< ಲೂಕನು 13 >

1 ಪಿಲಾತನು, ಬಲಿ ಅರ್ಪಿಸುತ್ತಿದ್ದ ಗಲಿಲಾಯದವರ ರಕ್ತವನ್ನೇ ಅವರ ಬಲಿಗಳೊಂದಿಗೆ ಬೆರೆಸಿದ ವಿಷಯವನ್ನು ಯೇಸುವಿಗೆ ತಿಳಿಸಿದ ಕೆಲವರು ಆ ಸಮಯದಲ್ಲಿ ಅಲ್ಲಿದ್ದರು.
ಅದೇ ಸಮಯದಲ್ಲಿ ಕೆಲವರು ಯೇಸುವಿನ ಹತ್ತಿರದಲ್ಲಿದ್ದು, ಪಿಲಾತನು ಗಲಿಲಾಯದವರ ರಕ್ತವನ್ನು ಅವರು ಕೊಟ್ಟ ಬಲಿಗಳ ಸಂಗಡ ಬೆರಸಿದನೆಂದು ಆತನಿಗೆ ತಿಳಿಸಿದರು.
2 ಯೇಸು ಅವರಿಗೆ, “ಆ ಗಲಿಲಾಯದವರು ಇಂಥಾ ಕೊಲೆಗೆ ಈಡಾದ ಕಾರಣ ಅವರು ಎಲ್ಲಾ ಗಲಿಲಾಯದವರಿಗಿಂತ ದೋಷಿಗಳೆಂದು ನೀವು ಭಾವಿಸುತ್ತೀರೋ?
ಅದಕ್ಕೆ ಯೇಸು ಅವರಿಗೆ, “ಆ ಗಲಿಲಾಯದವರು ಇಂಥಾ ಕೊಲೆಯನ್ನು ಅನುಭವಿಸಿದ್ದರಿಂದ ಅವರನ್ನು ಎಲ್ಲಾ ಗಲಿಲಾಯದವರಿಗಿಂತ ಪಾಪಿಷ್ಠರೆಂದು ಭಾವಿಸುತ್ತೀರೋ?
3 ಹಾಗಲ್ಲವೆಂದು ನಾನು ನಿಮಗೆ ಹೇಳುತ್ತೇನೆ! ನೀವು ದೇವರ ಕಡೆಗೆ ತಿರುಗಿಕೊಳ್ಳದೆ ಹೋದರೆ, ನೀವೆಲ್ಲರೂ ಅವರಂತೆಯೇ ನಾಶವಾಗುವಿರಿ.
ಹಾಗೆ ಭಾವಿಸಕೂಡದೆಂದು ನಿಮಗೆ ಹೇಳುತ್ತೇನೆ. ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳದಿದ್ದರೆ ನೀವೆಲ್ಲರೂ ಅವರಂತೆ ನಾಶವಾಗುವಿರಿ.
4 ಇಲ್ಲವೆ ಸಿಲೋವ ಎಂಬಲ್ಲಿ ಗೋಪುರವು ಬಿದ್ದು ಸತ್ತು ಹೋದ ಆ ಹದಿನೆಂಟು ಜನರು ಯೆರೂಸಲೇಮಿನಲ್ಲಿ ವಾಸವಾಗಿರುವ ಎಲ್ಲಾ ಮನುಷ್ಯರಿಗಿಂತಲೂ ದೋಷಿಗಳೆಂದು ಭಾವಿಸುತ್ತೀರೋ?
ಇಲ್ಲವೆ ಸಿಲೊವಾಮಿನಲ್ಲಿ ಗೋಪುರ ಬಿದ್ದು ಸತ್ತ ಆ ಹದಿನೆಂಟು ಮಂದಿಯು ಯೆರೂಸಲೇಮಿನಲ್ಲಿ ವಾಸವಾಗಿರುವ ಎಲ್ಲಾ ಮನುಷ್ಯರಿಗಿಂತಲೂ ಕೆಟ್ಟವರೆಂದು ನೀವು ಭಾವಿಸುತ್ತೀರೋ?
5 ಹಾಗಲ್ಲವೆಂದು ನಾನು ನಿಮಗೆ ಹೇಳುತ್ತೇನೆ! ನೀವು ದೇವರ ಕಡೆಗೆ ತಿರುಗಿಕೊಳ್ಳದೆ ಹೋದರೆ ನೀವೆಲ್ಲರೂ ಅವರಂತೆಯೇ ನಾಶವಾಗುವಿರಿ,” ಎಂದರು.
ಹಾಗಲ್ಲವೆಂದು ನಿಮಗೆ ಹೇಳುತ್ತೇನೆ. ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳದಿದ್ದರೆ ನೀವೆಲ್ಲರೂ ಅವರಂತೆ ನಾಶವಾಗುವಿರಿ” ಎಂದು ಹೇಳಿದನು.
