< ಯೆಶಾಯನು 65 >

1 “ವಿಜ್ಞಾಪಿಸಿಕೊಳ್ಳದವರಿಗೂ ಪ್ರಸನ್ನನಾಗಿದ್ದೆನು, ನನ್ನನ್ನು ಹುಡುಕದವರಿಗೂ ಸಿಕ್ಕಿದೆನು, ನನ್ನ ನಾಮವನ್ನೆತ್ತಿ ಪ್ರಾರ್ಥಿಸದ ಜನಾಂಗಕ್ಕೂ, ‘ಇಗೋ, ನಾನಿದ್ದೇನೆ! ನಾನಿದ್ದೇನೆ’ ಎನ್ನುತ್ತಿದ್ದೆನು.
“ಕೇಳದವರಿಗೂ ನಾನು ನನ್ನನ್ನು ಪ್ರಕಟಿಸಿಕೊಂಡಿದ್ದೇನೆ. ನನ್ನನ್ನು ಹುಡುಕದವರಿಗೆ ನಾನು ಸಿಕ್ಕಿದೆನು. ನನ್ನ ಹೆಸರನ್ನು ಕರೆಯದ ಜನಾಂಗಕ್ಕೆ, ‘ಇಗೋ, ಇದ್ದೇನೆ; ಇಗೋ, ಇದ್ದೇನೆ,’ ಎಂದು ಹೇಳಿದೆನು.
2 ನನ್ನನ್ನು ತೊರೆದು, ಮನಸ್ಸು ಬಂದ ಹಾಗೆ ದುರ್ಮಾರ್ಗದಲ್ಲಿ ನಡೆಯುವ ಜನರನ್ನು ನಾನು ದಿನವೆಲ್ಲಾ ಕೈಚಾಚಿ ಕರೆದೆನು.
ಒಳ್ಳೆಯದಲ್ಲದ ಮಾರ್ಗದಲ್ಲಿ ತಮ್ಮ ಆಲೋಚನೆಗಳ ಪ್ರಕಾರ ನಡೆದುಕೊಂಡು ತಿರುಗಿಬೀಳುವ ಜನರಿಗೆ ದಿನವೆಲ್ಲಾ ನಾನು ಕೈಚಾಚಿ ಕರೆದೆನು.
3 ಈ ಜನರು ವನಗಳಲ್ಲಿ ಯಜ್ಞ ಮಾಡುತ್ತಾ, ಇಟ್ಟಿಗೆಯ ಯಜ್ಞವೇದಿಯ ಮೇಲೆ ಧೂಪಹಾಕುತ್ತಾ ನನ್ನನ್ನು ಯಾವಾಗಲೂ ಕೆಣಕುತ್ತಾರೆ.
ಇವರು ಯಾವಾಗಲೂ ನನ್ನ ಮುಖದ ಮುಂದೆ ನನಗೆ ಕೋಪೋದ್ರೇಕವನ್ನು ಎಬ್ಬಿಸುವ ಜನರು. ತೋಟಗಳಲ್ಲಿ ಬಲಿ ಅರ್ಪಿಸಿ, ಇಟ್ಟಿಗೆಯ ಬಲಿಪೀಠದ ಮೇಲೆ ಧೂಪ ಸುಡುವರು.
4 ಗೋರಿಗಳಲ್ಲಿ ಕುಳಿತುಕೊಳ್ಳುತ್ತಾ, ಗುಪ್ತಸ್ಥಳಗಳಲ್ಲಿ ರಾತ್ರಿ ಕಳೆಯುತ್ತಾ, ಹಂದಿಯ ಮಾಂಸವನ್ನು ತಿನ್ನುತ್ತಾ, ಅಸಹ್ಯ ಪದಾರ್ಥಗಳ ಸಾರನ್ನು ತಮ್ಮ ಪಾತ್ರೆಗಳಲ್ಲಿ ಬಡಿಸಿಕೊಳ್ಳುತ್ತಾ ಅಲ್ಲಿ ನಿಂತಿರುತ್ತಾರೆ.
