< ನ್ಯಾಯಸ್ಥಾಪಕರು 9 >

1 ಯೆರುಬ್ಬಾಳನ ಮಗನಾದ ಅಬೀಮೆಲೆಕನು ಶೆಕೆಮಿಗೆ ಹೋಗಿ ತನ್ನ ಸೋದರಮಾವಂದಿರಿಗೂ, ತಾಯಿಯ ಬಂಧುಗಳೆಲ್ಲರಿಗೂ ಹೇಳಿದ್ದೇನೆಂದರೆ, 2 “ನೀವು ದಯವಿಟ್ಟು ಶೆಕೆಮಿನ ಹಿರಿಯರನ್ನು ಮಾತನಾಡಿಸಿ, ‘ಯೆರುಬ್ಬಾಳನ ಎಪ್ಪತ್ತು ಮಂದಿ ಮಕ್ಕಳು ನಿಮ್ಮನ್ನು ಆಳ್ವಿಕೆ ಮಾಡುವುದು ಒಳ್ಳೆಯದೋ ಅಥವಾ ಒಬ್ಬನೇ ಆಳುವುದು ಮೇಲೋ?’ ಎಂದು ಅವರನ್ನು ಕೇಳಿ, ನಾನು ಅವರ ರಕ್ತಸಂಬಂಧಿಯಾಗಿದ್ದೇನೆ ಎಂಬುದನ್ನು ತಿಳಿಸಿರಿ” ಅಂದನು. 3 ಅವರು ಶೆಕೆಮಿನ ಹಿರಿಯರ ಬಳಿಗೆ ಹೋಗಿ ಅಬೀಮೆಲೆಕನ ವಿಷಯದಲ್ಲಿ ಹಾಗೆಯೇ ಹೇಳಲು ಅವರು, “ಇವನು ನಮ್ಮ ಸಹೋದರನಾಗಿದ್ದಾನಲ್ಲಾ” ಅಂದುಕೊಂಡು ಅವನ ಪಕ್ಷವನ್ನು ಹಿಡಿಯುವುದಕ್ಕೆ ಒಪ್ಪಿಕೊಂಡರು. 4 ಮತ್ತು ಅವರು ಬಾಳ್‍ಬೆರೀತಿನ ದೇವಸ್ಥಾನದಿಂದ ಎಪ್ಪತ್ತು ರೂಪಾಯಿಗಳನ್ನು ಅವನಿಗೆ ಕೊಟ್ಟರು. ಅವನು ಈ ಹಣದಿಂದ ಕೆಲವು ಕಾಕಪೋಕರನ್ನು ಕೂಡಿಸಿ, 5 ಅವರ ನಾಯಕನಾಗಿ ಹೊರಟು, ಒಫ್ರದಲ್ಲಿದ್ದ ತನ್ನ ತಂದೆಯಾದ ಯೆರುಬ್ಬಾಳನ ಮನೆಗೆ ಹೋಗಿ, ಅವನ ಎಪ್ಪತ್ತು ಮಂದಿ ಮಕ್ಕಳನ್ನು ಹಿಡಿದು, ಒಂದೇ ಬಂಡೆಯ ಮೇಲೆ ಕೊಲ್ಲಿಸಿದನು. ಆದರೆ ಕಿರಿಯವನಾದ ಯೋತಾಮನೆಂಬವನು ಅಡಗಿಕೊಂಡು ಉಳಿದನು. 6 ತರುವಾಯ ಎಲ್ಲಾ ಶೆಕೆಮಿನವರೂ ಮಿಲ್ಲೋ ಕೋಟೆಯವರೂ ಶೆಕೆಮಿನ ಬಳಿಯಲ್ಲಿ ಜ್ಞಾಪಕಸ್ತಂಭವಿರುವ ಏಲೋನ್ ವೃಕ್ಷದ ಹತ್ತಿರ ಕೂಡಿಬಂದು ಅಬೀಮೆಲೆಕನನ್ನು ತಮ್ಮ ಅರಸನನ್ನಾಗಿ ಮಾಡಿಕೊಂಡರು. 