< ಯೋನನು 3 >

1 ಯೆಹೋವನ ವಾಕ್ಯವು ಯೋನನಿಗೆ ಎರಡನೆಯ ಸಾರಿ ಉಂಟಾಯಿತು.
ಯೆಹೋವ ದೇವರ ವಾಕ್ಯವು ಎರಡನೆಯ ಸಾರಿ ಯೋನನಿಗೆ ಬಂದಿತು.
2 ಅದೇನೆಂದರೆ “ನೀನು ಹೊರಟು ಆ ದೊಡ್ಡ ಪಟ್ಟಣವಾದ ನಿನೆವೆಗೆ ಹೋಗಿ ನಾನು ನಿನಗೆ ಆಜ್ಞಾಪಿಸುವ ಸಂದೇಶವನ್ನು ಸಾರು” ಎಂದು ಹೇಳಿದನು.
“ಎದ್ದು ಆ ದೊಡ್ಡ ಪಟ್ಟಣವಾದ ನಿನೆವೆಗೆ ಹೋಗಿ, ನಾನು ನಿನಗೆ ಹೇಳಿದ ಸಂದೇಶವನ್ನು ಅದರ ನಿವಾಸಿಗಳಿಗೆ ಸಾರು,” ಎಂದು ಹೇಳಿದರು.
3 ಆಗ ಯೋನನು ಎದ್ದು ಯೆಹೋವನ ಅಪ್ಪಣೆಯಂತೆ ನಿನೆವೆಗೆ ಹೋದನು. ನಿನೆವೆಯು ಮೂರು ದಿನದ ಪ್ರಯಾಣದಷ್ಟು ಅತಿ ವಿಸ್ತಾರವಾದ ಮಹಾದೊಡ್ಡ ಪಟ್ಟಣವಾಗಿತ್ತು.
ಹೀಗೆ ಯೋನನು ಯೆಹೋವ ದೇವರ ಮಾತಿಗೆ ವಿಧೇಯನಾಗಿ ನಿನೆವೆಗೆ ಹೋದನು. ನಿನೆವೆಯು ಮೂರು ದಿವಸದ ಪ್ರಯಾಣದ ಮಹಾ ದೊಡ್ಡ ಪಟ್ಟಣವಾಗಿತ್ತು.
4 ಯೋನನು ಪಟ್ಟಣವನ್ನು ಪ್ರವೇಶಿಸಿ ಒಂದು ದಿನದಷ್ಟು ದೂರ ಪ್ರಯಾಣಮಾಡಿದ ನಂತರ “ನಲವತ್ತು ದಿನಗಳಾದ ಮೇಲೆ ನಿನೆವೆಯು ಕೆಡವಲ್ಪಡುವುದು” ಎಂದು ಸಾರತೊಡಗಿದನು.
ಆಗ ಯೋನನು ಒಂದು ದಿವಸದ ಪ್ರಯಾಣಮಾಡಿ, ಪಟ್ಟಣದಲ್ಲಿ ಪ್ರವೇಶಿಸಿ, “ಇನ್ನು ನಾಲ್ವತ್ತು ದಿವಸಗಳಾದ ಮೇಲೆ ನಿನೆವೆ ನಾಶವಾಗುವುದು,” ಎಂದು ಕೂಗಿ ಹೇಳಿದನು.
5 ಇದನ್ನು ಕೇಳಿ ನಿನೆವೆಯವರು ದೇವರಲ್ಲಿ ನಂಬಿಕೆಯಿಟ್ಟು ಉಪವಾಸವನ್ನು ಮಾಡಬೇಕೆಂದು ಸಾರಿ ಹೇಳಿದರು; ದೊಡ್ಡವರು ಮೊದಲುಗೊಂಡು ಚಿಕ್ಕವರ ತನಕ ಎಲ್ಲರೂ ಗೋಣಿತಟ್ಟನ್ನು ಸುತ್ತಿಕೊಂಡರು.
ನಿನೆವೆಯ ಮನುಷ್ಯರು, ದೇವರನ್ನು ನಂಬಿ, ಉಪವಾಸವನ್ನು ಸಾರಿ, ಅವರಲ್ಲಿ ದೊಡ್ಡವನು ಮೊದಲುಗೊಂಡು ಚಿಕ್ಕವನವರೆಗೂ ಗೋಣಿತಟ್ಟನ್ನು ಉಟ್ಟುಕೊಂಡರು.
6 ಆ ಸುದ್ದಿಯು ನಿನೆವೆಯ ಅರಸನಿಗೆ ತಿಳಿಯಲು ಅವನು ಸಿಂಹಾಸನದಿಂದ ಎದ್ದು, ತನ್ನ ನಿಲುವಂಗಿಯನ್ನು ತೆಗೆದುಬಿಟ್ಟು, ಗೋಣಿತಟ್ಟನ್ನು ಸುತ್ತಿಕೊಂಡು ಬೂದಿಯಲ್ಲಿ ಕುಳಿತುಕೊಂಡನು.
ಆ ಮಾತು ನಿನೆವೆಯ ಅರಸನಿಗೆ ಮುಟ್ಟಿದಾಗ, ಅವನು ತನ್ನ ಸಿಂಹಾಸನದಿಂದ ಎದ್ದು, ತನ್ನ ನಿಲುವಂಗಿಯನ್ನು ತೆಗೆದಿಟ್ಟು, ಗೋಣಿತಟ್ಟನ್ನು ಉಟ್ಟುಕೊಂಡು, ಬೂದಿಯಲ್ಲಿ ಕುಳಿತುಕೊಂಡನು.
