< ಯೆರೆಮೀಯನು 2 >

1 ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು,
ಯೆಹೋವ ದೇವರು ನನಗೆ ದಯಪಾಲಿಸಿದ ಸಂದೇಶ ಇದು:
2 “ನೀನು ಹೋಗಿ ಯೆರೂಸಲೇಮಿನ ಕಿವಿಗೆ ಮುಟ್ಟುವಂತೆ ಈ ಮಾತುಗಳನ್ನು ಸಾರು, ‘ಯೆಹೋವನು ಹೀಗೆನ್ನುತ್ತಾನೆ, ನೀನು ಯೌವನದಲ್ಲಿ ನನ್ನ ಮೇಲೆ ಇಟ್ಟಿದ್ದ ಪ್ರೀತಿಯನ್ನೂ, ವಿವಾಹಕಾಲದ ನಿನ್ನ ಪ್ರೇಮವನ್ನೂ, ನೀನು ಬಿತ್ತನೆ ಮಾಡದ ಅರಣ್ಯದಲ್ಲಿ ನನ್ನನ್ನು ಹಿಂಬಾಲಿಸಿದ ನಿನ್ನ ಪಾತಿವ್ರತ್ಯವನ್ನೂ ನಿನ್ನ ಹಿತಕ್ಕಾಗಿ ಜ್ಞಾಪಕದಲ್ಲಿಟ್ಟಿದ್ದೇನೆ.
“ನೀನು ಹೋಗಿ ಯೆರೂಸಲೇಮ್ ನಗರಕ್ಕೆ ಕೇಳಿಸುವಂತೆ ಈ ಸಂದೇಶವನ್ನು ಸಾರು: “ಯೆಹೋವ ದೇವರು ಹೀಗೆನ್ನುತ್ತಾರೆ, “‘ನೀನು ಯೌವನದಲ್ಲಿ ನನ್ನ ಮೇಲಿಟ್ಟಿದ್ದ ಪ್ರೀತಿಯನ್ನು, ನವವಧುವಾಗಿ ನನಗೆ ತೋರಿಸಿದ ಪ್ರೇಮವನ್ನು, ಹಾಗು ಬಿತ್ತನೆ ಇಲ್ಲದ ಅರಣ್ಯ ಮಾರ್ಗವಾಗಿ ನನ್ನನ್ನು ಹಿಂಬಾಲಿಸಿದಾಗ ಅನುಸರಿಸುತ್ತಿದ್ದ ನಿನ್ನ ಪಾತಿವ್ರತ್ಯವನ್ನು ನನ್ನ ನೆನಪಿನಲ್ಲಿ ಇಟ್ಟುಕೊಂಡಿದ್ದೇನೆ, ಇದು ನಿನ್ನ ಹಿತಕ್ಕಾಗಿಯೇ.
3 ಇಸ್ರಾಯೇಲ್ ಯೆಹೋವನ ಬೆಳೆಯ ಪ್ರಥಮಫಲವಾಗಿ ಆತನಿಗೆ ಮೀಸಲಾಗಿತ್ತು; ಅದನ್ನು ತಿಂದವರೆಲ್ಲರೂ ದೋಷಿಗಳಾಗಿ ಕೇಡಿಗೆ ಗುರಿಯಾಗುವರು. ಇದು ಯೆಹೋವನು ನುಡಿ.’”
ಇಸ್ರಾಯೇಲು ಯೆಹೋವ ದೇವರಿಗೆ ಪರಿಶುದ್ಧವೂ, ಆತನ ಹುಟ್ಟುವಳಿಯ ಪ್ರಥಮ ಫಲವೂ ಆಗಿದೆ ಅವಳನ್ನು ತಿಂದು ಬಿಟ್ಟವರೆಲ್ಲರೂ ಅಪರಾಧಿಗಳಾಗುವರು. ಅವರಿಗೆ ಕೇಡು ಬರುವುದು,’” ಎಂದು ಯೆಹೋವ ದೇವರು ಹೇಳುತ್ತಾರೆ.
4 ಯಾಕೋಬನ ಮನೆತನವೇ, ಇಸ್ರಾಯೇಲ್ ವಂಶದ ಸಕಲ ಗೋತ್ರಗಳೇ, ಯೆಹೋವನ ವಾಕ್ಯವನ್ನು ಕೇಳಿರಿ;
ಓ ಯಾಕೋಬಿನ ಮನೆತನವೇ, ಇಸ್ರಾಯೇಲಿನ ಮನೆತನದ ಎಲ್ಲಾ ಕುಲಗಳೇ, ಯೆಹೋವ ದೇವರ ವಾಕ್ಯವನ್ನು ನೀವು ಕೇಳಿರಿ.
5 ಯೆಹೋವನು ಹೀಗೆನ್ನುತ್ತಾನೆ, “ನಿಮ್ಮ ಪೂರ್ವಿಕರು ನನ್ನಲ್ಲಿ ಯಾವ ಅನ್ಯಾಯವನ್ನು ಕಂಡು, ವ್ಯರ್ಥಾಚರಣೆಯನ್ನು ಅನುಸರಿಸಿ ತಾವೇ ಅಯೋಗ್ಯರಾಗಿ ನನ್ನನ್ನು ಬಿಟ್ಟು ದೂರವಾದರು?
ಯೆಹೋವ ದೇವರು ಹೀಗೆ ಹೇಳುತ್ತಾರೆ: “ನಿಮ್ಮ ತಂದೆಗಳು ನನಗೆ ದೂರವಾಗಿ ವ್ಯರ್ಥತ್ವವನ್ನು ಹಿಂದಟ್ಟಿ, ವ್ಯರ್ಥವಾಗುವ ಹಾಗೆ ನನ್ನಲ್ಲಿ ಏನು ತಪ್ಪನ್ನು ಕಂಡಿದ್ದಾರೆ?
