< ಯೆಹೋಶುವನು 11 >

1 ಹಾಚೋರಿನ ಅರಸನಾದ ಯಾಬೀನನು ಇದನ್ನೆಲ್ಲಾ ಕೇಳಿ ಯೋಬಾಬನೆಂಬ ಮಾದೋನಿನ ಅರಸನು ಶಿಮ್ರೋನಿನ ಅರಸನನ್ನು ಅಕ್ಷಾಫಿನ ಅರಸನನ್ನು, ಉತ್ತರ ದಿಕ್ಕಿನ ಪರ್ವತ ಪ್ರದೇಶ,
ಹಾಚೋರಿನ ಅರಸನಾದ ಯಾಬೀನನು ಇವುಗಳನ್ನು ಕೇಳಿದಾಗ, ಸಮೀಪ ರಾಜ್ಯಗಳ ಅರಸರಿಗೆ ಒಂದು ಸಂದೇಶವನ್ನು ಕಳುಹಿಸಿದನು: ಎಂದರೆ ಮಾದೋನಿನ ಅರಸನಾದ ಯೋಬಾಬನಿಗೂ ಶಿಮ್ರೋನಿನ ಅರಸನಿಗೂ ಅಕ್ಷಾಫಿನ ಅರಸನಿಗೂ
2 ಕಿನ್ನೆರೋತ್ ಸಮುದ್ರದ ದಕ್ಷಿಣದಲ್ಲಿನ ತಗ್ಗಾದ ಪ್ರದೇಶ, ಇಳುಕಲ್ಲಿನ ಪ್ರದೇಶ, ದೋರ್ ಊರಿನ ಪಶ್ಚಿಮದಲ್ಲಿದ್ದ ಬೆಟ್ಟದ ಮೇಲಿನ ಪ್ರದೇಶ, ಇವುಗಳ ಅರಸರನ್ನೂ ಪೂರ್ವಪಶ್ಚಿಮಗಳಲ್ಲಿರುವ
ಪರ್ವತಗಳ ಉತ್ತರ ದಿಕ್ಕಿನಲ್ಲಿಯೂ ಕಿನ್ನೆರೆತಿಗೆ ದಕ್ಷಿಣಕ್ಕಿರುವ ಬಯಲಿನಲ್ಲಿಯೂ ಕಣಿವೆಗಳಲ್ಲಿ ಮತ್ತು ಪಶ್ಚಿಮದಲ್ಲಿ ದೋರಿನ ಪ್ರಾಂತಗಳಲ್ಲಿ ಇರುವ ಅರಸರಿಗೂ
3 ಕಾನಾನ್ಯರು, ಅಮೋರಿಯರು, ಹಿತ್ತಿಯರು, ಪೆರಿಜ್ಜೀಯರು, ಬೆಟ್ಟದ ಮೇಲಿನ ಪ್ರದೇಶದಲ್ಲಿದ್ದ ಯೆಬೂಸಿಯರು, ಹೆರ್ಮೋನಿನ ತಗ್ಗಿನಲ್ಲಿದ್ದ ಮಿಚ್ಪಾ ದೇಶದಲ್ಲಿದ್ದ ಹಿವ್ವಿಯರು ಇವರನ್ನೂ ಕರೆಕಳುಹಿಸಿದನು.
ಪೂರ್ವ ಪಶ್ಚಿಮಕ್ಕಿರುವ ಕಾನಾನ್ಯರ ಬಳಿಗೂ ಪರ್ವತಗಳಲ್ಲಿರುವ ಅಮೋರಿಯರ, ಹಿತ್ತಿಯರ, ಪೆರಿಜೀಯರ, ಯೆಬೂಸಿಯರ ಬಳಿಗೂ, ಮಿಚ್ಪಾ ದೇಶದಲ್ಲಿ ಹೆರ್ಮೋನ್ ಪರ್ವತದ ಕೆಳಭಾಗದಲ್ಲಿರುವ ಹಿವ್ವಿಯರ ಬಳಿಗೂ ಹೇಳಿ ಕಳುಹಿಸಿದನು.
