< ಯೆಹೋಶುವನು 9 >

1 ಯೊರ್ದನ್ ನದಿಯ ಆಚೆಗಿರುವ ಬೆಟ್ಟದ ಮೇಲಿನ ಪ್ರದೇಶ, ಕಣಿವೆ ಪ್ರದೇಶ, ಲೆಬನೋನಿನ ಎದುರಿಗಿರುವ ಮಹಾಸಾಗರದ ತೀರಪ್ರದೇಶ ಇವುಗಳಲ್ಲಿ ವಾಸವಾಗಿದ್ದ ಅಮೋರಿಯ, ಹಿತ್ತಿಯ, ಕಾನಾನ್, ಪೆರಿಜ್ಜೀಯ, ಹಿವ್ವಿಯ, ಯೆಬೂಸಿಯ ರಾಜರು ನಡೆದ ಸಂಗತಿಯನ್ನು ಕೇಳಿದರು ಹಾಗೂ
ಯೊರ್ದನ್ ನದಿಯ ಈಚೆಯಲ್ಲಿ ಬೆಟ್ಟಗಳಲ್ಲಿಯೂ ತಗ್ಗುಗಳಲ್ಲಿಯೂ ಲೆಬನೋನಿಗೆ ಎದುರಾದ ಮೆಡಿಟೆರಿಯನ್ ಸಮುದ್ರದ ಸಮಸ್ತ ಪ್ರಾಂತಗಳಲ್ಲಿಯೂ ಇರುವ ಹಿತ್ತಿಯರ, ಅಮೋರಿಯರ, ಕಾನಾನ್ಯರ, ಪೆರಿಜೀಯರ, ಹಿವ್ವಿಯರ, ಯೆಬೂಸಿಯರ ಅರಸರು ಇದನ್ನು ಕೇಳಿದರು.
2 ಒಂದೇ ಮನಸ್ಸಿನಿಂದ ಯೆಹೋಶುವನಿಗೂ ಇಸ್ರಾಯೇಲ್ಯರಿಗೂ ವಿರೋಧವಾಗಿ ಯುದ್ಧಮಾಡುವುದಕ್ಕೆ ಕೂಡಿಕೊಂಡರು.
ಆಗ ಅವರು ಯೆಹೋಶುವನಿಗೂ ಇಸ್ರಾಯೇಲರಿಗೂ ವಿರುದ್ಧ ಯುದ್ಧಮಾಡುವುದಕ್ಕೆ ಒಟ್ಟಾಗಿ ಕೂಡಿಕೊಂಡರು.
3 ಯೆರಿಕೋವಿನವರನ್ನೂ ಮತ್ತು ಆಯಿ ಎಂಬ ಊರಿನವರನ್ನೂ ಯೆಹೋಶುವನು ಸಂಹರಿಸಿದ ಸುದ್ದಿಯು ಗಿಬ್ಯೋನಿನ ನಿವಾಸಿಗಳಿಗೆ ಮುಟ್ಟಿತು
ಆದರೆ ಗಿಬ್ಯೋನಿನ ನಿವಾಸಿಗಳು ಯೆಹೋಶುವನು ಯೆರಿಕೋವಿಗೂ ಆಯಿಗೂ ಮಾಡಿದ್ದನ್ನು ಕೇಳಿದಾಗ,
4 ಅವರು ಒಂದು ಉಪಾಯವನ್ನು ಮಾಡಿದರು. ಅದೇನೆಂದರೆ ಅವರು ತಮ್ಮ ಕತ್ತೆಗಳ ಮೇಲೆ ಹಳೆಯ ಗೋಣಿ ತಟ್ಟುಗಳನ್ನು ಹಾಕಿ, ಅವುಗಳ ಮೇಲೆ ತೇಪೆ ಹಾಕಿದ ದ್ರಾಕ್ಷಾರಸದ ಹಳೆಯ ಬುದ್ದಲಿಗಳನ್ನು ಹೇರಿದರು,
ಒಂದು ಉಪಾಯವನ್ನು ಮಾಡಿದರು. ಅದೇನೆಂದರೆ, ಅವರು ರಾಯಭಾರಿಗಳ ಹಾಗೆ ತೋರಿಸುವಂತೆ ಹಳೆಯ ಗೋಣಿ ಚೀಲಗಳನ್ನೂ ತೇಪೆ ಹಾಕಿದ ಹಳೆಯದಾದ ದ್ರಾಕ್ಷಾರಸದ ಬುದ್ದಲಿಗಳನ್ನೂ ಕಟ್ಟಿಕೊಂಡು, ತಮ್ಮ ಕತ್ತೆಗಳ ಮೇಲೆ ಹಾಕಿಕೊಂಡು ಹೋದರು.
