< ಲೂಕನು 4 >

1 ಯೇಸು ಪವಿತ್ರಾತ್ಮಭರಿತರಾಗಿ, ಯೊರ್ದನ್ ನದಿ ತೀರದಿಂದ ಹಿಂದಿರುಗಿ ಬಂದು, ದೇವರಾತ್ಮರಿಂದ ಅರಣ್ಯದೊಳಕ್ಕೆ ಮಾರ್ಗದರ್ಶನ ಹೊಂದಿ, 2 ನಲವತ್ತು ದಿನಗಳು ಸೈತಾನನಿಂದ ಶೋಧನೆಯನ್ನು ಎದುರಿಸಿದರು. ಆ ದಿನಗಳಲ್ಲಿ ಯೇಸು ಏನೂ ತಿನ್ನಲಿಲ್ಲ. ಆ ದಿನಗಳು ಮುಗಿದ ಮೇಲೆ ಯೇಸುವಿಗೆ ಹಸಿವಾಯಿತು. 3 ಸೈತಾನನು ಯೇಸುವಿಗೆ, “ನೀನು ದೇವರ ಪುತ್ರನಾಗಿದ್ದರೆ, ಈ ಕಲ್ಲಿಗೆ ರೊಟ್ಟಿಯಾಗುವಂತೆ ಹೇಳು,” ಎಂದನು. 4 ಅದಕ್ಕೆ ಯೇಸು ಉತ್ತರವಾಗಿ ಅವನಿಗೆ, “‘ಮನುಷ್ಯನು ಜೀವಿಸುವುದು ರೊಟ್ಟಿಯಿಂದ ಮಾತ್ರವಲ್ಲ’ ಎಂದು ಪವಿತ್ರ ವೇದದಲ್ಲಿ ಬರೆದಿದೆ,” ಎಂದರು. 5 ಸೈತಾನನು ಯೇಸುವನ್ನು ಎತ್ತರವಾದ ಒಂದು ಸ್ಥಳಕ್ಕೆ ಕರೆದುಕೊಂಡು ಹೋಗಿ, ಲೋಕದ ಎಲ್ಲಾ ರಾಜ್ಯಗಳನ್ನು ಕ್ಷಣಮಾತ್ರದಲ್ಲಿ ಅವರಿಗೆ ತೋರಿಸಿದನು. 6 ಅನಂತರ ಸೈತಾನನು ಯೇಸುವಿಗೆ, “ಈ ಎಲ್ಲಾ ರಾಜ್ಯಗಳ ಅಧಿಕಾರವನ್ನೂ ಇವುಗಳ ಮಹಿಮೆಯನ್ನೂ ನಾನು ನಿನಗೆ ಕೊಡುವೆನು. ಇವೆಲ್ಲಾ ನನಗೆ ಕೊಟ್ಟಿರುವುದರಿಂದ ನನಗೆ ಇಷ್ಟ ಬಂದ ಯಾರಿಗಾದರೂ ನಾನು ಕೊಡುವೆನು. 7 ಆದ್ದರಿಂದ ನೀನು ನನ್ನನ್ನು ಆರಾಧಿಸಿದರೆ, ಎಲ್ಲವೂ ನಿನ್ನದಾಗುವವು,” ಎಂದು ಹೇಳಿದನು. 8 ಯೇಸು ಅವನಿಗೆ ಉತ್ತರವಾಗಿ, “‘ನಿನ್ನ ದೇವರಾದ ಕರ್ತದೇವರನ್ನು ಆರಾಧಿಸಿ, ಅವರಿಗೆ ಮಾತ್ರವೇ ಸೇವೆ ಸಲ್ಲಿಸಬೇಕು,’ ಎಂದು ಪವಿತ್ರ ವೇದದಲ್ಲಿ ಬರೆದಿದೆ,” ಎಂದರು. 