< ಯೆಹೆಜ್ಕೇಲನು 11 >

1 ಆಮೇಲೆ ದೇವರಾತ್ಮರು ಪೂರ್ವದಿಕ್ಕಿಗೆ ಅಭಿಮುಖವಾಗಿರುವ ಯೆಹೋವ ದೇವರ ಆಲಯದ ಪೂರ್ವದಿಕ್ಕಿನ ಬಾಗಿಲಿಗೆ, ನನ್ನನ್ನು ಎತ್ತಿಕೊಂಡು ಹೋದರು. ಪ್ರವೇಶದ್ವಾರದಲ್ಲಿ ಇಪ್ಪತ್ತೈದು ಮಂದಿ ಮನುಷ್ಯರು ಇದ್ದರು. ಅವರೊಳಗೆ ನಾನು ಜನರ ಪ್ರಧಾನರಾದ ಅಜ್ಜೂರನ ಮಗ ಯಾಜನ್ಯನನ್ನೂ, ಬೆನಾಯನ ಮಗ ಪೆಲಟೀಯನನ್ನೂ ನೋಡಿದೆನು.
ಆ ಮೇಲೆ ದೇವರಾತ್ಮವು ನನ್ನನ್ನು ಎತ್ತಿ ಪೂರ್ವದಿಕ್ಕಿಗೆ ಅಭಿಮುಖವಾಗಿರುವ ಯೆಹೋವನ ಆಲಯದ ಮೂಡಣ ಬಾಗಿಲಿಗೆ ತಂದುಬಿಟ್ಟಿತು; ಇಗೋ, ಬಾಗಿಲ ಮುಂದೆ ಇಪ್ಪತ್ತೈದು ಜನರು ನಿಂತಿದ್ದರು; ಅವರ ಮಧ್ಯದಲ್ಲಿ ಅಜ್ಜೂರನ ಮಗನಾದ ಯಾಜನ್ಯ, ಬೆನಾಯನ ಮಗನಾದ ಪೆಲತ್ಯ ಎಂಬ ಜನನಾಯಕರನ್ನು ನಾನು ನೋಡಿದೆ.
2 ಆಮೇಲೆ ಯೆಹೋವ ದೇವರು ನನಗೆ, “ಮನುಷ್ಯಪುತ್ರನೇ, ಈ ಪಟ್ಟಣದಲ್ಲಿ ಕುತಂತ್ರಗಳನ್ನು ಕಲ್ಪಿಸಿ, ದುರಾಲೋಚನೆಗಳನ್ನು ಹೇಳಿಕೊಡುವವರು ಈ ಜನರೇ.
ಅಲ್ಲಿ ದೇವರು ನನಗೆ, “ನರಪುತ್ರನೇ, ಪಟ್ಟಣದಲ್ಲಿ ಕುತಂತ್ರಗಳನ್ನು ಕಲ್ಪಿಸಿ ದುರಾಲೋಚನೆಯನ್ನು ಹೇಳಿಕೊಡುವವರು ಈ ಜನರೇ.
3 ಅವರು, ‘ಇತ್ತೀಚಿಗೆ ನಮ್ಮ ಮನೆಗಳು ನಿರ್ಮಾಣವಾಗಿಲ್ಲವೇ? ಈ ಪಟ್ಟಣವು ಪಾತ್ರೆ, ಮತ್ತು ನಾವು ಅದರಲ್ಲಿರುವ ಮಾಂಸ,’ ಎನ್ನುತ್ತಾರೆ.
ಇವರು, ‘ಮನೆಗಳನ್ನು ಕಟ್ಟಿಕೊಳ್ಳುವ ಕಾಲವು ಬಂದಿಲ್ಲ; ಈ ಪಟ್ಟಣವು ಒಂದು ಹಂಡೆ, ನಾವು ಅದರಲ್ಲಿನ ಮಾಂಸ’ ಎಂದು ಹೇಳುತ್ತಾರೆ.
