< ಲೂಕನು 20 >

1 ಆ ದಿವಸಗಳಲ್ಲಿ ಒಂದು ದಿನ ಯೇಸು ದೇವಾಲಯದ ಅಂಗಳದಲ್ಲಿ ಜನರಿಗೆ ಬೋಧಿಸುತ್ತಾ, ಸುವಾರ್ತೆಯನ್ನು ಸಾರುತ್ತಿದ್ದರು. ಮುಖ್ಯಯಾಜಕರೂ ನಿಯಮ ಬೋಧಕರೂ ಹಿರಿಯರೊಂದಿಗೆ ಅವರ ಬಳಿಗೆ ಬಂದು 2 ಯೇಸುವಿಗೆ, “ನೀವು ಇವುಗಳನ್ನು ಯಾವ ಅಧಿಕಾರದಿಂದ ಮಾಡುತ್ತೀರಿ? ನಿಮಗೆ ಈ ಅಧಿಕಾರವನ್ನು ಕೊಟ್ಟವರು ಯಾರು? ನಮಗೆ ಹೇಳಿ,” ಎಂದರು. 3 ಅದಕ್ಕೆ ಯೇಸು ಅವರಿಗೆ, “ನಾನು ಸಹ ನಿಮ್ಮನ್ನು ಒಂದು ವಿಷಯ ಕೇಳುತ್ತೇನೆ, ನನಗೆ ಉತ್ತರಕೊಡಿರಿ. 4 ಯೋಹಾನನಿಗೆ ದೀಕ್ಷಾಸ್ನಾನವನ್ನು ಕೊಡುವ ಅಧಿಕಾರ ಪರಲೋಕದಿಂದ ಬಂದದ್ದೋ ಇಲ್ಲವೇ ಮನುಷ್ಯರಿಂದಲೋ?” ಎಂದು ಕೇಳಿದರು. 5 ಆಗ ಅವರು ತಮ್ಮೊಳಗೆ, “‘ಪರಲೋಕದಿಂದ’ ಎಂದು ನಾವು ಹೇಳಿದರೆ ಆತನು, ‘ನೀವು ಏಕೆ ಅವನನ್ನು ನಂಬಲಿಲ್ಲ?’ ಎಂದು ಕೇಳುವರು. 6 ‘ಮನುಷ್ಯರಿಂದ ಬಂತು,’ ಎಂದು ನಾವು ಹೇಳಿದರೆ, ಜನರೆಲ್ಲಾ ನಮಗೆ ಕಲ್ಲೆಸೆಯುವರು. ಏಕೆಂದರೆ ಯೋಹಾನನು ಒಬ್ಬ ಪ್ರವಾದಿಯೆಂದು ಅವರು ಒಪ್ಪಿದ್ದಾರೆ,” ಎಂದು ಆಲೋಚಿಸಿ, 7 “ಅದು ಎಲ್ಲಿಂದಲೋ ನಮಗೆ ಗೊತ್ತಿಲ್ಲ,” ಎಂದು ಉತ್ತರಕೊಟ್ಟರು. 8 ಆಗ ಯೇಸು ಅವರಿಗೆ, “ನಾನು ಸಹ ಯಾವ ಅಧಿಕಾರದಿಂದ ಇವುಗಳನ್ನು ಮಾಡುತ್ತೇನೆಂದು ನಿಮಗೆ ಹೇಳುವುದಿಲ್ಲ,” ಎಂದರು. 9 ಬಳಿಕ ಯೇಸು ಜನರಿಗೆ ಈ ಸಾಮ್ಯವನ್ನು ಹೇಳಿದರು: “ಒಬ್ಬನು ದ್ರಾಕ್ಷಿಯ ತೋಟವನ್ನು ನೆಟ್ಟು, ಅದನ್ನು ರೈತರಿಗೆ ಗೇಣಿಗೆ ಕೊಟ್ಟು, ದೀರ್ಘಕಾಲ ದೂರದೇಶಕ್ಕೆ ಪ್ರವಾಸಹೋದನು. 