< ಮೀಕನು 3 >

1 ನಾನು ಹೀಗೆ ಸಾರಿದೆನು; “ಯಾಕೋಬಿನ ಮುಖಂಡರೇ, ಇಸ್ರಾಯೇಲ್ ವಂಶದ ಅಧಿಪತಿಗಳೇ ಕಿವಿಗೊಟ್ಟು ಕೇಳಿರಿ. ನ್ಯಾಯ ನೀತಿ ಪಾಲನೆ ನಿಮ್ಮ ಕರ್ತವ್ಯವಲ್ಲವೇ? ನಿಮ್ಮ ಧರ್ಮವಲ್ಲವೇ?
ಆಗ ನಾನು, “ಯಾಕೋಬಿನ ಮುಖ್ಯಸ್ಥರೇ, ಇಸ್ರಾಯೇಲಿನ ಮನೆತನದ ಪ್ರಧಾನರೇ, ಈಗ ಕೇಳಿರಿ. ನೀವು ನ್ಯಾಯವನ್ನು ಪ್ರೀತಿಸಬಾರದೇ.
2 ಆಹಾ! ಇವರು ಒಳ್ಳೆಯದನ್ನು ದ್ವೇಷಿಸಿ ಕೆಟ್ಟದ್ದನ್ನು ಪ್ರೀತಿಸುತ್ತಾರೆ. ಜನರ ಮೈಮೇಲಿಂದ ಚರ್ಮವನ್ನು ಸುಲಿಯುತ್ತಾರೆ. ಅವರ ಎಲುಬುಗಳಿಂದ ಮಾಂಸವನ್ನು ಕಿತ್ತು ಬಿಡುತ್ತಾರೆ.
ಒಳ್ಳೆಯದನ್ನು ದ್ವೇಷಮಾಡಿ ಕೆಟ್ಟದ್ದನ್ನು ಪ್ರೀತಿ ಮಾಡುವವರೇ, ಅವರ ಮೇಲಿನಿಂದ ಅವರ ಚರ್ಮವನ್ನೂ ನನ್ನ ಜನರ ಎಲುಬುಗಳ ಮೇಲಿನಿಂದ ಅವರ ಮಾಂಸವನ್ನೂ ಕಿತ್ತು ಕೊಳ್ಳುವವರೇ,
3 ನನ್ನ ಪ್ರಜೆಯ ಮಾಂಸವನ್ನು ತಿನ್ನುತ್ತಾರೆ. ಅವರ ಚರ್ಮವನ್ನು ಸುಲಿದುಹಾಕಿ ಅವರ ಎಲುಬುಗಳನ್ನು ಮುರಿಯುತ್ತಾರೆ. ಹಂಡೆಯಲ್ಲಿನ ತುಂಡುಗಳಂತೆ, ಕೊಪ್ಪರಿಗೆಯಲ್ಲಿನ ಮಾಂಸದ ಹಾಗೆ ಅವರನ್ನು ಚೂರುಚೂರಾಗಿ ಕತ್ತರಿಸುತ್ತಾರೆ.
ನನ್ನ ಪ್ರಜೆಯ ಮಾಂಸವನ್ನು ತಿನ್ನುತ್ತಾರೆ. ಅವರ ಚರ್ಮವನ್ನು ಸುಲಿದುಹಾಕುತ್ತಾರೆ. ಅವರ ಎಲುಬುಗಳನ್ನು ಮುರಿದುಹಾಕುತ್ತೀರಿ. ಹಂಡೆಯಲ್ಲಿನ ತುಂಡುಗಳಂತೆ, ಮಡಕೆಯಲ್ಲಿನ ಮಾಂಸದ ಚೂರುಗಳಂತೆ ನನ್ನ ಪ್ರಜೆಯನ್ನು ಚೂರುಚೂರಾಗಿ ಕತ್ತರಿಸಿಹಾಕಿದ್ದೀರಿ.”
4 ಇಷ್ಟೆಲ್ಲಾ ನಡೆಸಿ ಇವರು ಯೆಹೋವನಿಗೆ ಮೊರೆಯಿಡಲು ಆತನು ಇವರಿಗೆ ಉತ್ತರಕೊಡನು. ಇವರ ನಡತೆಯ ದುಷ್ಕೃತ್ಯಗಳಿಗೆ ತಕ್ಕ ಹಾಗೆ ಆ ಕಾಲದಲ್ಲಿ ಇವರಿಗೆ ವಿಮುಖನಾಗುವೆನು.”
ಆಗ ಅವರು ಯೆಹೋವ ದೇವರಿಗೆ ಮೊರೆಯಿಡುವರು; ಆದರೆ ಅವರು ಅವರಿಗೆ ಉತ್ತರ ಕೊಡುವುದಿಲ್ಲ. ಅವರು ಕೆಟ್ಟ ಕ್ರಿಯೆಗಳನ್ನು ಮಾಡಿದ ಪ್ರಕಾರವೇ, ಆ ಕಾಲದಲ್ಲಿ ಅವರಿಗೆ ತಮ್ಮ ಮುಖವನ್ನು ಮರೆಮಾಡುವರು.
