< ಯೋಹಾನನು 6 >

1 ಇವುಗಳಾದ ಮೇಲೆ ಯೇಸು ತಿಬೇರಿಯದ ಗಲಿಲಾಯ ಸರೋವರದ ಆಚೆಗೆ ಹೋದರು. 2 ಯೇಸು ರೋಗಿಗಳಲ್ಲಿ ನಡೆಸಿದ ಸೂಚಕಕಾರ್ಯಗಳನ್ನು ನೋಡಿದ್ದರಿಂದ ಜನರ ದೊಡ್ಡ ಗುಂಪು ಯೇಸುವನ್ನು ಹಿಂಬಾಲಿಸಿತು. 3 ಯೇಸು ಬೆಟ್ಟವನ್ನೇರಿ ಅಲ್ಲಿ ತಮ್ಮ ಶಿಷ್ಯರೊಂದಿಗೆ ಕುಳಿತುಕೊಂಡರು. 4 ಆಗ ಯೆಹೂದ್ಯರ ಪಸ್ಕಹಬ್ಬವು ಹತ್ತಿರವಾಗಿತ್ತು. 5 ಯೇಸು ಕಣ್ಣೆತ್ತಿ ನೋಡಿ ಮತ್ತು ಜನರ ದೊಡ್ಡ ಗುಂಪು ಅವರ ಕಡೆಗೆ ಬರುವುದನ್ನು ಕಂಡು ಫಿಲಿಪ್ಪನಿಗೆ, “ಇವರು ಊಟ ಮಾಡಲು ನಾವು ರೊಟ್ಟಿಯನ್ನು ಎಲ್ಲಿಂದ ಕೊಂಡುಕೊಳ್ಳೋಣ?” ಎಂದರು. 6 ಅವನನ್ನು ಪರೀಕ್ಷಿಸುವುದಕ್ಕಾಗಿ ಯೇಸು ಇದನ್ನು ಹೇಳಿದರು. ಏಕೆಂದರೆ ತಾನು ಮಾಡಲಿರುವುದು ಏನೆಂದು ಯೇಸುವಿಗೆ ತಿಳಿದಿತ್ತು. 7 ಫಿಲಿಪ್ಪನು ಯೇಸುವಿಗೆ, “ಇವರಲ್ಲಿ ಪ್ರತಿಯೊಬ್ಬನು ಸ್ವಲ್ಪ ಸ್ವಲ್ಪ ತಿಂದರೂ ಆರು ತಿಂಗಳ ಕೂಲಿಯಷ್ಟು ರೊಟ್ಟಿಗಳೂ ಅವರಿಗೆ ಸಾಲುವುದಿಲ್ಲ,” ಎಂದನು. 8 ಆಗ ಯೇಸುವಿನ ಶಿಷ್ಯರಲ್ಲಿ ಒಬ್ಬನಾಗಿರುವ ಸೀಮೋನ್ ಪೇತ್ರನ ಸಹೋದರನಾದ ಅಂದ್ರೆಯನು 9 ಯೇಸುವಿಗೆ, “ಇಲ್ಲಿ ಒಬ್ಬ ಹುಡುಗನ ಬಳಿ ಐದು ಜವೆಗೋಧಿಯ ರೊಟ್ಟಿಗಳೂ ಎರಡು ಮೀನುಗಳೂ ಇವೆ. ಆದರೆ ಅಷ್ಟೊಂದು ಜನರಿಗೆ ಇವು ಹೇಗೆ ಸಾಕಾಗುತ್ತವೆ?” ಎಂದನು. 10 ಯೇಸು, “ಜನರನ್ನು ಊಟಕ್ಕೆ ಕುಳಿತುಕೊಳ್ಳಲು ಹೇಳಿರಿ,” ಎಂದರು. ಆ ಸ್ಥಳದಲ್ಲಿ ಬಹಳ ಹುಲ್ಲು ಇದ್ದುದರಿಂದ ಜನರೆಲ್ಲರೂ ಕುಳಿತುಕೊಂಡರು, ಗಂಡಸರೇ ಐದು ಸಾವಿರ ಮಂದಿ ಇದ್ದರು. 11 ಆಮೇಲೆ ಯೇಸು ರೊಟ್ಟಿಗಳನ್ನು ತೆಗೆದುಕೊಂಡು ದೇವರಿಗೆ ಕೃತಜ್ಞತೆಯನ್ನು ಸಲ್ಲಿಸಿ, ಕುಳಿತಿದ್ದವರಿಗೆ ಬೇಕಾದಷ್ಟು ಹಂಚಿದರು. ಅದೇ ರೀತಿಯಲ್ಲಿ ಮೀನುಗಳನ್ನು ಅವರಿಗೆ ಹಂಚಿದರು. 