< ಯೋಬನು 31 >

1 “ಕನ್ಯೆಯನ್ನು ಕೆಟ್ಟದೃಷ್ಟಿಯಿಂದ ನೋಡುವುದಿಲ್ಲ ಎಂದು ನನ್ನ ಕಣ್ಣುಗಳೊಡನೆ ನಿಬಂಧನೆಯನ್ನು ಮಾಡಿಕೊಂಡಿದ್ದೇನೆ,
“ಕನ್ನಿಕೆಯನ್ನು ಕಾಮದೃಷ್ಟಿಯಿಂದ ನೋಡುವುದಿಲ್ಲವೆಂದು ನನ್ನ ಕಣ್ಣುಗಳೊಂದಿಗೆ ನಾನು ಒಡಂಬಡಿಕೆಯನ್ನು ಮಾಡಿಕೊಂಡೆನು.
2 ದೇವರು ಮೇಲಣ ಲೋಕದಿಂದ ಯಾವ ಪಾಲನ್ನು ವಿಧಿಸುವನು, ಸರ್ವಶಕ್ತನಾದ ದೇವರು ಉನ್ನತಾಕಾಶದಿಂದ ಕೊಡುವ ಬಾಧ್ಯತೆ ಯಾವುದು?
ದೇವರು ಮೇಲಣ ಲೋಕದಿಂದ ಯಾವ ಪಾಲನ್ನು ವಿಧಿಸುವರು? ಸರ್ವಶಕ್ತರು ಉನ್ನತಾಕಾಶದಿಂದ ಕೊಡುವ ಬಾಧ್ಯತೆ ಯಾವುದು?
3 ಆತನು ಅನ್ಯಾಯಗಾರರಿಗೆ ವಿಪತ್ತನ್ನೂ, ಕೆಡುಕರಿಗೆ ಉಪದ್ರವವನ್ನೂ ಕೊಡುತ್ತಾನಲ್ಲವೆ?
ದುಷ್ಟರಿಗೆ ವಿಪತ್ತು ಇಲ್ಲವೋ? ಕೆಡುಕರಿಗೆ ವಿನಾಶ ಇಲ್ಲವೋ?
4 ಆತನೇ ನನ್ನ ನಡತೆಯನ್ನು ನೋಡಿ ನನ್ನ ಹೆಜ್ಜೆಗಳನ್ನೆಲ್ಲಾ ಎಣಿಸುತ್ತಿದ್ದಾನೆ ಎಂದುಕೊಳ್ಳುತ್ತಿದ್ದೆನು.
ದೇವರು ನನ್ನ ಮಾರ್ಗಗಳನ್ನು ನೋಡಿ, ನನ್ನ ಹೆಜ್ಜೆಗಳನ್ನೆಲ್ಲಾ ಎಣಿಸುತ್ತಾರಲ್ಲವೆ?
5 ಒಂದು ವೇಳೆ ನಾನು ಕಪಟತನದ ಜೊತೆಯಲ್ಲಿ ನಡೆದು ಮೋಸವನ್ನು ಹಿಂಬಾಲಿಸಿ ಓಡಿದರೆ,
“ನಾನು ಕಪಟವಾಗಿ ನಡೆದುಕೊಂಡಿದ್ದರೆ, ಮೋಸಕ್ಕೆ ನನ್ನ ಕಾಲು ತ್ವರೆಪಟ್ಟಿದ್ದರೆ,
6 ದೇವರು ನನ್ನನ್ನು ನ್ಯಾಯವಾದ ತ್ರಾಸಿನಲ್ಲಿ ತೂಗಿ, ನನ್ನ ಯಥಾರ್ಥತ್ವವನ್ನು ತಿಳಿದುಕೊಳ್ಳಲಿ!
