< ಅರಣ್ಯಕಾಂಡ 10 >

1 ಯೆಹೋವನು ಮೋಶೆಯ ಸಂಗಡ ಮಾತನಾಡಿ, ಆಜ್ಞಾಪಿಸಿದ್ದೇನೆಂದರೆ, 2 “ನೀನು ಬೆಳ್ಳಿಯ ತಗಡಿನಿಂದ ಎರಡು ತುತ್ತೂರಿಗಳನ್ನು ಮಾಡಿಸಬೇಕು. ಜನಸಮೂಹದವರನ್ನು ಕೂಡಿಸುವುದಕ್ಕೂ ಮತ್ತು ದಂಡುಗಳನ್ನು ಹೊರಡಿಸುವುದಕ್ಕೂ ಅವುಗಳನ್ನು ಉಪಯೋಗಿಸಬೇಕು. 3 ನೀನು ತುತ್ತೂರಿಗಳನ್ನು ಊದಿಸುವಾಗ ಜನಸಮೂಹದವರೆಲ್ಲರೂ ನಿನ್ನ ಹತ್ತಿರ ದೇವದರ್ಶನದ ಗುಡಾರದ ಬಾಗಿಲಿಗೆ ಕೂಡಿಬರಬೇಕು. 4 ನೀನು ಒಂದನ್ನು ಮಾತ್ರ ಊದಿಸುವಾಗ ಇಸ್ರಾಯೇಲರ ಕುಲಾಧಿಪತಿಗಳಾದ ಪ್ರಧಾನರು ನಿನ್ನ ಬಳಿಗೆ ಕೂಡಿಬರಬೇಕು. 5 ನೀನು ಆರ್ಭಟವಾಗಿ ಊದಿಸುವಾಗ ಪೂರ್ವದಿಕ್ಕಿನ ದಂಡುಗಳು ಹೊರಡಬೇಕು. 6 ಎರಡನೆಯ ಸಾರಿ ಆರ್ಭಟವಾಗಿ ಊದಿಸುವಾಗ ದಕ್ಷಿಣ ದಿಕ್ಕಿನ ದಂಡುಗಳು ಹೊರಡಬೇಕು. ಹೀಗೆ ಪ್ರಯಾಣಕ್ಕೆ ಹೊರಡಬೇಕಾದಾಗ ಆರ್ಭಟವಾಗಿಯೇ ಊದಿಸಬೇಕು. 7 ಜನಸಮೂಹದವರು ಕೂಡಿಬರಬೇಕಾದಾಗ ಸಾಧಾರಣವಾಗಿ ಊದಿಸಬೇಕೇ ಹೊರತು ಆರ್ಭಟವಾಗಿ ಊದಿಸಬಾರದು. 8 “ಆರೋನನ ವಂಶಸ್ಥರಾದ ಯಾಜಕರೇ ಆ ತುತ್ತೂರಿಗಳನ್ನು ಊದಬೇಕು. ಇದು ನಿಮಗೂ ನಿಮ್ಮ ಸಂತತಿಯವರಿಗೂ ಶಾಶ್ವತ ನಿಯಮವಾಗಿರಲಿ. 9 ನೀವು ಸ್ವದೇಶವನ್ನು ಸೇರಿದ ಮೇಲೆ ನಿಮ್ಮನ್ನು ಉಪದ್ರವಪಡಿಸುವ ಶತ್ರುಗಳನ್ನು ಎದುರಿಸುವುದಕ್ಕಾಗಿ ಯುದ್ಧಕ್ಕೆ ಹೊರಡುವಾಗ ಆ ತುತ್ತೂರಿಗಳನ್ನು ಆರ್ಭಟವಾಗಿ ಊದಿಸಬೇಕು. ಆಗ ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಜ್ಞಾಪಕಕ್ಕೆ ತಂದುಕೊಂಡು ಶತ್ರುಗಳ ಕೈಯಿಂದ ರಕ್ಷಿಸುವನು. 