< ಯೆಹೋಶುವನು 10 >

1 ಯೆಹೋಶುವನು ಆಯಿ ನಗರವನ್ನು, ಅದರ ಅರಸನನ್ನು ಹಿಡಿದು ಯೆರಿಕೋವನ್ನೂ ಅದರ ಅರಸನನ್ನೂ ಹೇಗೆ ಸಂಹರಿಸಿದನೆಂದು ಯೆರೂಸಲೇಮಿನ ಅರಸ ಅದೋನೀಚೆದೆಕನು ತಿಳಿದುಕೊಂಡನು. 2 ಆಯಿ ಎಂಬ ಊರಿಗಿಂತ ದೊಡ್ಡದೂ, ಒಂದು ರಾಜಧಾನಿಯಷ್ಟು ಶ್ರೇಷ್ಠವೂ ಆಗಿರುವ ಗಿಬ್ಯೋನ್ ಪಟ್ಟಣದಲ್ಲಿರುವ ಜನರೆಲ್ಲರೂ ಯುದ್ಧವೀರರಾಗಿದ್ದರೂ ಇಸ್ರಾಯೇಲ್ಯರ ಮಧ್ಯದಲ್ಲಿ ಜೀವದಿಂದ ಉಳಿಯುವುದಕ್ಕೋಸ್ಕರ ಅವರ ಸಂಗಡ ಸಂಧಾನ ಮಾಡಿಕೊಂಡಿದ್ದಾರೆ ಎಂಬುವುದನ್ನು ಕೇಳಿ ಯೆರೂಸಲೇಮಿನ ಅರಸನಾದ ಅದೋನೀಚೆದೆಕನು ಬಹಳವಾಗಿ ಭಯಪಟ್ಟನು. 3 ಆದುದರಿಂದ ಹೆಬ್ರೋನಿನ ಅರಸನಾದ ಹೋಹಾಮ್, ಯರ್ಮೂತಿನ ಅರಸನಾದ ಪಿರಾಮ್, ಲಾಕೀಷಿನ ಅರಸನಾದ ಯಾಫೀಯ, ಎಗ್ಲೋನಿನ ಅರಸನಾದ ದೆಬೀರ್ ಇವರ ಬಳಿಗೆ ದೂತರನ್ನು ಕಳುಹಿಸಿದನು. 4 “ನೀವು ಬಂದು ನನಗೆ ಸಹಾಯಮಾಡಿರಿ, ನಾವು ಯೆಹೋಶುವನ ಸಂಗಡಲೂ ಇಸ್ರಾಯೇಲ್ಯರ ಸಂಗಡಲೂ ಒಡಂಬಡಿಕೆ ಮಾಡಿಕೊಂಡಿರುವ ಗಿಬ್ಯೋನ್ಯರನ್ನು ಸೋಲಿಸೋಣ” ಎಂದು ಹೇಳಿ ಕಳುಹಿಸಿದನು. 5 ಆಗ ಯೆರೂಸಲೇಮ್, ಹೆಬ್ರೋನ್, ಯರ್ಮೂತ್, ಲಾಕೀಷ್, ಎಗ್ಲೋನ್ ಎಂಬ ಪಟ್ಟಣಗಳ ಐದು ಮಂದಿ ಅಮೋರಿಯ ರಾಜರು ಒಟ್ಟಾಗಿ ಸೇರಿ ದಂಡೆತ್ತಿ ಬಂದರು. ಅವರು ಗಿಬ್ಯೋನಿಗೆ ಮುತ್ತಿಗೆಹಾಕಿ ಯುದ್ಧಮಾಡಿದರು. 