ದೇವರು ನ್ಯಾಯದ ತಕ್ಕಡಿಯಲ್ಲಿ ನನ್ನನ್ನು ತೂಗಿ ನೋಡಲಿ; ನಾನು ನಿರ್ದೋಷಿ ಎಂದು ದೇವರು ತಿಳಿದುಕೊಳ್ಳಲಿ.
7 ನನ್ನ ನಡತೆಯಲ್ಲಿ ದಾರಿತಪ್ಪಿದ್ದರೆ, ನನ್ನ ಹೃದಯವು ಕಂಡಕಂಡದ್ದನ್ನು ಹಿಂಬಾಲಿಸಿದ್ದರೆ, ನನ್ನ ಕೈಗಳಲ್ಲಿ ಕಲ್ಮಷವು ಅಂಟಿಕೊಂಡಿದ್ದರೆ,
ನಾನು ದಾರಿತಪ್ಪಿ ನಡೆದಿದ್ದರೆ, ನನ್ನ ಕಣ್ಣು ಕಂಡವುಗಳ ಹಿಂದೆ ನನ್ನ ಹೃದಯವು ಹೋಗಿದ್ದರೆ, ನನ್ನ ಅಂಗೈಗಳಲ್ಲಿ ದೋಷ ಅಂಟಿಕೊಂಡಿದ್ದರೆ,
8 ನಾನು ಬಿತ್ತಿದ್ದನ್ನು ಮತ್ತೊಬ್ಬನು ಉಣ್ಣಲಿ, ನನ್ನ ಬೆಳೆಯು ನಿರ್ಮೂಲವಾಗಲಿ!
ನಾನು ಬಿತ್ತುವುದನ್ನು ಬೇರೊಬ್ಬನು ಉಣ್ಣಲಿ; ನನ್ನ ಬೆಳೆಯು ಬುಡಮೇಲಾಗಲಿ.
9 ಒಂದು ವೇಳೆ ನನ್ನ ಹೃದಯವು ಪರಸ್ತ್ರೀಯಲ್ಲಿ ಮೋಹಗೊಂಡು, ನಾನು ನೆರೆಯವನ ಬಾಗಿಲಲ್ಲಿ ಹೊಂಚು ಹಾಕಿದ್ದರೆ,
“ನನ್ನ ಹೃದಯವು ಪರಸ್ತ್ರೀಗೆ ಮರುಳಾಗಿ, ನನ್ನ ನೆರೆಯವನ ಬಾಗಿಲ ಹತ್ತಿರ ನಾನು ಹೊಂಚುಹಾಕಿದ್ದರೆ,
10 ೧೦ ನನ್ನ ಹೆಂಡತಿಯು ಮತ್ತೊಬ್ಬನಿಗೆ ಧಾನ್ಯ ಬೀಸುವ ದಾಸಿಯಾಗಲಿ, ಇತರರು ಆಕೆಯನ್ನು ಸಂಗಮಿಸಲಿ!
ನನ್ನ ಹೆಂಡತಿ ಮತ್ತೊಬ್ಬನಿಗೋಸ್ಕರ ಧಾನ್ಯಬೀಸಲಿ, ಮತ್ತೊಬ್ಬರು ಅವಳ ಸಂಗಡ ಮಲಗಲಿ.
11 ೧೧ ನಾನು ಹೀಗೆ ಮಾಡಿದ್ದರೆ ಅದು ದುಷ್ಕಾರ್ಯವೇ ಸರಿ, ಆ ಅಪರಾಧವು ನ್ಯಾಯಾಧಿಪತಿಗಳ ದಂಡನೆಗೆ ಯೋಗ್ಯವಾದದ್ದು.
ಏಕೆಂದರೆ ನಾನು ಹಾಗೆಲ್ಲಾ ಮಾಡಿದ್ದರೆ, ಅಂಥ ನಡತೆ ದುಷ್ಕಾರ್ಯವಾಗುತ್ತಿತ್ತು, ಆ ಅಪರಾಧವು ನ್ಯಾಯಾಧಿಪತಿಗಳ ದಂಡನೆಗೆ ಯೋಗ್ಯವಾಗುತ್ತಿತ್ತು.