ಸಮಾಧಿಗಳಲ್ಲಿ ಉಳಿದು, ಗವಿಗಳಲ್ಲಿ ತಂಗುವರು. ಹಂದಿಯ ಮಾಂಸವನ್ನು ತಿನ್ನುವರು ತಮ್ಮ ಪಾತ್ರೆಗಳಲ್ಲಿ ಅಶುದ್ಧ ಪದಾರ್ಥಗಳ ಸಾರನ್ನು ಇಟ್ಟುಕೊಂಡು,
5 ಅವರು, ‘ಹತ್ತಿರ ಬರಬೇಡ, ನಾನು ಮಡಿವಂತನು, ನೀನು ಸೇರತಕ್ಕವನಲ್ಲ’ ಎನ್ನುತ್ತಾ, ಅಂತು ಪ್ರತಿನಿತ್ಯವೂ ಮುಖದೆದುರಿಗೆ ನನ್ನನ್ನು ಕೆಣಕುತ್ತಾ, ನನ್ನ ಮೂಗಿಗೆ ದಿನವೆಲ್ಲಾ ಉರಿಯುವ ಬೆಂಕಿಯ ಹೊಗೆಯಾಗಿದ್ದಾರೆ.
‘ನಿನ್ನಷ್ಟಕ್ಕೆ ನೀನೇ ನಿಂತುಕೋ, ನನ್ನ ಬಳಿಗೆ ಬರಬೇಡ. ಏಕೆಂದರೆ ನಿನಗಿಂತ ಪರಿಶುದ್ಧನಾಗಿದ್ದೇನೆ,’ ಎಂದು ಹೇಳುವರು. ಇವರು ನನ್ನ ಮೂಗಿನಲ್ಲಿ ಹೊಗೆಯಾಗಿಯೂ, ದಿನವೆಲ್ಲಾ ಉರಿಯುವ ಬೆಂಕಿಯಾಗಿಯೂ ಇದ್ದಾರೆ.
6 ಇಗೋ, ಇದೆಲ್ಲಾ ಶಾಸನವಾಗಿ ನನ್ನ ಕಣ್ಣೆದುರಿಗಿದೆ, ನಾನು ಮುಯ್ಯಿ ತೀರಿಸುವ ತನಕ ಸುಮ್ಮನಿರಲಾರೆನು; ಅದರ ಪ್ರತಿಫಲವನ್ನು ಇವರ ಮಡಿಲಿಗೆ ಹಾಕುವೆನು;
“ನನ್ನ ಮುಂದೆ ಅದು ಬರೆಯಲಾಗಿದೆ. ನಾನು ಸುಮ್ಮನಿರದೆ ಪ್ರತಿಫಲ ಕೊಡುತ್ತೇನೆ. ಅವರ ಮಡಿಲಲ್ಲಿ ಪ್ರತಿಫಲ ಕೊಡುತ್ತೇನೆ.
7 ಇವರೂ ಇವರ ಪೂರ್ವಿಕರೂ ಬೆಟ್ಟಗುಡ್ಡಗಳಲ್ಲಿ ಧೂಪಹಾಕಿ, ನನ್ನನ್ನು ಹೀನೈಸಿ ನಡೆಸಿದ ಅಪರಾಧ ಕಾರ್ಯದ ಫಲವನ್ನು ಅದರ ಅಳತೆಗೆ ಸರಿಯಾಗಿ ಇವರ ಮಡಿಲಿಗೆ ಸುರಿಯುವೆನು” ಎಂದು ಯೆಹೋವನು ಹೇಳುತ್ತಾನೆ.