4 ಅವರು ಒಡನೆ ಬಹು ರಥಾಶ್ವಗಳಿಂದ ಕೂಡಿರುವ ತಮ್ಮ ಸರ್ವಸೈನ್ಯಗಳನ್ನು ತೆಗೆದುಕೊಂಡು ಹೊರಟರು. ಆ ಸೈನಿಕರು ಸಮುದ್ರ ತೀರದ ಮರಳಿನಂತೆ ಅಸಂಖ್ಯರಾಗಿದ್ದರು.
ಅವರೆಲ್ಲರು ಸಮುದ್ರ ದಡದ ಮರಳಿನ ಹಾಗೆ ಅಸಂಖ್ಯರಾಗಿದ್ದರು. ಅವರು ಬಹು ರಥಗಳೂ ಕುದುರೆಗಳೂ ಸಮೂಹವಾಗಿ ತಮ್ಮ ಎಲ್ಲಾ ಸೈನ್ಯಗಳ ಸಂಗಡ ಹೊರಟರು.
5 ಈ ಎಲ್ಲಾ ಅರಸರು ಒಟ್ಟಾಗಿ ಸೇರಿ ಮೇರೋಮ್ ಜಲಾಶಯದ ಬಳಿಯಲ್ಲಿ ಇಸ್ರಾಯೇಲ್ಯರೊಡನೆ ಯುದ್ಧಮಾಡುವುದಕ್ಕಾಗಿ ಇಳಿದುಕೊಂಡರು.
ಈ ಎಲ್ಲಾ ಅರಸರು ಇಸ್ರಾಯೇಲಿನ ಸಂಗಡ ಯುದ್ಧಮಾಡಲು ಬಂದು ಒಟ್ಟುಗೂಡಿ ಮೇರೋಮ ಎಂಬ ಜಲಾಶಯದ ಬಳಿಯಲ್ಲಿ ಇಳಿದುಕೊಂಡರು.
6 ಆಗ ಯೆಹೋವನು “ಯೆಹೋಶುವನಿಗೆ ನೀನು ಅವರಿಗೆ ಹೆದರಬೇಡ. ನಾಳೆ ಇದೇ ವೇಳೆಗೆ ಅವರನ್ನು ಇಸ್ರಾಯೇಲ್ಯರಿಗೆ ಒಪ್ಪಿಸುವೆನು, ಇಸ್ರಾಯೇಲರು ಅವರನ್ನು ಸಂಹರಿಸಿ ಬಿಡುವರು. ನೀನು ಅವರ ಕುದುರೆಗಳ ಹಿಂಗಾಲಿನ ನರಗಳನ್ನು ಕೊಯ್ದು ರಥಗಳನ್ನು ಸುಟ್ಟುಬಿಡಬೇಕು” ಅಂದನು.
ಆಗ ಯೆಹೋವ ದೇವರು ಯೆಹೋಶುವನಿಗೆ, “ಅವರಿಗೆ ಭಯಪಡಬೇಡ, ಏಕೆಂದರೆ ನಾಳೆ ಇಷ್ಟು ಹೊತ್ತಿಗೆ ಅವರೆಲ್ಲರೂ ಸಂಹಾರವಾಗುವಂತೆ ಇಸ್ರಾಯೇಲರಿಗೆ ಒಪ್ಪಿಸಿಕೊಡುವೆನು. ನೀನು ಅವರ ಕುದುರೆಗಳ ಹಿಂಗಾಲಿನ ನರವನ್ನು ಕೊಯ್ದು ಅವರ ರಥಗಳನ್ನು ಬೆಂಕಿಯಿಂದ ಸುಟ್ಟುಬಿಡಬೇಕು,” ಎಂದರು.
7 ಯೆಹೋಶುವನು ಮಿಚ್ಪೆಯ ತನ್ನ ಎಲ್ಲಾ ಭಟರೊಡನೆ ಹೊರಟು ಹೋಗಿ, ಮೇರೋಮ್ ಜಲಾಶಯದ ಬಳಿಯಲ್ಲಿದ್ದ ಶತ್ರುಗಳ ಮೇಲೆ ಪಕ್ಕನೆ ಬಿದ್ದನು.
ಆಗ ಯೆಹೋಶುವನೂ ಅವನ ಸಂಗಡ ಇದ್ದ ಸೈನಿಕರೆಲ್ಲರೂ ಬಂದು ಫಕ್ಕನೆ ಮೇರೋಮ ಜಲಾಶಯದ ಬಳಿಯಲ್ಲಿ ಅವರ ಮೇಲೆ ದಾಳಿಮಾಡಿದರು.