12 ೧೨ ಅದು ನಾಶ ಲೋಕದವರೆಗೂ ನುಂಗುವ ಬೆಂಕಿಯಾಗಿದ್ದು, ನನ್ನ ಆದಾಯವನ್ನೆಲ್ಲಾ ನಿರ್ಮೂಲಮಾಡುತ್ತಿತ್ತು.
ಅದು ನಾಶಲೋಕದವರೆಗೆ ದಹಿಸುವಂಥಾ ಅಗ್ನಿಯಾಗುತ್ತಿತ್ತು, ಅದು ನನ್ನ ಆದಾಯವನ್ನೆಲ್ಲಾ ನಿರ್ಮೂಲ ಮಾಡುತ್ತಿತ್ತು.
13 ೧೩ ಒಂದು ವೇಳೆ ನನಗೂ, ನನ್ನ ದಾಸನಿಗೂ, ಇಲ್ಲವೆ ದಾಸಿಗೂ ವ್ಯಾಜ್ಯವಾದಾಗ, ನಾನು ಅವರ ನ್ಯಾಯವನ್ನು ಅಲಕ್ಷ್ಯಮಾಡಿದ್ದರೆ
“ಒಂದು ವೇಳೆ ನನಗೂ ನನ್ನ ದಾಸದಾಸಿಯರಿಗೂ ನನ್ನ ಮೇಲೆ ವ್ಯಾಜ್ಯವಾದಾಗ, ನಾನು ಅವರ ನ್ಯಾಯವನ್ನು ತಿರಸ್ಕರಿಸಿದ್ದರೆ,
14 ೧೪ ದೇವರು ನ್ಯಾಯಸ್ಥಾಪನೆಗೆ ಏಳುವಾಗ ನಾನು ಏನು ಮಾಡೆನು? ಆತನು ವಿಚಾರಿಸುವಾಗ ಯಾವ ಉತ್ತರಕೊಟ್ಟೇನು?
ದೇವರು ನ್ಯಾಯಸ್ಥಾಪನೆಗೆ ಏಳುವಾಗ ನಾನು ಏನು ಮಾಡುತ್ತಿದ್ದೆನು? ದೇವರು ವಿಚಾರಿಸುವಾಗ, ನಾನು ಅವರಿಗೆ ಏನು ಉತ್ತರಕೊಡುತ್ತಿದ್ದೆನು?
15 ೧೫ ನನ್ನನ್ನು ಗರ್ಭದಲ್ಲಿ ನಿರ್ಮಿಸಿದಾತನೇ ಅವನನ್ನೂ ನಿರ್ಮಿಸಲಿಲ್ಲವೋ? ಆತನೊಬ್ಬನೇ ನಮ್ಮಿಬ್ಬರನ್ನೂ ಗರ್ಭದಲ್ಲಿ ರೂಪಿಸಿದನಲ್ಲವೇ.
ಗರ್ಭದಲ್ಲಿ ನನ್ನನ್ನು ಉಂಟುಮಾಡಿದ ದೇವರೇ ಅವರನ್ನೂ ಉಂಟು ಮಾಡಿದ್ದಾರಲ್ಲವೇ? ಅವರನ್ನೂ, ನನ್ನನ್ನೂ ತಾಯಂದಿರ ಗರ್ಭದಲ್ಲಿ ರೂಪಿಸಿದ ದೇವರು ಒಬ್ಬರೇ ಅಲ್ಲವೇ?
16 ೧೬ ನಾನು ಬಡವರ ಇಷ್ಟವನ್ನು ಭಂಗಪಡಿಸಿದೆನೋ? ಅಥವಾ ವಿಧವೆಯ ಕಣ್ಣುಗಳನ್ನು ಮಂಕಾಗಿಸಿದೆನೋ?
