< ಯೆಶಾಯನು 9 >

1 ಆದರೆ ಸಂಕಟಪಟ್ಟ ದೇಶಕ್ಕೆ ಅಂಧಕಾರವಿಲ್ಲ. ಪೂರ್ವಕಾಲದಲ್ಲಿ ಜೆಬುಲೋನ್ ಮತ್ತು ನಫ್ತಾಲಿ ಸೀಮೆಗಳನ್ನು, ಆತನು ಅವಮಾನಕ್ಕೆ ಗುರಿಮಾಡಿದನು. ಅನಂತರದಲ್ಲಿ ಯೊರ್ದನಿನ ಆಚೆಯ ಸೀಮೆ, ಸಮುದ್ರದ ಕಡೆಗಿರುವ ಸೀಮೆ, ಅನ್ಯಜನಗಳಿರುವ ಗಲಿಲಾಯ ಸೀಮೆ ಈ ಪ್ರಾಂತ್ಯವನ್ನೆಲ್ಲಾ ಘನಪಡಿಸಿದ್ದಾನೆ. 2 ಕತ್ತಲಲ್ಲಿ ಸಂಚರಿಸಿದ ಜನರಿಗೆ ದೊಡ್ಡ ಬೆಳಕು ಕಾಣಿಸಿತು. ಕಾರ್ಗತ್ತಲಾದ ದೇಶದಲ್ಲಿದ್ದವರಿಗೆ ಪ್ರಕಾಶವು ಹೊಳೆಯಿತು. 3 ನೀನು ಪ್ರಜೆಗಳನ್ನು ವೃದ್ಧಿಗೊಳಿಸಿದ್ದೀ. ಅವರಿಗೆ ಸಂತೋಷವನ್ನು ಹೆಚ್ಚಿಸಿದ್ದೀ. ಸುಗ್ಗಿ ಕಾಲದಲ್ಲಿ ಜನರು ಹರ್ಷಿಸುವ ಹಾಗೂ, ಕೊಳ್ಳೆಯನ್ನು ಹಂಚಿಕೊಳ್ಳುವವರು, ಹೆಚ್ಚಳಪಡುವವರು ನಿನ್ನ ಮುಂದೆ ಆನಂದಿಸುತ್ತಾರೆ. 4 ಅವರಿಗೆ ಭಾರವಾದ ನೊಗವನ್ನೂ, ಬೆನ್ನನ್ನು ಹೊಡೆದ ಕೋಲನ್ನೂ, ಬಿಟ್ಟೀ ಹಿಡಿದವನ ದೊಣ್ಣೆಯನ್ನೂ ಮಿದ್ಯಾನಿನ ನಾಶನದ ದಿನದಲ್ಲಿ ಮುರಿದುಬಿಟ್ಟಂತೆ ಮುರಿದು ಬಿಟ್ಟಿದ್ದೀ. 5 ಯುದ್ಧದ ಗದ್ದಲದಲ್ಲಿ ತುಳಿದಾಡಿದವರೆಲ್ಲರ ಪಾದರಕ್ಷೆಗಳೂ, ರಕ್ತದಲ್ಲಿ ಅದ್ದಿದ ಉಡುಪುಗಳೂ, ಅಗ್ನಿಗೆ ಆಹಾರವಾಗಿ ಸುಟ್ಟುಹೋಗುವವು. 6 ಒಂದು ಮಗು ನಮಗಾಗಿ ಹುಟ್ಟಿದೆಯಷ್ಟೆ, ವರದ ಮಗನು ನಮಗೆ ದೊರೆತನು; ಆಡಳಿತವು ಅವನ ಬಾಹುವಿನ ಮೇಲಿರುವುದು; ಅದ್ಭುತ ಸ್ವರೂಪನು, ಆಲೋಚನಾ ಕರ್ತನು, ಪರಾಕ್ರಮಿಯಾದ ದೇವರೂ, ನಿತ್ಯನಾದ ತಂದೆ, ಸಮಾಧಾನದ ಪ್ರಭು ಎಂಬುದು ಆತನ ಹೆಸರು. 