< ಇಬ್ರಿಯರಿಗೆ ಬರೆದ ಪತ್ರಿಕೆ 10 >

1 ಧರ್ಮಶಾಸ್ತ್ರವು ಮುಂದೆ ಬರಬೇಕಾಗಿದ್ದ ಉತ್ತಮ ಸಂಗತಿಗಳ ಛಾಯೆಯೇ ಹೊರತು ಅವುಗಳ ನಿಜ ಸ್ವರೂಪವಲ್ಲ. ಆದ್ದರಿಂದ ಆ ಧರ್ಮಶಾಸ್ತ್ರವು ಪ್ರತಿ ವರ್ಷವೂ ಯಾವಾಗಲೂ ಅರ್ಪಿತವಾಗುವ ಒಂದೇ ವಿಧವಾದ ಯಜ್ಞಗಳನ್ನು ಅರ್ಪಿಸಿ, ದೇವರ ಸಮೀಪಕ್ಕೆ ಬರುವವರನ್ನು ಎಂದಿಗೂ ಪರಿಪೂರ್ಣತೆಗೆ ತರಲಾರದು. 2 ತಂದಿದ್ದ ಪಕ್ಷದಲ್ಲಿ ಯಜ್ಞಗಳ ನಿಂತು ಹೋಗುತ್ತಿದ್ದವು, ಏಕೆಂದರೆ ಆರಾಧನೆ ಮಾಡುವವರು ಒಂದು ಸಾರಿ ಶುದ್ಧೀಕರಿಸಲ್ಪಟ್ಟ ಮೇಲೆ, ಅವರಿಗೆ ಪಾಪದ ಪ್ರಜ್ಞೆ ಎಂದಿಗೂ ಕಾಡುತ್ತಿರಲಿಲ್ಲ. 3 ಈಗಲಾದರೋ ಆ ಯಜ್ಞಗಳಿಂದ ಪ್ರತಿ ವರ್ಷದಲ್ಲಿಯೂ ಪಾಪಗಳ ಜ್ಞಾಪಕವಾಗುವುದುಂಟು, 4 ಯಾಕೆಂದರೆ ಹೋರಿಗಳ ಮತ್ತು ಕುರಿಗಳ ರಕ್ತದಿಂದ ಪಾಪಗಳನ್ನು ಪರಿಹಾರಮಾಡುವುದು ಅಸಾಧ್ಯವಾಗಿದೆ. 5 ಆದ್ದರಿಂದ ಕ್ರಿಸ್ತನು ಭೂಲೋಕದೊಳಗೆ ಬರುವಾಗ, “(ದೇವರೇ, ) ಯಜ್ಞಗಳೂ ಕಾಣಿಕೆಗಳೂ ನಿನಗೆ ಇಷ್ಟವಾಗಿರಲಿಲ್ಲ, ಆದರೆ ನನಗೆ ಒಂದು ದೇಹವನ್ನು ಸಿದ್ಧಮಾಡಿಕೊಟ್ಟಿರುವೆ, 6 ಸರ್ವಾಂಗಹೋಮಗಳಲ್ಲಿಯೂ ಪಾಪಪರಿಹಾರಕ ಯಜ್ಞಗಳಲ್ಲಿಯೂ ನೀನು ಸಂತೋಷಪಡುವುದಿಲ್ಲ. 7 ಆಗ ನಾನು, ಇಗೋ, ದೇವರೇ, ಗ್ರಂಥದ ಸುರುಳಿಯಲ್ಲಿ ನನ್ನನ್ನು ಕುರಿತು ಬರೆದಿರುವ ಪ್ರಕಾರ ನಿನ್ನ ಚಿತ್ತವನ್ನು ನೆರವೇರಿಸುವುದಕ್ಕೆ ಬಂದಿದ್ದೇನೆ” ಎಂದು ಹೇಳಿದೆನು. 