ನಿಮ್ಮ ಪಾಪಗಳಿಗೂ, ನಿಮ್ಮ ತಂದೆಗಳ ಪಾಪಗಳಿಗೂ ಕೂಡ ಪ್ರತಿಫಲ ಕೊಡುತ್ತೇನೆ” ಎಂದು ಯೆಹೋವ ದೇವರು ಹೇಳುತ್ತಾರೆ. “ಅವರು ಬೆಟ್ಟಗಳ ಮೇಲೆ ಧೂಪ ಸುಟ್ಟು, ಗುಡ್ಡಗಳ ಮೇಲೆ ನನ್ನನ್ನು ಪರಿಹಾಸ್ಯ ಮಾಡಿದರಲ್ಲಾ. ಹೀಗಿರುವುದರಿಂದ ಅವರ ಹಿಂದಿನ ಕೆಲಸಗಳನ್ನು ಅವರ ಮಡಿಲಲ್ಲಿ ಅಳೆದು ಸುರಿಸುವೆನು.”
8 ಯೆಹೋವನು ಹೀಗನ್ನುತ್ತಾನೆ, “ರಸ ದೊರೆಯಬಹುದಾದ ದ್ರಾಕ್ಷಿಯ ಗೊಂಚಲನ್ನು ಒಬ್ಬನು ನೋಡಿ, ‘ಹಾಳುಮಾಡಬೇಡ, ಅದರಲ್ಲಿ ಪ್ರಯೋಜನವಿದೆ’ ಎನ್ನುವಂತೆ, ನಾನು ನನ್ನ ಸೇವಕರನ್ನು ಲಕ್ಷ್ಯಕ್ಕೆ ತಂದು, ಇವರನ್ನೆಲ್ಲಾ ಹಾಳುಮಾಡಬಾರದು ಎಂದು ಅಂದುಕೊಳ್ಳುವೆನು,
ಯೆಹೋವ ದೇವರು ಹೀಗೆನ್ನುತ್ತಾರೆ: “ರಸ ದೊರೆಯಬಹುದಾದ ದ್ರಾಕ್ಷಿ ಗೊಂಚಲನ್ನು ಒಬ್ಬನು ನೋಡಿ, ‘ಹಾಳು ಮಾಡಬೇಡ, ಅದರಲ್ಲಿ ಪ್ರಯೋಜನವಿದೆ,’ ಎನ್ನುವಂತೆ ನಾನು ನನ್ನ ಸೇವಕರನ್ನು ಲಕ್ಷ್ಯಕ್ಕೆ ತಂದು ಇವರನ್ನೆಲ್ಲಾ ಹಾಳುಮಾಡಬಾರದು ಎಂದುಕೊಳ್ಳುವೆನು.
9 ಯಾಕೋಬಿನಿಂದ ಸಂತಾನವನ್ನು ಹುಟ್ಟಿಸುವೆನು, ಯೆಹೂದ ವಂಶದಿಂದ ನನ್ನ ಪರ್ವತಗಳ ಸ್ವತ್ತಿನ ಸಂತತಿಯನ್ನು ಬರಮಾಡುವೆನು, ನನ್ನ ಆಪ್ತರು ಆ ಸ್ವತ್ತನ್ನು ಅನುಭವಿಸುವರು, ನನ್ನ ಸೇವಕರು ಅಲ್ಲಿ ವಾಸಿಸುವರು.
ಯಾಕೋಬಿನೊಳಗಿಂದ ಒಂದು ಸಂತಾನವನ್ನೂ, ಯೆಹೂದದೊಳಗಿಂದ ನನ್ನ ಪರ್ವತಗಳಿಗೆ ಬಾಧ್ಯಸ್ಥನಾಗಿರುವವನನ್ನು ಹೊರಗೆ ಬರಮಾಡುವೆನು. ನಾನು ಆಯ್ದುಕೊಂಡವರು ಅದನ್ನು ಸ್ವಾಧೀನಮಾಡಿಕೊಳ್ಳುವರು. ನನ್ನ ಸೇವಕರು ಅದರಲ್ಲಿ ವಾಸವಾಗುವರು.
10 ೧೦ ಆಗ ನನ್ನ ಭಕ್ತಜನರ ಹಿತಕ್ಕಾಗಿ ಶಾರೋನು ಹಿಂಡುಗಳಿಗೆ ಹುಲ್ಲುಗಾವಲಾಗಿಯೂ, ಆಕೋರಿನ ತಗ್ಗು ದನದ ಹಕ್ಕೆಯಾಗಿಯೂ ಇರುವವು.