7 ಯೋತಾಮನು ಇದನ್ನು ಕೇಳಿ ಗೆರಿಜ್ಜೀಮ್ ಬೆಟ್ಟದ ತುದಿಯಲ್ಲಿ ನಿಂತು ಗಟ್ಟಿಯಾದ ಧ್ವನಿಯಿಂದ, “ಶೆಕೆಮಿನ ಜನರೇ, ನನ್ನ ಮಾತನ್ನು ಕೇಳಿರಿ; ಆಗ ದೇವರು ನಿಮ್ಮ ಮೊರೆಗೆ ಕಿವಿಗೊಡುವನು” ಎಂದನು. 8 “ಒಮ್ಮೆ, ಮರಗಳು ತಮಗೋಸ್ಕರ ಒಬ್ಬ ಅರಸನನ್ನು ಅಭಿಷೇಕಿಸಬೇಕೆಂದು ಹೊರಟು ಎಣ್ಣೆಯ ಮರದ ಬಳಿಗೆ ಬಂದು, ‘ನೀನು ಬಂದು ನಮಗೆ ಅರಸನಾಗು’ ಅಂದವು. 9 ಆಗ ಅದು ಅವುಗಳಿಗೆ, ‘ನನ್ನಲ್ಲಿರುವ ಎಣ್ಣೆಗೋಸ್ಕರ ದೇವತೆಗಳೂ, ಮನುಷ್ಯರು ನನ್ನನ್ನು ಘನಪಡಿಸುತ್ತಾರೆ; ಇದನ್ನು ಬಿಟ್ಟು ಮರಗಳ ಮೇಲೆ ಓಲಾಡುವುದಕ್ಕೆ ಬರಬೇಕೋ?’ ಅಂದಿತು. 10 ೧೦ ತರುವಾಯ ಅವು ಅಂಜೂರ ಗಿಡದ ಬಳಿಗೆ ಹೋಗಿ ಅದಕ್ಕೆ, ‘ನೀನು ಬಂದು ನಮಗೆ ಅರಸನಾಗು’ ಎನ್ನಲು 11 ೧೧ ಅದು, ‘ನಾನು ನನ್ನ ಶ್ರೇಷ್ಠವಾದ ಮಧುರಫಲದಾನವನ್ನು ಬಿಟ್ಟು ಮರಗಳ ಮೇಲೆ ಓಲಾಡುವುದಕ್ಕೆ ಬರಬೇಕೋ?’ ಎಂದಿತು. 12 ೧೨ ಅನಂತರ ಅವು ದ್ರಾಕ್ಷಾಲತೆಯ ಬಳಿಗೆ ಹೋಗಿ, ‘ನೀನು ಬಂದು ನಮಗೆ ಅರಸನಾಗು’ ಎನ್ನಲು 13 ೧೩ ಅದು ಅವುಗಳಿಗೆ, ‘ನಾನು ನನ್ನ ರಸದಿಂದ ದೇವತೆಗಳಿಗೂ ಮನುಷ್ಯರಿಗೂ ಆನಂದಕೊಡುವುದನ್ನು ಬಿಟ್ಟು ಮರಗಳ ಮೇಲೆ ಓಲಾಡುವುದಕ್ಕೆ ಬರಬೇಕೋ?’ ಎಂದಿತು. 14 ೧೪ ಕೊನೆಗೆ ಎಲ್ಲಾ ಮರಗಳು ಮುಳ್ಳುಗಿಡದ ಬಳಿಗೆ ಹೋಗಿ, ‘ನೀನು ಬಂದು ನಮಗೆ ಅರಸನಾಗು’ ಅನ್ನಲು 15 ೧೫ ಅದು, ‘ನೀವು ಯಥಾರ್ಥಮನಸ್ಸಿನಿಂದ ನನಗೆ ರಾಜ್ಯಾಭಿಷೇಕ ಮಾಡಬೇಕೆಂದಿರುವುದಾದರೆ ಬಂದು ನನ್ನ ನೆರಳನ್ನು ಆಶ್ರಯಿಸಿಕೊಳ್ಳಿರಿ; ಇಲ್ಲವಾದರೆ ನನ್ನಿಂದ ಬೆಂಕಿಹೊರಟು ಲೆಬನೋನಿನ ದೇವದಾರು ವೃಕ್ಷಗಳನ್ನು ದಹಿಸಿಬಿಡುವುದು’ ಎಂದಿತು. 