< ವಿಮೋಚನಕಾಂಡ 21 >

1 “ಈಗ ನೀನು ಅವರ ಮುಂದೆ ಇಡಬೇಕಾದ ನ್ಯಾಯವಿಧಿಗಳು ಯಾವುದೆಂದರೆ;
“ಈಗ ಅವರ ಮುಂದೆ ನೀನು ಇಡತಕ್ಕ ನ್ಯಾಯವಿಧಿಗಳು ಇವೇ.
2 “‘ನಿಮ್ಮಲ್ಲಿ ಯಾರಾದರೂ ಇಬ್ರಿಯನೊಬ್ಬನನ್ನು ದಾಸತ್ವಕ್ಕಾಗಿ ಕೊಂಡುಕೊಂಡರೆ, ಆ ಇಬ್ರಿಯನು ಆರು ವರ್ಷ ದಾಸನಾಗಿದ್ದು ಏಳನೆಯ ವರ್ಷದಲ್ಲಿ ಏನೂ ಕೊಡದೆ ಬಿಡುಗಡೆಯಾಗಿ ಹೋಗಬೇಕು.
“ನೀನು ಹಿಬ್ರಿಯ ದಾಸನನ್ನು ಕೊಂಡುಕೊಂಡರೆ, ಅವನು ಆರು ವರ್ಷ ನಿನಗೆ ಸೇವೆಮಾಡಬೇಕು. ಏಳನೆಯ ವರ್ಷದಲ್ಲಿ ಅವನು ಏನೂ ಕೊಡದೆ ಬಿಡುಗಡೆಯಾಗಿ ಹೋಗಲಿ.
3 ಪುರುಷನು ಒಂಟಿಯಾಗಿ ಬಂದಿದ್ದರೆ ಒಂಟಿಯಾಗಿಯೇ ಹೊರಟುಹೋಗಬೇಕು. ಮದುವೆಯಾಗಿ ಬಂದಿದ್ದರೆ ಅವನ ಹೆಂಡತಿಯೂ ಅವನ ಜೊತೆ ಹೋಗಬೇಕು.
ಅವನು ಒಬ್ಬನಾಗಿ ಬಂದಿದ್ದರೆ, ಒಬ್ಬನಾಗಿಯೇ ಹೋಗಬೇಕು. ಅವನು ಮದುವೆಯಾದವನಾಗಿದ್ದರೆ, ಅವನ ಹೆಂಡತಿಯು ಅವನ ಸಂಗಡ ಹೋಗಬೇಕು.
4 ಅವನ ಯಜಮಾನನು ಅವನಿಗೆ ಮದುವೆಮಾಡಿಸಿದ ಪಕ್ಷದಲ್ಲಿ ಆ ಹೆಂಡತಿಯಲ್ಲಿ ಗಂಡು ಇಲ್ಲವೆ ಹೆಣ್ಣುಮಕ್ಕಳು ಹುಟ್ಟಿದ್ದರೆ, ಆ ಹೆಂಡತಿಯೂ ಅವಳ ಮಕ್ಕಳೂ ಯಜಮಾನನ ಸೊತ್ತಾಗುವರು. ದಾಸನು ಒಂಟಿಗನಾಗಿಯೇ ಹೊರಟುಹೋಗಬೇಕು.’”
ಅವನ ಯಜಮಾನನು ಅವನಿಗೆ ಮದುವೆಮಾಡಿಸಿ ಆ ಹೆಂಡತಿಗೆ ಗಂಡು ಇಲ್ಲವೆ ಹೆಣ್ಣುಮಕ್ಕಳು ಹುಟ್ಟಿದ್ದರೆ, ಆ ಹೆಂಡತಿಯೂ ಅವಳ ಮಕ್ಕಳೂ ಯಜಮಾನನ ಸೊತ್ತಾಗುವರು. ಅವನು ಒಬ್ಬನಾಗಿಯೇ ಹೋಗಬೇಕು.
