< ಅರಣ್ಯಕಾಂಡ 14 >

1 ಆಗ ಜನರೆಲ್ಲರೂ ತಮ್ಮ ಸ್ವರವೆತ್ತಿ ಆ ರಾತ್ರಿಯೆಲ್ಲಾ ಅತ್ತರು. 2 ಇಸ್ರಾಯೇಲರೆಲ್ಲರು ಮೋಶೆಗೂ ಆರೋನನಿಗೂ ವಿರೋಧವಾಗಿ ಗೊಣಗುಟ್ಟಿದರು. ಅವರು, “ನಾವು ಈಜಿಪ್ಟ್ ದೇಶದಲ್ಲಿ ಸತ್ತಿದ್ದರೆ ಇಲ್ಲವೆ ಈ ಮರುಭೂಮಿಯಲ್ಲಾದರೂ ಸತ್ತಿದ್ದರೆ ಚೆನ್ನಾಗಿತ್ತು. 3 ನಾವು ಖಡ್ಗದಿಂದ ಕೊಲೆಯಾಗುವ ಹಾಗೆಯೂ ನಮ್ಮ ಹೆಂಡತಿಯರು ಮಕ್ಕಳು ಸುಲಿಗೆಯಾಗುವ ಹಾಗೆಯೂ ಯೆಹೋವ ದೇವರು ನಮ್ಮನ್ನು ಈ ದೇಶಕ್ಕೆ ಏಕೆ ಬರಮಾಡಿದ್ದಾರೆ? ಈಜಿಪ್ಟ್ ದೇಶಕ್ಕೆ ನಾವು ತಿರುಗಿ ಹೋಗುವುದು ನಮಗೆ ಒಳ್ಳೆಯದಲ್ಲವೋ? 4 ನಾವು ನಾಯಕನನ್ನು ನೇಮಿಸಿಕೊಂಡು ಈಜಿಪ್ಟ್ ದೇಶಕ್ಕೆ ಹಿಂದಿರುಗೋಣ ಬನ್ನಿರಿ,” ಎಂದು ಒಬ್ಬರಿಗೊಬ್ಬರು ಹೇಳಿಕೊಂಡರು. 5 ಆಗ ಮೋಶೆಯೂ ಆರೋನನೂ ಇಸ್ರಾಯೇಲರ ಸಮಸ್ತ ಜನರ ಕೂಟದ ಮುಂದೆ ಅಡ್ಡಬಿದ್ದರು. 6 ಇದಲ್ಲದೆ ಕಾನಾನ್ ದೇಶವನ್ನು ಸಂಚರಿಸಿ ನೋಡಿದವರಲ್ಲಿದ್ದ ನೂನನ ಮಗ ಯೆಹೋಶುವನೂ, ಯೆಫುನ್ನೆಯ ಮಗ ಕಾಲೇಬನೂ ತಮ್ಮ ವಸ್ತ್ರಗಳನ್ನು ಹರಿದುಕೊಂಡು, 7 ಇಸ್ರಾಯೇಲರ ಸಮಸ್ತ ಜನಸಮೂಹಕ್ಕೆ, “ಸಂಚರಿಸಿ ನೋಡುವುದಕ್ಕೆ ನಾವು ದಾಟಿಹೋದ ದೇಶವು ಅತ್ಯುತ್ತಮವಾದ ದೇಶವೇ. 8 ಯೆಹೋವ ದೇವರು ನಮ್ಮನ್ನು ಇಷ್ಟಪಟ್ಟರೆ ಹಾಲೂ ಜೇನೂ ಹರಿಯುವ ದೇಶವಾಗಿರುವ ಆ ದೇಶಕ್ಕೆ ನಮ್ಮನ್ನು ಬರಮಾಡಿ, ಅದನ್ನು ನಮಗೆ ಕೊಡುವರು. 