16 ೧೬ “ನೀವು ಅಬೀಮೆಲೆಕನನ್ನು ಅರಸನನ್ನಾಗಿ ಮಾಡಿದ್ದು ನ್ಯಾಯವೋ? ಅದು ಧರ್ಮಕಾರ್ಯವೋ? ಯೆರುಬ್ಬಾಳನು ನಿಮಗೆ ಮಾಡಿದ ಉಪಕಾರಕ್ಕೋಸ್ಕರ ನೀವು ಅವನಿಗೂ ಅವನ ಮನೆಯವರಿಗೂ ಪ್ರತ್ಯುಪಕಾರಮಾಡಿದಿರೋ? 17 ೧೭ ನನ್ನ ತಂದೆಯು ತನ್ನ ಜೀವದ ಆಶೆಯನ್ನು ತೊರೆದು, ಹೋರಾಡಿ, ನಿಮ್ಮನ್ನು ಮಿದ್ಯಾನ್ಯರ ಕೈಯಿಂದ ಬಿಡಿಸಿದನಲ್ಲಾ. 18 ೧೮ ಆದರೆ ನೀವು ಈಗ ನನ್ನ ತಂದೆಯ ಮನೆಗೆ ವಿರೋಧವಾಗಿ ನಿಂತು, ಅವನ ಎಪ್ಪತ್ತು ಮಂದಿ ಮಕ್ಕಳನ್ನು ಒಂದೇ ಬಂಡೆಯ ಮೇಲೆ ವಧಿಸಿ, ಅವನ ದಾಸಿಯ ಮಗನಾದ ಅಬೀಮೆಲೆಕನನ್ನು ನಮ್ಮ ಬಂಧುವೆಂದು ಹೇಳಿ, ಶೆಕೆಮಿನ ಅರಸನನ್ನಾಗಿ ಮಾಡಿಕೊಂಡಿದ್ದೀರಿ. 19 ೧೯ ನೀವು ಈಗ ಯೆರುಬ್ಬಾಳನಿಗೂ ಅವನ ಮನೆಯವರಿಗೂ ಮಾಡಿದ್ದು ನ್ಯಾಯವೂ, ಧರ್ಮವೂ ಆಗಿದ್ದರೆ ಅಬೀಮೆಲೆಕನಲ್ಲಿ ಆನಂದಿಸಿರಿ; ಅವನು ನಿಮ್ಮಲ್ಲಿ ಆನಂದಿಸಲಿ. 20 ೨೦ ಇಲ್ಲವಾದರೆ ಅಬೀಮೆಲೆಕನಿಂದ ಬೆಂಕಿಹೊರಟು ಶೆಕೆಮಿನವರನ್ನೂ, ಮಿಲ್ಲೋ ಕೋಟೆಯವರನ್ನೂ ದಹಿಸಿಬಿಡಲಿ; ಶೆಕೆಮಿನವರಿಂದಲೂ, ಮಿಲ್ಲೋ ಕೋಟೆಯವರಿಂದಲೂ ಬೆಂಕಿಹೊರಟು ಅಬೀಮೆಲೆಕನನ್ನು ದಹಿಸಿಬಿಡಲಿ” ಎಂದನು. 21 ೨೧ ಯೋತಾಮನು ಇಷ್ಟು ಹೇಳಿ ತನ್ನ ಸಹೋದರನಾದ ಅಬೀಮೆಲೆಕನಿಂದ ತಪ್ಪಿಸಿಕೊಂಡು ಬೇರಕ್ಕೆ ಓಡಿಹೋಗಿ ಅಲ್ಲೇ ವಾಸಮಾಡಿದನು. 