8 ಯೆಹೋವನು ಅವರನ್ನು ಇಸ್ರಾಯೇಲರ ಕೈಗೆ ಒಪ್ಪಿಸಿದನು. ಇವರು ಅವರನ್ನು ದೊಡ್ಡ ಚೀದೋನ್ ಹಾಗೂ ಮಿಸ್ರೆಫೋತ್ಮಯಿಮ್ ಎಂಬ ಊರುಗಳವರೆಗೂ ಪೂರ್ವದಿಕ್ಕಿನಲ್ಲಿರುವ ಮಿಚ್ಪೆಯ ಬೈಲಿನವರೆಗೂ ಅವರನ್ನು ಹಿಂದಟ್ಟಿ ಹೊಡೆದರು. ಒಬ್ಬನಾದರೂ ಉಳಿಯದಂತೆ ಎಲ್ಲರನ್ನೂ ಸಂಹರಿಸಿದರು.
ಯೆಹೋವ ದೇವರು ಅವರನ್ನು ಇಸ್ರಾಯೇಲರ ಕೈಯಲ್ಲಿ ಒಪ್ಪಿಸಿಕೊಟ್ಟರು. ಇವರು ಅವರನ್ನು ಹೊಡೆದು ದೊಡ್ಡ ಸೀದೋನ್, ಮಿಸ್ರೆಫೋತ್ಮಯಿಮ್ ಎಂಬ ಊರುಗಳವರೆಗೂ ಪೂರ್ವದಿಕ್ಕಿನಲ್ಲಿರುವ ಮಿಚ್ಪೆಯ ಕಣಿವೆಯವರೆಗೂ ಹಿಂದಟ್ಟಿ, ಅವರಲ್ಲಿ ಒಬ್ಬನನ್ನಾದರೂ ಉಳಿಸದೆ ಎಲ್ಲರನ್ನು ಸಂಹರಿಸಿದರು.
9 ಯೆಹೋಶುವನು ಯೆಹೋವನ ಅಪ್ಪಣೆಗನುಸಾರವಾಗಿ ಅವರ ಕುದುರೆಗಳ ಹಿಂಗಾಲಿನ ನರಗಳನ್ನು ರಥಗಳನ್ನು ಸುಟ್ಟುಬಿಟ್ಟನು.
ಯೆಹೋಶುವನು ಯೆಹೋವ ದೇವರ ಅಪ್ಪಣೆಯ ಪ್ರಕಾರವೇ ಅವರ ಕುದುರೆಗಳ ಹಿಂಗಾಲಿನ ನರವನ್ನು ಕೊಯ್ದುಬಿಟ್ಟು, ಅವರ ರಥಗಳನ್ನು ಬೆಂಕಿಯಿಂದ ಸುಟ್ಟುಬಿಟ್ಟನು.
10 ೧೦ ಕೂಡಲೇ ಯೆಹೋಶುವನು ಹಿಂದಿರುಗಿ ಹಾಚೋರನನ್ನೂ ಅವರ ಅರಸನನ್ನೂ ಕತ್ತಿಯಿಂದ ಸಂಹರಿಸಿದನು. ಹಾಚೋರೆಂಬುವುದು ಪೂರ್ವಕಾಲದಲ್ಲಿ ಆ ಎಲ್ಲಾ ರಾಜ್ಯಗಳಿಗಿಂತಲು ಶ್ರೇಷ್ಠವಾಗಿತ್ತು.
ಆ ಕಾಲದಲ್ಲಿ ಯೆಹೋಶುವನು ಹಿಂದಿರುಗಿ ಹಾಚೋರನ್ನು ಹಿಡಿದು, ಅದರ ಅರಸನನ್ನು ಖಡ್ಗದಿಂದ ಸಂಹರಿಸಿದನು. ಏಕೆಂದರೆ ಹಾಚೋರು ಮೊದಲು ಆ ರಾಜ್ಯಗಳಿಗೆಲ್ಲಾ ಶಿರಸ್ಸಾಗಿತ್ತು.