9 ಆದ್ದರಿಂದ ನೀವಾದರೋ ಯೆಹೋವ ದೇವರಿಗೆ ತಿರುಗಿ ಬೀಳಬೇಡಿರಿ. ಆ ದೇಶದ ಜನರಿಗೆ ಭಯಪಡಬೇಡಿರಿ. ಏಕೆಂದರೆ ನಾವು ಅವರನ್ನು ನುಂಗಿಬಿಡುವೆವು. ಅವರ ಆಶ್ರಯವು ಅವರ ಬಳಿಯಿಂದ ಹೋಯಿತು. ಯೆಹೋವ ದೇವರು ನಮ್ಮ ಸಂಗಡ ಇದ್ದಾರೆ, ಅವರಿಗೆ ಭಯಪಡಬೇಡಿರಿ,” ಎಂದರು. 10 ಆಗ ಸಭೆಯವರೆಲ್ಲರೂ ಅವರಿಗೆ ಕಲ್ಲೆಸೆಯಬೇಕೆಂದಿದ್ದರು. ಯೆಹೋವ ದೇವರ ಮಹಿಮೆಯು ದೇವದರ್ಶನ ಗುಡಾರದಲ್ಲಿ ಇಸ್ರಾಯೇಲರಿಗೆಲ್ಲಾ ಪ್ರತ್ಯಕ್ಷವಾಯಿತು. 11 ಆಗ ಯೆಹೋವ ದೇವರು ಮೋಶೆಗೆ, “ಈ ಜನರು ಎಷ್ಟರವರೆಗೆ ನನಗೆ ಕೋಪವನ್ನೆಬ್ಬಿಸುವರು? ನಾನು ಅವರ ಮಧ್ಯದಲ್ಲಿ ಮಾಡಿದ ಸಕಲ ಸೂಚಕಕಾರ್ಯಗಳನ್ನು ಕಣ್ಣಾರೆ ನೋಡಿಯೂ ನನ್ನನ್ನು ಎಷ್ಟು ಮಾತ್ರಕ್ಕು ನಂಬದೆ ಇರುವರು? 12 ನಾನು ಅವರನ್ನು ವ್ಯಾಧಿಯಿಂದ ಹೊಡೆದು ನಿರ್ಮೂಲ ಮಾಡುವೆನು. ನಿನ್ನನ್ನು ಅವರಿಗಿಂತ ದೊಡ್ಡದಾದ ಮತ್ತು ಬಲವುಳ್ಳ ಜನಾಂಗವನ್ನಾಗಿ ಮಾಡುವೆನು,” ಎಂದರು. 13 ಆಗ ಮೋಶೆ ಯೆಹೋವ ದೇವರಿಗೆ, “ಹಾಗಾದರೆ ಈ ಸುದ್ದಿಯನ್ನು ಈಜಿಪ್ಟಿನವರು ಕೇಳುವರು. ನೀವು ಅವರಿಂದ ಈ ಜನರನ್ನು ನಿಮ್ಮ ಶಕ್ತಿಯಿಂದ ಬರಮಾಡಿದೆಯಲ್ಲಾ! 14 ಅವರು ಈ ದೇಶದ ನಿವಾಸಿಗಳಿಗೆ ಅದನ್ನು ಹೇಳುವರು. ನೀವು ಈ ಜನರ ಸಂಗಡ ಇದ್ದೀಯೆಂದೂ, ಯೆಹೋವ ದೇವರಾದ ನೀವೇ ಮುಖಾಮುಖಿಯಾಗಿ ಕಾಣಿಸಿಕೊಳ್ಳುತ್ತೀರಿ ಎಂದೂ ನೀವು ಹಗಲು ಹೊತ್ತಿನಲ್ಲಿ ಮೇಘಸ್ತಂಭದಲ್ಲಿಯೂ, ರಾತ್ರಿಯಲ್ಲಿ ಅಗ್ನಿಸ್ತಂಭದಲ್ಲಿಯೂ ಅವರ ಮುಂದೆ ನಡೆಯುತ್ತೀರಿ ಎಂದೂ ನೀವಿರುವ ಮೇಘವು ಇಸ್ರಾಯೇಲರ ಮೇಲೆ ಇರುವುದಾಗಿಯೂ ಎಂದೂ ಅವರು ಈಗಾಗಲೇ ಕೇಳಿದ್ದಾರೆ. 