22 ೨೨ ಅಬೀಮೆಲೆಕನು ಇಸ್ರಾಯೇಲರನ್ನು ಮೂರು ವರ್ಷ ಆಳಿದ ನಂತರ 23 ೨೩ ಯೆಹೋವನು ಅವನಿಗೂ ಶೆಕೆಮಿನ ಹಿರಿಯರಿಗೂ ವೈಮನಸ್ಸು ಹುಟ್ಟುವಂತೆ ಮಾಡಿದನು. ಅವರು ಅವನಿಗೆ ದ್ರೋಹಮಾಡಿದರು. 24 ೨೪ ಇದರಿಂದ ಯೆರುಬ್ಬಾಳನ ಎಪ್ಪತ್ತು ಮಂದಿ ಮಕ್ಕಳನ್ನು ಕ್ರೂರತನದಿಂದ ಕೊಂದುಹಾಕಿದ ರಕ್ತಾಪರಾಧಫಲವು ಅವರ ಸಹೋದರನಾದ ಅಬೀಮೆಲೆಕನ ಮೇಲೆಯೂ, ಆ ಕೃತ್ಯದಲ್ಲಿ ಅವನಿಗೆ ಸಹಾಯಕರಾಗಿದ್ದ ಶೆಕೆಮಿನವರ ಮೇಲೆಯೂ ಬರುವುದಕ್ಕೆ ಕಾರಣವಾಯಿತು. 25 ೨೫ ಶೆಕೆಮಿನವರು ಅಬೀಮೆಲೆಕನಿಗೆ ವಿರೋಧವಾಗಿ ಪರ್ವತಶಿಖರಗಳಲ್ಲಿ ಹೊಂಚುಗಾರರನ್ನಿಟ್ಟರು. ಇವರು ಆ ದಾರಿಗಳಲ್ಲಿ ಸಂಚರಿಸುವ ಪ್ರಯಾಣಿಕರನ್ನು ಸುಲಿಗೆ ಮಾಡಿಕೊಳ್ಳುತ್ತಿದ್ದರು. ಈ ವರ್ತಮಾನವು ಅಬೀಮೆಲೆಕನಿಗೆ ಮುಟ್ಟಿತು. 26 ೨೬ ಅದೇ ಸಮಯದಲ್ಲಿ ಎಬೆದನ ಮಗನಾದ ಗಾಳನೆಂಬುವನು ತನ್ನ ಬಂಧುಗಳೊಡನೆ ಶೆಕೆಮಿಗೆ ಬಂದನು. ಶೆಕೆಮಿನ ಹಿರಿಯರು ಅವನಲ್ಲಿ ಭರವಸವಿಟ್ಟರು. 27 ೨೭ ಆ ಊರಿನವರು ಒಂದಾನೊಂದು ದಿನ ತಮ್ಮ ದ್ರಾಕ್ಷಾಫಲಗಳನ್ನು ಕೊಯಿದು, ಆಲೆಗಳಲ್ಲಿ ರಸತೆಗೆದು, ತಮ್ಮ ದೇವರ ಗುಡಿಗೆ ಹೋಗಿ ಹಬ್ಬಮಾಡಿ, ಉಂಡು ಕುಡಿದು ಅಬೀಮೆಲೆಕನನ್ನು ಶಪಿಸಿದರು. 28 ೨೮ ಎಬೆದನ ಮಗನಾದ ಗಾಳನೂ ಅವರ ಸಂಗಡ ಕೂಡಿಕೊಂಡು, “ಅಬೀಮೆಲೆಕನು ಎಷ್ಟರವನು? ಶೆಕೆಮಿನವರಾದ ನಾವು ಎಷ್ಟರವರು? ನಾವು ಅಬೀಮೆಲೆಕನನ್ನು ಯಾಕೆ ಸೇವಿಸಬೇಕು? ಅವನು ಯೆರುಬ್ಬಾಳನ ಮಗನಲ್ಲವೋ? ಅವನ ಪುರಾಧಿಕಾರಿಯು ಜೆಬುಲನಲ್ಲವೋ? ನಾವು ಅವನನ್ನು ಯಾಕೆ ಸೇವಿಸಬೇಕು? ಶೆಕೆಮನ ತಂದೆಯಾದ ಹಮೋರನ ವಂಶದವರ ಸೇವೆಯನ್ನು ಮಾಡಲಿ. 