10 ೧೦ ಇದಲ್ಲದೆ ನೀವು ಉತ್ಸವ ಕಾಲಗಳಲ್ಲಿಯು, ಹಬ್ಬಗಳಲ್ಲಿಯು, ಅಮಾವಾಸ್ಯೆಗಳಲ್ಲಿಯು ಸರ್ವಾಂಗಹೋಮಗಳನ್ನೂ, ಸಮಾಧಾನಯಜ್ಞಗಳನ್ನೂ ಸಮರ್ಪಿಸುವಾಗ ಆ ತುತ್ತೂರಿಗಳನ್ನು ಊದಿಸಬೇಕು. ಆ ತುತ್ತೂರಿಯ ಧ್ವನಿಯು ನಿಮ್ಮನ್ನು ನಿಮ್ಮ ದೇವರ ಜ್ಞಾಪಕಕ್ಕೆ ತರುವುದು, ನಾನೇ ನಿಮ್ಮ ದೇವರಾದ ಯೆಹೋವನು.” 11 ೧೧ ಎರಡನೆಯ ವರ್ಷದ ಎರಡನೆಯ ತಿಂಗಳಿನ ಇಪ್ಪತ್ತನೆಯ ದಿನದಲ್ಲಿ ದೇವದರ್ಶನದ ಗುಡಾರದ ಮೇಲಿದ್ದ ಮೇಘವು ಮೇಲಕ್ಕೆ ಎದ್ದಿತು. 12 ೧೨ ಆದುದರಿಂದ ಇಸ್ರಾಯೇಲರು ಸೀನಾಯಿ ಅರಣ್ಯವನ್ನು ಬಿಟ್ಟು ಮುಂದೆ ಮುಂದೆ ಪ್ರಯಾಣಮಾಡಿದರು. ತರುವಾಯ ಆ ಮೇಘವು ಪಾರಾನ್ ಅರಣ್ಯದಲ್ಲಿ ನಿಂತಿತು. 13 ೧೩ ಯೆಹೋವನು ಮೋಶೆಯ ಮೂಲಕ ಆಜ್ಞಾಪಿಸಿದ ರೀತಿಯಲ್ಲಿ ಅವರು ಪ್ರಯಾಣಮಾಡಿದ್ದು ಇದೇ ಮೊದಲನೆಯ ಸಾರಿ. 14 ೧೪ ಮುಂಭಾಗದಲ್ಲಿ ಯೆಹೂದ ಕುಲದ ದಂಡಿಗೆ ಸೇರಿದವರು ಸೈನ್ಯಸೈನ್ಯವಾಗಿ ಹೊರಟರು. ಅವರಿಗೆ ಸೇನಾನಾಯಕನಾಗಿ ಇದ್ದವನು ಅಮ್ಮೀನಾದಾಬನ ಮಗನಾದ ನಹಶೋನನು. 15 ೧೫ ಇಸ್ಸಾಕಾರ್ ಕುಲದವರಿಗೆ ಸೇನಾನಾಯಕನಾಗಿ ಇದ್ದವನು ಚೂವಾರನ ಮಗನಾದ ನೆತನೇಲನು. 16 ೧೬ ಜೆಬುಲೂನ್ ಕುಲದವರಿಗೆ ಸೇನಾನಾಯಕನಾಗಿ ಇದ್ದವನು ಹೇಲೋನನ ಮಗನಾದ ಎಲೀಯಾಬನು. 17 ೧೭ ತರುವಾಯ ದೇವದರ್ಶನದ ಗುಡಾರವನ್ನು ಇಳಿಸಿದಾಗ ಗೇರ್ಷೋನ್ಯರು ಮತ್ತು ಮೆರಾರೀಯರೂ ಅದನ್ನು ಹೊತ್ತುಕೊಂಡು ಹೊರಟರು. 18 ೧೮ ಆಮೇಲೆ ರೂಬೇನ್ ಕುಲದ ದಂಡಿಗೆ ಸೇರಿದವರು ಸೈನ್ಯಸೈನ್ಯವಾಗಿ ಹೊರಟರು. ಅವರಿಗೆ ಸೇನಾನಾಯಕನಾಗಿ ಇದ್ದವನು ಶೆದೇಯೂರನ ಮಗನಾದ ಎಲೀಚೂರನು. 19 ೧೯ ಸಿಮೆಯೋನ್ ಕುಲದವರಿಗೆ ಸೇನಾನಾಯಕನಾಗಿ ಇದ್ದವನು ಚೂರೀಷದ್ದೈಯ ಮಗನಾದ ಶೆಲುಮೀಯೇಲನು. 