12 ಅವರೆಲ್ಲರೂ ತಿಂದು ತೃಪ್ತಿಯಾದ ಮೇಲೆ ಯೇಸು ತಮ್ಮ ಶಿಷ್ಯರಿಗೆ, “ಏನೂ ನಷ್ಟವಾಗದಂತೆ ಉಳಿದ ತುಂಡುಗಳನ್ನು ಕೂಡಿಸಿರಿ,” ಎಂದರು. 13 ಅದರಂತೆ ಅವರು ಐದು ಜವೆಗೋಧಿಯ ರೊಟ್ಟಿಗಳಲ್ಲಿ ತಿಂದವರಿಂದ ಉಳಿದ ತುಂಡುಗಳನ್ನು ಕೂಡಿಸಿ, ಹನ್ನೆರಡು ಬುಟ್ಟಿಗಳಲ್ಲಿ ತುಂಬಿದರು. 14 ಆ ಜನರು ಯೇಸು ಮಾಡಿದ ಸೂಚಕಕಾರ್ಯವನ್ನು ಕಂಡು, “ಸತ್ಯವಾಗಿಯೂ ಲೋಕಕ್ಕೆ ಬರಬೇಕಾಗಿದ್ದ ಪ್ರವಾದಿಯು ಇವರೇ,” ಎಂದರು. 15 ಅವರು ಬಂದು ತನ್ನನ್ನು ಹಿಡಿದುಕೊಂಡುಹೋಗಿ ಅರಸನನ್ನಾಗಿ ಮಾಡಬೇಕೆಂದಿದ್ದಾರೆಂದು ಯೇಸು ತಿಳಿದು ತಾವೊಬ್ಬರೇ ಪುನಃ ಬೆಟ್ಟದ ಕಡೆಗೆ ಹೋದರು. 16 ಸಂಜೆಯಾದಾಗ ಯೇಸುವಿನ ಶಿಷ್ಯರು ಸರೋವರಕ್ಕೆ ಹೋಗಿ, 17 ದೋಣಿಯನ್ನು ಹತ್ತಿ ಸರೋವರ ಮಾರ್ಗವಾಗಿ ಕಪೆರ್ನೌಮಿಗೆ ಸಾಗಿದರು. ಆಗಲೇ ಕತ್ತಲಾಗಿತ್ತು. ಯೇಸು ಅವರ ಬಳಿಗೆ ಇನ್ನೂ ಬಂದಿರಲಿಲ್ಲ. 18 ಆಗ ರಭಸವಾದ ಗಾಳಿಯು ಬೀಸಿದ್ದರಿಂದ ಸರೋವರವು ಅಲ್ಲೋಲಕಲ್ಲೋಲವಾಯಿತು. 19 ಅವರು ದೋಣಿಯನ್ನು ನಡೆಸುತ್ತಾ ಸುಮಾರು ಐದಾರು ಕಿಲೋಮೀಟರಿನಷ್ಟು ದೂರ ಹೋದ ಮೇಲೆ ಯೇಸು ಸರೋವರದ ಮೇಲೆ ನಡೆದು ದೋಣಿಯ ಕಡೆಗೆ ಸಮೀಪಿಸುತ್ತಿರುವುದನ್ನು ಅವರು ಕಂಡು, ಭಯಪಟ್ಟರು. 20 ಆದರೆ ಯೇಸು ಅವರಿಗೆ, “ನಾನೇ, ಭಯಪಡಬೇಡಿರಿ,” ಎಂದರು. 21 ಆಗ ಶಿಷ್ಯರು ಯೇಸುವನ್ನು ದೋಣಿಯಲ್ಲಿ ಸೇರಿಸಿಕೊಳ್ಳಬೇಕೆಂದಿದ್ದರು. ಅಷ್ಟರಲ್ಲಿ ದೋಣಿಯು ಅವರು ಹೋಗಬೇಕಾಗಿದ್ದ ದಡಕ್ಕೆ ಸೇರಿತು. 22 ಮರುದಿನ ಅಲ್ಲಿ ಒಂದೇ ದೋಣಿಯ ಹೊರತು ಬೇರೆ ಇರಲಿಲ್ಲವೆಂದೂ ಯೇಸುವಿನ ಶಿಷ್ಯರು ಮಾತ್ರ ಆ ದೋಣಿಯಲ್ಲಿ ಹೋದರೆಂದೂ ಯೇಸು ತಮ್ಮ ಶಿಷ್ಯರ ಸಂಗಡ ದೋಣಿಯಲ್ಲಿ ಹೋಗಲಿಲ್ಲವೆಂದೂ ಸರೋವರದ ಆಚೆಯಲ್ಲಿ ನಿಂತಿದ್ದ ಜನರು ಅರಿತುಕೊಂಡರು. 