5 ಆದರೆ ದಾಸನು, “ನಾನು ನನ್ನ ಯಜಮಾನನ್ನೂ, ನನ್ನ ಹೆಂಡತಿ ಮಕ್ಕಳನ್ನು ಪ್ರೀತಿಸುತ್ತೇನೆ. ಆದುದರಿಂದ ನಾನು ಬಿಡುಗಡೆಯಾಗಿ ಹೋಗುವುದಕ್ಕೆ ನನಗೆ ಮನಸಿಲ್ಲ” ಎಂದು ಸ್ಪಷ್ಟವಾಗಿ ಹೇಳಿದರೆ,
“ಆದರೆ ದಾಸನು, ‘ನಾನು ನನ್ನ ಯಜಮಾನನನ್ನೂ ನನ್ನ ಹೆಂಡತಿಯನ್ನೂ ನನ್ನ ಮಕ್ಕಳನ್ನೂ ಪ್ರೀತಿಮಾಡುತ್ತೇನೆ. ಆದ್ದರಿಂದ ನಾನು ಬಿಡುಗಡೆಯಾಗಿ ಹೋಗುವುದಕ್ಕೆ ಮನಸ್ಸಿಲ್ಲ,’ ಎಂದು ಸ್ವಷ್ಟವಾಗಿ ಹೇಳಿದರೆ,
6 ಅವನ ಯಜಮಾನನು ದೇವರ ಬಳಿಗೆ ಅವನನ್ನು ಕರೆದುಕೊಂಡು ಬಂದು ಬಾಗಿಲಿನ ಹತ್ತಿರ ಅಥವಾ ಬಾಗಿಲಿನ ನಿಲುವು ಪಟ್ಟಿಗಳ ಹತ್ತಿರ ನಿಲ್ಲಿಸಿ ಅವನ ಕಿವಿಯನ್ನು ದಬ್ಬಳದಿಂದ ಚುಚ್ಚಿ ಗುರುತು ಮಾಡಬೇಕು. ಆಗ ಅವನು ಶಾಶ್ವತವಾಗಿ ಅವನಿಗೆ ದಾಸನಾಗಿರುವನು.
ಅವನ ಯಜಮಾನನು ಅವನನ್ನು ನ್ಯಾಯಾಧೀಶರ ಬಳಿಗೆ ಕರಕೊಂಡು ಬಂದು, ಬಾಗಿಲಿನ ಬಳಿಗಾದರೂ ಅದರ ಕಂಬದ ಬಳಿಗಾದರೂ ಬರಮಾಡಿ, ಅವನ ಯಜಮಾನನು ಅವನ ಕಿವಿಯನ್ನು ದಬ್ಬಳದಿಂದ ಚುಚ್ಚಬೇಕು. ಆಗ ಅವನು ಸದಾಕಾಲಕ್ಕೂ ಅವನ ದಾಸನಾಗಿರಬೇಕು.
7 ಯಾರಾದರೂ ತನ್ನ ಮಗಳನ್ನು ದಾಸಿಯನ್ನಾಗಿ ಮಾರಿದರೆ, ದಾಸರು ಬಿಡುಗಡೆಯಾಗಿ ಹೋಗುವ ಪ್ರಕಾರ ಅವಳು ಬಿಡುಗಡೆಯಾಗಿ ಹೋಗಬಾರದು.
“ಒಬ್ಬನು ತನ್ನ ಮಗಳನ್ನು ದಾಸಿಯನ್ನಾಗಿ ಮಾರಿದರೆ, ದಾಸರು ಹೋಗುವಂತೆ ಆಕೆಯು ಹೋಗಿಬಿಡಬಾರದು.
8 ಅವಳನ್ನು ನಿಶ್ಚಯ ಮಾಡಿಕೊಂಡ ಯಜಮಾನನಿಗೆ ಒಂದು ವೇಳೆ ಮೆಚ್ಚಿಕೆಯಾಗದೆ ಹೋದರೆ ಅವಳನ್ನು ಬಿಡಿಸಿ ಕೊಲ್ಲುವುದಕ್ಕೆ ಅವನು ಅನುಮತಿ ನೀಡಬೇಕು. ಅವನು ಕೊಟ್ಟ ಮಾತಿಗೆ ತಪ್ಪಿದವನಾದ್ದರಿಂದ ಅನ್ಯಜನರಿಗೆ ಅವಳನ್ನು ಮಾರುವುದಕ್ಕೆ ಅವನಿಗೆ ಅಧಿಕಾರವಿಲ್ಲ.
ಅವಳನ್ನು ನಿಶ್ಚಯಮಾಡಿಕೊಂಡ ಯಜಮಾನನಿಗೆ ಒಂದು ವೇಳೆ ಅವಳು ಮೆಚ್ಚಿಕೆಯಾಗದೆ ಹೋದರೆ, ಆಗ ಅವಳು ಬಿಡುಗಡೆಯಾಗುವಂತೆ ಮಾಡಲಿ. ಅವನು ಅವಳನ್ನು ವಂಚಿಸಿದ್ದರಿಂದ ಯೆಹೂದ್ಯರಲ್ಲದವರಿಗೆ ಅವಳನ್ನು ಮಾರುವುದಕ್ಕೆ ಅವನಿಗೆ ಅಧಿಕಾರವಿಲ್ಲ.