6 ಗಿಬ್ಯೋನ್ಯರು ಗಿಲ್ಗಾಲಿನಲ್ಲಿದ್ದ ಯೆಹೋಶುವನ ಪಾಳೆಯಕ್ಕೆ ದೂತರನ್ನು ಕಳುಹಿಸಿದರು. “ನಿಮ್ಮ ಸೇವಕರಾದ ನಮ್ಮನ್ನು ಕೈಬಿಡದೆ, ಬೇಗನೆ ಬಂದು ಸಹಾಯಮಾಡಿ ನಮಗೆ ವಿರೋಧವಾಗಿ ಸೇರಿ ಬಂದಿರುವ ಈ ಬೆಟ್ಟದ ಸೀಮೆಯ ಎಲ್ಲಾ ಅಮೋರಿಯ ರಾಜರಿಂದ ನಮ್ಮನ್ನು ತಪ್ಪಿಸಿರಿ” ಎಂದು ಬೇಡಿಕೊಂಡರು. 7 ಆಗ ಯೆಹೋಶುವನು ಎಲ್ಲಾ ಭಟರ ಮತ್ತು ಯುದ್ಧವೀರರ ಸಹಿತವಾಗಿ ಗಿಲ್ಗಾಲಿನಿಂದ ಹೊರಟನು. 8 ಯೆಹೋವನು ಯೆಹೋಶುವನಿಗೆ, ಅವರಿಗೆ “ಹೆದರಬೇಡ, ಅವರನ್ನು ನಿನ್ನ ಕೈಗೆ ಒಪ್ಪಿಸಿದ್ದೇನೆ. ಅವರಲ್ಲಿ ಒಬ್ಬನೂ ನಿನ್ನ ಮುಂದೆ ನಿಲ್ಲುವುದಿಲ್ಲ” ಎಂದನು 9 ಯೆಹೋಶುವನು ಗಿಲ್ಗಾಲ್ ಬಿಟ್ಟು ರಾತ್ರಿಯೆಲ್ಲಾ ಪ್ರಯಾಣಮಾಡಿ ತಟ್ಟನೆ ಅವರ ಮೇಲೆ ಬಿದ್ದನು. 10 ೧೦ ಆ ಅಮೋರಿಯರಲ್ಲಿ ಯೆಹೋವನು ಇಸ್ರಾಯೇಲರ ಕುರಿತಾಗಿ ಅವರನ್ನು ಕಳವಳಗೊಳಿಸಿದ್ದರಿಂದ ಯೆಹೋಶುವನು ಅವರನ್ನು ಗಿಬ್ಯೋನಿನ ಹತ್ತಿರ ಸಂಪೂರ್ಣವಾಗಿ ಸೋಲಿಸಿ ಬೇತ್‌ಹೋರೋನ್ ಎಂಬ ಬೆಟ್ಟದ ದಾರಿಯಲ್ಲಿ ಅಜೇಕ, ಮಕ್ಕೇದ ಎಂಬ ಊರುಗಳವರೆಗೂ ಅವರನ್ನು ಹಿಂದಟ್ಟಿ ಸಂಹರಿಸಿದನು. 11 ೧೧ ಅವರು ಇಸ್ರಾಯೇಲ್ಯರಿಗೆ ಬೆಂಗೊಟ್ಟು ಬೇತ್‍ಹೋರೋನಿನ ಇಳಿಜಾರಿನಲ್ಲಿ ಓಡುತ್ತಾ ಅಜೇಕವನ್ನು ತಲುಪುವವರೆಗೂ ಯೆಹೋವನು ಅವರ ಮೇಲೆ ಆಕಾಶದಿಂದ ದೊಡ್ಡ ಆಲಿಕಲ್ಲಿನ ಮಳೆಯನ್ನು ಸುರಿಸಿದನು. ಈ ಕಾರಣದಿಂದ ಅನೇಕರು ಸತ್ತರು ಇಸ್ರಾಯೇಲ್ಯರ ಕತ್ತಿಯಿಂದ ಸಂಹಾರವಾದವರಿಗಿಂತ ಆಲಿಕಲ್ಲಿನ ಮಳೆಯಿಂದ ನಾಶವಾದವರೇ ಹೆಚ್ಚು ಮಂದಿಯಾಗಿದ್ದರು. 