< ಜ್ಞಾನೋಕ್ತಿಗಳು 16 >

1 ಹೃದಯದ ಸಂಕಲ್ಪವು ಮನುಷ್ಯನ ವಶವು, ತಕ್ಕ ಉತ್ತರಕೊಡುವ ಶಕ್ತಿಯು ಯೆಹೋವನಿಂದಾಗುವುದು.
ಮನುಷ್ಯನಲ್ಲಿ ತನ್ನ ಹೃದಯದ ಯೋಜನೆಗಳು, ಆದರೆ ಸರಿಯಾದ ಉತ್ತರಕೊಡುವ ಶಕ್ತಿ ಯೆಹೋವ ದೇವರಿಂದಲೇ ಬರುವವು.
2 ಮನುಷ್ಯನ ನಡತೆಯೆಲ್ಲಾ ಸ್ವಂತ ದೃಷ್ಟಿಗೆ ಶುದ್ಧವಾಗಿದೆ, ಯೆಹೋವನು ಅಂತರಂಗವನ್ನೇ ಪರೀಕ್ಷಿಸುವನು.
ಮನುಷ್ಯನ ಮಾರ್ಗಗಳೆಲ್ಲಾ ತನ್ನ ದೃಷ್ಟಿಯಲ್ಲಿ ಶುದ್ಧವಾಗಿವೆ, ಆದರೆ ಯೆಹೋವ ದೇವರು ಅವನ ಉದ್ದೇಶಗಳನ್ನು ಪರೀಕ್ಷಿಸುತ್ತಾರೆ.
3 ನಿನ್ನ ಕಾರ್ಯಭಾರವನ್ನು ಯೆಹೋವನಿಗೆ ವಹಿಸಿದರೆ, ನಿನ್ನ ಉದ್ದೇಶಗಳು ಸಫಲವಾಗುವವು.
ನಿನ್ನ ಕಾರ್ಯಗಳನ್ನು ಯೆಹೋವ ದೇವರಿಗೆ ಒಪ್ಪಿಸು, ಆಗ ನಿನ್ನ ಯೋಜನೆಗಳು ಸ್ಥಿರವಾಗುವುವು.
4 ಯೆಹೋವನು ಒಂದೊಂದನ್ನೂ ತಕ್ಕ ಗುರಿಯಿಂದ ಸೃಷ್ಟಿಸಿದ್ದಾನೆ, ಹೌದು, ಕೇಡಿನ ದಿನಕ್ಕಾಗಿ ಕೆಡುಕರನ್ನು ಉಂಟುಮಾಡಿದ್ದಾನೆ.
ಯೆಹೋವ ದೇವರು ಎಲ್ಲವುಗಳನ್ನು ಅದರದೇ ಆದ ಉದ್ದೇಶಗಳಿಗಾಗಿ ಮಾಡಿದ್ದಾರೆ. ಹೌದು, ಕೇಡಿನ ದಿನಕ್ಕಾಗಿಯೂ ಕೆಡುಕರನ್ನು ಮಾಡಿದ್ದಾರೆ.
5 ಅಹಂಕಾರಿಗಳೆಲ್ಲಾ ಯೆಹೋವನಿಗೆ ಅಸಹ್ಯ, ಅವರಿಗೆ ದಂಡನೆ ಖಂಡಿತ.
ಹೃದಯದಲ್ಲಿ ಗರ್ವಿಷ್ಠನಾದ ಪ್ರತಿಯೊಬ್ಬನೂ ಯೆಹೋವ ದೇವರಿಗೆ ಅಸಹ್ಯ. ದುಷ್ಟನಿಗೆ ಶಿಕ್ಷೆಯು ತಪ್ಪುವುದಿಲ್ಲ.
6 ಕೃಪಾಸತ್ಯತೆಗಳಿಂದ ಪಾಪನಿವಾರಣೆ, ಯೆಹೋವನ ಭಯಭಕ್ತಿಯಿಂದ ಹಾನಿನಿವಾರಣೆ.
ಪ್ರೀತಿ ಮತ್ತು ಸತ್ಯತೆಗಳಿಂದ ಪಾಪಕ್ಕೆ ಪ್ರಾಯಶ್ಚಿತ್ತವಾಗುತ್ತದೆ. ಯೆಹೋವ ದೇವರ ಭಯದ ಮೂಲಕ ಮನುಷ್ಯರು ಕೆಟ್ಟದ್ದರಿಂದ ತೊಲಗುತ್ತಾರೆ.