11 ೧೧ ಇಸ್ರಾಯೇಲ್ಯರು ಅದರಲ್ಲಿದ್ದ ಎಲ್ಲರನ್ನು ಕತ್ತಿಯಿಂದ ಸಂಹರಿಸಿ ಹಾಚೋರ್ ಪಟ್ಟಣವನ್ನು ಸುಟ್ಟುಬಿಟ್ಟರು. ಒಂದು ಜೀವಿಯಾದರೂ ಉಳಿಯಲಿಲ್ಲ.
ಅವರು ಒಬ್ಬರನ್ನಾದರೂ ಉಳಿಸದೆ, ಅದರಲ್ಲಿದ್ದ ಪ್ರತಿಯೊಬ್ಬರನ್ನೂ ಖಡ್ಗದಿಂದ ಸಂಹರಿಸಿದನು. ಹಾಚೋರನ್ನು ಬೆಂಕಿಯಿಂದ ಸುಟ್ಟುಬಿಟ್ಟನು.
12 ೧೨ ನಂತರ ಯೆಹೋಶುವನು ಉಳಿದ ಅರಸರನ್ನೂ ಅವರ ಎಲ್ಲಾ ಪಟ್ಟಣಗಳನ್ನು ಹಿಡಿದು ಯೆಹೋವನ ಸೇವಕನಾದ ಮೋಶೆಯ ಆಜ್ಞೆಯಂತೆ ಅವರನ್ನು ಕತ್ತಿಯಿಂದ ಸಂಹರಿಸಿದನು.
ಇದಲ್ಲದೆ ಯೆಹೋಶುವನು ಆ ಅರಸುಗಳ ಸಮಸ್ತ ಪಟ್ಟಣಗಳನ್ನೂ, ಅವುಗಳ ಸಮಸ್ತ ಅರಸರನ್ನೂ ಹಿಡಿದು ಖಡ್ಗದಿಂದ ದಾಳಿಮಾಡಿ, ಯೆಹೋವ ದೇವರ ಸೇವಕನಾದ ಮೋಶೆಯು ಆಜ್ಞಾಪಿಸಿದಂತೆ ಅವರನ್ನು ಸಂಪೂರ್ಣ ನಾಶಮಾಡಿಬಿಟ್ಟನು.
13 ೧೩ ಯೆಹೋಶುವನು ಸುಟ್ಟ ಹಾಚೋರ್ ಒಂದನ್ನು ಬಿಟ್ಟರೆ ಇಸ್ರಾಯೇಲರು ದಿನ್ನೆಯ ಮೇಲಿನ ಬೇರೆ ಯಾವ ಪಟ್ಟಣವನ್ನೂ ಸುಟ್ಟುಹಾಕಲಿಲ್ಲ.
ಆದರೆ ದಿನ್ನೆಯ ಮೇಲೆ ನಿಂತಿರುವ ಪಟ್ಟಣಗಳನ್ನೆಲ್ಲಾ ಇಸ್ರಾಯೇಲರು ಸುಟ್ಟು ಬಿಡಲಿಲ್ಲ. ಹಾಚೋರನ್ನು ಮಾತ್ರ ಯೆಹೋಶುವನು ಸುಟ್ಟುಬಿಟ್ಟನು.
14 ೧೪ ಇಸ್ರಾಯೇಲರು ಅವುಗಳಲ್ಲಿದ್ದ ಪಶುಪ್ರಾಣಿಗಳನ್ನೂ ವಸ್ತುಗಳನ್ನೂ ಕೊಳ್ಳೆ ಹೊಡೆದರು. ಆದರೆ ಜನರೆಲ್ಲರನ್ನೂ ಕತ್ತಿಯಿಂದ ಹೊಡೆದು ನಿರ್ಮೂಲ ಮಾಡಿದರು. ಉಸಿರಿರುವ ಒಂದನ್ನೂ ಅವರು ಉಳಿಸಲಿಲ್ಲ.
ಆ ಪಟ್ಟಣಗಳ ಎಲ್ಲಾ ಕೊಳ್ಳೆಯನ್ನೂ, ಪಶುಪ್ರಾಣಿಗಳನ್ನೆಲ್ಲಾ ಇಸ್ರಾಯೇಲರು ತಮಗೋಸ್ಕರ ಸುಲಿಗೆ ಮಾಡಿಕೊಂಡರು. ಖಡ್ಗದಿಂದ ಜನರನ್ನು ನಾಶಮಾಡಿದರು. ಒಬ್ಬರನ್ನೂ ಅವರು ಉಳಿಸಲಿಲ್ಲ.
