< ಅರಣ್ಯಕಾಂಡ 19 >

1 ಯೆಹೋವ ದೇವರು ಮೋಶೆ ಹಾಗೂ ಆರೋನನ ಸಂಗಡ ಮಾತನಾಡಿ, 2 “ಯೆಹೋವ ದೇವರಾದ ನಾನು ಆಜ್ಞಾಪಿಸಿದ ನಿಯಮದ ಕಟ್ಟಳೆ ಏನೆಂದರೆ, ಎಂದೂ ನೊಗವನ್ನು ಹೊರದಂಥ, ಮಚ್ಚೆ ಇಲ್ಲದಂಥ ಮತ್ತು ಕಳಂಕವಿಲ್ಲದ ಕೆಂದಾಕಳನ್ನು ನಿಮಗೆ ತಂದು ಕೊಡುವಂತೆ ಇಸ್ರಾಯೇಲರಿಗೆ ಹೇಳು. 3 ನೀವು ಅದನ್ನು ಯಾಜಕನಾದ ಎಲಿಯಾಜರನಿಗೆ ಕೊಡಬೇಕು. ಅವನು ಅದನ್ನು ಪಾಳೆಯದ ಹೊರಗೆ ತೆಗೆದುಕೊಂಡುಹೋಗಿ, ತನ್ನ ಮುಂದೆ ವಧೆಮಾಡಿಸಬೇಕು. 4 ಯಾಜಕನಾದ ಎಲಿಯಾಜರನು ತನ್ನ ಬೆರಳಿನಿಂದ ಅದರ ರಕ್ತವನ್ನು ತೆಗೆದುಕೊಂಡು, ಅದನ್ನು ಏಳು ಸಾರಿ ದೇವದರ್ಶನ ಗುಡಾರದ ಮುಂಭಾಗಕ್ಕೆ ನೇರವಾಗಿ ಚಿಮುಕಿಸಬೇಕು. 5 ಹಸುವನ್ನು ಅವನ ಎದುರಿನಲ್ಲಿಯೇ ಸುಡಿಸಬೇಕು. ಅದರ ತೊಗಲನ್ನೂ ಮಾಂಸವನ್ನೂ ರಕ್ತವನ್ನೂ ಮತ್ತು ಅದರ ಸಗಣಿಯ ಕೂಡ ಸುಡಬೇಕು. 6 ಯಾಜಕನು ದೇವದಾರು ಕಟ್ಟಿಗೆಯನ್ನೂ ಹಿಸ್ಸೋಪನ್ನೂ ರಕ್ತವರ್ಣವುಳ್ಳ ದಾರವನ್ನೂ ತೆಗೆದುಕೊಂಡು ಹಸುವಿನ ದಹನದಲ್ಲಿ ಹಾಕಬೇಕು. 7 ಆಗ ಯಾಜಕನು ತನ್ನ ವಸ್ತ್ರಗಳನ್ನು ತೊಳೆದುಕೊಂಡು, ತನ್ನ ಶರೀರವನ್ನು ನೀರಿನಲ್ಲಿ ತೊಳೆದುಕೊಂಡ ನಂತರ ಪಾಳೆಯದೊಳಗೆ ಬರಬಹುದು. ಆದರೂ ಯಾಜಕನು ಸಂಜೆಯವರೆಗೂ ಅಶುದ್ಧನಾಗಿರುವನು. 8 ಅದನ್ನು ಸುಡುವವನು ತನ್ನ ವಸ್ತ್ರಗಳನ್ನು ನೀರಿನಲ್ಲಿ ತೊಳೆದುಕೊಂಡು, ಸ್ನಾನಮಾಡಬೇಕು. ಅವನೂ ಸಹ ಆ ದಿನದ ಸಂಜೆಯವರೆಗೆ ಅಶುದ್ಧನಾಗಿರುವನು. 9 “ಶುದ್ಧನಾದವನೊಬ್ಬನು ಆ ಆಕಳಿನ ಬೂದಿಯನ್ನು ಕೂಡಿಸಿ, ಪಾಳೆಯದ ಹೊರಗೆ ಶುದ್ಧವಾದ ಒಂದು ಸ್ಥಳದಲ್ಲಿ ಇಡಬೇಕು. ಅದನ್ನು ಇಸ್ರಾಯೇಲ್ ಸಮೂಹದವರ ಉಪಯೋಗಕ್ಕಾಗಿ ನೀವು ಜೋಪಾನವಾಗಿಡಬೇಕು. ಅದು ದೋಷಪರಿಹಾರಕವಾದುದು. ಆದ್ದರಿಂದ ಶುದ್ಧೀಕರಣ ನೀರನ್ನು ಸಿದ್ಧಪಡಿಸುವುದಕ್ಕಾಗಿ ಅಲ್ಲೇ ಇಟ್ಟಿರಬೇಕು. 