10 ಫಲದ ಕಾಲ ಬಂದಾಗ ಅವನು ತನಗೆ ಬರಬೇಕಾಗಿದ್ದ ದ್ರಾಕ್ಷಿತೋಟದ ಫಲವನ್ನು ಕೊಡುವಂತೆ ತನ್ನ ಸೇವಕನನ್ನು ಅವರ ಬಳಿಗೆ ಕಳುಹಿಸಿದನು. ಆದರೆ ಆ ಗೇಣಿಗೆದಾರರು ಅವನನ್ನು ಹೊಡೆದು, ಬರಿಗೈಯಲ್ಲಿ ಕಳುಹಿಸಿಬಿಟ್ಟರು. 11 ಯಜಮಾನನು ಪುನಃ ಮತ್ತೊಬ್ಬ ಸೇವಕನನ್ನು ಕಳುಹಿಸಿದನು. ಅವರು ಎರಡನೆಯವನನ್ನೂ ಸಹ ಹೊಡೆದು, ಅವಮಾನಪಡಿಸಿ ಬರಿಗೈಯಲ್ಲಿ ಕಳುಹಿಸಿಬಿಟ್ಟರು. 12 ಆ ಯಜಮಾನನು ಮೂರನೆಯವನನ್ನು ಕಳುಹಿಸಿದನು. ಆಗ ಅವರು ಅವನನ್ನೂ ಗಾಯಪಡಿಸಿ ಹೊರಗೆ ಹಾಕಿದರು. 13 “ಆಗ ದ್ರಾಕ್ಷಿಯ ತೋಟದ ಯಜಮಾನನು, ‘ನಾನೇನು ಮಾಡಲಿ? ನಾನು ನನ್ನ ಪ್ರಿಯ ಮಗನನ್ನೇ ಕಳುಹಿಸುವೆನು, ಬಹುಶಃ ಅವರು ಅವನಿಗಾದರೂ ಮರ್ಯಾದೆಕೊಟ್ಟಾರು,’ ಎಂದುಕೊಂಡನು. 14 “ಆದರೆ ಗೇಣಿಗೆದಾರರು ಅವನನ್ನು ಕಂಡಾಗ ತಮ್ಮತಮ್ಮೊಳಗೆ, ‘ಇವನೇ ಬಾಧ್ಯಸ್ಥನು. ಇವನನ್ನು ನಾವು ಕೊಂದು ಹಾಕೋಣ. ಆಗ ಆಸ್ತಿ ನಮ್ಮದಾಗುವುದು,’ ಎಂದು ಒಳಸಂಚು ಮಾಡಿಕೊಂಡರು. 15 ಹಾಗೆಯೇ, ಅವರು ಅವನನ್ನು ದ್ರಾಕ್ಷಿತೋಟದ ಹೊರಗೆ ಹಾಕಿ ಕೊಂದರು. “ಹೀಗಿರಲಾಗಿ ದ್ರಾಕ್ಷಿತೋಟದ ಯಜಮಾನನು ಅವರಿಗೆ ಏನು ಮಾಡುವನು? 16 ಅವನು ಬಂದು ಆ ಗೇಣಿಗೆದಾರರನ್ನು ಸಂಹರಿಸಿ ದ್ರಾಕ್ಷಿಯ ತೋಟವನ್ನು ಬೇರೆಯವರಿಗೆ ಒಪ್ಪಿಸುವನು,” ಎಂದರು. ಜನರು ಇದನ್ನು ಕೇಳಿದಾಗ, “ಹಾಗೆ ಎಂದಿಗೂ ಆಗಬಾರದು!” ಎಂದರು. 17 ಆಗ ಯೇಸು ಅವರನ್ನು ದಿಟ್ಟಿಸಿ ನೋಡಿ, “ಹಾಗಾದರೆ, “‘ಮನೆ ಕಟ್ಟುವವರು ತಿರಸ್ಕರಿಸಿದ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯಿತು,’ ಎಂದು ಪವಿತ್ರ ವೇದದಲ್ಲಿ ಬರೆದಿರುವುದರ ಅರ್ಥ ಏನು? 