6 ‘ನಮ್ಮನ್ನು ಐಗುಪ್ತ ದೇಶದೊಳಗಿಂದ ಬರಮಾಡಿ ಕಾಡಾಗಿಯೂ, ಹಳ್ಳಕೊಳ್ಳವಾಗಿಯೂ, ನಿರ್ಜಲವಾಗಿಯೂ, ಘೋರಾಂಧಕಾರವಾಗಿಯೂ, ಯಾರೂ ಹಾದುಹೋಗದೆಯೂ, ಯಾರೂ ವಾಸಿಸದೆಯೂ ಇರುವ ಅರಣ್ಯದಲ್ಲಿ ನಡೆಸಿದ ಯೆಹೋವನು ಎಲ್ಲಿ?’ ಎಂದು ಅವರು ಅಂದುಕೊಳ್ಳಲಿಲ್ಲವಲ್ಲ.
ಅವರು, ‘ನಮ್ಮನ್ನು ಈಜಿಪ್ಟ್ ದೇಶದೊಳಗಿಂದ ಹೊರಗೆ ಬರಮಾಡಿ ನಮ್ಮನ್ನು ಮರುಭೂಮಿಯಲ್ಲಿ ಕಾಡು ಕುಳಿಗಳು ಉಳ್ಳ ದೇಶದಲ್ಲಿ, ಕ್ಷಾಮದ ಮತ್ತು ಮರಣದ ನೆರಳಾದಂಥ ದೇಶದಲ್ಲಿ, ಒಬ್ಬರೂ ಹಾದುಹೋಗದೆ ಯಾರೂ ವಾಸಮಾಡದೆ ಇರುವಲ್ಲಿ ನಡೆಸಿದ ಯೆಹೋವ ದೇವರು ಎಲ್ಲಿ?’ ಎಂದು ಪ್ರಶ್ನೆ ಮಾಡಲಿಲ್ಲ.
7 ನಾನು ನಿಮ್ಮನ್ನು ಫಲವತ್ತಾದ ಸೀಮೆಗೆ ಕರೆತಂದು, ಅದರ ಫಲವನ್ನು ಮತ್ತು ಸಾರವನ್ನು ಅನುಭವಿಸುವ ಹಾಗೆ ಮಾಡಿದೆನು. ಆದರೆ ನೀವು ಆ ನನ್ನ ದೇಶವನ್ನು ಪ್ರವೇಶಿಸಿ, ಅದನ್ನು ಹೊಲೆ ಮಾಡಿ, ನನ್ನ ಸ್ವತ್ತನ್ನು ಅಸಹ್ಯಪಡಿಸಿದಿರಿ.
ನಾನು ನಿಮ್ಮನ್ನು ಸಮೃದ್ಧಿಯಾದ ದೇಶಕ್ಕೆ ಅದರ ಸಾರವನ್ನೂ, ಮೇಲನ್ನೂ ತಿನ್ನುವ ಹಾಗೆ ಕರೆದುಕೊಂಡು ಬಂದೆನು. ಆದರೆ ನೀವು ಬಂದು ನನ್ನ ದೇಶವನ್ನು ಅಶುದ್ಧಮಾಡಿ, ನನ್ನ ಸೊತ್ತನ್ನು ಅಸಹ್ಯ ಮಾಡಿದಿರಿ.
8 ಯಾಜಕರು, ‘ಯೆಹೋವನು ಎಲ್ಲಿ?’ ಎಂಬುದನ್ನು ವಿಚಾರಿಸಲಿಲ್ಲ. ಧರ್ಮೋಪದೇಶಕರು ನನ್ನನ್ನು ತಿಳಿಯಲ್ಲಿಲ್ಲ, ಪಾಲಕರು ನನಗೆ ದ್ರೋಹಮಾಡಿದರು, ಪ್ರವಾದಿಗಳು ಬಾಳ್ ದೇವತೆಯ ಆವೇಶದಿಂದ ಪ್ರವಾದಿಸಿ ಕೆಲಸಕ್ಕೆ ಬಾರದವುಗಳನ್ನು ಆರಾಧಿಸಿದರು.
ಯಾಜಕರು, ‘ಯೆಹೋವ ದೇವರು ಎಲ್ಲಿ?’ ಎಂದು ಕೇಳಲಿಲ್ಲ. ದೈವನಿಯಮವನ್ನು ಉಪದೇಶಿಸುವವರು ನನ್ನನ್ನು ತಿಳಿಯಲಿಲ್ಲ. ನಾಯಕರು ನನಗೆ ವಿರೋಧವಾಗಿ ದ್ರೋಹಮಾಡಿದರು. ಪ್ರವಾದಿಗಳು ಬಾಳನಿಂದ ಪ್ರವಾದಿಸಿದರು. ಪ್ರಯೋಜನವಿಲ್ಲದವುಗಳನ್ನು ಹಿಂದಟ್ಟಿದರು.
9 ಆದಕಾರಣ ನಾನು ನಿಮ್ಮೊಂದಿಗೆ ಇನ್ನೂ ವ್ಯಾಜ್ಯ ಮಾಡುವೆನು. ನಾನು ನಿಮ್ಮ ಸಂತಾನದವರೊಂದಿಗೂ ವ್ಯಾಜ್ಯ ಮಾಡುವೆನು” ಎಂದು ಯೆಹೋವನು ನುಡಿಯುತ್ತಾನೆ.
“ಆದ್ದರಿಂದ ಇನ್ನು ನಿಮ್ಮ ಸಂಗಡ ವ್ಯಾಜ್ಯವಾಡುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ. “ಇದಲ್ಲದೆ ನಿಮ್ಮ ಮಕ್ಕಳ ಸಂಗಡ ವ್ಯಾಜ್ಯವಾಡುವೆನು.
