< ಆಮೋಸನು 5 >

1 ಇಸ್ರಾಯೇಲ್ ವಂಶದವರೇ, ನಾನು ನಿಮ್ಮ ವಿಷಯದಲ್ಲಿ ಶೋಕಗೀತವಾಗಿ ಹಾಡುವ ಈ ಮಾತನ್ನು ಕೇಳಿರಿ:
ಇಸ್ರಾಯೇಲಿನ ಜನರೇ, ನಿಮ್ಮನ್ನು ಕುರಿತು ನಾನು ಹಾಡುವ ಈ ಶೋಕಗೀತೆಯ ವಾಕ್ಯವನ್ನು ಕೇಳಿರಿ:
2 ಇಸ್ರಾಯೇಲೆಂಬ ಯುವತಿಯು ಬಿದ್ದಿದ್ದಾಳೆ; ಮತ್ತೆ ಏಳುವುದೇ ಇಲ್ಲ; ದಿಕ್ಕಿಲ್ಲದೆ ತನ್ನ ನೆಲದ ಮೇಲೆ ಒರಗಿದ್ದಾಳೆ; ಅವಳನ್ನು ಎತ್ತಲು ಯಾರೂ ಇಲ್ಲ.
“ಇಸ್ರಾಯೇಲ್ ಎಂಬ ಕನ್ಯೆಯು ಬಿದ್ದಿದ್ದಾಳೆ. ಇನ್ನು ಮೇಲೆ ಎದ್ದೇಳುವುದೇ ಇಲ್ಲ. ಅವಳು ದಿಕ್ಕಿಲ್ಲದೆ ತನ್ನ ಭೂಮಿಯ ಮೇಲೆ ಒರಗಿದ್ದಾಳೆ. ಅಲ್ಲಿ ಅವಳನ್ನು ಎಬ್ಬಿಸುವವರು ಯಾರೂ ಇಲ್ಲ.”
3 ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಒಂದು ಪಟ್ಟಣದಿಂದ ಯುದ್ಧಕ್ಕೆ ಹೊರಟ ಸಾವಿರ ಸೈನಿಕರಲ್ಲಿ ನೂರು ಮಂದಿ ಉಳಿಯುವರು, ಒಂದು ಊರಿನಿಂದ ಹೊರಟ ನೂರು ಸೈನಿಕರಲ್ಲಿ ಇಸ್ರಾಯೇಲರ ವಂಶಕ್ಕೆ ಹತ್ತು ಜನ ನಿಲ್ಲುವರು.”
ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: “ಯುದ್ಧಕ್ಕೆ ಹೊರಟ ಸಾವಿರ ಮಂದಿ ಸೈನಿಕರಲ್ಲಿ, ಪಟ್ಟಣಕ್ಕೆ ಮರಳಿದವರು ನೂರೇ ಮಂದಿ. ರಣರಂಗಕ್ಕೆ ಹೊರಟ ನೂರು ಮಂದಿ ಯೋಧರಲ್ಲಿ, ಇಸ್ರಾಯೇಲಿಗೆ ಮರಳಿದವರು ಹತ್ತೇ ಮಂದಿ.”
4 ಯೆಹೋವನು ಇಸ್ರಾಯೇಲರ ವಂಶಕ್ಕೆ ಹೀಗೆ ನುಡಿಯುತ್ತಾನೆ: “ನೀವು ನನ್ನನ್ನು ಆಶ್ರಯಿಸಿ ಬದುಕಿಕೊಳ್ಳಿರಿ!
ಯೆಹೋವ ದೇವರು ಇಸ್ರಾಯೇಲಿನ ಮನೆಯವರಿಗೆ ಹೀಗೆ ಹೇಳುತ್ತಾರೆ: “ನೀವು ನನ್ನನ್ನು ಹುಡುಕಿರಿ ಮತ್ತು ಬದುಕಿಕೊಳ್ಳಿರಿ.