15 ಈಗ ನೀವು ಈ ಜನರನ್ನೆಲ್ಲಾ ಕೊಂದುಹಾಕಿದರೆ, ನಿಮ್ಮ ಪ್ರಖ್ಯಾತಿಯನ್ನು ಕೇಳಿದ ಜನಾಂಗಗಳು ನಿಮ್ಮ ವಿಷಯದಲ್ಲಿ, 16 ಯೆಹೋವ ದೇವರು ಈ ಜನರನ್ನು ಅವರಿಗೆ ಪ್ರಮಾಣಪೂರ್ವಕವಾಗಿ ವಾಗ್ದಾನಮಾಡಿದ ದೇಶಕ್ಕೆ ತರಲಾರದ ಕಾರಣ ಅವರನ್ನು ಮರುಭೂಮಿಯಲ್ಲಿ ಕೊಂದುಹಾಕಿದರು,” ಎಂದು ಹೇಳುವರು. 17 “ಈಗ ನೀವು ಹೇಳಿದ ಪ್ರಕಾರ ಯೆಹೋವ ದೇವರ ಶಕ್ತಿಯು ದೊಡ್ಡದಾಗಿರಲಿ ಎಂದು ನಾನು ಬೇಡುತ್ತೇನೆ. 18 ಯೆಹೋವ ದೇವರು ದೀರ್ಘಶಾಂತನು, ಮಹಾ ಪ್ರೀತಿಯುಳ್ಳವನು, ತಿರುಗಿಬೀಳುವುದನ್ನು ಮತ್ತು ಪಾಪವನ್ನು ಕ್ಷಮಿಸುವಾತನು, ಆದರೂ ಅಪರಾಧಿಯನ್ನು ಶಿಕ್ಷಿಸದೆ ಬಿಡದವನೂ ತಂದೆಗಳ ದೋಷವನ್ನು ಮಕ್ಕಳ ಮೇಲೆಯೂ ಮೊಮ್ಮಕ್ಕಳ ಮೇಲೆಯೂ ಮೂರನೆಯ ಮತ್ತು ನಾಲ್ಕನೆಯ ತಲೆಗಳವರೆಗೂ ಶಿಕ್ಷಿಸುವಾತನೂ ಎಂದು ನೀವು ಹೇಳಿದ್ದೀರಲ್ಲಾ? 19 ನಿಮ್ಮ ಪ್ರೀತಿಯು ದೊಡ್ಡದಾಗಿರುವ ಪ್ರಕಾರವೂ ನೀವು ಈಜಿಪ್ಟಿನಿಂದ ಇಲ್ಲಿಯವರೆಗೆ ಈ ಜನರ ಪಾಪಗಳನ್ನು ಮನ್ನಿಸಿದ ಪ್ರಕಾರ ಈಗಲೂ ಈ ಜನರ ಪಾಪವನ್ನು ಮನ್ನಿಸಿರಿ,” ಎಂದು ಬೇಡಿಕೊಂಡನು. 20 ಆಗ ಯೆಹೋವ ದೇವರು, “ನಿನ್ನ ಮಾತಿನ ಪ್ರಕಾರ ಮನ್ನಿಸಿದ್ದೇನೆ. 21 ಆದರೆ ನನ್ನ ಜೀವದಾಣೆ, ಭೂಮಿಯೆಲ್ಲಾ ಯೆಹೋವ ದೇವರ ಮಹಿಮೆಯಿಂದ ತುಂಬಿರುವುದು. 22 ಏಕೆಂದರೆ ನನ್ನ ಮಹಿಮೆಯನ್ನೂ, ಈಜಿಪ್ಟ್ ದೇಶದಲ್ಲಿಯೂ, ಮರುಭೂಮಿಯಲ್ಲಿಯೂ ನಾನು ಮಾಡಿದ ಸೂಚಕಕಾರ್ಯಗಳನ್ನೂ ನೋಡಿದ ಈ ಸಕಲ ಜನರು, ನನ್ನನ್ನು ಈಗ ಹತ್ತು ಸಾರಿ ಪರೀಕ್ಷಿಸಿ, ನನ್ನ ಮಾತನ್ನು ಕೇಳದೆ ಹೋದದ್ದರಿಂದ, 