5 ನನ್ನ ಜನರನ್ನು ಸನ್ಮಾರ್ಗದಿಂದ ತಪ್ಪಿಸುವವರೂ, ತಿನ್ನುವುದಕ್ಕೆ ಕೊಡುವಂಥವರಿಗೆ, “ಸಮಾಧಾನವಿರುವುದು” ಎಂದು ಪ್ರಕಟಿಸುವರು ಮತ್ತು ತಮ್ಮ ಬಾಯಿಗೆ ರುಚಿಯಾದ ತಿಂಡಿಯನ್ನು ಕೊಡದವನ ಮೇಲೆ ಯುದ್ಧವನ್ನು ನಿರ್ಧರಿಸುವ ಪ್ರವಾದಿಗಳ ವಿಷಯವಾಗಿ ಯೆಹೋವನು ಇಂತೆನ್ನುತ್ತಾನೆ,
ಯೆಹೋವ ದೇವರು ಹೇಳುವುದೇನೆಂದರೆ, “ನನ್ನ ಜನರನ್ನು ಸನ್ಮಾರ್ಗದಿಂದ ತಪ್ಪಿಸುವ ಪ್ರವಾದಿಗಳಿಗೆ ತಿನ್ನಲು ಕೊಟ್ಟರೆ ‘ಸಮಾಧಾನವಾಗಲಿ’ ಎನ್ನುವರು. ಆದರೆ ಅವರಿಗೆ ತಿನ್ನಲು ಏನೂ ಕೊಡದವನ ವಿರೋಧವಾಗಿ ಯುದ್ಧಕ್ಕೂ ಅವರು ಸಿದ್ಧರಾಗುವರು.
6 “ನೀವು ಇಂಥವರಾದ ಕಾರಣ ನಿಮಗೆ ರಾತ್ರಿಯಾಗುವುದು, ದಿವ್ಯದರ್ಶನವಾಗದು, ನಿಮಗೆ ಕತ್ತಲು ಕವಿಯುವುದು ಮತ್ತು ಕಣಿಹೇಳಲಾಗದು. ಸೂರ್ಯನು ಪ್ರವಾದಿಗಳಿಗೆ ಮುಣುಗುವನು, ಹಗಲು ಅವರಿಗೆ ಕಾರ್ಗತ್ತಲಾಗುವುದು.
ದರ್ಶನವಿಲ್ಲದೆ, ನಿಮಗೆ ರಾತ್ರಿಯಾಗುವುದು; ಶಕುನವಿಲ್ಲದೆ ನಿಮಗೆ ಕತ್ತಲಾಗುವುದು. ಪ್ರವಾದಿಗಳಿಗೆ ಸೂರ್ಯ ಮುಳುಗುವುದು. ಅವರ ಮೇಲೆ ಹಗಲು ಕತ್ತಲೆಯಾಗುವುದು.
7 ದಿವ್ಯದರ್ಶಿಗಳು ಆಶಾಭಂಗಪಡುವರು, ಕಣಿಯವರು ನಾಚಿಕೊಳ್ಳುವರು. ಎಲ್ಲರೂ ಬಟ್ಟೆಯಿಂದ ಬಾಯಿಮುಚ್ಚಿಕೊಳ್ಳುವರು. ಅವರಿಗೆ ದೈವೋತ್ತರವೇ ದೊರೆಯುವುದಿಲ್ಲ” ಎಂದು ನುಡಿಯುತ್ತಾನೆ.
ಆಗ ದರ್ಶಿಗಳು ನಾಚಿಕೆಪಡುವರು, ಶಕುನಗಾರರು ಅವಮಾನಗೊಳ್ಳುವರು. ದೇವರಿಂದ ಉತ್ತರವಿಲ್ಲದ ಕಾರಣ, ಎಲ್ಲರೂ ತಮ್ಮ ತುಟಿಗಳನ್ನು ಮುಚ್ಚಿಕೊಳ್ಳುವರು.”
8 ನಾನಾದರೋ ಯೆಹೋವನ ಆತ್ಮ ಪ್ರೇರಣೆಯಿಂದ, ಬಲ ಪರಾಕ್ರಮ ಮತ್ತು ನ್ಯಾಯಭರಿತನಾಗಿ ಯಾಕೋಬಿಗೆ ಅದರ ದ್ರೋಹವನ್ನು, ಇಸ್ರಾಯೇಲಿಗೆ ಅದರ ಪಾಪವನ್ನು ಸಾರಲು ಶಕ್ತನಾಗಿದ್ದೇನೆ.
ಆದರೆ ನಿಶ್ಚಯವಾಗಿ ನಾನು ಯಾಕೋಬಿನ ಅವನ ಅಪರಾಧವನ್ನೂ ಇಸ್ರಾಯೇಲಿಗೆ ಅವನ ಪಾಪವನ್ನೂ ತಿಳಿಸುವುದಕ್ಕೆ ಯೆಹೋವ ದೇವರ ಆತ್ಮದ ಮುಖಾಂತರ ಶಕ್ತಿಯಿಂದಲೂ ನ್ಯಾಯದಿಂದಲೂ ತ್ರಾಣದಿಂದಲೂ ತುಂಬಿದ್ದೇನೆ.