ನನ್ನನ್ನು ಹುಡುಕುವ ನನ್ನ ಜನರಿಗೋಸ್ಕರ ಶಾರೋನು ಮಂದೆಗಳ ಹಟ್ಟಿಯಾಗಿಯೂ, ಆಕೋರಿನ ತಗ್ಗು, ದನಗಳು ಮಲಗುವ ಸ್ಥಳವಾಗಿಯೂ ಇರುವುದು, ಎಂದು ಯೆಹೋವ ದೇವರು ಹೇಳುತ್ತಾರೆ.
11 ೧೧ ಆದರೆ ಯೆಹೋವನಾದ ನನ್ನನ್ನು ತೊರೆದು, ನನ್ನ ಪವಿತ್ರ ಪರ್ವತವನ್ನು ಮರೆತು, ಶುಭದಾಯಕ ದೇವತೆಗೆ ಔತಣವನ್ನು ಏರ್ಪಡಿಸಿ, ಗತಿದಾಯಕ ದೇವತೆಗೆ ಮದ್ಯವನ್ನು ಬೆರಸಿದ ನಿಮಗೆ ಕತ್ತಿಯನ್ನೇ ಗತಿಯಾಗ ಮಾಡುವೆನು.
“ಆದರೆ ಯೆಹೋವನಾದ ನನ್ನನ್ನು ತೊರೆದು, ನನ್ನ ಪವಿತ್ರ ಪರ್ವತವನ್ನು ಮರೆತು, ಶುಭದಾಯಕ ದೇವತೆಗೆ ಔತಣವನ್ನು ಅಣಿಮಾಡಿ, ಗಾದ್ ಎಂಬ ಅದೃಷ್ಟ ದೇವತೆಗೆ ಮದ್ಯವನ್ನು ತುಂಬಾ ಬೆರೆಸಿದ ನಿಮಗೆ
12 ೧೨ ನೀವೆಲ್ಲರೂ ಕತ್ತಿಗೆ ಬೀಳುವಿರಿ, ನೀವೆಲ್ಲರೂ ಕೊಲೆಗೊಳಗಾಗಿ ಬೀಳುವಿರಿ, ಏಕೆಂದರೆ ನಾನು ಕೂಗಲು ನೀವು ಉತ್ತರಕೊಡಲಿಲ್ಲ. ನಾನು ಹೇಳಿದರೂ ನೀವು ಕೇಳಲಿಲ್ಲ; ನನ್ನ ಚಿತ್ತಕ್ಕೆ ವಿರುದ್ಧವಾದದ್ದನ್ನು ನಡೆಸಿ, ನನಗೆ ಇಷ್ಟವಿಲ್ಲದ್ದನ್ನು ಆರಿಸಿಕೊಂಡಿರಿ.”
ಖಡ್ಗವನ್ನೇ ಗತಿಯಾಗ ಮಾಡುವೆನು. ಆದ್ದರಿಂದ ನಿಮ್ಮನ್ನು ಖಡ್ಗಕ್ಕೆ ನೇಮಿಸುವೆನು. ನೀವೆಲ್ಲರು ಕೊಲೆಗೆ ಬೊಗ್ಗಿಕೊಳ್ಳುವಿರಿ. ಏಕೆಂದರೆ, ನಾನು ಕರೆಯಲು, ನೀವು ಉತ್ತರ ಕೊಡಲಿಲ್ಲ. ನಾನು ಹೇಳಿದಾಗ ನೀವು ಕೇಳಲಿಲ್ಲ. ನನ್ನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದಿರಿ. ನಾನು ಮೆಚ್ಚದ್ದನ್ನು ಆರಿಸಿಕೊಂಡಿರಿ.”