“ನಾನು ಬಡವರ ಬಯಕೆಗಳನ್ನು ಭಂಗಪಡಿಸಿದೆನೋ? ವಿಧವೆಯ ಕಣ್ಣುಗಳನ್ನು ನಾನು ಮಂಕಾಗಿಸಿದೆನೋ?
17 ೧೭ ಅಥವಾ ನನಗಿರುವ ತುತ್ತು ಅನ್ನದಲ್ಲಿ ಅನಾಥರಿಗೆ ಏನೂ ಕೊಡದೆ, ನಾನೊಬ್ಬನೇ ತಿಂದೆನೋ?
ದಿಕ್ಕಿಲ್ಲದವರು ಊಟ ಉಣ್ಣದ ಹಾಗೆ, ನಾನು ಮಾತ್ರ ತುತ್ತನ್ನೆಲ್ಲಾ ಒಂಟಿಯಾಗಿ ತಿಂದೆನೋ?
18 ೧೮ ಹಾಗಲ್ಲ, ನಾನು ಬಾಲ್ಯದಿಂದಲೂ ತಂದೆಯ ರೀತಿಯಲ್ಲಿ ಅನಾಥನನ್ನು ಸಾಕುತ್ತಾ, ನಾನು ಹುಟ್ಟಿದಂದಿನಿಂದಲು ಅನಾಥಳಿಗೆ ದಾರಿತೋರಿಸುತ್ತಾ ಇದ್ದೇನಷ್ಟೆ.
ಇಲ್ಲಾ, ನನ್ನ ಯೌವನಕಾಲದಿಂದ ನಾನು ಅನಾಥರನ್ನು ತಂದೆಯಂತೆ ಬೆಳೆಸಿದೆನು. ಹುಟ್ಟಿದಂದಿನಿಂದ ವಿಧವೆಯರಿಗೆ ಮಾರ್ಗದರ್ಶಿಯಾಗಿದ್ದೆನು.
19 ೧೯ ಬಟ್ಟೆಯಿಲ್ಲದೆ ಅಳಿದುಹೋಗುವವನನ್ನೂ, ಹೊದಿಕೆಯಿಲ್ಲದ ಬಡವನನ್ನೂ ನಾನು ಕಂಡಾಗೆಲ್ಲಾ,
ಬಟ್ಟೆ ಇಲ್ಲದೆ ಕಷ್ಟಪಡುವವರನ್ನೂ, ಹೊದಿಕೆ ಇಲ್ಲದೆ ನಡುಗುವವರನ್ನೂ ನಾನು ನೋಡಿದಾಗೆಲ್ಲಾ,
20 ೨೦ ಅವರ ಸೊಂಟವು ನನ್ನ ಕುರಿಗಳ ಉಣ್ಣೆಯಿಂದ ಬೆಚ್ಚಗಾಗಿ, ನಾನು ಅವರಿಂದ ಹರಸಲ್ಪಡಲಿಲ್ಲವೋ?
ಆ ಬಡವರು ನನ್ನ ಕುರಿ ಉಣ್ಣೆಯಿಂದ ಬೆಚ್ಚಗಾಗಿ, ತಮ್ಮ ಅಂತರಾಳದಿಂದ ನನ್ನನ್ನು ಹರಸಲಿಲ್ಲವೋ?
21 ೨೧ ನ್ಯಾಯಸ್ಥಾನದಲ್ಲಿ ನನಗೆ ಸಹಾಯ ಉಂಟೆಂದು, ಅನಾಥನ ಮೇಲೆ ಕೈಮಾಡಿದೆನೋ?