10 ಹಸುವಿನ ಬೂದಿಯನ್ನು ಕೂಡಿಸಿದವನು ತನ್ನ ವಸ್ತ್ರಗಳನ್ನು ತೊಳೆದುಕೊಳ್ಳಬೇಕು, ಸಂಜೆಯವರೆಗೆ ಅಶುದ್ಧನಾಗಿರಬೇಕು. ಇದು ಇಸ್ರಾಯೇಲರಿಗೂ ಅವರ ಮಧ್ಯದಲ್ಲಿ ಪ್ರವಾಸಿಯಾಗಿರುವ ಪರಕೀಯನಿಗೂ ಶಾಶ್ವತ ಕಟ್ಟಳೆಯಾಗಿದೆ. 11 “ಮನುಷ್ಯನ ಶವವನ್ನು ಮುಟ್ಟಿದವನು ಏಳು ದಿನಗಳವರೆಗೆ ಅಶುದ್ಧನಾಗಿರುವನು. 12 ಅವನು ಇದರಿಂದ ಮೂರನೆಯ ದಿವಸದಲ್ಲಿ ತನ್ನನ್ನು ಶುದ್ಧೀಕರಿಸಿಕೊಂಡು ಏಳನೆಯ ದಿವಸದಲ್ಲಿ ಶುದ್ಧನಾಗಬೇಕು. ಆದರೆ ಅವನು ಮೂರನೆಯ ದಿವಸದಲ್ಲಿ ತನ್ನನ್ನು ಶುದ್ಧಮಾಡಿಕೊಳ್ಳದಿದ್ದರೆ, ಏಳನೆಯ ದಿವಸದಲ್ಲಿ ಶುದ್ಧನಾಗಲಾರನು. 13 ಸತ್ತ ಮನುಷ್ಯನ ಶವವನ್ನು ಮುಟ್ಟಿ, ಶುದ್ಧಮಾಡಿಕೊಳ್ಳದವನು ಯೆಹೋವ ದೇವರ ಗುಡಾರವನ್ನು ಅಪವಿತ್ರಪಡಿಸುತ್ತಾನೆ, ಅಂಥವನನ್ನು ಇಸ್ರಾಯೇಲಿನವರೊಳಗಿಂದ ತೆಗೆದುಹಾಕಬೇಕು, ಶುದ್ಧೀಕರಣದ ನೀರು ಅವನ ಮೇಲೆ ಚಿಮುಕಿಸದ ಕಾರಣ ಅವನು ಅಶುದ್ಧನಾಗಿದ್ದಾನೆ. ಅವನ ಅಶುದ್ಧತ್ವವು ಇನ್ನೂ ಅವನ ಮೇಲೆ ಇರುವುದು. 14 “ಒಬ್ಬ ಮನುಷ್ಯನು ಡೇರೆಯಲ್ಲಿ ಸತ್ತರೆ, ಅವನ ವಿಷಯವಾದ ನಿಯಮವೇನೆಂದರೆ: ಆ ಡೇರೆಯೊಳಗೆ ಪ್ರವೇಶಿಸುವವರೆಲ್ಲರೂ, ಡೇರೆಯಲ್ಲಿರುವವರೆಲ್ಲರೂ ಏಳು ದಿವಸಗಳವರೆಗೆ ಅಶುದ್ಧರಾಗಿರುವರು. 15 ಮುಚ್ಚಳ ಹಾಕದೆ ತೆರೆದಿರುವ ಸಾಮಾನುಗಳೆಲ್ಲಾ ಅಶುದ್ಧವಾಗಿರುವುವು. 16 “ಇದಲ್ಲದೆ ಬಯಲಿನಲ್ಲಿ ಖಡ್ಗದಿಂದ ಹತನಾದ ವ್ಯಕ್ತಿಯನ್ನು ಮುಟ್ಟಿದವರೂ ಅಥವಾ ಬೇರೆ ಯಾವ ಮನುಷ್ಯನ ಶವವಾಗಲಿ, ಮನುಷ್ಯನ ಎಲುಬನ್ನಾಗಲಿ, ಸಮಾಧಿಯನ್ನಾಗಲಿ ಮುಟ್ಟಿದವರೆಲ್ಲರೂ ಏಳು ದಿವಸ ಅಪವಿತ್ರರಾಗಿರುವರು. 