5 ಹರಿದುಹೋಗಿದ್ದ ಹಳೆಯ ಕೆರಗಳನ್ನು ಮೆಟ್ಟಿಕೊಂಡರು. ಹಳೆಯ ಬಟ್ಟೆಗಳನ್ನು ಹಾಕಿಕೊಂಡರು. ಒಣರೊಟ್ಟಿ ಚೂರುಗಳನ್ನು ಬುತ್ತಿಯಾಗಿ ಕಟ್ಟಿಕೊಂಡರು.
ತೇಪೆ ಹಾಕಿದ ಹಳೆಯದಾದ ಕೆರಗಳನ್ನು ತಮ್ಮ ಕಾಲುಗಳಲ್ಲಿ ಮೆಟ್ಟಿಕೊಂಡು ಹಳೆಯ ಬಟ್ಟೆಗಳನ್ನು ತೊಟ್ಟುಕೊಂಡು, ಒಣಗಿ ಬೂಷ್ಟು ಹಿಡಿದ ರೊಟ್ಟಿಯನ್ನೂ ತೆಗೆದುಕೊಂಡರು.
6 ತಾವು ರಾಯಭಾರಿಗಳೆಂದು ಗಿಲ್ಗಾಲಿನಲ್ಲಿದ್ದ ಯೆಹೋಶುವನ ಪಾಳೆಯಕ್ಕೆ ಬಂದರು. ಅವನಿಗೂ ಇಸ್ರಾಯೇಲ್ಯರಿಗೂ “ನಾವು ದೂರದೇಶದಿಂದ ಬಂದವರು. ನೀವು ನಮ್ಮ ಸಂಗಡ ಒಂದು ಒಪ್ಪಂದ ಮಾಡಿಕೊಳ್ಳಬೇಕು” ಎಂದು ಕೇಳಿ ಕೊಂಡರು.
ಅನಂತರ ಅವರು ಗಿಲ್ಗಾಲಿನಲ್ಲಿ ಇರುವ ಪಾಳೆಯಕ್ಕೆ ಸೇರಿ ಯೆಹೋಶುವನ ಬಳಿಗೆ ಬಂದರು. ಅವರು ಅವನಿಗೂ ಇಸ್ರಾಯೇಲರಿಗೂ, “ನಾವು ದೂರದೇಶದಿಂದ ಬಂದೆವು. ಈಗ ನಮ್ಮ ಸಂಗಡ ಒಡಂಬಡಿಕೆ ಮಾಡಿಕೊಳ್ಳಿರಿ,” ಎಂದರು.
7 ಆಗ ಇಸ್ರಾಯೇಲ್ಯರು ಹಿವ್ವಿಯರಾದ ಅವರಿಗೆ “ಬಹುಶಃ ನೀವು ನಮ್ಮ ದೇಶದ ನಿವಾಸಿಗಳೇ ಆಗಿರಬಹುದು. ಹೀಗಿರುವುದರಿಂದ ನಾವು ನಿಮ್ಮ ಸಂಗಡ ಒಪ್ಪಂದ ಮಾಡಿಕೊಳ್ಳುವುದು ಹೇಗೆ?” ಎಂದು ಉತ್ತರಕೊಟ್ಟರು.
ಆಗ ಇಸ್ರಾಯೇಲರು ಹಿವ್ವಿಯರಾದ ಅವರಿಗೆ, “ನೀವು ಒಂದು ವೇಳೆ ನಮ್ಮ ಹತ್ತಿರದಲ್ಲಿ ವಾಸಿಸುವವರು ಆಗಿರಬಹುದು. ನಾವು ನಿಮ್ಮ ಸಂಗಡ ಒಡಂಬಡಿಕೆಯನ್ನು ಮಾಡುವುದು ಹೇಗೆ?” ಎಂದರು.