23 ನಾನು ಅವರ ಪಿತೃಗಳಿಗೆ ಪ್ರಮಾಣಪೂರ್ವಕವಾಗಿ ವಾಗ್ದಾನ ಮಾಡಿದ ದೇಶವನ್ನು ನಿಶ್ಚಯವಾಗಿ ಅವರು ನೋಡುವುದಿಲ್ಲ, ನನ್ನನ್ನು ಅಲಕ್ಷ್ಯ ಮಾಡಿದವರೆಲ್ಲರೂ ಅದನ್ನು ನೋಡುವುದಿಲ್ಲ. 24 ಆದರೆ ನನ್ನ ಸೇವಕನಾದ ಕಾಲೇಬನಲ್ಲಿ ಬೇರೆ ಆತ್ಮವಿದ್ದುದರಿಂದಲೂ, ಅವನು ಹೃದಯಪೂರ್ವಕವಾಗಿ ನನ್ನನ್ನು ಹಿಂಬಾಲಿಸಿದ್ದುದರಿಂದಲೂ ಅವನು ಸಂಚರಿಸಿ ಬಂದ ಆ ದೇಶಕ್ಕೆ ಅವನನ್ನು ಸೇರಿಸುವೆನು. ಅವನ ಸಂತಾನವು ಅದನ್ನು ಸ್ವಾಧೀನಪಡಿಸಿಕೊಳ್ಳುವುದು. 25 ಅಮಾಲೇಕ್ಯರೂ, ಕಾನಾನ್ಯರೂ ತಗ್ಗಿನಲ್ಲಿ ವಾಸ ಮಾಡುತ್ತಿರುವುದರಿಂದ ನಾಳೆ ನೀವು ತಿರುಗಿಕೊಂಡು, ಕೆಂಪುಸಮುದ್ರದ ಮಾರ್ಗವಾಗಿ ಮರುಭೂಮಿಗೆ ಹೊರಡಿರಿ,” ಎಂದರು. 26 ಯೆಹೋವ ದೇವರು ಮೋಶೆ ಆರೋನನ ಸಂಗಡ ಮಾತನಾಡಿ, 27 “ಈ ದುಷ್ಟಜನರು ನನಗೆ ವಿರೋಧವಾಗಿ ಗೊಣಗುಟ್ಟುವುದನ್ನು ನಾನು ಎಷ್ಟು ಕಾಲ ಸಹಿಸಲಿ? ಇಸ್ರಾಯೇಲರು ನನಗೆ ವಿರೋಧವಾಗಿ ಗೊಣಗುಟ್ಟಿದ್ದನ್ನು ನಾನು ಕೇಳಿದ್ದೇನೆ. 28 ಆದ್ದರಿಂದ ನೀನು ಅವರಿಗೆ, ‘ನನ್ನ ಜೀವದಾಣೆ, ನೀವು ನನ್ನ ಕಿವಿಗಳು ಕೇಳುವಂತೆ ಮಾತನಾಡಿದ ಪ್ರಕಾರವೇ ನಿಮಗೆ ಮಾಡುವೆನು,’ ಎಂದು ಯೆಹೋವ ದೇವರು ಹೇಳುತ್ತಾರೆ. 29 ಈ ಮರುಭೂಮಿಯಲ್ಲಿ ನನಗೆ ವಿರೋಧವಾಗಿ ಗೊಣಗುಟ್ಟಿದವರೆಲ್ಲರೂ ನಿಮ್ಮ ಪೂರ್ಣ ಸಂಖ್ಯೆಯ ಪ್ರಕಾರ ಎಣಿಸಿದ ಇಪ್ಪತ್ತು ವರುಷವೂ, ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳವರೂ ಸತ್ತು ಹೋಗುವಿರಿ. 