ನ್ಯಾಯಸ್ಥಾನದಲ್ಲಿ ನನಗೆ ಬೆಂಬಲ ಉಂಟೆಂದು ಕಂಡು, ನಾನು ದಿಕ್ಕಿಲ್ಲದವರ ಮೇಲೆ ನನ್ನ ಕೈಮಾಡಿದ್ದರೆ,
22 ೨೨ ಹೀಗಿದ್ದರೆ ನನ್ನ ಹೆಗಲಿನ ಕೀಲು ತಪ್ಪಲಿ, ತೋಳು ಸಂದಿನಿಂದ ಮುರಿದು ಬೀಳಲಿ.
ನನ್ನ ಹೆಗಲು, ಬೆನ್ನಿನ ಕೀಲು ತಪ್ಪಿಹೋಗಲಿ; ನನ್ನ ತೋಳು ಅದರ ಸಂದಿನಿಂದ ಕಳಚಿಬೀಳಲಿ.
23 ೨೩ ದೇವರಿಂದ ಬರುವ ವಿಪತ್ತಿಗೆ ಹೆದರಿಕೊಂಡಿದ್ದೆನಷ್ಟೆ, ಆತನ ಪ್ರಭಾವದ ದೆಸೆಯಿಂದ ನಾನು ಇಂಥ ಕೃತ್ಯವನ್ನು ಮಾಡುವುದಕ್ಕಾಗಲಿಲ್ಲ.
ಏಕೆಂದರೆ ದೇವರಿಂದ ಬರುವ ವಿಪತ್ತಿನ ಬಗ್ಗೆ ನನಗೆ ಹೆದರಿಕೆಯಾಯಿತು; ದೇವರ ಪ್ರಭಾವದ ಭಯದ ನಿಮಿತ್ತ ನಾನು ಇಂಥ ಕೃತ್ಯವನ್ನು ಮಾಡುವುದಕ್ಕೆ ಸಾಧ್ಯವಾಗಲಿಲ್ಲ.
24 ೨೪ ಒಂದು ವೇಳೆ ನಾನು ಬಂಗಾರದಲ್ಲಿ ಭರವಸವಿಟ್ಟು, ಅಪರಂಜಿಗೆ, ‘ನಿನ್ನನ್ನೇ ನಂಬಿದ್ದೇನೆ’ ಎಂದು ಹೇಳಿದ್ದರೆ,
“ನಾನು ಬಂಗಾರದಲ್ಲಿ ನನ್ನ ನಿರೀಕ್ಷೆಯನ್ನು ಇಟ್ಟಿದ್ದರೆ, ಅಪರಂಜಿಗೆ, ‘ನೀನು ನನ್ನ ಭದ್ರತೆ,’ ಎಂದು ಹೇಳಿದ್ದರೆ,
25 ೨೫ ನನ್ನ ಆಸ್ತಿ ದೊಡ್ಡದೆಂದೂ, ನನ್ನ ಕೈಯೇ ಬಹು ಸಂಪತ್ತನ್ನು ಪಡೆಯಿತೆಂದೂ ಹೆಚ್ಚಳಪಟ್ಟಿದ್ದರೆ,
ನನ್ನ ಐಶ್ವರ್ಯವು ಬಹಳ ಎಂದು ಕೊಚ್ಚಿಕೊಂಡಿದ್ದರೆ, ನನ್ನ ಕೈ ಬಹಳ ಸಂಪಾದಿಸಿದೆ ಎಂದು ನಾನು ಸಂತೋಷಪಟ್ಟಿದ್ದರೆ,
26 ೨೬ ಸೂರ್ಯನು ಪ್ರಕಾಶಿಸುವುದನ್ನಾಗಲಿ, ಚಂದ್ರನು ಕಳೆತುಂಬಿದವನಾಗಿ ಚಲಿಸುವುದನ್ನಾಗಲಿ ನಾನು ನೋಡಿದಾಗ,
ನಾನು ಸೂರ್ಯನು ಹೊಳೆಯುವುದನ್ನು ಗಮನಿಸಿ, ಚಂದ್ರನು ಪ್ರಭೆಯಲ್ಲಿ ಚಲಿಸುವುದನ್ನು ನೋಡಿ,
27 ೨೭ ಹೃದಯವು ಮರುಳುಗೊಂಡು, ಕೈಯನ್ನು ಬಾಯಿ ಮುದ್ದಾಡಿದ್ದರೆ,
ನನ್ನ ಹೃದಯವು ಮರುಳುಗೊಂಡು, ನನ್ನ ಕೈ ಅವುಗಳನ್ನು ನನ್ನ ಬಾಯಿಂದ ಗೌರವದಿಂದ ಮುಗಿದಿದ್ದರೆ,
28 ೨೮ ಇದು ಸಹ ನ್ಯಾಯಾಧಿಪತಿಗಳ ದಂಡನೆಗೆ ಯೋಗ್ಯವಾದದ್ದು, ಮೇಲಣ ಲೋಕದ ದೇವರಿಗೆ ದ್ರೋಹಿಯಾದಂತಾಯಿತು.
