< ಧರ್ಮೋಪದೇಶಕಾಂಡ 1 >

1 ಯೊರ್ದನ್ ನದಿಯ ಆಚೆ, ಪಾರಾನ್, ತೋಫೆಲ್, ಲಾಬಾನ್, ಹಚೇರೋತ್ ಮತ್ತು ದೀಜಾಹಾಬ್ ಎಂಬ ಸ್ಥಳಗಳ ನಡುವೆ, ಅರಣ್ಯದಲ್ಲಿ ಆರಾಬಾ ಎಂಬ ತಗ್ಗಾದ ಪ್ರದೇಶದಲ್ಲಿ ಸೂಫಿಗೆ ಎದುರಾಗಿ ಮೋಶೆಯು ಇಸ್ರಾಯೇಲರೆಲ್ಲರಿಗೆ ಮಾಡಿದ ಉಪದೇಶ ಮತ್ತು ಉಪನ್ಯಾಸಗಳು.
ಯೊರ್ದನ್ ನದಿಯ ಆಚೆ ಪಾರಾನ್, ತೋಫೆಲ್, ಲಾಬಾನ್, ಹಚೇರೋತ್, ದೀಜಾಹಾಬ್ ಎಂಬ ಊರುಗಳ ನಡುವೆ, ಮರುಭೂಮಿಯಲ್ಲಿ ಅರಾಬಾ ಎಂಬ ತಗ್ಗಾದ ಪ್ರದೇಶದಲ್ಲಿ ಸೂಫಿಗೆ ಎದುರಾಗಿ, ಮೋಶೆ ಇಸ್ರಾಯೇಲರಿಗೆ ಹೇಳಿದ ಮಾತುಗಳು ಇವು.
2 ಹೋರೇಬಿನಿಂದ ಸೇಯೀರ್ ಬೆಟ್ಟಗಳ ಮಾರ್ಗವಾಗಿ ಕಾದೇಶ್‌ಬರ್ನೇಯದ ತನಕ ಹನ್ನೊಂದು ದಿನದ ಪ್ರಯಾಣ.
ಹೋರೇಬಿನಿಂದ ಕಾದೇಶ್ ಬರ್ನೇಯಕ್ಕೆ ಸೇಯೀರ್ ಬೆಟ್ಟದ ಮಾರ್ಗವಾಗಿ ಹನ್ನೊಂದು ದಿವಸ ಪ್ರಯಾಣ.
3 ಇಸ್ರಾಯೇಲರು ಐಗುಪ್ತದೇಶವನ್ನು ಬಿಟ್ಟ ನಲ್ವತ್ತನೆಯ ವರ್ಷದ, ಹನ್ನೊಂದನೆಯ ತಿಂಗಳಿನ ಮೊದಲನೆಯ ದಿನದಲ್ಲಿ ಯೆಹೋವನು ತನಗೆ ಆಜ್ಞಾಪಿಸಿದ್ದನ್ನೆಲ್ಲಾ ಮೋಶೆಯು ಇಸ್ರಾಯೇಲರಿಗೆ ತಿಳಿಸಿದನು.
ನಲ್ವತ್ತನೆಯ ವರ್ಷದಲ್ಲಿ ಹನ್ನೊಂದನೇ ತಿಂಗಳಿನ ಮೊದಲನೇ ದಿನದಲ್ಲಿ, ಮೋಶೆಯು ಇಸ್ರಾಯೇಲರಿಗೆ, ಯೆಹೋವ ದೇವರು ಅವನಿಗೆ ಅವರ ವಿಷಯವಾಗಿ ಆಜ್ಞಾಪಿಸಿದ್ದೆಲ್ಲದರ ಪ್ರಕಾರ ಮಾತನಾಡಿದನು.
4 ಯೆಹೋವನು ಹೆಷ್ಬೋನಿನಲ್ಲಿದ್ದ ಅಮೋರಿಯರ ಅರಸನಾದ ಸೀಹೋನನನ್ನೂ, ಅಷ್ಟಾರೋತ್, ಎದ್ರೈ ಎಂಬ ಪಟ್ಟಣಗಳಲ್ಲಿದ್ದ ಬಾಷಾನಿನ ಅರಸನಾದ ಓಗನನ್ನೂ ಜಯಿಸಿದ ತರುವಾಯವೇ ಮೋಶೆಯು ಇದನ್ನೆಲ್ಲಾ ತಿಳಿಸಿದನು.
ಅವನು ಹೆಷ್ಬೋನಿನಲ್ಲಿ ವಾಸಮಾಡಿದ ಅಮೋರಿಯರ ಅರಸನಾದ ಸೀಹೋನನನ್ನು ಸೋಲಿಸಿದ ಮೇಲೆಯೂ, ಅಷ್ಟಾರೋತ್‌ನಲ್ಲಿ, ವಾಸಮಾಡಿದ ಬಾಷಾನಿನ ಅರಸನಾದ ಓಗನನ್ನೂ ಎದ್ರೈಯಲ್ಲಿ ಸೋಲಿಸಿದ ಮೇಲೆಯೂ ಮೋಶೆ ಇಸ್ರಾಯೇಲರಿಗೆ ಈ ಮಾತುಗಳನ್ನು ತಿಳಿಸಿದನು.
5 ಯೊರ್ದನ್ ನದಿಯ ಆಚೆ ಮೋವಾಬ್ಯರ ದೇಶದಲ್ಲಿ ಮೋಶೆಯು ಈ ಮುಂದಣ ಧರ್ಮಶಾಸ್ತ್ರವನ್ನು ವಿವರಿಸುವುದಕ್ಕೆ ಪ್ರಾರಂಭಿಸಿ ಹೀಗೆ ಹೇಳಿದನು:
ಯೊರ್ದನ್ ನದಿಯ ಆಚೆ ಮೋವಾಬ್ಯರ ದೇಶದಲ್ಲಿ ಮೋಶೆ ಈ ನಿಯಮವನ್ನು ವಿವರಿಸುವುದಕ್ಕೆ ಪ್ರಾರಂಭಿಸಿದನು:
6 “ಹೋರೇಬಿನಲ್ಲಿ ನಮ್ಮ ದೇವರಾದ ಯೆಹೋವನು ನಮಗೆ, ‘ನೀವು ಈ ಬೆಟ್ಟದ ಬಳಿಯಲ್ಲಿ ವಾಸಿಸಿದ್ದು ಸಾಕು.
