< ಕೀರ್ತನೆಗಳು 106 >

1 ಯೆಹೋವನಿಗೆ ಸ್ತೋತ್ರ! ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ. ಆತನು ಒಳ್ಳೆಯವನು. ಆತನ ಕೃಪೆಯು ಶಾಶ್ವತವಾಗಿರುವುದು.
ಯೆಹೋವ ದೇವರನ್ನು ಸ್ತುತಿಸಿರಿ. ಯೆಹೋವ ದೇವರಿಗೆ ಉಪಕಾರಸ್ತುತಿ ಮಾಡಿರಿ; ಅವರು ಒಳ್ಳೆಯವರು. ಅವರ ಪ್ರೀತಿ ಶಾಶ್ವತವಾಗಿರುವುದು.
2 ಯೆಹೋವನ ಮಹತ್ಕಾರ್ಯಗಳನ್ನು ಯಾರು ವರ್ಣಿಸಬಲ್ಲರು? ಆತನನ್ನು ತಕ್ಕಂತೆ ಕೀರ್ತಿಸುವುದು ಯಾರಿಂದಾದೀತು?
ಯೆಹೋವ ದೇವರ ಪರಾಕ್ರಮ ಕ್ರಿಯೆಗಳನ್ನು ಪ್ರಕಟಿಸಿರಿ, ದೇವರನ್ನು ತಕ್ಕಂತೆ ಸ್ತುತಿಸುವವರು ಯಾರಿಗೆ ಸಾಧ್ಯ?
3 ಯಾವಾಗಲೂ ನ್ಯಾಯವನ್ನು ಕಾಪಾಡುವವರೂ, ನೀತಿಯನ್ನು ಪಾಲಿಸುವವರೂ ಧನ್ಯರು.
ನ್ಯಾಯವನ್ನು ಕಾಪಾಡಿಕೊಂಡು ಯಾವಾಗಲೂ ಸರಿಯಾದವುಗಳನ್ನು ಪಾಲಿಸುವವರು ಧನ್ಯರು.
4 ಯೆಹೋವನೇ, ನನ್ನನ್ನು ನೆನಪುಮಾಡಿಕೊಂಡು, ನಿನ್ನ ಪ್ರಜೆಗೆ ತೋರಿಸುವ ದಯೆಯನ್ನು ನನಗೂ ತೋರಿಸು. ನನ್ನನ್ನು ರಕ್ಷಿಸಲಿಕ್ಕೆ ಬಾ,
ದೇವರೇ, ನಿಮ್ಮ ಜನರ ಮೇಲಿರುವ ಮೆಚ್ಚುಗೆಯಿಂದ ನನ್ನನ್ನು ಜ್ಞಾಪಕಮಾಡಿಕೊಳ್ಳಿರಿ, ನಿಮ್ಮ ರಕ್ಷಣೆಯಿಂದ ನನ್ನನ್ನು ದರ್ಶಿಸಿರಿ.
5 ಆಗ ನೀನು ಆರಿಸಿಕೊಂಡ ಪ್ರಜೆಯ ಏಳಿಗೆಯನ್ನು ನೋಡಿ, ನಾನೂ ಅವರೊಂದಿಗೆ ಸಂತೋಷಿಸುವೆನು; ನಿನ್ನ ಸ್ವಕೀಯರೊಂದಿಗೆ ನಾನೂ ಹಿಗ್ಗುವೆನು.
ಯೆಹೋವ ದೇವರೇ, ನಾನು ನೀವು ಆಯ್ದುಕೊಂಡವರ ಸುಖವನ್ನು ಕಂಡು, ನಿಮ್ಮ ಜನರ ಸಂತೋಷದೊಂದಿಗೆ ಸಂತೋಷಿಸಿ, ನಿಮ್ಮ ಸ್ವಕೀಯರ ಸಂಗಡ ಹೊಗಳಿಕೊಳ್ಳುವೆನು.
6 ನಮ್ಮ ಪೂರ್ವಿಕರಂತೆ ನಾವೂ ಪಾಪಿಗಳು; ಅಪರಾಧಮಾಡಿದೆವು; ದುಷ್ಟತನವನ್ನು ನಡೆಸಿದೆವು.