7 ಯೆಹೋವನು ಒಬ್ಬನ ನಡತೆಗೆ ಮೆಚ್ಚಿದರೆ, ಅವನ ಶತ್ರುಗಳನ್ನೂ ಮಿತ್ರರನ್ನಾಗಿ ಮಾಡುವನು.
ಮನುಷ್ಯನ ಮಾರ್ಗಗಳು ಯೆಹೋವ ದೇವರನ್ನು ಮೆಚ್ಚಿಸಿದಾಗ, ಅವರು ಅವನ ಶತ್ರುಗಳನ್ನು ಸಹ ಅವನೊಂದಿಗೆ ಸಮಾಧಾನದಲ್ಲಿರುವಂತೆ ಮಾಡುತ್ತಾರೆ.
8 ಅನ್ಯಾಯದಿಂದ ಗಳಿಸಿದ ಬಹು ಧನಕ್ಕಿಂತಲೂ, ನ್ಯಾಯದಿಂದ ಕೂಡಿಸಿದ ಅಲ್ಪ ಧನವೇ ಲೇಸು.
ಅನ್ಯಾಯದ ದೊಡ್ಡ ಆದಾಯಕ್ಕಿಂತಲೂ ನೀತಿಯೊಂದಿಗಿರುವ ಸ್ವಲ್ಪವೇ ಉತ್ತಮ.
9 ಮನುಷ್ಯನು ತನ್ನ ಮನದಂತೆ ದಾರಿಯನ್ನು ಆರಿಸಿಕೊಂಡರೂ, ಯೆಹೋವನೇ ಅವನಿಗೆ ಗತಿಯನ್ನು ಏರ್ಪಡಿಸುವನು.
ಒಬ್ಬ ಮನುಷ್ಯನ ಹೃದಯವು ಅವನ ಮಾರ್ಗವನ್ನು ಕಲ್ಪಿಸುತ್ತದೆ, ಆದರೆ ಯೆಹೋವ ದೇವರು ಅವನ ಹೆಜ್ಜೆಗಳನ್ನು ಸ್ಥಾಪಿಸುತ್ತಾರೆ.
10 ೧೦ ರಾಜನ ತುಟಿಗಳಲ್ಲಿ ದೈವೋಕ್ತಿ, ನ್ಯಾಯತೀರಿಸುವುದರಲ್ಲಿ ಅವನ ಬಾಯಿ ತಪ್ಪಿಹೋಗದು.
ಅರಸನ ತುಟಿಗಳಲ್ಲಿ ದೈವೋಕ್ತಿ. ನ್ಯಾಯತೀರ್ಪಿನಲ್ಲಿ ಅವನ ಬಾಯಿಯು ದೋಷ ಮಾಡುವುದಿಲ್ಲ.
11 ೧೧ ನ್ಯಾಯದ ಅಳತೆ ಮತ್ತು ತಕ್ಕಡಿಗಳು ಯೆಹೋವನ ಏರ್ಪಾಡು, ಚೀಲದಲ್ಲಿನ ತೂಕದಕಲ್ಲುಗಳೆಲ್ಲಾ ಆತನ ಕೈಕೆಲಸವೇ.
ನ್ಯಾಯದ ತೂಕವೂ ತಕ್ಕಡಿಯೂ ಯೆಹೋವ ದೇವರದೇ. ಚೀಲದ ತೂಕಗಳು ಅವರ ಕೈಕೆಲಸವೇ.
12 ೧೨ ರಾಜರು ಸಿಂಹಾಸನಕ್ಕೆ ಧರ್ಮವೇ ಆಧಾರವೆಂದು ತಿಳಿದು, ಅಧರ್ಮವನ್ನಾಚರಿಸಲು ಅಸಹ್ಯಪಡುವರು.
ಕೆಟ್ಟದ್ದನ್ನು ಮಾಡುವವರು ರಾಜರಿಗೆ ಅಸಹ್ಯರು. ಏಕೆಂದರೆ ನೀತಿಯಿಂದ ಸಿಂಹಾಸನವು ಸ್ಥಾಪಿಸಲಾಗುತ್ತದೆ.
13 ೧೩ ರಾಜರು ಸತ್ಯದ ತುಟಿಗಳನ್ನು ಮೆಚ್ಚುವರು, ಯಥಾರ್ಥವಾದಿಯನ್ನು ಪ್ರೀತಿಸುವರು.
