< ಜ್ಞಾನೋಕ್ತಿಗಳು 19 >

1 ಬುದ್ಧಿಹೀನನ ವಕ್ರ ತುಟಿಗಳಿಗಿಂತ, ನಿರ್ದೋಷವಾಗಿ ನಡೆಯುವ ಬಡವನು ಉತ್ತಮ. 2 ಪರಿಜ್ಞಾನವಿಲ್ಲದ ಆಸಕ್ತಿಯು ಯುಕ್ತವಲ್ಲ; ತನ್ನ ಹೆಜ್ಜೆಗಳಲ್ಲಿ ದುಡುಕುವವನು ದಾರಿ ತಪ್ಪುವನು. 3 ಮನುಷ್ಯನ ಬುದ್ಧಿಹೀನತೆ ಅವನ ದುರ್ಗತಿಗೆ ದಾರಿಯಾಗಿದೆ, ಆದರೂ ಅವನ ಹೃದಯವು ಯೆಹೋವ ದೇವರಿಗೆ ವಿರೋಧವಾಗಿ ಉರಿಗೊಳ್ಳುತ್ತದೆ. 4 ಸಂಪತ್ತು ಅನೇಕ ಮಂದಿ ಸ್ನೇಹಿತರನ್ನು ಮಾಡಿಕೊಳ್ಳುತ್ತದೆ; ಆದರೆ ಬಡವನು ತನ್ನ ಆಪ್ತಸ್ನೇಹಿತನಿಂದ ದೂರವಾಗುತ್ತಾನೆ. 5 ಸುಳ್ಳುಸಾಕ್ಷಿಯು ದಂಡನೆಯನ್ನು ಹೊಂದದಿರನು; ಸುಳ್ಳಾಡುವವನು ತಪ್ಪಿಸಿಕೊಳ್ಳದೆ ಇರಲಾರನು. 6 ಅನೇಕರು ಅಧಿಪತಿಯಿಂದ ಸಹಾಯ ಪಡೆಯುತ್ತಾರೆ. ಕಾಣಿಕೆಗಳನ್ನು ಕೊಡುವವನಿಗೆ ಪ್ರತಿಯೊಬ್ಬನೂ ಸ್ನೇಹಿತನೇ. 7 ಬಡವನ ಬಂಧುಗಳೆಲ್ಲರು ಅವನನ್ನು ಹಗೆ ಮಾಡುತ್ತಾರೆ; ತನ್ನ ಸ್ನೇಹಿತರು ತನ್ನಿಂದ ಎಷ್ಟೋ ಹೆಚ್ಚಾಗಿ ದೂರ ಹೋಗುತ್ತಾರಲ್ಲವೇ? ಮಾತುಗಳಿಂದ ಅವನು ಮೊರೆಯಿಟ್ಟು ಹಿಂಬಾಲಿಸಿದರೂ ಅವನಿಗೆ ಏನೂ ದೊರಕದು. 8 ಜ್ಞಾನವನ್ನು ಸಂಪಾದಿಸಿಕೊಳ್ಳುವವನು ತನ್ನ ಪ್ರಾಣವನ್ನೇ ಪ್ರೀತಿಸುತ್ತಾನೆ; ತಿಳುವಳಿಕೆಯನ್ನು ಪ್ರೀತಿಸುವವನು ಶೀಘ್ರದಲ್ಲೇ ಏಳಿಗೆ ಹೊಂದುತ್ತಾನೆ. 9 ಸುಳ್ಳುಸಾಕ್ಷಿಯು ಶಿಕ್ಷೆಹೊಂದದೇ ಇರುವುದಿಲ್ಲ; ಸುಳ್ಳಾಡುವವನು ಹಾಳಾಗಿ ಹೋಗುವನು. 10 ಬುದ್ಧಿಹೀನನಿಗೆ ಭೋಗಜೀವನವು ಯುಕ್ತವಲ್ಲ; ಅಧಿಪತಿಗಳ ಮೇಲೆ ದೊರೆತನ ಮಾಡುವುದು ಸೇವಕನಿಗೆ ಯುಕ್ತವೇ ಅಲ್ಲ. 11 ಮನುಷ್ಯನ ಜ್ಞಾನವು ತಾಳ್ಮೆಯನ್ನು ನೀಡುತ್ತದೆ; ಅಪರಾಧವನ್ನು ಲಕ್ಷಿಸದೆ ಇರುವುದು ಅವನಿಗೆ ಮಹಿಮೆಯಾಗಿದೆ. 12 ಅರಸನ ಕೋಪವು ಸಿಂಹದ ಘರ್ಜನೆಯಂತಿದೆ; ಆದರೆ ಅವನ ದಯೆಯು ಹುಲ್ಲಿನ ಮೇಲಿರುವ ಇಬ್ಬನಿಯಂತಿದೆ. 13 ಬುದ್ಧಿಹೀನನಾದ ಮಗನು ತನ್ನ ತಂದೆಗೆ ಹಾನಿಕರನು; ಜಗಳವಾಡುವ ಹೆಂಡತಿ ಯಾವಾಗಲೂ ತೊಟ್ಟಿಕ್ಕುವ ಹನಿ. 14 ಮನೆಯೂ ಸಂಪತ್ತೂ ಪಿತೃಗಳ ಸ್ವಾಸ್ತ್ಯವು; ವಿವೇಕಿಯಾದ ಹೆಂಡತಿಯು ಯೆಹೋವ ದೇವರಿಂದಲೇ. 