< ಯಾಜಕಕಾಂಡ 10 >

1 ಆರೋನನ ಮಕ್ಕಳಲ್ಲಿ ನಾದಾಬ್ ಹಾಗೂ ಅಬೀಹೂ ಎಂಬ ಇಬ್ಬರು ತಮ್ಮ ತಮ್ಮ ಧೂಪಾರತಿಗಳಲ್ಲಿ ಯೆಹೋವನು ಆಜ್ಞಾಪಿಸದೆ ಇದ್ದ ಬೇರೆ ಬೆಂಕಿಯನ್ನಿಟ್ಟು ಅದರ ಮೇಲೆ ಧೂಪದ್ರವ್ಯವನ್ನು ಹಾಕಿ ಅದನ್ನು ಯೆಹೋವನ ಸನ್ನಿಧಿಯಲ್ಲಿ ಸಮರ್ಪಿಸಿದರು. 2 ಆಗ ಯೆಹೋವನ ಸನ್ನಿಧಿಯಿಂದ ಬೆಂಕಿ ಹೊರಟು ಅವರನ್ನು ದಹಿಸಿಬಿಟ್ಟಿತು; ಅವರು ಯೆಹೋವನ ಸನ್ನಿಧಿಯಲ್ಲಿಯೇ ಸತ್ತರು. 3 ಆಗ ಮೋಶೆ ಆರೋನನಿಗೆ, “ಯೆಹೋವನು ಹೇಳಿದ ಮಾತಿಗೆ ಇದೇ ದೃಷ್ಟಾಂತ; ಆ ಮಾತು ಏನೆಂದರೆ, ‘ನಾನು ಪರಿಶುದ್ಧನೆಂಬುದನ್ನು ನನ್ನ ಬಳಿಯಲ್ಲಿರುವವರ ಮೂಲಕವಾಗಿಯೇ ತೋರ್ಪಡಿಸುವೆನು, ಜನರೆಲ್ಲರಿಗೆ ತಿಳಿಯುವಂತೆ ನನ್ನ ಘನತೆಯನ್ನು ಸ್ಥಾಪಿಸುವೆನು ಎಂಬುದೇ’” ಎಂದು ಹೇಳಿದನು. ಅದಕ್ಕೆ ಆರೋನನು ಮೌನವಾಗಿದ್ದನು. 4 ಮೋಶೆ ಆರೋನನ ಚಿಕ್ಕಪ್ಪನಾದ ಉಜ್ಜಿಯೇಲನ ಮಕ್ಕಳಾದ ಮೀಶಾಯೇಲನನ್ನು ಮತ್ತು ಎಲ್ಸಾಫಾನನನ್ನು ಕರೆಯಿಸಿ, “ನೀವು ಸಮೀಪಕ್ಕೆ ಬಂದು ನಿಮ್ಮ ಅಣ್ಣಂದಿರ ಶವಗಳನ್ನು ದೇವಮಂದಿರದ ಎದುರಿನಿಂದ ಪಾಳೆಯದ ಹೊರಕ್ಕೆ ಹೊತ್ತುಕೊಂಡು ಹೋಗಬೇಕು” ಅಂದನು. 5 ಮೋಶೆಯ ಅಪ್ಪಣೆಯ ಮೇರೆಗೆ ಅವರು ಸಮೀಪಕ್ಕೆ ಬಂದು ಸತ್ತವರು ತೊಟ್ಟುಕೊಂಡಿದ್ದ ನಿಲುವಂಗಿಗಳನ್ನು ತೆಗೆಯದೆ ಅವರ ಶವಗಳನ್ನು ಎತ್ತಿ ಪಾಳೆಯದ ಹೊರಕ್ಕೆ ಹೊತ್ತುಕೊಂಡು ಹೋದರು. 