4 ಆದ್ದರಿಂದ ಮನುಷ್ಯಪುತ್ರನೇ, ಅವರಿಗೆ ವಿರೋಧವಾಗಿ ಪ್ರವಾದಿಸು.”
ಆದಕಾರಣ, ನರಪುತ್ರನೇ, ನೀನು ಇವರ ವಿಷಯವಾಗಿ ಅಹಿತವನ್ನು ನುಡಿ, ತಪ್ಪದೆ ನುಡಿ” ಎಂದು ಆಜ್ಞಾಪಿಸಿದನು.
5 ಯೆಹೋವ ದೇವರ ಆತ್ಮವು ನನ್ನ ಮೇಲೆ ಬಂದು ತಿಳಿಸಲು ಹೇಳಿದ್ದೇನೆಂದರೆ: “ಇಸ್ರಾಯೇಲಿನ ಮನೆತನದವರೇ, ನೀವು ಹೀಗೆ ಹೇಳಿದ್ದೀರಿ. ಏಕೆಂದರೆ ನಿಮ್ಮ ಮನಸ್ಸಿನಲ್ಲಿ ಹುಟ್ಟುವ ಎಲ್ಲವುಗಳನ್ನು ನಾನು ಬಲ್ಲೆನು.
ಆಗ ಯೆಹೋವನ ಆತ್ಮವು ನನ್ನಲ್ಲಿ ಆವೇಶ ಉಂಟುಮಾಡಿ, ಹೀಗೆ ಸಾರಬೇಕೆಂದು ಅಪ್ಪಣೆಯಾಯಿತು. ಯೆಹೋವನು ಇಂತೆನ್ನುತ್ತಾನೆ, “ಇಸ್ರಾಯೇಲ್ ವಂಶದವರೇ, ನೀವು ಹೀಗೆ ಮಾತನಾಡುತ್ತಿದ್ದೀರಿ, ಸರಿ; ನಿಮ್ಮ ಮನಸ್ಸಿನಲ್ಲಿ ಹುಟ್ಟಿರುವ ಆಲೋಚನೆಗಳು ನನಗೆ ಗೊತ್ತೇ ಇವೆ.
6 ನೀವು ಈ ಪಟ್ಟಣದಲ್ಲಿ ನರಹತ್ಯೆಯನ್ನು ಹೆಚ್ಚೆಚ್ಚಾಗಿ ಮಾಡಿ, ಹತರಾದವರಿಂದ ಬೀದಿಗಳನ್ನು ತುಂಬಿಸಿದ್ದೀರಿ.
ನೀವು ಈ ಪಟ್ಟಣದಲ್ಲಿ ನರಹತ್ಯವನ್ನು ಹೆಚ್ಚೆಚ್ಚಾಗಿ ಮಾಡಿ, ಹತರಾದವರಿಂದ ಬೀದಿಗಳನ್ನು ತುಂಬಿಸಿದ್ದೀರಿ.
7 “ಆದ್ದರಿಂದ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನೀವು ಕೊಂದು ಹಾಕಿದವರ ದೇಹಗಳೇ ಮಾಂಸ, ಈ ಪಟ್ಟಣವು ಬೇಯಿಸುವ ಪಾತ್ರೆ. ಆದರೆ ನಾನು ನಿಮ್ಮನ್ನು ಅದರಿಂದ ಹೊರಗೆ ತರುತ್ತೇನೆ.
“ಆದಕಾರಣ ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ‘ನಿಮ್ಮ ದೋಷದಿಂದ ಹತರಾಗಿ ಪಟ್ಟಣದಲ್ಲಿ ಬಿದ್ದಿರುವ ನಿಮ್ಮವರ ಶವಗಳೇ ಹಂಡೆಯಲ್ಲಿನ ಮಾಂಸ, ಈ ಪಟ್ಟಣವೇ ಹಂಡೆ, ನಿಮ್ಮನ್ನಾದರೋ ನಾನು ಪಟ್ಟಣದೊಳಗಿಂದ ಕಿತ್ತುಹಾಕುವೆನು.