ಇದು ಸಹ ನ್ಯಾಯಾಧಿಪತಿಯ ದಂಡನೆಗೆ ಯೋಗ್ಯವಾಗುತ್ತಿತ್ತು; ಏಕೆಂದರೆ, ಆಗ ನಾನು ಉನ್ನತದಲ್ಲಿರುವ ದೇವರಿಗೆ ದ್ರೋಹಿಯಾಗುತ್ತಿದ್ದೆನು.
29 ೨೯ ನನ್ನನ್ನು ದ್ವೇಷಿಸುವವನಿಗೆ ಕೇಡು ಬಂದಾಗ ಉಬ್ಬಿಕೊಂಡು, ಅವನ ನಾಶನಕ್ಕೆ ಹಿಗ್ಗಿದೆನೋ?
“ವೈರಿಯ ನಾಶಕ್ಕೆ ನಾನು ಸಂತೋಷಪಟ್ಟು, ವೈರಿಗೆ ಕೇಡು ಬಂದಾಗ ಹಿಗ್ಗಿಕೊಂಡು ಗರ್ವಪಟ್ಟೆನೋ?
30 ೩೦ ಇಲ್ಲವೇ ಇಲ್ಲ, ನನ್ನ ಬಾಯಿ ಅವನನ್ನು ಶಪಿಸಿ ಅವನ ಪ್ರಾಣ ಹೋಗಲಿ ಎಂದು ಬೇಡಿಕೊಂಡು ಪಾಪವಶವಾಗುವುದಕ್ಕೆ ನಾನು ಒಪ್ಪಲೇ ಇಲ್ಲ.
ಇಲ್ಲ, ಅವನ ಸಾಯಲಿ ಎಂದು ನಾನು ಶಾಪ ಕೊಡಲಿಲ್ಲ. ನಾನು ನನ್ನ ಬಾಯಿಂದ ಅಂಥ ಪಾಪಮಾಡಲಿಲ್ಲ.
31 ೩೧ ನನ್ನ ಗುಡಾರದ ಆಳುಗಳು, ‘ನಮ್ಮ ಯಜಮಾನ ಬಡಿಸಿದ ಮಾಂಸದಿಂದ ತೃಪ್ತರಾಗದವರು ಎಲ್ಲಿಯೂ ಸಿಕ್ಕಲಾರರು’ ಎಂದು ಹೇಳಿಕೊಳ್ಳುತ್ತಿರಲಿಲ್ಲವೋ?
ನನ್ನ ಮನೆಯ ಕೆಲಸದವರು, ‘ಯೋಬನು ನೀಡಿದ ಭೋಜನದಿಂದ ತೃಪ್ತರಾಗದವರು ಯಾರು?’ ಎಂದು ಹೇಳಿಕೊಳ್ಳುತ್ತಿದ್ದರಲ್ಲವೆ?