12 ೧೨ ಯೆಹೋವನು ಅಮೋರಿಯರನ್ನು ಇಸ್ರಾಯೇಲ್ಯರಿಗೆ ಒಪ್ಪಿಸಿದ ದಿನದಲ್ಲಿ ಯೆಹೋಶುವನು ಯೆಹೋವನಲ್ಲಿ ಒಂದು ವಿಜ್ಞಾಪನೆ ಮಾಡಿಕೊಂಡನು. “ಸೂರ್ಯನೇ, ನೀನು ಗಿಬ್ಯೋನಿನಲ್ಲೇ ನಿಲ್ಲು; ಚಂದ್ರನೇ, ನೀನು ಅಯ್ಯಾಲೋನ್ ಕಣಿವೆಯಲ್ಲೇ ನಿಲ್ಲು” ಎಂದು ಇಸ್ರಾಯೇಲ್ಯರ ಸಮಕ್ಷಮದಲ್ಲಿ ಆಜ್ಞಾಪಿಸಿದನು. 13 ೧೩ ಇಸ್ರಾಯೇಲ್ಯರು ತಮ್ಮ ಶತ್ರುಗಳಿಗೆ ಮುಯ್ಯಿತೀರಿಸುವ ತನಕ ಸೂರ್ಯಚಂದ್ರರು ಹಾಗೆಯೇ ನಿಂತರು. ಈ ಮಾತು ಯಾಷಾರ್‌ ಗ್ರಂಥದಲ್ಲಿ ಬರೆದಿದೆಯಲ್ಲವೆ? ಹೀಗೆ ಸೂರ್ಯನು ಮುಳುಗಲು ಆತುರ ಪಡದೆ ಹೆಚ್ಚು ಕಡಿಮೆ ಒಂದು ದಿನ ಪೂರ್ತಿ ಆಕಾಶದ ಮಧ್ಯದಲ್ಲಿಯೇ ನಿಂತನು. 14 ೧೪ ಯೆಹೋವನು ಈ ಪ್ರಕಾರ ಒಬ್ಬ ಮನುಷ್ಯನ ಮಾತಿಗೆ ಕಿವಿಗೊಟ್ಟ ದಿನವು ಅದಕ್ಕಿಂತ ಹಿಂದೆಯೂ ಮುಂದೆಯೂ ಇಲ್ಲವೇ ಇಲ್ಲ. ಯೆಹೋವನು ತಾನೇ ಇಸ್ರಾಯೇಲ್ಯರಿಗೋಸ್ಕರ ಯುದ್ಧಮಾಡುತ್ತಾ ಇದ್ದನು. 15 ೧೫ ಯೆಹೋಶುವನು ಇಸ್ರಾಯೇಲ್ಯರ ಸಹಿತವಾಗಿ ಗಿಲ್ಗಾಲಿನ ಪಾಳೆಯಕ್ಕೆ ಹಿಂದಿರುಗಿದನು. 16 ೧೬ ಆ ಐದು ಮಂದಿ ಅರಸರು ಓಡಿಹೋಗಿ ಮಕ್ಕೇದದ ಗುಹೆಯಲ್ಲಿ ಅಡಗಿಕೊಂಡರು. 17 ೧೭ ಜನರು ಯೆಹೋಶುವನಿಗೆ “ಆ ಐದು ಮಂದಿ ನಮಗೆ ಸಿಕ್ಕಿದ್ದಾರೆ. ಅವರು ಮಕ್ಕೇದದ ಗವಿಯಲ್ಲಿ ಅಡಗಿಕೊಂಡಿದ್ದಾರೆ” ಎಂದು ತಿಳಿಸಿದರು. 