18 ಆ ಕಲ್ಲಿನ ಮೇಲೆ ಬೀಳುವವನು ತುಂಡುತುಂಡಾಗುವನು; ಆದರೆ ಅದೇ ಕಲ್ಲು ಯಾವನ ಮೇಲೆ ಬೀಳುವುದೋ ಅವನನ್ನು ಅದು ಜಜ್ಜಿ ಹೋಗುವಂತೆ ಮಾಡುವುದು,” ಎಂದರು. 19 ಅದೇ ಗಳಿಗೆಯಲ್ಲಿ ನಿಯಮ ಬೋಧಕರೂ ಮುಖ್ಯಯಾಜಕರೂ ಯೇಸುವನ್ನು ಬಂಧಿಸುವುದಕ್ಕೆ ಹವಣಿಸಿದರು. ಏಕೆಂದರೆ ಯೇಸು ತಮಗೆ ವಿರೋಧವಾಗಿಯೇ ಈ ಸಾಮ್ಯವನ್ನು ಹೇಳಿದ್ದಾರೆಂದು ಅವರು ತಿಳಿದುಕೊಂಡರು. ಆದರೂ ಅವರು ಜನರಿಗೆ ಭಯಪಟ್ಟರು. 20 ಅವರು ಯೇಸುವನ್ನು ಹೊಂಚಿ ನೋಡುತ್ತಾ, ಮಾತಿನಲ್ಲಿ ಅವರನ್ನು ಸಿಕ್ಕಿಸುವಂತೆ ಅಧಿಪತಿಗೂ ಅಧಿಕಾರಕ್ಕೂ ಒಪ್ಪಿಸಿಕೊಡಲು, ನೀತಿವಂತರೆಂದು ನಟಿಸುವ ಗೂಢಚಾರರನ್ನು ಕಳುಹಿಸಿದರು. 21 ಅವರು ಯೇಸುವಿಗೆ, “ಗುರುವೇ, ನೀವು ಮುಖ ದಾಕ್ಷಿಣ್ಯವಿಲ್ಲದೆ ಸರಿಯಾಗಿ ಬೋಧಿಸುತ್ತೀರಿ ಮತ್ತು ದೇವರ ಮಾರ್ಗವನ್ನು ಸತ್ಯವಾಗಿ ಬೋಧಿಸುವವರಾಗಿದ್ದೀರೆಂದು ನಾವು ಬಲ್ಲೆವು. 22 ಆದ್ದರಿಂದ ಕೈಸರನಿಗೆ ತೆರಿಗೆ ಕೊಡುವುದು ನಮಗೆ ಮೋಶೆಯ ನಿಯಮಕ್ಕೆ ಅನುಸಾರವಾದದ್ದೋ?” ಎಂದು ಕೇಳಿದರು. 23 ಆದರೆ ಯೇಸು ಅವರ ಕುಯುಕ್ತಿಯನ್ನು ತಿಳಿದು ಅವರಿಗೆ, 24 “ಒಂದು ಬೆಳ್ಳಿ ನಾಣ್ಯವನ್ನು ತೋರಿಸಿರಿ. ಇದರಲ್ಲಿರುವುದು ಯಾರ ಮುದ್ರೆ? ಯಾರ ಲಿಪಿ?” ಎಂದು ಅವರನ್ನು ಕೇಳಲು ಅವರು, “ಕೈಸರನದು,” ಎಂದರು. 25 ಆಗ ಯೇಸು ಅವರಿಗೆ, “ಹಾಗಾದರೆ ಕೈಸರನದನ್ನು ಕೈಸರನಿಗೂ ದೇವರದ್ದನ್ನು ದೇವರಿಗೂ ಕೊಡಿರಿ,” ಎಂದರು. 26 ಯೇಸು ಜನರ ಮುಂದೆ ಬಹಿರಂಗವಾಗಿ ಹೇಳಿದ ಮಾತಿನಲ್ಲಿ ಅವರು ತಪ್ಪು ಕಂಡುಹಿಡಿಯಲಾರದೆ ಹೋದರು. ಯೇಸುವಿನ ಉತ್ತರಗಳಿಗಾಗಿ ಆಶ್ಚರ್ಯಪಟ್ಟು ಸುಮ್ಮನಾದರು. 