5 ಬೇತೇಲನ್ನು ಆಶ್ರಯಿಸಬೇಡಿರಿ; ಗಿಲ್ಗಾಲನ್ನು ಸೇರಬೇಡಿರಿ; ಬೇರ್ಷೆಬಕ್ಕೆ ಯಾತ್ರೆ ಹೋಗಬೇಡಿರಿ. ಗಿಲ್ಗಾಲು ನಿಶ್ಚಯವಾಗಿ ಸೆರೆಗೆ ಹೋಗುವುದು. ಬೇತೇಲು ಬಯಲಾಗುವುದು.
ಆದರೆ ಬೇತೇಲನ್ನು ಹುಡುಕಬೇಡಿರಿ. ಗಿಲ್ಗಾಲಿಗೆ ಹೋಗಬೇಡಿರಿ. ಬೇರ್ಷೆಬಕ್ಕೆ ಯಾತ್ರೆ ಹೋಗಬೇಡಿರಿ. ಏಕೆಂದರೆ ಗಿಲ್ಗಾಲು ಸೆರೆಗೆ ನಿಶ್ವಯವಾಗಿ ಹೋಗುವುದು, ಬೇತೇಲಿನ ಬಾಧೆಗಳು ಕೊನೆಗೊಳ್ಳುವುದಿಲ್ಲ.”
6 ಯೆಹೋವನ ಕಡೆಗೆ ತಿರುಗಿಕೊಂಡು ಬದುಕಿರಿ, ತಿರುಗಿಕೊಳ್ಳದಿದ್ದರೆ ಆತನು ಬೆಂಕಿಯೋಪಾದಿಯಲ್ಲಿ ಯೋಸೇಫನ ವಂಶದೊಳಗೆ ಪ್ರವೇಶಿಸುವನು. ಅದು ದಹಿಸಿಬಿಡುವುದು, ಅದನ್ನು ಆರಿಸುವುದಕ್ಕೆ ಬೇತೇಲಿನಲ್ಲಿ ಯಾರೂ ಇರುವುದಿಲ್ಲ.
ನೀವು ಯೆಹೋವ ದೇವರನ್ನು ಹುಡುಕಿರಿ ಮತ್ತು ಬದುಕಿರಿ. ಇಲ್ಲದಿದ್ದರೆ, ಆತನು ಬೆಂಕಿಯಂತೆ ಯೋಸೇಫನ ಗೋತ್ರಗಳಲ್ಲಿ ಪ್ರವೇಶಿಸುವನು. ಅದು ದಹಿಸಿಬಿಡುವುದು, ಅದನ್ನು ಆರಿಸುವವರು ಬೇತೇಲಿನಲ್ಲಿ ಯಾರೂ ಇರುವುದಿಲ್ಲ.
7 ಅವರು ನ್ಯಾಯವನ್ನು ಕಹಿಮಾಡುವವರು ಮತ್ತು ಧರ್ಮವನ್ನು ನೆಲಕ್ಕೆ ಕೆಡವಿಬಿಡುವವರು!”
ನ್ಯಾಯವನ್ನು ಕಹಿಯಾಗಿ ತಿರುಗಿಸುವವರೇ, ನೀತಿಯನ್ನು ಭೂಮಿಯಲ್ಲಿ ಬಿಡುವವರೇ.
8 ಕೃತ್ತಿಕಾ ಮತ್ತು ಒರಿಯನ್ ಎಂಬ ಪ್ರಕಾಶಮಾನವಾದ ನಕ್ಷತ್ರಗಳನ್ನು ಸೃಷ್ಟಿಸಿ, ಕಾರ್ಗತ್ತಲನ್ನು ಬೆಳಕನ್ನಾಗಿ ಮಾಡಿ, ಹಗಲನ್ನು ಇರುಳಾಗಿ ಮಾರ್ಪಡಿಸಿ, ಸಾಗರದ ಜಲವನ್ನು ಬರಮಾಡಿಕೊಂಡು, ಭೂಮಂಡಲದ ಮೇಲೆ ಸುರಿಯುವಾತನ ಕಡೆಗೆ ತಿರುಗಿಕೊಳ್ಳಿರಿ, ಯೆಹೋವನೆಂಬುದೇ ಆತನ ನಾಮಧೇಯ!