9 ಸೈತಾನನು ಯೇಸುವನ್ನು ಯೆರೂಸಲೇಮಿಗೆ ಕರೆತಂದು ದೇವಾಲಯದ ಅತಿ ಎತ್ತರವಾದ ಶಿಖರದ ಮೇಲೆ ನಿಲ್ಲಿಸಿ ಯೇಸುವಿಗೆ, “ನೀನು ದೇವರ ಪುತ್ರನಾಗಿದ್ದರೆ ಇಲ್ಲಿಂದ ಕೆಳಕ್ಕೆ ಧುಮುಕು, 10 ಏಕೆಂದರೆ ಪವಿತ್ರ ವೇದದಲ್ಲಿ ಬರೆದಿರುವಂತೆ: “‘ದೇವರು ನಿನ್ನನ್ನು ಕಾಪಾಡುವುದಕ್ಕೆ ತಮ್ಮ ದೂತರಿಗೆ ಆಜ್ಞಾಪಿಸುವರು 11 ಮತ್ತು ನಿನ್ನ ಪಾದಗಳು ಕಲ್ಲಿಗೆ ತಗಲದಂತೆ, ದೂತರು ನಿನ್ನನ್ನು ತಮ್ಮ ಕೈಗಳಲ್ಲಿ ಎತ್ತಿಕೊಳ್ಳುವರು,’” ಎಂದನು. 12 ಅದಕ್ಕೆ ಯೇಸು ಅವನಿಗೆ, “‘ನಿನ್ನ ದೇವರಾದ ಕರ್ತದೇವರನ್ನು ಪರೀಕ್ಷಿಸಬಾರದು,’ ಎಂದೂ ಹೇಳಿದೆ,” ಎಂದು ಉತ್ತರಕೊಟ್ಟರು. 13 ಸೈತಾನನು ಯೇಸುವನ್ನು ನಾನಾರೀತಿಯಲ್ಲಿ ಶೋಧಿಸಿದ ಮೇಲೆ, ತಕ್ಕಕಾಲ ಬರುವ ತನಕ ಅವರನ್ನು ಬಿಟ್ಟು ಹೊರಟುಹೋದನು. 14 ಯೇಸು ಪವಿತ್ರಾತ್ಮರ ಶಕ್ತಿಯಿಂದ ಗಲಿಲಾಯಕ್ಕೆ ಹಿಂದಿರುಗಿದರು. ಅವರ ಸುದ್ದಿಯು ಸುತ್ತಮುತ್ತೆಲ್ಲಾ ಹರಡಿತು. 15 ಯೇಸು ಯೆಹೂದ್ಯರ ಸಭಾಮಂದಿರಗಳಲ್ಲಿ ಬೋಧಿಸಿದ್ದರಿಂದ, ಎಲ್ಲರೂ ಅವರನ್ನು ಹೊಗಳಿದರು. 16 ಯೇಸು ತಾವು ಬೆಳೆದ ನಜರೇತಿಗೆ ಬಂದು, ತಮ್ಮ ಪದ್ಧತಿಯಂತೆ ಸಬ್ಬತ್ ದಿನದಲ್ಲಿ ಸಭಾಮಂದಿರದೊಳಕ್ಕೆ ಹೋಗಿ ಪವಿತ್ರ ವೇದದ ಸುರುಳಿಯನ್ನು ಓದುವುದಕ್ಕಾಗಿ ಎದ್ದು ನಿಂತರು. 17 ಯೇಸುವಿನ ಕೈಗೆ ಪ್ರವಾದಿ ಯೆಶಾಯನ ಗ್ರಂಥದ ಸುರುಳಿಯನ್ನು ಕೊಟ್ಟರು. ಯೇಸು ಅದನ್ನು ಬಿಚ್ಚಿ, ಅದರಲ್ಲಿ ಬರೆದಿರುವ ಈ ವಾಕ್ಯಗಳನ್ನು ಕಂಡು ಓದಿದರು: 18 “ಕರ್ತದೇವರ ಆತ್ಮರು ನನ್ನ ಮೇಲೆ ಇದ್ದಾರೆ, ಅವರು ನನ್ನನ್ನು ಬಡವರಿಗೆ ಸುವಾರ್ತೆ ಸಾರುವುದಕ್ಕೆ ಅಭಿಷೇಕಿಸಿದ್ದಾರೆ. ಸೆರೆಯಲ್ಲಿದ್ದವರಿಗೆ ಬಿಡುಗಡೆಯನ್ನು ಸಾರುವುದಕ್ಕೂ, ಕುರುಡರಿಗೆ ದೃಷ್ಟಿ ಕೊಡುವುದಕ್ಕೂ, ಜಜ್ಜಿ ಹೋದವರನ್ನು ಬಿಡಿಸಿ ಕಳುಹಿಸುವುದಕ್ಕೂ, 19 ಕರ್ತದೇವರ ಮೆಚ್ಚುಗೆಯ ವರ್ಷವನ್ನು ಸಾರುವುದಕ್ಕೂ ಅವರು ನನ್ನನ್ನು ಕಳುಹಿಸಿದ್ದಾರೆ.” 