23 ಬೇರೆ ದೋಣಿಗಳು ತಿಬೇರಿಯದಿಂದ ಹೊರಟು, ಕರ್ತ ಯೇಸು ಕೃತಜ್ಞತೆ ಸಲ್ಲಿಸಿ ಜನರಿಗೆ ರೊಟ್ಟಿಯನ್ನು ಊಟಮಾಡಿಸಿದ ಸ್ಥಳದ ಸಮೀಪಕ್ಕೆ ಬಂದವು. 24 ಆಗ ಯೇಸು ಮತ್ತು ಅವರ ಶಿಷ್ಯರು ಅಲ್ಲಿ ಇಲ್ಲದಿರುವುದನ್ನು ಜನರು ನೋಡಿ, ದೋಣಿಗಳಲ್ಲಿ ಹತ್ತಿ ಯೇಸುವನ್ನು ಹುಡುಕುತ್ತಾ ಕಪೆರ್ನೌಮಿಗೆ ಬಂದರು. 25 ಜನರು ಯೇಸುವನ್ನು ಸರೋವರದ ಆಚೆ ಕಡೆಯಲ್ಲಿ ಕಂಡು ಅವರಿಗೆ, “ಗುರುವೇ, ನೀವು ಇಲ್ಲಿಗೆ ಬಂದದ್ದು ಯಾವಾಗ?” ಎಂದರು. 26 ಯೇಸು ಅವರಿಗೆ, “ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ನೀವು ನನ್ನನ್ನು ಹುಡುಕುವುದು ಸೂಚಕಕಾರ್ಯಗಳನ್ನು ನೋಡಿದ್ದರಿಂದಲ್ಲ, ರೊಟ್ಟಿಗಳನ್ನು ತಿಂದು ತೃಪ್ತಿ ಹೊಂದಿದ್ದರಿಂದಲೇ. 27 ನಾಶವಾಗುವ ಆಹಾರಕ್ಕಾಗಿ ದುಡಿಯಬೇಡಿರಿ, ನೀವು ನಿತ್ಯಜೀವಕ್ಕೆ ಉಳಿಯುವ ಆಹಾರಕ್ಕಾಗಿಯೇ ದುಡಿಯಿರಿ. ಅದನ್ನು ಮನುಷ್ಯಪುತ್ರನಾದ ನಾನು ನಿಮಗೆ ಕೊಡುವೆನು. ಇದಕ್ಕಾಗಿ ತಂದೆ ದೇವರು ಮೆಚ್ಚುಗೆಯ ಮುದ್ರೆಯನ್ನು ನನ್ನ ಮೇಲೆ ಹಾಕಿದ್ದಾರೆ,” ಎಂದರು. (aiōnios g166) 28 ಆಗ ಅವರು ಯೇಸುವಿಗೆ, “ನಾವು ದೇವರ ಕಾರ್ಯವನ್ನು ಮಾಡಬೇಕಾದರೆ ಏನು ಮಾಡಬೇಕು?” ಎಂದು ಕೇಳಿದ್ದಕ್ಕೆ, 29 ಯೇಸು ಅವರಿಗೆ, “ದೇವರು ಕಳುಹಿಸಿದ ನನ್ನನ್ನು ನೀವು ನಂಬುವುದೇ ದೇವರು ಮೆಚ್ಚುವ ಕಾರ್ಯ,” ಎಂದರು. 30 ಅದಕ್ಕೆ ಅವರು ಯೇಸುವಿಗೆ, “ಹಾಗಾದರೆ ನಾವು ನೋಡಿ ನಿಮ್ಮನ್ನು ನಂಬುವಂತೆ ಯಾವ ಸೂಚಕಕಾರ್ಯವನ್ನು ಮಾಡುತ್ತೀರಿ? 