ನಮ್ಮ ಪಿತೃಗಳಂತೆ ನಾವು ಕೂಡಾ ಪಾಪಮಾಡಿದ್ದೇವೆ; ಅಕ್ರಮ ಮಾಡಿದ್ದೇವೆ; ದುಷ್ಟಕೃತ್ಯಗಳನ್ನು ನಡೆಸಿದ್ದೇವೆ.
7 ನಮ್ಮ ಪೂರ್ವಿಕರು ಐಗುಪ್ತದಲ್ಲಿ ನಿನ್ನ ಅದ್ಭುತಕ್ರಿಯೆಗಳನ್ನು ಲಕ್ಷಿಸಲಿಲ್ಲ; ನಿನ್ನ ಕೃಪಾತಿಶಯವನ್ನು ಸ್ಮರಿಸಲಿಲ್ಲ. ಅವರು ಕೆಂಪು ಸಮುದ್ರದ ಬಳಿಯಲ್ಲಿ ನಿನಗೆ ತಿರುಗಿಬಿದ್ದರು.
ನಮ್ಮ ಪಿತೃಗಳು ಈಜಿಪ್ಟಿನಲ್ಲಿ ನಿಮ್ಮ ಅದ್ಭುತಗಳಿಗೆ ಲಕ್ಷಕೊಡದೆ, ನಿಮ್ಮ ಕರುಣಾತಿಶಯವನ್ನು ನೆನಸದೆ, ಸಮುದ್ರದ ಬಳಿಯಲ್ಲಿ ಅಂದರೆ ಕೆಂಪುಸಮುದ್ರದ ಹತ್ತಿರ ತಿರುಗಿಬಿದ್ದರು.
8 ಆದರೂ ಆತನು ತನ್ನ ಹೆಸರಿನ ನಿಮಿತ್ತವಾಗಿಯೂ, ತನ್ನ ಶೌರ್ಯವನ್ನು ಪ್ರಕಟಿಸುವುದಕ್ಕಾಗಿಯೂ ಅವರನ್ನು ರಕ್ಷಿಸಿದನು.
ಆದರೂ ದೇವರು ತಮ್ಮ ಮಹಾಶಕ್ತಿಯನ್ನು ಅವರಿಗೆ ತಿಳಿಯಮಾಡುವ ಹಾಗೆ, ತಮ್ಮ ಹೆಸರಿನ ನಿಮಿತ್ತ ಅವರನ್ನು ರಕ್ಷಿಸಿದರು.
9 ಆತನು ಗದರಿಸಲು ಕೆಂಪು ಸಮುದ್ರವು ಒಣಗಿಹೋಯಿತು; ಅಡವಿಯನ್ನೋ ಎಂಬಂತೆ ಸಾಗರವನ್ನು ದಾಟಿಸಿದನು.
ದೇವರು ಕೆಂಪು ಸಮುದ್ರವನ್ನು ಗದರಿಸಲು, ಅದು ಒಣಗಿ ಹೋಯಿತು; ಹೀಗೆ ಮರುಭೂಮಿಯಲ್ಲಿ ನಡೆದು ಹೋದಂತೆ ಜಲಾಗಾಧದಲ್ಲಿ ಇಸ್ರಾಯೇಲರನ್ನು ನಡೆಸಿದರು.
10 ೧೦ ಹಗೆಗಳ ಕೈಯಿಂದ ಅವರನ್ನು ತಪ್ಪಿಸಿದನು; ವೈರಿಯ ಹಸ್ತದಿಂದ ಬಿಡಿಸಿದನು.
ವೈರಿಯ ಕೈಯೊಳಗಿಂದ ಅವರನ್ನು ರಕ್ಷಿಸಿದರು, ಶತ್ರುವಿನ ಕೈಯಿಂದ ಅವರನ್ನು ಬಿಡುಗಡೆ ಮಾಡಿದರು.
11 ೧೧ ಜಲರಾಶಿಯು ಅವರ ವಿರೋಧಿಗಳನ್ನು ಮುಚ್ಚಿಬಿಟ್ಟಿತು; ಒಬ್ಬನೂ ಉಳಿಯಲಿಲ್ಲ.
