< ಕೀರ್ತನೆಗಳು 32 >

1 ದಾವೀದನ ಪದ್ಯ. ಯಾರ ದ್ರೋಹವು ಪರಿಹಾರವಾಗಿದೆಯೋ, ಯಾರ ಪಾಪವು ಕ್ಷಮಿಸಲ್ಪಟ್ಟಿದೆಯೋ ಅವನೇ ಧನ್ಯನು. 2 ಯೆಹೋವನು ಯಾರ ಲೆಕ್ಕಕ್ಕೆ ಅಪರಾಧವನ್ನು ಎಣಿಸುವುದಿಲ್ಲವೋ? ಯಾರ ಹೃದಯದಲ್ಲಿ ಕಪಟವಿರುವುದಿಲ್ಲವೋ ಅವನು ಧನ್ಯನು. 3 ನಾನು ನನ್ನ ಪಾಪವನ್ನು ಅರಿಕೆಮಾಡದೆ ಇದ್ದಾಗ, ದಿನವೆಲ್ಲಾ ನರಳುವುದರಿಂದ ನನ್ನ ಎಲುಬುಗಳು ಸವೆದುಹೋಗುತ್ತಿದ್ದವು. 4 ಹಗಲಿರುಳು ನಿನ್ನ ಶಿಕ್ಷಾಹಸ್ತವು ನನ್ನ ಮೇಲೆ ಭಾರವಾಗಿತ್ತು; ನನ್ನ ಶರೀರದ ಸಾರವೆಲ್ಲಾ ಬೇಸಿಗೆಯ ನೀರಿನಂತೆ ಬತ್ತಿಹೋಯಿತು. (ಸೆಲಾ) 5 ಹೀಗಿರುವಲ್ಲಿ ಯೆಹೋವನ ಸನ್ನಿಧಿಯಲ್ಲಿ ನನ್ನ ದ್ರೋಹವನ್ನು ಒಪ್ಪಿಕೊಳ್ಳುವೆನು ಅಂದುಕೊಂಡು ನನ್ನ ಪಾಪವನ್ನು ಮರೆಮಾಡದೆ ನಿನಗೆ ನನ್ನ ದೋಷವನ್ನು ತಿಳಿಸಿದೆನು. ನೀನು ನನ್ನ ಪಾಪಗಳ ಅಪರಾಧವನ್ನು ಪರಿಹರಿಸಿಬಿಟ್ಟಿ. (ಸೆಲಾ) 6 ಆದುದರಿಂದ ಭಕ್ತರೆಲ್ಲರು ಅಗತ್ಯಕಾಲದಲ್ಲಿ ನಿನ್ನನ್ನು ಪ್ರಾರ್ಥಿಸಲಿ; ಆಗ ಮಹಾಪ್ರವಾಹವು ಅಂಥವರನ್ನು ಮುಟ್ಟುವುದೇ ಇಲ್ಲ. 7 ನೀನೇ ನನಗೆ ಮರೆಯು; ನಿರಪಾಯವಾಗಿ ನನ್ನನ್ನು ಕಾಯುವಿ; ವಿಮೋಚನಧ್ವನಿಯಿಂದ ನನ್ನನ್ನು ಆವರಿಸಿಕೊಳ್ಳುತ್ತೀ. (ಸೆಲಾ) 8 ಯೆಹೋವನು, “ನಿನ್ನನ್ನು ಉಪದೇಶಿಸಿ ನಡೆಯಬೇಕಾದ ಮಾರ್ಗವನ್ನು ತಿಳಿಸುವೆನು; ನಿನ್ನನ್ನು ಕಟಾಕ್ಷಿಸಿ ಆಲೋಚನೆ ಹೇಳುವೆನು” ಎಂದು ಅನ್ನುತ್ತಾನಲ್ಲಾ. 9 ಆದುದರಿಂದ ನೀವು ವಿವೇಕಹೀನರಾಗಿ ಕುದುರೆಯಂತಾಗಲಿ ಅಥವಾ ಹೇಸರಗತ್ತೆಯಂತಾಗಲಿ ಇರಬೇಡಿರಿ; ಅವುಗಳು ಬಾರು ಕಡಿವಾಣಗಳಿಲ್ಲದೆ ಸ್ವಾಧೀನವಾಗುವುದಿಲ್ಲ. 10 ೧೦ ದುಷ್ಟರಿಗೆ ಅನೇಕ ಕಷ್ಟನಷ್ಟಗಳು ಉಂಟಾಗುವವು; ಆದರೆ ಯೆಹೋವನಲ್ಲಿ ಭರವಸವಿಟ್ಟವರನ್ನು ಆತನ ಕೃಪೆಯು ಆವರಿಸಿಕೊಳ್ಳುವುದು. 11 ೧೧ ನೀತಿವಂತರೇ, ಯೆಹೋವನಲ್ಲಿ ಸಂತೋಷಿಸುತ್ತಾ ಉಲ್ಲಾಸವಾಗಿರಿ; ಯಥಾರ್ಥಚಿತ್ತರೇ, ಆತನ ವಿಷಯದಲ್ಲಿ ಉತ್ಸಾಹ ಧ್ವನಿಮಾಡಿರಿ.

< ಕೀರ್ತನೆಗಳು 32 >