6 ಮೋಶೆ ಆರೋನನಿಗೂ ಅವನ ಮಕ್ಕಳಾದ ಎಲ್ಲಾಜಾರ್ ಮತ್ತು ಈತಾಮಾರ್ ಎಂಬುವವರಿಗೆ, “ನೀವು ತಲೆಯನ್ನು ಕೆದರಿಕೊಳ್ಳಬಾರದು; ಬಟ್ಟೆಗಳನ್ನು ಹರಿದುಕೊಳ್ಳಬಾರದು. ಹಾಗೆ ಮಾಡಿದರೆ ನೀವೂ ಸಾಯುವಿರಿ; ಅದಲ್ಲದೆ ಯೆಹೋವನಿಗೆ ಜನಸಮೂಹದವರೆಲ್ಲರ ಮೇಲೆ ಸಿಟ್ಟು ಉಂಟಾಗುವುದು. ಯೆಹೋವನು ಹೊತ್ತಿಸಿದ ಈ ಬೆಂಕಿಯ ದೆಸೆಯಿಂದ ನಿಮ್ಮ ಸಹೋದರರಾಗಿರುವ ಎಲ್ಲಾ ಇಸ್ರಾಯೇಲರ ಮನೆತನದವರೇ ದುಃಖಿಸಲಿ. 7 ಯೆಹೋವನ ಅಭಿಷೇಕ ತೈಲವು ನಿಮ್ಮ ಮೇಲಿರುವುದರಿಂದ ನೀವು ದೇವದರ್ಶನದ ಗುಡಾರದ ಬಾಗಿಲನ್ನು ಬಿಟ್ಟು ಹೋಗಬಾರದು; ಹೋದರೆ ಸಾಯುವಿರಿ” ಎಂದು ಹೇಳಿದನು. ಮೋಶೆಯ ಮಾತಿನಂತೆಯೇ ಅವರು ನಡೆದುಕೊಂಡರು. 8 ಯೆಹೋವನು ಆರೋನನೊಂದಿಗೆ ಮಾತನಾಡಿ, 9 “ನೀನೂ ಹಾಗು ನಿನ್ನ ಮಕ್ಕಳೂ ದ್ರಾಕ್ಷಾರಸವನ್ನಾಗಲಿ ಅಥವಾ ಮದ್ಯವನ್ನಾಗಲಿ ಕುಡಿದು ದೇವದರ್ಶನದ ಗುಡಾರದೊಳಗೆ ಬರಬಾರದು; ಹಾಗೆ ಬಂದರೆ ಸಾಯುವಿರಿ. ಇದು ನಿನಗೂ ಮತ್ತು ನಿನ್ನ ಸಂತತಿಯವರೆಲ್ಲರಿಗೂ ಶಾಶ್ವತನಿಯಮ. 10 ೧೦ ಅದಲ್ಲದೆ ದೇವರಿಗೆ ಮೀಸಲಾದ ವಸ್ತುಗಳನ್ನು ಅಲ್ಲದ ವಸ್ತುಗಳನ್ನು, ಶುದ್ಧವಾದವುಗಳನ್ನು, ಅಶುದ್ಧವಾದವುಗಳನ್ನು ವಿವೇಚಿಸುವುದೂ, 11 ೧೧ ಯೆಹೋವನು ಮೋಶೆಯ ಮೂಲಕ ಇಸ್ರಾಯೇಲರಿಗೆ ಮಾಡಿದ ಎಲ್ಲಾ ಆಜ್ಞೆಗಳನ್ನು ಜನರಿಗೆ ಬೋಧಿಸುವುದೂ ನಿಮ್ಮ ಕರ್ತವ್ಯವಾಗಿದೆ” ಎಂದು ಹೇಳಿದನು. 