಮಾಡಿದ ಬಲಿಯನ್ನು ನೀನು ಅರ್ಪಿಸಬೇಕು.
9 “‘ಸಬ್ಬತ್ ದಿನದಲ್ಲಿ ಧಾನ್ಯ ಸಮರ್ಪಣೆಗಾಗಿ ಎರಡು ಪೂರ್ಣಾಂಗವಾದ ದೋಷವಿಲ್ಲದ ಒಂದು ವರ್ಷದ ಕುರಿಮರಿಯನ್ನು, ಎಣ್ಣೆ ಬೆರಸಿದ ಆರು ಸೇರು ಹಿಟ್ಟನ್ನೂ, ಅದಕ್ಕೆ ತಕ್ಕ ಪಾನದ ಸಮರ್ಪಣೆಯನ್ನು ಮಾಡಬೇಕು.
“‘ಆದರೆ ಸಬ್ಬತ್ ದಿನದಲ್ಲಿ ಧಾನ್ಯ ಸಮರ್ಪಣೆಗಾಗಿ ದೋಷರಹಿತ ಒಂದು ವರ್ಷದ ಎರಡು ಕುರಿಮರಿಗಳನ್ನೂ, ಓಲಿವ್ ಎಣ್ಣೆ ಕಲಸಿದ ಎಫಾದ ಹತ್ತನೇ ಎರಡು ಭಾಗ ಗೋಧಿಹಿಟ್ಟನ್ನೂ, ಅದಕ್ಕೆ ತಕ್ಕ ಪಾನದ ಸಮರ್ಪಣೆಯನ್ನು ಮಾಡಬೇಕು.
10 ೧೦ ನಿತ್ಯ ಸರ್ವಾಂಗಹೋಮವು ಹೊರತು ಪ್ರತಿ ಸಬ್ಬತ್ತಿಗೆ ತಕ್ಕ ಸರ್ವಾಂಗಹೋಮವು, ಅದರ ಪಾನದ್ರವ್ಯದ ಅರ್ಪಣೆಯೂ ಆಗಬೇಕು.
ನಿತ್ಯ ದಹನಬಲಿಯ ಹೊರತು, ಪ್ರತಿ ಸಬ್ಬತ್ ದಿನಕ್ಕೆ ತಕ್ಕ ದಹನಬಲಿಯೂ ಅದರ ಪಾನದ ಅರ್ಪಣೆಯೂ ಇದೇ.
11 ೧೧ “‘ಪ್ರತಿ ತಿಂಗಳ ಆರಂಭದಲ್ಲಿ ನೀವು ಸರ್ವಾಂಗಹೋಮಕ್ಕಾಗಿ ಎರಡು ಟಗರು, ಏಳು ಪೂರ್ಣಾಂಗವಾದ ಒಂದು ವರ್ಷದ ದೋಷವಿಲ್ಲದ ಕುರಿಮರಿಗಳು ಇವುಗಳನ್ನು ಯೆಹೋವನಿಗೆ ಸಮರ್ಪಿಸಬೇಕು.
“‘ತಿಂಗಳುಗಳ ಆರಂಭದಲ್ಲಿ ನೀವು ಯೆಹೋವ ದೇವರಿಗೆ ದಹನಬಲಿಗಾಗಿ ದೋಷರಹಿತ ಎರಡು ಎಳೆಯ ಹೋರಿಗಳನ್ನೂ ಒಂದು ಟಗರನ್ನೂ ಒಂದು ವರ್ಷದ ಏಳು ಕುರಿಮರಿಗಳನ್ನೂ,
12 ೧೨ ಒಂದೊಂದು ಹೋರಿಗೆ ಧಾನ್ಯ ಸಮರ್ಪಣೆಗಾಗಿ ಎಣ್ಣೆ ಕಲಸಿದ ಒಂಭತ್ತು ಸೇರು ಹಿಟ್ಟನ್ನೂ, ಟಗರಿಗೆ ಧಾನ್ಯ ಸಮರ್ಪಣೆಗಾಗಿ ಎಣ್ಣೆ ಬೆರಸಿದ ಆರು ಸೇರು ಹಿಟ್ಟನ್ನು ಸೇರಿಸಬೇಕು.