32 ೩೨ ಪರಸ್ಥಳದವನು ಬಯಲಿನಲ್ಲಿ ಇಳಿದುಕೊಳ್ಳಲಿಲ್ಲವಲ್ಲಾ, ದಾರಿಗೆ ನನ್ನ ಮನೆಯ ಬಾಗಿಲುಗಳನ್ನು ತೆರೆದಿದ್ದೆನಷ್ಟೆ.
ಆದರೆ ಯಾವ ಪರದೇಶಸ್ಥರೂ ಬೀದಿಯಲ್ಲಿ ತಂಗಬೇಕಾಗಿರಲಿಲ್ಲ; ಪ್ರಯಾಣಿಕರಿಗೆ ನನ್ನ ಬಾಗಿಲು ಸದಾ ತೆರೆದಿಟ್ಟಿದ್ದೆನು.
33 ೩೩ ಮನುಷ್ಯನು ಜನ ಸಮುದಾಯಕ್ಕೆ ಹೆದರಿದ್ದರಿಂದಾಗಲಿ, ಕುಲೀನರ ತಿರಸ್ಕಾರವು ನನಗೆ ಭಯ ಹುಟ್ಟಿಸಿದ್ದರಿಂದಾಗಲಿ,
ನಾನು ಹೃದಯದಲ್ಲಿ ನನ್ನ ಅಪರಾಧ ಪ್ರಜ್ಞೆಯನ್ನು ಅಡಗಿಸಿ, ಮಾನವರಂತೆ ನನ್ನ ದ್ರೋಹವನ್ನು ಮುಚ್ಚಿಕೊಳ್ಳಲಿಲ್ಲ.
34 ೩೪ ನಾನು ಬಾಗಿಲು ದಾಟದೆ ಮೌನವಾಗಿದ್ದು, ಸಾಮಾನ್ಯ ಜನರ ಹಾಗೆ ನನ್ನ ದ್ರೋಹಗಳನ್ನು ಮರೆಮಾಡಿ, ಎದೆಯಲ್ಲಿ ನನ್ನ ಪಾಪವನ್ನು ಬಚ್ಚಿಟ್ಟುಕೊಂಡಿದ್ದರೆ,
ನಾನು ದೊಡ್ಡ ಸಮೂಹಕ್ಕೆ ಹೆದರಿದೆನೋ? ಕುಲಗಳ ಅವಹೇಳನಕ್ಕೆ ಕಳವಳಗೊಂಡರೂ, ಬಾಗಿಲಿನಿಂದ ಹೊರಗೆ ಹೋಗದೆ ಮೌನವಾಗಿದ್ದೆನೋ?
35 ೩೫ ಅಯ್ಯೋ, ನನ್ನ ಕಡೆಗೆ ಕಿವಿಗೊಡತಕ್ಕವನು ಇದ್ದರೆ ಎಷ್ಟೋ ಲೇಸು! ಇದೇ ನನ್ನ ಕೈಗುರುತು ನೋಡಿರಿ, ಸರ್ವಶಕ್ತನಾದ ದೇವರು ನನಗೆ ಉತ್ತರಕೊಡಲಿ! ನನ್ನ ವಿರೋಧಿಯು ಬರೆದುಕೊಂಡ ಅಪಾದನೆಯ ಪತ್ರವು ನನಗೆ ಸಿಕ್ಕಿದರೆ ಎಷ್ಟೋ ಸಂತೋಷ!
“ನನ್ನ ಕರೆಗೆ ಕಿವಿಗೊಡತಕ್ಕವರು ಒಬ್ಬರು ಈಗ ಇದ್ದರೆ ಎಷ್ಟೋ ಲೇಸು! ಸರ್ವಶಕ್ತರು ನನಗೆ ಉತ್ತರಕೊಡಲಿ; ನನ್ನ ವಿರೋಧಿಯು ನನ್ನ ಆಪಾದನಾ ಪತ್ರವನ್ನು ಬರೆದು ಕೊಡಲಿ.