ನಮ್ಮ ದೇವರಾದ ಯೆಹೋವ ದೇವರು ಹೋರೇಬಿನಲ್ಲಿ ನಮಗೆ, “ನೀವು ಈ ಬೆಟ್ಟದಲ್ಲಿ ವಾಸಮಾಡಿದ್ದು ಸಾಕು,
7 ಈಗ ಹಿಂದಿರುಗಿ ಅಮೋರಿಯರು ಇರುವ ಬೆಟ್ಟದ ಸೀಮೆಗೂ ಮತ್ತು ಅದಕ್ಕೆ ಸೇರಿದ ಪ್ರದೇಶದ ಕಡೆಗೆ ಪ್ರಯಾಣಮಾಡಿರಿ. ಅವು ಯಾವುವೆಂದರೆ: ತಗ್ಗಾದ ಪ್ರದೇಶ, ಬೆಟ್ಟದ ಮೇಲಿನ ಪ್ರದೇಶ, ಇಳಕಲಿನ ಪ್ರದೇಶ, ದಕ್ಷಿಣಸೀಮೆ ಮತ್ತು ಸಮುದ್ರತೀರ ಎಂಬ ನಾಡುಗಳನ್ನು ಒಳಗೊಂಡಿರುವ ಕಾನಾನ್ಯರ ದೇಶ, ಲೆಬನೋನ್ ಪರ್ವತ ಮತ್ತು ಯೂಫ್ರೆಟಿಸ್ ಎಂಬ ಮಹಾನದಿಯ ವರೆಗೆ ವಿಸ್ತರಿಸಿಕೊಂಡಿರುವ ಪ್ರದೇಶಗಳಿಗೆ ಹೋಗಿರಿ.
ತಿರುಗಿಕೊಂಡು ಹೊರಟು ಅಮೋರಿಯರ ಬೆಟ್ಟಕ್ಕೂ, ಅದರ ಅರಾಬಾ ಸಮೀಪದ ಎಲ್ಲಾ ಪ್ರದೇಶದ ಗುಡ್ಡದಲ್ಲಿಯೂ ತಗ್ಗಿನಲ್ಲಿಯೂ ನೆಗೆವನಲ್ಲಿಯೂ ಸಮುದ್ರ ತೀರದಲ್ಲಿಯೂ ಇರುವ ಎಲ್ಲಾ ಸ್ಥಳಗಳಿಗೂ ಕಾನಾನ್ಯರ ದೇಶಕ್ಕೂ, ಲೆಬನೋನಿಗೂ ಯೂಫ್ರೇಟೀಸ್ ಎಂಬ ಮಹಾನದಿಯ ಬಳಿಗೂ ಹೋಗಿರಿ.
8 ಆ ದೇಶವನ್ನು ನಿಮಗೇ ಕೊಟ್ಟಿದ್ದೇನೆ. ಯೆಹೋವನೆಂಬ ನಾನು ನಿಮ್ಮ ಪೂರ್ವಿಕರಾದ ಅಬ್ರಹಾಮ್, ಇಸಾಕ್, ಯಾಕೋಬರಿಗೂ ಮತ್ತು ಅವರ ಸಂತತಿಯವರಿಗೂ ಆ ದೇಶವನ್ನು ಕೊಡುತ್ತೇನೆಂದು ಪ್ರಮಾಣಪೂರ್ವಕವಾಗಿ ವಾಗ್ದಾನ ಮಾಡಿದೆನಲ್ಲಾ. ಅದರಲ್ಲಿ ಪ್ರವೇಶಮಾಡಿ ಸ್ವಾಧೀನಮಾಡಿಕೊಳ್ಳಿರಿ’” ಎಂದು ಅಜ್ಞಾಪಿಸಿದನು.
ಆ ದೇಶವನ್ನು ನಿಮಗೆ ಕೊಟ್ಟಿದ್ದೇನೆ. ನೀವು ಹೋಗಿ ಯೆಹೋವ ದೇವರಾದ ನಾನು ನಿಮ್ಮ ಪಿತೃಗಳಾದ ಅಬ್ರಹಾಮನಿಗೂ ಇಸಾಕನಿಗೂ ಯಾಕೋಬನಿಗೂ ಅವರ ತರುವಾಯ ಹುಟ್ಟುವ ಅವರ ಸಂತತಿಗೂ ಕೊಡುತ್ತೇನೆಂದು ಪ್ರಮಾಣ ಮಾಡಿದ ದೇಶವನ್ನು ಸ್ವತಂತ್ರಿಸಿಕೊಳ್ಳಿರಿ,” ಎಂದು ಹೇಳಿದರು.
9 ಆ ಕಾಲದಲ್ಲಿ ನಾನು ನಿಮ್ಮ ಸಂಗಡ ಮಾತನಾಡಿ, “ನಿಮ್ಮ ಹೊಣೆಯನ್ನು ನಾನೊಬ್ಬನೇ ಹೊರುವುದು ಅಸಾಧ್ಯ.
ಆ ಕಾಲದಲ್ಲಿ ನಾನು ನಿಮಗೆ, “ನಾನೊಬ್ಬನೇ ನಿಮ್ಮ ಭಾರವನ್ನು ಹೊರಲಾರೆನು.
10 ೧೦ ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಅಧಿಕ ಸಂಖ್ಯೆಯಲ್ಲಿ ಹೆಚ್ಚಿಸಿದ್ದರಿಂದ ನೀವು ಈಗ ಆಕಾಶದ ನಕ್ಷತ್ರಗಳಷ್ಟು ಅಸಂಖ್ಯರಾಗಿದ್ದೀರಿ.
ನಿಮ್ಮ ದೇವರಾದ ಯೆಹೋವ ದೇವರು ನಿಮ್ಮನ್ನು ಹೆಚ್ಚಿಸಿದ್ದಾರೆ. ನೀವು ಈ ಹೊತ್ತು ಆಕಾಶದ ನಕ್ಷತ್ರಗಳ ಹಾಗೆ ಹೆಚ್ಚಾಗಿದ್ದೀರಿ.
11 ೧೧ ನೀವು ಈಗ ಇರುವುದಕ್ಕಿಂತಲೂ ಇನ್ನು ಸಾವಿರದಷ್ಟಾಗುವಂತೆ ನಿಮ್ಮ ಪೂರ್ವಿಕರ ದೇವರಾದ ಯೆಹೋವನು ನಿಮ್ಮನ್ನು ಹೆಚ್ಚಿಸಿ, ತಾನು ವಾಗ್ದಾನಮಾಡಿದ ಪ್ರಕಾರವೇ ನಿಮಗೆ ಶುಭಗಳನ್ನು ಅನುಗ್ರಹಿಸಲಿ.
ನೀವು ಈಗ ಇರುವುದಕ್ಕಿಂತ ಇನ್ನೂ ಸಾವಿರದಷ್ಟಾಗುವಂತೆ ನಿಮ್ಮ ಪಿತೃಗಳ ದೇವರಾದ ಯೆಹೋವ ದೇವರು ನಿಮ್ಮನ್ನು ಹೆಚ್ಚಿಸಲಿ, ಅವರು ವಾಗ್ದಾನ ಮಾಡಿದ ಪ್ರಕಾರ ನಿಮ್ಮನ್ನು ಆಶೀರ್ವದಿಸಲಿ.