ಒಂದೊಂದು ಹೋರಿಗೆ ಧಾನ್ಯ ಅರ್ಪಣೆಗಾಗಿ ಎಣ್ಣೆ ಕಲಸಿದ ಎಫಾದ ಹತ್ತನೇ ಮೂರು ಭಾಗ ಹಿಟ್ಟನ್ನೂ, ಟಗರಿಗೆ ಧಾನ್ಯ ಸಮರ್ಪಣೆಗಾಗಿ ಎಣ್ಣೆ ಕಲಸಿದ ಎಫಾದ ಹತ್ತನೇ ಎರಡು ಭಾಗ ಹಿಟ್ಟನ್ನೂ,
13 ೧೩ ಕುರಿಮರಿಗೆ ಧಾನ್ಯ ಸಮರ್ಪಣೆಗಾಗಿ ಎಣ್ಣೆ ಬೆರಸಿದ ಮೂರು ಸೇರು ಹಿಟ್ಟನ್ನು ಯೆಹೋವನಿಗೆ ಸುಗಂಧವಾಸನೆಯ ಸರ್ವಾಂಗಹೋಮಕ್ಕಾಗಿ ಬೆಂಕಿಯಿಂದ ಮಾಡಿದ ಬಲಿಯೂ ಇದೇ.
ಕುರಿಮರಿಗೆ ಧಾನ್ಯ ಸಮರ್ಪಣೆಗಾಗಿ ಎಣ್ಣೆ ಕಲಸಿದ ಎಫಾದ ಹತ್ತನೇ ಒಂದು ಭಾಗ ಹಿಟ್ಟನ್ನೂ, ಯೆಹೋವ ದೇವರಿಗೆ ಸುವಾಸನೆಯ ದಹನಬಲಿಗಾಗಿ ಬೆಂಕಿಯಿಂದ ಮಾಡಿದ ಬಲಿಯೂ ಇದೇ.
14 ೧೪ ಇವುಗಳಿಗೆ ತಕ್ಕ ಪಾನದ್ರವ್ಯಾರ್ಪಣೆ ಯಾವುದೆಂದರೆ: ಒಂದೊಂದು ಹೋರಿಗೆ ಮೂರು ಸೇರು ದ್ರಾಕ್ಷಾರಸವನ್ನು, ಟಗರಿಗೆ ಎರಡು ಸೇರು ದ್ರಾಕ್ಷಾರಸವನ್ನು, ಕುರಿಗೆ ಒಂದುವರೆ ಸೇರು ದ್ರಾಕ್ಷಾರಸವನ್ನು, ವರ್ಷದ ಪ್ರತಿ ತಿಂಗಳಿನ ಆರಂಭದಲ್ಲಿ ಹೀಗೆ ಸರ್ವಾಂಗಹೋಮವನ್ನು ಮಾಡಬೇಕು.
ಇವುಗಳಿಗೆ ತಕ್ಕ ಪಾನದ ಅರ್ಪಣೆಗಳು ಎಂದರೆ, ಹೋರಿಗೆ ಸುಮಾರು ಎರಡು ಲೀಟರ್ ದ್ರಾಕ್ಷಾರಸವು, ಟಗರಿಗೆ ಸುಮಾರು ಒಂದುವರೆ ಲೀಟರ್ ದ್ರಾಕ್ಷಾರಸವು, ಕುರಿಮರಿಗೆ ಸುಮಾರು ಒಂದು ಲೀಟರ್ ದ್ರಾಕ್ಷಾರಸವು ಇರಬೇಕು. ಇದು ವರ್ಷದ ಪ್ರತಿ ತಿಂಗಳಿನ ಆರಂಭದಲ್ಲಿ ಹೀಗೆ ದಹನಬಲಿಯನ್ನು ಅರ್ಪಿಸಬೇಕು.