8 ನೀವು ಖಡ್ಗಕ್ಕೆ ಭಯಪಟ್ಟಿರಿ. ನಾನು ನಿಮ್ಮ ಮೇಲೆ ಒಂದು ಖಡ್ಗವನ್ನು ತರುತ್ತೇನೆ. ಇದು ಸಾರ್ವಭೌಮ ಯೆಹೋವ ದೇವರ ನುಡಿ.
ಖಡ್ಗಕ್ಕೆ ಹೆದರಿದ ನಿಮ್ಮನ್ನೇ ಖಡ್ಗಕ್ಕೆ ಗುರಿಮಾಡುವೆನು’” ಇದು ಕರ್ತನಾದ ಯೆಹೋವನ ನುಡಿ.
9 ನಾನು ನಿಮ್ಮನ್ನು ಪಟ್ಟಣದ ಮಧ್ಯದಿಂದ ಹೊರಗೆ ತಂದು ಪರಕೀಯರ ಕೈಗಳಿಗೆ ಒಪ್ಪಿಸುವೆನು ಮತ್ತು ನ್ಯಾಯತೀರ್ಪುಗಳನ್ನು ನಡೆಸುವೆನು.
“ನಾನು ಪಟ್ಟಣದೊಳಗಿಂದ ನಿಮ್ಮನ್ನು ಕಿತ್ತು ಅನ್ಯರ ಕೈಗೆ ಕೊಟ್ಟು ದಂಡಿಸುವೆನು.
10 ನೀವು ಖಡ್ಗದಿಂದ ನಾಶವಾಗುವಿರಿ. ನಾನು ಇಸ್ರಾಯೇಲಿನ ಮೇರೆಯಲ್ಲಿ ನ್ಯಾಯತೀರಿಸುವೆನು. ಆಗ ನಾನೇ ಯೆಹೋವ ದೇವರೆಂದು ನಿಮಗೆ ತಿಳಿಯುವುದು.
೧೦ನೀವು ಖಡ್ಗಕ್ಕೆ ತುತ್ತಾಗುವಿರಿ. ಇಸ್ರಾಯೇಲಿನ ಮೇರೆಯಲ್ಲಿ ನಿಮಗೆ ದಂಡನೆಯನ್ನು ವಿಧಿಸುವೆನು, ನಾನೇ ಯೆಹೋವನು ಎಂದು ನಿಮಗೆ ಗೊತ್ತಾಗುವುದು.
11 ಈ ಪಟ್ಟಣವು ಪಾತ್ರೆಯಾಗುವುದಿಲ್ಲ. ನೀವು ಅದರಲ್ಲಿ ಮಾಂಸವೂ ಆಗುವುದಿಲ್ಲ. ಇಸ್ರಾಯೇಲಿನ ಮೇರೆಯಲ್ಲಿ ನಾನು ನ್ಯಾಯತೀರಿಸುವೆನು.
೧೧ಈ ಪಟ್ಟಣವು ನಿಮಗೆ ಹಂಡೆಯಾಗುವುದಿಲ್ಲ; ನೀವು ಅದರಲ್ಲಿನ ಮಾಂಸವಾಗುವುದಿಲ್ಲ. ಇಸ್ರಾಯೇಲಿನ ಮೇರೆಯಲ್ಲಿ ನಿಮಗೆ ದಂಡನೆಯನ್ನು ವಿಧಿಸುವೆನು.