20 ಯೇಸು ಗ್ರಂಥದ ಸುರುಳಿಯನ್ನು ಸುತ್ತಿ, ಪರಿಚಾರಕನ ಕೈಗೆ ಕೊಟ್ಟು ಕುಳಿತುಕೊಂಡರು. ಆಗ ಆ ಸಭಾಮಂದಿರದಲ್ಲಿ ಇದ್ದವರೆಲ್ಲರ ಕಣ್ಣುಗಳು ಅವರ ಮೇಲೆಯೇ ನಾಟಿದ್ದವು. 21 ಯೇಸು ಅವರಿಗೆ, “ನೀವು ಕೇಳುತ್ತಿದ್ದಂತೆಯೇ ಈ ಪವಿತ್ರ ವೇದದ ವಾಕ್ಯವು ಇಂದು ನೆರವೇರಿತು,” ಎಂದು ಹೇಳಲಾರಂಭಿಸಿದರು. 22 ಎಲ್ಲರೂ ಅವರನ್ನು ಹೊಗಳಿದರು. ಯೇಸುವಿನ ಬಾಯಿಂದ ಬಂದ ಕೃಪೆಯುಳ್ಳ ಮಾತುಗಳಿಗೆ ಆಶ್ಚರ್ಯಪಟ್ಟು, “ಈತನು ಯೋಸೇಫನ ಮಗನಲ್ಲವೇ?” ಎಂದು ಮಾತನಾಡಿಕೊಂಡರು. 23 ಯೇಸು ಅವರಿಗೆ, “‘ವೈದ್ಯನೇ, ನಿನ್ನನ್ನು ನೀನೇ ವಾಸಿಮಾಡಿಕೋ!’ ಎಂಬ ಗಾದೆಯನ್ನು ನೀವು ನಿಸ್ಸಂದೇಹವಾಗಿ ನನಗೆ ಹೇಳಿ, ‘ಕಪೆರ್ನೌಮಿನಲ್ಲಿ ಎಂತೆಂಥ ಕಾರ್ಯಗಳು ನಡೆಯಿತೆಂದು ನಾವು ಕೇಳಿದೆವು. ಅದನ್ನು ಇಲ್ಲಿ ನಿನ್ನ ಸ್ವಂತ ಊರಿನಲ್ಲಿಯೂ ಮಾಡು’ ಎಂದು ನನಗೆ ಹೇಳುವಿರಿ,” ಎಂದರು. 24 ಯೇಸು ಮುಂದುವರಿಸಿ, “ನಾನು ನಿಮಗೆ ನಿಜವಾಗಿ ಹೇಳುವುದೇನೆಂದರೆ, ಯಾವ ಪ್ರವಾದಿಯೂ ಸ್ವಂತ ಊರಿನಲ್ಲಿ ಸ್ವೀಕಾರವಾಗುವುದಿಲ್ಲ. 25 ನಿಮಗೆ ಸತ್ಯವನ್ನು ಹೇಳುತ್ತೇನೆ: ಎಲೀಯನ ದಿವಸಗಳಲ್ಲಿ ಮೂರು ವರ್ಷ ಆರು ತಿಂಗಳು ಮಳೆ ಬಾರದೆ ದೇಶದಲ್ಲೆಲ್ಲಾ ದೊಡ್ಡ ಬರ ಉಂಟಾದಾಗ, ಇಸ್ರಾಯೇಲಿನಲ್ಲಿ ಅನೇಕ ವಿಧವೆಯರು ಇದ್ದರು. 26 ಅವರಲ್ಲಿ ಯಾರ ಬಳಿಗೂ ದೇವರು ಎಲೀಯನನ್ನು ಕಳುಹಿಸದೆ ಸೀದೋನ್ ಪಟ್ಟಣದ ಸರೆಪ್ತದಲ್ಲಿದ್ದ ಒಬ್ಬ ವಿಧವೆಯ ಬಳಿಗೆ ಕಳುಹಿಸಿದರು. 