12 ೧೨ ಆದರೆ ನಿಮ್ಮಿಂದಾಗುವ ತೊಂದರೆಗಳನ್ನೂ, ಹೊಣೆಯನ್ನು ಮತ್ತು ವ್ಯಾಜ್ಯಗಳನ್ನೂ ನಾನೊಬ್ಬನೇ ನಿಭಾಯಿಸುವುದು ಹೇಗೆ?
ಆದರೆ ನಿಮ್ಮ ಸಮಸ್ಯೆಗಳನ್ನೂ ಹೊಣೆಯನ್ನೂ ವ್ಯಾಜ್ಯಗಳನ್ನೂ ನಾನೊಬ್ಬನೇ ಸಹಿಸುವುದು ಹೇಗೆ?
13 ೧೩ ಆದುದರಿಂದ ನೀವು ಪ್ರತಿಯೊಂದು ಕುಲದಿಂದ ಬುದ್ಧಿವಿವೇಕಗಳಿಂದ ಪ್ರಸಿದ್ಧರಾದ ಪುರುಷರನ್ನು ಆರಿಸಿಕೊಳ್ಳಿರಿ. ನಾನು ಅವರನ್ನು ನಿಮಗೆ ಅಧಿಪತಿಗಳನ್ನಾಗಿ ನೇಮಿಸುವೆನು” ಎಂದು ಹೇಳಿದೆನು.
ಆದ್ದರಿಂದ ನೀವು ಪ್ರತಿಯೊಂದು ಗೋತ್ರದಿಂದ ಜ್ಞಾನಿಗಳೂ ವಿವೇಕಿಗಳೂ ಪ್ರಖ್ಯಾತರೂ ಆದ ವ್ಯಕ್ತಿಗಳನ್ನು ಆರಿಸಿಕೊಳ್ಳಿರಿ. ನಾನು ಅವರನ್ನು ನಿಮಗೆ ಅಧಿಪತಿಗಳಾಗಿ ನೇಮಿಸುತ್ತೇನೆ,” ಎಂದು ಹೇಳಿದೆನು.
14 ೧೪ ಅದಕ್ಕೆ ನೀವು, “ನಿನ್ನ ಆಲೋಚನೆಯಂತೆ ನಡೆಯುವುದು ಹಿತವಾದದ್ದೇ” ಎಂದು ಉತ್ತರಕೊಟ್ಟಿರಿ.
ಅದಕ್ಕೆ ನೀವು ನನಗೆ ಉತ್ತರವಾಗಿ, “ನೀನು ಹೇಳಿದ ಮಾತು ಮಾಡುವುದಕ್ಕೆ ಒಳ್ಳೆಯದು,” ಎಂದಿರಿ.
15 ೧೫ ಆಗ ನಾನು ನಿಮ್ಮಲ್ಲಿ ಪ್ರಸಿದ್ಧರಾದ, ಬುದ್ಧಿವಂತರನ್ನು ಆರಿಸಿಕೊಂಡು ಒಂದೊಂದು ಕುಲದಲ್ಲಿ ಸಾವಿರ ಜನರಿಗೆ ಒಬ್ಬರಂತೆ, ನೂರು ಜನರಿಗೆ ಒಬ್ಬರಂತೆ, ಐವತ್ತು ಜನರಿಗೆ ಒಬ್ಬರಂತೆ ಮತ್ತು ಹತ್ತು ಜನರಿಗೆ ಒಬ್ಬರಂತೆ ಅಧಿಕಾರಿಗಳನ್ನಾಗಿಯೂ ಮತ್ತು ಉಪ ಅಧಿಕಾರಿಗಳನ್ನಾಗಿಯೂ ನೇಮಿಸಿದೆನು.
ಆಗ ನಾನು ನಿಮ್ಮಲ್ಲಿ ಪ್ರಸಿದ್ಧರಾದ ಜ್ಞಾನಿಗಳನ್ನು ಕರೆಯಿಸಿ, ಒಂದೊಂದು ಗೋತ್ರದಲ್ಲಿ ಸಾವಿರ ಮಂದಿಯ ಮೇಲೆ, ನೂರು ಮಂದಿಯ ಮೇಲೆ, ಐವತ್ತು ಮಂದಿಯ ಮೇಲೆ, ಹತ್ತು ಮಂದಿಯ ಮೇಲೆ ಅಧಿಕಾರಿಗಳನ್ನಾಗಿ ನೇಮಿಸಿದೆನು.
16 ೧೬ ಆ ನ್ಯಾಯಾಧಿಪತಿಗಳಿಗೆ ನಾನು ಆ ಕಾಲದಲ್ಲಿ ಅಪ್ಪಣೆಮಾಡಿ, “ನೀವು ಸ್ವಕುಲದವರ ವ್ಯಾಜ್ಯಗಳನ್ನು ವಿಚಾರಿಸಬೇಕು. ಅವರು ಇಸ್ರಾಯೇಲರೊಡನೆ ವ್ಯಾಜ್ಯವಾಡಿದರೂ, ಅನ್ಯರೊಡನೆ ವ್ಯಾಜ್ಯವಾಡಿದರೂ ನೀವು ನ್ಯಾಯದ ಪ್ರಕಾರವೇ ತೀರ್ಪುಮಾಡಬೇಕು.
ಆ ನ್ಯಾಯಾಧಿಪತಿಗಳಿಗೆ ಆ ಕಾಲದಲ್ಲಿ ನಾನು, “ನಿಮ್ಮ ಸಹೋದರರು ತಮ್ಮಲ್ಲಿ ಮಾಡುವ ವ್ಯಾಜ್ಯಗಳನ್ನು ವಿಚಾರಿಸಬೇಕು. ಅದು ಇಸ್ರಾಯೇಲರ ವ್ಯಾಜ್ಯವಾಗಿರಬಹುದು. ಇಸ್ರಾಯೇಲರಲ್ಲದವರ ವ್ಯಾಜ್ಯವಾಗಿರಬಹುದು. ಎಲ್ಲವನ್ನು ನೀವು ನ್ಯಾಯದ ಪ್ರಕಾರವೇ ತೀರ್ಮಾನಿಸಬೇಕು.
17 ೧೭ ನ್ಯಾಯವಿಚಾರಣೆ ಮಾಡುವಾಗ ಮುಖದಾಕ್ಷಿಣ್ಯಮಾಡದೆ, ಪ್ರಮುಖರನ್ನೂ ಹಾಗು ಅಲ್ಪರನ್ನೂ ಸಮಾನವಾಗಿ ಕಾಣಬೇಕು. ನೀವು ದೇವರ ಹೆಸರಿನಲ್ಲಿ ನ್ಯಾಯತೀರಿಸುವವರಾದ ಕಾರಣ ಮನುಷ್ಯರ ಮುಖವನ್ನು ನೋಡಿ ಹೆದರಬೇಡಿರಿ. ನೀವು ತೀರಿಸಲಿಕ್ಕೆ ಆಗದ ವ್ಯಾಜ್ಯಗಳನ್ನು ನನ್ನ ಬಳಿಗೆ ತರಬೇಕು; ನಾನೇ ಅವುಗಳನ್ನು ತೀರಿಸುವೆನು” ಎಂದು ಹೇಳಿದೆನು.