10 ೧೦ “ಕಿತ್ತೀಮ್ ದ್ವೀಪಗಳಿಗೆ ಹೋಗಿ ನೋಡಿರಿ, ಕೇದಾರಿಗೆ ಕಳುಹಿಸಿ ವಿಚಾರಮಾಡಿರಿ, ಇಂತಹ ಕಾರ್ಯವು ಎಲ್ಲಿಯಾದರೂ ನಡೆಯಿತೇ ಎಂದು ಚೆನ್ನಾಗಿ ಆಲೋಚಿಸಿರಿ.
ಕಿತ್ತೀಮ್ ದ್ವೀಪಗಳಿಗೆ ದಾಟಿ ಹೋಗಿ ನೋಡಿರಿ. ಕೇದಾರಿಗೆ ಕಳುಹಿಸಿ ಚೆನ್ನಾಗಿ ತಿಳಿದುಕೊಳ್ಳಿರಿ. ಅಂಥದ್ದು ಉಂಟೋ ಎಂದು ನೋಡಿರಿ.
11 ೧೧ ತನ್ನ ದೇವತೆಗಳು ದೇವರಲ್ಲದೆ ಇದ್ದರೂ ಅವುಗಳನ್ನು ಯಾವ ಜನಾಂಗವಾದರೂ ಬದಲಾಯಿಸಿಕೊಂಡಿತೋ? ಆದರೆ ನನ್ನ ಜನರು ತಮ್ಮ ಮಹಿಮೆಯಾದ ನನ್ನ ಬದಲಾಗಿ ಕೆಲಸಕ್ಕೆ ಬಾರದವುಗಳನ್ನು ಆರಿಸಿಕೊಂಡಿದ್ದಾರೆ.
ಜನಾಂಗವು ತಮ್ಮ ದೇವರುಗಳನ್ನು ಅವು ದೇವರುಗಳಲ್ಲದೆ ಇದ್ದರೂ ಬದಲು ಮಾಡಿದ್ದುಂಟೋ? ಆದರೆ ನನ್ನ ಜನರು ತಮ್ಮ ವೈಭವವಾದ ದೇವರನ್ನು ಪ್ರಯೋಜನವಿಲ್ಲದ್ದಕ್ಕೆ ಬದಲು ಮಾಡಿದ್ದಾರೆ.
12 ೧೨ ಆಕಾಶಮಂಡಲವೇ, ಇದಕ್ಕೆ ಬೆಚ್ಚಿಬೆರಗಾಗು, ತತ್ತರಿಸು, ಹಾಳಾಗು” ಎಂದು ಯೆಹೋವನು ನುಡಿಯುತ್ತಾನೆ.
ಆಕಾಶಗಳೇ, ಇದಕ್ಕೆ ನೀವು ಆಶ್ಚರ್ಯಪಡಿರಿ, ಭಯಭ್ರಾಂತಿಗೊಳ್ಳಿರಿ, ತೀರ ಹಾಳಾಗಿರಿ,” ಎಂದು ಯೆಹೋವ ದೇವರು ಹೇಳುತ್ತಾರೆ.
13 ೧೩ “ನನ್ನ ಜನರು ಎರಡು ಅಪರಾಧಗಳನ್ನು ಮಾಡಿದ್ದಾರೆ; ಅವರು ಜೀವಜಲದ ಬುಗ್ಗೆಯಾದ ನನ್ನನ್ನು ಬಿಟ್ಟುಬಿಟ್ಟು ತಮಗೋಸ್ಕರ ತೊಟ್ಟಿಗಳನ್ನು ತೋಡಿಕೊಂಡಿದ್ದಾರೆ. ಅವರು ಬಿರುಕು ಬಿಟ್ಟ, ನೀರು ನಿಲ್ಲದ ತೊಟ್ಟಿಗಳನ್ನು ಕೊರೆದುಕೊಂಡಿದ್ದಾರೆ.
“ನನ್ನ ಜನರು ಎರಡು ದುಷ್ಕೃತ್ಯಗಳನ್ನು ಮಾಡಿದ್ದಾರೆ. ಜೀವವುಳ್ಳ ನೀರಿನ ಬುಗ್ಗೆಯಾಗಿರುವ ನನ್ನನ್ನು ಬಿಟ್ಟು, ತಮಗೆ ನೀರು ಹಿಡಿಯಲಾರದ ಒಡಕ ತೊಟ್ಟಿಗಳನ್ನೂ ಕೆತ್ತಿದ್ದಾರೆ.
14 ೧೪ ಇಸ್ರಾಯೇಲ್ ಒಬ್ಬ ದಾಸನೋ? ಮನೆಯ ಗುಲಾಮನಾಗಿ ಹುಟ್ಟಿದವನೋ?
ಇಸ್ರಾಯೇಲನು ಸೇವಕನೋ? ಮನೆಯಲ್ಲಿ ಹುಟ್ಟಿದ ಗುಲಾಮನೋ? ಅವನು ಏಕೆ ಸುಲಿಗೆಯಾದನು?
15 ೧೫ ಏಕೆ ಸೂರೆಯಾದನು? ಪ್ರಾಯದ ಸಿಂಹಗಳು ಅವನ ಮೇಲೆ ಗರ್ಜಿಸಿ ಆರ್ಭಟಿಸುತ್ತಿವೆ, ಅವನ ದೇಶವನ್ನು ಹಾಳುಮಾಡಿವೆ, ಅವನ ಊರುಗಳು ಸುಟ್ಟು ನಿರ್ಜನವಾಗಿವೆ.
ಪ್ರಾಯದ ಸಿಂಹಗಳು ಅವನಿಗೆ ವಿರೋಧವಾಗಿ ಗರ್ಜಿಸಿ, ಅಬ್ಬರಿಸುತ್ತವೆ. ಅವನ ದೇಶವನ್ನು ಹಾಳು ಮಾಡುತ್ತವೆ. ಅವನ ಪಟ್ಟಣಗಳು ನಿವಾಸವಿಲ್ಲದೆ ಸುಟ್ಟುಹೋಗಿವೆ.