29 ೨೯ ಈ ಜನರ ಮೇಲೆ ನನಗೆ ಅಧಿಕಾರವಿದ್ದಿದ್ದರೆ ಅಬೀಮೆಲೆಕನನ್ನು ಓಡಿಸಿಬಿಡುತ್ತಿದ್ದೆನು” ಎಂದು ಹೇಳಿ, “ಎಲಾ, ಅಬೀಮೆಲೆಕನೇ, ಸೈನ್ಯವನ್ನು ತೆಗೆದುಕೊಂಡು ನನ್ನೊಡನೆ ಯುದ್ಧಕ್ಕೆ ಬಾ” ಎಂದು ಕೊಚ್ಚಿಕೊಂಡನು. 30 ೩೦ ಪುರಾಧಿಕಾರಿಯಾದ ಜೆಬುಲನು ಎಬೆದನ ಮಗನಾದ ಗಾಳನ ಮಾತುಗಳನ್ನು ಕೇಳಿ, ಕೋಪಗೊಂಡು ಯಾರಿಗೂ ತಿಳಿಯದಂತೆ ಅಬೀಮೆಲೆಕನ ಬಳಿಗೆ ದೂತರನ್ನು ಕಳುಹಿಸಿ, 31 ೩೧ “ಇಗೋ, ಎಬೆದನ ಮಗನಾದ ಗಾಳನೂ ಅವನ ಬಂಧುಗಳೂ ಇಲ್ಲಿಗೆ ಬಂದು ಶೆಕೆಮಿನವರೆಲ್ಲರನ್ನೂ ನಿನಗೆ ವಿರೋಧವಾಗಿ ಹುರಿದುಂಬಿಸುತ್ತಿದ್ದಾರೆ. 32 ೩೨ ಆದುದರಿಂದ ನೀನು ಈ ರಾತ್ರಿಯೇ ಸೈನ್ಯವನ್ನು ತೆಗೆದುಕೊಂಡು ಬಂದು ಹೊಲಗಳಲ್ಲಿ ಹೊಂಚುಹಾಕಿಕೊಂಡಿರು. ಸೂರ್ಯನು ಉದಯಿಸುತ್ತಲೇ ಎದ್ದು ಪಟ್ಟಣದ ಮೇಲೆ ಬೀಳು. ಅವನೂ ಅವನ ಜೊತೆಯಲ್ಲಿರುವವರೂ 33 ೩೩ ನಿನಗೆ ವಿರೋಧವಾಗಿ ಹೊರಟು ಬಂದಾಗ ನಿನಗೆ ಅನುಕೂಲ ತೋರಿದ ಹಾಗೆ ಮಾಡು” ಎಂದು ಹೇಳಿಸಿದನು. 34 ೩೪ ಅಬೀಮೆಲೆಕನೂ, ಅವನ ಜನರೂ ರಾತ್ರಿಯಲ್ಲೇ ಹೊರಟು ಬಂದು ನಾಲ್ಕು ಗುಂಪಾಗಿ ಶೆಕೆಮಿನವರನ್ನು ಹೊಂಚಿಕಾಯುತ್ತಿದ್ದರು. 35 ೩೫ ಎಬೆದನ ಮಗನಾದ ಗಾಳನು ಹೊರಗೆ ಹೋಗಿ ಊರಬಾಗಿಲಲ್ಲಿ ನಿಂತುಕೊಂಡಾಗ ಅಬೀಮೆಲೆಕನೂ ಅವನ ಜನರೂ ತಾವು ಹೊಂಚಿನೋಡುತ್ತಿದ್ದ ಸ್ಥಳದಿಂದ ಎದ್ದು ಬಂದರು. 