9 ಒಂದು ವೇಳೆ ಅವನು ತನ್ನ ಮಗನಿಗೆ ಅವಳನ್ನು ನಿಶ್ಚಯ ಮಾಡಿಕೊಂಡರೆ ಮಗಳಂತೆ ಆಕೆಯನ್ನು ನೋಡಿಕೊಳ್ಳಬೇಕು.
ಒಂದು ವೇಳೆ ಅವನು ತನ್ನ ಮಗನಿಗೆ ಅವಳನ್ನು ನಿಶ್ಚಯ ಮಾಡಿದರೆ, ಹೆಣ್ಣು ಮಕ್ಕಳ ನ್ಯಾಯದ ಪ್ರಕಾರ ಅವಳಿಗೆ ಮಾಡಬೇಕು.
10 ೧೦ ಯಜಮಾನನು ಇನ್ನೊಬ್ಬಳನ್ನು ಮದುವೆಯಾದರೆ ಮೊದಲನೆಯವಳಿಗೆ ಅನ್ನ, ವಸ್ತ್ರ, ದಾಂಪತ್ಯದ ಹಕ್ಕುಗಳನ್ನು ಕಡಿಮೆಮಾಡಬಾರದು.
ಒಂದು ವೇಳೆ ಅವನು ಇನ್ನೊಬ್ಬಳನ್ನು ಮದುವೆಯಾದರೆ, ಮೊದಲನೆಯವಳಿಗೆ ಅನ್ನ, ವಸ್ತ್ರ, ದಾಂಪತ್ಯದ ಹಕ್ಕನ್ನು ಕಡಿಮೆ ಮಾಡಬಾರದು.
11 ೧೧ ಈ ಮೂರರಲ್ಲಿ ಯಾವುದನ್ನೂ ನಡೆಸದೆ ಹೋದರೆ ಅವಳು ಏನೂ ಕೊಡದೆ ಬಿಡುಗಡೆಯಾಗಿ ಹೋಗಬಹುದು.
ಈ ಮೂರನ್ನು ಅವಳಿಗೆ ಮಾಡದೆ ಹೋದರೆ, ಅವಳು ಏನೂ ಕ್ರಯ ಕೊಡದೆ, ಸ್ವತಂತ್ರಳಾಗಿ ಹೋಗಿಬಿಡಬಹುದು.
12 ೧೨ ಮನುಷ್ಯನನ್ನು ಹೊಡೆದು ಕೊಂದವನು ಖಂಡಿತವಾಗಿ ಸಾಯಬೇಕು.
“ಮನುಷ್ಯನನ್ನು ಸಾಯುವಂತೆ ಹೊಡೆದವನು ಖಂಡಿತವಾಗಿ ಸಾಯಬೇಕು.
13 ೧೩ ಆದರೆ ಕೊಲ್ಲಬೇಕೆಂಬ ಯೋಚನೆಯಿಲ್ಲದೆ ದೇವರ ಸಂಕಲ್ಪದಿಂದ ಆ ಕೊಲೆ ನಡೆದಿದೆಯಾದರೆ, ಆ ಕೊಲೆಮಾಡಿದವನು ಓಡಿಹೋಗುವಂತೆ ಅವನಿಗೆ ನಾನು ಒಂದು ಸ್ಥಳವನ್ನು ನೇಮಿಸುವೆನು.
ಆದರೆ ಕೊಲ್ಲಬೇಕೆಂಬ ಯೋಚನೆ ಇಲ್ಲದೆ ದೇವರು ಅನುಮತಿಸಿದ್ದರಿಂದ ಕೊಲೆಯಾದರೆ, ಕೊಂದವನು ಓಡಿಹೋಗುವಂತೆ ಅವನಿಗೆ ಒಂದು ಸ್ಥಳವನ್ನು ನಾನು ನೇಮಿಸುವೆನು.
14 ೧೪ ಆದರೆ ಒಬ್ಬನು ತನ್ನ ನೆರೆಯವನನ್ನು ಕೊಲ್ಲಬೇಕೆಂಬ ಉದ್ದೇಶದಿಂದಲೇ ಅವನನ್ನು ಮೋಸದಿಂದ ಕೊಂದರೆ, ಅವನು ಸಾಯುವಂತೆ ನೀನು ಅವನನ್ನು ನನ್ನ ಯಜ್ಞವೇದಿಯ ಬಳಿಯಿಂದ ಕರೆದುಕೊಂಡು ಹೋಗಿ ಕೊಂದುಹಾಕಬೇಕು.