ನ್ಯಾಯದಲ್ಲಿ ನೀವು ಮುಖದಾಕ್ಷಿಣ್ಯ ಮಾಡಬೇಡಿರಿ. ಹಿರಿಯನನ್ನು ಹೇಗೋ ಹಾಗೆಯೇ ಕಿರಿಯನನ್ನು ಕೇಳಬೇಕು. ಯಾವ ಮನುಷ್ಯನಿಗೂ ಹೆದರಬೇಡಿರಿ. ಆದರೆ ನ್ಯಾಯ ತೀರ್ವಿಕೆಯು ದೇವರದೇ. ನಿಮಗೆ ಕಠಿಣವಾದ ವ್ಯಾಜ್ಯಗಳನ್ನು ನನ್ನ ಮುಂದೆ ತನ್ನಿರಿ, ನಾನು ಅದನ್ನು ತೀರಿಸುವೆನು,” ಎಂದು ಹೇಳಿದೆ.
18 ೧೮ ಅದಲ್ಲದೆ ನೀವು ಮಾಡಬೇಕಾದ ಎಲ್ಲಾ ಕಾರ್ಯಗಳ ವಿಷಯದಲ್ಲಿಯೂ ನಾನು ಆ ಕಾಲದಲ್ಲಿ ನಿಮಗೆ ಆಜ್ಞೆಕೊಟ್ಟೆನು.
ಹೀಗೆ ನೀವು ಮಾಡತಕ್ಕ ಕಾರ್ಯಗಳನ್ನೆಲ್ಲಾ ಆ ಕಾಲದಲ್ಲಿ ನಿಮಗೆ ಆಜ್ಞಾಪಿಸಿದೆನು.
19 ೧೯ ನಾವು ಹೋರೇಬಿನಿಂದ ಹೊರಟು ನಮ್ಮ ದೇವರಾದ ಯೆಹೋವನು ಆಜ್ಞಾಪಿಸಿದಂತೆ ಅಮೋರಿಯರ ಬೆಟ್ಟದ ಸೀಮೆಯ ಮಾರ್ಗವನ್ನು ಹಿಡಿದು ನೀವು ನೋಡಿದ ಆ ಘೋರವಾದ ಮಹಾ ಅರಣ್ಯದಲ್ಲಿ ನಡೆದು ಕಾದೇಶ್‌ಬರ್ನೇಯಕ್ಕೆ ಸೇರಿದೆವು.
ಆಗ ನಾವು ಹೋರೇಬಿನಿಂದ ಹೊರಟು ನಮ್ಮ ದೇವರಾದ ಯೆಹೋವ ದೇವರು ನಮಗೆ ಆಜ್ಞಾಪಿಸಿದ ಪ್ರಕಾರ, ನೀವು ಅಮೋರಿಯರ ಬೆಟ್ಟದ ಮಾರ್ಗದಲ್ಲಿ ನೋಡಿದ ಆ ದೊಡ್ಡ ಭಯಂಕರವಾದ ಮರುಭೂಮಿಯನ್ನೆಲ್ಲಾ ದಾಟಿ, ಕಾದೇಶ್ ಬರ್ನೇಯಕ್ಕೆ ಬಂದೆವು.
20 ೨೦ ಆಗ ನಾನು, “ನಮ್ಮ ದೇವರಾದ ಯೆಹೋವನು ನಮಗೆ ಕೊಡುವ ಅಮೋರಿಯರ ಬೆಟ್ಟದ ಸೀಮೆಯ ಹತ್ತಿರಕ್ಕೆ ಬಂದಿದ್ದೀರಿ.
ಆಗ ನಾನು ನಿಮಗೆ, “ನಮ್ಮ ದೇವರಾದ ಯೆಹೋವ ದೇವರು ನಮಗೆ ಕೊಡುವ ಅಮೋರಿಯರ ಮಲೆನಾಡಿಗೆ ಹತ್ತಿರ ಬಂದಿದ್ದೀರಿ.
21 ೨೧ ನಿಮ್ಮ ದೇವರಾದ ಯೆಹೋವನು ಆ ದೇಶವನ್ನು ನಿಮಗೇ ಕೊಟ್ಟಿದ್ದಾನೆ; ನಿಮ್ಮ ಪೂರ್ವಿಕರ ದೇವರಾದ ಯೆಹೋವನು ಹೇಳಿದಂತೆ ಆ ಬೆಟ್ಟವನ್ನು ಹತ್ತಿ ಸ್ವಾಧೀನಮಾಡಿಕೊಳ್ಳಿರಿ; ನೀವು ಭಯಪಡದೆ ಧೈರ್ಯವಾಗಿಯೇ ಇರಬೇಕು” ಎಂದು ಹೇಳಿದೆನು.
ನಿಮ್ಮ ದೇವರಾದ ಯೆಹೋವ ದೇವರು ದೇಶವನ್ನು ನಿಮಗೆ ಕೊಟ್ಟಿದ್ದಾರೆ, ನಿಮ್ಮ ಪಿತೃಗಳ ದೇವರಾದ ಯೆಹೋವ ದೇವರು ನಿಮಗೆ ಹೇಳಿದ ಪ್ರಕಾರ ಅದನ್ನು ಏರಿ ಸ್ವಾಧೀನಮಾಡಿಕೊಳ್ಳಿರಿ. ಭಯಪಡಬೇಡಿರಿ, ಧೈರ್ಯವಾಗಿರಿ,” ಎಂದೆನು.
22 ೨೨ ಆಗ ನೀವೆಲ್ಲರೂ ನನ್ನ ಬಳಿಗೆ ಬಂದು, “ನಮಗಿಂತ ಮುಂದಾಗಿ ಜನರನ್ನು ಕಳುಹಿಸುವೆವು. ಅವರು ನಮಗೋಸ್ಕರ ಆ ದೇಶವನ್ನು ಪರೀಕ್ಷಿಸಿ ನೋಡಿ, ನಾವು ಹತ್ತಿ ಹೋಗಬೇಕಾದ ದಾರಿಯ ವಿಷಯದಲ್ಲೂ ಮತ್ತು ಸೇರಬೇಕಾದ ಊರುಗಳ ವಿಷಯದಲ್ಲೂ ನಮಗೆ ವರ್ತಮಾನ ತಿಳಿಸಲಿ” ಎಂದು ಹೇಳಿದಿರಿ.