17 “ಅಪವಿತ್ರನಾದವನನ್ನು ಶುದ್ಧಪಡಿಸಬೇಕಾದರೆ ಆ ದೋಷಪರಿಹಾರಕವಾದ ಬೂದಿಯನ್ನು ತೆಗೆದುಕೊಂಡು, ಒಂದು ಪಾತ್ರೆಯೊಳಗಿಟ್ಟು, ಅದರ ಮೇಲೆ ಹರಿಯುವ ನೀರನ್ನು ಹಾಕಬೇಕು. 18 ಪವಿತ್ರನಾದವನೊಬ್ಬನು ಹಿಸ್ಸೋಪನ್ನು ತೆಗೆದುಕೊಂಡು ನೀರಿನಲ್ಲಿ ಅದ್ದಿ, ಆ ಡೇರೆಯ ಮೇಲೆಯೂ, ಸಮಸ್ತ ಸಲಕರಣೆಗಳ ಮೇಲೆಯೂ, ಅದರಲ್ಲಿರುವ ಜನರ ಮೇಲೆಯೂ ಚಿಮುಕಿಸಬೇಕು. ಹಾಗೆಯೇ ಎಲುಬನ್ನಾಗಲಿ, ಹತನಾದವನ ಅಥವಾ ಬೇರೆ ಮನುಷ್ಯನ ಶವವಾಗಲಿ, ಸಮಾಧಿಯನ್ನಾಗಲಿ ಮುಟ್ಟಿದವರ ಮೇಲೆಯೂ ಚಿಮುಕಿಸಬೇಕು. 19 ಪವಿತ್ರನಾದವನು ಅಪವಿತ್ರನಾದವನ ಮೇಲೆ ಮೂರನೆಯ ದಿವಸದಲ್ಲಿಯೂ, ಏಳನೆಯ ದಿವಸದಲ್ಲಿಯೂ ಅದನ್ನು ಚಿಮುಕಿಸಲಿ. ಏಳನೆಯ ದಿವಸದಲ್ಲಿ ಅವನು ತನ್ನನ್ನು ಪವಿತ್ರ ಮಾಡಿಕೊಂಡು, ತನ್ನ ವಸ್ತ್ರಗಳನ್ನು ತೊಳೆದುಕೊಂಡು, ನೀರಿನಲ್ಲಿ ಸ್ನಾನ ಮಾಡಲಿ. ಹೀಗೆ ಸಂಜೆಯಲ್ಲಿ ಪವಿತ್ರನಾಗುವನು. 20 ಆದರೆ ಅಪವಿತ್ರನಾಗಿದ್ದು, ತನ್ನನ್ನು ಶುದ್ಧಪಡಿಸಿಕೊಳ್ಳದವನು ಸಭೆಯ ಮಧ್ಯದಿಂದ ತೆಗೆದುಹಾಕಬೇಕು ಏಕೆಂದರೆ ಅವನು ಯೆಹೋವ ದೇವರ ಪರಿಶುದ್ಧ ಸ್ಥಳವನ್ನು ಅಪವಿತ್ರ ಮಾಡಿದ್ದಾನೆ. ನೀರು ಅವನ ಮೇಲೆ ಚಿಮಿಕಿಸಿಕೊಳ್ಳದ ಕಾರಣ ಅವನು ಅಪವಿತ್ರನೇ. 21 ಇದು ಅವರಿಗೆ ಶಾಶ್ವತ ಕಟ್ಟಳೆಯಾಗಿರಬೇಕು. “ಶುದ್ಧೀಕರಣದ ನೀರನ್ನು ಚಿಮುಕಿಸುವವನು ತನ್ನ ವಸ್ತ್ರಗಳನ್ನು ತೊಳೆದುಕೊಳ್ಳಬೇಕು ಮತ್ತು ಆ ನೀರು ಯಾರಿಗೆ ಸೋಂಕುವುದೋ ಅವನು ಆ ದಿನದ ಸಂಜೆಯವರೆಗೆ ಅಪವಿತ್ರನಾಗಿರುವನು. 22 ಇದಲ್ಲದೆ ಅಪವಿತ್ರನಾದವನು ಮುಟ್ಟುವಂಥಾದ್ದೆಲ್ಲ ಅಪವಿತ್ರವಾಗುವುದು, ಅವನನ್ನು ಮುಟ್ಟಿದವನು ಸಂಜೆಯವರೆಗೆ ಅಪವಿತ್ರನಾಗಿರುವನು,” ಎಂದು ಹೇಳಿದರು.

< ಅರಣ್ಯಕಾಂಡ 19 >