ಆದರೆ ಒಬ್ಬನು ಮತ್ತೊಬ್ಬನನ್ನು ಕೊಲ್ಲಬೇಕೆಂಬ ಉದ್ದೇಶ ಇಟ್ಟುಕೊಂಡು ಮೋಸದಿಂದ ಕೊಂದರೆ, ಅವನು ಸಾಯುವಂತೆ ನೀನು ಅವನನ್ನು ನನ್ನ ಬಲಿಪೀಠದಿಂದ ದೂರ ತೆಗೆದುಕೊಂಡುಹೋಗಿ ಕೊಂದುಹಾಕಬೇಕು.
15 ೧೫ ಯಾರಾದರೂ ತನ್ನ ತಂದೆಯನ್ನಾಗಲಿ ತಾಯಿಯನ್ನಾಗಲಿ ಹೊಡೆದರೆ ಖಂಡಿತವಾಗಿ ಅವನು ಸಾಯಲೇಬೇಕು.
“ತಂದೆತಾಯಿಗಳನ್ನು ಹೊಡೆಯುವವನು ಖಂಡಿತವಾಗಿ ಮರಣದಂಡನೆ ಹೊಂದಬೇಕು.
16 ೧೬ ಯಾರಾದರೂ ಒಬ್ಬ ಮನುಷ್ಯನನ್ನು ಅಪಹರಿಸಿಕೊಂಡು ಹೋಗಿ ಮಾರಿದರೆ ಅಥವಾ ಅವನು ಬಂಧಿಸಲ್ಪಟ್ಟಾಗ, ಅಪಹರಿಸಲ್ಪಟ್ಟವನು ಅವನೊಂದಿಗಿದ್ದರೆ ಅವನಿಗೆ ಮರಣಶಿಕ್ಷೆಯಾಗಬೇಕು.
“ಒಬ್ಬನು ಮತ್ತೊಬ್ಬನನ್ನು ಅಪಹರಿಸಿಕೊಂಡು ಹೋಗಿ ಮಾರಿದರೆ, ಇಲ್ಲವೆ ಅವನು ಬಂಧನಕ್ಕೊಳಗಾದಾಗ ಅಪಹರಿಸಲಾದವನು ಅವನೊಂದಿಗಿದ್ದರೆ, ಅವನನ್ನು ಮರಣದಂಡನೆಗೆ ಗುರಿಮಾಡಬೇಕು.
17 ೧೭ ತಂದೆಯನ್ನಾಗಲಿ ತಾಯಿಯನ್ನಾಗಲಿ ಶಪಿಸುವವನಿಗೆ ಮರಣಶಿಕ್ಷೆಯಾಗಬೇಕು.
“ತಂದೆಗಾದರೂ ತಾಯಿಗಾದರೂ ಶಾಪಕೊಟ್ಟವನು ಖಂಡಿತವಾಗಿ ಸಾಯಬೇಕು.
18 ೧೮ ಇಬ್ಬರು ಜಗಳವಾಡುತ್ತಿರುವಲ್ಲಿ ಒಬ್ಬನು ಮತ್ತೊಬ್ಬನನ್ನು ಕಲ್ಲಿನಿಂದಾಗಲಿ, ಮುಷ್ಠಿಯಿಂದಾಗಲೀ ಹೊಡೆದಿದ್ದರಿಂದ ಗಾಯಪಟ್ಟವನು ಸಾಯದೆ ಕೆಲವು ಕಾಲ ಹಾಸಿಗೆ ಹಿಡಿದು,
“ಇಬ್ಬರು ಜಗಳವಾಡುವಾಗ ಒಬ್ಬನು ಮತ್ತೊಬ್ಬನನ್ನು ಕಲ್ಲಿನಿಂದಾಗಲಿ, ಮುಷ್ಟಿಯಿಂದಾಗಲಿ ಹೊಡೆದದ್ದರಿಂದ ಅವನು ಸಾಯದೆ ಗಾಯಗೊಂಡು, ಹಾಸಿಗೆ ಹಿಡಿದು, ಕ್ರಮೇಣ
19 ೧೯ ತರುವಾಯ ಅವನು ಎದ್ದು ಕೋಲೂರಿಕೊಂಡು ತಿರುಗಾಡುವುದಾದರೆ ಅವನನ್ನು ಹೊಡೆದವನಿಗೆ ಶಿಕ್ಷೆಯನ್ನು ವಿಧಿಸಬಾರದು. ಆದರೆ ಪೆಟ್ಟುತಿಂದ ಮನುಷ್ಯನು ಗುಣಹೊಂದುವವರೆಗೂ ಆಗುವ ಖರ್ಚನ್ನು ಹೊಡೆದವನು ಕೊಡಬೇಕು ಮತ್ತು ಅವನು ಪೂರ್ಣ ಸ್ವಸ್ಥನಾಗುವಂತೆ ಮಾಡಬೇಕು.