16 ೧೬ ನೋಫ್ ಮತ್ತು ತಹಪನೇಸ್ ಪಟ್ಟಣಗಳವರು ನಿನ್ನ ನೆತ್ತಿಯನ್ನೂ ನುಣ್ಣಗೆ ಮೇದುಬಿಟ್ಟಿದ್ದಾರೆ.
ನೋಫ್ ಮತ್ತು ತಹಪನೇಸ್ ಪಟ್ಟಣಗಳವರು ನಿನ್ನ ನೆತ್ತಿಯನ್ನೂ ನುಣ್ಣಗೆ ಮೇದುಬಿಟ್ಟಿದ್ದಾರೆ.
17 ೧೭ ನಿನ್ನನ್ನು ಮಾರ್ಗದರ್ಶಿಯಾಗಿ ನಡೆಸುತ್ತಿದ್ದ ನಿನ್ನ ದೇವರಾದ ಯೆಹೋವನನ್ನು ತೊರೆದುಬಿಟ್ಟು ಇದನ್ನೆಲ್ಲಾ ನೀನೇ ನಿನ್ನ ಮೇಲೆ ಬರಮಾಡಿಕೊಂಡೆಯಲ್ಲಾ.
ಆತನು ನಿನ್ನನ್ನು ದಾರಿಯಲ್ಲಿ ನಡೆಸುತ್ತಿರುವಾಗ ನೀನು ನಿನ್ನ ದೇವರಾದ ಯೆಹೋವ ದೇವರನ್ನು ಬಿಟ್ಟಿದ್ದರಿಂದಲೇ ಇದನ್ನು ನಿನಗೆ ನೀನೇ ಮಾಡಿಕೊಂಡೆಯಲ್ಲವೋ?
18 ೧೮ ನೀನು ಐಗುಪ್ತದ ದಾರಿಯಲ್ಲಿ ನಡೆದದ್ದೇಕೆ? ನೈಲ್ ನದಿಯ ನೀರನ್ನು ಕುಡಿಯ ಅವಶ್ಯಕತೆ ಇತ್ತೆ? ಅಶ್ಶೂರದ ಮಾರ್ಗದಲ್ಲಿ ಹೆಜ್ಜೆಯಿಟ್ಟದ್ದೇಕೆ? ಯೂಫ್ರೆಟಿಸ್ ನದಿಯ ಜಲವನ್ನು ಪಾನಮಾಡುವ ಅವಶ್ಯಕತೆ ಇತ್ತೇ?
ಈಗ ಶೀಹೋರಿನ ನೀರು ಕುಡಿಯುವುದಕ್ಕಾಗಿ ಈಜಿಪ್ಟಿನ ದಾರಿಯಲ್ಲಿ ನಿನಗೇನು ಕೆಲಸ? ಯೂಫ್ರೇಟೀಸ್ ನದಿಯ ನೀರು ಕುಡಿಯುವುದಕ್ಕಾಗಿ ಅಸ್ಸೀರಿಯದ ದಾರಿಯಲ್ಲಿ ನಿನಗೇನು ಕೆಲಸ?
19 ೧೯ ನಿನ್ನ ಕೆಟ್ಟತನವೇ ನಿನ್ನನ್ನು ಶಿಕ್ಷಿಸುವುದು, ನಿನ್ನ ದ್ರೋಹಗಳೇ ನಿನ್ನನ್ನು ಖಂಡಿಸುವವು; ನೀನು ನನ್ನ ಭಯವಿಲ್ಲದೆ ನಿನ್ನ ದೇವರಾದ ಯೆಹೋವನೆಂಬ ನನ್ನನ್ನು ತೊರೆದುಬಿಟ್ಟಿದ್ದರಿಂದ ನಿನಗೆ ಕೆಟ್ಟದ್ದಾಗಿಯೂ, ಕಹಿ ಅನುಭವವಾಗಿಯೂ ಇರುತ್ತದೆಂದು ಗ್ರಹಿಸಿಕೋ, ಕಣ್ಣಾರೆ ನೋಡು” ಎಂಬುದು ಸೇನಾಧೀಶ್ವರನಾದ ಯೆಹೋವನೆಂಬ ಕರ್ತನ ನುಡಿ.
ನಿನ್ನ ಕೆಟ್ಟತನವೇ ನಿನ್ನನ್ನು ತಿದ್ದುವುದು. ನಿನ್ನ ಹಿಂಜಾರಿಕೆಗಳೇ ನಿನ್ನನ್ನು ಗದರಿಸುವುದು. ಹೀಗಿರುವುದರಿಂದ ನೀನು ನಿನ್ನ ದೇವರಾದ ಯೆಹೋವ ದೇವರನ್ನು ಬಿಟ್ಟದ್ದೂ, ನನ್ನ ಭಯವು ನಿನ್ನಲ್ಲಿ ಇಲ್ಲದಿರುವುದೂ, ಕೆಟ್ಟದ್ದೂ, ಕಹಿಯಾದದ್ದೂ ಎಂದು ತಿಳಿದುಕೊಂಡು ನೋಡು,” ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ.
20 ೨೦ ಬಹುಕಾಲದಿಂದ ನೀನು ನಿನ್ನ ನೊಗವನ್ನು ಮುರಿದು, ಕಣ್ಣಿಗಳನ್ನು ಕಿತ್ತು “ನಾನು ಸೇವೆ ಮಾಡುವುದಿಲ್ಲ” ಎಂದು ಅಂದುಕೊಳ್ಳುತ್ತಿದ್ದಿ, ಎತ್ತರವಾದ ಎಲ್ಲಾ ಗುಡ್ಡಗಳ ಮೇಲೂ, ಸೊಂಪಾಗಿ ಬೆಳೆದಿರುವ ಎಲ್ಲಾ ಮರಗಳ ಕೆಳಗೂ ನೀನು ಅಡ್ಡಬಿದ್ದು ಜಾರಳಂತೆ ನಡೆದುಕೊಂಡಿದ್ದಿ.