ವೃಷಭ ರಾಶಿಯನ್ನೂ, ಮೃಗಶಿರವನ್ನೂ ಉಂಟು ಮಾಡಿದವನನ್ನೂ ಕಾರ್ಗತ್ತಲನ್ನು ಉದಯಕ್ಕೆ ಬದಲಿಸಿ, ಹಗಲನ್ನು ರಾತ್ರಿಯಾಗುವ ಹಾಗೆ ಕತ್ತಲೆ ಮಾಡಿ, ಸಮುದ್ರದ ನೀರನ್ನು ಬರಮಾಡಿ, ಅವುಗಳನ್ನು ಭೂಮಿಯ ಮೇಲೆ ಸುರಿಸುವ ಯೆಹೋವ ದೇವರು ಎಂಬ ಹೆಸರುಳ್ಳವರನ್ನೇ ಹುಡುಕಿರಿ.
9 ಬಲಿಷ್ಠರಿಗೆ ಧ್ವಂಸವನ್ನು ತಟ್ಟನೇ ತಂದೊಡ್ಡಿ, ಕೋಟೆಗೆ ನಾಶನವನ್ನು ತರುವವನು ಆತನೇ.
ಕಣ್ಣು ಮಿಟುಕಿಸುವುದರಲ್ಲಿ ಅವರು ಕೋಟೆಯನ್ನು ನಾಶಪಡಿಸುತ್ತಾರೆ ಮತ್ತು ಕೋಟೆಯ ನಗರವನ್ನು ವಿನಾಶಪಡಿಸುತ್ತಾರೆ.
10 ೧೦ ಕಂಡ ದೋಷವನ್ನು ಚಾವಡಿಯಲ್ಲಿ ಖಂಡಿಸುವವನ ಮೇಲೆ ಹಗೆತೋರಿಸುತ್ತೀರಿ, ಯಥಾರ್ಥರನ್ನು ದ್ವೇಷಿಸುತ್ತೀರಿ.
ಸಭೆಯಲ್ಲಿ ದೋಷವನ್ನು ಎತ್ತಿ ತೋರಿಸುವವನನ್ನು ನೀವು ದ್ವೇಷಿಸುತ್ತೀರಿ. ನಿಮ್ಮ ವಿಷಯವಾಗಿ ಸತ್ಯವನ್ನು ಹೇಳುವವನನ್ನೇ ಹೀನೈಸುತ್ತೀರಿ.
11 ೧೧ ನೀವು ಬಡವರನ್ನು ತುಳಿದು, ಅವರಿಂದ ಗೋದಿಯನ್ನು ಬಿಟ್ಟಿ ತೆಗೆದುಕೊಂಡ ಕಾರಣ ಕೆತ್ತಿದ ಕಲ್ಲಿನಿಂದ ನೀವು ಕಟ್ಟಿಕೊಂಡ ಮನೆಗಳಲ್ಲಿ, ವಾಸಿಸದೆ ಇರುವಿರಿ. ಒಳ್ಳೆಯ ದ್ರಾಕ್ಷಿಯ ತೋಟಗಳನ್ನು ಮಾಡಿಕೊಂಡು, ಅದರ ದ್ರಾಕ್ಷಾರಸವನ್ನು ಕುಡಿಯುವಿರಿ.
ಆದಕಾರಣ ನೀವು ಬಡವನನ್ನು ತುಳಿದು ಅವರ ಧಾನ್ಯಕ್ಕೆ ತೆರಿಗೆ ವಿಧಿಸುತ್ತೀರಿ. ಆದ್ದರಿಂದ ನೀವು ಕೆತ್ತಿದ ಕಲ್ಲಿನ ಮನೆಗಳನ್ನು ಕಟ್ಟಿದ್ದೀರಿ. ಆದರೆ ನೀವು ಅವುಗಳಲ್ಲಿ ವಾಸ ಮಾಡದೇ ಇರುವಿರಿ. ರಮ್ಯವಾದ ದ್ರಾಕ್ಷಿತೋಟಗಳನ್ನು ನೆಟ್ಟಿರಲ್ಲಾ, ಆದರೆ ಅವುಗಳ ದ್ರಾಕ್ಷಾರಸವನ್ನು ಕುಡಿಯಲಾರಿರಿ.