12 ನಾನೇ ಯೆಹೋವ ದೇವರೆಂದು ನೀವು ತಿಳಿದುಕೊಳ್ಳುವಿರಿ. ಏಕೆಂದರೆ ನೀವು ನನ್ನ ನಿಯಮಗಳಂತೆ ನಡೆಯಲಿಲ್ಲ. ನನ್ನ ನ್ಯಾಯವಿಧಿಗಳನ್ನು ಪಾಲಿಸಲಿಲ್ಲ. ಆದರೆ ನಿಮ್ಮ ಸುತ್ತಲಿರುವ ಇತರ ಜನಾಂಗಗಳ ಆಚಾರಗಳ ಪ್ರಕಾರ ಮಾಡಿದ್ದೀರಿ.”
೧೨“‘ನಾನೇ ಯೆಹೋವನು’ ಎಂದು ನಿಮಗೆ ಗೊತ್ತಾಗುವುದು; ನೀವು ನನ್ನ ವಿಧಿಗಳನ್ನು ಕೈಕೊಳ್ಳದೆ, ನನ್ನ ನಿಯಮಗಳನ್ನು ಅನುಸರಿಸದೆ, ನಿಮ್ಮ ಸುತ್ತಲಿನ ಜನಾಂಗಗಳ ಆಚಾರಗಳನ್ನೇ ಅನುಸರಿಸಿದ್ದರಿಂದ ಇದೆಲ್ಲಾ ಆಗುವುದು.”
13 ನಾನು ಪ್ರವಾದಿಸುತ್ತಿರುವಾಗ, ಬೆನಾಯನ ಮಗನಾದ ಪೆಲಟೀಯನು ಸತ್ತನು. ಆಗ ನಾನು ಮುಖ ಕೆಳಗಾಗಿ ಬಿದ್ದು, ಗಟ್ಟಿಯಾಗಿ ಕೂಗಿ, “ಸಾರ್ವಭೌಮ ಯೆಹೋವ ದೇವರೇ, ನೀವು ಇಸ್ರಾಯೇಲಿನಲ್ಲಿ ಉಳಿದವರನ್ನು ಪೂರ್ಣವಾಗಿ ಮುಗಿಸಿಬಿಡುತ್ತೀರೋ?” ಎಂದು ಹೇಳಿದನು.
೧೩ನಾನು ಈ ಮಾತನ್ನು ನುಡಿಯುತ್ತಿರುವಾಗಲೇ ಬೆನಾಯನ ಮಗನಾದ ಪೆಲತ್ಯನು ಸತ್ತುಹೋದನು. ಆಗ ನಾನು ಅಡ್ಡಬಿದ್ದು ಗಟ್ಟಿಯಾಗಿ ಕೂಗಿಕೊಂಡೆ, “ಅಯ್ಯೋ, ಕರ್ತನಾದ ಯೆಹೋವನೇ, ಇಸ್ರಾಯೇಲಿನಲ್ಲಿ ಉಳಿದವರನ್ನು ಸಂಪೂರ್ಣವಾಗಿ ನಿರ್ಮೂಲಮಾಡುವಿಯೋ?” ಎಂದು ಮೊರೆಯಿಟ್ಟೆನು.
14 ಯೆಹೋವ ದೇವರ ವಾಕ್ಯವು ನನಗೆ ಬಂದಿತು:
೧೪ಆಗ ಯೆಹೋವನು ಈ ಮಾತನ್ನು ನನಗೆ ದಯಪಾಲಿಸಿದನು,
15 “ಮನುಷ್ಯಪುತ್ರನೇ, ನಿನ್ನ ಸಹೋದರರಿಗೆ, ನಿನ್ನ ಅಣ್ಣಂದಿರಿಗೆ, ನಿನ್ನ ನೆಂಟರಿಷ್ಟರಿಗೆ, ಅಂತು ಇಸ್ರಾಯೇಲ್ ವಂಶದ ಎಲ್ಲರಿಗೆ, ಯೆರೂಸಲೇಮಿನಲ್ಲೇ ಉಳಿದಿರುವವರು, ‘ಯೆಹೋವ ದೇವರ ಬಳಿಯಿಂದ ದೂರವಾಗಿ ತೊಲಗಿರಿ, ಈ ನಾಡು ನಮಗೇ ಸೊತ್ತಾಗಿ ಸಿಕ್ಕಿದೆ,’ ಎಂದು ಹೇಳಿ ಹೀನೈಸುತ್ತಿದ್ದಾರಲ್ಲವೇ?