ಅವನು ಎದ್ದು ಕೋಲೂರಿಕೊಂಡು ತಿರುಗಾಡುವುದಾದರೆ, ಅವನನ್ನು ಹೊಡೆದವನು ಅಪರಾಧವಿಲ್ಲದೆ ಹೋಗಬೇಕು. ಪೆಟ್ಟು ತಿಂದವನು ಗುಣಹೊಂದುವವರೆಗೆ ಆಗುವ ಖರ್ಚನ್ನು ಹೊಡೆದವನು ಕೊಡಬೇಕು ಮತ್ತು ಅವನನ್ನು ಪೂರ್ಣ ಸ್ವಸ್ಥನಾಗುವಂತೆ ಮಾಡಬೇಕು.
20 ೨೦ ಒಬ್ಬನು ತನ್ನ ದಾಸನನ್ನಾಗಲಿ, ದಾಸಿಯನ್ನಾಗಲಿ ಕೋಲಿನಿಂದ ಹೊಡೆದು ಸಾಯುವಂತೆ ಹೊಡೆದರೆ, ಅವನಿಗೆ ತಕ್ಕ ಶಿಕ್ಷೆಯಾಗಬೇಕು.
“ಒಬ್ಬನು ದಾಸನನ್ನಾಗಲಿ, ದಾಸಿಯನ್ನಾಗಲಿ ಸಾಯುವಂತೆ ಕೋಲಿನಿಂದ ಹೊಡೆದಾಗ, ಹೊಡೆದವನಿಗೆ ಖಂಡಿತವಾಗಿ ಶಿಕ್ಷೆಯಾಗಬೇಕು.
21 ೨೧ ಆ ದಾಸನು ಆಗಲೇ ಸಾಯದೆ ಒಂದೆರಡು ದಿನ ಬದುಕಿದ್ದರೆ, ಯಜಮಾನನಿಗೆ ಶಿಕ್ಷೆಯನ್ನು ವಿಧಿಸಕೂಡದು. ಏಕೆಂದರೆ ಆ ದಾಸನು ಅವನ ಸೊತ್ತಾಗಿದ್ದಾನೆ.
ದಾಸದಾಸಿಯರು ಒಂದೆರಡು ದಿನಗಳ ನಂತರ ಉಳಿದರೆ ಶಿಕ್ಷೆಯಾಗಬಾರದು. ಏಕೆಂದರೆ ಅವರು ಅವನ ಸೊತ್ತು.
22 ೨೨ ಗಂಡಸರು ಜಗಳವಾಡುವಾಗ ಗರ್ಭಿಣಿಯಾದ ಹೆಂಗಸಿಗೆ ಏಟು ತಗಲಿದ್ದರಿಂದ ಅವಳಿಗೆ ಗರ್ಭಸ್ರಾವವಾದರೆ, ಆ ಸ್ತ್ರೀಯ ಗಂಡನು ಕೇಳಿದಷ್ಟು ಮತ್ತು ನ್ಯಾಯಾಲಯವು ವಿಧಿಸುವಷ್ಟು ದಂಡವನ್ನು ಹೊಡೆದವನು ಕೊಡಬೇಕು.
“ಜನರು ಜಗಳವಾಡುವಾಗ ಗರ್ಭಿಣಿಯಾದ ಸ್ತ್ರೀಗೆ ಏಟು ತಗಲಿ ಗರ್ಭಸ್ರಾವವಾದರೆ, ಆ ಸ್ತ್ರೀಯ ಗಂಡನು ಕೇಳಿದಷ್ಟು ಮತ್ತು ನ್ಯಾಯಾಲಯವು ವಿಧಿಸುವಷ್ಟು ದಂಡವನ್ನು ಹೊಡೆದವನು ಕೊಡಬೇಕು.
23 ೨೩ ಬೇರೆ ಹಾನಿಯಾದ ಪಕ್ಷದಲ್ಲಿ ಪ್ರಾಣಕ್ಕೆ ಪ್ರತಿಯಾಗಿ ಪ್ರಾಣವನ್ನು ಕೊಡಬೇಕು.