13 ೧೩ ಹೀಗಿರಲು ಕರ್ತನಾದ ಯೆಹೋವನು ಹೀಗೆನ್ನುತ್ತಾನೆ, “ಇಗೋ, ನನ್ನ ಸೇವಕರು ಊಟಮಾಡುವರು, ನೀವು ಹಸಿದಿರುವಿರಿ; ಇಗೋ, ನನ್ನ ಸೇವಕರು ಕುಡಿಯುವರು, ನೀವು ದಾಹಗೊಳ್ಳುವಿರಿ; ಇಗೋ, ನನ್ನ ಸೇವಕರು ಉಲ್ಲಾಸಗೊಳ್ಳುವರು, ನೀವು ಆಶಾಭಂಗಪಡುವಿರಿ.
ಹೀಗಿರುವುದರಿಂದ ಸಾರ್ವಭೌಮ ಯೆಹೋವ ದೇವರು ಹೇಳುವುದೇನೆಂದರೆ: “ನನ್ನ ಸೇವಕರು ತಿನ್ನುವರು. ಆದರೆ ನೀವು ಹಸಿದಿರುವಿರಿ. ನನ್ನ ಸೇವಕರು ಕುಡಿಯುವರು, ಆದರೆ ನೀವು ಬಾಯಾರಿ ಇರುವಿರಿ. ಇಗೋ, ನನ್ನ ಸೇವಕರು ಸಂತೋಷಪಡುವರು, ಆದರೆ ನೀವು ನಾಚಿಕೆ ಪಡುವಿರಿ.
14 ೧೪ ಇಗೋ, ನನ್ನ ಸೇವಕರು ಹೃದಯಾನಂದದಿಂದ ಹರ್ಷಧ್ವನಿಗೈಯುವರು, ನೀವೋ ಮನೋವ್ಯಥೆಯಿಂದ ಮೊರೆಯಿಟ್ಟು, ಹೃದಯದ ಯಾತನೆಯಿಂದ ಗೋಳಾಡುವಿರಿ.
ಇಗೋ, ನನ್ನ ಸೇವಕರು ಹೃದಯದ ಆನಂದದಿಂದ ಹಾಡುವರು, ಆದರೆ ನೀವು ಹೃದಯದ ವ್ಯಸನದಿಂದ ಅಳುವಿರಿ ಮತ್ತು ಮುರಿದ ಆತ್ಮದಿಂದ ಗೋಳಾಡುವಿರಿ.
15 ೧೫ ಕರ್ತನಾದ ಯೆಹೋವನು ನಿಮ್ಮನ್ನು ಕೊಂದುಹಾಕುವನು, ನಿಮ್ಮ ಹೆಸರು ನನ್ನ ಆಪ್ತಜನರು ಶಪಿಸುವ ಶಾಪದ ಮಾತಾಗಿಯೇ ಉಳಿಯುವುದು; ನಾನು ನನ್ನ ಸೇವಕರಿಗೆ ಹೊಸ ಹೆಸರನ್ನು ಕೊಡುವೆನು.
ನಿಮ್ಮ ಹೆಸರನ್ನು ನಾನು ಆಯ್ದುಕೊಂಡವರಿಗೆ ಶಾಪವಾಗಿ ಉಳಿಸುವಿರಿ. ಹೇಗೆಂದರೆ, ಸಾರ್ವಭೌಮ ಯೆಹೋವ ದೇವರು ಅಪನಂಬಿಗಸ್ತರಾದ ನಿಮ್ಮನ್ನು ಕೊಂದುಹಾಕಿ, ತಮ್ಮ ಸೇವಕರಿಗಾದರೋ ಬೇರೆ ಹೆಸರನ್ನು ನೀಡುವರು.
16 ೧೬ ನಿಮ್ಮ ಪೂರ್ವದ ಕಷ್ಟಗಳು ಇನ್ನು ನನ್ನ ಕಣ್ಣಿಗೆ ಬೀಳದೆ ಮರೆತು ಹೋಗಿರುವುದರಿಂದ ಲೋಕದಲ್ಲಿ ತನ್ನನ್ನು ಆಶೀರ್ವದಿಸಿಕೊಳ್ಳುವ ಪ್ರತಿಯೊಬ್ಬನೂ ಸತ್ಯಸಂಧನಾದ ದೇವರ ಹೆಸರಿನಿಂದ ಆಶೀರ್ವದಿಸಿಕೊಳ್ಳುವನು; ಲೋಕದಲ್ಲಿ ಆಣೆಯಿಡುವ ಪ್ರತಿಯೊಬ್ಬನೂ ಸತ್ಯವಂತನಾದ ದೇವರ ಮೇಲೆ ಆಣೆಯಿಡುವನು.