31 ‘ಅವರಿಗೆ ಪರಲೋಕದಿಂದ ರೊಟ್ಟಿ ಕೊಡಲಾಯಿತು’ ಎಂದು ಪವಿತ್ರ ವೇದದಲ್ಲಿ ಬರೆದಿರುವ ಪ್ರಕಾರ ನಮ್ಮ ಪಿತೃಗಳು ಅರಣ್ಯದಲ್ಲಿ ಮನ್ನಾ ಎಂಬ ಆಹಾರವನ್ನು ತಿಂದರು,” ಎಂದು ಕೇಳಿದರು. 32 ಯೇಸು ಅವರಿಗೆ, “ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ನಿಮಗೆ ಪರಲೋಕದಿಂದ ರೊಟ್ಟಿಯನ್ನು ಮೋಶೆ ಕೊಡಲಿಲ್ಲ. ನನ್ನ ತಂದೆಯೇ ನಿಮಗೆ ನಿಜವಾದ ರೊಟ್ಟಿಯನ್ನು ಪರಲೋಕದಿಂದಲೇ ಕೊಡುತ್ತಾರೆ. 33 ಪರಲೋಕದಿಂದ ಇಳಿದುಬಂದು ಲೋಕಕ್ಕೆ ಜೀವವನ್ನು ಕೊಡುವ ದೇವರ ರೊಟ್ಟಿಯು ನಾನೇ,” ಎಂದರು. 34 ಅದಕ್ಕವರು ಯೇಸುವಿಗೆ, “ಸ್ವಾಮೀ, ಈ ರೊಟ್ಟಿಯನ್ನೇ ನಮಗೆ ಯಾವಾಗಲೂ ಕೊಡು,” ಎಂದರು. 35 ಯೇಸು ಅವರಿಗೆ, “ನಾನೇ ಜೀವದ ರೊಟ್ಟಿ. ನನ್ನ ಬಳಿಗೆ ಬರುವವರಿಗೆ ಎಂದಿಗೂ ಹಸಿವೆಯಾಗುವುದಿಲ್ಲ; ನನ್ನನ್ನು ನಂಬುವವರಿಗೆ ಎಂದಿಗೂ ದಾಹವಾಗುವುದಿಲ್ಲ. 36 ಆದರೆ, ‘ನೀವು ನನ್ನನ್ನು ಕಂಡಿದ್ದರೂ ನಂಬಲಿಲ್ಲ,’ ಎಂದು ನಾನು ನಿಮಗೆ ಹೇಳಿದೆನು. 37 ತಂದೆಯು ನನಗೆಂದು ಕೊಟ್ಟಿರುವ ಪ್ರತಿಯೊಬ್ಬರೂ ನನ್ನ ಬಳಿಗೆ ಬರುವರು. ನನ್ನ ಬಳಿಗೆ ಬರುವವರನ್ನು ನಾನು ಎಂದಿಗೂ ತಳ್ಳಿಬಿಡುವುದೇ ಇಲ್ಲ. 38 ನಾನು ನನ್ನ ಚಿತ್ತವನ್ನು ಮಾಡುವುದಕ್ಕಲ್ಲ. ನನ್ನನ್ನು ಕಳುಹಿಸಿದ ತಂದೆಯ ಚಿತ್ತವನ್ನೇ ಮಾಡುವುದಕ್ಕೆ ಪರಲೋಕದಿಂದ ಬಂದೆನು. 39 ನನ್ನನ್ನು ಕಳುಹಿಸಿಕೊಟ್ಟ ತಂದೆಯ ಚಿತ್ತವೇನೆಂದರೆ: ಅವರು ನನಗೆ ಕೊಟ್ಟವರಲ್ಲಿ ನಾನು ಯಾರನ್ನೂ ಕಳೆದುಕೊಳ್ಳದೆ ಕಡೆಯ ದಿನದಲ್ಲಿ ಅವರನ್ನು ಎಬ್ಬಿಸುವುದೇ. 