18 ೧೮ ಆಗ ಯೆಹೋಶುವನು ಅವರಿಗೆ “ಆ ಗವಿಯ ಬಾಯಿಗೆ ದೊಡ್ಡ ಕಲ್ಲುಗಳನ್ನು ಹೊರಳಿಸಿ ಕಾಯುವುದಕ್ಕೆ ಕಾವಲುಗಾರರನ್ನು ಇಡಿರಿ. ನೀವಾದರೂ ಅಲ್ಲೇ ನಿಂತುಕೊಳ್ಳಬೇಡಿ. ಬೇಗನೆ ಹಿಂದಟ್ಟಿ ಹಿಂದೆ ಬರುವ ಶತ್ರುಗಳನ್ನು ಹತಮಾಡುತ್ತಾ ಹೋಗಿರಿ. 19 ೧೯ ಅವರನ್ನು ಅವರ ಪಟ್ಟಣಗಳಲ್ಲಿ ಸೇರುವುದಕ್ಕೆ ಬಿಡಬೇಡಿರಿ. ನಿಮ್ಮ ದೇವರಾದ ಯೆಹೋವನು ಅವರನ್ನು ನಿಮ್ಮ ಕೈಗೆ ಒಪ್ಪಿಸಿದ್ದಾನಲ್ಲಾ?” ಎಂದನು. 20 ೨೦ ಈ ರೀತಿಯಾಗಿ ಯೆಹೋಶುವನೂ ಹಾಗೂ ಇಸ್ರಾಯೇಲ್ಯರೂ ಅವರನ್ನು ಸಂಪೂರ್ಣವಾಗಿ ಸೋಲಿಸಿ ಸಂಹರಿಸಿಬಿಟ್ಟರು. ಸ್ವಲ್ಪ ಜನರು ಮಾತ್ರ ತಪ್ಪಿಸಿಕೊಂಡು ಕೋಟೆ ಕೊತ್ತಲುಗಳಿದ್ದ ಪಟ್ಟಣಗಳನ್ನು ಸೇರಿಕೊಂಡರು. 21 ೨೧ ಇಸ್ರಾಯೇಲ್ಯರಾದರೋ ಮಕ್ಕೇದದಲ್ಲಿ ಇಳುಕೊಂಡಿದ್ದ ಯೆಹೋಶುವನ ಬಳಿಗೆ ಸುರಕ್ಷಿತರಾಗಿ ಬಂದರು. ಇಸ್ರಾಯೇಲ್ಯರಿಗೆ ವಿರೋಧವಾಗಿ ಒಬ್ಬನೂ ಮಾತನಾಡಲಿಲ್ಲ. 22 ೨೨ ಅನಂತರ ಯೆಹೋಶುವನು ಜನರಿಗೆ “ಗವಿಯ ಬಾಯನ್ನು ತೆರೆದು ಆ ಐದು ಮಂದಿ ಅರಸರನ್ನು ನನ್ನ ಬಳಿಗೆ ತನ್ನಿರಿ” ಎಂದನು. 23 ೨೩ ಅವರು ಹೋಗಿ ಯೆರೂಸಲೇಮ್, ಹೆಬ್ರೋನ್, ಯರ್ಮೂತ್, ಲಾಕೀಷ್, ಎಗ್ಲೋನ್ ಎಂಬ ಪಟ್ಟಣಗಳ ಐದು ಮಂದಿ ಅರಸರನ್ನು ಗವಿಯಿಂದ ಎಳೆದು ಕೊಂಡು ಅವನ ಬಳಿಗೆ ತಂದರು. 24 ೨೪ ಅವರನ್ನು ತನ್ನ ಬಳಿಗೆ ತಂದನಂತರ ಯೆಹೋಶುವನು ಎಲ್ಲಾ ಇಸ್ರಾಯೇಲ್ಯರನ್ನು ಕರೆಸಿ ತನ್ನ ಜೊತೆಯಲ್ಲಿ ಬಂದಿದ್ದ ಸೈನ್ಯಾಧಿಪತಿಗಳಿಗೆ “ಹತ್ತಿರ ಬಂದು ಈ ಅರಸರ ಕೊರಳಿನ ಮೇಲೆ ಪಾದಗಳನ್ನಿಡಿರಿ” ಎಂದು ಹೇಳಿದನು. ಅವರು ಹತ್ತಿರ ಬಂದು ಅವರ ಕುತ್ತಿಗೆಯ ಮೇಲೆ ಕಾಲಿಟ್ಟರು. 