12 ೧೨ ಮೋಶೆ ಆರೋನನಿಗೂ ಅವನ ಉಳಿದ ಮಕ್ಕಳಾದ ಎಲ್ಲಾಜಾರ್ ಮತ್ತು ಈತಾಮಾರ್ ಎಂಬವರಿಗೆ, “ಯೆಹೋವನಿಗೆ ಅಗ್ನಿಯ ಮೂಲಕ ಸಮರ್ಪಿತವಾದ ದ್ರವ್ಯಗಳಲ್ಲಿ ಉಳಿದಿರುವ ಧಾನ್ಯನೈವೇದ್ಯ ದ್ರವ್ಯವನ್ನು ತೆಗೆದುಕೊಂಡು, ಅದರಿಂದ ಹುಳಿಯಿಲ್ಲದ ರೊಟ್ಟಿಗಳನ್ನು ಮಾಡಿಸಿ, ಯಜ್ಞವೇದಿಯ ಬಳಿಯಲ್ಲಿ ಊಟಮಾಡಬೇಕು. ಅದು ಮಹಾಪರಿಶುದ್ಧವಾಗಿದೆ. 13 ೧೩ ಪವಿತ್ರಸ್ಥಳದೊಳಗೇ ಅದನ್ನು ಊಟಮಾಡಬೇಕು. ಜನರು ಯೆಹೋವನಿಗೆ ಸಮರ್ಪಿಸಿದ ಹೋಮದ್ರವ್ಯಗಳಲ್ಲಿ ಅದು ನಿನಗೂ ಮತ್ತು ನಿನ್ನ ಮಕ್ಕಳಿಗೂ ಸಲ್ಲತಕ್ಕದ್ದೆಂದು ಅಪ್ಪಣೆಯಾಗಿದೆ. 14 ೧೪ ನೀವು ನೈವೇದ್ಯ ಮಾಡಿದ ಎದೆಯ ಭಾಗವನ್ನು, ಯಾಜಕರಿಗೋಸ್ಕರ ಪ್ರತ್ಯೇಕಿಸಿದ ತೊಡೆಯನ್ನು ಯಾವುದಾದರೂ ಒಂದು ಶುದ್ಧಸ್ಥಳದಲ್ಲಿ ಊಟಮಾಡಬಹುದು. ನೀನೂ, ನಿನ್ನ ಗಂಡುಮಕ್ಕಳೂ ಹಾಗು ಹೆಣ್ಣುಮಕ್ಕಳೂ ಅದನ್ನು ತಿನ್ನಬಹುದು. ಏಕೆಂದರೆ ಇಸ್ರಾಯೇಲರು ಸಮರ್ಪಿಸುವ ಸಮಾಧಾನಯಜ್ಞದ್ರವ್ಯಗಳಲ್ಲಿ ಇವೇ ನಿನಗೂ ಮತ್ತು ನಿನ್ನ ಮಕ್ಕಳಿಗೂ ಸಲ್ಲಬೇಕೆಂದು ನೇಮಕವಾಗಿದೆ. 15 ೧೫ ಜನರು ಹೋಮಕ್ಕಾಗಿ ಕೊಬ್ಬನ್ನು ತಂದು ಸಮರ್ಪಿಸುವಾಗೆಲ್ಲಾ ಯಾಜಕರಿಗೋಸ್ಕರ ಪ್ರತ್ಯೇಕಿಸಬೇಕಾದ ಆ ತೊಡೆಯನ್ನು ನೈವೇದ್ಯವಾಗಿ ನಿವಾಳಿಸಬೇಕಾದ ಆ ಎದೆಯ ಭಾಗವನ್ನು ಯೆಹೋವನ ಸನ್ನಿಧಿಯಲ್ಲಿ ತರಬೇಕು. ಯೆಹೋವನು ಆಜ್ಞಾಪಿಸಿದಂತೆ ಅವು ನಿನಗೂ ಮತ್ತು ನಿನ್ನ ವಂಶದವರಿಗೂ ಸಲ್ಲತಕ್ಕದ್ದು; ಇದು ಶಾಶ್ವತನಿಯಮ” ಎಂದು ಹೇಳಿದನು. 