ಬೇರೆ ಹಾನಿಯಾದ ಪಕ್ಷದಲ್ಲಿ ಪ್ರಾಣಕ್ಕೆ ಪ್ರಾಣವನ್ನು, ಕಣ್ಣಿಗೆ ಕಣ್ಣನ್ನು,
24 ೨೪ ಕಣ್ಣಿಗೆ ಕಣ್ಣನ್ನು, ಹಲ್ಲಿಗೆ ಹಲ್ಲನ್ನು, ಕೈಗೆ ಕೈಯನ್ನು, ಕಾಲಿಗೆ ಕಾಲನ್ನು,
ಹಲ್ಲಿಗೆ ಹಲ್ಲು, ಕೈಗೆ ಕೈಯನ್ನು, ಕಾಲಿಗೆ ಕಾಲನ್ನು,
25 ೨೫ ಬರೆಗೆ ಬರೆಯನ್ನು, ಗಾಯಕ್ಕೆ ಗಾಯವನ್ನು, ಏಟಿಗೆ ಏಟನ್ನು ಪ್ರತಿಯಾಗಿ ಕೊಡಬೇಕು.
ಸುಟ್ಟ ಗಾಯಕ್ಕೆ ಸುಟ್ಟಗಾಯವನ್ನು, ಕಡಿದ ಗಾಯಕ್ಕೆ ಕಡಿದ ಗಾಯವನ್ನು, ಹೊಡೆದ ಗಾಯಕ್ಕೆ ಹೊಡೆದು ಗಾಯವನ್ನು ನೀನು ಮಾಡಬೇಕು.
26 ೨೬ ಯಾವನಾದರೂ ತನ್ನ ದಾಸನ ಅಥವಾ ದಾಸಿಯ ಕಣ್ಣನ್ನು ಹೊಡೆದು ನಷ್ಟಪಡಿಸಿದರೆ ಆ ಕಣ್ಣಿಗೆ ಈಡಾಗಿ (ಬದಲಾಗಿ) ಅವರನ್ನು ಅವನು ಬಿಡುಗಡೆಮಾಡಿ ಕಳುಹಿಸಬೇಕು.
“ಒಬ್ಬನು ದಾಸನ ಕಣ್ಣನ್ನು ಇಲ್ಲವೆ ದಾಸಿಯ ಕಣ್ಣನ್ನು ಹೊಡೆದು ನಷ್ಟಪಡಿಸಿದರೆ, ಆ ಕಣ್ಣಿಗೋಸ್ಕರ ಅವರನ್ನು ಅವನು ಬಿಡುಗಡೆ ಮಾಡಿ ಕಳುಹಿಸಲಿ.
27 ೨೭ ಒಬ್ಬನು ದಾಸನ ಅಥವಾ ದಾಸಿಯ ಹಲ್ಲನ್ನು ಉದುರಿಸಿದರೆ ಹಲ್ಲಿಗೆ ಈಡಾಗಿ ಅವರನ್ನು ಬಿಡುಗಡೆಮಾಡಿ ಕಳುಹಿಸಬೇಕು.
ಒಬ್ಬನು ದಾಸನ ಹಲ್ಲನ್ನು, ಇಲ್ಲವೆ ದಾಸಿಯ ಹಲ್ಲನ್ನು ಉದುರಿಸಿದರೆ, ಹಲ್ಲಿಗೋಸ್ಕರ ಅವರನ್ನು ಬಿಡುಗಡೆ ಮಾಡಿ ಕಳುಹಿಸಲಿ.
28 ೨೮ ಯಾವುದಾದರೂ ಒಂದು ಎತ್ತು ಪುರುಷನನ್ನಾಗಲಿ, ಸ್ತ್ರೀಯನ್ನಾಗಲಿ, ತಿವಿದು ಕೊಂದರೆ ಆ ಎತ್ತನ್ನು ಖಂಡಿತವಾಗಿ ಕಲ್ಲೆಸೆದು ಕೊಲ್ಲಬೇಕು. ಅದರ ಮಾಂಸವನ್ನು ತಿನ್ನಬಾರದು. ಆದರೆ ಆ ಎತ್ತಿನ ಯಜಮಾನನು ನಿರಪರಾಧಿಯಾಗಿರಬೇಕು.
“ಯಾವುದಾದರೂ ಒಂದು ಎತ್ತು ಪುರುಷನನ್ನಾಗಲಿ, ಸ್ತ್ರೀಯನ್ನಾಗಲಿ ಹಾಯ್ದು ಕೊಂದರೆ, ಆ ಎತ್ತನ್ನು ಖಂಡಿತವಾಗಿ ಕಲ್ಲೆಸೆದು ಕೊಲ್ಲಬೇಕು. ಅದರ ಮಾಂಸವನ್ನು ತಿನ್ನಬಾರದು. ಆ ಎತ್ತಿನ ಯಜಮಾನನು ನಿರಪರಾಧಿ.