25 ೨೫ ಆಗ ಅವನು ಅವರಿಗೆ “ಅಂಜಬೇಡಿರಿ, ಕಳವಳಗೊಳ್ಳಬೇಡಿರಿ; ಸ್ಥಿರಚಿತ್ತರಾಗಿ, ಧೈರ್ಯದಿಂದಿರಿ. ನಿಮ್ಮೊಡನೆ ಯುದ್ಧಕ್ಕೆ ಬರುವ ಎಲ್ಲಾ ವೈರಿಗಳಿಗೂ ಯೆಹೋವನು ಹೀಗೆಯೇ ಮಾಡುವನು” ಎಂದು ಹೇಳಿದನು. 26 ೨೬ ಅನಂತರ ಆ ಅರಸರನ್ನು ಕೊಲ್ಲಿಸಿ ಐದು ಮರಗಳಿಗೆ ನೇತುಹಾಕಿಸಿದನು. ಅವರ ಶವಗಳು ಸಾಯಂಕಾಲದವರೆಗೂ ಅಲ್ಲೇ ತೂಗಾಡುತ್ತಿದ್ದವು. 27 ೨೭ ಸೂರ್ಯಾಸ್ತಮಾನದ ಹೊತ್ತಿಗೆ ಜನರು ಯೆಹೋಶುವನ ಅಪ್ಪಣೆಯಂತೆ ಅವುಗಳನ್ನು ಮರಗಳಿಂದ ಕೆಳಗಿಳಿಸಿ ಅವರು ಅಡಗಿಕೊಂಡಿದ್ದ ಗವಿಯಲ್ಲಿಯೇ ಹಾಕಿ ಅದರ ಬಾಯಿಗೆ ದೊಡ್ಡ ಕಲ್ಲುಗಳನ್ನು ಹೊರಳಿಸಿದರು. ಆ ಕಲ್ಲುಗಳು ಇಂದಿನವರೆಗೂ ಅಲ್ಲೇ ಇರುತ್ತವೆ. 28 ೨೮ ಅದೇ ದಿನ ಯೆಹೋಶುವನು ಮಕ್ಕೇದವನ್ನು ಸ್ವಾಧೀನಪಡಿಸಿ ಕೊಂಡನು. ಅ ಊರಿನ ರಾಜ ಪ್ರಜೆಗಳೆಲ್ಲರನ್ನೂ ಕತ್ತಿಯಿಂದ ಸಂಹರಿಸಿದನು. ಒಬ್ಬನನ್ನೂ ಉಳಿಸಲಿಲ್ಲ. ಯೆರಿಕೋವಿನ ಅರಸನಿಗೆ ಮಾಡಿದಂತೆ ಈ ಅರಸನಿಗೂ ಮಾಡಿದನು. 29 ೨೯ ಯೆಹೋಶುವನು ಜನರೆಲ್ಲರ ಸಹಿತವಾಗಿ ಮಕ್ಕೇದದಿಂದ ಲಿಬ್ನಕ್ಕೆ ಹೋಗಿ ಅಲ್ಲಿಯವರೊಡನೆ ಯುದ್ಧಮಾಡಿದನು. 