ಆಗ ದೇಶದಲ್ಲಿ ತನ್ನನ್ನು ಆಶೀರ್ವದಿಸುವವನು, ಸತ್ಯ ದೇವರಲ್ಲಿ ತನ್ನನ್ನು ಆಶೀರ್ವದಿಸಿಕೊಳ್ಳುವನು; ದೇಶದಲ್ಲಿ ಆಣೆ ಇಟ್ಟುಕೊಳ್ಳುವವನು, ಸತ್ಯ ದೇವರಲ್ಲಿ ಆಣೆ ಇಟ್ಟುಕೊಳ್ಳುವನು. ಏಕೆಂದರೆ ಮುಂಚಿನ ಕಷ್ಟಗಳು ಮರೆತು ಹೋಗಿವೆ, ಮತ್ತು ಅವು ನನ್ನ ಕಣ್ಣಿಗೆ ಮರೆಯಾಗಿವೆ.
17 ೧೭ “ಇಗೋ, ನೂತನ ಆಕಾಶಮಂಡಲವನ್ನೂ ಮತ್ತು ನೂತನ ಭೂಮಂಡಲವನ್ನೂ ಸೃಷ್ಟಿಸುವೆನು; ಮೊದಲಿದ್ದದ್ದನ್ನು ಯಾರೂ ಜ್ಞಾಪಿಸಿಕೊಳ್ಳರು, ಅದು ನೆನಪಿಗೆ ಬಾರದು.
“ನಾನು ಹೊಸ ಆಕಾಶವನ್ನೂ, ಹೊಸ ಭೂಮಿಯನ್ನೂ ಸೃಷ್ಟಿಸುತ್ತೇನೆ. ಮುಂಚಿನವುಗಳು ಜ್ಞಾಪಕದಲ್ಲಿರುವುದಿಲ್ಲ ಇಲ್ಲವೆ ಅವು ಸ್ಮರಣೆಗೆ ಬರುವುದಿಲ್ಲ.
18 ೧೮ ನಾನು ಮಾಡುವ ಸೃಷ್ಟಿಕಾರ್ಯದಲ್ಲಿಯೇ ಹರ್ಷಗೊಂಡು ಸದಾ ಉಲ್ಲಾಸಿಸಿರಿ; ಆಹಾ, ನಾನು ಯೆರೂಸಲೇಮನ್ನು ಉಲ್ಲಾಸದ ನಿವಾಸವನ್ನಾಗಿಯೂ, ಅದರ ಜನರನ್ನು ಹರ್ಷಭರಿತರನ್ನಾಗಿಯೂ ಮಾಡುವೆನು.
ಆದರೆ ನಾನು ಸೃಷ್ಟಿಸುವುದರ ವಿಷಯದಲ್ಲಿ ಸಂತೋಷಿಸಿ, ಎಂದೆಂದಿಗೂ ಉಲ್ಲಾಸಪಡಿರಿ. ಏಕೆಂದರೆ ಇಗೋ, ನಾನು ಯೆರೂಸಲೇಮಿನಲ್ಲಿ ಉಲ್ಲಾಸವನ್ನೂ, ನನ್ನ ಜನರಲ್ಲಿ ಸಂತೋಷವನ್ನೂ ಸೃಷ್ಟಿಸುತ್ತೇನೆ.
19 ೧೯ ನಾನೂ ಯೆರೂಸಲೇಮನ್ನು ದೃಷ್ಟಿಸುತ್ತಾ ಉಲ್ಲಾಸಿಸುವೆನು, ಅದರ ಜನರಲ್ಲಿ ಹರ್ಷಗೊಳ್ಳುವೆನು. ರೋದನ ಶಬ್ದವೂ, ಪ್ರಲಾಪಧ್ವನಿಯೂ ಅಲ್ಲಿ ಇನ್ನು ಕೇಳಿಸವು.