ನೀತಿಯ ತುಟಿಗಳಲ್ಲಿ ಅರಸರು ಆನಂದಿಸುತ್ತಾರೆ, ಯಥಾರ್ಥವಾದಿಯನ್ನು ಅವರು ಪ್ರೀತಿಸುತ್ತಾರೆ.
14 ೧೪ ರಾಜನ ಕೋಪ ಮೃತ್ಯುವಿನ ದೂತ, ಜಾಣನು ಅದನ್ನು ಶಮನಪಡಿಸುವನು.
ಅರಸನ ಕೋಪವು ಮೃತ್ಯುವಿನ ದೂತರಂತೆ ಇರುತ್ತದೆ, ಆದರೆ ಜ್ಞಾನಿಯು ಅದನ್ನು ಶಮನಪಡಿಸುವನು.
15 ೧೫ ಪ್ರಭುವಿನ ಮುಖಪ್ರಸನ್ನತೆ ಜೀವ, ಆತನ ದಯೆ ಮುಂಗಾರುಮುಗಿಲು.
ಪ್ರಕಾಶಮಾನವಾದ ಅರಸನ ಮುಖದಲ್ಲಿ ಜೀವ, ಅವನ ದಯೆಯು ಹಿಂಗಾರು ಮಳೆಯ ಮೇಘದಂತಿದೆ.
16 ೧೬ ಬಂಗಾರಕ್ಕಿಂತಲೂ ಜ್ಞಾನವನ್ನು ಪಡೆಯುವುದು ಎಷ್ಟೋ ಮೇಲು, ಬೆಳ್ಳಿಗಿಂತಲೂ ವಿವೇಕವನ್ನು ಹೊಂದುವುದು ಲೇಸು.
ಬಂಗಾರಕ್ಕಿಂತ ಜ್ಞಾನವನ್ನು ಪಡೆಯುವುದು ಎಷ್ಟೋ ಮೇಲು! ಬೆಳ್ಳಿಗಿಂತ ವಿವೇಕವನ್ನು ಆರಿಸಿಕೊಳ್ಳುವುದು ಎಷ್ಟೋ ಉತ್ತಮ.
17 ೧೭ ಸತ್ಯವಂತನ ರಾಜಮಾರ್ಗ ಹಾನಿಗೆ ದೂರ, ತನ್ನ ನಡತೆಯನ್ನು ಗಮನಿಸುವವನು ತನ್ನ ಆತ್ಮವನ್ನು ಕಾಯುವನು.
ಯಥಾರ್ಥವಂತರ ಹೆದ್ದಾರಿಯು ಕೆಟ್ಟತನದಿಂದ ಬಹುದೂರ. ತನ್ನ ಮಾರ್ಗವನ್ನು ಕಾಯುವವನು ತನ್ನ ಪ್ರಾಣವನ್ನು ಕಾಪಾಡಿಕೊಳ್ಳುತ್ತಾನೆ.
18 ೧೮ ಗರ್ವದಿಂದ ಭಂಗ, ಉಬ್ಬಿನಿಂದ ದೊಬ್ಬು.
ನಾಶನಕ್ಕೆ ಮುಂದಾಗಿ ಗರ್ವ ಹೋಗುತ್ತದೆ. ಬೀಳುವಿಕೆಯ ಮುಂಚೆ ಜಂಬದ ಆತ್ಮ.
19 ೧೯ ಸೊಕ್ಕಿನವರ ಸಂಗಡ ಸೂರೆಯನ್ನು ಹಂಚಿಕೊಳ್ಳುವುದಕ್ಕಿಂತಲೂ, ದೀನರ ಸಂಗಡ ದೈನ್ಯದಿಂದಿರುವುದು ವಾಸಿ.
ಅಹಂಕಾರಿಗಳೊಂದಿಗೆ ಕೊಳ್ಳೆಯನ್ನು ಹಂಚಿಕೊಳ್ಳುವದಕ್ಕಿಂತ, ದೀನರೊಂದಿಗೆ ದೀನ ಆತ್ಮವುಳ್ಳವರಾಗಿ ಇರುವುದು ಉತ್ತಮ.
20 ೨೦ ದೇವರ ವಾಕ್ಯವನ್ನು ಸ್ಮರಿಸುವವನು ಸುಕ್ಷೇಮವನ್ನು ಪಡೆಯುವನು, ಯೆಹೋವನಲ್ಲಿ ಭರವಸವಿಡುವವನು ಭಾಗ್ಯವಂತನು.