9 ನ್ಯಾಯಕ್ಕೆ ಅಸಹ್ಯಪಟ್ಟು, ನೆಟ್ಟಗಿರುವುದನ್ನು ಸೊಟ್ಟಗೆ ಮಾಡುವ ಯಾಕೋಬ ವಂಶದ ಮುಖಂಡರೇ, ಇಸ್ರಾಯೇಲ್ ಮನೆತನದ ಅಧಿಪತಿಗಳೇ,
ಯಾಕೋಬನ ಮನೆತನದವರ ಪ್ರಧಾನರೇ, ಇಸ್ರಾಯೇಲಿನ ಮನೆತನದವರ ನ್ಯಾಯಾಧಿಪತಿಗಳೇ, ನ್ಯಾಯವನ್ನು ನಿಂದಿಸಿ ಸರಿಯಾದದ್ದನ್ನೆಲ್ಲಾ ಡೊಂಕುಮಾಡುವವರೇ,
10 ೧೦ ಚೀಯೋನನ್ನು ನರಹತ್ಯದಿಂದಲೂ, ಯೆರೂಸಲೇಮನ್ನು ಅನ್ಯಾಯದಿಂದಲೂ ಕಟ್ಟುವವರೇ, ಇದನ್ನು ಕಿವಿಗೊಟ್ಟು ಕೇಳಿರಿ, ಕೇಳಿರಿ.
ಚೀಯೋನನ್ನು ರಕ್ತದಿಂದಲೂ ಯೆರೂಸಲೇಮನ್ನು ಅನ್ಯಾಯದಿಂದಲೂ ಕಟ್ಟುವವರೇ, ಈಗ ಇದನ್ನು ಕೇಳಿರಿ.
11 ೧೧ ಮುಖಂಡರು ಲಂಚಕ್ಕೆ ನ್ಯಾಯತೀರಿಸುತ್ತಾರೆ. ಯಾಜಕರು ಸಂಬಳಕ್ಕಾಗಿ ಉಪದೇಶಿಸುತ್ತಾರೆ. ಪ್ರವಾದಿಗಳು ಹಣಕ್ಕೋಸ್ಕರ ಕಣಿಹೇಳುತ್ತಾರೆ. ಆದರೂ ಯೆಹೋವನ ಮೇಲೆ ಭಾರ ಹಾಕಿ, “ಯೆಹೋವನು ನಮ್ಮ ಮಧ್ಯದಲ್ಲಿ ಇದ್ದಾನಲ್ಲಾ, ನಮಗೆ ಯಾವ ಕೇಡೂ ಸಂಭವಿಸದು” ಅಂದುಕೊಳ್ಳುತ್ತಾರೆ.
ಅದರ ಮುಖ್ಯಸ್ಥರು ಲಂಚಕ್ಕೆ ನ್ಯಾಯತೀರಿಸುತ್ತಾರೆ. ಅದರ ಯಾಜಕರು ಸಂಬಳಕ್ಕೆ ಬೋಧಿಸುತ್ತಾರೆ. ಅದರ ಪ್ರವಾದಿಗಳು ಹಣಕ್ಕೆ ಶಕುನ ಹೇಳುತ್ತಾರೆ. ಆದರೂ ಯೆಹೋವ ದೇವರ ಮೇಲೆ ಆತುಕೊಂಡು, “ಯೆಹೋವ ದೇವರು ನಮ್ಮ ಮಧ್ಯದಲ್ಲಿ ಇಲ್ಲವೋ? ನಮ್ಮ ಮೇಲೆ ಕೇಡು ಬರುವುದಿಲ್ಲ,” ಎನ್ನುತ್ತಾರೆ.
12 ೧೨ ಹೀಗಿರಲು ನಿಮ್ಮ ದೆಸೆಯಿಂದ ಚೀಯೋನ್ ಪಟ್ಟಣವು ಹೊಲದಂತೆ ಉಳಲ್ಪಡುವುದು, ಯೆರೂಸಲೇಮು ಹಾಳುದಿಬ್ಬಗಳಾಗುವುದು. ಯೆಹೋವನ ಆಲಯದ ಪರ್ವತವು ಕಾಡುಗುಡ್ಡಗಳಂತಾಗುವುದು.
ಆದಕಾರಣ ನಿಮ್ಮ ನಿಮಿತ್ತವೇ, ಚೀಯೋನನ್ನು ಹೊಲದ ಹಾಗೆ ಉಳಲಾಗುವುದು. ಯೆರೂಸಲೇಮು ಹಾಳುದಿಬ್ಬಗಳಾಗುವುದು. ಆಲಯದ ಬೆಟ್ಟವೂ ಕಾಡುಗುಡ್ಡಗಳಂತಾಗುವುದು.

< ಮೀಕನು 3 >