6 ಅನಂತರ ಯೇಸು ಈ ಸಾಮ್ಯವನ್ನು ಹೇಳಿದರು: “ಒಬ್ಬ ಮನುಷ್ಯನಿಗೆ ತನ್ನ ದ್ರಾಕ್ಷಿಯ ತೋಟದಲ್ಲಿ ನೆಡಲಾಗಿದ್ದ, ಒಂದು ಅಂಜೂರದ ಮರವಿತ್ತು. ಅವನು ಬಂದು ಅದರಲ್ಲಿ ಫಲವನ್ನು ಹುಡುಕಲು ಒಂದೂ ಸಿಕ್ಕಲಿಲ್ಲ.
ಆ ಮೇಲೆ ಯೇಸು ಒಂದು ಸಾಮ್ಯವನ್ನು ಹೇಳಿದನು. ಅದೇನೆಂದರೆ, “ಒಬ್ಬನು ತನ್ನ ದ್ರಾಕ್ಷಿಯ ತೋಟದಲ್ಲಿ ಒಂದು ಅಂಜೂರದ ಗಿಡವನ್ನು ನೆಡಿಸಿದನು. ಸ್ವಲ್ಪಕಾಲದ ನಂತರ ಅವನು ಆ ಮರದಲ್ಲಿ ಹಣ್ಣನ್ನು ಹುಡುಕುತ್ತಾ ಬಂದನು. ಸಿಕ್ಕಲಿಲ್ಲ.
7 ಆಗ ಅವನು ತನ್ನ ದ್ರಾಕ್ಷಿಯ ತೋಟ ಮಾಡುವವನಿಗೆ, ‘ನೋಡು, ಮೂರು ವರ್ಷಗಳಿಂದ ನಾನು ಈ ಅಂಜೂರದ ಮರದಲ್ಲಿ ಫಲ ಹುಡುಕುತ್ತಾ ಬಂದಿದ್ದೇನೆ, ಆದರೆ ಏನೂ ಸಿಕ್ಕಲಿಲ್ಲ. ಇದನ್ನು ಕಡಿದುಹಾಕು! ಇದು ಏಕೆ ನೆಲವನ್ನು ಕೆಡಿಸಬೇಕು?’ ಎಂದು ಹೇಳಿದನು.
ಬಳಿಕ ಅವನು ತೋಟಗಾರನಿಗೆ, ‘ನೋಡು, ನಾನು ಮೂರು ವರ್ಷದಿಂದಲೂ ಈ ಅಂಜೂರದ ಮರದಲ್ಲಿ ಹಣ್ಣನ್ನು ಹುಡುಕುತ್ತಾ ಬಂದಿದ್ದೇನೆ; ಆದರೂ ನನಗೆ ಸಿಕ್ಕಲಿಲ್ಲ. ಇದನ್ನು ಕಡಿದು ಹಾಕು. ಇದರಿಂದ ಭೂಮಿಯು ಯಾಕೆ ವ್ಯರ್ಥವಾಗಬೇಕು’ ಎಂದು ಹೇಳಿದನು.
8 “ಆದರೆ ಅವನು ಉತ್ತರವಾಗಿ ಅವನಿಗೆ, ‘ಒಡೆಯನೇ, ಇನ್ನೊಂದು ವರ್ಷವೂ ಇದನ್ನು ಬಿಡು, ನಾನು ಅದರ ಸುತ್ತಲೂ ಅಗಿದು ಗೊಬ್ಬರ ಹಾಕುವೆನು.
ಅದಕ್ಕೆ ಆ ತೋಟಗಾರನು, ‘ಯಜಮಾನನೇ ಈ ವರ್ಷವೂ ಇದನ್ನು ಬಿಡು, ಅಷ್ಟರಲ್ಲಿ ನಾನು ಇದರ ಸುತ್ತಲು ಅಗೆದು ಗೊಬ್ಬರ ಹಾಕುತ್ತೇನೆ.
9 ಮುಂದಿನ ವರ್ಷ ಇದು ಫಲ ಫಲಿಸಿದರೆ, ಸರಿ! ಇಲ್ಲವಾದರೆ, ನೀನು ಇದನ್ನು ಕಡಿದುಹಾಕು, ಎಂದನು.’”
ಮುಂದೆ ಅದರಲ್ಲಿ ಹಣ್ಣು ಬಿಟ್ಟರೆ ಸರಿ, ಇಲ್ಲದಿದ್ದರೆ ಇದನ್ನು ಕಡಿದುಹಾಕಬಹುದು’” ಎಂದು ಉತ್ತರ ಕೊಟ್ಟನು.
10 ಯೇಸು ಸಬ್ಬತ್ ದಿನದಲ್ಲಿ ಒಂದು ಸಭಾಮಂದಿರದೊಳಗೆ ಬೋಧಿಸುತ್ತಾ ಇದ್ದರು,
೧೦ಒಂದು ಸಬ್ಬತ್ ದಿನದಲ್ಲಿ ಯೇಸು ಒಂದು ಸಭಾಮಂದಿರದೊಳಗೆ ಉಪದೇಶಮಾಡುತ್ತಾ ಇದ್ದನು.