8 ಅವರು ಯೆಹೋಶುವನಿಗೆ “ನಾವು ನಿಮ್ಮ ದಾಸರು” ಎಂದರು. ಯೆಹೋಶುವನು ಅವರನ್ನು “ನೀವು ಯಾರು? ಎಲ್ಲಿಯವರು?” ಎಂದು ವಿಚಾರಿಸಿದನು.
ಅದಕ್ಕವರು ಯೆಹೋಶುವನಿಗೆ, “ನಾವು ನಿನ್ನ ಸೇವಕರು,” ಎಂದರು. ಆಗ ಯೆಹೋಶುವನು ಅವರಿಗೆ, “ನೀವು ಯಾರು? ಎಲ್ಲಿಂದ ಬಂದಿರಿ?” ಎಂದನು.
9 ಅವರು “ನಿನ್ನ ಸೇವಕರಾದ ನಾವು ನಿಮ್ಮ ದೇವರಾದ ಯೆಹೋವನ ನಾಮ ಮಹತ್ತನ್ನು ಕೇಳಿ ಬಹುದೂರ ದೇಶದಿಂದ ಬಂದಿದ್ದೇವೆ. ನಮ್ಮ ಹಿರಿಯರೂ ದೇಶನಿವಾಸಿಗಳೂ ಯೆಹೋವನು ಐಗುಪ್ತದಲ್ಲಿ ನಡಿಸಿದ ಮಹತ್ಕಾರ್ಯಗಳ ಸುದ್ದಿಯನ್ನು ಕೇಳಿದ್ದಾರೆ.
ಅವರು ಅವನಿಗೆ, “ನಿಮ್ಮ ದೇವರಾದ ಯೆಹೋವ ದೇವರ ಹೆಸರಿನ ಮಹತ್ವ ಕೇಳಿ ನಿನ್ನ ಸೇವಕರಾದ ನಾವು ದೂರದೇಶದಿಂದ ಬಂದಿದ್ದೇವೆ. ಏಕೆಂದರೆ ದೇವರ ಕೀರ್ತಿಯನ್ನೂ, ಅವರು ಈಜಿಪ್ಟಿನಲ್ಲಿ ಮಾಡಿದ ಎಲ್ಲವನ್ನೂ ಕೇಳಿದ್ದೇವೆ.
10 ೧೦ ಹೆಷ್ಬೋನಿನ ಅರಸನಾದ ಸೀಹೋನ್, ಅಷ್ಟರೋತಿನಲ್ಲಿ ವಾಸವಾಗಿದ್ದ ಬಾಷಾನಿನ ಅರಸನಾದ ಓಗ್ ಎಂಬ ಈ ಇಬ್ಬರು ಅಮೋರಿಯರ ಅರಸರಿಗೆ ಯೆಹೋವನು ಮಾಡಿದ್ದೆಲ್ಲವನ್ನೂ ಕೇಳಿದ್ದಾರೆ.
ಯೊರ್ದನ್ ನದಿಗೆ ಆಚೆ ಇರುವ ಅಮೋರಿಯರ ಇಬ್ಬರು ಅರಸುಗಳಾದ ಹೆಷ್ಬೋನಿನ ಅರಸನಾದ ಸೀಹೋನನಿಗೂ, ಅಷ್ಟಾರೋತಿನಲ್ಲಿದ್ದ ಬಾಷಾನಿನ ಅರಸನಾದ ಓಗನಿಗೂ ಮಾಡಿದ್ದೆಲ್ಲವನ್ನೂ ನಾವು ಕೇಳಿದ್ದೇವೆ.