೧೫“ನರಪುತ್ರನೇ, ನಿನ್ನ ಸಹೋದರರು, ನಿನ್ನ ಅಣ್ಣತಮ್ಮಂದಿರು, ನಿನ್ನ ನೆಂಟರು ಅಂತು ಯೆರೂಸಲೇಮಿನವರು ಮತ್ತು ಇಸ್ರಾಯೇಲ್ ವಂಶದವರಲ್ಲಿ ಉಳಿದಿರುವವರು, ‘ಯೆಹೋವನ ಬಳಿಯಿಂದ ದೂರವಾಗಿ ತೊಲಗಿರಿ, ಈ ದೇಶವು ನಮಗೇ ಸ್ವತ್ತಾಗಿ ಸಿಕ್ಕಿದೆ’ ಎಂದು ಹೀನೈಸಿದರೋ ಅವರೆಲ್ಲರು ಉಳಿದಿದ್ದಾರಲ್ಲಾ.
16 “ಆದ್ದರಿಂದ ನಾನು, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನಾನು ಅವರನ್ನು ಇತರ ಜನಾಂಗಗಳಿಂದ ದೂರ ಹಾಕಿದರೂ, ದೇಶಗಳಲ್ಲಿ ಚದರಿಸಿದರೂ, ಅವರು ಹೋಗುವ ದೇಶಗಳಲ್ಲಿ ನಾನು ಸ್ವಲ್ಪ ಕಾಲದವರೆಗೆ ಪರಿಶುದ್ಧ ಸ್ಥಳವಾಗಿರುವೆನು.’
೧೬“ಆದಕಾರಣ ನೀನು ಹೀಗೆ ಸಾರು, ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ‘ನಾನು ಅವರನ್ನು ದೂರವಾಗಿ ತೊಲಗಿಸಿ, ಜನಾಂಗಗಳಲ್ಲಿ ಮತ್ತು ಅನ್ಯದೇಶದ ಜನಾಂಗಗಳಲ್ಲಿ ಚದರಿಸಿದರೂ ಅವರು ಸೇರಿರುವ ದೇಶಗಳಲ್ಲಿಯೇ ನಾನು ಸ್ವಲ್ಪ ಕಾಲದ ಮಟ್ಟಿಗೆ ಅವರಿಗೆ ಪವಿತ್ರಾಲಯವಾಗಿರುವೆನು.’
17 “ಆದ್ದರಿಂದ ನೀನು ಹೇಳಬೇಕಾದದ್ದೇನೆಂದರೆ, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನಾನು ನಿಶ್ಚಯವಾಗಿ ನಿಮ್ಮನ್ನು ಜನಾಂಗಗಳೊಳಗಿಂದ, ನೀವು ಚದರಿಹೋದ ದೇಶಗಳೊಳಗಿಂದ ಕೂಡಿಸುತ್ತೇನೆ. ಇಸ್ರಾಯೇಲ್ ದೇಶವನ್ನು ನಿಮಗೆ ತಿರುಗಿ ಕೊಡುವೆನು.’
೧೭“ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ‘ಅವರನ್ನು ಜನಾಂಗಗಳೊಳಗಿಂದ ಕೂಡಿಸುವೆನು, ಚದರಿರುವ ದೇಶಗಳಿಂದ ಅವರನ್ನು ಒಟ್ಟಿಗೆ ಬರಮಾಡಿ ಇಸ್ರಾಯೇಲ್ ದೇಶವನ್ನು ಅವರಿಗೆ ದಯಪಾಲಿಸುವೆನು.’