ಯೆರೂಸಲೇಮಿನಲ್ಲಿ ಉಲ್ಲಾಸಿಸಿ, ನನ್ನ ಜನರಲ್ಲಿ ಸಂತೋಷ ಪಡುವೆನು. ಅದರಲ್ಲಿ ಅಳುವ ಧ್ವನಿಯೂ, ಪ್ರಲಾಪದ ಧ್ವನಿಯೂ ಇನ್ನು ಕೇಳಿಬರುವುದಿಲ್ಲ.
20 ೨೦ ಕೆಲವು ದಿನ ಮಾತ್ರ ಬದುಕತಕ್ಕ ಕೂಸಾಗಲಿ, ವೃದ್ಧನಾಗಲಿ ಅಲ್ಲಿ ಇರುವುದಿಲ್ಲ; ಯುವಕನು ನೂರು ವರ್ಷದೊಳಗೆ ಸಾಯನು, ಪಾಪಿಷ್ಠನಿಗೂ ನೂರು ವರ್ಷದೊಳಗೆ ಶಾಪ ತಗಲದು.
“ಅಲ್ಲಿ ಕೆಲವು ದಿನಗಳು ಮಾತ್ರ ಬದುಕತಕ್ಕ ಕೂಸೂ, ವೃದ್ಧನೂ ಇರುವುದಿಲ್ಲ. ಮಗುವು ನೂರು ವರುಷದವನಾಗಿ ಸಾಯುವುದು. ಆದರೆ ನೂರು ವರುಷವನ್ನು ತಲುಪಲು ವಿಫಲನಾದವನನ್ನು ಶಾಪಗ್ರಸ್ತ ಎಂದು ಪರಿಗಣಿಸಲಾಗುತ್ತದೆ.
21 ೨೧ ಅಲ್ಲಿನ ಜನರು ತಾವು ಕಟ್ಟಿದ ಮನೆಗಳಲ್ಲಿ ತಾವೇ ವಾಸಿಸುವರು, ತಾವು ಮಾಡಿದ ದ್ರಾಕ್ಷಿಯ ತೋಟಗಳ ಫಲವನ್ನು ತಾವೇ ಅನುಭವಿಸುವರು.
ಇದಲ್ಲದೆ ಅವರು ಮನೆಗಳನ್ನು ಕಟ್ಟಿ, ವಾಸಮಾಡುವರು; ದ್ರಾಕ್ಷಿತೋಟಗಳನ್ನು ನೆಟ್ಟು, ಅವುಗಳ ಫಲವನ್ನು ಉಣ್ಣುವರು.
22 ೨೨ ಒಬ್ಬನು ಕಟ್ಟಿದ ಮನೆಯಲ್ಲಿ ಬೇರೊಬ್ಬನು ವಾಸಿಸನು; ಒಬ್ಬನು ಮಾಡಿದ ತೋಟದ ಫಲವು ಇನ್ನೊಬ್ಬನಿಗೆ ವಶವಾಗದು; ನನ್ನ ಜನರ ಆಯುಸ್ಸು ವೃಕ್ಷದ ಆಯುಸ್ಸಿನಂತಿರುವುದು; ನನ್ನ ಆಪ್ತರು ತಮ್ಮ ಕೈಕೆಲಸದ ಆದಾಯವನ್ನು ಸಂಪೂರ್ಣವಾಗಿ ಅನುಭವಿಸುವರು.
ಅವರು ಕಟ್ಟಿದ ಮನೆಗಳಲ್ಲಿ ಬೇರೆಯವರು ವಾಸಮಾಡುವುದಿಲ್ಲ. ಅವರು ನೆಟ್ಟ ತೋಟದ ಫಲವನ್ನು ಇನ್ನೊಬ್ಬರು ತಿನ್ನುವುದಿಲ್ಲ. ಏಕೆಂದರೆ, ಮರಗಳ ಹಾಗೆ ನನ್ನ ಜನರು ಬಹುಕಾಲ ಬಾಳುವರು. ನಾನು ಆಯ್ದುಕೊಂಡವರು ತಮ್ಮ ಕೈಕೆಲಸಗಳನ್ನು ಅನುಭವಿಸುವರು.