15 ೧೫ ನಿತ್ಯ ಸರ್ವಾಂಗಹೋಮ ಹೊರತು ದೋಷಪರಿಹಾರ ಯಜ್ಞಕ್ಕಾಗಿ ಒಂದು ಹೋತವನ್ನು ಅದಕ್ಕೆ ತಕ್ಕ ಪಾನದ ಅರ್ಪಣೆಯನ್ನು ಯೆಹೋವನಿಗೆ ಸಮರ್ಪಿಸಬೇಕು.
ಇದಲ್ಲದೆ ನಿತ್ಯ ದಹನಬಲಿಯ ಹೊರತು, ಯೆಹೋವ ದೇವರಿಗೆ ಪಾಪ ಪರಿಹಾರಕ ಬಲಿಗಾಗಿ ಒಂದು ಹೋತವನ್ನೂ ಅದಕ್ಕೆ ತಕ್ಕ ಪಾನದ ಅರ್ಪಣೆಯನ್ನೂ ಸಮರ್ಪಿಸಬೇಕು.
16 ೧೬ “‘ಮೊದಲನೆಯ ತಿಂಗಳಿನ ಹದಿನಾಲ್ಕನೆಯ ದಿನದಲ್ಲಿ ಯೆಹೋವನು ನೇಮಿಸಿದ ಹಬ್ಬವಾಗಬೇಕು.
“‘ಆದರೆ ಮೊದಲನೆಯ ತಿಂಗಳಿನ ಹದಿನಾಲ್ಕನೆಯ ದಿನವು ಯೆಹೋವ ದೇವರ ಪಸ್ಕಹಬ್ಬವಾಗಿರಬೇಕು.
17 ೧೭ ಅದೇ ತಿಂಗಳಿನ ಹದಿನೈದನೆಯ ದಿನದಲ್ಲಿ ಜಾತ್ರೆ ಪ್ರಾರಂಭವಾಗುವುದು; ಏಳು ದಿನಗಳವರೆಗೂ ಹುಳಿಯಿಲ್ಲದ ರೊಟ್ಟಿಗಳನ್ನು ಊಟಮಾಡಬೇಕು.
ಆ ತಿಂಗಳ ಹದಿನೈದನೆಯ ದಿನವು ಹಬ್ಬವಾಗಿದೆ. ಏಳು ದಿನಗಳವರೆಗೆ ಹುಳಿಯಿಲ್ಲದ ರೊಟ್ಟಿಯನ್ನು ತಿನ್ನಬೇಕು.
18 ೧೮ ಮೊದಲನೆಯ ದಿನದಲ್ಲಿ ದೇವಾರಾಧನೆಗಾಗಿ ಸಭೆಕೂಡಬೇಕು. ಆ ದಿನದಲ್ಲಿ ಯಾವ ಉದ್ಯೋಗವನ್ನು ನಡೆಸಬಾರದು.
ಮೊದಲನೆಯ ದಿನದಲ್ಲಿ ಪರಿಶುದ್ಧ ದೇವಾರಾಧನೆಗಾಗಿ ಸಭೆ ಸೇರಬೇಕು. ಯಾವ ತರವಾದ ಉದ್ಯೋಗವನ್ನು ನೀವು ಆ ದಿನದಲ್ಲಿ ಮಾಡಬೇಡಿರಿ.
19 ೧೯ ಯೆಹೋವನಿಗೆ ಸರ್ವಾಂಗಹೋಮಕ್ಕಾಗಿ ಎರಡು ಹೋರಿಗಳನ್ನೂ, ಒಂದು ಟಗರನ್ನೂ ಮತ್ತು ಒಂದು ವರ್ಷದ ಏಳು ಕುರಿಗಳನ್ನೂ ಸಮರ್ಪಿಸಬೇಕು. ಈ ಪಶುಗಳೂ ಪೂರ್ಣಾಂಗವಾಗಿ ದೋಷವಿಲ್ಲದೆಯೇ ಇರಬೇಕು.