29 ೨೯ ಆದರೆ ಆ ಎತ್ತು ಮೊದಲಿನಿಂದ ಹಾಯುವಂಥದೆಂದು ಯಜಮಾನನಿಗೆ ತಿಳಿದಿದ್ದರೂ ಅವನು ಅದನ್ನು ಕಟ್ಟಿಹಾಕದೇ ಹೋದದ್ದರಿಂದ ಅದು ಪುರುಷನನ್ನಾಗಲಿ, ಸ್ತ್ರೀಯನ್ನಾಗಲಿ ಕೊಂದು ಹಾಕಿದರೆ ಆ ಎತ್ತನ್ನು ಕಲ್ಲೆಸೆದು ಕೊಲ್ಲಬೇಕು. ಅಲ್ಲದೆ ಅದರ ಯಜಮಾನನೂ ಮರಣದಂಡನೆಗೆ ಗುರಿಯಾಗುವನು.
ಆದರೆ ಆ ಎತ್ತು ಮೊದಲಿನಿಂದ ಹಾಯುವಂಥದ್ದೆಂದು ಯಜಮಾನನಿಗೆ ತಿಳಿದಿದ್ದರೂ ಅವನು ಅದನ್ನು ಕಟ್ಟಿಹಾಕದೆ ಇದ್ದುದರಿಂದ ಅದು ಪುರುಷನನ್ನಾಗಲಿ, ಸ್ತ್ರೀಯನ್ನಾಗಲಿ ಕೊಂದುಹಾಕಿದರೆ, ಆ ಎತ್ತನ್ನು ಕಲ್ಲೆಸೆದು ಕೊಲ್ಲಬೇಕು. ಆದರೆ ಯಜಮಾನನೂ ಮರಣದಂಡನೆಗೆ ಗುರಿಯಾಗುವನು.
30 ೩೦ ಆದರೆ ಯಜಮಾನನಿಗೆ ಹಣವನ್ನು ನೇಮಿಸಿದರೆ ಅವನು ತನಗೆ ನೇಮಕವಾದ ಹಣವನ್ನು ಕೊಟ್ಟು ತನ್ನ ಪ್ರಾಣವನ್ನು ಉಳಿಸಿಕೊಳ್ಳಲಿ.
ಒಂದು ವೇಳೆ ಅವನಿಗೆ ಪ್ರಾಯಶ್ಚಿತ್ತವನ್ನು ನೇಮಿಸಿದರೆ, ಅವನು ತನಗೆ ನೇಮಿಸಿದ್ದನ್ನೆಲ್ಲಾ ತನ್ನ ಪ್ರಾಣವಿಮೋಚನೆಗಾಗಿ ಕೊಡಲಿ.
31 ೩೧ ಆ ಎತ್ತು ಮಗನನ್ನಾಗಲಿ ಅಥವಾ ಮಗಳನ್ನಾಗಲಿ ತಿವಿದರೆ ನ್ಯಾಯತೀರ್ಪಿನ ಪ್ರಕಾರ ಅದರ ಯಜಮಾನನಿಗೆ ಮಾಡಬೇಕು.
ಅದು ಮಗನನ್ನು ಹಾಯ್ದಿದ್ದರೂ, ಮಗಳನ್ನು ಹಾಯ್ದಿದ್ದರೂ ಈ ನ್ಯಾಯತೀರ್ಪಿನ ಪ್ರಕಾರ ಅದರ ಯಜಮಾನನಿಗೆ ಮಾಡಬೇಕು.
32 ೩೨ ದಾಸನನ್ನಾದರೂ ಅಥವಾ ದಾಸಿಯನ್ನಾದರೂ ಎತ್ತು ತಿವಿದರೆ ದಾಸನ ಅಥವಾ ದಾಸಿಯ ಯಜಮಾನನಿಗೆ ಮೂವತ್ತು ಬೆಳ್ಳಿನಾಣ್ಯಗಳನ್ನು ಕೊಡಬೇಕು, ಮತ್ತು ಆ ಎತ್ತನ್ನು ಕಲ್ಲೆಸೆದು ಕೊಲ್ಲಬೇಕು.
ದಾಸನನ್ನಾದರೂ, ದಾಸಿಯನ್ನಾದರೂ ಎತ್ತು ಹಾಯ್ದರೆ, ದಾಸನ, ದಾಸಿಯ ಯಜಮಾನನಿಗೆ ಮೂವತ್ತು ಬೆಳ್ಳಿ ನಾಣ್ಯಗಳನ್ನು ಕೊಡಬೇಕು ಮತ್ತು ಎತ್ತನ್ನು ಕಲ್ಲೆಸೆದು ಕೊಲ್ಲಬೇಕು.