11 ಆಗ, ಹದಿನೆಂಟು ವರ್ಷಗಳಿಂದ ದುರಾತ್ಮನಿಂದ ರೋಗ ಪೀಡಿತಳಾಗಿ ನಡುಬಗ್ಗಿ ಹೋಗಿದ್ದ ಒಬ್ಬ ಸ್ತ್ರೀಯು ಅಲ್ಲಿ ಇದ್ದಳು. ಆಕೆ ತನ್ನಷ್ಟಕ್ಕೆ ತಾನೇ ನೆಟ್ಟಗೆ ನಿಲ್ಲಲಾರದೆ ಇದ್ದಳು.
೧೧ಅಲ್ಲಿ ಹದಿನೆಂಟು ವರ್ಷಗಳಿಂದ ದುರಾತ್ಮನಿಂದ ಬಾಧಿತಳಾಗಿ ಬೆನ್ನು ಬಗ್ಗಿ ಹೋಗಿ ಗೂನಿಯಾಗಿದ್ದು ಸ್ವಲ್ಪವಾದರೂ ಮೈಯನ್ನು ಮೇಲಕ್ಕೆ ಎತ್ತಲಾರದೆ ಇದ್ದ ಒಬ್ಬ ಹೆಂಗಸು ಇದ್ದಳು.
12 ಯೇಸು ಆಕೆಯನ್ನು ಕಂಡು, ಹತ್ತಿರಕ್ಕೆ ಕರೆದು ಆಕೆಗೆ, “ಅಮ್ಮಾ, ನೀನು ಈ ನಿನ್ನ ಬಲಹೀನತೆಯಿಂದ ಬಿಡುಗಡೆಯಾಗಿದ್ದಿ,” ಎಂದು ಹೇಳಿ,
೧೨ಯೇಸು ಆಕೆಯನ್ನು ನೋಡಿ ಹತ್ತಿರಕ್ಕೆ ಕರೆದು ಆಕೆಗೆ, “ನಿನ್ನ ರೋಗವು ಬಿಡುಗಡೆಯಾಯಿತು” ಎಂದು ಹೇಳಿ
13 ಯೇಸು ಆಕೆಯ ಮೇಲೆ ತಮ್ಮ ಕೈಗಳನ್ನು ಇಟ್ಟರು, ಕೂಡಲೇ ಆಕೆಯು ನೆಟ್ಟಗಾದಳು ಮತ್ತು ದೇವರನ್ನು ಸ್ತುತಿಸಿದಳು.
೧೩ಆಕೆಯ ಮೇಲೆ ತನ್ನ ಕೈಗಳನ್ನಿಟ್ಟನು. ಇಟ್ಟಕೂಡಲೆ ಆಕೆ ನೆಟ್ಟಗಾದಳು, ದೇವರನ್ನು ಕೊಂಡಾಡಿದಳು.
14 ಯೇಸು ಸಬ್ಬತ್ ದಿನದಲ್ಲಿ ಸ್ವಸ್ಥಮಾಡಿದ ಕಾರಣ ಸಭಾಮಂದಿರದ ಅಧಿಕಾರಿಯು ಕೋಪದಿಂದ ಜನರಿಗೆ, “ಆರು ದಿವಸಗಳಲ್ಲಿ ಮನುಷ್ಯರು ಕೆಲಸ ಮಾಡತಕ್ಕದ್ದು. ಆದ್ದರಿಂದ ಆ ದಿನಗಳಲ್ಲಿ ನೀವು ಬಂದು ಸ್ವಸ್ಥರಾಗಿರಿ, ಸಬ್ಬತ್ ದಿನದಲ್ಲಿ ಬೇಡ,” ಎಂದನು.
೧೪ಆದರೆ ಆ ಸಭಾಮಂದಿರದ ಅಧಿಕಾರಿಯು ನಡೆದ ಸಂಗತಿಯನ್ನು ನೋಡಿ, ಸಬ್ಬತ್ ದಿನದಲ್ಲಿ ಯೇಸು ಸ್ವಸ್ಥ ಮಾಡಿದನಲ್ಲಾ ಎಂದು ಸಿಟ್ಟುಗೊಂಡು ಜನರಿಗೆ, “ಕೆಲಸ ಮಾಡುವುದಕ್ಕೆ ಆರು ದಿನಗಳು ಅವೆಯಷ್ಟೆ. ಆ ದಿನಗಳಲ್ಲಿ ಬಂದು ವಾಸಿಮಾಡಿಸಿಕೊಳ್ಳಿರಿ, ಸಬ್ಬತ್ ದಿನದಲ್ಲಿ ಮಾತ್ರ ಬೇಡ” ಎಂದು ಹೇಳಿದನು.