ಆದರೆ ನೀವು ಯೆಹೋವ ದೇವರಿಗೆ ಬೆಂಕಿಯಿಂದ ಮಾಡಿದ ದಹನಬಲಿಯನ್ನು ಅರ್ಪಿಸಬೇಕು. ಯಾವುದೆಂದರೆ: ಎರಡು ಎಳೆಯ ಹೋರಿಗಳು, ಒಂದು ಟಗರು, ಒಂದು ವರ್ಷದ ಏಳು ಕುರಿಮರಿಗಳು. ಇವು ದೋಷವಿಲ್ಲದೆ ಪೂರ್ಣಾಂಗವಾಗಿಯೇ ಇರಬೇಕು.
20 ೨೦ ಇವುಗಳೊಂದಿಗೆ ಧಾನ್ಯನೈವೇದ್ಯಕ್ಕಾಗಿ ಎಣ್ಣೆ ಬೆರಸಿದ ಹಿಟ್ಟನ್ನು ತಂದುಕೊಡಬೇಕು. ಹೋರಿಗೆ ಒಂಭತ್ತು ಸೇರು, ಟಗರಿಗೆ ಆರು ಸೇರು,
ಅವುಗಳ ಧಾನ್ಯ ಸಮರ್ಪಣೆಯನ್ನೂ, ಎಣ್ಣೆ ಕಲಸಿದ ಐದು ಕಿಲೋಗ್ರಾಂ ಹಿಟ್ಟನ್ನು ಒಂದೊಂದು ಹೋರಿಗೆ, ಹತ್ತನೇ ಎರಡು ಭಾಗ ಟಗರಿಗೂ ಅರ್ಪಿಸಬೇಕು.
21 ೨೧ ಏಳು ಕುರಿಮರಿಯಲ್ಲಿ ಒಂದೊಂದಕ್ಕೆ ಎಣ್ಣೆ ಬೆರೆಸಿದ ಮೂರು ಸೇರನ್ನು,
ಮತ್ತು ಏಳು ಕುರಿಮರಿಗಳಲ್ಲಿ ಒಂದೊಂದಕ್ಕೆ ಸುಮಾರು ಒಂದುವರೆ ಕಿಲೋಗ್ರಾಂ ಅರ್ಪಿಸಬೇಕು.
22 ೨೨ ಅದಲ್ಲದೆ ದೋಷಪರಿಹಾರಕ ಯಜ್ಞಕ್ಕಾಗಿ ಒಂದು ಹೋತವನ್ನು ಸಮರ್ಪಿಸಬೇಕು.
ನಿಮಗೋಸ್ಕರ ಪ್ರಾಯಶ್ಚಿತ್ತ ಮಾಡಲು ಪಾಪ ಪರಿಹಾರಕ ಬಲಿಗಾಗಿ ಒಂದು ಹೋತವನ್ನು ಅರ್ಪಿಸಬೇಕು.
23 ೨೩ ಪ್ರತಿ ದಿನದ ಪ್ರಾತಃಕಾಲದಲ್ಲಿ ಸರ್ವಾಂಗಹೋಮವಲ್ಲದೆ ಇವುಗಳನ್ನು ಹೆಚ್ಚಾಗಿ ಸಮರ್ಪಿಸಬೇಕು.
ನಿತ್ಯ ದಹನಬಲಿಯಾಗಿರುವ ಮುಂಜಾನೆಯ ದಹನಬಲಿಯ ಹೊರತಾಗಿ ಇವುಗಳನ್ನು ನೀವು ಅರ್ಪಿಸಬೇಕು.