15 ಮೈಗಳ್ಳತನವು ಗಾಢನಿದ್ರೆಯಲ್ಲಿ ಮುಳುಗಿಸುತ್ತದೆ; ಸೋಮಾರಿಯು ಹಸಿವೆಗೊಳ್ಳುವನು. 16 ಯಾರು ಆಜ್ಞೆಗಳನ್ನು ಪಾಲಿಸುತ್ತಾನೋ ಅವನು ತನ್ನ ಜೀವವನ್ನು ಉಳಿಸಿಕೊಳ್ಳುತ್ತಾನೆ, ಆದರೆ ಅವುಗಳನ್ನು ಅಸಡ್ಡೆ ಮಾಡುವವನು ಸಾಯುವನು. 17 ಬಡವರಿಗೆ ದಯೆ ತೋರಿಸುವವನು ಯೆಹೋವ ದೇವರಿಗೆ ಸಾಲ ಕೊಡುತ್ತಾನೆ; ಆತನು ಅವನ ಉಪಕಾರಕ್ಕಾಗಿ ಪ್ರತ್ಯುಪಕಾರ ಮಾಡುವನು. 18 ಇನ್ನೂ ನಿರೀಕ್ಷೆ ಇರುವಾಗಲೇ ನಿನ್ನ ಮಗನನ್ನು ಶಿಕ್ಷಿಸು; ಅವನ ಮರಣಕ್ಕೆ ನೀನು ಕಾರಣನಾಗಬೇಡ. 19 ಕೋಪಿಷ್ಟನು ಶಿಕ್ಷೆಯನ್ನು ಅನುಭವಿಸುವನು; ಅವನನ್ನು ನೀನು ಬಿಡಿಸಿದರೆ, ತಿರುಗಿ ನೀನು ಬಿಡಿಸಬೇಕಾಗುವುದು. 20 ಬುದ್ಧಿವಾದವನ್ನು ಕೇಳಿ, ಶಿಕ್ಷಣವನ್ನು ಅಂಗೀಕರಿಸು; ಕಡೆಯಲ್ಲಿ ನೀನು ಜ್ಞಾನಿಯಾಗುವೆ. 21 ಮನುಷ್ಯನ ಹೃದಯದಲ್ಲಿ ಅನೇಕ ಯೋಜನೆಗಳಿವೆ; ಆದರೂ ಯೆಹೋವ ದೇವರ ಸಂಕಲ್ಪವೇ ಈಡೇರುವುದು. 22 ನಿಷ್ಠೆಯು ಮನುಷ್ಯನನ್ನು ಆಕರ್ಷಕನನ್ನಾಗಿ ಮಾಡುತ್ತದೆ. ಬಡವನು ಸುಳ್ಳುಗಾರನಿಗಿಂತ ಲೇಸು. 23 ಯೆಹೋವ ದೇವರ ಭಯವು ಜೀವದಾಯಕವು; ಆಗ ಅವನು ತೃಪ್ತನಾಗಿ ನೆಲೆಗೊಳ್ಳುವನು; ಅವನಿಗೆ ಕೇಡು ಸಂಭವಿಸುವುದಿಲ್ಲ. 24 ಮೈಗಳ್ಳನು ಪಾತ್ರೆಯೊಳಗೆ ತನ್ನ ಕೈಯನ್ನು ಮುಳುಗಿಸಿ, ಅವನು ಅದನ್ನು ಮತ್ತೆ ತನ್ನ ಬಾಯಿಗೆ ತರುವುದಿಲ್ಲ! 25 ಪರಿಹಾಸ್ಯಗಾರನನ್ನು ಹೊಡೆದರೆ, ಮುಗ್ಧರು ಎಚ್ಚರಗೊಳ್ಳುವರು; ವಿವೇಕಿಯನ್ನು ಗದರಿಸಿದರೆ, ಅವನು ಪರಿಜ್ಞಾನವನ್ನು ಗ್ರಹಿಸುವನು. 26 ಯಾರು ತಂದೆಯನ್ನು ದೋಚಿಕೊಂಡು ತಾಯಿಯನ್ನು ಓಡಿಸುವರೋ ನಾಚಿಕೆಯನ್ನುಂಟುಮಾಡಿ, ನಿಂದೆಯನ್ನು ತರುತ್ತಾರೆ. 27 ಮಗನೇ, ನೀನು ಬುದ್ಧಿವಾದಕ್ಕೆ ಲಕ್ಷ್ಯಕೊಡದಿದ್ದರೆ, ಪರಿಜ್ಞಾನದ ಮಾತುಗಳಿಂದ ದಾರಿತಪ್ಪುವೆ. 28 ಭ್ರಷ್ಟನ ಸಾಕ್ಷಿಯು ನ್ಯಾಯತೀರ್ಪನ್ನು ಗೇಲಿ ಮಾಡುತ್ತದೆ; ದುಷ್ಟನ ಬಾಯಿಯು ದ್ರೋಹವನ್ನು ನುಂಗುವುದು. 29 ಪರಿಹಾಸ್ಯಗಾರರಿಗೆ ನ್ಯಾಯ ತೀರ್ಪುಗಳೂ, ಬುದ್ಧಿಹೀನರ ಬೆನ್ನಿಗೆ ಪೆಟ್ಟುಗಳೂ ಸಿದ್ಧವಾಗಿವೆ.

< ಜ್ಞಾನೋಕ್ತಿಗಳು 19 >