ಪ್ರವಾಹಗಳು ಅವರ ವೈರಿಗಳನ್ನು ಮುಚ್ಚಿಬಿಟ್ಟವು, ವೈರಿಗಳಲ್ಲಿ ಒಬ್ಬನೂ ಉಳಿಯಲಿಲ್ಲ.
12 ೧೨ ಆಗ ಅವರು ಆತನ ಮಾತನ್ನು ನಂಬಿ ಆತನನ್ನು ಕೀರ್ತಿಸಿದರು.
ಆಗ ಅವರು ದೇವರ ಮಾತುಗಳನ್ನು ನಂಬಿ, ದೇವರಿಗೆ ಸ್ತೋತ್ರವನ್ನು ಹಾಡಿದರು.
13 ೧೩ ಆದರೆ ಅವರು ಬೇಗನೆ ಆತನ ಕೆಲಸಗಳನ್ನು ಮರೆತು, ಆತನ ನಡೆಸುವಿಕೆಗೆ ಕಾದಿರದೆ,
ಆದರೆ ಬೇಗನೇ ದೇವರು ಮಾಡಿದ ಕೆಲಸಗಳನ್ನು ಮರೆತುಬಿಟ್ಟು, ದೇವರ ಸಂಕಲ್ಪಕ್ಕೆ ಅವರು ಕಾದುಕೊಳ್ಳದೆ ಹೋದರು.
14 ೧೪ ಅರಣ್ಯದಲ್ಲಿ ಅತಿ ಆಶೆಗೊಂಡವರಾಗಿ, ಅಡವಿಯಲ್ಲಿ ದೇವರನ್ನು ಪರೀಕ್ಷಿಸಿದರು.
ಮರುಭೂಮಿಯಲ್ಲಿ ದುರಾಶೆಯಿಂದ ಆಶಿಸಿ, ಹಾಳು ಪ್ರದೇಶದಲ್ಲಿ ದೇವರನ್ನು ಪರೀಕ್ಷಿಸಿದರು.
15 ೧೫ ಆತನು ಅವರ ಆಶೆಯನ್ನು ಪೂರೈಸಿದರೂ, ಅವರ ಪ್ರಾಣಕ್ಕೆ ಕ್ಷಯವನ್ನು ಬರಮಾಡಿದನು.
ಆಗ ದೇವರು ಅವರ ಬೇಡಿಕೆಯಂತೆಯೇ ಅವರಿಗೆ ಕೊಟ್ಟುಬಿಟ್ಟರು; ಆದರೆ ಅವರ ದೇಹಕ್ಕೆ ಭೀಕರ ರೋಗವನ್ನು ಸಹ ಅನುಮತಿಸಿದರು.
16 ೧೬ ಅವರು ಪಾಳೆಯದಲ್ಲಿ ಮೋಶೆಯ ಮೇಲೆಯೂ, ಯೆಹೋವನು ಪ್ರತಿಷ್ಠಿಸಿದ ಆರೋನನ ಮೇಲೆಯೂ ಹೊಟ್ಟೆಕಿಚ್ಚುಪಡಲು,
ಇಸ್ರಾಯೇಲರು ಪಾಳೆಯದಲ್ಲಿ ಮೋಶೆಯ ಮೇಲೆಯೂ, ಯೆಹೋವ ದೇವರಿಗೆ ಪ್ರತಿಷ್ಠಿತನಾದ ಆರೋನನ ಮೇಲೆಯೂ ಹೊಟ್ಟೆಕಿಚ್ಚುಪಟ್ಟರು.
17 ೧೭ ಭೂಮಿಯು ಬಾಯ್ದೆರೆದು ದಾತಾನನನ್ನು ನುಂಗಿಬಿಟ್ಟಿತು; ಅಬಿರಾಮನ ಕಡೆಯವರನ್ನು ಮುಚ್ಚಿಬಿಟ್ಟಿತು.
ಆಗ ಭೂಮಿಯು ಬಾಯಿತೆರೆದು ದಾತಾನನನ್ನು ನುಂಗಿ, ಅಬೀರಾಮನ ಗುಂಪನ್ನು ಮುಚ್ಚಿಬಿಟ್ಟಿತು.