24 ೨೪ ಆ ಏಳು ದಿನಗಳಲ್ಲಿಯೂ ನಿತ್ಯ ಸರ್ವಾಂಗಹೋಮವನ್ನು ಸಮರ್ಪಿಸುವುದಲ್ಲದೆ ಮೇಲೆ ಹೇಳಿದ ಕ್ರಮದ ಪ್ರಕಾರ ಪ್ರತಿದಿನವೂ ಹೋಮರೂಪವಾಗಿ ಯೆಹೋವನಿಗೆ ಆಹಾರವನ್ನು, ಪಾನದ್ರವ್ಯವನ್ನು ಸಹ ಸಮರ್ಪಿಸಿ ಆತನಿಗೋಸ್ಕರ ಸುವಾಸನೆಯನ್ನುಂಟುಮಾಡಬೇಕು.
ಈ ಪ್ರಕಾರ ನೀವು ಏಳು ದಿವಸಗಳ ಮಟ್ಟಿಗೆ ಪ್ರತಿದಿನವೂ ಯೆಹೋವ ದೇವರಿಗೆ ಸುವಾಸನೆಗಾಗಿ ದಹನಬಲಿಯ ಆಹಾರವನ್ನು ಅರ್ಪಿಸಬೇಕು. ಅದನ್ನೂ ಅದಕ್ಕೆ ತಕ್ಕ ಪಾನಾರ್ಪಣೆಯನ್ನೂ ನಿತ್ಯವಾದ ದಹನಬಲಿಯ ಹೊರತಾಗಿ ಅರ್ಪಿಸಬೇಕು.
25 ೨೫ ಏಳನೆಯ ದಿನದಲ್ಲೂ ಸಭೆಕೂಡಬೇಕು. ಆ ದಿನದಲ್ಲಿ ಯಾವ ಉದ್ಯೋಗವನ್ನು ನಡೆಸಬಾರದು.
ಏಳನೆಯ ದಿವಸದಲ್ಲಿ ಪರಿಶುದ್ಧವಾದ ಸಭೆ ಕೂಡಬೇಕು. ಆ ದಿನದಲ್ಲಿ ನೀವು ದೈನಂದಿನ ಉದ್ಯೋಗವನ್ನೂ ಮಾಡಬೇಡಿರಿ.
26 ೨೬ “‘ಪಸ್ಕವಾದ ಏಳು ವಾರಗಳ ಮೇಲೆ ನೀವು ಹೊಸ ಬೆಳೆಯ ಗೋದಿಯನ್ನು ಯೆಹೋವನಿಗೆ ನೈವೇದ್ಯಮಾಡುವಾಗ ಪ್ರಥಮಫಲಾರ್ಪಣೆಯ ದಿನದಲ್ಲಿ ನೀವು ಯಾವ ಉದ್ಯೋಗವನ್ನು ನಡೆಸದೆ ದೇವಾರಾಧನೆಗಾಗಿ ಸಭೆಕೂಡಬೇಕು.
“‘ಪ್ರಥಮ ಫಲಗಳ ದಿವಸದಲ್ಲಿಯೂ ನೀವು ಯೆಹೋವ ದೇವರಿಗೆ ನಿಮ್ಮ ವಾರಗಳಲ್ಲಿ ಹೊಸ ಧಾನ್ಯ ಸಮರ್ಪಣೆಯನ್ನು ಅರ್ಪಿಸುವಾಗ, ಆ ದಿನದಲ್ಲಿ ನೀವು ಉದ್ಯೋಗವನ್ನೂ ಮಾಡದೆ ಪವಿತ್ರ ಸಭೆ ಕೂಡಬೇಕು.