ಆಗ ನೀವೆಲ್ಲರು ನನ್ನ ಬಳಿಗೆ ಬಂದು, “ನಮಗಿಂತ ಮುಂದಾಗಿ ಜನರನ್ನು ಕಳುಹಿಸೋಣ. ಅವರು ನಮಗೆ ದೇಶವನ್ನು ಸಂಚರಿಸಿ ನೋಡಿ, ನಾವು ಮೇಲೆ ಹೋಗತಕ್ಕ ಮಾರ್ಗದ ವಿಷಯದಲ್ಲಿಯೂ ನಾವು ಪ್ರವೇಶಿಸುವ ಪಟ್ಟಣಗಳ ವಿಷಯದಲ್ಲಿಯೂ ನಮಗೆ ಸಮಾಚಾರವನ್ನು ತರಲಿ,” ಎಂದು ಹೇಳಿದಿರಿ.
23 ೨೩ ಅದು ಒಳ್ಳೆಯ ಆಲೋಚನೆಯೆಂದು ನಾನು ತಿಳಿದುಕೊಂಡು ನಿಮ್ಮಲ್ಲಿ ಕುಲಕ್ಕೆ ಒಬ್ಬೊಬ್ಬನಂತೆ ಹನ್ನೆರಡು ಜನರನ್ನು ಆರಿಸಿಕೊಂಡೆನು.
ಆ ಮಾತು ನನಗೆ ಒಳ್ಳೆಯದೆಂದು ತೋಚಿತು. ನಾನು ನಿಮ್ಮಲ್ಲಿ ಗೋತ್ರಕ್ಕೆ ಒಬ್ಬನ ಪ್ರಕಾರ ಹನ್ನೆರಡು ಮಂದಿಯನ್ನು ಆರಿಸಿಕೊಂಡೆನು.
24 ೨೪ ಅವರು ಹೋಗಿ ಆ ಬೆಟ್ಟದ ಸೀಮೆಯನ್ನು ಹತ್ತಿ, ಎಷ್ಕೋಲ್ ಎಂಬ ತಗ್ಗಿನ ಬಳಿಗೆ ಬಂದು ಆ ಪ್ರದೇಶದಲ್ಲಿ ಸಂಚರಿಸಿ ನೋಡಿದರು.
ಅವರು ಹೋಗಿ ಬೆಟ್ಟವನ್ನೇರಿ, ಎಷ್ಕೋಲೆಂಬ ಹಳ್ಳದ ಬಳಿಗೆ ಬಂದು, ಅದನ್ನು ಸಂಚರಿಸಿ ನೋಡಿ,
25 ೨೫ ಅವರು ಅಲ್ಲಿನ ಹಣ್ಣುಗಳಲ್ಲಿ ಕೆಲವನ್ನು ತಂದು ತೋರಿಸಿ, “ನಮ್ಮ ದೇವರಾದ ಯೆಹೋವನು ನಮಗೆ ಕೊಡುವ ಆ ದೇಶವು ಒಳ್ಳೆಯ ದೇಶ” ಎಂದು ನಮಗೆ ತಿಳಿಸಿದರು.
ಆ ದೇಶದ ಫಲದಲ್ಲಿ ಕೆಲವನ್ನು ಕೈಯಲ್ಲಿ ತೆಗೆದುಕೊಂಡು, ನಮ್ಮ ಬಳಿಗೆ ತಂದು ತೋರಿಸಿ, “ನಮ್ಮ ದೇವರಾದ ಯೆಹೋವ ದೇವರು ನಮಗೆ ಕೊಡುವ ದೇಶವು ಒಳ್ಳೆಯದು,” ಎಂದು ವರದಿಮಾಡಿದರು.
26 ೨೬ ಆದರೂ ನೀವು ಬೆಟ್ಟವನ್ನು ಹತ್ತಿ ನೋಡಲು ಇಷ್ಟಪಡದೆ ನಿಮ್ಮ ದೇವರಾದ ಯೆಹೋವನ ಆಜ್ಞೆಯನ್ನು ಉಲ್ಲಂಘಿಸಿದಿರಿ.
ಆದರೆ ನೀವು ಮೇಲೆ ಹತ್ತಿ ಹೋಗುವುದಕ್ಕೆ ಮನಸ್ಸಿಲ್ಲದೆ ನಿಮ್ಮ ದೇವರಾದ ಯೆಹೋವ ದೇವರ ಅಪ್ಪಣೆಗೆ ತಿರುಗಿಬಿದ್ದಿರಿ.
27 ೨೭ ನೀವು ನಿಮ್ಮ ಡೇರೆಗಳಲ್ಲಿ ಗುಣುಗುಟ್ಟುತ್ತಾ, “ಯೆಹೋವನು ನಮ್ಮನ್ನು ಐಗುಪ್ತದೇಶದಿಂದ ಬರಮಾಡಿದ್ದು ಹಗೆತನದಿಂದಲೇ; ಆತನು ನಮ್ಮನ್ನು ಸಂಹರಿಸಬೇಕೆಂದು ಅಮೋರಿಯರ ಕೈಗೆ ಒಪ್ಪಿಸುತ್ತಾನೆ.
ನೀವು ನಿಮ್ಮ ಗುಡಾರಗಳಲ್ಲಿ ಗೊಣಗುಟ್ಟಿ, “ಯೆಹೋವ ದೇವರು ನಮ್ಮನ್ನು ಹಗೆ ಮಾಡಿದ್ದರಿಂದ, ನಮ್ಮನ್ನು ಅಮೋರಿಯರ ಕೈಗೆ ಒಪ್ಪಿಸಿ, ನಮ್ಮನ್ನು ನಾಶಮಾಡುವುದಕ್ಕೆ ಈಜಿಪ್ಟ್ ದೇಶದೊಳಗಿಂದ ಹೊರಗೆ ಬರಮಾಡಿದ್ದಾರೆ.
28 ೨೮ ನಾವು ಹೋಗಬೇಕಾದ ಆ ಸೀಮೆ ಎಂಥದೆಂದು ಆಲೋಚಿಸಿರಿ; ಅಲ್ಲಿ ಹೋಗಿದ್ದ ನಮ್ಮ ಸಹೋದರರು ನಮಗೆ, ‘ಆ ದೇಶದ ಜನರು ನಮಗಿಂತ ಬಲಿಷ್ಠರಾಗಿಯೂ ಮತ್ತು ಎತ್ತರವಾಗಿಯೂ ಇದ್ದಾರೆ. ಅವರಿರುವ ಪಟ್ಟಣಗಳು ದೊಡ್ಡದಾಗಿಯೂ ಮತ್ತು ಆಕಾಶವನ್ನು ಮುಟ್ಟುವ ಕೋಟೆಕೊತ್ತಲುಗಳಿಂದ ಇವೆ. ಅಲ್ಲಿ ನಾವು ಎತ್ತರವಾದ ಪುರುಷರನ್ನು ಅಂದರೆ ಅನಾಕೀಮ್ ವಂಶಸ್ಥರ ಮಕ್ಕಳನ್ನು ನೋಡಿದ್ದೇವೆ’ ಎಂದು ಹೇಳಿ ನಮ್ಮ ಧೈರ್ಯವನ್ನು ಕೆಡಿಸಿದ್ದಾರೆ” ಅಂದುಕೊಳ್ಳುತ್ತಿದ್ದಿರಿ.