11 ೧೧ ‘ನೀವು ಪ್ರಯಾಣಕ್ಕೋಸ್ಕರ ಬುತ್ತೀ ಕಟ್ಟಿಕೊಂಡು ಹೋಗಿ ಇಸ್ರಾಯೇಲ್ಯರನ್ನು ಎದುರುಗೊಂಡು “ನಾವು ನಿಮ್ಮ ಸೇವಕರು”, ನೀವು ನಮ್ಮ ಸಂಗಡ ಒಪ್ಪಂದ ಮಾಡಿಕೊಳ್ಳಬೇಕು ಎಂಬುದಾಗಿ ಅವರನ್ನು ಬೇಡಿಕೊಳ್ಳಿರಿ ಎಂದು ಹೇಳಿ ನಮ್ಮನ್ನು ಕಳುಹಿಸಿದರು.
ನಮ್ಮ ಹಿರಿಯರೂ, ನಮ್ಮ ದೇಶವಾಸಿಗಳಾದ ಜನರೆಲ್ಲರೂ ನಮಗೆ ಹೇಳಿದ್ದೇನೆಂದರೆ, ‘ನೀವು ಪ್ರಯಾಣಕ್ಕಾಗಿ ರೊಟ್ಟಿಯನ್ನು ತೆಗೆದುಕೊಂಡು ಅವರೆದುರಿಗೆ ಹೋಗಿ, ಅವರಿಗೆ ನಾವು ನಿಮ್ಮ ಸೇವಕರು ಆದಕಾರಣ ಈಗ ನಮ್ಮ ಸಂಗಡ ಒಡಂಬಡಿಕೆ ಮಾಡಿಕೊಳ್ಳಿರಿ ಎಂದು ಹೇಳಿರಿ,’ ಎಂದರು.
12 ೧೨ ನಾವು ನಿಮ್ಮನ್ನು ಎದುರುಗೊಳ್ಳುವುದಕ್ಕಾಗಿ ಮನೆಬಿಟ್ಟು ಹೊರಟಾಗ ಪ್ರಯಾಣಕ್ಕೋಸ್ಕರ ತೆಗೆದುಕೊಂಡ ಈ ರೊಟ್ಟಿ ಬಿಸಿಯಾಗಿತ್ತು. ಈಗ ಒಣಗಿ ಚೂರುಚೂರಾಗಿದೆ ನೋಡಿರಿ.
ಆದರೆ ನಿಮ್ಮ ಬಳಿಗೆ ಬರುವುದಕ್ಕೆ ನಾವು ಹೊರಟ ದಿನದಲ್ಲಿ ನಮ್ಮ ಮಾರ್ಗ ಪ್ರಯಾಣಕ್ಕೆ ನಮ್ಮ ಮನೆಯೊಳಗೆ ನಮ್ಮ ಒಲೆಯ ಮೇಲೆ ಬಿಸಿ ರೊಟ್ಟಿಗಳನ್ನು ತೆಗೆದುಕೊಂಡೆವು.
13 ೧೩ ನಾವು ದ್ರಾಕ್ಷಾರಸ ತುಂಬಿಸಿಕೊಂಡಿದ್ದ ಈ ಬುದ್ದಲಿಗಳು ಹೊಸದಾಗಿದ್ದವು; ಈಗ ಹರಿದುಹೋಗಿವೆ. ನಮ್ಮ ಬಟ್ಟೆಬರೆಗಳು ಹಾಗೂ ಕೆರಗಳು ದೀರ್ಘಪ್ರಯಾಣದಿಂದ ಸವೆದುಹೋಗಿವೆ’” ಎಂದು ವಿವರಿಸಿದರು.
ಈಗ ಅವು ಒಣಗಿ ಬೂಷ್ಟು ಹಿಡಿದವುಗಳಗಿವೆ. ನಾವು ದ್ರಾಕ್ಷಾರಸ ತುಂಬುವಾಗ ಈ ಬುದ್ದಲಿಗಳು ಹೊಸದಾಗಿದ್ದವು. ಇಗೋ, ಈಗ ಅವು ಹರಿದು ಹೋಗಿವೆ. ಇದಲ್ಲದೆ ಈ ನಮ್ಮ ವಸ್ತ್ರಗಳೂ ನಮ್ಮ ಕೆರಗಳೂ ಪ್ರಯಾಣ ಬಹಳ ದೂರವಾದ್ದರಿಂದ ಹಳೆಯದಾಗಿವೆ,” ಎಂದರು.