27 ಪುನರುತ್ಥಾನವನ್ನು ಅಲ್ಲಗಳೆಯುವ ಸದ್ದುಕಾಯರಲ್ಲಿ ಕೆಲವರು, ಯೇಸುವಿನ ಬಳಿಗೆ ಬಂದು ಅವರಿಗೆ, 28 “ಬೋಧಕರೇ, ಒಬ್ಬನು ಮಕ್ಕಳಿಲ್ಲದೆ ಸತ್ತರೆ, ಅವನ ಸಹೋದರನು ಅವನ ಪತ್ನಿಯನ್ನು ಮದುವೆಯಾಗಿ ತನ್ನ ಸಹೋದರನಿಗಾಗಿ ಸಂತಾನವನ್ನು ಪಡೆಯಬೇಕೆಂದು ಮೋಶೆ ನಮಗೆ ಬರೆದಿಟ್ಟಿದ್ದಾನೆ. 29 ಹೀಗೆ ಏಳುಮಂದಿ ಸಹೋದರರಿದ್ದರು. ಮೊದಲನೆಯವನು ಆ ಸ್ತ್ರೀಯನ್ನು ಮದುವೆಯಾಗಿ ಸಂತಾನವಿಲ್ಲದೆ ಮೃತಪಟ್ಟನು. 30 ಎರಡನೆಯವನೂ ಆಕೆಯನ್ನು ಮದುವೆಯಾಗಿ ಸಂತಾನವಿಲ್ಲದೆ ಮೃತನಾದನು. 31 ಮೂರನೆಯವನು ಆಕೆಯನ್ನು ಮದುವೆಯಾದನು, ಅದೇ ರೀತಿಯಲ್ಲಿ ಏಳು ಜನರು ಸಹ ಮದುವೆಯಾಗಿ ಮಕ್ಕಳಿಲ್ಲದೆ ನಿಧನರಾದರು. 32 ಕೊನೆಗೆ, ಆ ಸ್ತ್ರೀಯು ಸಹ ಮರಣಹೊಂದಿದಳು. 33 ಹಾಗಾದರೆ, ಪುನರುತ್ಥಾನದಲ್ಲಿ ಅವರು ಜೀವಂತವಾಗಿ ಎದ್ದಾಗ ಅವರಲ್ಲಿ ಆಕೆಯು ಯಾರ ಪತ್ನಿಯಾಗಿರುವಳು? ಏಕೆಂದರೆ ಏಳುಮಂದಿಯೂ ಅವಳನ್ನು ಮದುವೆ ಮಾಡಿಕೊಂಡಿದ್ದರಲ್ಲಾ?” ಎಂದರು. 34 ಅದಕ್ಕೆ ಯೇಸು ಉತ್ತರವಾಗಿ, “ಈ ಲೋಕದ ಜನರು ಮದುವೆ ಮಾಡಿಕೊಳ್ಳುತ್ತಾರೆ. ಮದುವೆ ಮಾಡಿಕೊಡುತ್ತಾರೆ. (aiōn g165) 35 ಆದರೆ ಮುಂಬರುವ ಲೋಕದಲ್ಲಿ ಸತ್ತವರು ಪುನರುತ್ಥಾನವನ್ನು ಹೊಂದಿ, ಯೋಗ್ಯರೆಂದು ಮದುವೆಮಾಡಿಕೊಳ್ಳುವುದೂ ಇಲ್ಲ, ಮದುವೆಮಾಡಿಕೊಡುವುದೂ ಇಲ್ಲ. (aiōn g165) 36 ಅವರು ಇನ್ನೆಂದಿಗೂ ಸಾಯುವುದಿಲ್ಲ. ಏಕೆಂದರೆ ಅವರು ಪುನರುತ್ಥಾನದ ಮಕ್ಕಳೂ ದೇವದೂತರಿಗೆ ಸರಿಸಮಾನರೂ ಆಗಿರುವುದರಿಂದ, ಅವರು ದೇವರ ಮಕ್ಕಳಾಗಿದ್ದಾರೆ. 37 ಆದರೆ ಉರಿಯುವ ಪೊದೆಯ ಬಳಿ ಕರ್ತದೇವರು, ‘ಅಬ್ರಹಾಮನ ದೇವರು, ಇಸಾಕನ ದೇವರು, ಯಾಕೋಬನ ದೇವರು,’ ಎಂದು ತಿಳಿಸಿ ಸತ್ತವರು ಏಳುತ್ತಾರೆಂಬದನ್ನು ಮೋಶೆಗೆ ವ್ಯಕ್ತಪಡಿಸಿದ್ದಾರೆ. 