ನಾವು ಎಲ್ಲಿಗೆ ಏರಿಹೋಗೋಣ? ನಮ್ಮ ಸಹೋದರರು, ‘ಆ ಜನರು ನಮಗಿಂತ ಬಲಿಷ್ಠರೂ ಎತ್ತರವಾದವರೂ ಪಟ್ಟಣಗಳು ದೊಡ್ಡವೂ, ಆಕಾಶವನ್ನು ಮುಟ್ಟುವ ಗೋಡೆಯುಳ್ಳವುಗಳೂ ಆಗಿವೆ. ಇದಲ್ಲದೆ ರಾಕ್ಷಸಾಕಾರದ ಅನಾಕ್ಯರ ಮಕ್ಕಳನ್ನು ಅಲ್ಲಿ ನೋಡಿದೆವು’ ಎಂದು ಹೇಳಿ ನಮ್ಮ ಹೃದಯಗಳನ್ನು ಅಧೈರ್ಯಪಡಿಸಿದ್ದಾರೆ,” ಎಂದು ಹೇಳಿದಿರಿ.
29 ೨೯ ಅದಕ್ಕೆ ನಾನು, “ಕಳವಳಪಡಬೇಡಿರಿ, ಅವರಿಗೆ ಭಯಪಡಬೇಡಿರಿ.
ಆಗ ನಾನು ನಿಮಗೆ, “ಅಂಜಬೇಡಿರಿ, ಅವರಿಗೆ ಭಯಪಡಬೇಡಿರಿ.
30 ೩೦ ನಿಮ್ಮ ಮುಂದೆ ಮಾರ್ಗದರ್ಶಕನಾಗಿ ಹೋಗುವ ನಿಮ್ಮ ದೇವರಾದ ಯೆಹೋವನು ಐಗುಪ್ತ ದೇಶದಲ್ಲಿಯೂ, ನೀವು ನೋಡಿದ ಅರಣ್ಯದಲ್ಲಿಯೂ ಪ್ರತ್ಯಕ್ಷನಾಗಿ ನಿಮಗೋಸ್ಕರ ಯುದ್ಧಮಾಡಿದಂತೆಯೇ ಈಗಲೂ ನಿಮ್ಮವನಾಗಿ ಯುದ್ಧಮಾಡುವನು.
ನಿಮ್ಮ ಮುಂದೆ ಹೋಗುವ ನಿಮ್ಮ ದೇವರಾದ ಯೆಹೋವ ದೇವರು ಈಜಿಪ್ಟಿನಲ್ಲಿಯೂ ಮರುಭೂಮಿಯಲ್ಲಿಯೂ ನಿಮ್ಮ ಕಣ್ಣು ಮುಂದೆ, ಯುದ್ಧಮಾಡಿದಂತೆಯೇ ಈಗಲೂ ನಿಮಗೋಸ್ಕರ ಯುದ್ಧಮಾಡುವರು.
31 ೩೧ ನೀವು ಈ ಸ್ಥಳಕ್ಕೆ ಸೇರುವ ತನಕ ನಿಮ್ಮ ಪ್ರಯಾಣದಲ್ಲೆಲ್ಲಾ ಒಬ್ಬ ತಂದೆ ತನ್ನ ಮಗನನ್ನು ಹೇಗೆ ಮುನ್ನಡೆಸುತ್ತಾನೋ ಹಾಗೆಯೇ ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಹೊತ್ತನಲ್ಲವೇ?” ಎಂದು ನಿಮಗೆ ಹೇಳಿದೆನು.
ನೀವು ಈ ಸ್ಥಳಕ್ಕೆ ಸೇರುವ ತನಕ ನಿಮ್ಮ ಪ್ರಯಾಣದಲ್ಲೆಲ್ಲಾ ಒಬ್ಬ ತಂದೆ ತನ್ನ ಮಗನನ್ನು ಹೇಗೆ ಹೊರುತ್ತಾನೋ ಹಾಗೆಯೇ ನಿಮ್ಮ ದೇವರಾದ ಯೆಹೋವ ದೇವರು ನಿಮ್ಮನ್ನು ಹೊತ್ತು ತಂದರಲ್ಲವೇ?” ಎಂದು ನಿಮಗೆ ಹೇಳಿದೆನು.
32 ೩೨ ಆದರೂ ನೀವು ನಿಮ್ಮ ದೇವರಾದ ಯೆಹೋವನನ್ನು ನಂಬಲೇ ಇಲ್ಲ.
ಆದರೆ ಈ ಕಾರ್ಯದಲ್ಲಿ ನೀವು ನಿಮ್ಮ ದೇವರಾದ ಯೆಹೋವ ದೇವರನ್ನು ನಂಬಲಿಲ್ಲ.
33 ೩೩ ನೀವು ಹೋಗಬೇಕಾದ ದಾರಿಯನ್ನು ತೋರಿಸುವುದಕ್ಕೂ, ದಂಡು ಇಳಿಯಬೇಕಾದ ಸ್ಥಳಗಳನ್ನು ಗೊತ್ತುಮಾಡುವುದಕ್ಕೂ ರಾತ್ರಿಯಲ್ಲಿ ಬೆಂಕಿಯೋಪಾದಿಯಲ್ಲಿಯೂ ಮತ್ತು ಹಗಲಿನಲ್ಲಿ ಮೇಘದೋಪಾದಿಯಲ್ಲಿಯೂ ನಿಮ್ಮ ಮಾರ್ಗದಲ್ಲಿ ನಿಮ್ಮನ್ನು ಮುನ್ನಡೆಸಿದ ದೇವರನ್ನು ನೀವು ನಂಬಲಿಲ್ಲ.
ಅವರೇ ನಿಮಗೆ ಇಳಿದುಕೊಳ್ಳುವುದಕ್ಕೆ ಸ್ಥಳವನ್ನು ಗೊತ್ತುಮಾಡಿ ನೀವು ಹೋಗತಕ್ಕ ಮಾರ್ಗವನ್ನು ನಿಮಗೆ ತೋರಿಸಲು ರಾತ್ರಿ ಹೊತ್ತು ಬೆಂಕಿಯಲ್ಲಿಯೂ ಹಗಲು ಹೊತ್ತು ಮೇಘದಲ್ಲಿಯೂ ನಿಮ್ಮ ಮುಂದೆ ಹೋದರು.
34 ೩೪ ಯೆಹೋವನು ನಿಮ್ಮ ಮಾತುಗಳನ್ನು ಕೇಳಿ ಕೋಪಗೊಂಡನು.