36 ೩೬ ಗಾಳನು ಅವರನ್ನು ಕಂಡು ಜೆಬುಲನಿಗೆ, “ಇಗೋ, ಬೆಟ್ಟದ ಮೇಲಿನಿಂದ ಜನರು ಬರುತ್ತಿದ್ದಾರೆ” ಎಂದು ಹೇಳಿದನು. ಜೆಬುಲನು ಅವನಿಗೆ, “ನೀನು ಬೆಟ್ಟದ ನೆರಳನ್ನು ನೋಡಿ ಜನರೆಂದು ಭಾವಿಸುತ್ತೀ” ಅನ್ನಲು 37 ೩೭ ಅವನು ತಿರುಗಿ, “ನೋಡು, ಬೆಟ್ಟದ ಮೇಲಿನಿಂದ ಜನರು ಬರುತ್ತಿದ್ದಾರೆ; ಕಣಿಹೇಳುವವರ ಮರದ ಮಾರ್ಗವಾಗಿ ಇನ್ನೊಂದು ಗುಂಪು ಬರುತ್ತಿದೆ” ಅಂದನು. 38 ೩೮ ಆಗ ಜೆಬುಲನು ಅವನಿಗೆ, “ಈಗ ನಿನ್ನ ಬಾಯೆಲ್ಲಿದೆ? ಅಬೀಮೆಲೆಕನು ಎಷ್ಟರವನು? ನಾವು ಅವನನ್ನು ಯಾಕೆ ಸೇವಿಸಬೇಕು ಎಂದು ಕೊಚ್ಚಿಕೊಂಡಿಯಲ್ಲಾ; ಅವರು ನೀನು ತಿರಸ್ಕರಿಸಿದ ಜನರಲ್ಲವೋ? ಹಾಗಾದರೆ ಹೋಗಿ ಅವರೊಡನೆ ಯುದ್ಧಮಾಡು, ನೋಡೋಣ” ಎಂದು ಹೇಳಿದನು. 39 ೩೯ ಗಾಳನು ಶೆಕೆಮಿನವರ ನಾಯಕನಾಗಿ ಹೊರಟು ಅಬೀಮೆಲೆಕನೊಡನೆ ಕಾದಾಡಿದನು. 40 ೪೦ ಆದರೆ ಅಬೀಮೆಲೆಕನಿಗೆ ಬೆನ್ನು ತೋರಿಸಿ ಓಡಿಹೋಗಲು, ಅವನು ಇವನನ್ನು ಹಿಂದಟ್ಟಿದನು. ಊರುಬಾಗಿಲಿನವರೆಗೆ ಅನೇಕ ಮಂದಿ ಹತರಾಗಿ ಬಿದ್ದರು. 41 ೪೧ ಅನಂತರ ಅಬೀಮೆಲೆಕನು ಹೋಗಿ ಅರೂಮದಲ್ಲಿ ವಾಸಮಾಡಿದನು. ಇತ್ತ ಜೆಬುಲನು ಗಾಳನನ್ನೂ ಅವನ ಬಂಧುಗಳನ್ನೂ ಶೆಕೆಮಿನಿಂದ ಓಡಿಸಿಬಿಟ್ಟನು. 42 ೪೨ ಮರುದಿನ ಜನರು ಬೈಲಿಗೆ ಹೊರಟು ಬಂದರು; 43 ೪೩ ಇದು ಅಬೀಮೆಲೆಕನಿಗೆ ಗೊತ್ತಿದ್ದುದರಿಂದ ಅವನು ತನ್ನ ಜನರನ್ನು ಮೂರು ಗುಂಪು ಮಾಡಿ ಅವರನ್ನು ಕರೆದುಕೊಂಡು ಬಂದು ಹೊಲಗಳಲ್ಲಿ ಹೊಂಚಿ ನೋಡುತ್ತಿದ್ದನು. ಜನರು ಪಟ್ಟಣದಿಂದ ಹೊರಟು ಬರುವುದನ್ನು ಇವನು ಕಾಣುತ್ತಲೇ, ಅಲ್ಲಿಂದ ಎದ್ದು ಅವರನ್ನು ಹೊಡೆದನು. 