15 ೧೫ ಯೆಹೋವನ ಸೇವಕನಾದ ಮೋಶೆಯು ದೇವರು ತನಗೆ ಹೇಳಿದ್ದನ್ನೆಲ್ಲಾ ಯೆಹೋಶುವನಿಗೆ ಹೇಳಿದ್ದನು. ಯೆಹೋಶುವನು ಅದರಂತೆಯೇ ಮಾಡಿದನು, ಯೆಹೋವನು ಮೋಶೆಯ ಮೂಲಕ ಆಜ್ಞಾಪಿಸಿದ್ದರಲ್ಲಿ ಒಂದನ್ನೂ ಮೀರಲಿಲ್ಲ.
ಯೆಹೋವ ದೇವರು ತಮ್ಮ ಸೇವಕನಾದ ಮೋಶೆಗೆ ಹೇಗೆ ಆಜ್ಞಾಪಿಸಿದರೋ, ಹಾಗೆಯೇ ಮೋಶೆಯು ಯೆಹೋಶುವನಿಗೆ ಆಜ್ಞಾಪಿಸಿದನು. ಯೆಹೋಶುವನೂ ಹಾಗೆಯೇ ಮಾಡಿದನು. ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ್ದರಲ್ಲಿ ಯೆಹೋಶುವನು ಒಂದನ್ನೂ ಮೀರದೆ ಎಲ್ಲವನ್ನೂ ಮಾಡಿದನು.
16 ೧೬ ಈ ಪ್ರಕಾರ ಬೆಟ್ಟದ ಮೇಲಿನ ಪ್ರದೇಶ, ದಕ್ಷಿಣ ಪ್ರಾಂತ್ಯ ಗೋಷೆನ್ ಸೀಮೆ, ಇಳಿಜಾರಿನ ಪ್ರದೇಶ, ತಗ್ಗಾದ ಪ್ರದೇಶ, ಇಸ್ರಾಯೇಲ್ ಸೀಮೆಯ ಪರ್ವತ ಪ್ರಾಂತ್ಯ, ಅದಕ್ಕೆ ಸೇರಿದ ಇಳಿಜಾರಿನ ಪ್ರದೇಶ ಇವುಗಳೆಲ್ಲವೂ ಯೆಹೋಶುವನಿಗೆ ಸ್ವಾಧೀನವಾದವು.
ಈ ಪ್ರಕಾರ ಗೋಷೆನ್ ಸೀಮೆ, ಅದರ ಕಣಿವೆ, ಬಯಲು ಪ್ರದೇಶ, ದಕ್ಷಿಣದ ಪ್ರದೇಶ, ಇಸ್ರಾಯೇಲ್ ಸೀಮೆಯ ಪರ್ವತ ಪ್ರಾಂತ, ಅದಕ್ಕೆ ಸೇರಿದ ಇಳಿಜಾರಿನ ಪ್ರದೇಶ ಇವುಗಳೆಲ್ಲಾ ಯೆಹೋಶುವನಿಗೆ ಸ್ವಾಧೀನವಾದವು.
17 ೧೭ ಅವನು ಸೇಯೀರಿನ ದಾರಿಯಲ್ಲಿದ್ದ ಹಾಲಾಕ್ ಬೆಟ್ಟದಿಂದ ಹೆರ್ಮೋನಿನ ಬುಡದಲ್ಲಿ ಲೆಬನೋನಿನ ಕಣಿವೆಯಲ್ಲಿರುವ ಬಾಲ್ಗಾದ್ ಪಟ್ಟಣದವರೆಗೂ ಇರುವ ದೇಶವನ್ನೆಲ್ಲಾ ಸೆರೆಹಿಡಿದು ಅದರ ಎಲ್ಲಾ ಅರಸರನ್ನು ಹಿಡಿದು ಸಂಹರಿಸಿಬಿಟ್ಟನು.