27 ಹಾಗೆಯೇ, ಪ್ರವಾದಿ ಎಲೀಷನ ಕಾಲದಲ್ಲಿ ಅನೇಕ ಕುಷ್ಠರೋಗಿಗಳು ಇಸ್ರಾಯೇಲಿನಲ್ಲಿದ್ದರೂ ಸಿರಿಯದ ನಾಮಾನನ ಹೊರತು ಅವರಲ್ಲಿ ಬೇರೆ ಯಾರೂ ಶುದ್ಧರಾಗಲಿಲ್ಲ,” ಎಂದರು. 28 ಆಗ ಸಭಾಮಂದಿರದಲ್ಲಿ ಇದ್ದವರೆಲ್ಲರೂ ಇವುಗಳನ್ನು ಕೇಳಿ ಬಹು ಕೋಪಗೊಂಡರು. 29 ಅವರು ಮೇಲಕ್ಕೆದ್ದು, ಯೇಸುವನ್ನು ಪಟ್ಟಣದ ಹೊರಗೆ ದಬ್ಬಬೇಕೆಂದು, ತಮ್ಮ ಬೆಟ್ಟದ ಮೇಲೆ ಕಟ್ಟಿರುವ ಪಟ್ಟಣದ ಕಡಿದಾದ ಸ್ಥಳಕ್ಕೆ ಅವರನ್ನು ಹಿಡಿದುಕೊಂಡು ಹೋದರು. 30 ಆದರೆ ಯೇಸು ಅವರ ಮಧ್ಯದಿಂದ ಹಾದು ಹೊರಟು ಹೋದರು. 31 ಯೇಸು ಗಲಿಲಾಯದ ಕಪೆರ್ನೌಮಿಗೆ ಬಂದು, ಸಬ್ಬತ್ ದಿನಗಳಲ್ಲಿ ಅವರಿಗೆ ಬೋಧಿಸುತ್ತಿದ್ದರು. 32 ಯೇಸುವಿನ ಬೋಧನೆಯನ್ನು ಕೇಳಿ ಜನರು ಆಶ್ಚರ್ಯಪಟ್ಟರು. ಏಕೆಂದರೆ ಅವರ ವಾಕ್ಯವು ಅಧಿಕಾರದಿಂದ ಕೂಡಿದ್ದಾಗಿತ್ತು. 33 ಆ ಸಭಾಮಂದಿರದಲ್ಲಿ ದೆವ್ವಹಿಡಿದ ಒಬ್ಬ ಮನುಷ್ಯನಿದ್ದನು. ಅವನು ಗಟ್ಟಿಯಾಗಿ ಕಿರುಚುತ್ತಾ, 34 “ನಜರೇತಿನ ಯೇಸುವೇ, ನಮ್ಮ ಗೊಡವೆ ನಿಮಗೆ ಏಕೆ? ನಮ್ಮನ್ನು ನಾಶಮಾಡುವುದಕ್ಕಾಗಿ ಬಂದಿರಾ? ನೀವು ಯಾರೆಂದು ನಾನು ಬಲ್ಲೆನು. ನೀವು ದೇವರ ಪರಿಶುದ್ಧರು,” ಎಂದು ಹೇಳಿದನು. 35 ಆಗ ಯೇಸು ಅವನನ್ನು ಗದರಿಸಿ, “ಸುಮ್ಮನಿರು, ಅವನೊಳಗಿಂದ ಹೊರಗೆ ಬಾ,” ಎಂದರು. ಆ ದೆವ್ವವು ಅವನನ್ನು ಮಧ್ಯದಲ್ಲಿ ಕೆಡವಿ, ಬಾಧಿಸದೆ ಅವನೊಳಗಿಂದ ಹೊರಗೆ ಬಂತು. 36 ಜನರೆಲ್ಲರೂ ಬೆರಗಾಗಿ, “ಇದೆಂಥಾ ಮಾತಾಗಿದೆ! ಈತನು ಅಧಿಕಾರದಿಂದಲೂ ಶಕ್ತಿಯಿಂದಲೂ ಅಶುದ್ಧಾತ್ಮಗಳಿಗೆ ಅಪ್ಪಣೆಕೊಡಲು ಅವು ಹೊರಗೆ ಬರುತ್ತವಲ್ಲಾ!” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು. 37 ಯೇಸುವಿನ ಸುದ್ದಿಯು ಸುತ್ತಲಿನ ಪ್ರದೇಶದ ಪ್ರತಿಯೊಂದು ಸ್ಥಳದಲ್ಲಿ ಹರಡಿತು. 38 ಯೇಸು ಸಭಾಮಂದಿರದಿಂದ ಎದ್ದು ಸೀಮೋನನ ಮನೆಗೆ ಹೋದರು. ಅಲ್ಲಿ ಸೀಮೋನನ ಅತ್ತೆಗೆ ಕಠಿಣ ಜ್ವರವಿದ್ದುದರಿಂದ ಅಲ್ಲಿದ್ದವರು ಆಕೆಗೆ ಸಹಾಯ ಮಾಡಬೇಕೆಂದು ಯೇಸುವನ್ನು ಬೇಡಿಕೊಂಡರು. 39 ಆಗ ಯೇಸು ಆಕೆಯ ಬಳಿಯಲ್ಲಿ ನಿಂತು ಜ್ವರವನ್ನು ಗದರಿಸಲು ಅದು ಆಕೆಯನ್ನು ಬಿಟ್ಟುಹೋಯಿತು. ಕೂಡಲೇ ಆಕೆಯು ಎದ್ದು ಅವರನ್ನು ಉಪಚರಿಸಿದಳು. 40 ಸಂಜೆಯಾದ ನಂತರ, ನಾನಾ ವಿಧವಾದ ರೋಗಗಳಿಂದ ಅಸ್ವಸ್ಥರಾದವರೆಲ್ಲರನ್ನು ಜನರು ಯೇಸುವಿನ ಬಳಿಗೆ ಕರೆತಂದರು, ಅವರಲ್ಲಿ ಪ್ರತಿಯೊಬ್ಬನ ಮೇಲೆ ಯೇಸು ತಮ್ಮ ಕೈಗಳನ್ನಿಟ್ಟು ಅವರನ್ನು ಸ್ವಸ್ಥಪಡಿಸಿದರು. 41 ಅನೇಕರೊಳಗಿಂದ, ದೆವ್ವಗಳು ಸಹ ಹೊರಗೆ ಬಂದು, “ನೀವು ದೇವರ ಪುತ್ರ” ಎಂದು ಅರಚಿದವು. ಯೇಸು ಅವುಗಳನ್ನು ಗದರಿಸಿ ಮಾತನಾಡಬಾರದೆಂದು ಹೇಳಿದರು. ಏಕೆಂದರೆ ಅವರೇ ಕ್ರಿಸ್ತನೆಂದು ಅವುಗಳಿಗೆ ಗೊತ್ತಿತ್ತು. 42 ಬೆಳಗಾದ ಮೇಲೆ, ಯೇಸು ಏಕಾಂತ ಸ್ಥಳಕ್ಕೆ ಹೊರಟು ಹೋದರು. ಜನರು ಅವರನ್ನು ಹುಡುಕಿಕೊಂಡು ಅವರ ಬಳಿಗೆ ಬಂದು ತಮ್ಮನ್ನು ಬಿಟ್ಟು ಹೋಗಬಾರದೆಂದು ಅವರನ್ನು ತಡೆದರು. 43 ಆದರೆ ಯೇಸು ಅವರಿಗೆ, “ಬೇರೆ ಪಟ್ಟಣಗಳಿಗೂ ದೇವರ ರಾಜ್ಯದ ಸುವಾರ್ತೆಯನ್ನು ನಾನು ಸಾರಬೇಕಾಗಿದೆ. ನನ್ನನ್ನು ಕಳುಹಿಸಿರುವುದು ಇದಕ್ಕಾಗಿಯೇ,” ಎಂದರು. 44 ಅನಂತರ ಯೇಸು ಯೂದಾಯದ ಸಭಾಮಂದಿರಗಳಲ್ಲಿ ಸುವಾರ್ತೆ ಸಾರುತ್ತಾ ಇದ್ದರು.

< ಲೂಕನು 4 >