30 ೩೦ ಯೆಹೋವನು ಅದನ್ನೂ ಅದರ ಅರಸನನ್ನೂ ಇಸ್ರಾಯೇಲ್ಯರ ಕೈವಶಮಾಡಿದನು. ಅವರು ಅದರಲ್ಲಿದ್ದ ಜನರಲ್ಲಿ ಒಬ್ಬನನ್ನೂ ಉಳಿಸದೆ ಎಲ್ಲರನ್ನೂ ಕತ್ತಿಯಿಂದ ಸಂಹರಿಸಿದರು. ಯೆರಿಕೋವಿನ ಅರಸನಿಗಾದ ಗತಿಯೇ ಇವರ ಅರಸನಿಗೂ ಆಯಿತು. 31 ೩೧ ಅಲ್ಲಿಂದ ಯೆಹೋಶುವನು ಇಸ್ರಾಯೇಲ್ಯರ ಸಹಿತವಾಗಿ ಲಾಕೀಷಿಗೆ ಹೋಗಿ ಮುತ್ತಿಗೆಹಾಕಿ ಯುದ್ಧಮಾಡಿದನು. 32 ೩೨ ಯೆಹೋವನು ಅದನ್ನು ಇಸ್ರಾಯೇಲ್ಯರ ಕೈಗೆ ಒಪ್ಪಿಸಿದ್ದರಿಂದ, ಅವರು ಅದನ್ನು ಎರಡನೆಯ ದಿನದಲ್ಲಿ ಸ್ವಾಧೀನಮಾಡಿಕೊಂಡು ಅದನ್ನೂ ಅದರ ಜನರನ್ನೂ ಸಂಹರಿಸಿಬಿಟ್ಟರು. ಲಿಬ್ನದವರಿಗಾದ ಗತಿಯೇ ಇವರಿಗೂ ಆಯಿತು. 33 ೩೩ ಇದಲ್ಲದೆ ಯೆಹೋಶುವನು ಲಾಕೀಷಿನವರ ಸಹಾಯಕ್ಕೆ ಬಂದ ಗೆಜೆರಿನ ಅರಸನಾದ ಹೋರಾಮನನ್ನೂ ಅವನ ಪ್ರಜೆಗಳೆಲ್ಲರನ್ನೂ ಸದೆಬಡಿದನು. ಒಬ್ಬನೂ ಉಳಿಯಲಿಲ್ಲ. 34 ೩೪ ತರುವಾಯ ಯೆಹೋಶುವನು ಲಾಕೀಷನ್ನು ಬಿಟ್ಟು ಇಸ್ರಾಯೇಲ್ಯರೆಲ್ಲರ ಸಹಿತವಾಗಿ ಎಗ್ಲೋನಿಗೆ ಬಂದು ಮುತ್ತಿಗೆಹಾಕಿ ಯುದ್ಧಮಾಡಿದನು. 35 ೩೫ ಅವರು ಅದೇ ದಿನದಲ್ಲಿ ಅದನ್ನು ಹಿಡಿದು ಲಾಕೀಷಿನವರಿಗೆ ಮಾಡಿದಂತೆಯೇ ಅದನ್ನೂ ಅದರ ಜನರೆಲ್ಲರನ್ನೂ ಕತ್ತಿಯಿಂದ ಸಂಹರಿಸಿಬಿಟ್ಟರು. 36 ೩೬ ಅನಂತರ ಯೆಹೋಶುವನೂ, ಇಸ್ರಾಯೇಲರೂ ಎಗ್ಲೋನನ್ನು ಬಿಟ್ಟು ಹೆಬ್ರೋನಿಗೆ ಹೋಗಿ ಅದಕ್ಕೆ ವಿರೋಧವಾಗಿ ಯುದ್ಧಮಾಡಿ 37 ೩೭ ಅದಕ್ಕೆ ಸೇರಿದ ಊರುಗಳನ್ನೂ ಅದರ ರಾಜಪ್ರಜೆಗಳೆಲ್ಲರನ್ನೂ ಕತ್ತಿಯಿಂದ ಸಂಹರಿಸಿದರು. ಎಗ್ಲೋನಿನಲ್ಲಿ ಹೇಗೋ ಹಾಗೆಯೇ ಇಲ್ಲಿಯೂ ಒಬ್ಬನನ್ನೂ ಉಳಿಸಲಿಲ್ಲ; ಪಟ್ಟಣವನ್ನೂ ಜನರನ್ನೂ ನಾಶಮಾಡಿದರು. 