ಕಾರ್ಯವನ್ನು ಜ್ಞಾನದಿಂದ ನಡೆಸುವವನು ಒಳ್ಳೆಯದನ್ನು ಪಡೆಯುವನು. ಯೆಹೋವ ದೇವರಲ್ಲಿ ಭರವಸೆ ಇಡುವವನು ಧನ್ಯನು.
21 ೨೧ ಜ್ಞಾನಹೃದಯರಿಗೆ ಜಾಣರೆಂಬ ಬಿರುದು ಬರುವುದು, ಸವಿತುಟಿಯಿಂದ ಉಪದೇಶ ಶಕ್ತಿಯು ಹೆಚ್ಚುವುದು.
ಹೃದಯದಲ್ಲಿ ಜ್ಞಾನವಂತರು ವಿವೇಚನೆಯುಳ್ಳವರು ಎಂದು ಕರೆಯಲಾಗುವರು. ತುಟಿಗಳ ಮಾಧುರ್ಯ ಮನವೊಲಿಸುವವು.
22 ೨೨ ವಿವೇಕಿಗೆ ವಿವೇಕವೇ ಜೀವದ ಬುಗ್ಗೆ, ಮೂರ್ಖನಿಗೆ ಮೂರ್ಖತನವೇ ದಂಡನೆ.
ವಿವೇಕವು ವಿವೇಕಿಗಳಿಗೆ ಜೀವನದ ಬುಗ್ಗೆ, ಆದರೆ ಮೂರ್ಖತನವು ಮೂರ್ಖರಿಗೆ ಶಿಕ್ಷೆಯನ್ನು ತರುತ್ತದೆ.
23 ೨೩ ಜ್ಞಾನಿಯ ಹೃದಯವು ಅವನ ಬಾಯಿಗೆ ಜಾಣತನವನ್ನೂ, ಅವನ ತುಟಿಗಳಿಗೆ ಉಪದೇಶ ಶಕ್ತಿಯನ್ನೂ ಹೆಚ್ಚಿಸುವುದು.
ಜ್ಞಾನಿಯ ಹೃದಯವು ಅವನ ಬಾಯಿಗೆ ಜಾಣತನವನ್ನೂ, ಅವನ ತುಟಿಗಳಿಗೆ ಉಪದೇಶ ಶಕ್ತಿಯನ್ನೂ ಹೆಚ್ಚಿಸುವುದು.
24 ೨೪ ಸವಿನುಡಿಯು ಜೇನುಕೊಡ, ಅದು ಆತ್ಮಕ್ಕೆ ಸಿಹಿ, ಎಲುಬಿಗೆ ಕ್ಷೇಮ.
ವಿನಯದ ಮಾತುಗಳು ಜೇನುಗೂಡು ಪ್ರಾಣಕ್ಕೆ ಮಧುರವೂ, ಎಲುಬುಗಳಿಗೆ ಕ್ಷೇಮವೂ ಆಗಿವೆ.
25 ೨೫ ಮನುಷ್ಯನ ದೃಷ್ಟಿಗೆ ಸರಳವಾಗಿ ತೋರುವ ಒಂದು ದಾರಿಯುಂಟು, ಕಟ್ಟಕಡೆಗೆ ಅದು ಮರಣಮಾರ್ಗವೇ.
ಮನುಷ್ಯರಿಗೆ ಸರಿಯಾಗಿ ತೋರುವ ಒಂದು ಮಾರ್ಗ ಉಂಟು, ಆದರೆ ಅದರ ಅಂತ್ಯವು ಮರಣದ ಮಾರ್ಗವೇ.
26 ೨೬ ದುಡಿಯುವವನಿಗೆ ಅವನ ಹೊಟ್ಟೆಯೇ ದುಡಿಯುವಂತೆ ಮಾಡುವುದು, ದುಡಿಯಲಿಕ್ಕೆ ಅವನ ಬಾಯೇ ಅವನನ್ನು ಒತ್ತಾಯ ಮಾಡುವುದು.
ದುಡಿಯುವವನಿಗೆ ಅವನ ಹಸಿವೇ ದುಡಿಯುವಂತೆ ಮಾಡುವುದು, ಅವನ ಹಸಿವು ಅವನನ್ನು ಒತ್ತಾಯ ಮಾಡುವುದು.