ಯೆಹೋಶುವನು ಸೇಯೀರಿಗೆ ಏರಿಹೋಗುವ ಹಾಲಾಕ್ ಬೆಟ್ಟ ಮೊದಲುಗೊಂಡು ಬಾಲ್ಗಾದಿನ ಮಟ್ಟಿಗೂ ಇರುವ ಲೆಬನೋನಿನ ಕಣಿವೆಯಲ್ಲಿ ಹೆರ್ಮೋನಿನ ಬೆಟ್ಟದ ಕೆಳಗಿರುವ ಎಲ್ಲಾ ದೇಶವನ್ನೂ ಬೆಟ್ಟಗಳನ್ನೂ ದಕ್ಷಿಣ ದೇಶವೆಲ್ಲವನ್ನೂ ತೆಗೆದುಕೊಂಡು ಅವುಗಳ ಅರಸುಗಳೆಲ್ಲರನ್ನೂ ಹಿಡಿದು ಅವರಿಗೆ ಮರಣದಂಡನೆ ವಿಧಿಸಿದನು.
18 ೧೮ ಯೆಹೋಶುವನು ಈ ಎಲ್ಲಾ ಅರಸರೊಡನೆ ಬಹು ದಿನಗಳವರೆಗೂ ಯುದ್ಧ ಮಾಡಿದನು.
ಯೆಹೋಶುವನು ಬಹಳ ಕಾಲ ಈ ಅರಸುಗಳೆಲ್ಲರ ಸಂಗಡ ಯುದ್ಧ ಮಾಡುತ್ತಿದ್ದನು.
19 ೧೯ ಗಿಬ್ಯೋನಿನ ನಿವಾಸಿಗಳಾದ ಹಿವ್ವಿಯರು ಹೊರತು ಯಾವ ಪಟ್ಟಣದವರೂ ಇಸ್ರಾಯೇಲರೊಡನೆ ಒಪ್ಪಂದಮಾಡಿಕೊಳ್ಳಲಿಲ್ಲ ಎಲ್ಲರನ್ನೂ ಯುದ್ಧದಿಂದಲೇ ವಶಮಾಡಿಕೊಳ್ಳಬೇಕಾಯಿತು.
ಗಿಬ್ಯೋನಿನ ನಿವಾಸಿಗಳಾದ ಹಿವ್ವಿಯರ ಹೊರತಾಗಿ ಇಸ್ರಾಯೇಲರ ಸಂಗಡ ಸಮಾಧಾನ ಮಾಡಿಕೊಂಡ ಬೇರೆ ಒಂದು ಪಟ್ಟಣವಾದರೂ ಇರಲಿಲ್ಲ. ಅವರು ಬೇರೆ ಎಲ್ಲವುಗಳನ್ನು ಯುದ್ಧಮಾಡಿ ತೆಗೆದುಕೊಂಡರು.
20 ೨೦ ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆ ಇಸ್ರಾಯೇಲರು ಅವರೆಲ್ಲರನ್ನು ಕರುಣೆಯಿಲ್ಲದೆ ಸಂಹರಿಸಿ ಬಿಡುವ ಹಾಗೆ ಯೆಹೋವನು ತಾನೇ ಆ ಜನರ ಹೃದಯಗಳನ್ನು ಕಠಿಣಪಡಿಸಿ ಯುದ್ಧಕ್ಕೆ ಬರುವಂತೆ ಮಾಡಿದನು.
ಏಕೆಂದರೆ ಅವರು ಇಸ್ರಾಯೇಲರಿಗೆ ಎದುರಾಗಿ ಯುದ್ಧಮಾಡಲು ಬರುವ ಹಾಗೆ ಅವರ ಹೃದಯವನ್ನು ಯೆಹೋವ ದೇವರು ಕಠಿಣಮಾಡಿದ್ದರು. ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದಂತೆ ಇಸ್ರಾಯೇಲರು ಅವರಿಗೆ ದಯೆ ತೋರಿಸದೆ, ಅವರನ್ನು ಸಂಹರಿಸಿದರು.