8 ಧರ್ಮಶಾಸ್ತ್ರದ ಪ್ರಕಾರ ಅರ್ಪಿಸಲ್ಪಟ್ಟ ಯಜ್ಞಗಳು, “ಸರ್ವಾಂಗಹೋಮಗಳು ಮತ್ತು ಪಾಪಪರಿಹಾರಕ ಯಜ್ಞಗಳು ನಿನಗೆ ಇಷ್ಟವಾಗಿರಲಿಲ್ಲ. ನೀನು ಅವುಗಳಲ್ಲಿ ಸಂತೋಷಪಡುವುದಿಲ್ಲ” ಎಂದು ಹೇಳಿದ್ದಾನೆ. 9 ತರುವಾಯ ಆತನು “ಇಗೋ, ನಿನ್ನ ಚಿತ್ತವನ್ನು ನೆರವೇರಿಸುವುದಕ್ಕೆ ಬಂದಿದ್ದೇನೆ” ಎಂದು ಹೇಳಿದ್ದಾನೆ. ಆತನು ಎರಡನೆಯದನ್ನು ಸ್ಥಾಪಿಸುವುದಕ್ಕಾಗಿ ಮೊದಲನೆಯದನ್ನು ತೆಗೆದುಬಿಡುತ್ತಾನೆ. 10 ೧೦ ಯೇಸು ಕ್ರಿಸ್ತನು ಒಂದೇ ಸಾರಿ ದೇಹ ಸಮರ್ಪಣೆ ಮಾಡಿ ದೇವರ ಚಿತ್ತವನ್ನು ನೆರವೇರಿಸಿದ್ದರಿಂದಲೇ ನಾವು ಶುದ್ಧೀಕರಿಸಲ್ಪಟ್ಟವರಾಗಿರುವೆವು. 11 ೧೧ ಇದಲ್ಲದೆ ಪ್ರತಿಯೊಬ್ಬ ಯಾಜಕನು ಪ್ರತಿದಿನ ಸೇವೆಮಾಡುತ್ತಾ, ಎಂದಿಗೂ ಪಾಪಗಳನ್ನು ತೆಗೆದು ಹಾಕಲಾರದಂಥ, ಒಂದೇ ವಿಧವಾದ ಯಜ್ಞಗಳನ್ನು ಪದೇ ಪದೇ ಸಮರ್ಪಿಸುತ್ತಾ ನಿಂತುಕೊಂಡಿರುವನು. 12 ೧೨ ಆದರೆ ಕ್ರಿಸ್ತನು ಪಾಪಗಳಿಗೋಸ್ಕರ ಸದಾಕಾಲಕ್ಕೂ ಒಂದೇ ಯಜ್ಞವನ್ನು ಸಮರ್ಪಿಸಿದ ಮೇಲೆ ದೇವರ ಬಲಗಡೆಯಲ್ಲಿ ಕುಳಿತುಕೊಂಡನು. 13 ೧೩ ಅಂದಿನಿಂದ ತನ್ನ ವಿರೋಧಿಗಳು ತನ್ನ ಪಾದಪೀಠವಾಗಿ ಮಾಡಲ್ಪಡುವ ತನಕ ಆತನು ಕಾಯುತ್ತಿರುವನು. 14 ೧೪ ಆತನು ಶುದ್ಧೀಕರಿಸಲ್ಪಡುವವರನ್ನು ಒಂದೇ ಸಮರ್ಪಣೆಯಿಂದ ನಿರಂತರವಾಗಿ ಪರಿಪೂರ್ಣರನ್ನಾಗಿ ಮಾಡಿದ್ದಾನೆ. 