“ಪೂರ್ವದಲ್ಲಿ ನಾನು ನಿನ್ನ ನೊಗವನ್ನು ಮುರಿದು, ನಿನ್ನ ಬಂಧನಗಳನ್ನು ಹರಿದುಬಿಟ್ಟೆನು. ಆದರೆ, ‘ನಾನು ಸೇವೆಮಾಡುವುದಿಲ್ಲ!’ ಎಂದು ನೀನು ಹೇಳಿದೆ. ಒಂದೊಂದು ಎತ್ತರವಾದ ಗುಡ್ಡದ ಮೇಲೆಯೂ, ಒಂದೊಂದು ಹಸುರಾದ ಮರದ ಕೆಳಗೂ ನೀನು ವೇಶ್ಯೆಯಾಗಿ ನಡೆದಿದ್ದೀ.
21 ೨೧ “ನಾನು ನಿನ್ನನ್ನು ಅತ್ಯುತ್ತಮ ಬೀಜದಿಂದ ಬೆಳೆದ ಒಳ್ಳೆಯ ದ್ರಾಕ್ಷಾಲತೆಯನ್ನಾಗಿ ನೆಟ್ಟಿರಲು ನೀನು ನನಗೆ ಕಾಡುದ್ರಾಕ್ಷಿಬಳ್ಳಿಯ ಕೆಟ್ಟರೆಂಬೆಗಳಂತೆ ಆಗಲು ಕಾರಣವೇನು?
ಅತ್ಯುತ್ತಮ ಬೀಜದಿಂದ ಬೆಳೆದ ಉತ್ಕೃಷ್ಟ ದ್ರಾಕ್ಷಾಲತೆಯನ್ನಾಗಿ ನಿನ್ನನ್ನು ನೆಟ್ಟಿದೆ. ಆದರೆ ನೀನು ಕಾಡುದ್ರಾಕ್ಷಿಬಳ್ಳಿಯ ಹಾಳು ರೆಂಬೆಗಳಾದದ್ದು ಹೇಗೆ?
22 ೨೨ ನೀನು ಬಹಳ ಸೌಳನ್ನು ಹಾಕಿಕೊಂಡು ಸಾಬೂನಿನಿಂದ ತೊಳೆದುಕೊಂಡರೂ ಶುದ್ಧವಾಗದೆ, ನಿನ್ನ ಅಧರ್ಮವು ನನ್ನ ಕಣ್ಣೆದುರಿಗೆ ಕೊಳಕಾಗಿ ನಿಂತಿದೆ” ಎಂದು ಕರ್ತನಾದ ಯೆಹೋವನು ನುಡಿಯುತ್ತಾನೆ.
ನೀನು ಸಾಬೂನಿನಿಂದ ತೊಳೆದುಕೊಂಡರೂ, ಬಹಳ ಸಾಬೂನು ಹಾಕಿಕೊಂಡರೂ ನಿನ್ನ ಅಕ್ರಮವು ನನ್ನ ಮುಂದೆ ಕಳಂಕವಾಗಿದೆ,” ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.
23 ೨೩ “ನಾನು ಅಶುದ್ಧವಾಗಲಿಲ್ಲ, ಬಾಳ್ ದೇವತೆಗಳನ್ನು ನಾನು ಹಿಂಬಾಲಿಸಲಿಲ್ಲ” ಎಂದು ಹೇಗೆ ಹೇಳುತ್ತಿ? ಆ ತಗ್ಗಿನಲ್ಲಿನ ನಿನ್ನ ನಡತೆಯನ್ನು ನೋಡು, ನೀನು ಮಾಡಿದ ದುಷ್ಟ ಕೆಲಸವನ್ನು ಮನಸ್ಸಿಗೆ ತಂದುಕೋ. ಅತ್ತಿತ್ತ ನೆಗೆದಾಡುವ ಬೆದೆಗೆ ಬಂದ ಹೆಣ್ಣು ಒಂಟೆಯಂತಿರುವೆ.
“ಇದಲ್ಲದೆ ನೀನು, ‘ನಾನು ಅಶುದ್ಧನಲ್ಲ, ಬಾಳನನ್ನು ಹಿಂಬಾಲಿಸಲಿಲ್ಲ,’ ಎಂದು ಹೇಳುವುದು ಹೇಗೆ? ತಗ್ಗಿನಲ್ಲಿ ನಿನ್ನ ಮಾರ್ಗವನ್ನು ನೋಡು. ನೀನು ಮಾಡಿದ್ದನ್ನು ತಿಳಿದುಕೋ. ನೀನು ತೀವ್ರವಾಗಿ ಸಂಚಾರ ಮಾಡುವ ಹೆಣ್ಣು ಒಂಟೆಯೇ.
24 ೨೪ ನೀನು ಮದದಿಂದ ಗಾಳಿಯನ್ನು ಬುಸುಬುಸನೆ ಮೂಸಿ ನೋಡುವ ಅಡವಿಯ ಹೆಣ್ಣು ಕಾಡುಕತ್ತೆಯ ಹಾಗಿದ್ದಿ; ಅದಕ್ಕೆ ಬೆದೆ ಏರಿದಾಗ ಯಾವ ಗಂಡು ಕತ್ತೆಯೂ ಅದನ್ನು ಬದಿಗೆ ನೂಕುವುದಿಲ್ಲ. ಆಯಾ ತಿಂಗಳಿನಲ್ಲಿ ಅದನ್ನು ಹುಡುಕುವವುಗಳೆಲ್ಲಾ ಆಯಾಸಗೊಳ್ಳದೆ ಅದನ್ನು ದೊರಕಿಸಿಕೊಳ್ಳುವವು.