ಯೆಹೋವ ದೇವರು ನಿಮ್ಮ ಮಾತುಗಳನ್ನು ಕೇಳಿ, ಬೇಸರಗೊಂಡು, ಪ್ರಮಾಣಮಾಡಿ,
35 ೩೫ ಆತನು, “ನಿಮ್ಮ ಪೂರ್ವಿಕರಿಗೆ ವಾಗ್ದಾನಮಾಡಿದ ಆ ಒಳ್ಳೇ ದೇಶವನ್ನು ಈ ದುಷ್ಟ ಸಂತತಿಯವರಲ್ಲಿ ಯಾರೂ ನೋಡುವುದಿಲ್ಲ” ಎಂದು ಪ್ರಮಾಣಮಾಡಿದನು.
“ಕೆಟ್ಟ ಸಂತತಿಯಾದ ಈ ಮನುಷ್ಯರಲ್ಲಿ ಒಬ್ಬನಾದರೂ ನಾನು ನಿಮ್ಮ ಪಿತೃಗಳಿಗೆ ಕೊಡುತ್ತೇನೆಂದು ಪ್ರಮಾಣ ಮಾಡಿದ ಒಳ್ಳೆಯ ದೇಶವನ್ನು ನೋಡುವುದಿಲ್ಲ.
36 ೩೬ ಮತ್ತು ಯೆಹೋವನು “ಯೆಫುನ್ನೆಯ ಮಗನಾದ ಕಾಲೇಬನೊಬ್ಬನೇ ಯೆಹೋವನನ್ನು ಮನಃಪೂರ್ವಕವಾಗಿ ಅನುಸರಿಸಿದ್ದರಿಂದ, ಅವನೇ ಅದನ್ನು ನೋಡುವನು. ಅವನು ಸಂಚರಿಸಿದ ಪ್ರದೇಶವನ್ನು ಅವನಿಗೂ ಮತ್ತು ಅವನ ಸಂತತಿಯವರಿಗೂ ಕೊಡುವೆನು” ಎಂದು ಹೇಳಿದನು.
ಯೆಫುನ್ನೆಯ ಮಗ ಕಾಲೇಬನು ಮಾತ್ರ ಅದನ್ನು ನೋಡುವನು. ಅವನು ಯೆಹೋವ ದೇವರನ್ನು ಪೂರ್ಣವಾಗಿ ಹಿಂಬಾಲಿಸಿದ್ದರಿಂದ, ಅವನು ಸಂದರ್ಶಿಸಿದ ದೇಶವನ್ನು ಅವನಿಗೂ ಅವನ ಮಕ್ಕಳಿಗೂ ಕೊಡುವೆನು,” ಎಂದರು.
37 ೩೭ ಅದು ಮಾತ್ರವಲ್ಲದೆ ಯೆಹೋವನು ನಿಮ್ಮಿಂದ ನನ್ನ ಮೇಲೆಯೂ ಕೋಪಗೊಂಡು, “ನೀನೂ ಆ ದೇಶಕ್ಕೆ ಸೇರುವುದಿಲ್ಲ;
ನನ್ನ ಮೇಲೆಯೂ ಯೆಹೋವ ದೇವರು ನಿಮ್ಮ ವಿಷಯವಾಗಿ ಬೇಸರಮಾಡಿಕೊಂಡು, “ನೀನು ಸಹ ಅದರಲ್ಲಿ ಪ್ರವೇಶಿಸುವುದಿಲ್ಲ.
38 ೩೮ ಆದರೆ ನಿನ್ನ ಮುಂದೆ ನಿಂತಿರುವ ನಿನ್ನ ಸೇವಕನು, ನೂನನ ಮಗನೂ ಆದ ಯೆಹೋಶುವನು ಅಲ್ಲಿಗೆ ಸೇರುವನು. ಅವನೇ ಇಸ್ರಾಯೇಲರಿಗೆ ಆ ದೇಶವನ್ನು ಸ್ವಾಧೀನಪಡಿಸುವನು. ಆದುದರಿಂದ ಅವನನ್ನು ಧೈರ್ಯಗೊಳಿಸು.
ಆದರೆ ನಿನ್ನ ಮುಂದೆ ನಿಂತಿರುವ ನೂನನ ಮಗ ಯೆಹೋಶುವನು ಅಲ್ಲಿಗೆ ಸೇರುವನು. ಅವನನ್ನು ಧೈರ್ಯಗೊಳಿಸು. ಅವನೇ ಆ ನಾಡನ್ನು ಇಸ್ರಾಯೇಲಿಗೆ ಸ್ವಾಧೀನಪಡಿಸುವನು.
39 ೩೯ ಆದರೆ ಪರರ ಪಾಲಾಗುವರೆಂದು ನೀವು ಹೇಳಿದ ನಿಮ್ಮ ಮನೆಯವರೂ ಹಾಗು ಒಳ್ಳೆಯದನ್ನು ಮತ್ತು ಕೆಟ್ಟದ್ದನ್ನು ಅರಿಯದ ನಿಮ್ಮ ಮಕ್ಕಳೂ ಅಲ್ಲಿಗೆ ಸೇರುವರು. ಅವರಿಗೇ ಆ ದೇಶವನ್ನು ಕೊಡುವೆನು; ಅವರು ಅದನ್ನು ಸ್ವಾಧೀನಮಾಡಿಕೊಳ್ಳುವರು.
ಇದಲ್ಲದೆ ಸೆರೆಯಾಗಿ ಹೋಗುವರೆಂದು ನೀವು ಹೇಳಿದ ನಿಮ್ಮ ಚಿಕ್ಕವರೂ ಈ ಹೊತ್ತು ಒಳ್ಳೆಯದು, ಕೆಟ್ಟದ್ದು ಅರಿಯದ ನಿಮ್ಮ ಮಕ್ಕಳು ಅದರಲ್ಲಿ ಪ್ರವೇಶಿಸುವರು. ನಾನು ಅವರಿಗೆ ಅದನ್ನು ಕೊಡುವೆನು, ಅವರು ಅದನ್ನು ಸ್ವತಂತ್ರಿಸಿಕೊಳ್ಳುವರು.
40 ೪೦ ನೀವಾದರೋ ಹಿಂದಿರುಗಿ ಕೆಂಪು ಸಮುದ್ರದ ಮಾರ್ಗವನ್ನು ಹಿಡಿದು ಅರಣ್ಯಕ್ಕೆ ಹೊರಟುಹೋಗಿರಿ” ಎಂದು ಆಜ್ಞಾಪಿಸಿದನು.
ನೀವಾದರೋ ತಿರುಗಿಕೊಂಡು ಕೆಂಪು ಸಮುದ್ರ ಮಾರ್ಗವಾಗಿ ಮರುಭೂಮಿಗೆ ಹೊರಟು ಹೋಗಿರಿ,” ಎಂದು ಹೇಳಿದರು.