12 ೧೨ ನೀತಿವಂತರನ್ನು ಹಿಂಸಿಸುವವರೇ, ಲಂಚತೆಗೆದುಕೊಳ್ಳುವವರೇ, ಚಾವಡಿಯಲ್ಲಿ ದರಿದ್ರರ ನ್ಯಾಯವನ್ನು ತಪ್ಪಿಸುವವರೇ. ನಿಮ್ಮ ದ್ರೋಹಗಳು ಬಹಳ, ನಿಮ್ಮ ಪಾಪಗಳು ನನಗೆ ಗೊತ್ತಿದೆ.
ಏಕೆಂದರೆ ನಿಮ್ಮ ಅನೇಕ ಅಪರಾಧಗಳನ್ನೂ, ನಿಮ್ಮ ಘೋರವಾದ ಪಾಪಗಳನ್ನೂ ನಾನು ಬಲ್ಲೆನು. ಅವರು ನಿರಪರಾಧಿಯನ್ನು ಬಾಧೆಪಡಿಸಿ, ಲಂಚವನ್ನು ತೆಗೆದುಕೊಂಡರು ಮತ್ತು ಬಾಗಿಲ ಬಳಿಯಲ್ಲಿರುವ ಬಡವರ ನ್ಯಾಯವನ್ನು ತೀರಿಸದೇ ಕಳುಹಿಸಿಬಿಟ್ಟಿರಿ.
13 ೧೩ ಇಂಥ ಕಾಲದಲ್ಲಿ ವಿವೇಕಿಯು ಸುಮ್ಮನಿರುವನು, ಇದು ದುಷ್ಟ ಕಾಲವೇ ಸರಿ.
ಆದ್ದರಿಂದ ಆ ಕಾಲದಲ್ಲಿ ಬುದ್ಧಿವಂತನು ಮೌನವಾಗಿರುವನು, ಏಕೆಂದರೆ ಅದು ಕೆಟ್ಟ ಕಾಲವಾಗಿದೆ.
14 ೧೪ ಕೆಟ್ಟದ್ದನಲ್ಲ ಒಳ್ಳೆಯದನ್ನು, ಅನುಸರಿಸಿ ಬಾಳಿರಿ. ನೀವು ಅಂದುಕೊಂಡಂತೆ, ಸೇನಾಧೀಶ್ವರ ದೇವರಾದ ಯೆಹೋವನು ನಿಮ್ಮ ಸಂಗಡ ಇರುವನು.
ನೀವು ಬದುಕುವ ಹಾಗೆ ಒಳ್ಳೆಯದನ್ನು ಹುಡುಕಿ, ಕೆಟ್ಟದ್ದನ್ನಲ್ಲ. ಆಗ ನೀವು ಹೇಳಿಕೊಳ್ಳುವಂತೆ ಸರ್ವಶಕ್ತರಾದ ಯೆಹೋವ ದೇವರು ನಿಮ್ಮ ಸಂಗಡ ಇರುವರು.
15 ೧೫ ಕೆಟ್ಟದ್ದನ್ನು ದ್ವೇಷಿಸಿರಿ, ಒಳ್ಳೆಯದನ್ನು ಪ್ರೀತಿಸಿರಿ, ಚಾವಡಿಯಲ್ಲಿ ನ್ಯಾಯವನ್ನು ಸ್ಥಾಪಿಸಿರಿ. ಒಂದು ವೇಳೆ ಸೇನಾಧೀಶ್ವರ ದೇವರಾದ ಯೆಹೋವನು ಯೋಸೇಫನ ವಂಶದಲ್ಲಿ ಉಳಿದವರಿಗೆ ಪ್ರಸನ್ನನಾದನು.