14 ೧೪ ಆಗ ಇಸ್ರಾಯೇಲ್ಯರು ಅವರ ಬುತ್ತಿಯಲ್ಲಿ ಸ್ವಲ್ಪ ತೆಗೆದುಕೊಂಡರು. ಆದರೆ ಯೆಹೋವನನ್ನು ವಿಚಾರಿಸಲಿಲ್ಲ.
ಆಗ ಇಸ್ರಾಯೇಲರು ಅವರ ಆಹಾರದಲ್ಲಿ ಸ್ವಲ್ಪ ತೆಗೆದುಕೊಂಡರು. ಆದರೆ ಅವರು ಯೆಹೋವ ದೇವರಿಂದ ಆಲೋಚನೆಯನ್ನು ಕೇಳಲಿಲ್ಲ.
15 ೧೫ ಯೆಹೋಶುವನು ಅವರೊಡನೆ “ನಿಮ್ಮ ಜೀವವನ್ನು ಕಾಪಾಡುತ್ತೇವೆ” ಎಂದು ಶಾಂತಿ ಸಂಧಾನ ಮಾಡಿಕೊಂಡನು. ಸಭೆಯ ನಾಯಕರೂ ಹಾಗೆಯೇ ಪ್ರಮಾಣ ಮಾಡಿದರು. ಜನರ ಪ್ರಧಾನರೂ ಪ್ರಮಾಣಮಾಡಿದರು.
ಯೆಹೋಶುವನು ಅವರ ಸಂಗಡ ಸಮಾಧಾನದ ಒಡಂಬಡಿಕೆ ಮಾಡಿಕೊಂಡನು. ಅವರನ್ನು ಜೀವದಿಂದ ಉಳಿಸುವುದಕ್ಕೆ ಅವರ ಸಂಗಡ ಒಡಂಬಡಿಕೆ ಮಾಡಿದನು. ಇದಲ್ಲದೆ ಸಭೆಯ ಪ್ರಧಾನರು ಅವರಿಗೆ ಪ್ರಮಾಣ ಮಾಡಿದರು.
16 ೧೬ ಈ ಒಪ್ಪಂದವಾದ ಮೂರು ದಿನಗಳ ಮೇಲೆ ಅವರು ತಮ್ಮ ನೆರೆಯವರೆಂದು ತಮ್ಮ ಮಧ್ಯದಲ್ಲಿಯೇ ವಾಸಿಸುವವರೆಂದು ಇಸ್ರಾಯೇಲ್ಯರಿಗೆ ಗೊತ್ತಾಯಿತು.
ಆದರೆ ಅವರ ಸಂಗಡ ಒಡಂಬಡಿಕೆ ಮಾಡಿ, ಮೂರು ದಿವಸಗಳಾದ ತರುವಾಯ ಅವರು ತಮ್ಮ ನೆರೆಯವರೆಂದೂ, ತಮ್ಮಲ್ಲಿ ಇರುವವರೆಂದೂ ತಿಳಿದುಬಂತು.
17 ೧೭ ಹೇಗೆಂದರೆ ಇಸ್ರಾಯೇಲ್ಯರು ಮೂರನೆಯ ದಿನದಲ್ಲಿ ಹೊರಟು ಗಿಬ್ಯೋನ್, ಕೆಫೀರಾ, ಬೇರೋತ್, ಕಿರ್ಯತ್ಯಾರೀಮ್ ಎಂಬ ಊರುಗಳನ್ನು ಸೇರಿದರು. ಆಗ ಆ ಊರುಗಳು ಆ ಜನರದ್ದೇ ಎಂದು ಗೊತ್ತಾಯಿತು.
ಆಗ ಇಸ್ರಾಯೇಲರು ಪ್ರಯಾಣ ಮಾಡುವಾಗ ಮೂರನೆಯ ದಿವಸದಲ್ಲಿ ಗಿಬ್ಯೋನ್, ಕೆಫೀರಾ, ಬೇರೋತ್, ಕಿರ್ಯತ್ ಯಾರೀಮ್ ಎಂಬ ಅವರ ಪಟ್ಟಣಗಳಿಗೆ ಬಂದರು.