41 ೪೧ ಅದಕ್ಕೆ ನೀವು, “ನಾವು ಯೆಹೋವನಿಗೆ ದ್ರೋಹಿಗಳಾದೆವು. ಆದರೂ ನಮ್ಮ ದೇವರಾದ ಯೆಹೋವನು ಆಜ್ಞಾಪಿಸಿದಂತೆ ನಾವೇ ಈಗ ಆ ಬೆಟ್ಟದ ಸೀಮೆಯನ್ನು ಹತ್ತಿ ಯುದ್ಧಮಾಡುವೆವು” ಎಂದು ಉತ್ತರಕೊಟ್ಟಿರಿ. ಮತ್ತು ನೀವೆಲ್ಲರೂ ನಿಮ್ಮ ನಿಮ್ಮ ಆಯುಧಗಳನ್ನು ತೆಗೆದುಕೊಂಡು, ಆ ಬೆಟ್ಟದ ಸೀಮೆಯನ್ನು ಹತ್ತಿ ಜಯಿಸುವುದು ಅಲ್ಪಕಾರ್ಯವೆಂದು ಭಾವಿಸಿ ಹೊರಡುವುದಕ್ಕಿದ್ದಿರಿ.
ಆಗ ನೀವು ಉತ್ತರಕೊಟ್ಟು ನನಗೆ, “ಯೆಹೋವ ದೇವರಿಗೆ ಪಾಪಮಾಡಿದ್ದೇವೆ. ನಮ್ಮ ದೇವರಾದ ಯೆಹೋವ ದೇವರು ನಮಗೆ ಆಜ್ಞಾಪಿಸಿದ್ದೆಲ್ಲದರ ಪ್ರಕಾರ ನಾವು ಬೆಟ್ಟವನ್ನು ಹತ್ತಿ ಯುದ್ಧ ಮಾಡುತ್ತೇವೆ. ನೀವೆಲ್ಲರು ನಿಮ್ಮ ಯುದ್ಧದ ಆಯುಧಗಳನ್ನು ಕಟ್ಟಿಕೊಂಡ ಮೇಲೆ ಬೆಟ್ಟಕ್ಕೆ ಹೊರಟುಹೋಗುವುದು ಸಣ್ಣ ಕೆಲಸ,” ಎಂದು ಹೇಳಿದಿರಿ.
42 ೪೨ ಆದರೆ ಯೆಹೋವನು ನನಗೆ, “ನಾನು ಇವರ ಮಧ್ಯದಲ್ಲಿ ಇರುವುದಿಲ್ಲವಾದುದರಿಂದ ಇವರು ಸೋತುಹೋಗುವರು. ಇವರು ಯುದ್ಧಮಾಡಲೂ ಬಾರದು, ಆ ಬೆಟ್ಟದ ಸೀಮೆಗೆ ಹೋಗಲೂ ಬಾರದು ಎಂದು ಇವರಿಗೆ ಆಜ್ಞಾಪಿಸು” ಎಂದು ಹೇಳಿದನು.
ಆದರೆ ಯೆಹೋವ ದೇವರು ನನಗೆ, “‘ಏರಿ ಹೋಗಬೇಡಿರಿ, ಯುದ್ಧಮಾಡಬೇಡಿರಿ. ಏಕೆಂದರೆ ನಾನು ನಿಮ್ಮ ಮಧ್ಯದಲ್ಲಿ ಇಲ್ಲ. ನೀವು ನಿಮ್ಮ ಶತ್ರುಗಳಿಂದ ಸೋಲನ್ನು ಅನುಭವಿಸುವಿರಿ,’ ಎಂದು ಅವರಿಗೆ ಹೇಳು,” ಎಂದರು.
43 ೪೩ ನಾನು ಆ ಮಾತನ್ನು ನಿಮಗೆ ತಿಳಿಸಿದರೂ, ನೀವು ಕಿವಿಗೊಡದೆ ಯೆಹೋವನ ಆಜ್ಞೆಯನ್ನು ತಾತ್ಸಾರಮಾಡಿ ಸೊಕ್ಕಿನಿಂದ ಆ ಬೆಟ್ಟವನ್ನು ಹತ್ತಿದಿರಿ.
ಇದನ್ನು ನಾನು ನಿಮಗೆ ಹೇಳಲಾಗಿ ನೀವು ಕೇಳದೆ, ಯೆಹೋವ ದೇವರ ಅಪ್ಪಣೆಗೆ ತಿರುಗಿಬಿದ್ದು, ಗರ್ವದಿಂದ ಧೈರ್ಯಮಾಡಿ ಬೆಟ್ಟವನ್ನೇರಿದಿರಿ.
44 ೪೪ ಆಗ ಬೆಟ್ಟದಲ್ಲಿದ್ದ ಅಮೋರಿಯರು ನಿಮಗೆ ವಿರುದ್ಧವಾಗಿ ಹೊರಟು ಜೇನುಹುಳಗಳಂತೆ ನಿಮ್ಮನ್ನು ಮುತ್ತಿ ಸೇಯೀರಿನಲ್ಲಿ ಹೊರ್ಮದ ವರೆಗೂ ಬೆನ್ನಟ್ಟಿ ಸಂಹರಿಸಿದರು.
ಆಗ ಆ ಬೆಟ್ಟದಲ್ಲಿ ವಾಸಮಾಡುತ್ತಿದ್ದ ಅಮೋರಿಯರು ನಿಮಗೆ ವಿರುದ್ಧವಾಗಿ ಹೊರಟು, ಜೇನುಹುಳಗಳು ಮುತ್ತಿದಂತೆ ನಿಮ್ಮ ಬೆನ್ನು ಹತ್ತಿ, ಸೇಯೀರಿನಲ್ಲಿ ಹೊರ್ಮಾದವರೆಗೂ ನಿಮ್ಮನ್ನು ಸಂಹಾರ ಮಾಡಿದರು.
45 ೪೫ ನೀವು ಹಿಂದಿರುಗಿ ಬಂದು ಯೆಹೋವನ ಮುಂದೆ ಗೋಳಾಡಿದಾಗ ಆತನು ನಿಮ್ಮ ಮೊರೆಯನ್ನು ಕೇಳಲೂ ಇಲ್ಲ ಮತ್ತು ರಕ್ಷಿಸಲೂ ಇಲ್ಲ.
ನೀವು ತಿರುಗಿಕೊಂಡು ಯೆಹೋವ ದೇವರ ಮುಂದೆ ಅತ್ತಿರಿ. ಆದರೆ ಯೆಹೋವ ದೇವರು ನಿಮ್ಮ ಧ್ವನಿಗೆ ಕಿವಿಗೊಡಲಿಲ್ಲ.
46 ೪೬ ಆ ಮೇಲೆ ನೀವು ಕಾದೇಶಿನಲ್ಲಿ ಬಹುಕಾಲ ವಾಸವಾಗಿದ್ದಿರಿ ಎಂದು ಹೇಳಿದನು.
ಆಮೇಲೆ ನೀವು ಕಾದೇಶಿನಲ್ಲಿ ಬಹಳ ದಿವಸ ವಾಸವಾಗಿದ್ದಿರಿ.

< ಧರ್ಮೋಪದೇಶಕಾಂಡ 1 >