ಕೆಟ್ಟದ್ದನ್ನು ದ್ವೇಷಿಸಿರಿ, ಒಳ್ಳೆಯದನ್ನು ಪ್ರೀತಿಸಿರಿ, ಬಾಗಿಲಲ್ಲಿ ನ್ಯಾಯವನ್ನು ಸ್ಥಾಪಿಸಿರಿ. ಒಂದು ವೇಳೆ ಸರ್ವಶಕ್ತರಾದ ಯೆಹೋವ ದೇವರು ಯೋಸೇಫನ ಗೋತ್ರದಲ್ಲಿ ಉಳಿದವರಿಗೆ ಕನಿಕರಿಸಬಹುದು.
16 ೧೬ ಸೇನಾಧೀಶ್ವರ ದೇವರಾದ, ಯೆಹೋವನು ಇಂತೆನ್ನುತ್ತಾನೆ: “ಎಲ್ಲಾ ಚೌಕಗಳಲ್ಲಿ ಕಿರುಚಾಟವಾಗುವುದು ಮತ್ತು ಸಕಲ ಬೀದಿಗಳಲ್ಲಿ, ‘ಅಯ್ಯೋ! ಅಯ್ಯೋ!’ ಎಂದು ಅರಚಿಕೊಳ್ಳುವರು. ರೈತರನ್ನು ಪ್ರಲಾಪಿಸುವುದಕ್ಕೂ ಗೋಳಾಟದವರನ್ನು ಗೋಳಾಡುವುದಕ್ಕೂ ಕರೆಯುವರು.
ಆದ್ದರಿಂದ ಸರ್ವಶಕ್ತ ದೇವರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ: “ಎಲ್ಲಾ ಬೀದಿಗಳಲ್ಲೂ ವಿಲಾಪಗಳು, ಎಲ್ಲಾ ಸಾರ್ವಜನಿಕ ಚೌಕದಲ್ಲಿ ದುಃಖದ ಗೋಳಾಟಗಳು ಎನ್ನುವರು. ರೈತರನ್ನು ಕಣ್ಣೀರಿಡುವುದಕ್ಕೂ ಶೋಕವೃತ್ತಿಯವರನ್ನು, ಗೋಳಾಡುವುದಕ್ಕೂ ಕರೆಯಲಾಗುವುದು.
17 ೧೭ ಎಲ್ಲಾ ದ್ರಾಕ್ಷಿಯ ತೋಟಗಳಲ್ಲಿ ರೋದನವಾಗುವುದು. ಏಕೆಂದರೆ ನಾನು ನಿಮ್ಮ ನಡುವೆ ಸಂಹಾರಕನಾಗಿ ಹಾದುಹೋಗುವೆನು” ಇದು ಯೆಹೋವನ ನುಡಿ.
ಎಲ್ಲಾ ದ್ರಾಕ್ಷಿ ತೋಟಗಳಲ್ಲೂ ಗೋಳಾಟವು ಇರುವುದು. ಏಕೆಂದರೆ ನಾನು ನಿನ್ನ ಮಧ್ಯೆ ಹಾದು ಹೋಗುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ.
18 ೧೮ ಯೆಹೋವನ ದಿನವನ್ನು ನಿರೀಕ್ಷಿಸಿಕೊಂಡವರೇ, ನಿಮ್ಮ ಗತಿಯನ್ನು ಏನು ಹೇಳಲಿ! ಯೆಹೋವನ ದಿನವು ನಿಮಗೇಕೆ? ಅದು ಬೆಳಕಲ್ಲ ಕತ್ತಲೆಯೇ.
ಯೆಹೋವ ದೇವರ ದಿನವನ್ನು ಅಪೇಕ್ಷಿಸುವವರೇ, ಅಯ್ಯೋ ನಿಮಗೆ ಕಷ್ಟ! ಆ ದಿನವನ್ನು ನೀವು ಅಪೇಕ್ಷಿಸುವುದೇಕೆ? ಯೆಹೋವ ದೇವರ ದಿವಸವು ನಿಮಗೆ ಬೆಳಕಲ್ಲ, ಕತ್ತಲೆಯೇ.