18 ೧೮ ಅವರ ಮಧ್ಯದಲ್ಲಿ ಬೆಂಕಿಯುಂಟಾಯಿತು; ಅಗ್ನಿಜ್ವಾಲೆಯು ದುಷ್ಟರನ್ನು ದಹಿಸಿಬಿಟ್ಟಿತು.
ಬೆಂಕಿಯು ಅವರ ಗುಂಪಿನಲ್ಲಿ ಉರಿದು, ಜ್ವಾಲೆಯು ದುಷ್ಟರನ್ನು ಸುಟ್ಟಿತು.
19 ೧೯ ಹೋರೇಬಿನಲ್ಲಿ ಎರಕದ ಬಸವನನ್ನು ಮಾಡಿ, ಅದಕ್ಕೆ ಅಡ್ಡಬಿದ್ದರು.
ಅವರು ಹೋರೇಬಿನಲ್ಲಿ ಎರಕದ ಕರುವನ್ನು ಮಾಡಿ, ಆ ವಿಗ್ರಹಕ್ಕೆ ಅಡ್ಡಬಿದ್ದರು.
20 ೨೦ ಹೀಗೆ ಅವರು ತಮ್ಮ ದಿವ್ಯಮಹಿಮೆಯ ದೇವರನ್ನು ಬಿಟ್ಟು, ಹುಲ್ಲು ತಿನ್ನುವ ಎತ್ತಿನ ಮೂರ್ತಿಯನ್ನು ಹಿಡಿದುಕೊಂಡರು.
ಹೀಗೆ ಅವರು ತಮ್ಮ ಮಹಿಮೆಯುಳ್ಳ ದೇವರನ್ನು ಹುಲ್ಲು ತಿನ್ನುವ ಎತ್ತಿನ ರೂಪಕ್ಕೆ ಬದಲಾಯಿಸಿದರು.
21 ೨೧ ಐಗುಪ್ತದಲ್ಲಿ ಮಹತ್ತುಗಳನ್ನೂ, ಹಾಮನ ದೇಶದಲ್ಲಿ ಅದ್ಭುತಗಳನ್ನೂ,
ಅವರು ತಮ್ಮನ್ನು ರಕ್ಷಿಸಿದ ದೇವರನ್ನು ಬೇಗ ಮರೆತುಬಿಟ್ಟರು. ಹೌದು, ಈಜಿಪ್ಟ್ ದೇಶದಲ್ಲಿ ಮಹತ್ಕಾರ್ಯಗಳನ್ನೂ,
22 ೨೨ ಕೆಂಪು ಸಮುದ್ರದ ಬಳಿಯಲ್ಲಿ ಘೋರಕೃತ್ಯಗಳನ್ನೂ ನಡೆಸಿದ, ತಮ್ಮ ರಕ್ಷಕನಾದ ದೇವರನ್ನು ಮರೆತೇ ಬಿಟ್ಟರು.
ಹಾಮ ದೇಶದಲ್ಲಿ ಅದ್ಭುತಗಳನ್ನೂ, ಕೆಂಪುಸಮುದ್ರದ ಬಳಿಯಲ್ಲಿ ಅತಿಶಯವಾದವುಗಳನ್ನೂ ಮಾಡಿದ ದೇವರನ್ನು ಮರೆತುಬಿಟ್ಟರು.
23 ೨೩ ಆದುದರಿಂದ ಆತನು ಅವರನ್ನು ಸಂಹರಿಸುವೆನು ಎನ್ನಲು, ಆತನು ಆರಿಸಿಕೊಂಡ ಮೋಶೆಯು ಮಧ್ಯಸ್ಥನಾಗಿ, ಅವರನ್ನು ಸಂಹರಿಸದಂತೆ ಆತನ ಕೋಪವನ್ನು ಶಾಂತಪಡಿಸಿದನು.
ಆದ್ದರಿಂದ ದೇವರು ಅವರಿಗೆ ಪೂರ್ಣದಂಡನೆ ಕೊಡುವುದಾಗಿ ಹೇಳಿದರು. ಆದರೆ ಅವರು ಆಯ್ದುಕೊಂಡ ಮೋಶೆಯು, ದೇವರ ಕಠಿಣ ತೀರ್ಮಾನವನ್ನು ಶಾಂತಪಡಿಸಲು ಆಪತ್ತಿನಲ್ಲಿ ದೇವರ ಮುಂದೆ ಮಧ್ಯಸ್ಥನಾಗಿ ನಿಂತುಕೊಂಡನು.