40 ನನ್ನ ತಂದೆಯ ಚಿತ್ತವೇನೆಂದರೆ ನನ್ನನ್ನು ನೋಡಿ ನನ್ನಲ್ಲಿ ವಿಶ್ವಾಸವಿಡುವ ಪ್ರತಿಯೊಬ್ಬರೂ ನಿತ್ಯಜೀವವನ್ನು ಪಡೆಯುವುದೇ; ನಾನು ಅವರನ್ನು ಕಡೆಯ ದಿನದಲ್ಲಿ ಎಬ್ಬಿಸುವೆನು,” ಎಂದು ಹೇಳಿದರು. (aiōnios g166) 41 “ಪರಲೋಕದಿಂದ ಇಳಿದು ಬಂದ ರೊಟ್ಟಿ ನಾನೇ,” ಎಂದು ಯೇಸು ಹೇಳಿದ್ದಕ್ಕೆ ಯೆಹೂದ್ಯರು ಯೇಸುವಿನ ವಿಷಯವಾಗಿ ಗೊಣಗುಟ್ಟಿ, 42 “ಈತನು ಯೋಸೇಫನ ಪುತ್ರ ಯೇಸು ಅಲ್ಲವೇ? ಈತನ ತಂದೆತಾಯಿ ನಮಗೆ ಗೊತ್ತಿಲ್ಲವೇ? ಹಾಗಾದರೆ, ‘ನಾನು ಪರಲೋಕದಿಂದ ಬಂದೆನು,’ ಎಂದು ಈತನು ಹೇಳುವುದು ಹೇಗೆ?” ಎಂದರು. 43 ಯೇಸು ಅವರಿಗೆ, “ನಿಮ್ಮನಿಮ್ಮೊಳಗೆ ಗೊಣಗುಟ್ಟಬೇಡಿರಿ. 44 ನನ್ನನ್ನು ಕಳುಹಿಸಿದ ತಂದೆ ಸೆಳೆಯದ ಹೊರತು, ಯಾರೂ ನನ್ನ ಬಳಿಗೆ ಬರಲಾರರು. ನಾನು ಅವರನ್ನು ಕಡೆಯ ದಿನದಲ್ಲಿ ಎಬ್ಬಿಸುವೆನು. 45 ‘ಅವರೆಲ್ಲರೂ ದೇವರಿಂದಲೇ ಬೋಧನೆ ಪಡೆಯುವರು,’ ಎಂದು ಪ್ರವಾದಿಗಳ ಗ್ರಂಥದಲ್ಲಿ ಬರೆದಿದೆ. ತಂದೆಯಿಂದ ಕೇಳಿ ಕಲಿತ ಪ್ರತಿಯೊಬ್ಬರೂ ನನ್ನ ಬಳಿಗೆ ಬರುತ್ತಾರೆ. 46 ದೇವರಿಂದ ಬಂದಿರುವ ನಾನೇ ತಂದೆಯನ್ನು ನೋಡಿದ್ದೇನೆ, ಬೇರೆ ಯಾರೂ ತಂದೆಯನ್ನು ನೋಡಲಿಲ್ಲ. 47 ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ನನ್ನನ್ನು ನಂಬುವವರು ನಿತ್ಯಜೀವವನ್ನು ಹೊಂದಿದ್ದಾರೆ. (aiōnios g166) 48 ನಾನೇ ಜೀವದ ರೊಟ್ಟಿ. 49 ನಿಮ್ಮ ಪಿತೃಗಳು ಅರಣ್ಯದಲ್ಲಿ ‘ಮನ್ನಾ’ ತಿಂದರೂ ಸತ್ತುಹೋದರು. 50 ಯಾರು ತಿಂದರೂ ಸಾಯದೇ ಇರುವಂತೆ ಪರಲೋಕದಿಂದ ಇಳಿದು ಬಂದ ಜೀವದ ರೊಟ್ಟಿ ಇದೇ. 51 ನಾನೇ ಪರಲೋಕದಿಂದ ಬಂದ ಜೀವದ ರೊಟ್ಟಿ. ಈ ರೊಟ್ಟಿಯನ್ನು ಯಾರು ತಿನ್ನುವರೋ ಅವರು ಸದಾಕಾಲವೂ ಬದುಕುವರು. ಲೋಕದ ಜೀವಕ್ಕಾಗಿ ನಾನು ಕೊಡುವ ರೊಟ್ಟಿಯು ನನ್ನ ಮಾಂಸವೇ,” ಎಂದರು. (aiōn g165) 52 ಆದ್ದರಿಂದ ಯೆಹೂದ್ಯರು ಒಬ್ಬರಿಗೊಬ್ಬರು ಚರ್ಚೆಮಾಡುತ್ತಾ, “ಈ ಮನುಷ್ಯನು ತನ್ನ ಮಾಂಸವನ್ನು ತಿನ್ನುವುದಕ್ಕೆ ನಮಗೆ ಹೇಗೆ ಕೊಡುತ್ತಾನೆ?” ಎಂದರು. 