19 ೧೯ ಸಿಂಹದ ಕಡೆಯಿಂದ ಓಡಿದವನಿಗೆ, ಕರಡಿಯು ಎದುರುಬಿದ್ದಂತಾಗುವುದು, ಅವನು ಮನೆಗೆ ಓಡಿಬಂದು, ಕೈಯನ್ನು ಗೋಡೆಯ ಮೇಲೆ ಇಡಲು, ಹಾವು ಕಚ್ಚಿದ ಹಾಗಾಗುವುದು.
ಇದು ಒಬ್ಬ ಮನುಷ್ಯನು ಸಿಂಹದಿಂದ ತಪ್ಪಿಸಿಕೊಂಡು ಓಡಿಹೋಗಿ, ಕರಡಿಯನ್ನು ಎದುರುಗೊಂಡ ಹಾಗೆಯೂ, ಇಲ್ಲವೆ ಅವನು ಮನೆಗೆ ಹೋಗಿ ಗೋಡೆಗೆ ತನ್ನ ಕೈಯನ್ನು ಒರಗಿಸಿದಾಗ, ಸರ್ಪವು ಕಚ್ಚಿದ ಹಾಗೆಯೂ ಇರುವುದು.
20 ೨೦ ಯೆಹೋವನ ದಿನವು ಬೆಳಕಲ್ಲ; ಕತ್ತಲೆಯೇ! ಯಾವ ಪ್ರಕಾಶ ಇಲ್ಲದ ಗಾಢಾಂಧಕಾರವೇ!
ಹೀಗೆ ಯೆಹೋವ ದೇವರ ದಿವಸವು ಬೆಳಕಲ್ಲ, ಕತ್ತಲೆಯೇ. ಅದರಲ್ಲಿ ಪ್ರಕಾಶವೇನೂ ಇಲ್ಲದ ಕಾರ್ಗತ್ತಲೆಯೇ.
21 ೨೧ “ನಿಮ್ಮ ಜಾತ್ರೆಗಳನ್ನು ಹಗೆಮಾಡುತ್ತೇನೆ, ತುಚ್ಛೀಕರಿಸುತ್ತೇನೆ, ನಿಮ್ಮ ಉತ್ಸವಗಳ ವಾಸನೆಯೇ ನನಗೆ ಬೇಡ.
ನಿಮ್ಮ ಹಬ್ಬಗಳನ್ನು ಹಗೆಮಾಡಿ ತುಚ್ಛೀಕರಿಸುತ್ತೇನೆ. ನಿಮ್ಮ ಸಭೆಗಳು ನನಗೆ ದುರ್ವಾಸನೆ ಇದ್ದಂತೆ.
22 ೨೨ ನೀವು ನನಗೆ ಸರ್ವಾಂಗಹೋಮಗಳನ್ನು ಮತ್ತು ಧಾನ್ಯನೈವೇದ್ಯಗಳನ್ನು ಅರ್ಪಿಸಿದರೂ, ನಾನು ಅದನ್ನು ಸ್ವೀಕರಿಸುವುದಿಲ್ಲ, ಸಮಾಧಾನದ ಯಜ್ಞವಾಗಿ ನೀವು ಒಪ್ಪಿಸಿದ ಕೊಬ್ಬಿದ ಪಶುಗಳನ್ನು ನೋಡುವುದಿಲ್ಲ.
ನೀವು ನನಗೆ ದಹನಬಲಿಗಳನ್ನೂ ಧಾನ್ಯ ಸಮರ್ಪಣೆಗಳನ್ನೂ ಅರ್ಪಿಸಿದರೂ, ನಾನು ಅವುಗಳನ್ನು ಅಂಗೀಕರಿಸುವುದಿಲ್ಲ. ನಿಮ್ಮ ಕೊಬ್ಬಿದ ಪ್ರಾಣಿಗಳ ಸಮಾಧಾನದ ಬಲಿಗಳನ್ನೂ ನಾನು ಲಕ್ಷಿಸುವುದಿಲ್ಲ.
23 ೨೩ ನಿಮ್ಮ ಗೀತೆಗಳ ಧ್ವನಿಯನ್ನು ನನ್ನಿಂದ ತೊಲಗಿಸಿರಿ; ನಿಮ್ಮ ವೀಣೆಗಳ ಮಧುರನಾದಕ್ಕೆ ಕಿವಿಗೊಡುವುದಿಲ್ಲ.