20 ೨೦ ಗಾದ್ ಕುಲದವರಿಗೆ ಸೇನಾನಾಯಕನಾಗಿ ಇದ್ದವನು ದೆಗೂವೇಲನ ಮಗನಾದ ಎಲ್ಯಾಸಾಫನು. 21 ೨೧ ಅವರ ಹಿಂದೆ ಕೆಹಾತ್ಯರು ದೇವಾಲಯದ ಸಾಮಾನುಗಳನ್ನು ಹೊತ್ತುಕೊಂಡು ಹೊರಟರು. ಅವರು ಬರುವಷ್ಟರೊಳಗೆ ಉಳಿದ ಲೇವಿಯರು ದೇವದರ್ಶನದ ಗುಡಾರವನ್ನು ನಿಲ್ಲಿಸಿದರು. 22 ೨೨ ಆ ಮೇಲೆ ಎಫ್ರಾಯೀಮ್ ಕುಲದ ದಂಡಿಗೆ ಸೇರಿದವರು ಸೈನ್ಯಸೈನ್ಯವಾಗಿ ಹೊರಟರು. ಅವರಿಗೆ ಸೇನಾನಾಯಕನಾಗಿ ಇದ್ದವನು ಅಮ್ಮೀಹೂದನ ಮಗನಾದ ಎಲೀಷಾಮನು. 23 ೨೩ ಮನಸ್ಸೆ ಕುಲದವರಿಗೆ ಸೇನಾನಾಯಕನಾಗಿ ಇದ್ದವನು ಪೆದಾಚೂರನ ಮಗನಾದ ಗಮ್ಲೀಯೇಲನು. 24 ೨೪ ಬೆನ್ಯಾಮೀನ್ ಕುಲದವರಿಗೆ ಸೇನಾನಾಯಕನಾಗಿ ಇದ್ದವನು ಗಿದ್ಯೋನಿಯ ಮಗನಾದ ಅಬೀದಾನನು. 25 ೨೫ ಆ ಮೇಲೆ ಎಲ್ಲಾ ದಂಡುಗಳ ಹಿಂಭಾಗದಲ್ಲಿ ದಾನ್ ಕುಲದ ದಂಡಿಗೆ ಸೇರಿದವರು ಸೈನ್ಯಸೈನ್ಯವಾಗಿ ಹೊರಟರು. ಅವರ ಸೇನಾನಾಯಕನಾಗಿ ಇದ್ದವನು ಅಮ್ಮೀಷದ್ದೈಯ ಮಗನಾದ ಅಹೀಗೆಜೆರನು. 26 ೨೬ ಆಶೇರ್ ಕುಲದವರಿಗೆ ಸೇನಾನಾಯಕನಾಗಿ ಇದ್ದವನು ಒಕ್ರಾನನ ಮಗನಾದ ಪಗೀಯೇಲನು. 27 ೨೭ ನಫ್ತಾಲಿ ಕುಲದವರಿಗೆ ಸೇನಾನಾಯಕನಾಗಿ ಇದ್ದವನು ಏನಾನನ ಮಗನಾದ ಅಹೀರನು. 28 ೨೮ ಈ ರೀತಿಯಲ್ಲಿ ಇಸ್ರಾಯೇಲರು ಸೈನ್ಯಸೈನ್ಯವಾಗಿ ಹೊರಟು ಪ್ರಯಾಣಮಾಡಿದರು. 29 ೨೯ ಮೋಶೆಯು ತನ್ನ ಮಾವನಾಗಿದ್ದ ಮಿದ್ಯಾನ್ಯನಾದ ರೆಗೂವೇಲನ ಮಗನಾದ ಹೋಬಾಬನಿಗೆ, “ಯೆಹೋವನು ನಮಗೆ ಕೊಡುತ್ತೇನೆಂದು ವಾಗ್ದಾನ ಮಾಡಿದ ದೇಶಕ್ಕೆ ನಾವು ಪ್ರಯಾಣಮಾಡುತ್ತಾ ಇದ್ದೇವೆ. ಇಸ್ರಾಯೇಲರಿಗೆ ಒಳಿತನ್ನು ಉಂಟುಮಾಡುತ್ತೇನೆಂದು ಯೆಹೋವನು ತಾನೇ ಹೇಳಿದ್ದಾನೆ. ಆದುದರಿಂದ ನೀನೂ ನಮ್ಮ ಜೊತೆಯಲ್ಲಿ ಬಾ; ನಮ್ಮಿಂದ ನಿನಗೂ ಒಳ್ಳೆಯದಾಗುವುದು” ಎಂದು ಹೇಳಿದನು. 