21 ೨೧ ಅದೇ ಕಾಲದಲ್ಲಿ ಯೆಹೋಶುವನು ಮಲೆನಾಡುಗಳಾದ ಹೆಬ್ರೋನ್, ದೆಬೀರ್, ಅನಾಬ್ ಎಂಬ ಊರುಗಳಲ್ಲಿಯೂ ಯೆಹೂದ ಹಾಗೂ ಇಸ್ರಾಯೇಲ್ ಪ್ರಾಂತ್ಯದ ಬೆಟ್ಟಗಳಲ್ಲಿಯೂ ವಾಸವಾಗಿದ್ದ ಅನಾಕ್ಯರನ್ನು (ಉನ್ನತ ಪುರುಷರು) ನಾಶಮಾಡಿ ಅವರ ಪಟ್ಟಣಗಳನ್ನು ಹಾಳುಮಾಡಿದನು.
ಆ ಕಾಲದಲ್ಲಿ ಯೆಹೋಶುವನು ಬಂದು ಬೆಟ್ಟದ ದೇಶವಾದ ಹೆಬ್ರೋನಿನಲ್ಲಿಯೂ, ದೆಬೀರಿನಲ್ಲಿಯೂ, ಅನಾಬಿನಲ್ಲಿಯೂ, ಯೆಹೂದದ ಸಕಲ ಬೆಟ್ಟಗಳಲ್ಲಿಯೂ ಇಸ್ರಾಯೇಲ್ ಪ್ರಾಂತದ ಬೆಟ್ಟಗಳಲ್ಲಿಯೂ ಇದ್ದ ಅನಾಕ್ಯರನ್ನು ಕಡಿದುಬಿಟ್ಟು, ಅವರನ್ನೂ, ಅವರ ಪಟ್ಟಣಗಳನ್ನೂ ಪೂರ್ಣವಾಗಿ ನಾಶಮಾಡಿದನು.
22 ೨೨ ಇಸ್ರಾಯೇಲರ ಪ್ರಾಂತ್ಯಗಳಲ್ಲಿ ಯಾರೊಬ್ಬರೂ ಉಳಿಯಲಿಲ್ಲ. ಆದರೆ ಗಾಜಾ, ಗತೂರು, ಅಷ್ಡೋದ್, ಎಂಬ ಊರುಗಳಲ್ಲಿ ಮಾತ್ರ ಕೆಲವರು ಉಳಿದಿದ್ದರು.
ಅನಾಕ್ಯರು ಇಸ್ರಾಯೇಲರ ದೇಶದಲ್ಲಿ ಒಬ್ಬರೂ ಉಳಿಯಲಿಲ್ಲ. ಗಾಜದಲ್ಲಿಯೂ, ಗತ್‌ನಲ್ಲಿಯೂ, ಅಷ್ಡೋದಿನಲ್ಲಿಯೂ ಮಾತ್ರ ಕೆಲವರು ಉಳಿದರು.
23 ೨೩ ಯೆಹೋವನು ಮೋಶೆಯ ಮುಖಾಂತರ ವಾಗ್ದಾನ ಮಾಡಿದ ಪ್ರದೇಶಗಳನ್ನೆಲ್ಲಾ ಯೆಹೋಶುವನು ಸೆರೆ ಹಿಡಿದುಕೊಂಡು ಇಸ್ರಾಯೇಲ್ ಕುಲಭಾಗಗಳಿಗನುಗುಣವಾಗಿ ಅವುಗಳನ್ನು ವಿಭಾಗಿಸಿ ಹಂಚಿಕೊಟ್ಟನು. ಯುದ್ಧವು ನಿಂತು ದೇಶದಲ್ಲೆಲ್ಲಾ ಸಮಾಧಾನವುಂಟಾಯಿತು.
ಹೀಗೆ ಯೆಹೋಶುವನು ದೇಶವನ್ನೆಲ್ಲಾ ಯೆಹೋವ ದೇವರು ಮೋಶೆಗೆ ಹೇಳಿದ ಪ್ರಕಾರವೇ ಸ್ವಾಧೀನಮಾಡಿಕೊಂಡನು. ಅದನ್ನು ಇಸ್ರಾಯೇಲರಿಗೆ ಅವರ ಗೋತ್ರಗಳ ಭಾಗಗಳಿಗನುಸಾರ ಬಾಧ್ಯತೆಯಾಗಿ ಕೊಟ್ಟನು. ಆಗ ದೇಶವು ಯುದ್ಧವಿಲ್ಲದೆ ವಿಶ್ರಮಿಸಿಕೊಂಡಿತು.

< ಯೆಹೋಶುವನು 11 >