15 ಅದಕ್ಕೆ ಕರ್ತದೇವರು ಅವನಿಗೆ, “ಕಪಟಿಗಳೇ! ನಿಮ್ಮಲ್ಲಿ ಪ್ರತಿಯೊಬ್ಬನು ಸಬ್ಬತ್ ದಿನದಲ್ಲಿ ತನ್ನ ಎತ್ತನ್ನಾಗಲಿ, ಕತ್ತೆಯನ್ನಾಗಲಿ ಕೊಟ್ಟಿಗೆಯಿಂದ ಬಿಡಿಸಿ ನೀರು ಕುಡಿಸುವುದಕ್ಕಾಗಿ ಹೋಗುವುದಿಲ್ಲವೇ?
೧೫ಆ ಮಾತನ್ನು ಕೇಳಿ ಕರ್ತನು ಅವನಿಗೆ, “ಕಪಟಿಗಳೇ, ನಿಮ್ಮಲ್ಲಿ ಪ್ರತಿಯೊಬ್ಬನು ಸಬ್ಬತ್ ದಿನದಲ್ಲಿ ತನ್ನ ಎತ್ತನ್ನಾಗಲಿ ಕತ್ತೆಯನ್ನಾಗಲಿ ಗೋದಲಿಯಿಂದ ಬಿಚ್ಚಿ ನೀರು ಕುಡಿಸುವುದಕ್ಕಾಗಿ ಹಿಡಿದುಕೊಂಡು ಹೋಗುತ್ತಾನಲ್ಲವೇ.
16 ಅಬ್ರಹಾಮನ ಮಗಳಾದ ಈ ಸ್ತ್ರೀಯನ್ನು ಹದಿನೆಂಟು ವರ್ಷಗಳಿಂದ ಸೈತಾನನು ಕಟ್ಟಿಹಾಕಿದ ಈ ಬಂಧನದಿಂದ ಸಬ್ಬತ್ ದಿನದಲ್ಲಿ ಬಿಡಿಸಬಾರದೇ?” ಎಂದರು.
೧೬ಹಾಗಾದರೆ ಹದಿನೆಂಟು ವರ್ಷಗಳ ತನಕ ಸೈತಾನನು ಕಟ್ಟಿ ಹಾಕಿದ್ದವಳೂ ಅಬ್ರಹಾಮನ ವಂಶದವಳೂ ಆಗಿರುವ ಈಕೆಯನ್ನು ಸಬ್ಬತ್ ದಿನದಲ್ಲಿ ಈ ಬಂಧನದಿಂದ ಬಿಡಿಸಬಾರದೋ?” ಎಂದು ಕೇಳಿದನು.
17 ಯೇಸು ಇದನ್ನು ಹೇಳುತ್ತಿರುವಾಗ, ಅವರ ವಿರೋಧಿಗಳೆಲ್ಲರೂ ನಾಚಿಕೆಪಟ್ಟರು, ಆದರೆ ಇತರರು, ಅವರಿಂದ ನಡೆದ ಎಲ್ಲಾ ಮಹಿಮೆಯುಳ್ಳ ಕಾರ್ಯಗಳಿಗಾಗಿ ಸಂತೋಷಪಟ್ಟರು.
೧೭ಈ ಮಾತುಗಳನ್ನು ಆತನು ಹೇಳುತ್ತಿರಲಾಗಿ ಆತನ ವಿರೋಧಿಗಳೆಲ್ಲರೂ ಅವಮಾನಿತರಾದರು. ಗುಂಪು ಕೂಡಿದ್ದ ಜನರೆಲ್ಲರೂ ಆತನಿಂದಾಗುತ್ತಿದ್ದ ಎಲ್ಲಾ ಮಹತ್ತಾದ ಕಾರ್ಯಗಳಿಗೆ ಸಂತೋಷಪಟ್ಟರು.
18 ಅನಂತರ ಯೇಸು, “ದೇವರ ರಾಜ್ಯವು ಯಾವುದಕ್ಕೆ ಹೋಲಿಕೆಯಾಗಿದೆ? ನಾನು ಯಾವುದಕ್ಕೆ ಅದನ್ನು ಹೋಲಿಸಲಿ?
೧೮ತರುವಾಯ ಯೇಸು ಕೇಳಿದ್ದೇನಂದರೆ, “ದೇವರ ರಾಜ್ಯವು ಏನನ್ನು ಹೋಲುತ್ತದೆ? ಅದನ್ನು ನಾನು ಯಾವುದಕ್ಕೆ ಹೋಲಿಸಲಿ?