18 ೧೮ ಸಭೆಯ ನಾಯಕರು ಇಸ್ರಾಯೇಲಿನ ದೇವರಾದ ಯೆಹೋವನ ಹೆಸರಿನಲ್ಲಿ ಆ ಜನರಿಗೆ ಪ್ರಮಾಣಮಾಡಿದ್ದರಿಂದ ಇಸ್ರಾಯೇಲ್ಯರು ಅವರನ್ನು ಕೊಲ್ಲಲಿಲ್ಲ. ಆದರೆ ಸಭಿಕರೆಲ್ಲರು ತಮ್ಮ ನಾಯಕರಿಗೆ ವಿರೋಧವಾಗಿ ಗೊಣಗಾಡಿದರು.
ಆದರೆ ಪ್ರಧಾನರು ಅವರಿಗೆ ಇಸ್ರಾಯೇಲಿನ ದೇವರಾದ ಯೆಹೋವ ದೇವರ ಮೇಲೆ ಪ್ರಮಾಣ ಮಾಡಿದ್ದರಿಂದ ಇಸ್ರಾಯೇಲರು ಅವರ ಮೇಲೆ ದಾಳಿಮಾಡಲಿಲ್ಲ. ಆದರೆ ಇಸ್ರಾಯೇಲರೆಲ್ಲರೂ ಪ್ರಧಾನರಿಗೆ ವಿರೋಧವಾಗಿ ಗೊಣಗುಟ್ಟಿದರು.
19 ೧೯ ಆಗ ನಾಯಕರೆಲ್ಲರು ಸಭೆಯ ಎಲ್ಲಾ ಸದಸ್ಯರಿಗೆ “ನಾವು ಇಸ್ರಾಯೇಲರ ದೇವರಾದ ಯೆಹೋವನ ಹೆಸರಿನಲ್ಲಿ ಅವರಿಗೆ ಪ್ರಮಾಣ ಮಾಡಿದ್ದರಿಂದ ಅವರನ್ನು ಮುಟ್ಟಲಾಗದು.
ಆಗ ಸಕಲ ಪ್ರಧಾನರು ಎಲ್ಲಾ ಜನರಿಗೆ, “ನಾವು ಇಸ್ರಾಯೇಲಿನ ದೇವರಾದ ಯೆಹೋವ ದೇವರ ಮೇಲೆ ಅವರಿಗೆ ಪ್ರಮಾಣ ಮಾಡಿದ್ದೇವು. ಆದ್ದರಿಂದ ಅವರನ್ನು ನಾವು ಮುಟ್ಟಕೂಡದು.
20 ೨೦ ನಾವು ಇಟ್ಟ ಆಣೆಯ ನಿಮಿತ್ತ ದೇವರ ಕೋಪವು ನಮ್ಮ ಮೇಲೆ ಬಾರದಂತೆ ಅವರನ್ನು ಜೀವದಿಂದುಳಿಸಬೇಕು. ನಾವು ಹೀಗೆ ಮಾಡೋಣ, ಅವರನ್ನು ಜೀವದಿಂದ ಉಳಿಸಿ ಬಿಟ್ಟುಬಿಡೋಣ
ನಾವು ಅವರಿಗೆ ಇಟ್ಟ ಆಣೆಯ ನಿಮಿತ್ತ ಕೋಪವು ನಮ್ಮ ಮೇಲೆ ಬಾರದ ಹಾಗೆ ನಾವು ಅವರನ್ನು ಜೀವದಿಂದ ಉಳಿಸಬೇಕು. ಆದರೆ ನಾವು ಅವರಿಗೆ ಹೀಗೆ ಮಾಡೋಣ.
21 ೨೧ ಅವರು ಸಮೂಹಕ್ಕೆಲ್ಲಾ ಕಟ್ಟಿಗೆ ಸೀಳುವವರೂ ನೀರು ಹೊರುವವರೂ ಆಗಿರಲಿ” ಎಂದು ಹೇಳಿದರು. ನಾಯಕರ ಮಾತಿನಂತೆಯೇ ಆಯಿತು.