ಮರುಭೂಮಿಯ ಅಭ್ಯಾಸವುಳ್ಳ ಕಾಡುಕತ್ತೆಯೇ. ಅವಳ ಅತ್ಯಾಶೆಯಲ್ಲಿ ಗಾಳಿಯನ್ನು ಹೀರಿಕೊಳ್ಳುತ್ತಾಳೆ. ಅವಳ ಮದವನ್ನು ಯಾರು ತಡೆಯುವರು? ಅವಳನ್ನು ಹುಡುಕುವವರೆಲ್ಲರೂ ಆಯಾಸ ಪಡುವುದಿಲ್ಲ. ಅವಳ ಸಂಗಮಿಸುವ ಋತುಗಳಲ್ಲಿ ಅವಳನ್ನು ಕಾಣುವರು.
25 ೨೫ “ನಿನ್ನ ಕಾಲು ಸವೆಯದಂತೆಯೂ ನಿನ್ನ ಗಂಟಲು ಆರದಂತೆಯೂ ತಡೆದುಕೋ” ಎಂದೆನು, ಆದರೆ ನೀನು, “ನಿರೀಕ್ಷೆಯಿಲ್ಲ, ಆಗಲಾರದು, ಅನ್ಯರ ಮೇಲೆ ಮೋಹಗೊಂಡಿದ್ದೇನೆ. ಅವರ ಹಿಂದೆಯೇ ಹೋಗುವೆನು” ಅಂದುಕೊಂಡಿದ್ದಿ.
ಆದರೆ ನಾನು, ‘ನಿನ್ನ ಕಾಲು ಸವೆಯದಂತೆಯೂ, ನಿನ್ನ ಗಂಟಲು ಆರದಂತೆಯೂ ತಡೆದುಕೋ,’ ಎಂದೆನು. ಆದರೆ ನೀನು, ‘ಇಲ್ಲ, ನಿರೀಕ್ಷೆ ಇಲ್ಲ, ನಾನು ಅನ್ಯದೇವರುಗಳನ್ನು ಪ್ರೀತಿಸುತ್ತೇನೆ, ಅವುಗಳ ಹಿಂದೆ ನಾನು ಹೋಗುತ್ತೇನೆ,’ ಎಂದು ಹೇಳಿದೆ.
26 ೨೬ ಕಳ್ಳನು ಸಿಕ್ಕಿಬಿದ್ದು ಹೇಗೆ ನಾಚಿಕೆಪಡುವನೋ, ಹಾಗೆಯೇ ಇಸ್ರಾಯೇಲ್ ವಂಶವು ನಾಚಿಕೆಪಡುವುದು. ಅವರು ಮರಕ್ಕೆ, “ನೀನು ನನ್ನ ತಂದೆ” ಎಂತಲೂ; ಕಲ್ಲಿಗೆ, “ನೀನು ಹೆತ್ತ ತಾಯಿ” ಎಂತಲೂ ಹೇಳುವ ಪ್ರಜೆಗಳು. ಅವರ ಅರಸರು, ಅಧಿಪತಿಗಳು, ಯಾಜಕರು, ಪ್ರವಾದಿಗಳು ನಾಚಿಕೆಗೆ ಈಡಾಗುವರು.
“ಕಳ್ಳನು ಸಿಕ್ಕಿದ ಮೇಲೆ ನಾಚಿಕೆಪಡುವ ಪ್ರಕಾರ ಇಸ್ರಾಯೇಲ್ ಜನರಿಗೆ ನಾಚಿಕೆ ಆಯಿತು. ಅವರ ಅರಸರು, ಅಧಿಪತಿಗಳು, ಯಾಜಕರು, ಪ್ರವಾದಿಗಳು, ಇವರೆಲ್ಲರೂ ನಾಚಿಕೆಗೆ ಈಡಾಗುವರು.
27 ೨೭ ಅವರು ನನ್ನ ಕಡೆಗೆ ಮುಖತಿರುಗಿಸದೆ ಬೆನ್ನು ಮಾಡಿದ್ದಾರೆ, ಆದರೆ ಅವರಿಗೆ ಕೇಡು ಸಂಭವಿಸಿದಾಗ, “ಎದ್ದು ನಮ್ಮನ್ನು ಉದ್ಧರಿಸು” ಎಂದು ಮೊರೆಯಿಡುವರು.
ಅವರು ಮರಕ್ಕೆ, ‘ನೀನು ನನ್ನ ತಂದೆ,’ ಎಂದೂ ಕಲ್ಲಿಗೆ, ‘ನೀನು ನನ್ನನ್ನು ಹೆತ್ತಿದ್ದೀ,’ ಎಂದೂ ಹೇಳುತ್ತಾರಲ್ಲಾ. ಏಕೆಂದರೆ ಅವರು ನನಗೆ ಮುಖವನ್ನಲ್ಲ ಬೆನ್ನನ್ನು ತಿರುಗಿಸಿದ್ದಾರೆ. ಆದರೂ ಅವರ ಕಷ್ಟಕಾಲದಲ್ಲಿ ಎದ್ದು, ‘ನಮ್ಮನ್ನು ರಕ್ಷಿಸು,’ ಎಂದು ಮೊರೆಯಿಡುವರು.
28 ೨೮ ಯೆಹೂದವೇ, ನೀನು ನಿರ್ಮಿಸಿಕೊಂಡ ದೇವರುಗಳು ಎಲ್ಲಿ? ನಿನಗೆ ಕೇಡು ಸಂಭವಿಸಿದಾಗ ಅವು ನಿನ್ನನ್ನು ಉದ್ಧರಿಸಲು ಶಕ್ತವಾದರೆ ಏಳಲಿ! ನಿನ್ನ ಪಟ್ಟಣಗಳೆಷ್ಟೋ, ನಿನ್ನ ದೇವರುಗಳೂ ಅಷ್ಟು ಇವೆ.