36 ೩೬ ಅದನ್ನು ಹೆಗಲ ಮೇಲೆ ಇಟ್ಟುಕೊಳ್ಳುತ್ತಿದ್ದೆನು, ಕಿರೀಟವನ್ನಾಗಿ ಧರಿಸುತ್ತಿದ್ದೆನು.
ನಾನು ನನ್ನ ಹೆಗಲಲ್ಲಿ ಆ ಲಿಖಿತವನ್ನು ನಿಶ್ಚಯವಾಗಿ ಹೊತ್ತು ನಡೆಯುತ್ತಿದ್ದೆ; ಅದನ್ನು ಕಿರೀಟವಾಗಿ ಧರಿಸಿಕೊಳ್ಳುತ್ತಿದ್ದೆನು.
37 ೩೭ ಪ್ರಭುವಿನಂತೆ ಆತನ ಸಾನ್ನಿಧ್ಯದಲ್ಲಿ ಪ್ರವೇಶಿಸಿ ನನ್ನ ಹೆಜ್ಜೆಗಳ ಲೆಕ್ಕವನ್ನು, ಆತನಿಗೆ ಅರಿಕೆಮಾಡಿಕೊಳ್ಳುತ್ತಿದ್ದೆನು.
ನನ್ನ ಹೆಜ್ಜೆಗಳ ಲೆಕ್ಕವನ್ನು ದೇವರಿಗೆ ಒಪ್ಪಿಸುತ್ತಿದ್ದೆನು; ಒಬ್ಬ ಅಧಿಪತಿಯಂತೆ ನಾನು ದೇವರನ್ನು ಸಮೀಪಿಸುತ್ತಿದ್ದೆನು.
38 ೩೮ ನನ್ನ ಭೂಮಿಯು ನನ್ನ ಮೇಲೆ ಕೂಗಿಕೊಂಡರೆ ಅದರ ನೇಗಿಲ ಗೆರೆಗಳೆಲ್ಲಾ ಅತ್ತರೆ,
“ನನ್ನ ಹೊಲ ನನಗೆ ವಿರೋಧವಾಗಿ ಪ್ರತಿಭಟಿಸಿದ್ದರೆ, ಅದರ ನೇಗಿಲ ಗೆರೆಗಳೆಲ್ಲಾ ದೂರಿ ಅಳುತ್ತಿದ್ದರೆ,
39 ೩೯ ನಾನು ಹಣಕೊಡದೆ ಅದರ ಸಾರವನ್ನು ಅನುಭವಿಸಿ, ಅದರ ದಣಿಗಳ ಪ್ರಾಣ ಹಾನಿಗೆ ಕಾರಣನಾಗಿದ್ದರೆ,
ಕೂಲಿಕೊಡದೆ ಭೂಮಿಯ ಫಲವನ್ನು ನಾನು ತಿಂದಿದ್ದರೆ, ಅದರ ಯಜಮಾನರ ಪ್ರಾಣಹಾನಿಗೆ ಕಾರಣನಾಗಿದ್ದರೆ,
40 ೪೦ ಗೋದಿಗೆ ಬದಲಾಗಿ ಮುಳ್ಳುಗಳೂ, ಜವೆಗೋದಿಗೆ ಪ್ರತಿಯಾಗಿ ಕೆಟ್ಟ ಕಳೆಗಳೂ ಬೆಳೆಯಲಿ.” ಎಂದನು. ಹೀಗೆ ಯೋಬನ ಮಾತುಗಳು ಮುಗಿದವು.
ಗೋಧಿಗೆ ಬದಲಾಗಿ ಮುಳ್ಳುಗಳೂ, ಜವೆಗೋಧಿಗೆ ಬದಲಾಗಿ ಕಳೆಗಳೂ ಬೆಳೆಯಲಿ.” ಹೀಗೆ ಯೋಬನ ಮಾತುಗಳು ಮುಗಿದವು.

< ಯೋಬನು 31 >