19 ಅದು ಸಾಸಿವೆಕಾಳಿಗೆ ಹೋಲಿಕೆಯಾಗಿದೆ. ಅದನ್ನು ಒಬ್ಬ ಮನುಷ್ಯನು ತೆಗೆದುಕೊಂಡುಹೋಗಿ ತನ್ನ ತೋಟದಲ್ಲಿ ಬಿತ್ತಲು, ಅದು ಬೆಳೆದು ಒಂದು ದೊಡ್ಡ ಮರವಾಯಿತು. ಆಕಾಶದ ಪಕ್ಷಿಗಳು ಅದರ ಕೊಂಬೆಗಳಲ್ಲಿ ಗೂಡು ಕಟ್ಟಿ ವಾಸಮಾಡಿದವು,” ಎಂದರು.
೧೯ಅದು ಸಾಸಿವೆ ಕಾಳಿಗೆ ಹೋಲಿಕೆಯಾಗಿದೆ. ಒಬ್ಬ ಮನುಷ್ಯನು ಅದನ್ನು ತೆಗೆದುಕೊಂಡು ಹೋಗಿ ತನ್ನ ತೋಟದಲ್ಲಿ ಹಾಕಿದನು. ಅದು ಬೆಳೆದು ಮರವಾಯಿತು. ಮತ್ತು ಆಕಾಶದಲ್ಲಿ ಹಾರಾಡುವ ಪಕ್ಷಿಗಳು ಅದರ ಕೊಂಬೆಗಳಲ್ಲಿ ಗೂಡು ಕಟ್ಟಿದವು” ಅಂದನು.
20 ಪುನಃ ಯೇಸು, “ದೇವರ ರಾಜ್ಯವನ್ನು ಯಾವುದಕ್ಕೆ ಹೋಲಿಸಲಿ?
೨೦ಆತನು ಇನ್ನೂ ಹೇಳಿದ್ದೇನಂದರೆ, “ದೇವರ ರಾಜ್ಯವನ್ನು ನಾನು ಯಾವುದಕ್ಕೆ ಹೋಲಿಸಲಿ?
21 ಅದು ಹುಳಿಹಿಟ್ಟಿಗೆ ಹೋಲಿಕೆಯಾಗಿದೆ. ಅದನ್ನು ಒಬ್ಬ ಸ್ತ್ರೀಯು ತೆಗೆದುಕೊಂಡು ಹುಳಿಯಿಲ್ಲದ ಸುಮಾರು ಇಪ್ಪತ್ತೇಳು ಕಿಲೋಗ್ರಾಂ ಹಿಟ್ಟಿನಲ್ಲಿ ಕಲಸಿದಾಗ ಆ ಹಿಟ್ಟೆಲ್ಲಾ ಹುಳಿಯಾಯಿತು,” ಎಂದರು.
೨೧ಅದು ಹುಳಿಹಿಟ್ಟಿಗೆ ಹೋಲಿಕೆಯಾಗಿದೆ. ಅದನ್ನು ಒಬ್ಬ ಹೆಂಗಸು ತೆಗೆದು ಮೂರು ಸೇರು ಹಿಟ್ಟಿನಲ್ಲಿ ಕಲಸಿಡಲು ಆ ಹಿಟ್ಟೆಲ್ಲಾ ಹುಳಿಯಾಯಿತು” ಅಂದನು.
22 ಯೇಸು ಪಟ್ಟಣಗಳನ್ನೂ ಹಳ್ಳಿಗಳನ್ನೂ ಸಂಚರಿಸಿ, ಅಲ್ಲೆಲ್ಲಾ ಬೋಧಿಸುತ್ತಾ ಯೆರೂಸಲೇಮಿನ ಕಡೆಗೆ ಪ್ರಯಾಣಮಾಡಿದರು.
೨೨ಯೇಸು ಊರೂರಿಗೂ ಗ್ರಾಮ ಗ್ರಾಮಕ್ಕೂ ಹೋಗಿ ಉಪದೇಶ ಮಾಡುತ್ತಾ ಯೆರೂಸಲೇಮಿಗೆ ಪ್ರಯಾಣ ಮಾಡುತ್ತಿದ್ದನು.
23 ಒಬ್ಬನು ಯೇಸುವಿಗೆ, “ಸ್ವಾಮಿ, ರಕ್ಷಣೆ ಹೊಂದುವವರು ಕೆಲವರೋ?” ಎಂದು ಕೇಳಲು, ಯೇಸು ಅವರಿಗೆ,
೨೩ಆಗ ಒಬ್ಬನು, “ಕರ್ತನೇ, ರಕ್ಷಣೆ ಹೊಂದುವವರು ಸ್ವಲ್ಪ ಜನರೋ?” ಎಂದು ಕೇಳಲು,
24 “ಇಕ್ಕಟ್ಟಾದ ಬಾಗಿಲಿನಿಂದ ಒಳಗೆ ಪ್ರವೇಶಿಸುವುದಕ್ಕೆ ಪ್ರಯಾಸಪಡಿರಿ, ಅನೇಕರು ಒಳಗೆ ಪ್ರವೇಶಿಸುವುದಕ್ಕೆ ಪ್ರಯತ್ನಿಸಿದರೂ ಆಗುವುದಿಲ್ಲ ಎಂದು ನಾನು ನಿಮಗೆ ಹೇಳುತ್ತೇನೆ.