ನಿಮ್ಮ ಹಾಡುಗಳ ಬೊಬ್ಬೆಗಳನ್ನು ನನ್ನಿಂದ ತೊಲಗಿಸಿರಿ. ನಿಮ್ಮ ವೀಣೆಗಳ ಮಧುರ ಸ್ವರವನ್ನು ನಾನು ಕೇಳುವುದಿಲ್ಲ.
24 ೨೪ ಅದರ ಬದಲಾಗಿ ನ್ಯಾಯವು ಹೊಳೆಯ ಹಾಗೆ ಹರಿಯಲಿ, ಧರ್ಮವು ಮಹಾನದಿಯಂತೆ ಹರಿಯಲಿ.
ಆದರೆ ನ್ಯಾಯವು ನೀರಿನಂತೆಯೂ ನೀತಿಯು ಬಲವಾದ ಪ್ರವಾಹದಂತೆಯೂ ಹರಿಯಲಿ.
25 ೨೫ ಇಸ್ರಾಯೇಲರ ವಂಶದವರೇ ನೀವು ಅರಣ್ಯದಲ್ಲಿ ನಲ್ವತ್ತು ವರ್ಷ ನನಗೆ ಯಜ್ಞಗಳನ್ನೂ, ಧಾನ್ಯನೈವೇದ್ಯಗಳನ್ನೂ ಅರ್ಪಿಸಿದ್ದೀರೋ?
ಇಸ್ರಾಯೇಲಿನ ಮನೆತನದವರೇ, ನೀವು ನನಗೆ ನಲವತ್ತು ವರ್ಷ ಮರುಭೂಮಿಯಲ್ಲಿ ಬಲಿಗಳನ್ನು, ಕಾಣಿಕೆಗಳನ್ನು ಅರ್ಪಿಸಿದಿರೋ?
26 ೨೬ ಸಿಕ್ಕೊತ್ ಎಂಬ ನಿಮ್ಮ ಒಡೆಯನನ್ನು, ಕಿಯೂನ್ ಎಂಬ ನಿಮ್ಮ ನಕ್ಷತ್ರ ದೇವತೆಯನ್ನು, ನಿರ್ಮಿಸಿಕೊಂಡಿರುವ ನಿಮ್ಮ ಮೂರ್ತಿಗಳನ್ನು ನೀವು ಹೊತ್ತುಕೊಂಡು ಹೋಗಬೇಕಾಗುವುದು.
ಆದರೆ ನೀವು ನಿಮಗೋಸ್ಕರ ಮಾಡಿಕೊಂಡ ಮೂರ್ತಿಗಳಾದ ಸಿಕ್ಕೊತ್ ಎಂಬ ನಿಮ್ಮ ರಾಜನನ್ನೂ ಕಿಯೂನ್ ಎಂಬ ನಿಮ್ಮ ನಕ್ಷತ್ರ ದೇವತೆಯನ್ನೂ ನೀವೇ ಹೊತ್ತುಕೊಂಡು ಹೋಗಬೇಕಾಗುವುದು.
27 ೨೭ ನಾನು ನಿಮ್ಮನ್ನು ದಮಸ್ಕದ ಆಚೆ ಸೆರೆಗೆ ಕಳುಹಿಸುವೆನು” ಸೇನಾಧೀಶ್ವರ ದೇವರೆಂಬ, ಯೆಹೋವನು ಇದನ್ನು ನುಡಿದಿದ್ದಾನೆ.
ಆದ್ದರಿಂದ ದಮಸ್ಕದ ಆಚೆ ನಿಮ್ಮನ್ನು ಸೆರೆಯಾಳುಗಳಾಗಿ ಕಳುಹಿಸುವೆ, ಎಂದು ಸರ್ವಶಕ್ತರಾದ ದೇವರೆಂದು ಹೆಸರುಗೊಂಡ ಯೆಹೋವ ದೇವರು ಹೇಳುತ್ತಾರೆ.

< ಆಮೋಸನು 5 >