44 ೪೪ ಅಬೀಮೆಲೆಕನೂ ಅವನ ಸಂಗಡ ಇದ್ದ ಗುಂಪಿನವರೂ ಓಡಿ ಬಂದು ಊರು ಬಾಗಿಲಲ್ಲಿ ನಿಂತರು; ಉಳಿದ ಎರಡು ಗುಂಪಿನವರು ಬೈಲಿನಲ್ಲಿದ್ದ ಶೆಕೆಮಿನವರ ಮೇಲೆ ಬಿದ್ದು ಅವರನ್ನು ಹತಮಾಡಿದರು. 45 ೪೫ ಅಬೀಮೆಲೆಕನು ಆ ದಿನವೆಲ್ಲಾ ಯುದ್ಧಮಾಡಿ, ಪಟ್ಟಣವನ್ನು ಸ್ವಾಧೀನಮಾಡಿಕೊಂಡು, ಅದರ ಜನರನ್ನೆಲ್ಲಾ ಸಂಹರಿಸಿ, ಊರನ್ನು ಕೆಡವಿಬಿಟ್ಟು, ಅಲ್ಲಿ ಉಪ್ಪನ್ನು ಎರಚಿಬಿಟ್ಟನು. 46 ೪೬ ಶೆಕೆಮಿನ ಕೋಟೆಯವರು ಇದನ್ನು ಕೇಳಿ ಏಲ್‌ಬೆರೀತೆ ಎಂಬ ದೇವರ ಗುಡಿಯ ನೆಲಮನೆಯಲ್ಲಿ ಅಡಗಿಕೊಂಡರು. 47 ೪೭ ಕೋಟೆಯವರೆಲ್ಲರೂ ಅಲ್ಲಿ ಅಡಗಿಕೊಂಡಿದ್ದಾರೆಂಬುದು ಅಬೀಮೆಲೆಕನಿಗೆ ಗೊತ್ತಾದಾಗ 48 ೪೮ ಅವನು ಕೊಡಲಿಯನ್ನು ತೆಗೆದುಕೊಂಡು ತನ್ನ ಜನರೆಲ್ಲರೊಡನೆ ಚಲ್ಮೋನ್ ಗುಡ್ಡವನ್ನೇರಿ ತನ್ನವರಿಗೆ, “ನಾನು ಮಾಡುವಂತೆಯೇ ನೀವೂ ತೀವ್ರವಾಗಿ ಮಾಡಿರಿ” ಎಂದು ಹೇಳಿ ತಾನು ಒಂದು ಮರದ ಕೊಂಬೆಯನ್ನು ಕಡಿದು ಹೆಗಲ ಮೇಲೆ ಹೊತ್ತುಕೊಳ್ಳಲು 49 ೪೯ ಅವರೂ ಅದರಂತೆಯೇ ಮಾಡಿ, ಅವನ ಹಿಂದೆ ಹೋಗಿ, ಆ ಕೊಂಬೆಗಳನ್ನು ಅವರಿದ್ದ ನೆಲಮನೆಯ ಸುತ್ತಲೂ ಹಾಕಿ, ಬೆಂಕಿಹೊತ್ತಿಸಿ ಅದನ್ನು ಸುಟ್ಟುಬಿಟ್ಟರು. ಹೀಗೆ ಶೆಕೆಮ್‌ ಕೋಟೆಯವರೆಲ್ಲರೂ ಸತ್ತರು. ಅವರ ಸ್ತ್ರೀಪುರುಷರೆಲ್ಲಾ ಸುಮಾರು ಸಾವಿರ ಜನರಿದ್ದರು. 