ಆದರೆ ನೀನು ನಿನಗೋಸ್ಕರ ಮಾಡಿಕೊಂಡ ನಿನ್ನ ದೇವರುಗಳು ಎಲ್ಲಿ? ನಿನ್ನ ಕಷ್ಟಕಾಲದಲ್ಲಿ ನಿನ್ನನ್ನು ರಕ್ಷಿಸಲು ಸಾಧ್ಯವಾದರೆ ಅವರೇ ಏಳಲಿ, ಓ ಯೆಹೂದವೇ, ನಿನ್ನ ಪಟ್ಟಣಗಳ ಲೆಕ್ಕದ ಹಾಗೆ ನಿನ್ನ ದೇವರುಗಳು ಇದ್ದಾರೆ.
29 ೨೯ ಯೆಹೋವನು ಹೀಗೆನ್ನುತ್ತಾನೆ, “ನನ್ನೊಡನೆ ಏಕೆ ವ್ಯಾಜ್ಯವಾಡುತ್ತೀರಿ? ನೀವೆಲ್ಲರೂ ನನಗೆ ದ್ರೋಹಿಗಳು.
“ಏಕೆ ನನ್ನ ಸಂಗಡ ವಾದಿಸುತ್ತೀರಿ? ನೀವೆಲ್ಲರೂ ನನಗೆ ವಿರೋಧವಾಗಿ ದ್ರೋಹ ಮಾಡಿದ್ದೀರಿ,” ಎಂದು ಯೆಹೋವ ದೇವರು ಹೇಳುತ್ತಾರೆ.
30 ೩೦ ನಾನು ನಿಮ್ಮ ವಂಶದವರನ್ನು ಹೊಡೆದದ್ದು ವ್ಯರ್ಥ, ನೀವು ತಿದ್ದಿ ನಡೆಯಲಿಲ್ಲ. ಸಂಹರಿಸುವ ಸಿಂಹದಂತೆ ನಿಮ್ಮ ಕೈಯ ಕತ್ತಿಯೇ ನಿಮ್ಮ ಪ್ರವಾದಿಗಳನ್ನು ನುಂಗಿಬಿಟ್ಟಿದೆ.”
“ನಾನು ನಿಮ್ಮ ಜನರನ್ನು ದಂಡಿಸಿದ್ದು ವ್ಯರ್ಥವಾಯಿತು. ಅವರು ಶಿಕ್ಷೆಯನ್ನು ತೆಗೆದುಕೊಳ್ಳಲಿಲ್ಲ. ನಿಮ್ಮ ಸ್ವಂತ ಖಡ್ಗವು ನಾಶಮಾಡುವ ಸಿಂಹದಂತೆ ನಿಮ್ಮ ಪ್ರವಾದಿಗಳನ್ನು ನುಂಗಿಬಿಟ್ಟಿವೆ.
31 ೩೧ ನೀವು ಎಂತಹ ದುಷ್ಟ ವಂಶದವರು! ಯೆಹೋವನ ಮಾತನ್ನು ಕೇಳಿರಿ, “ನಾನು ಇಸ್ರಾಯೇಲಿಗೆ ಅರಣ್ಯವಾಗಿಯೂ, ಗಾಢಾಂಧಕಾರದ ಪ್ರದೇಶವಾಗಿಯೂ ಏಕೆ ಪರಿಣಮಿಸಿದವು? ‘ನಾವು ಮನಬಂದಂತೆ ತಿರುಗುತ್ತಿದ್ದೇವೆ, ನಿನ್ನ ಹತೋಟಿಗೆ ಇನ್ನು ಬಾರೆವು’” ಎಂದು ನನ್ನ ಜನರು ಹೇಳುವುದು ಏಕೆ?
“ಇಸ್ರಾಯೇಲರೇ, ನೀವು ಯೆಹೋವ ದೇವರ ವಾಕ್ಯವನ್ನು ಗಮನಿಸಿರಿ: “ನಾನು ಇಸ್ರಾಯೇಲಿನ ಮರುಭೂಮಿಯಾದೆನೋ? ಗಾಡಾಂಧಕಾರದ ದೇಶವಾದೆನೋ? ನನ್ನ ಜನರು, ‘ನಾವು ಮನಬಂದಂತೆ ನಡೆದುಕೊಳ್ಳುತ್ತೇವೆ, ನಾವು ಇನ್ನು ಮೇಲೆ ನಿನ್ನ ಬಳಿಗೆ ಎಂದೂ ಬರುವುದಿಲ್ಲ,’ ಎಂದು ಹೇಳುವುದು ಹೇಗೆ?
32 ೩೨ ಯುವತಿಯು ತನ್ನ ಆಭರಣಗಳನ್ನು, ವಧುವು ತನ್ನ ಒಡ್ಯಾಣವನ್ನು ಮರೆಯುವುದುಂಟೇ? ನನ್ನ ಜನರೋ ಲೆಕ್ಕವಿಲ್ಲದಷ್ಟು ದಿನ ನನ್ನನ್ನು ಮರೆತಿದ್ದಾರೆ.
ಯುವತಿಯು ತನ್ನ ಆಭರಣಗಳನ್ನೂ ಇಲ್ಲವೆ ಮದಲಗಿತ್ತಿ ತನ್ನ ಒಡ್ಯಾಣವನ್ನು ಮರೆತುಬಿಡುವಳೋ? ಆದರೂ ನನ್ನ ಜನರು ಲೆಕ್ಕವಿಲ್ಲದಷ್ಟು ದಿನಗಳು ನನ್ನನ್ನು ಮರೆತುಬಿಟ್ಟಿದ್ದಾರೆ.
33 ೩೩ ಕಾಮವನ್ನು ತೀರಿಸಿಕೊಳ್ಳಬೇಕೆಂದು ಎಷ್ಟೋ ಮುಂದುವರೆದಿದ್ದಿ! ಇದರಿಂದ ನಿನ್ನ ದುರಭ್ಯಾಸಗಳಿಗೆ ನಿನ್ನ ನಡತೆಯನ್ನು ಹೊಂದಿಸಿಕೊಂಡಿದ್ದಿ.