30 ಯೆಫುನ್ನೆಯ ಮಗ ಕಾಲೇಬನೂ, ನೂನನ ಮಗ ಯೆಹೋಶುವನ ಹೊರತು ನಾನು ನಿಮ್ಮನ್ನು ವಾಸಮಾಡುವುದಕ್ಕೆ ಪ್ರಮಾಣಪೂರ್ವಕವಾಗಿ ವಾಗ್ದಾನ ಮಾಡಿದ ದೇಶಕ್ಕೆ ನಿಸ್ಸಂದೇಹವಾಗಿ ನೀವೆಲ್ಲರೂ ಬಾರದೆ ಇರುವಿರಿ. 31 ಆದರೆ ಸೆರೆಯಾಗುವರೆಂದು ನೀವು ಹೇಳಿದ ನಿಮ್ಮ ಮಕ್ಕಳನ್ನು ಅಲ್ಲಿಗೆ ತರುವೆನು, ನೀವು ಅಲಕ್ಷ್ಯಮಾಡಿದ ದೇಶವನ್ನು ಅವರು ಅನುಭವಿಸುವರು. 32 ನಿಮ್ಮ ವಿಷಯವಾಗಿಯಾದರೋ ನಿಮ್ಮ ಹೆಣಗಳು ಈ ಮರುಭೂಮಿಯಲ್ಲಿ ಬೀಳುವುವು. 33 ಇದಲ್ಲದೆ ನಿಮ್ಮ ಮಕ್ಕಳು ನಲವತ್ತು ವರುಷ ಮರುಭೂಮಿಯಲ್ಲಿ ಅಲೆದಾಡಿ, ನಿಮ್ಮ ಹೆಣಗಳು ಮರುಭೂಮಿಯಲ್ಲಿ ಹಾಳಾಗಿ ಹೋಗುವ ತನಕ ನಿಮ್ಮ ಅಪನಂಬಿಗಸ್ತಿಕೆಯನ್ನು ಅನುಭವಿಸುವಿರಿ. 34 ನೀವು ಆ ದೇಶವನ್ನು ಪರೀಕ್ಷಿಸಿದ ನಲವತ್ತು ದಿವಸಗಳ ಪ್ರಕಾರ ಒಂದು ದಿನಕ್ಕೆ ಒಂದು ವರುಷವಾಗಿ ಈ ಪ್ರಕಾರ ನಲವತ್ತು ವರುಷ ನಿಮ್ಮ ಅಪರಾಧಗಳನ್ನು ಹೊತ್ತು, ನನ್ನ ವಾಗ್ದಾನವನ್ನು ಭಂಗಪಡಿಸಿದ ಫಲವನ್ನು ನೀವು ಅನುಭವಿಸುವಿರಿ. 35 ಯೆಹೋವ ದೇವರಾದ ನಾನು ಇದನ್ನು ಮಾತನಾಡಿದ್ದೇನೆ. ನನಗೆ ವಿರೋಧವಾಗಿ ಸೇರಿರುವ ಈ ದುಷ್ಟ ಸಭೆಗೆಲ್ಲಾ ಇದನ್ನು ನಿಶ್ಚಯವಾಗಿ ಮಾಡುವೆನು. ಈ ಮರುಭೂಮಿಯಲ್ಲಿ ಅವರು ಕ್ಷೀಣವಾಗಿ ಅದರಲ್ಲೇ ಸಾಯುವರು,” ಎಂದರು. 36 ದೇಶವನ್ನು ಪರೀಕ್ಷಿಸುವುದಕ್ಕೆ ಮೋಶೆಯ ಅಪ್ಪಣೆಯ ಮೇರೆಗೆ ಹಿಂದಿರುಗಿ, ಆ ದೇಶದ ವಿಷಯವಾಗಿ ಕೆಟ್ಟ ಸುದ್ದಿಯನ್ನು ಎಬ್ಬಿಸಿ, ಸಮಸ್ತ ಸಭೆಯನ್ನು ಮೋಶೆಗೆ ವಿರೋಧವಾಗಿ ಗೊಣಗುಟ್ಟುವಂತೆ ಮಾಡಿದರು. 