7 ಇದಲ್ಲದೆ ಅರಸನು ತನ್ನ ಮತ್ತು ರಾಜ್ಯಾಧಿಕಾರಿಗಳ ಆಜ್ಞೆಯನ್ನು ನಿನೆವೆಯಲ್ಲಿ ಹೊರಡಿಸಿ ಹೇಳಿದ್ದೇನೆಂದರೆ: “ಜನ, ಪಶು, ಮಂದೆ, ಹಿಂಡು ಇವುಗಳು ಸಹ ಏನೂ ರುಚಿ ನೋಡುವುದಾಗಲೀ, ತಿನ್ನುವುದಾಗಲೀ, ಕುಡಿಯುವುದಾಗಲೀ ಮಾಡಬಾರದು.
ಅವನು ನಿನೆವೆಯಲ್ಲಿ ಈ ಘೋಷಣೆಯನ್ನು ಮಾಡಿದನು: “ಅರಸನ ಮತ್ತು ಶ್ರೇಷ್ಠರ ತೀರ್ಪಿನ ಪ್ರಕಾರ: “ಮನುಷ್ಯರಾಗಲಿ, ಮೃಗಗಳಾಗಲಿ, ದನಗಳಾಗಲಿ, ಕುರಿಗಳಾಗಲಿ, ಏನನ್ನೂ ರುಚಿ ನೋಡದಿರಲಿ, ಮೇಯದಿರಲಿ, ನೀರನ್ನು ಕುಡಿಯದಿರಲಿ.
8 ಜನರಿಗೂ ಪಶುಗಳಿಗೂ ಗೋಣಿತಟ್ಟು ಹೊದಿಕೆಯಾಗಲಿ; ಎಲ್ಲರೂ ದೇವರಿಗೆ ಬಲವಾಗಿ ಮೊರೆಯಿಡಲಿ; ಒಬ್ಬೊಬ್ಬನು ತನ್ನ ತನ್ನ ದುರ್ಮಾರ್ಗಗಳನ್ನೂ, ತಾನು ನಡಿಸುತ್ತಿದ್ದ ಹಿಂಸೆಯನ್ನೂ ತೊರೆದು ಬಿಡಲಿ.
ಆದರೆ ಮನುಷ್ಯರೂ ಮೃಗಗಳೂ ಗೋಣಿತಟ್ಟು ಹಾಕಿಕೊಂಡು, ಜೋರಾದ ಧ್ವನಿಯಿಂದ ದೇವರಿಗೆ ಮೊರೆಯಿಡಲಿ. ಎಲ್ಲರೂ ತಮ್ಮ ತಮ್ಮ ದುರ್ಮಾರ್ಗಗಳನ್ನೂ, ತಮ್ಮ ತಮ್ಮ ಕೈಗಳಲ್ಲಿರುವ ಹಿಂಸಾಚಾರವನ್ನೂ ಬಿಟ್ಟು ತಿರುಗಲಿ.
9 ದೇವರು ಒಂದು ವೇಳೆ ಮನಮರುಗಿ, ಮನಸ್ಸನ್ನು ಬದಲಾಯಿಸಿಕೊಂಡು ತನ್ನ ಉಗ್ರಕೋಪವನ್ನು ತೊರೆದರೆ, ನಾವು ನಾಶವಾಗದೆ ಉಳಿದೇವು” ಎಂಬುದನ್ನು ನಿನೆವೆಯಲ್ಲೆಲ್ಲಾ ಸಾರಿಸಿದನು.
ಹೀಗೆ ಮಾಡಿದರೆ, ದೇವರು ಒಂದು ವೇಳೆ ತಮ್ಮ ಮನಸ್ಸನ್ನು ಬದಲಾಯಿಸಿ, ಅನುಕಂಪದಿಂದ ತಮ್ಮ ಉಗ್ರಕೋಪವನ್ನು ತಡೆದು, ನಾವು ನಾಶವಾಗದೆ ಉಳಿಸುವರೇನೋ, ಯಾರು ಬಲ್ಲರು?”
10 ೧೦ ದೇವರು ನಿನೆವೆಯವರ ಕೃತ್ಯಗಳನ್ನು ನೋಡಿ, ಅವರು ತಮ್ಮ ದುರ್ಮಾರ್ಗತನದಿಂದ ತಿರುಗಿಕೊಂಡರೆಂದು ತಿಳಿದು ತನ್ನ ಮನಸ್ಸನ್ನು ಬದಲಾಯಿಸಿ, ತಾನು ಅವರಿಗೆ ಮಾಡುವೆನೆಂದು ಪ್ರಕಟಿಸಿದ್ದ ಕೇಡನ್ನು ಮಾಡದೆ ಬಿಟ್ಟನು.
ಆಗ ದೇವರು, ನಿನೆವೆಯವರು ತಮ್ಮ ದುರ್ಮಾರ್ಗವನ್ನು ಬಿಟ್ಟು ತಿರುಗಿಕೊಂಡರೆಂದು ಕಂಡು, ತಾವು ವಿಧಿಸುವುದಾಗಿ ನುಡಿದ ವಿನಾಶವನ್ನು ಅವರ ಮೇಲೆ ಬರಮಾಡದೆ, ಅವರನ್ನು ಕನಿಕರಿಸಿದರು.

< ಯೋನನು 3 >