24 ೨೪ ಅವರು ಆ ರಮಣೀಯ ದೇಶವನ್ನು ತಿರಸ್ಕರಿಸಿದರು, ಆತನ ಮಾತನ್ನು ನಂಬಲಿಲ್ಲ.
ಹೌದು, ಇಸ್ರಾಯೇಲರು ಮನೋಹರವಾದ ದೇಶವನ್ನು ಹೀನೈಸಿ, ದೇವರ ಮಾತನ್ನು ನಂಬದೆ ಹೋದರು.
25 ೨೫ ತಮ್ಮ ತಮ್ಮ ಗುಡಾರಗಳಲ್ಲಿ ಗುಣುಗುಟ್ಟಿ, ಯೆಹೋವನ ಮಾತಿಗೆ ಕಿವಿಗೊಡಲಿಲ್ಲ.
ತಮ್ಮ ಗುಡಾರಗಳಲ್ಲಿ ಗೊಣಗುಟ್ಟಿ ಯೆಹೋವ ದೇವರ ಮಾತನ್ನು ಹೇಳದೆ ಹೋದರು.
26 ೨೬ ಇದರಿಂದ ಆತನು ಅವರನ್ನು ಅರಣ್ಯದಲ್ಲಿಯೇ ಬೀಳಿಸುವೆನೆಂದೂ,
ಆದ್ದರಿಂದ ದೇವರು ಅವರನ್ನು ಮರುಭೂಮಿಯಲ್ಲಿ ಬೀಳುವಂತೆಯೂ, ಅವರ ಸಂತತಿಯರು ದೇಶಗಳಲ್ಲಿ ಚದರಿಸುವಂತೆಯೂ
27 ೨೭ ಅವರ ಸಂತಾನವನ್ನು ದೇಶಾಂತರಗಳಲ್ಲಿ ಚದುರಿಸಿ, ಅನ್ಯಜನಾಂಗಗಳ ನಡುವೆ ನಾಶಮಾಡುವೆನೆಂದೂ ಕೈಯೆತ್ತಿದನು.
ತಮ್ಮ ಕೈಯನ್ನು ಎತ್ತಿ ಅವರಿಗೆ ಪ್ರಮಾಣ ಮಾಡಬೇಕಾಯಿತು.
28 ೨೮ ಅವರು ತಮ್ಮನ್ನು ಬಾಳ್ ಪೆಗೋರನ ಸೇವೆಗೆ ಒಪ್ಪಿಸಿ, ಮೂರ್ತಿಗಳಿಗೆ ಯಜ್ಞ ಮಾಡಿದ್ದನ್ನು ಊಟಮಾಡಿದರು.
ಇಸ್ರಾಯೇಲರು ಬಾಳ್ ಪೆಯೋರನ ದೇವತೆಗೆ ತಮ್ಮನ್ನು ಒಪ್ಪಿಸಿಕೊಟ್ಟರು; ಜೀವವಿಲ್ಲದ ದೇವರುಗಳಿಗೆ ಅರ್ಪಿಸಿದ ಯಜ್ಞಗಳನ್ನು ತಿಂದರು.
29 ೨೯ ಈ ತಮ್ಮ ಕ್ರಿಯೆಗಳಿಂದ ಆತನನ್ನು ಕೆಣಕಿದರು; ಅವರಲ್ಲಿ ವ್ಯಾಧಿಯುಂಟಾಯಿತು.
ತಮ್ಮ ಕ್ರಿಯೆಗಳಿಂದ ದೇವರನ್ನು ಅಸಂತೋಷಪಡಿಸಿದರು. ಆದ್ದರಿಂದ ವ್ಯಾಧಿಯು ಅವರಲ್ಲಿ ಹಬ್ಬಿತು.
30 ೩೦ ಫೀನೆಹಾಸನು ಎದ್ದು ಅವರನ್ನು ದಂಡಿಸಲು, ಆ ವ್ಯಾಧಿಯು ನಿಂತುಹೋಯಿತು.