೨೪ಆತನು ಅವರಿಗೆ, “ಇಕ್ಕಟ್ಟಾದ ಬಾಗಿಲಿನಿಂದ ಒಳಗೆ ಹೋಗುವುದಕ್ಕೆ ಪ್ರಯಾಸಪಡಿರಿ. ಏಕೆಂದರೆ ಬಹು ಜನರು ಒಳಗೆ ಹೋಗುವುದಕ್ಕೆ ನೋಡುವರು. ಆದರೆ ಅವರಿಂದಾಗುವುದಿಲ್ಲ ಎಂದು ನಿಮಗೆ ಹೇಳುತ್ತೇನೆ.
25 ಮನೆಯಜಮಾನರು ಒಂದು ಸಾರಿ ಎದ್ದು ಬಾಗಿಲನ್ನು ಮುಚ್ಚಿಕೊಂಡರೆ, ನೀವು ಹೊರಗೆ ನಿಂತುಕೊಂಡು ಬಾಗಿಲನ್ನು ತಟ್ಟುತ್ತಾ, ‘ಸ್ವಾಮಿ, ನಮಗೆ ಬಾಗಿಲನ್ನು ತೆರೆಯಿರಿ,’ ಎಂದು ಹೇಳುವುದಕ್ಕೆ ಆರಂಭಿಸಿದಾಗ, “ಆತನು ನಿಮಗೆ ಉತ್ತರವಾಗಿ, ‘ನೀವು ಯಾರು? ಎಲ್ಲಿಯವರೋ ನಾನು ನಿಮ್ಮನ್ನು ಅರಿಯೆನು,’ ಎಂದು ಹೇಳುವನು.
೨೫ಮನೆ ಯಜಮಾನನು ಎದ್ದು ಬಾಗಿಲು ಮುಚ್ಚಿದ ಮೇಲೆ ನೀವು ಹೊರಗೆ ನಿಂತುಕೊಂಡು ಬಾಗಿಲು ತಟ್ಟಿ, ‘ಕರ್ತನೇ ನಮಗೆ ಬಾಗಿಲು ತೆರೆಯಿರಿ’ ಎಂದು ಬಾಗಿಲು ಬಡಿಯುವುದಕ್ಕೆ ತೊಡಗುವಾಗ ಅವನು, ‘ನೀವು ಎಲ್ಲಿಯವರೋ? ನಿಮ್ಮ ಗುರುತು ನನಗಿಲ್ಲ’ ಅಂದಾನು
26 “ಆಗ ನೀವು, ‘ನಿಮ್ಮೊಂದಿಗೆ ನಾವು ಊಟಮಾಡಿದೆವು, ಪಾನಮಾಡಿದೆವು, ನೀವು ನಮ್ಮ ಬೀದಿಗಳಲ್ಲಿ ಬೋಧಿಸಿದಿರಿ,’ ಎಂದು ಹೇಳಲಾರಂಭಿಸುವಿರಿ.
೨೬ಅದಕ್ಕೆ ನೀವು, ‘ನಿನ್ನ ಸಂಗಡ ನಾವು ಊಟ ಮಾಡಿದೆವು, ಕುಡಿದೆವು, ನಮ್ಮ ಬೀದಿಗಳಲ್ಲಿ ನೀನು ಉಪದೇಶ ಮಾಡಿದ್ದಿ’ ಎಂದು ಹೇಳುವುದಕ್ಕೆ ತೊಡಗುವಿರಿ.
27 “ಅದಕ್ಕೆ ಆತನು, ‘ನೀವು ಎಲ್ಲಿಯವರೋ ನಾನರಿಯೆ, ಅನೀತಿಯನ್ನು ಮಾಡುವವರಾದ ನೀವೆಲ್ಲರೂ ನನ್ನಿಂದ ತೊಲಗಿಹೋಗಿರಿ,’ ಎಂದು ಹೇಳುವರು.
೨೭ಆದರೆ ಅವನು, ‘ನೀವು ಎಲ್ಲಿಯವರೋ? ನಿಮ್ಮ ಗುರುತು ನನಗಿಲ್ಲ. ಅಧರ್ಮಮಾಡುವ ನೀವೆಲ್ಲರೂ ನನ್ನ ಕಡೆಯಿಂದ ಹೊರಟು ಹೋಗಿರಿ’ ಎಂದು ನಿಮಗೆ ಹೇಳುತ್ತೇನೆ ಅನ್ನುವನು.
