< ಯಾಕೋಬನು ಬರೆದ ಪತ್ರಿಕೆ 3 >

1 ನನ್ನ ಸಹೋದರರೇ, ಬೋಧಕರಾದ ನಮಗೆ ಕಠಿಣವಾದ ತೀರ್ಪು ಆಗುವುದೆಂದು ತಿಳಿದುಕೊಂಡು ಬಹಳ ಜನರು ಬೋಧಕರಾಗಬೇಡಿರಿ. 2 ಅನೇಕ ವಿಷಯಗಳಲ್ಲಿ ನಾವೆಲ್ಲರೂ ತಪ್ಪುಮಾಡುವವರಾಗಿದ್ದಾರೆ. ಒಬ್ಬನು ಮಾತಿನಲ್ಲಿ ತಪ್ಪಿ ನಡೆಯದಿದ್ದರೆ ಅವನು ಸರ್ವಸುಗುಣವುಳ್ಳವನೂ ತನ್ನ ಇಡೀ ದೇಹವನ್ನೆಲ್ಲಾ ಸ್ವಾಧೀನಪಡಿಸಿಕೊಳ್ಳುವುದಕ್ಕೆ ಸಮರ್ಥನೂ ಆಗಿದ್ದಾನೆ. 3 ಕುದುರೆಗಳು ನಮ್ಮ ಇಚ್ಚೆಯಂತೆ ನಡೆಯುವ ಹಾಗೆ ಅವುಗಳ ಬಾಯಿಗೆ ಕಡಿವಾಣ ಹಾಕುತ್ತೇವೆ. ಆಗ ಅವುಗಳ ದೇಹವನ್ನೆಲ್ಲಾ ನಮಗೆ ಬೇಕಾದ ಕಡೆಗೆ ತಿರುಗಿಸುವುದಕ್ಕೆ ಆಗುತ್ತದೆ. 4 ಹಡಗುಗಳನ್ನು ಸಹ ಗಮನಿಸಿರಿ. ಅವು ಬಹು ದೊಡ್ಡವುಗಳಾಗಿದ್ದರೂ ಬಲವಾದ ಗಾಳಿಯಿಂದ ದಿಕ್ಕು ತಪ್ಪುತ್ತದೆ. ಆದರೂ ನಾವಿಕನು ಬಹಳ ಸಣ್ಣ ಚುಕ್ಕಾಣಿಯಿಂದ ಅವುಗಳನ್ನು ತಾನು ಹೋಗ ಬೇಕಾದ ಕಡೆಗೆ ತಿರುಗಿಸಿಕೊಳ್ಳುತ್ತಾನೆ. 5 ಹಾಗೆಯೇ ನಾಲಿಗೆಯು ಕೂಡ ಚಿಕ್ಕ ಅಂಗವಾಗಿದ್ದರೂ ದೊಡ್ಡ ಕಾರ್ಯಗಳನ್ನು ಮಾಡುವ ಬಗ್ಗೆ ಕೊಚ್ಚಿಕೊಳ್ಳುತ್ತದೆ. ಬೆಂಕಿಯ ಸಣ್ಣ ಕಿಡಿ ದೊಡ್ಡ ಕಾಡನ್ನೂ ಸುಡುತ್ತದೆ. 6 ನಾಲಿಗೆಯೂ ಸಹ ಬೆಂಕಿಯೇ. ನಾಲಿಗೆಯೂ ಅಧರ್ಮ ಲೋಕರೂಪವಾಗಿ ನಮ್ಮ ಅಂಗಗಳ ನಡುವೆ ಇಡಲ್ಪಟ್ಟಿದೆ. ಅದು ದೇಹವನ್ನೆಲ್ಲಾ ಕೆಡಿಸುತ್ತದೆ. ತಾನೇ ನರಕವೆಂಬ ಬೆಂಕಿ ಹೊತ್ತಿಸಿಕೊಳ್ಳುತ್ತಾ ಇಡೀ ಬಾಳಿಗೆ ಬೆಂಕಿ ಹಚ್ಚುತ್ತದೆ. (Geenna g1067) 7 ಸಕಲ ಜಾತಿಯ ಮೃಗ, ಪಕ್ಷಿ, ಹರಿದಾಡುವ ಜಂತು, ಜಲಚರಗಳನ್ನೂ ಮನುಷ್ಯರು ಹತೋಟಿಗೆ ತರುವುದುಂಟು ಮತ್ತು ತಂದದ್ದುಂಟು. 8 ಆದರೆ ನಾಲಿಗೆಯನ್ನು ಯಾವ ಮಾನವನೂ ಹತೋಟಿಗೆ ತರಲಾರನು. ಅದು ಸುಮ್ಮನಿರಲಾರದ ಕೆಡುಕಾಗಿದೆ. ಮರಣಕರವಾದ ವಿಷದಿಂದ ತುಂಬಿದೆ. 