50 ೫೦ ಅನಂತರ ಅಬೀಮೆಲೆಕನು ತೇಬೇಚಿಗೆ ಹೋಗಿ ಮುತ್ತಿಗೆಹಾಕಿ ಅದನ್ನು ಹಿಡಿದನು. 51 ೫೧ ಆ ಊರಿನ ಮಧ್ಯದಲ್ಲಿ ಒಂದು ಭದ್ರವಾದ ಬುರುಜು ಇತ್ತು; ಊರಿನ ಸ್ತ್ರೀಪುರುಷರೆಲ್ಲರೂ ಓಡಿಹೋಗಿ, ಅದರೊಳಗೆ ಹೊಕ್ಕು, ಬಾಗಿಲನ್ನು ಮುಚ್ಚಿಕೊಂಡು ಮೇಲೆ ಹತ್ತಿದರು. 52 ೫೨ ಅಬೀಮೆಲೆಕನು ಅಲ್ಲಿಗೆ ಬಂದು ಯುದ್ಧಮಾಡುತ್ತಾ ಬುರುಜಿನ ಬಾಗಿಲಿಗೆ ಬೆಂಕಿ ಹೊತ್ತಿಸಬೇಕೆಂದು ಅದರ ಸಮೀಪಕ್ಕೆ ಹೋಗಲು, 53 ೫೩ ಒಬ್ಬ ಸ್ತ್ರೀಯು ಮೇಲಿನಿಂದ ಒಂದು ಬೀಸುವ ಕಲ್ಲನ್ನು ಬೀಳಿಸಿ, ಅವನ ತಲೆಬುರುಡೆಯನ್ನು ಒಡೆದುಬಿಟ್ಟಳು. 54 ೫೪ ಅವನು ಕೂಡಲೆ ತನ್ನ ಆಯುಧ ಹೊರುವವನನ್ನು ಕರೆದು ಅವನಿಗೆ, “ಕತ್ತಿಯನ್ನು ಹಿರಿದು ನನ್ನನ್ನು ಕೊಲ್ಲು; ಇಲ್ಲವಾದರೆ ನಾನು ಹೆಂಗಸಿನ ಕೈಯಿಂದ ಸತ್ತನೆಂದು ಜನರು ಹೇಳಾರು” ಎನ್ನಲು ಆ ಪ್ರಾಯಸ್ಥನು ಅವನನ್ನು ತಿವಿದು ಕೊಂದುಹಾಕಿದನು. 55 ೫೫ ಅಬೀಮೆಲೆಕನು ಸತ್ತು ಹೋದದ್ದನ್ನು ಕಂಡು ಇಸ್ರಾಯೇಲರು ತಮ್ಮ ತಮ್ಮ ಸ್ಥಳಗಳಿಗೆ ಹಿಂದಿರುಗಿದರು. 56 ೫೬ ಎಪ್ಪತ್ತು ಮಂದಿ ಸಹೋದರರನ್ನು ಕೊಂದುಹಾಕಿ, ತನ್ನ ತಂದೆಗೆ ದ್ರೋಹಿಯಾದ ಅಬೀಮೆಲೆಕನಿಗೆ ದೇವರು ಈ ರೀತಿಯಾಗಿ ಮುಯ್ಯಿತೀರಿಸಿದನು. 57 ೫೭ ಶೆಕೆಮಿನವರಿಗಾದರೋ ಅವರ ದುಷ್ಟತನವನ್ನು ಅವರ ತಲೆಯ ಮೇಲೆಯೇ ಬರಮಾಡಿದನು. ಹೀಗೆ ಯೆರುಬ್ಬಾಳನ ಮಗನಾದ ಯೋತಾಮನು ಇವರ ವಿಷಯದಲ್ಲಿ ನುಡಿದ ಶಾಪವು ನೆರವೇರಿತು.

< ನ್ಯಾಯಸ್ಥಾಪಕರು 9 >