ಅದು ಏನೆಂದರೆ, ಪ್ರಧಾನರಾದ ನಾವು ಅವರಿಗೆ ಹೇಳಿದ ಹಾಗೆಯೇ ಅವರು ಜೀವದಿಂದ ಇರಲಿ. ಆದರೆ ಅವರು ಇಸ್ರಾಯೇಲಿನ ಎಲ್ಲಾ ಸಮೂಹಕ್ಕೆ ಕಟ್ಟಿಗೆ ಕಡಿಯುವವರೂ ನೀರು ತರುವವರೂ ಆಗಿರಲಿ,” ಪ್ರಧಾನರ ಮಾತಿನಂತೆಯೇ ಆಯಿತು.
22 ೨೨ ಯೆಹೋಶುವನು ಗಿಬ್ಯೋನ್ಯರನ್ನು ಕರೆಸಿ ಅವರಿಗೆ “ನೀವು ನಮ್ಮ ಮಧ್ಯದಲ್ಲಿ ವಾಸಿಸುವವರಾಗಿದ್ದರೂ ಬಹು ದೂರದವರೆಂದು ಹೇಳಿ ನಮ್ಮನ್ನು ವಂಚಿಸಿದ್ದೇಕೆ?
ತರುವಾಯ ಯೆಹೋಶುವನು ಗಿಬ್ಯೋನ್ಯರನ್ನು ಕರೆಯಿಸಿ ಅವರಿಗೆ, “ನೀವು ನಮ್ಮ ಮಧ್ಯದಲ್ಲಿ ವಾಸಿಸುವವರಾಗಿದ್ದರೂ, ‘ನಾವು ನಿಮಗೆ ಬಹಳ ದೂರವಾಗಿರುವವರು,’ ಎಂದು ಹೇಳಿ ನಮ್ಮನ್ನು ಮೋಸಗೊಳಿಸಿದ್ದೇಕೆ?
23 ೨೩ ಇದರಿಂದ ನೀವು ಶಾಪಗ್ರಸ್ತರು! ನೀವು ಯಾವಾಗಲೂ ದಾಸರಾಗಿದ್ದು ನನ್ನ ದೇವರ ಮಂದಿರಕ್ಕೆ ಕಟ್ಟಿಗೆ ಹೊಡೆಯುವವರೂ ನೀರುತರುವವರೂ ಆಗಿರಬೇಕು” ಎಂದನು.
ಈಗ ನೀವು ಶಾಪಗ್ರಸ್ತರು, ನೀವು ಯಾವಾಗಲೂ ದಾಸತ್ವದಿಂದ ಬಿಡುಗಡೆಯಾಗುವುದಿಲ್ಲ. ನೀವು ನನ್ನ ದೇವರ ಮನೆಗೆ ಕಟ್ಟಿಗೆ ಕಡಿಯುವವರೂ ನೀರು ತರುವವರೂ ಆಗಿರುವಿರಿ,” ಎಂದು ಹೇಳಿದನು.
24 ೨೪ ಅವರು ಯೆಹೋಶುವನಿಗೆ “ನಿನ್ನ ದೇವರಾದ ಯೆಹೋವನು ತನ್ನ ಸೇವಕನಾದ ಮೋಶೆಗೆ ‘ನಾನು ನಿಮಗೆ ಈ ದೇಶವನ್ನೆಲ್ಲಾ ಕೊಡುವಾಗ ನೀವು ಇದರ ಎಲ್ಲಾ ನಿವಾಸಿಗಳನ್ನು ಸಂಹರಿಸಿ ಬಿಡಬೇಕೆಂದು’ ಆಜ್ಞಾಪಿಸಿದ್ದನ್ನು ಕೇಳಿ ನಮ್ಮ ಪ್ರಾಣ ತೆಗೆಯುವಿರೆಂದು ಹೆದರಿ ಹೀಗೆ ಮಾಡಿದೆವು.