38 ದೇವರು ಜೀವಿತರಿಗೆ ದೇವರಾಗಿದ್ದಾರೆ ಹೊರತು ಸತ್ತವರಿಗಲ್ಲ. ಏಕೆಂದರೆ ಎಲ್ಲರೂ ಅವರಿಗಾಗಿ ಜೀವಿಸುತ್ತಾರೆ,” ಎಂದರು. 39 ಆಗ ನಿಯಮ ಬೋಧಕರಲ್ಲಿ ಕೆಲವರು ಪ್ರತ್ಯುತ್ತರವಾಗಿ, “ಬೋಧಕರೇ, ನೀವು ಸರಿಯಾಗಿ ಹೇಳಿದಿರಿ,” ಎಂದರು. 40 ಯಾರೂ ಯೇಸುವಿಗೆ ಯಾವ ಪ್ರಶ್ನೆಯನ್ನು ಕೇಳುವುದಕ್ಕೂ ಧೈರ್ಯಗೊಳ್ಳಲಿಲ್ಲ. 41 ಯೇಸು ಅವರಿಗೆ, “ಕ್ರಿಸ್ತನು ದಾವೀದನ ಪುತ್ರನೆಂದು ಜನರು ಹೇಳುವುದು ಹೇಗೆ? 42 ದಾವೀದನು ತಾನೇ ಕೀರ್ತನೆಗಳ ಗ್ರಂಥದಲ್ಲಿ ಹೀಗೆ ಹೇಳಿದ್ದಾನೆ: “‘ಕರ್ತದೇವರು ನನ್ನ ಕರ್ತದೇವರಿಗೆ: “ನಾನು ನಿನ್ನ ವಿರೋಧಿಗಳನ್ನು 43 ನಿನ್ನ ಪಾದಗಳ ಪೀಠವಾಗಿ ಮಾಡುವವರೆಗೂ ನನ್ನ ಬಲಪಾರ್ಶ್ವದಲ್ಲಿ ನೀನು ಕುಳಿತುಕೊಂಡಿರು.”’ 44 ಆದಕಾರಣ ದಾವೀದನು ತಾನೇ ಅವರನ್ನು, ‘ನನ್ನ ಕರ್ತದೇವರು,’ ಎಂದು ಕರೆಯುವಾಗ, ಅವರು ದಾವೀದನ ಪುತ್ರನಾಗುವುದು ಹೇಗೆ?” ಎಂದು ಕೇಳಿದರು. 45 ಜನರೆಲ್ಲರೂ ಕೇಳುತ್ತಿದ್ದಾಗ ಯೇಸು ತಮ್ಮ ಶಿಷ್ಯರಿಗೆ, 46 “ನಿಯಮ ಬೋಧಕರ ವಿಷಯದಲ್ಲಿ ಎಚ್ಚರಿಕೆಯಾಗಿರಿ. ಅವರು ನಿಲುವಂಗಿಯನ್ನು ತೊಟ್ಟುಕೊಂಡು ತಿರುಗಾಡುವುದಕ್ಕೆ ಬಯಸುವವರೂ ಮಾರುಕಟ್ಟೆ ಬೀದಿಗಳಲ್ಲಿ ವಂದನೆಗಳನ್ನೂ ಸಭಾಮಂದಿರಗಳಲ್ಲಿ ಅತ್ಯುನ್ನತ ಆಸನಗಳನ್ನೂ ಔತಣಗಳಲ್ಲಿ ಮುಖ್ಯಸ್ಥಾನಗಳನ್ನೂ ಬಯಸುವವರಾಗಿದ್ದಾರೆ; 47 ಇವರು ವಿಧವೆಯರ ಮನೆಗಳನ್ನು ದೋಚಿ ನಟನೆಗಾಗಿ ಉದ್ದವಾದ ಪ್ರಾರ್ಥನೆಗಳನ್ನು ಮಾಡುತ್ತಾರೆ. ಇಂಥವರು ಹೆಚ್ಚಾದ ದಂಡನೆಯನ್ನು ಹೊಂದುವರು,” ಎಂದರು.

< ಲೂಕನು 20 >