ಆಗ ಫೀನೆಹಾಸನು ಎದ್ದು ಬಂದು ದಂಡಿಸಿದ್ದರಿಂದ ವ್ಯಾಧಿ ನಿಂತುಹೋಯಿತು.
31 ೩೧ ಅವನು ಮಾಡಿದ್ದು ತಲಾತಲಾಂತರಕ್ಕೂ ನೀತಿಯೆಂದು ಎಣಿಸಲ್ಪಟ್ಟಿತು.
ಇದು ತಲತಲಾಂತರಕ್ಕೂ, ಯುಗಯುಗಕ್ಕೂ ಫೀನೆಹಾಸನಿಗೆ ನೀತಿ ಎಂದು ಎಣಿಸಲಾಯಿತು.
32 ೩೨ ಅವರು ಮೆರೀಬ ಪ್ರವಾಹದ ಸಮೀಪದಲ್ಲಿ ಆತನನ್ನು ರೇಗಿಸಿದರು. ಅವರ ದೆಸೆಯಿಂದ ಮೋಶೆಗೆ ಕೇಡು ಉಂಟಾಯಿತು.
ಮೆರೀಬಾದ ನೀರಿನ ಬಳಿಯಲ್ಲಿ ಆತನಿಗೆ ಕೋಪವನ್ನೆಬ್ಬಿಸಿದರು. ಅಲ್ಲಿ ಅವರ ನಿಮಿತ್ತ ಮೋಶೆಗೆ ಕೇಡು ಬಂತು.
33 ೩೩ ಅವರು ದೇವರಾತ್ಮನಿಗೆ ವಿರುದ್ಧವಾಗಿ ನಿಂತಿದ್ದರಿಂದ, ಮೋಶೆ ದುಡುಕಿ ಮಾತನಾಡಿದನು.
ಏಕೆಂದರೆ ಇಸ್ರಾಯೇಲರು ದೇವರ ಆತ್ಮನಿಗೆ ತಿರುಗಿ ಬಿದ್ದದ್ದರಿಂದ, ಮೋಶೆ ದುಡುಕಿ ಮಾತನಾಡಿದನು.
34 ೩೪ ಅನ್ಯ ಜನಾಂಗದವರನ್ನು ಸಂಹರಿಸಬೇಕೆಂಬ, ಯೆಹೋವನ ಆಜ್ಞೆಗೆ ಅವಿಧೇಯರಾಗಿ,
ಯೆಹೋವ ದೇವರು ಅವರಿಗೆ ಆಜ್ಞಾಪಿಸಿದ ಜನಗಳನ್ನು ಅವರು ದಂಡಿಸದೆ ಹೋದರು.
35 ೩೫ ಅವರೊಡನೆ ಕೂಡಿಕೊಂಡು, ಅವರ ದುರಾಚಾರಗಳನ್ನು ಕಲಿತುಕೊಂಡರು.
ಆದರೆ ಇತರ ಜನಾಂಗಗಳ ಸಂಗಡ ಕೂಡಿಕೊಂಡು, ಅವರ ಪದ್ಧತಿಗಳನ್ನು ಕಲಿತುಕೊಂಡರು.
36 ೩೬ ಅವರ ವಿಗ್ರಹಗಳನ್ನು ಸೇವಿಸಿದರು; ಅವು ಅವರಿಗೆ ಉರುಲಿನಂತಾದವು.
ಅವರ ವಿಗ್ರಹಗಳಿಗೆ ಆರಾಧನೆ ಮಾಡಿದರು; ಅವು ಅವರಿಗೆ ಉರುಲಿನಂತಾದವು.
37 ೩೭ ಅವರು ತಮ್ಮ ಗಂಡು ಹೆಣ್ಣು ಮಕ್ಕಳನ್ನು ಭೂತಗಳಿಗೆ ಬಲಿಕೊಟ್ಟರು.
ತಮ್ಮ ಗಂಡು ಮಕ್ಕಳನ್ನೂ, ಹೆಣ್ಣು ಮಕ್ಕಳನ್ನೂ ಸುಳ್ಳು ದೇವರುಗಳಿಗೆ ಬಲಿಕೊಟ್ಟರು.