16 ೧೬ ಜನರೆಲ್ಲರಿಗೋಸ್ಕರ ದೋಷಪರಿಹಾರ ಮಾಡಲು ಸಮರ್ಪಿತವಾದ ಹೋತದ ವಿಷಯದಲ್ಲಿ ಅದು ಏನಾಯಿತೆಂದು ಮೋಶೆ ವಿಚಾರಿಸಲಾಗಿ ಅದನ್ನು ಸುಟ್ಟುಬಿಟ್ಟರೆಂದು ತಿಳಿಯಬಂತು. ಇದನ್ನು ಕೇಳಿದಾಗ ಅವನು ಆರೋನನ ಉಳಿದ ಮಕ್ಕಳಾದ ಎಲ್ಲಾಜಾರ್ ಮತ್ತು ಈತಾಮಾರ್ ಎಂಬವರ ಮೇಲೆ ಸಿಟ್ಟುಗೊಂಡು, 17 ೧೭ “ಆ ದೋಷಪರಿಹಾರಕ ಯಜ್ಞದ್ರವ್ಯವು ಮಹಾಪರಿಶುದ್ಧವಾದದ್ದಲ್ಲವೇ? ನೀವು ಜನಸಮೂಹದ ಪಾಪಗಳನ್ನು ಪರಿಹಾರಮಾಡುವಂತೆಯೂ, ಅವರಿಗೋಸ್ಕರ ಯೆಹೋವನ ಸನ್ನಿಧಿಯಲ್ಲಿ ದೋಷಪರಿಹಾರವನ್ನು ಮಾಡುವಂತೆಯೂ ಅದು ನಿಮ್ಮ ಭಾಗವಾಗಿ ನೇಮಕವಾಗಿದೆಯಲ್ಲಾ. ನೀವು ಯಾಕೆ ಅದನ್ನು ಪವಿತ್ರಸ್ಥಳದೊಳಗೆ ಊಟಮಾಡಲಿಲ್ಲ? 18 ೧೮ ಅದರ ರಕ್ತವು ಪವಿತ್ರಸ್ಥಾನದೊಳಗೆ ತರಬಾರದಾಗಿತ್ತು, ನಾನು ಆಜ್ಞಾಪಿಸಿದಂತೆ ನೀವು ದೇವಸ್ಥಾನದ ಪ್ರಾಕಾರದೊಳಗೆ ಅದನ್ನು ತಿನ್ನಬೇಕಾಗಿತ್ತು” ಅಂದನು. 19 ೧೯ ಅದಕ್ಕೆ ಆರೋನನು ಮೋಶೆಗೆ, “ಇವರು ಈ ಹೊತ್ತು ಯೆಹೋವನ ಸನ್ನಿಧಿಯಲ್ಲಿ ತಮಗೋಸ್ಕರ ದೋಷಪರಿಹಾರಕ ಯಜ್ಞವನ್ನು ಮತ್ತು ಸರ್ವಾಂಗಹೋಮವನ್ನು ಸಮರ್ಪಿಸಿದ್ದರೂ ಈ ಆಪತ್ತು ನನಗೆ ಸಂಭವಿಸಿತು; ಹೀಗಿರುವಾಗ ನಾನು ದೋಷಪರಿಹಾರಕ ಯಜ್ಞದ್ರವ್ಯವನ್ನು ಈ ಹೊತ್ತು ಊಟಮಾಡಿದ್ದರೆ ಅದು ಯೆಹೋವನ ದೃಷ್ಟಿಯಲ್ಲಿ ಒಳ್ಳೆಯದಾಗಿ ತೋರುತ್ತಿತ್ತೋ?” 20 ೨೦ ಎಂದು ಉತ್ತರಕೊಡಲಾಗಿ ಮೋಶೆ ಆ ಮಾತನ್ನು ಕೇಳಿ ತೃಪ್ತಿಗೊಂಡನು.

< ಯಾಜಕಕಾಂಡ 10 >