28 “ಅಬ್ರಹಾಮ, ಇಸಾಕ, ಯಾಕೋಬ ಮತ್ತು ಎಲ್ಲಾ ಪ್ರವಾದಿಗಳು ದೇವರ ರಾಜ್ಯದಲ್ಲಿ ಇರುವುದನ್ನೂ ನಿಮ್ಮನ್ನು ಮಾತ್ರ ಹೊರಗೆ ಹಾಕಿರುವುದನ್ನೂ ಕಾಣುವಾಗ, ಅಲ್ಲಿ ನಿಮಗೆ ಗೋಳಾಟವೂ ಹಲ್ಲು ಕಡಿಯೋಣವೂ ಇರುವವು.
೨೮ಅಬ್ರಹಾಮ, ಇಸಾಕ, ಯಾಕೋಬರು ಮತ್ತು ಎಲ್ಲಾ ಪ್ರವಾದಿಗಳು ದೇವರ ರಾಜ್ಯದಲ್ಲಿರುವುದನ್ನೂ ನೀವು ನೋಡುವಿರಿ. ಆದರೆ ನಿಮ್ಮನ್ನು ಮಾತ್ರ ಹೊರಗೆ ಹಾಕಲಾಗುವುದು ಅಲ್ಲಿ ನಿಮಗೆ ಗೋಳಾಟವೂ ಕಟಕಟನೆ ಹಲ್ಲು ಕಡಿಯೋಣವೂ ಉಂಟಾಗುವವು.
29 ಪೂರ್ವ ಪಶ್ಚಿಮ ಉತ್ತರ ದಕ್ಷಿಣಗಳಿಂದ ಜನರು ಬಂದು, ದೇವರ ರಾಜ್ಯದಲ್ಲಿ ಹಬ್ಬದ ಔತಣಕ್ಕೆ ಕುಳಿತುಕೊಳ್ಳುವರು.
೨೯ಇದಲ್ಲದೆ ಪೂರ್ವ ಪಶ್ಚಿಮ ಉತ್ತರ ದಕ್ಷಿಣಗಳಿಂದಲೂ ಜನರು ಬಂದು ದೇವರ ರಾಜ್ಯದಲ್ಲಿ ಔತಣಕ್ಕೆ ಕುಳಿತುಕೊಳ್ಳುವರು.
30 ಆಗ ಕಡೆಯವರು ಮೊದಲನೆಯವರಾಗುವರು, ಮೊದಲನೆಯವರು ಕಡೆಯವರಾಗುವರು,” ಎಂದು ಹೇಳಿದರು.
೩೦ಇಗೋ ಕಡೆಯವರಾಗಿರುವ ಕೆಲವರು ಮೊದಲಿನವರಾಗುವರು. ಮೊದಲಿನವರಾಗಿರುವ ಕೆಲವರು ಕಡೆಯವರಾಗುವರು” ಅಂದನು.
31 ಅದೇ ಸಮಯದಲ್ಲಿ ಫರಿಸಾಯರಲ್ಲಿ ಕೆಲವರು ಯೇಸುವಿನ ಬಳಿಗೆ ಬಂದು, “ನೀವು ಇಲ್ಲಿಂದ ಹೊರಟು ಹೋಗಿರಿ. ಹೆರೋದನು ನಿಮ್ಮನ್ನು ಕೊಲ್ಲಬೇಕೆಂದಿರುವನು,” ಎಂದು ಅವರಿಗೆ ಹೇಳಿದರು.
೩೧ಅದೇ ಗಳಿಗೆಯಲ್ಲಿ ಕೆಲವು ಮಂದಿ ಫರಿಸಾಯರು ಹತ್ತಿರ ಬಂದು ಯೇಸುವಿಗೆ, “ನೀನು ಇಲ್ಲಿಂದ ಹೊರಟು ಹೋಗು, ಹೆರೋದನು ನಿನ್ನನ್ನು ಕೊಲ್ಲಬೇಕೆಂದಿದ್ದಾನೆ” ಎಂದು ಹೇಳಲು,
32 ಅದಕ್ಕೆ ಯೇಸು ಅವರಿಗೆ, “ಇಗೋ, ‘ನಾನು ಈ ದಿವಸ ಮತ್ತು ನಾಳೆ ದೆವ್ವಗಳನ್ನು ಓಡಿಸುತ್ತೇನೆ ಸ್ವಸ್ಥಮಾಡುತ್ತೇನೆ, ಮೂರನೆಯ ದಿನದಲ್ಲಿ ನಾನು ಸಿದ್ಧಿಗೆ ಬರುತ್ತೇನೆ,’ ಎಂದು ನೀವು ಹೋಗಿ ಆ ನರಿಗೆ ಹೇಳಿರಿ.
೩೨ಆತನು ಅವರಿಗೆ, “ನೀವು ಹೋಗಿ ‘ಇಗೋ, ನಾನು ಈಹೊತ್ತು ನಾಳೆ ದೆವ್ವಗಳನ್ನು ಬಿಡಿಸುತ್ತಾ ರೋಗಿಗಳನ್ನು ವಾಸಿಮಾಡುತ್ತಾ ಇದ್ದು, ಮೂರನೆಯ ದಿನದಲ್ಲಿ ಸಿದ್ಧಿಗೆ ಬರುತ್ತೇನೆ’ ಎಂದು ಆ ನರಿಗೆ ಹೇಳಿರಿ.