9 ಅದೇ ನಾಲಿಗೆಯಿಂದ ನಮ್ಮ ಕರ್ತನಾದ ತಂದೆಯನ್ನು ಕೊಂಡಾಡುತ್ತೇವೆ, ಅದುದರಿಂದಲೇ ದೇವರ ಹೋಲಿಕೆಗೆ ಸಮಾನವಾಗಿ ಸೃಷ್ಟಿಸಲ್ಪಟ್ಟ ಮನುಷ್ಯರನ್ನು ನಾವು ಶಪಿಸುತ್ತೇವೆ. 10 ೧೦ ಅದೇ ಬಾಯಿಂದ ಸ್ತುತಿ ಮತ್ತು ಶಾಪ ಎರಡೂ ಬರುತ್ತವೆ. ನನ್ನ ಸಹೋದರರೇ, 11 ೧೧ ಒಂದೇ ಬುಗ್ಗೆಯಿಂದ ಸಿಹಿ ನೀರು ಮತ್ತು ಕಹಿ ನೀರು ಎರಡು ಹೊರಡುವುದುಂಟೇ? 12 ೧೨ ನನ್ನ ಸಹೋದರರೇ, ಅಂಜೂರದ ಮರವು ಎಣ್ಣೆ ಮರದ ಕಾಯಿ ಬಿಡುವುದೋ? ದ್ರಾಕ್ಷಿ ಬಳ್ಳಿಯಲ್ಲಿ ಅಂಜೂರದ ಹಣ್ಣು ಬಿಡುವುದೋ? ಹಾಗೆಯೇ ಉಪ್ಪುನೀರಿನ ಬುಗ್ಗೆಯಿಂದ ಸಿಹಿ ನೀರು ಬರುವುದಿಲ್ಲ. 13 ೧೩ ನಿಮ್ಮಲ್ಲಿ ಜ್ಞಾನಿಯೂ, ಬುದ್ಧಿವಂತನೂ ಯಾರು? ಅಂಥವನು ಒಳ್ಳೆಯ ನಡತೆಯಿಂದ, ಜ್ಞಾನದ ಲಕ್ಷಣವಾದ ವಿನಯಶೀಲತೆಯ ಕ್ರಿಯೆಗಳಿಂದ ಅದನ್ನು ತೋರಿಸಲಿ. 14 ೧೪ ಆದರೆ ತೀಕ್ಷ್ಣವಾದ ಮತ್ಸರವೂ, ಸ್ವಾರ್ಥಾಭಿಲಾಶೆಯೂ ನಿಮ್ಮ ಹೃದಯದೊಳಗೆ ಇರುವುದಾದರೆ ನೀವು ಸತ್ಯಕ್ಕೆ ವಿರೋಧವಾಗಿ ಸುಳ್ಳಾಡಿ ಹೊಗಳಿಕೊಳ್ಳಬೇಡಿರಿ. 15 ೧೫ ಅದು ಮೇಲಿಂದ ಬಂದ ಜ್ಞಾನವಲ್ಲ. ಅದು ಭೂಸಂಬಂಧವಾದದ್ದು, ಲೌಕಿಕವಾದುದು, ದೆವ್ವಗಳಿಗೆ ಸಂಬಂಧಪಟ್ಟದ್ದು. 16 ೧೬ ಮತ್ಸರವೂ, ಹಗೆತನವೂ ಇರುವ ಕಡೆ ಗೊಂದಲಗಳೂ, ಸಕಲ ವಿಧದ ನೀಚ ಕೃತ್ಯಗಳೂ ಇರುವವು. 17 ೧೭ ಆದರೆ ಮೇಲಿಂದ ಬರುವ ಜ್ಞಾನವು ಮೊದಲು ಪರಿಶುದ್ಧವಾದದ್ದು ಆಮೇಲೆ ಸಮಾಧಾನಕರವಾದದ್ದು, ವಿನಯವುಳ್ಳದ್ದು, ಸಂತೋಷವಾಗಿ ಒಪ್ಪಿಕೊಳ್ಳುವಂಥದ್ದು, ಕರುಣೆ ಮತ್ತು ಒಳ್ಳೆ ಫಲಗಳಿಂದ ತುಂಬಿರುವಂಥದ್ದು, ಪಕ್ಷಪಾತವಿಲ್ಲದ್ದು, ಪ್ರಾಮಾಣಿಕವಾದ್ದದು ಆಗಿದೆ. 18 ೧೮ ಸಮಾಧಾನವನ್ನು ಉಂಟುಮಾಡುವವರು ಸಮಾಧಾನವೆಂಬ ಬೀಜವನ್ನು ಬಿತ್ತಿ ನೀತಿಯೆಂಬ ಫಲವನ್ನು ಕೊಯ್ಯುವರು.

< ಯಾಕೋಬನು ಬರೆದ ಪತ್ರಿಕೆ 3 >