18 “ಅವರು ಅಲ್ಲಿಗೆ ಹಿಂತಿರುಗಿ ಮತ್ತು ಅದರಲ್ಲಿರುವ ಎಲ್ಲಾ ಅನುಪಯುಕ್ತ ಆಕೃತಿಗಳನ್ನು ಮತ್ತು ಅಸಹ್ಯಕರ ವಿಗ್ರಹಗಳನ್ನು ತೆಗೆದುಹಾಕುತ್ತಾರೆ.
೧೮ಅವರು ಅಲ್ಲಿಗೆ ಸೇರಿ ಎಲ್ಲಾ ಅಸಹ್ಯ ವಸ್ತುಗಳನ್ನೂ, ಸಮಸ್ತ ಅಸಹ್ಯ ವಿಗ್ರಹಗಳನ್ನೂ ಅಲ್ಲಿಂದ ತೆಗೆದುಹಾಕುವರು.
19 ಅವರಿಗೆ ಒಂದೇ ಮನಸ್ಸನ್ನು ಕೊಡುವೆನು. ನಿಮ್ಮಲ್ಲಿ ಒಂದು ಹೊಸ ಆತ್ಮವನ್ನು ಇಡುವೆನು. ಅವರೊಳಗಿಂದ ಕಲ್ಲಿನ ಹೃದಯವನ್ನು ಹೊರಗೆ ತೆಗೆಯುವೆನು. ಅವರಿಗೆ ಮೃದು ಹೃದಯವನ್ನು ಕೊಡುವೆನು.
೧೯“ಅವರು ನನ್ನ ನಿಯಮಗಳನ್ನು ಅನುಸರಿಸಿ, ನನ್ನ ವಿಧಿಗಳನ್ನು ಕೈಕೊಂಡು ನೆರವೇರಿಸಲಿ ಎಂದು ನಾನು ಅವರಿಗೆ ಒಂದೇ ಮನಸ್ಸನ್ನು ದಯಪಾಲಿಸಿ ನೂತನ ಸ್ವಭಾವವನ್ನು ಅವರಲ್ಲಿ ಹುಟ್ಟಿಸುವೆನು.
20 ಆಗ ಅವರು ನನ್ನ ನಿಯಮಗಳನ್ನು ಕೈಗೊಂಡು ಜಾಗರೂಕತೆಯಿಂದ ಪಾಲಿಸುವರು. ನನ್ನ ನಿಯಮಗಳನ್ನು ಕೈಗೊಳ್ಳುವರು. ಅವರು ನನ್ನ ಜನರಾಗುವರು, ನಾನು ಅವರ ದೇವರಾಗುವೆನು.
೨೦ಕಲ್ಲಾದ ಹೃದಯವನ್ನು ಅವರೊಳಗಿಂದ ತೆಗೆದು ಮೃದುವಾದ ಹೃದಯವನ್ನು ಅವರಿಗೆ ಅನುಗ್ರಹಿಸುವೆನು; ಅವರು ನನಗೆ ಪ್ರಜೆಯಾಗಿರುವರು, ನಾನು ಅವರಿಗೆ ದೇವರಾಗಿರುವೆನು.
21 ಆದರೆ ಯಾರ ಹೃದಯವು ಅನುಪಯುಕ್ತ ಆಕೃತಿಗಳನ್ನು ಮತ್ತು ಅಸಹ್ಯಕರ ವಿಗ್ರಹಗಳನ್ನು ಅನುಸರಿಸುತ್ತದೋ, ನಾನು ಅವರ ದುರ್ಮಾರ್ಗವನ್ನು ಅವರ ತಲೆಗೇ ಕಟ್ಟುವೆನು, ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.”
೨೧ಆದರೆ ಯಾರ ಮನಸ್ಸು ತಮ್ಮ ಅಸಹ್ಯ ವಸ್ತುಗಳನ್ನೂ, ಅಸಹ್ಯ ವಿಗ್ರಹಗಳನ್ನೂ ಅನುಸರಿಸುತ್ತದೋ ಅವರ ದುರ್ನಡತೆಯನ್ನು ಅವರ ತಲೆಗೆ ಕಟ್ಟುವೆನು” ಇದು ಕರ್ತನಾದ ಯೆಹೋವನ ನುಡಿ.