ಪ್ರಿಯಕರರನ್ನು ಹುಡುಕುವ ಹಾಗೆ ನಿನ್ನ ಮಾರ್ಗವನ್ನು ಏಕೆ ಚಂದ ಮಾಡಿಕೊಳ್ಳುತ್ತೀ? ಇದರಿಂದ ಕೆಟ್ಟ ಹೆಂಗಸರಿಗೂ ನಿನ್ನ ಮಾರ್ಗವನ್ನು ಕಲಿಸಿದ್ದೀ.
34 ೩೪ ಇದಲ್ಲದೆ ನಿರ್ದೋಷಿಗಳಾದ ದರಿದ್ರರ ಪ್ರಾಣರಕ್ತವು ನಿನ್ನ ನೆರಿಗೆಯಲ್ಲಿ ಅಂಟಿಕೊಂಡಿದೆ; ಇವರು ಕನ್ನ ಕೊರೆಯುವುದನ್ನು ಕಂಡೆನು ಎಂದು ನೀವು ನೆವ ಹೇಳುವಂತಿಲ್ಲ, ನಿನ್ನ ಈ ಎಲ್ಲಾ ದುರಭ್ಯಾಸಗಳ ದೆಸೆಯಿಂದ ನಿನ್ನನ್ನು ದಂಡಿಸುವೆನು.
ಇದಲ್ಲದೆ ನಿನ್ನ ಸೆರಗುಗಳಲ್ಲಿ ಅಪರಾಧವಿಲ್ಲದ ಬಡವರ ರಕ್ತವು ಸಿಕ್ಕಿದೆ. ಅಂತರಂಗದ ಶೋಧನೆಯಿಂದಲ್ಲ, ಆದರೆ ಇವರೆಲ್ಲರ ಮೇಲೆಯೇ ಅದನ್ನು ಕಂಡಿದ್ದೀ.
35 ೩೫ ನೀನಾದರೋ, “ನಾನು ನಿರ್ದೋಷಿ, ಆತನ ಕೋಪವು ನನ್ನ ಮೇಲಿಂದ ನಿಶ್ಚಯವಾಗಿ ತೊಲಗಿಹೋಗಿದೆ” ಎಂದುಕೊಂಡಿದ್ದಿ; “ನಾನು ಪಾಪಮಾಡಲಿಲ್ಲ” ಎಂದು ನೀನು ಹೇಳಿದ ಕಾರಣ, ಇಗೋ, ನಾನು ನಿನಗೆ ನ್ಯಾಯ ತೀರಿಸುವೆನು.
ಆದರೂ ನೀನು, ‘ನಾನು ನಿರಪರಾಧಿಯಾಗಿರುವ ಕಾರಣ ನಿಶ್ಚಯವಾಗಿ ದೇವರ ಕೋಪವು ನನ್ನನ್ನು ಬಿಟ್ಟು ತಿರುಗುವುದು,’ ಎಂದು ಹೇಳುತ್ತೀ. ನೀನು, ‘ನಾನು ಪಾಪಮಾಡಲಿಲ್ಲ’ ಎಂದು ಹೇಳುವುದರಿಂದ ಇಗೋ, ನಾನು ನಿನಗೆ ನ್ಯಾಯತೀರಿಸುವೆನು.
36 ೩೬ ಹೊಸ ಹೊಸ ಮಾರ್ಗಗಳನ್ನು ಅನುಸರಿಸಲು ಏಕೆ ಅಷ್ಟು ಪ್ರಯತ್ನಿಸುತ್ತೀ? ಅಶ್ಶೂರದ ವಿಷಯವಾಗಿ ಹೇಗೆ ಆಶಾಭಂಗಪಟ್ಟೆಯೋ ಹಾಗೆಯೇ ಐಗುಪ್ತದ ವಿಷಯವಾಗಿಯೂ ಆಶಾಭಂಗಪಡುವಿ.
ನಿನ್ನ ಮಾರ್ಗವನ್ನು ಬೇರೆ ಮಾಡಿಕೊಳ್ಳುವಷ್ಟು ಏಕೆ ಬಹಳವಾಗಿ ತಿರುಗಾಡುತ್ತೀ? ಅಸ್ಸೀರಿಯದ ನಿಮಿತ್ತ ನಾಚಿಕೆ ಪಟ್ಟ ಹಾಗೆ ಈಜಿಪ್ಟಿನ ನಿಮಿತ್ತವೂ ನಾಚಿಕೆಪಡುವೆ.
37 ೩೭ ಅಲ್ಲಿಂದಲೂ ತಲೆಯ ಮೇಲೆ ಕೈಹೊತ್ತುಕೊಂಡು ಹೊರಡುವಿ; ಏಕೆಂದರೆ ನಿನ್ನ ಭರವಸೆಗಳನ್ನು ಯೆಹೋವನು ನಿರಾಕರಿಸಿದ್ದಾನೆ; ಅವುಗಳ ಮುಖಾಂತರ ನಿನ್ನ ಕಾರ್ಯವು ಕೈಗೂಡುವುದಿಲ್ಲ.
ಹೌದು, ಅಲ್ಲಿಂದ ಸಹ ನಿನ್ನ ಕೈಗಳನ್ನು ತಲೆಯ ಮೇಲೆ ಇಟ್ಟುಕೊಂಡು ಹೊರಟು ಹೋಗುವೆ. ಏಕೆಂದರೆ ಯೆಹೋವ ದೇವರು ನೀನು ಭರವಸೆ ಇಟ್ಟವುಗಳನ್ನು ತಿರಸ್ಕರಿಸಿದ್ದಾರೆ, ಅವುಗಳ ಮುಖಾಂತರ ನಿನ್ನ ಕಾರ್ಯ ಸಫಲವಾಗುವುದಿಲ್ಲ.”

< ಯೆರೆಮೀಯನು 2 >