53 ಯೇಸು ಅವರಿಗೆ, “ನಿಮಗೆ ನಿಜನಿಜವಾಗಿ ಹೇಳುತ್ತೇನೆ, ನೀವು ಮನುಷ್ಯಪುತ್ರನಾದ ನನ್ನ ಮಾಂಸವನ್ನು ತಿಂದು ನನ್ನ ರಕ್ತವನ್ನು ಕುಡಿಯದೆ ಹೋದರೆ, ನಿಮ್ಮಲ್ಲಿ ಜೀವವಿರುವುದಿಲ್ಲ. 54 ಯಾರು ನನ್ನ ಮಾಂಸವನ್ನು ತಿಂದು ನನ್ನ ರಕ್ತವನ್ನು ಕುಡಿಯುತ್ತಾರೋ ಅವರು ನಿತ್ಯಜೀವವನ್ನು ಹೊಂದಿದ್ದಾರೆ, ನಾನು ಅವರನ್ನು ಕಡೆಯ ದಿನದಲ್ಲಿ ಎಬ್ಬಿಸುವೆನು. (aiōnios g166) 55 ನನ್ನ ಮಾಂಸವು ನಿಜವಾದ ಆಹಾರವೂ ನನ್ನ ರಕ್ತವು ನಿಜವಾದ ಪಾನವೂ ಆಗಿದೆ. 56 ಯಾರು ನನ್ನ ಮಾಂಸವನ್ನು ತಿಂದು ನನ್ನ ರಕ್ತವನ್ನು ಕುಡಿಯುತ್ತಾರೋ ಅವರು ನನ್ನಲ್ಲಿ ನೆಲೆಸಿರುತ್ತಾರೆ. ನಾನು ಅವರಲ್ಲಿ ನೆಲೆಸಿರುತ್ತೇನೆ. 57 ಜೀವವುಳ್ಳ ತಂದೆಯು ನನ್ನನ್ನು ಕಳುಹಿಸಿದ್ದಾರೆ. ನಾನು ತಂದೆಯ ನಿಮಿತ್ತವಾಗಿ ಜೀವಿಸುವಂತೆಯೇ ನನ್ನನ್ನು ತಿನ್ನುವವರು ನನ್ನ ನಿಮಿತ್ತವಾಗಿಯೇ ಜೀವಿಸುವರು. 58 ಪರಲೋಕದಿಂದ ಬಂದ ರೊಟ್ಟಿಯು ಇದೇ. ನಿಮ್ಮ ಪಿತೃಗಳು ‘ಮನ್ನಾ’ ತಿಂದರೂ ಸತ್ತರು. ಇದು ಹಾಗಲ್ಲ, ಈ ರೊಟ್ಟಿಯನ್ನು ತಿನ್ನುವವರು ಸದಾಕಾಲಕ್ಕೂ ಜೀವಿಸುವರು,” ಎಂದರು. (aiōn g165) 59 ಕಪೆರ್ನೌಮಿನ ಸಭಾಮಂದಿರದಲ್ಲಿ ಬೋಧಿಸುತ್ತಿರುವಾಗ ಯೇಸು ಈ ಮಾತುಗಳನ್ನು ಹೇಳಿದರು. 60 ಯೇಸುವಿನ ಶಿಷ್ಯರಲ್ಲಿ ಅನೇಕರು ಈ ಮಾತುಗಳನ್ನು ಕೇಳಿ, “ಇದು ಕಠಿಣವಾದ ಮಾತು. ಇದನ್ನು ಯಾರು ಪಾಲಿಸುವರು?” ಎಂದರು. 61 ತಮ್ಮ ಶಿಷ್ಯರು ಇದನ್ನು ಕುರಿತು ಗೊಣಗುಟ್ಟುತ್ತಾರೆಂದು ಯೇಸು ತಮ್ಮಲ್ಲಿ ತಿಳಿದುಕೊಂಡು ಅವರಿಗೆ, “ಇದು ನಿಮಗೆ ಬೇಸರವಾಯಿತೋ? 