15 ೧೫ ಪವಿತ್ರಾತ್ಮನು ಸಹ ನಮಗೆ ಸಾಕ್ಷಿಕೊಡುವಾತನಾಗಿ, 16 ೧೬ “ಆ ದಿನಗಳು ಬಂದ ಮೇಲೆ ನಾನು ಅವರ ಸಂಗಡ ಮಾಡಿಕೊಳ್ಳುವ ಒಡಂಬಡಿಕೆಯು ಹೀಗಿರುವುದು, ನನ್ನ ಆಜ್ಞೆಗಳನ್ನು ಅವರ ಹೃದಯಗಳಲ್ಲಿ ಇಡುವೆನು, ಅವರ ಮನಸ್ಸಿನಲ್ಲಿ ಅವುಗಳನ್ನು ಬರೆಯುವೆನು ಎಂದು ಕರ್ತನು ನುಡಿಯುತ್ತಾನೆ.” ಎಂಬುದಾಗಿ ಹೇಳಿದ ತರುವಾಯ ಇನ್ನು, 17 ೧೭ “ಅವರ ಪಾಪಗಳನ್ನೂ ಅವರ ದುಷ್ಕೃತ್ಯಗಳನ್ನೂ ನನ್ನ ನೆನಪಿಗೆ ಎಂದಿಗೂ ತಂದುಕೊಳ್ಳುವುದಿಲ್ಲ.” ಎಂದು ಹೇಳುತ್ತಾನೆ. 18 ೧೮ ಪಾಪ ಕ್ಷಮಾಪಣೆಯಾದಲ್ಲಿ ಇನ್ನೂ ಅವುಗಳ ವಿಷಯದಲ್ಲಿ ಯಜ್ಞಗಳನ್ನು ಸಮರ್ಪಣೆಮಾಡುವಂಥ ಅವಶ್ಯಕತೆ ಇಲ್ಲ. 19 ೧೯ ಹೀಗಿರುವಲ್ಲಿ ಸಹೋದರರೇ, ಯೇಸು ತನ್ನ ರಕ್ತದಿಂದ ಆತನ ದೇಹವೆಂಬ ಪರದೆಯ ಮೂಲಕ ನಮಗೆ ಹೊಸದಾದ ಸಜೀವ ಮಾರ್ಗವನ್ನು ತೆರೆದಿಟ್ಟಿದ್ದಾನೆ. ಅದರ ಮೂಲಕ ಅತಿ ಪರಿಶುದ್ಧ ಸ್ಥಳವನ್ನು ಪ್ರವೇಶಿಸಲು ನಮಗೆ ಭರವಸೆ ದೊರೆತಿದೆ. 20 ೨೦ 21 ೨೧ ಮತ್ತು ದೇವರ ಮನೆತನದ ಮೇಲೆ ಅಧಿಕಾರವಿರುವ ಶ್ರೇಷ್ಠ ಯಾಜಕನು ನಮಗಿದ್ದಾನೆ. 22 ೨೨ ಆದಕಾರಣ ಕೆಟ್ಟ ಮನಸ್ಸಾಕ್ಷಿಯನ್ನು ಪ್ರೋಕ್ಷಿಸಿ ಶುದ್ಧೀಕರಿಸಿಕೊಂಡು, ತಿಳಿನೀರಿನಿಂದ ತೊಳೆದ ದೇಹದಿಂದಲೂ, ಯಥಾರ್ಥಹೃದಯದಿಂದಲೂ, ನಂಬಿಕೆಯ ಪೂರ್ಣನಿಶ್ಚಯದಿಂದಲೂ ದೇವರ ಸಮೀಪಕ್ಕೆ ಬರೋಣ. 23 ೨೩ ನಾವು ನಮ್ಮ ನಿರೀಕ್ಷೆಯನ್ನು ಕುರಿತು ಮಾಡಿದ ಅರಿಕೆಯನ್ನು ನಿಶ್ಚಂಚಲದಿಂದ ಬಿಗಿಯಾಗಿ ಹಿಡಿಯೋಣ, ಯಾಕೆಂದರೆ ವಾಗ್ದಾನ ಮಾಡಿದಾತನು ನಂಬಿಗಸ್ತನು. 