38 ೩೮ ಅಲ್ಲಿಂದ ಯೆಹೋಶುವನೂ ಎಲ್ಲಾ ಇಸ್ರಾಯೇಲರೂ ದೆಬೀರಿಗೆ ಬಂದು ಅಲ್ಲಿಯವರೊಡನೆ ಯುದ್ಧಮಾಡಿದರು. 39 ೩೯ ಅದನ್ನೂ ಅದಕ್ಕೆ ಸೇರಿದ ಊರುಗಳನ್ನೂ ಹಿಡಿದುಕೊಂಡು ಅದರ ರಾಜಪ್ರಜೆಗಳೆಲ್ಲರನ್ನೂ ಕತ್ತಿಯಿಂದ ಸಂಹರಿಸಿದರು. ಒಬ್ಬನನ್ನೂ ಉಳಿಸಲಿಲ್ಲ. ಹೆಬ್ರೋನಿಗೂ ಅದರ ಅರಸನಿಗೂ ಲಿಬ್ನಕ್ಕೂ ಅದರ ಅರಸನಿಗೂ ಆದ ಗತಿಯೇ ದೆಬೀರಿಗೂ ಅದರ ಅರಸನಿಗೂ ಆಯಿತು. 40 ೪೦ ಹೀಗೆ ಯೆಹೋಶುವನು ಬೆಟ್ಟದ ಮೇಲಣ ಪ್ರದೇಶ, ದಕ್ಷಿಣಪ್ರಾಂತ್ಯ, ಇಳುಕಲ್ಲಿನ ಪ್ರದೇಶ, ಬೆಟ್ಟಗಳ ತಗ್ಗು ಪ್ರದೇಶ ಇವುಗಳನ್ನು ಸ್ವಾಧೀನಪಡಿಸಿಕೊಂಡು ಇವುಗಳ ರಾಜಪ್ರಜೆಗಳನ್ನು ಸಂಹರಿಸಿಬಿಟ್ಟನು. ಒಬ್ಬನನ್ನೂ ಉಳಿಸಲಿಲ್ಲ. ಇಸ್ರಾಯೇಲ್‍ ದೇವರಾದ ಯೆಹೋವನ ಆಜ್ಞೆಯಂತೆ ಜೀವವಿರುವುದೆಲ್ಲವನ್ನು ಸಂಹರಿಸಿದನು. 41 ೪೧ ಕಾದೇಶ್ ಬರ್ನೇಯದಿಂದ ಗಾಜಾ ಊರಿನ ವರೆಗೂ ಗೋಷೆನ್ ಪ್ರಾಂತ್ಯದಿಂದ ಗಿಬ್ಯೋನಿನವರೆಗೂ ಎಲ್ಲರನ್ನೂ ಸೋಲಿಸಿದನು. 42 ೪೨ ಇಸ್ರಾಯೇಲರ ದೇವರಾದ ಯೆಹೋವನು ಅವರ ಪರವಾಗಿ ಯುದ್ಧ ಮಾಡಿದ್ದರಿಂದ ಯೆಹೋಶುವನು ಈ ಎಲ್ಲಾ ರಾಜರನ್ನೂ ರಾಜ್ಯಗಳನ್ನೂ ಏಕಕಾಲದಲ್ಲಿ ವಶಮಾಡಿಕೊಂಡನು. 43 ೪೩ ತರುವಾಯ ಯೆಹೋಶುವನು ಎಲ್ಲಾ ಇಸ್ರಾಯೇಲ್ಯರೊಡನೆ ಗಿಲ್ಗಾಲಿನಲ್ಲಿದ್ದ ತನ್ನ ಪಾಳೆಯಕ್ಕೆ ಹಿಂದಿರುಗಿದನು.

< ಯೆಹೋಶುವನು 10 >