7 ಆತನ ಮುಖಾಂತರ ದಾವೀದನ ಸಿಂಹಾಸನದ ಆಡಳಿತವು ಅಭಿವೃದ್ದಿಯಾಗುವುದು. ದಾವೀದನ ರಾಜ್ಯದಲ್ಲಿ ನಿತ್ಯ ಸಮಾಧಾನವಿರುವುದು. ಆ ರಾಜ್ಯವು ಇಂದಿನಿಂದ ಯಾವಾಗಲೂ ನೀತಿನ್ಯಾಯಗಳ ಮೂಲಕ ಸ್ಥಾಪಿತವಾಗಿ ಸ್ಥಿರಗೊಳ್ಳುವುದು. ಸೇನಾಧೀಶ್ವರನಾದ ಯೆಹೋವನ ಅನುಗ್ರಹವು ಇದನ್ನು ನೆರವೇರಿಸುವುದು. 8 ಕರ್ತನು ಯಾಕೋಬ್ಯರಿಗೆ ಶಾಪದ ಸಂದೇಶವನ್ನು ಹೇಳಿ ಕಳುಹಿಸಿದನು. ಅದು ಇಸ್ರಾಯೇಲರಿಗೆ ತಗುಲಿತು. 9 ಗರ್ವದಿಂದಲೂ, ಕೆಚ್ಚೆದೆಯಿಂದಲೂ ಹೇಳಿಕೊಳ್ಳುವ ಎಲ್ಲಾ ಜನರಿಗೂ, ಎಫ್ರಾಯೀಮ್ಯರಿಗೂ, ಸಮಾರ್ಯದ ನಿವಾಸಿಗಳೆಲ್ಲರಿಗೂ ಆ ಮಾತು ಗೊತ್ತಾಗುವುದು. ಅದೇನೆಂದರೆ, 10 ೧೦ “ಇಟ್ಟಿಗೆಗಳು ಬಿದ್ದುಹೋದರೂ ಕೆತ್ತಿದ ಕಲ್ಲುಗಳಿಂದ ಕಟ್ಟುವೆವು. ಅತ್ತಿ ಮರಗಳು ಕಡಿಯಲ್ಪಟ್ಟರೂ ದೇವದಾರುಗಳನ್ನು ಹಾಕುವೆವು” ಎಂಬುದೇ. 11 ೧೧ ಆದುದರಿಂದ ಯೆಹೋವನು ರೆಚೀನಿನ ವೈರಿಗಳನ್ನು ಅವರಿಗೆ ವಿರುದ್ಧವಾಗಿ ಎಬ್ಬಿಸಿದ್ದಾನೆ. 12 ೧೨ ಅವರ ಮುಂದೆ ಪೂರ್ವದಿಂದ ಅರಾಮ್ಯರನ್ನು ಮತ್ತು ಅವರ ಹಿಂದೆ ಪಶ್ಚಿಮದಿಂದ ಫಿಲಿಷ್ಟಿಯರನ್ನು ಒಟ್ಟುಗೂಡಿಸುವನು. ಇವರು ಇಸ್ರಾಯೇಲರನ್ನು ಬಾಯಿದೆರೆದು ನುಂಗುವರು. ಇಷ್ಟೆಲ್ಲಾ ನಡೆದರೂ ಆತನ ಕೋಪವು ತೀರದೆ ಕೈ ಇನ್ನು ಚಾಚಿಯೇ ಇದೆ. 13 ೧೩ ಹೀಗಿದ್ದರೂ ಆ ಜನರು ತಮ್ಮನ್ನು ಹೊಡೆದಾತನ ಕಡೆಗೆ ತಿರುಗಿಕೊಳ್ಳಲೂ ಇಲ್ಲ, ಸೇನಾಧೀಶ್ವರನಾದ ಯೆಹೋವನನ್ನು ಸೇವಿಸಲೂ ಇಲ್ಲ. 14 ೧೪ ಆದಕಾರಣ ಯೆಹೋವನು ಇಸ್ರಾಯೇಲಿನಿಂದ ತಲೆ ಮತ್ತು ಬಾಲಗಳನ್ನು, ಖರ್ಜೂರದ ಕೊಂಬೆಗಳನ್ನು ಮತ್ತು ಬೇರುಗಳನ್ನು ಒಂದೇ ದಿನದಲ್ಲಿ ಕಡಿದು ಹಾಕುವನು. 