33 ಆದರೂ ಈ ದಿವಸ ಮತ್ತು ನಾಳೆ ಮತ್ತು ನಾಡಿದ್ದು ನಾನು ಪ್ರಯಾಣ ಮಾಡಲೇಬೇಕು. ಏಕೆಂದರೆ ಒಬ್ಬ ಪ್ರವಾದಿಯು ಯೆರೂಸಲೇಮಿನ ಹೊರಗೆ ಕೊಲೆಗೀಡಾಗಬಾರದು!
೩೩ಹೇಗೂ ನಾನು ಈ ಹೊತ್ತು ನಾಳೆ ನಾಡಿದ್ದು ಸಂಚಾರ ಮಾಡಬೇಕು. ಪ್ರವಾದಿಯಾದವನು ಯೆರೂಸಲೇಮಿನಲ್ಲಿಯೇ ಹೊರತು ಬೇರೆ ಪಟ್ಟಣದಲ್ಲಿ ಕೊಲ್ಲಲ್ಪಡಕೂಡದಷ್ಟೆ.
34 “ಯೆರೂಸಲೇಮೇ, ಯೆರೂಸಲೇಮೇ, ಪ್ರವಾದಿಗಳನ್ನು ಕೊಲ್ಲುವವಳೇ, ನಿನ್ನ ಬಳಿಗೆ ಕಳುಹಿಸಿದವರನ್ನು ಕಲ್ಲೆಸೆಯುವವಳೇ, ಕೋಳಿಯು ತನ್ನ ಮರಿಗಳನ್ನು ತನ್ನ ರೆಕ್ಕೆಗಳ ಕೆಳಗೆ ಕೂಡಿಸುವಂತೆ ನಾನು ನಿನ್ನ ಮಕ್ಕಳನ್ನು ಕೂಡಿಸುವುದಕ್ಕೆ ನನಗೆ ಎಷ್ಟೋ ಸಾರಿ ಮನಸ್ಸಿತ್ತು. ಆದರೆ ನಿನಗೆ ಮನಸ್ಸಿಲ್ಲದೆ ಹೋಯಿತು.
೩೪ಯೆರೂಸಲೇಮೇ, ಯೆರೂಸಲೇಮೇ ಪ್ರವಾದಿಗಳ ಪ್ರಾಣ ತೆಗೆಯುವವಳೇ, ದೇವರು ನಿನ್ನ ಬಳಿಗೆ ಕಳುಹಿಸಿ ಕೊಟ್ಟವರನ್ನು ಕಲ್ಲೆಸೆದು ಕೊಲ್ಲುವವಳೇ, ಕೋಳಿ ತನ್ನ ಮರಿಗಳನ್ನು ರೆಕ್ಕೆಗಳ ಕೆಳಗೆ ಸೇರಿಸಿಕೊಳ್ಳುವಂತೆ ನಿನ್ನ ಮಕ್ಕಳನ್ನು ಸೇರಿಸಿಕೊಳ್ಳುವುದಕ್ಕೆ ನನಗೆ ಎಷ್ಟೋ ಸಾರಿ ಮನಸ್ಸಿತ್ತು ಆದರೆ ನಿನಗೆ ಮನಸ್ಸಿಲ್ಲದೆ ಹೋಯಿತು!
35 ನೋಡಿರಿ, ನಿಮ್ಮ ದೇವಾಲಯವು ನಿಮಗೆ ಬರಿದಾಗಿ ಹಾಳುಬೀಳುವುದು. ಏಕೆಂದರೆ, ‘ಕರ್ತದೇವರ ಹೆಸರಿನಲ್ಲಿ ಬರುವವರು ಧನ್ಯರು,’ ಎಂದು ನೀವು ಹೇಳುವ ಸಮಯವು ಬರುವ ತನಕ ನೀವು ನನ್ನನ್ನು ಕಾಣುವುದೇ ಇಲ್ಲ, ಎಂದು ನಾನು ನಿಮಗೆ ಹೇಳುತ್ತೇನೆ,” ಎಂದರು.
೩೫ನೋಡಿರಿ, ನಿಮ್ಮ ಮನೆಯು ಪಾಳುಬೀಳುವುದು. ‘ಕರ್ತನ ಹೆಸರಿನಲ್ಲಿ ಬರುವವನು ಧನ್ಯನು’ ಎಂದು ನೀವು ಹೇಳುವ ವರೆಗೂ ನೀವು ನನ್ನನ್ನು ನೋಡುವುದೇ ಇಲ್ಲ” ಎಂದು ನಿಮಗೆ ಹೇಳುತ್ತೇನೆ.

< ಲೂಕನು 13 >