37 ಅಶುಭ ಸಮಾಚಾರವನ್ನು ತಂದ ಆ ಮನುಷ್ಯರು ಯೆಹೋವ ದೇವರ ಸನ್ನಿಧಿಯಲ್ಲಿ ವ್ಯಾಧಿಯಿಂದ ಸತ್ತರು. 38 ಆದರೆ ದೇಶವನ್ನು ಪರೀಕ್ಷಿಸುವುದಕ್ಕೆ ಹೋದ ಮನುಷ್ಯರೊಳಗೆ ಇಬ್ಬರಾದ ನೂನನ ಮಗ ಯೆಹೋಶುವನೂ, ಯೆಫುನ್ನೆಯ ಮಗ ಕಾಲೇಬನೂ ಉಳಿದರು. 39 ಮೋಶೆಯು ಇಸ್ರಾಯೇಲರಿಗೆ ಈ ಮಾತುಗಳನ್ನು ಹೇಳಿದಾಗ, ಜನರು ಬಹಳವಾಗಿ ದುಃಖಪಟ್ಟರು. 40 ಮರುದಿವಸ ಬೆಳಿಗ್ಗೆ ಅವರು ಎದ್ದು, ಬೆಟ್ಟದ ತುದಿಯ ಮೇಲಕ್ಕೆ ಏರಿ, “ಇಗೋ, ಯೆಹೋವ ದೇವರು ವಾಗ್ದಾನ ಮಾಡಿದ ಸ್ಥಳಕ್ಕೆ ಏರಿ ಹೋಗುವುದಕ್ಕೆ ಇದ್ದೇವೆ. ನಾವು ಪಾಪಮಾಡಿದ್ದೇವೆ,” ಎಂದರು. 41 ಆಗ ಮೋಶೆಯು, “ನೀವು ಏಕೆ ಹೀಗೆ ಯೆಹೋವ ದೇವರ ಆಜ್ಞೆಯನ್ನು ಮೀರುತ್ತೀರಿ? ಅದು ಸಫಲವಾಗುವುದಿಲ್ಲ. 42 ಯೆಹೋವ ದೇವರು ನಿಮ್ಮ ಸಂಗಡ ಇಲ್ಲ ಅದಕ್ಕಾಗಿ ನಿಮ್ಮ ಶತ್ರುಗಳು ನಿಮ್ಮನ್ನು ಪರಾಜಯಗೊಳಿಸದಂತೆ ಏರಿ ಹೋಗಬೇಡಿರಿ. 43 ಅಮಾಲೇಕ್ಯರೂ, ಕಾನಾನ್ಯರೂ ನಿಮ್ಮ ಎದುರಿನಲ್ಲಿರುವುದರಿಂದ ನೀವು ಅವರ ಖಡ್ಗಕ್ಕೆ ತುತ್ತಾಗುವಿರಿ. ನೀವು ಯೆಹೋವ ದೇವರ ಕಡೆಯಿಂದ ತಿರುಗಿದ ಕಾರಣ, ಆತನು ನಿಮ್ಮ ಸಂಗಡ ಇರುವುದಿಲ್ಲ,” ಎಂದನು. 44 ಆದರೆ ಅವರು ಹಟಮಾಡಿ, ಬೆಟ್ಟದ ತುದಿಯ ಮೇಲೆ ಏರಿಹೋದರು. ಆದರೆ ಯೆಹೋವ ದೇವರ ಒಡಂಬಡಿಕೆಯ ಮಂಜೂಷವೂ ಮೋಶೆಯೂ ಪಾಳೆಯದಿಂದ ಹೊರಡಲಿಲ್ಲ. 45 ಆಗ ಆ ಬೆಟ್ಟದಲ್ಲಿ ವಾಸವಾಗಿದ್ದ ಅಮಾಲೇಕ್ಯರೂ, ಕಾನಾನ್ಯರೂ ಇಳಿದು, ಅವರನ್ನು ಹೊಡೆದು, ಹೊರ್ಮಾದವರೆಗೆ ಅಟ್ಟಿಬಿಟ್ಟರು.

< ಅರಣ್ಯಕಾಂಡ 14 >