22 ಬಳಿಕ ಚಕ್ರಗಳ ಪಕ್ಕದಲ್ಲಿದ್ದ ಕೆರೂಬಿಗಳು ರೆಕ್ಕೆಗಳನ್ನು ಹರಡಿಕೊಂಡವು. ಇಸ್ರಾಯೇಲಿನ ದೇವರ ತೇಜಸ್ಸು ಅವುಗಳ ಮೇಲ್ಗಡೆ ನೆಲೆಸಿತ್ತು.
೨೨ಬಳಿಕ ಚಕ್ರಗಳ ಪಕ್ಕದಲ್ಲಿದ್ದ ಕೆರೂಬಿಗಳು ರೆಕ್ಕೆಗಳನ್ನು ಹರಡಿಕೊಂಡವು, ಇಸ್ರಾಯೇಲಿನ ದೇವರ ತೇಜಸ್ಸು ಅವುಗಳ ಮೇಲ್ಗಡೆ ನೆಲೆಸಿತ್ತು.
23 ಯೆಹೋವ ದೇವರ ಮಹಿಮೆಯು ಪಟ್ಟಣದ ಮಧ್ಯದೊಳಗಿಂದ ಮೇಲಕ್ಕೇರಿ, ಪಟ್ಟಣದ ಪೂರ್ವದಿಕ್ಕಿನಲ್ಲಿರುವ ಪರ್ವತದ ಮೇಲೆ ನಿಂತಿತು.
೨೩ಆಗ ಯೆಹೋವನ ತೇಜಸ್ಸು ಪಟ್ಟಣದ ಮಧ್ಯದೊಳಗಿಂದ ಏರಿ ಪಟ್ಟಣಕ್ಕೆ ಪೂರ್ವದಲ್ಲಿರುವ ಗುಡ್ಡದ ಮೇಲೆ ನಿಂತಿತು.
24 ಅನಂತರ ದೇವರಾತ್ಮರು, ದೇವರ ಆತ್ಮರಿಂದಾದ ದರ್ಶನದಲ್ಲಿ ನನ್ನನ್ನು ಬಾಬಿಲೋನಿಯರ ದೇಶಕ್ಕೆ ಸೆರೆಯವರ ಬಳಿಗೆ ಎತ್ತಿಕೊಂಡು ಹೋದರು. ಆಗ ನಾನು ನೋಡಿದ ದರ್ಶನವು ನನ್ನಿಂದ ಮೇಲೆ ಹೋಯಿತು.
೨೪ಆಮೇಲೆ ದೇವರಾತ್ಮ ಪರವಶನಾದ ನನ್ನನ್ನು ಎತ್ತಿ, ದಿವ್ಯ ದರ್ಶನದ ಮುಖಾಂತರ ಕಸ್ದೀಯರ ದೇಶದಲ್ಲಿ ಸೆರೆಯಾದವರ ಬಳಿಗೆ ಕರೆತಂದಿತು. ನನಗಾದ ದಿವ್ಯದರ್ಶನವು ಆಗ ಮಾಯವಾಯಿತು.
25 ಆಮೇಲೆ ಯೆಹೋವ ದೇವರು ನನಗೆ ತೋರಿಸಿದ ಎಲ್ಲಾ ಸಂಗತಿಗಳನ್ನು ಸೆರೆಯಲ್ಲಿರುವವರಿಗೆ ಹೇಳಿದೆನು.
೨೫ಯೆಹೋವನು ತೋರಿಸಿದ ಎಲ್ಲವುಗಳನ್ನು ಕೂಡಲೆ ಸೆರೆಯವರಿಗೆ ತಿಳಿಸಿದೆನು.

< ಯೆಹೆಜ್ಕೇಲನು 11 >