27 ೨೭ ಆ ದಿನದಲ್ಲಿ ನೀವು ಯೆಹೋವನಿಗೆ ಸುವಾಸನೆಯನ್ನು ಉಂಟುಮಾಡುವುದಕ್ಕೋಸ್ಕರ ಸರ್ವಾಂಗಹೋಮಕ್ಕಾಗಿ ಎರಡು ಹೋರಿ, ಒಂದು ಟಗರು, ಒಂದು ವರ್ಷದ ಏಳು ಕುರಿಗಳು ಇವುಗಳನ್ನೂ,
ನೀವು ಯೆಹೋವ ದೇವರಿಗೆ ಸುವಾಸನೆಯುಳ್ಳ ದಹನಬಲಿಯಾಗಿ ಎರಡು ಎಳೆಯ ಹೋರಿಗಳನ್ನೂ ಒಂದು ಟಗರನ್ನೂ ಒಂದು ವರ್ಷದ ಏಳು ಕುರಿಮರಿಗಳನ್ನೂ,
28 ೨೮ ಧಾನ್ಯನೈವೇದ್ಯಕ್ಕಾಗಿ ಎಣ್ಣೆ ಬೆರಸಿದ ಹಿಟ್ಟನ್ನು ಹಾಗೂ ಪ್ರತಿಯೊಂದು ಟಗರಿಗೆ ಒಂಭತ್ತು ಸೇರು,
ಅವುಗಳ ಧಾನ್ಯ ಸಮರ್ಪಣೆಗಾಗಿ ಎಣ್ಣೆ ಕಲಸಿದ ಸುಮಾರು ಐದು ಕಿಲೋಗ್ರಾಂ ಹಿಟ್ಟನ್ನು ಪ್ರತಿಯೊಂದು ಹೋರಿಗೆ, ಸುಮಾರು ಮೂರುವರೆ ಕಿಲೋಗ್ರಾಂ ಟಗರಿಗೂ
29 ೨೯ ಹೋರಿಗೆ ಆರು ಸೇರು, ಕುರಿಗೆ ಮೂರು ಸೇರು ಹಿಟ್ಟನ್ನೂ,
ಏಳು ಕುರಿಮರಿಗಳಲ್ಲಿ ಸುಮಾರು ಒಂದುವರೆ ಕಿಲೋಗ್ರಾಂ,
30 ೩೦ ದೋಷಪರಿಹಾರ ಯಜ್ಞಕ್ಕಾಗಿ ಒಂದು ಹೋತವನ್ನು ಸಮರ್ಪಿಸಬೇಕು.
ನಿಮಗೋಸ್ಕರ ಪ್ರಾಯಶ್ಚಿತ್ತಕ್ಕೆ ಒಂದು ಹೋತವನ್ನು ಸಮರ್ಪಿಸಬೇಕು.
31 ೩೧ ಈ ಪಶುಗಳೆಲ್ಲಾ ಪೂರ್ಣಾಂಗವಾಗಿ ಕುಂದುಕೊರತೆ ಇಲ್ಲದೆ ಇರಬೇಕು. ನಿತ್ಯ ಸರ್ವಾಂಗಹೋಮ ಮತ್ತು ಅದಕ್ಕೆ ಸೇರಿದ ಧಾನ್ಯದ್ರವ್ಯ, ನೈವೇದ್ಯ ಇವುಗಳನ್ನಲ್ಲದೆ ಮೇಲೆ ಕಂಡ ಯಜ್ಞಗಳನ್ನೂ ಅವುಗಳೊಡನೆ ಕೊಡಬೇಕಾದ ಪಾನದ್ರವ್ಯ, ನೈವೇದ್ಯಗಳನ್ನೂ ಹೆಚ್ಚಾಗಿ ಸಮರ್ಪಿಸಬೇಕು.’”
ನಿತ್ಯವಾದ ದಹನಬಲಿಯನ್ನೂ ಅದರ ಧಾನ್ಯ ಸಮರ್ಪಣೆಯನ್ನೂ ಹೊರತಾಗಿ ಇವುಗಳ ಜೊತೆಗೆ ನೀವು ದೋಷವಿಲ್ಲದ ಪ್ರಾಣಿಗಳನ್ನೂ ಅವುಗಳಿಗೆ ತಕ್ಕ ಪಾನದ ಅರ್ಪಣೆಗಳನ್ನೂ ಸಮರ್ಪಿಸಬೇಕು.

< ಅರಣ್ಯಕಾಂಡ 28 >