30 ೩೦ ಆದರೆ ಹೋಬಾಬನು ಮೋಶೆಗೆ, “ನಾನು ಬರುವುದಿಲ್ಲ; ನನ್ನ ಸ್ವದೇಶಕ್ಕೆ, ನನ್ನ ಸ್ವಜನರ ಬಳಿಗೆ ಹೋಗುತ್ತೇನೆ” ಎಂದು ಹೇಳಿದನು. 31 ೩೧ ಅದಕ್ಕೆ ಮೋಶೆಯು ಉತ್ತರವಾಗಿ, “ನಮ್ಮನ್ನು ಬಿಟ್ಟು ಹೋಗಬೇಡವೆಂದು ನಿನ್ನನ್ನು ಬೇಡಿಕೊಳ್ಳುತ್ತೇನೆ. ಈ ಮರುಭೂಮಿಯಲ್ಲಿ ಡೇರೆಗಳನ್ನು ಹಾಕುವ ಸ್ಥಳಗಳು ನಿನಗೆ ಮಾತ್ರ ಗೊತ್ತಿದೆ. ಆದುದರಿಂದ ನೀನು ನಮಗೆ ಕಣ್ಣಾಗಿರಬೇಕು. 32 ೩೨ ನೀನು ನಮ್ಮ ಸಂಗಡ ಬಂದರೆ ಯೆಹೋವನು ನಮಗೆ ಮಾಡುವ ಒಳ್ಳೆಯದನ್ನೆಲ್ಲಾ ನಾವು ನಿನಗೂ ಉಂಟಾಗುವಂತೆ ಮಾಡುವೆವು” ಎಂದು ಹೇಳಿದನು. 33 ೩೩ ಅವರು ಯೆಹೋವನ ಬೆಟ್ಟವನ್ನು ಬಿಟ್ಟು ಮೂರು ದಿನದ ಪ್ರಯಾಣದಷ್ಟು ದೂರ ಹೋದರು. ಇಳಿದುಕೊಳ್ಳಲು ಸೂಕ್ತವಾದ ಸ್ಥಳವನ್ನು ನೋಡುವುದಕ್ಕಾಗಿ ಯೆಹೋವನ ಒಡಂಬಡಿಕೆಯ ಮಂಜೂಷವು ಆ ಮೂರು ದಿನಗಳು ಅವರ ಮುಂದಾಗಿ ಹೋಗುತ್ತಿತ್ತು. 34 ೩೪ ಅವರು ಪಾಳೆಯದಿಂದ ಹೊರಡುವಾಗ ಹಗಲು ಹೊತ್ತಿನಲ್ಲಿ ಯೆಹೋವನ ಮೇಘವು ಅವರ ಮೇಲೆ ಇರುತ್ತಿತ್ತು. 35 ೩೫ ಯೆಹೋವನ ಮಂಜೂಷ ಪೆಟ್ಟಿಗೆಯು ಹೊರಡುವಾಗ ಮೋಶೆ, “ಯೆಹೋವನೇ, ಎದ್ದು ಹೊರಡೋಣವಾಗಲಿ; ನಿನ್ನ ವೈರಿಗಳು ಚದರಿಹೋಗಲಿ; ನಿನ್ನ ಶತ್ರುಗಳು ಬೆನ್ನು ತೋರಿಸಿ ಓಡಿಹೋಗಲಿ” ಎಂದು ಹೇಳುವನು. 36 ೩೬ ಅದು ನಿಂತಾಗ ಅವನು, “ಯೆಹೋವನೇ, ಇಸ್ರಾಯೇಲರ ಲಕ್ಷಾಂತರ ಕುಟುಂಬಗಳ ಮಧ್ಯದಲ್ಲಿ ಮರಳಿ ಆಗಮಿಸು” ಎಂದು ಹೇಳುವನು.

< ಅರಣ್ಯಕಾಂಡ 10 >