27 ೨೭ ನೀಚನು ಕೇಡೆಂಬ ಕುಣಿಯನ್ನು ತೋಡುತ್ತಾನೆ, ಅವನ ಮಾತುಗಳು ಬೆಂಕಿಯ ಉರಿಯಂತಿದೆ.
ಭಕ್ತಿಹೀನನು ಕೇಡಿನ ಕುಣಿ ಅಗೆಯುತ್ತಾನೆ. ಅವನ ತುಟಿಗಳು ಉರಿಯುವ ಬೆಂಕಿಯಂತಿವೆ.
28 ೨೮ ತುಂಟನು ಜಗಳ ಬಿತ್ತುತ್ತಾನೆ, ಚಾಡಿಕೋರನು ಮಿತ್ರರನ್ನು ಅಗಲಿಸುತ್ತಾನೆ.
ಮೂರ್ಖನು ಜಗಳವನ್ನು ಬಿತ್ತುತ್ತಾನೆ. ಚಾಡಿಕೋರನು ಪ್ರಮುಖ ಸ್ನೇಹಿತರನ್ನು ಅಗಲಿಸುತ್ತಾನೆ.
29 ೨೯ ಬಲಾತ್ಕಾರಿಯು ನೆರೆಯವನನ್ನು ಮರುಳುಗೊಳಿಸಿ, ದುರ್ಮಾರ್ಗಕ್ಕೆ ಎಳೆಯುವನು.
ಬಲಾತ್ಕಾರಿಯು ನೆರೆಯವನನ್ನು ಮರುಳುಗೊಳಿಸಿ, ದುರ್ಮಾರ್ಗಕ್ಕೆ ಎಳೆಯುತ್ತಾನೆ.
30 ೩೦ ಕಣ್ಣನ್ನು ಮುಚ್ಚಿಕೊಳ್ಳುವವನು ಕುಯುಕ್ತಿಯನ್ನು ಕಲ್ಪಿಸುವನು, ತುಟಿಯನ್ನು ಕಚ್ಚುವವನು ಕೇಡನ್ನು ಸಾಧಿಸುವನು.
ವಕ್ರಬುದ್ಧಿಯ ಒಳಸಂಚುಗಳಿಗೆ ಅವನು ತನ್ನ ಕಣ್ಣುಗಳನ್ನು ಮುಚ್ಚಿಕೊಳ್ಳುತ್ತಾನೆ. ತನ್ನ ತುಟಿಗಳನ್ನು ಕದಲಿಸುತ್ತಾ ಕೆಟ್ಟದ್ದು ಸಂಭವಿಸುವಂತೆ ಮಾಡುತ್ತಾನೆ.
31 ೩೧ ನರೆಗೂದಲೇ ಸುಂದರ ಕಿರೀಟವು, ಅದು ಧರ್ಮಮಾರ್ಗದಲ್ಲಿ ದೊರಕುವುದು.
ನರೆಗೂದಲು ಉಜ್ವಲ ಕಿರೀಟ, ಅದು ನೀತಿಯ ಜೀವಿತದಲ್ಲಿ ಒದಗುತ್ತದೆ.
32 ೩೨ ದೀರ್ಘಶಾಂತನು ಶೂರನಿಗಿಂತಲೂ ಶ್ರೇಷ್ಠ, ತನ್ನನ್ನು ಆಳುವವನು ಪಟ್ಟಣವನ್ನು ಗೆದ್ದವನಿಗಿಂತಲೂ ಬಲಿಷ್ಠ.
ದೀರ್ಘಶಾಂತನು ಶೂರರಿಗಿಂತಲೂ ಶ್ರೇಷ್ಠ, ತನ್ನ ಮನಸ್ಸನ್ನು ಆಳುವವನು, ಪಟ್ಟಣವನ್ನು ಗೆದ್ದವನಿಗಿಂತಲೂ ಉತ್ತಮನು.
33 ೩೩ ಮಡಲಿನಲ್ಲಿ ಚೀಟು ಹಾಕಬಹುದು, ಅದರ ತೀರ್ಪು ಯೆಹೋವನದೇ.
ಉಡಿಯಲ್ಲಿ ಚೀಟು ಹಾಕಬಹುದು, ಆದರೆ ಪ್ರತಿ ತೀರ್ಪು ಯೆಹೋವ ದೇವರದ್ದೇ.

< ಜ್ಞಾನೋಕ್ತಿಗಳು 16 >