15 ೧೫ ಹಿರಿಯನು ಮತ್ತು ಘನವುಳ್ಳವನು ತಲೆಯಾಗಿರುವನು. ಸುಳ್ಳು ಬೋಧನೆ ಮಾಡುವ ಪ್ರವಾದಿಯು ಬಾಲವಾಗಿರುವನು. 16 ೧೬ ಈ ಜನರನ್ನು ನಡೆಸುವವರು ದಾರಿ ತಪ್ಪಿಸುವವರಾಗಿದ್ದಾರೆ. ಅವರಿಂದ ನಡೆಸಲ್ಪಟ್ಟವರು ನಾಶವಾಗಿದ್ದಾರೆ. 17 ೧೭ ಹೀಗಿರಲು ಕರ್ತನು ಅವರ ಯೌವನಸ್ಥರಲ್ಲಿ ಉಲ್ಲಾಸಿಸುವುದಿಲ್ಲ. ಅವರಲ್ಲಿನ ಅನಾಥರನ್ನೂ, ವಿಧವೆಯರನ್ನೂ ಕರುಣಿಸುವುದಿಲ್ಲ. ಪ್ರತಿಯೊಬ್ಬನೂ ಭ್ರಷ್ಟನೂ, ದುಷ್ಟನೂ ಆಗಿದ್ದಾನೆ. ಎಲ್ಲರ ಬಾಯಿಯೂ ಮೂರ್ಖತನದ ಮಾತುಗಳನ್ನು ಆಡುತ್ತದೆ. ಆದುದರಿಂದ ಎಷ್ಟು ದಂಡಿಸಿದರೂ ಆತನ ಕೋಪವು ತೀರದೆ ಕೈ ಇನ್ನು ಚಾಚಿಯೇ ಇದೆ. 18 ೧೮ ದುಷ್ಟತನವು ಬೆಂಕಿಯಂತೆ ಉರಿದು, ಮುಳ್ಳು ಗಿಡಗಳನ್ನು ನುಂಗಿಬಿಟ್ಟು, ಅರಣ್ಯದ ಪೊದೆಗಳನ್ನು ಸುಟ್ಟು ಬಿಡುತ್ತದೆ, ಅವು ಹೊಗೆ ಹೊಗೆಯಾಗಿ ಸುತ್ತಿಕೊಂಡು ಮೇಲಕ್ಕೆ ಏರುತ್ತದೆ. 19 ೧೯ ಸೇನಾಧೀಶ್ವರನಾದ ಯೆಹೋವನ ಕೋಪೋದ್ರೇಕದಿಂದ ದೇಶವು ಸುಟ್ಟು ಹೋಗಿದೆ. ಪ್ರಜೆಗಳು ಅಗ್ನಿಗೆ ಆಹುತಿಯಾಗಿದ್ದಾರೆ. ಯಾವ ಮನುಷ್ಯನೂ ತನ್ನ ಸಹೋದರನನ್ನು ಉಳಿಸುವುದಿಲ್ಲ. 20 ೨೦ ಅವನು ಬಲಗಡೆಯಲ್ಲಿರುವುದನ್ನು ಕಿತ್ತುಕೊಂಡು ತಿಂದರೂ ಹಸಿದೇ ಇರುವನು. ಎಡಗಡೆಯಲ್ಲಿರುವುದನ್ನು ತಿಂದರೂ ತೃಪ್ತಿಯಾಗುವುದಿಲ್ಲ. ಒಬ್ಬೊಬ್ಬನು ತನ್ನ ತೋಳಿನ ಮಾಂಸವನ್ನೇ ತಿನ್ನುವನು. 21 ೨೧ ಮನಸ್ಸೆಯು ಎಫ್ರಾಯೀಮನ್ನು, ಎಫ್ರಾಯೀಮ ಮನಸ್ಸೆಯನ್ನು ತಿಂದುಬಿಡುತ್ತದೆ. ಈ ಎರಡೂ ಒಟ್ಟಾಗಿ ಯೆಹೂದಕ್ಕೆ ವಿರುದ್ಧವಾಗಿರುವುದು. ಇಷ್ಟೆಲ್ಲಾ ನಡೆದರೂ ಆತನ ಕೋಪವು ತೀರದೆ ಕೈ ಇನ್ನು ಚಾಚಿಯೇ ಇರುವುದು.

< ಯೆಶಾಯನು 9 >