62 ಹಾಗಾದರೆ ಮನುಷ್ಯಪುತ್ರನಾದ ನಾನು ಮೊದಲಿದ್ದ ಕಡೆಗೆ ಏರಿ ಹೋಗುವುದನ್ನು ನೀವು ನೋಡುವುದಾದರೆ ಏನನ್ನುವಿರಿ? 63 ಬದುಕಿಸುವುದು ದೇವರ ಆತ್ಮವೇ, ನರಮಾಂಸವಾದರೋ ಯಾವುದಕ್ಕೂ ಪ್ರಯೋಜನವಾಗುವುದಿಲ್ಲ. ನಾನು ನಿಮಗೆ ನುಡಿದ ಮಾತುಗಳೇ ದೇವರಾತ್ಮವೂ ಜೀವವೂ ಆಗಿರುತ್ತವೆ. 64 ಆದರೆ ನಂಬದ ಕೆಲವರು ನಿಮ್ಮಲ್ಲಿ ಇದ್ದಾರೆ,” ಎಂದರು. ನಂಬದವರು ಯಾರೆಂದೂ ತನ್ನನ್ನು ಹಿಡಿದುಕೊಡುವವನು ಯಾರೆಂದೂ ಯೇಸು ಮೊದಲಿನಿಂದಲೂ ತಿಳಿದಿದ್ದರು. 65 ಯೇಸು ಮುಂದುವರಿಸಿ ಹೇಳಿದ್ದೇನೆಂದರೆ, “ಯಾರನ್ನಾದರೂ ನನ್ನ ತಂದೆಯು ನನಗೆ ಕೊಟ್ಟರಷ್ಟೇ ಅವರು ನನ್ನ ಬಳಿಗೆ ಬರಲು ಸಾಧ್ಯ, ಎಂದು ನಾನು ನಿಮಗೆ ಹೇಳಿದ್ದು ಇದಕ್ಕಾಗಿಯೇ.” 66 ಅಂದಿನಿಂದ ಯೇಸುವಿನ ಶಿಷ್ಯರಲ್ಲಿ ಅನೇಕರು ಹಿಂದಕ್ಕೆ ಹೊರಟು ಹೋದರು ಮತ್ತು ಯೇಸುವಿನ ಸಂಗಡ ಸಂಚಾರ ಮಾಡಲಿಲ್ಲ. 67 ಆದಕಾರಣ ಯೇಸು ಹನ್ನೆರಡು ಮಂದಿ ಶಿಷ್ಯರಿಗೆ, “ನೀವು ಸಹ ಹೋಗಬೇಕೆಂದು ಇದ್ದೀರಾ?” ಎಂದು ಕೇಳಲು, 68 ಸೀಮೋನ್ ಪೇತ್ರನು ಯೇಸುವಿಗೆ, “ಸ್ವಾಮೀ, ನಾವು ಯಾರ ಬಳಿಗೆ ಹೋಗೋಣ? ನಿಮ್ಮಲ್ಲಿಯೇ ನಿತ್ಯಜೀವದ ವಾಕ್ಯಗಳಿವೆ. (aiōnios g166) 69 ನೀವು ದೇವರ ಪರಿಶುದ್ಧರು ಎಂದು ನಾವು ನಂಬಿ ತಿಳಿದಿದ್ದೇವೆ,” ಎಂದನು. 70 ಅದಕ್ಕೆ ಯೇಸು ಅವರಿಗೆ, “ಹನ್ನೆರಡು ಮಂದಿಯಾದ ನಿಮ್ಮನ್ನು ನಾನು ಆರಿಸಿಕೊಂಡೆನಲ್ಲವೇ? ಆದರೆ ನಿಮ್ಮಲ್ಲಿಯೂ ಒಬ್ಬನು ಪಿಶಾಚನಾಗಿದ್ದಾನೆ,” ಎಂದರು. 71 ಸೀಮೋನನ ಮಗ ಇಸ್ಕರಿಯೋತ ಯೂದನ ವಿಷಯವಾಗಿ ಯೇಸು ಹೀಗೆ ಹೇಳಿದರು. ಏಕೆಂದರೆ ಹನ್ನೆರಡು ಮಂದಿಯಲ್ಲಿ ಒಬ್ಬನಾಗಿದ್ದ ಇವನೇ ಯೇಸುವನ್ನು ಹಿಡಿದು ಕೊಡುವುದಕ್ಕಿದ್ದನು.

< ಯೋಹಾನನು 6 >