38 ೩೮ ಕಾನಾನ್ಯರ ಮೂರ್ತಿಗಳ ಅರ್ಪಣೆಗೋಸ್ಕರ, ತಮ್ಮ ಮಕ್ಕಳ ನಿರಪರಾಧ ರಕ್ತವನ್ನು ಸುರಿಸಿದರು; ಇಂಥ ಕೊಲೆಗಳಿಂದ ದೇಶವನ್ನು ಹೊಲೆಮಾಡಿದರು.
ಇದಲ್ಲದೆ ತಮ್ಮ ಗಂಡು ಹೆಣ್ಣು ಮಕ್ಕಳ ನಿರಪರಾಧದ ರಕ್ತವನ್ನು ಚೆಲ್ಲಿ, ಕಾನಾನಿನ ವಿಗ್ರಹಗಳಿಗೆ ಅರ್ಪಿಸಿ, ದೇಶವನ್ನು ರಕ್ತದಿಂದ ಅಶುದ್ಧ ಮಾಡಿದರು.
39 ೩೯ ಅವರು ತಮ್ಮ ದುಷ್ಕೃತ್ಯಗಳಿಂದ ಅಶುದ್ಧರಾದರು. ದುರಾಚಾರಗಳಿಂದ ದೇವದ್ರೋಹಿಗಳಾದರು.
ಹೀಗೆ ತಮ್ಮ ದುಷ್ಕೃತ್ಯಗಳಿಂದ ತಮ್ಮನ್ನು ಅಪವಿತ್ರ ಮಾಡಿಕೊಂಡು, ತಮ್ಮ ಕ್ರಿಯೆಗಳಿಂದ ದುರಾಚಾರಿಗಳಾದರು.
40 ೪೦ ಆಗ ಯೆಹೋವನ ಕೋಪವು ಅವರ ಮೇಲೆ ಉರಿಗೊಂಡಿತು; ಆತನು ತನ್ನ ಸ್ವಾಸ್ತ್ಯವಾದ ಪ್ರಜೆಗಳನ್ನು ಅಸಹ್ಯಿಸಿ,
ಆಗ ಯೆಹೋವ ದೇವರು ತಮ್ಮ ಜನರ ಮೇಲೆ ಬಹು ಬೇಸರಗೊಂಡರು. ದೇವರು ತಮ್ಮ ವಾರಸುದಾರರಾದ ಇಸ್ರಾಯೇಲರ ಮೇಲೆ ಅಸಂತೋಷಗೊಂಡು,
41 ೪೧ ಅವರನ್ನು ಅನ್ಯಜನಾಂಗಗಳ ಕೈಗೆ ಒಪ್ಪಿಸಿದನು. ವೈರಿಗಳು ಅವರ ಮೇಲೆ ಅಧಿಕಾರ ನಡೆಸಿದರು;
ಅವರನ್ನು ಇತರ ಜನಾಂಗಗಳ ಕೈಗೆ ಒಪ್ಪಿಸಿಕೊಟ್ಟರು. ಹೀಗೆ ಅವರ ವೈರಿಗಳು ಅವರನ್ನು ಆಳಿದರು.
42 ೪೨ ಶತ್ರುಗಳು ಅವರನ್ನು ಕುಗ್ಗಿಸಿದರು; ಅವರ ಕೈಕೆಳಗೆ ತಗ್ಗಿಹೋದರು.
ಅವರ ಶತ್ರುಗಳು ಅವರನ್ನು ಬಾಧೆಪಡಿಸಿದರು; ಅವರ ಕೈಕೆಳಗೆ ಅವರು ಅಧೀನರಾದರು.
43 ೪೩ ಆತನು ಅವರನ್ನು ಅನೇಕಾವರ್ತಿ ರಕ್ಷಿಸಿದರೂ, ಅವರು ತಮ್ಮ ಆಲೋಚನೆಯನ್ನೇ ಅನುಸರಿಸಿ ಅವಿಧೇಯರಾದರು; ತಮ್ಮ ಅಕ್ರಮದಿಂದಲೇ ಹೀನಸ್ಥಿತಿಗೆ ಬಂದರು.