23 ೨೩ ಅವರು ವ್ಯರ್ಥವಾಗಿ ದುಡಿಯರು, ಅವರಿಗೆ ಹುಟ್ಟುವ ಮಕ್ಕಳು ಘೋರವ್ಯಾಧಿಗೆ ಗುರಿಯಾಗರು. ಅವರು ಯೆಹೋವನ ಆಶೀರ್ವಾದವನ್ನು ಹೊಂದಿದವರ ಸಂತಾನವಷ್ಟೆ; ಅವರ ಸಂತತಿಯವರು ಅವರೊಂದಿಗೆ ಬಹುದಿನವಿರುವರು.
ಅವರು ವ್ಯರ್ಥವಾಗಿ ದುಡಿಯರು. ಕಷ್ಟವನ್ನು ಎದುರುಗೊಳ್ಳುವುದಿಲ್ಲ. ಏಕೆಂದರೆ ಅವರು ಯೆಹೋವ ದೇವರ ಆಶೀರ್ವಾದ ಹೊಂದಿದವರ ಸಂತಾನವಾಗಿದ್ದಾರೆ. ಅವರ ಸಂಗಡ ಅವರ ಸಂತತಿಯು ಸಹ ಆಶೀರ್ವಾದ ಹೊಂದುವುದು.
24 ೨೪ ಆಗ ಅವರು ಬೇಡುವುದರೊಳಗೆ ಸದುತ್ತರವನ್ನು ದಯಪಾಲಿಸುವೆನು; ಅವರು ಹೇಳುತ್ತಿರುವಾಗಲೇ ಕೇಳುವೆನು.
ಅವರು ಕರೆಯುವುದಕ್ಕಿಂತ ಮುಂಚೆ ನಾನು ಉತ್ತರಕೊಡುವೆನು. ಅವರು ಇನ್ನೂ ಮಾತನಾಡುತ್ತಿರುವಾಗಲೇ ನಾನು ಕೇಳುವೆನು.
25 ೨೫ ತೋಳವು ಕುರಿಯ ಸಂಗಡ ಮೇಯುವುದು, ಸಿಂಹವು ಎತ್ತಿನಂತೆ ಹುಲ್ಲು ತಿನ್ನುವುದು, ಹಾವಿಗೆ ಧೂಳೇ ಆಹಾರವಾಗುವುದು. ನನ್ನ ಪರಿಶುದ್ಧ ಪರ್ವತದಲ್ಲೆಲ್ಲಾ ಯಾರೂ ಕೇಡು ಮಾಡುವುದಿಲ್ಲ, ಯಾರೂ ಹಾಳು ಮಾಡುವುದಿಲ್ಲ” ಎಂದು ಯೆಹೋವನು ಅನ್ನುತ್ತಾನೆ.
ತೋಳವೂ ಕುರಿಮರಿಯೂ ಒಂದಾಗಿ ಮೇಯುವುವು; ಸಿಂಹವು ಎತ್ತಿನ ಹಾಗೆ ಹುಲ್ಲು ತಿನ್ನುವುದು; ಹಾವಿಗೆ ಮಣ್ಣೇ ಆಹಾರವಾಗುವುದು; ಅವು ನನ್ನ ಪರಿಶುದ್ಧ ಪರ್ವತದಲ್ಲೆಲ್ಲಾ ಯಾವ ಕೇಡೂ ಮಾಡುವುದಿಲ್ಲ, ನಾಶವೂ ಮಾಡುವುದಿಲ್ಲ,” ಎಂದು ಯೆಹೋವ ದೇವರು ಹೇಳುತ್ತಾರೆ.

< ಯೆಶಾಯನು 65 >