ಅದಕ್ಕವರು ಯೆಹೋಶುವನಿಗೆ, “ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ದೇಶವನ್ನೆಲ್ಲಾ ಒಪ್ಪಿಸಿಕೊಡುವುದಕ್ಕೂ, ದೇಶದ ನಿವಾಸಿಗಳನ್ನೆಲ್ಲಾ ನಿಮ್ಮ ಮುಂದೆ ನಾಶಮಾಡುವುದಕ್ಕೂ ತಮ್ಮ ಸೇವಕ ಮೋಶೆಗೆ ಆಜ್ಞಾಪಿಸಿದ್ದಾರೆಂದು, ನಿಮ್ಮ ಸೇವಕರಾದ ನಾವು ಕೇಳಿದೆವು. ಆದ್ದರಿಂದ ನಾವು ನಮ್ಮ ಪ್ರಾಣಕ್ಕಾಗಿ ಬಹಳ ಭಯಪಟ್ಟು ಈ ಕಾರ್ಯವನ್ನು ಮಾಡಿದೆವು.
25 ೨೫ ಇಗೋ, ಈಗ ನಾವು ನಿನ್ನ ಕೈಯಲ್ಲಿದ್ದೇವೆ; ನಿನಗೆ ಯಾವುದು ಒಳ್ಳೆಯದು, ನ್ಯಾಯವಾದುದ್ದು ಎಂದು ತೋರುತ್ತದೋ ಅದರಂತೆ ನಮಗೆ ಮಾಡು” ಎಂದು ಉತ್ತರಕೊಟ್ಟರು.
ಇಗೋ, ಈಗಲೂ ನಾವು ನಿನ್ನ ಕೈಯಲ್ಲಿಯೇ ಇದ್ದೇವೆ. ನಿನ್ನ ದೃಷ್ಟಿಗೆ ಒಳ್ಳೆಯದಾಗಿಯೂ, ಸರಿಯಾಗಿಯೂ ತೋಚುವ ಹಾಗೆ ನಮಗೆ ಮಾಡು,” ಎಂದು ಉತ್ತರಕೊಟ್ಟರು.
26 ೨೬ ಯೆಹೋಶುವನು ತಾನು ಮೊದಲು ಹೇಳಿದಂತೆಯೇ ಮಾಡಿದನು. ಅವನು ಅವರನ್ನು ಇಸ್ರಾಯೇಲ್ಯರ ಕೈಯಿಂದ ಹತರಾಗದಂತೆ ತಪ್ಪಿಸಿದನು.
ಆ ಪ್ರಕಾರವೇ ಯೆಹೋಶುವನು ಅವರಿಗೆ ಹೇಳಿದಂತೆ ಮಾಡಿದನು. ಅವರನ್ನು ಕೊಂದು ಹಾಕದ ಹಾಗೆ ಇಸ್ರಾಯೇಲರ ಕೈಯಿಂದ ತಪ್ಪಿಸಿದನು.
27 ೨೭ ಇಸ್ರಾಯೇಲ್ಯರಿಗಾಗಿ ಯೆಹೋವನು ಆರಿಸಿಕೊಂಡ ಸ್ಥಳದಲ್ಲಿ ಕಟ್ಟಲಾಗುವ ಆತನ ಯಜ್ಞವೇದಿಗೂ ಕಟ್ಟಿಗೆ ಕಡಿಯುವವರನ್ನಾಗಿ ಹಾಗೂ ನೀರು ಹೊರುವವರನ್ನಾಗಿ ಅವರನ್ನು ನೇಮಿಸಿದನು. ಅವರು ಇಂದಿನವರೆಗೂ ಅದೇ ಕೆಲಸವನ್ನು ಮಾಡಿಕೊಂಡು ಇಸ್ರಾಯೇಲ್ಯರೊಂದಿಗಿದ್ದಾರೆ.
ಯೆಹೋಶುವನು ಆ ದಿನ ಇರುವ ಹಾಗೆ ಗಿಬ್ಯೋನಿನವರ ಸಮೂಹಕ್ಕೂ ಯೆಹೋವ ದೇವರು ಆಯ್ದುಕೊಳ್ಳುವ ಸ್ಥಳದಲ್ಲಿರುವ ಅವರ ಬಲಿಪೀಠಕ್ಕೂ ಕಟ್ಟಿಗೆ ಕಡಿಯುವವರಾಗಿಯೂ ನೀರು ತರುವವರಾಗಿಯೂ ನೇಮಿಸಿದನು. ಅವರು ಇಂದಿನವರೆಗೂ ಅದೇ ಕೆಲಸ ಮಾಡುತ್ತಾರೆ.

< ಯೆಹೋಶುವನು 9 >