33 ೩೩ ಒಬ್ಬನು ಗುಂಡಿಯನ್ನು ಅಗೆದರೆ ಇಲ್ಲವೆ ಅಗೆದು ಅದನ್ನು ಮುಚ್ಚದೇ ಇದ್ದು ಅದರಲ್ಲಿ ಎತ್ತಾಗಲಿ, ಕತ್ತೆಯಾಗಲಿ ಆ ಗುಂಡಿಯಲ್ಲಿ ಬಿದ್ದು ಸತ್ತರೆ,
“ಗುಂಡಿಯನ್ನು ಅಗೆದವನು ಅದನ್ನು ಮುಚ್ಚದೆ ಇದ್ದುದರಿಂದ ಎತ್ತಾದರೂ ಕತ್ತೆಯಾದರೂ ಆ ಗುಂಡಿಯಲ್ಲಿ ಬಿದ್ದು ಸತ್ತರೆ,
34 ೩೪ ಆ ಗುಂಡಿಯನ್ನು ಅಗೆಸಿದವನು ಉಂಟಾದ ನಷ್ಟಕ್ಕೆ ಪ್ರತಿಯಾಗಿ ಈಡು ಕೊಡಬೇಕು. ಎತ್ತಿನ ಯಜಮಾನನಿಗೆ ತೃಪ್ತಿಯಾಗುವಷ್ಟು ಕ್ರಯವನ್ನು ಕೊಡಬೇಕು. ಸತ್ತ ಎತ್ತನ್ನು ತಾನೇ ತೆಗೆದುಕೊಳ್ಳಬಹುದು.
ಗುಂಡಿಯನ್ನು ಅಗೆದವನು ಈಡು ಕೊಡಬೇಕು. ಅವುಗಳ ಯಜಮಾನನಿಗೆ ಕ್ರಯ ನೀಡಬೇಕು. ಆದರೆ ಸತ್ತ ಪಶು ಅವನದಾಗಬೇಕು.
35 ೩೫ ಒಬ್ಬನ ಎತ್ತು ಮತ್ತೊಬ್ಬನ ಎತ್ತನ್ನು ಹಾಯ್ದು ಕೊಂದರೆ ಜೀವದಿಂದಿರುವ ಎತ್ತನ್ನು ಮಾರಿ ಅದರ ಕ್ರಯವನ್ನು ಕೊಡಬೇಕು. ಸತ್ತ ಎತ್ತನ್ನೂ ಇಬ್ಬರೂ ಸಮವಾಗಿ ಹಂಚಿಕೊಳ್ಳಬೇಕು.
“ಒಬ್ಬನ ಎತ್ತು ಮತ್ತೊಬ್ಬನ ಎತ್ತನ್ನು ಹಾಯ್ದು ಕೊಂದರೆ, ಜೀವದಿಂದಿರುವ ಎತ್ತನ್ನು ಮಾರಿ ಅದರ ಕ್ರಯವನ್ನೂ, ಸತ್ತ ಎತ್ತನ್ನೂ ಸರಿಯಾಗಿ ಇಬ್ಬರೂ ಪಾಲುಮಾಡಿಕೊಳ್ಳಬೇಕು.
36 ೩೬ ಆದರೆ ಆ ಎತ್ತು ಮೊದಲಿನಿಂದಲೂ ಹಾಯುವಂಥದ್ದೇ ಎಂದು ಅದರ ಯಜಮಾನನಿಗೆ ತಿಳಿದಿದ್ದರೂ ಅದನ್ನು ಕಟ್ಟಿಹಾಕದೇ ಹೋದದ್ದರಿಂದ ಅವನು ಎತ್ತಿಗೆ ಪ್ರತಿಯಾಗಿ ಎತ್ತನ್ನು ಖಂಡಿತವಾಗಿ ಬದಲು ಕೊಡಬೇಕು. ಆದರೆ ಸತ್ತ ಎತ್ತನ್ನು ತಾನೇ ತೆಗೆದುಕೊಳ್ಳಬಹುದು.
ಇಲ್ಲವೆ ಆ ಎತ್ತು ಮೊದಲಿನಿಂದಲೂ ಹಾಯುವಂಥದ್ದೇ ಎಂದು ತಿಳಿದಿದ್ದರೂ, ಅದರ ಯಜಮಾನನು ಅದನ್ನು ಕಟ್ಟಿಹಾಕದೆ ಹೋಗಿದ್ದರೆ, ಎತ್ತಿಗೆ ಎತ್ತನ್ನು ಖಂಡಿತವಾಗಿ ಬದಲುಕೊಡಬೇಕು. ಆದರೆ ಸತ್ತ ಪಶುವನ್ನು ಅವನು ತೆಗೆದುಕೊಳ್ಳಬಹುದು.

< ವಿಮೋಚನಕಾಂಡ 21 >