ಅನೇಕ ಸಾರಿ ದೇವರು ಇಸ್ರಾಯೇಲರನ್ನು ಬಿಡಿಸಿದರು, ಆದರೆ ಅವರು ತಿರುಗಿಬೀಳುತ್ತಲೇ ಇದ್ದರು; ತಮ್ಮ ಅಕ್ರಮದಿಂದಲೇ ಅವರು ಕುಗ್ಗಿಹೋದರು;
44 ೪೪ ಆದರೆ ಆತನು ಕಷ್ಟದಲ್ಲಿದ್ದ, ಅವರ ಮೊರೆಯನ್ನು ಕೇಳಿ ಪರಾಂಬರಿಸಿದನು.
ಆದರೂ ಅವರ ಕೂಗನ್ನು ದೇವರು ಕೇಳಿದಾಗ ಇಕ್ಕಟ್ಟಿನಲ್ಲಿದ್ದ ಅವರ ಮೇಲೆ ಲಕ್ಷ್ಯವಿಟ್ಟು,
45 ೪೫ ತನ್ನ ಒಡಂಬಡಿಕೆಯನ್ನು ನೆನಪುಮಾಡಿಕೊಂಡು, ತನ್ನ ಕೃಪಾತಿಶಯದಿಂದ ಅವರನ್ನು ಕನಿಕರಿಸಿದನು.
ಅವರಿಗಾಗಿ ತಮ್ಮ ಒಡಂಬಡಿಕೆಯನ್ನು ಜ್ಞಾಪಕಮಾಡಿಕೊಂಡು, ತಮ್ಮ ಅತಿಶಯವಾದ ಪ್ರೀತಿಯ ಪ್ರಕಾರ,
46 ೪೬ ಸೆರೆಯೊಯ್ದವರ ದಯೆಗೆ ಅವರು ಪಾತ್ರರಾಗುವಂತೆ ಮಾಡಿದನು.
ಅವರನ್ನು ಸೆರೆಹಿಡಿದವರ ಕರುಣೆ ತೋರುವಂತೆ ಮಾಡಿದರು.
47 ೪೭ ಯೆಹೋವನೇ, ನಮ್ಮ ದೇವರೇ, ರಕ್ಷಿಸು; ಅನ್ಯಜನಗಳಲ್ಲಿ ಚದರಿರುವ ನಮ್ಮನ್ನು ತಿರುಗಿ ಕೂಡಿಸು. ಆಗ ನಿನ್ನ ಪರಿಶುದ್ಧ ನಾಮವನ್ನು ಕೊಂಡಾಡುವೆವು; ನಿನ್ನ ಸ್ತೋತ್ರದಲ್ಲಿ ಹೆಚ್ಚಳಪಡುವೆವು.
ನಮ್ಮ ದೇವರಾದ ಯೆಹೋವ ದೇವರೇ, ನಾವು ನಿಮ್ಮ ಪರಿಶುದ್ಧ ಹೆಸರಿಗೆ ಉಪಕಾರಸ್ತುತಿ ಮಾಡಿ, ನಿಮ್ಮ ಸ್ತೋತ್ರದಲ್ಲಿ ಜಯಘೋಷ ಮಾಡುವ ಹಾಗೆ, ನಮ್ಮನ್ನು ರಕ್ಷಿಸಿರಿ.
48 ೪೮ ಇಸ್ರಾಯೇಲ್ ದೇವರಾದ ಯೆಹೋವನಿಗೆ, ಯುಗಯುಗಾಂತರಗಳವರೆಗೂ ಕೊಂಡಾಟವಾಗಲಿ; ಸರ್ವಜನರೂ “ಆಮೆನ್” ಎನ್ನಲಿ. ಯೆಹೋವನಿಗೆ ಸ್ತೋತ್ರ!
ಇಸ್ರಾಯೇಲ್ ದೇವರಾದ ಯೆಹೋವ ದೇವರಿಗೆ ಯುಗಯುಗಕ್ಕೂ ಸ್ತುತಿಯುಂಟಾಗಲಿ. ಜನರೆಲ್ಲರೂ, “ಆಮೆನ್!” ಎಂದು ಹೇಳಲಿ. ನೀವು ಯೆಹೋವ ದೇವರನ್ನು ಸ್ತುತಿಸಿರಿ.

< ಕೀರ್ತನೆಗಳು 106 >