24 ೨೪ ನಾವು ಪರಸ್ಪರ ಹಿತಚಿಂತಕರಾಗಿದ್ದು ಪ್ರೀತಿಸುತ್ತಿರಬೇಕೆಂತಲೂ ಸತ್ಕಾರ್ಯಮಾಡಬೇಕೆಂತಲೂ ಒಬ್ಬರನ್ನೊಬ್ಬರು ಹುರಿದುಂಬಿಸೋಣ. 25 ೨೫ ಸಭೆಯಾಗಿ ಸೇರುವ ರೂಢಿಯನ್ನು ಕೆಲವರು ಬಿಟ್ಟಂತೆ ನಾವು ಬಿಟ್ಟು ಬಿಡದೆ, ಆ ದಿನವು ಸಮೀಪಿಸುತ್ತಾ ಬರುತ್ತದೆಂದು ನೀವು ತಿಳಿದುಕೊಂಡಿರುವುದರಿಂದ ಒಬ್ಬರನ್ನೊಬ್ಬರು ಮತ್ತಷ್ಟು ಹೆಚ್ಚಾಗಿಯೇ ಪ್ರೋತ್ಸಾಹಿಸುತ್ತಿರೋಣ. 26 ೨೬ ನಾವು ಸತ್ಯದ ಪರಿಜ್ಞಾನವನ್ನು ಹೊಂದಿದ ಮೇಲೂ ಬೇಕೆಂದು ಪಾಪಮಾಡಿದರೆ ಪಾಪಪರಿಹಾರಕ್ಕಾಗಿ ಇನ್ನಾವ ಯಜ್ಞವೂ ಉಳಿದಿರುವುದಿಲ್ಲ. 27 ೨೭ ಬದಲಿಗೆ, ಅತ್ಯಂತ ಭಯಂಕರವಾದ ನ್ಯಾಯತೀರ್ಪಿನ ನಿರೀಕ್ಷೆ ಹಾಗೂ ದೇವರ ವಿರೋಧಿಗಳನ್ನು ದಹಿಸುವ ಕೋಪಾಗ್ನಿಯೂ ಮಾತ್ರ ಇರುವವು. 28 ೨೮ ಮೋಶೆಯ ಧರ್ಮಶಾಸ್ತ್ರವನ್ನು ತಿರಸ್ಕಾರ ಮಾಡಿದವನಿಗೆ ಇಬ್ಬರ ಇಲ್ಲವೆ ಮೂವರ ಸಾಕ್ಷ್ಯಧಾರದ ಮೇಲೆ ಕರುಣೆಯಿಲ್ಲದೆ ಮರಣದಂಡನೆ ಆಗುತ್ತಿತಷ್ಟೆ. 29 ೨೯ ಹೀಗಿರುವಲ್ಲಿ, ದೇವಕುಮಾರನನ್ನು ತುಳಿದು, ತನ್ನನ್ನು ಶುದ್ಧೀಕರಿಸಿದ ಒಡಂಬಡಿಕೆಯ ರಕ್ತವನ್ನು ಅಶುದ್ಧವೆಂದೆಣಿಸಿ, ದೇವರ ಕೃಪಾವರವಾಗಿರುವ ಆತ್ಮನನ್ನು ತಿರಸ್ಕರಿಸುವವನೋ, ಇನೆಂಥ ಕ್ರೂರದಂಡನೆಗೆ ಗುರಿ ಆಗುತ್ತಾನೆಂದು ನೀವೇ ಯೋಚಿಸಿನೋಡಿ? 30 ೩೦ “ಮುಯ್ಯಿಗೆ ಮುಯ್ಯಿ ತೀರಿಸುವುದು ನನ್ನ ಕೆಲಸ, ನಾನೇ ಪ್ರತಿಫಲವನ್ನು ಕೊಡುವೆನೆಂದು” ಹೇಳಿದಾತನನ್ನು ಬಲ್ಲೆವು. ಇದಲ್ಲದೆ “ಕರ್ತನು ತನ್ನ ಜನರಿಗೆ ನ್ಯಾಯ ತೀರಿಸುವನು” ಎಂದು ಹೇಳಿಯದೆ. 31 ೩೧ ಜೀವಸ್ವರೂಪನಾದ ದೇವರ ಕೈಯಲ್ಲಿ ಸಿಕ್ಕಿಬೀಳುವುದು ಎಷ್ಟೋ ಭಯಂಕರವಾದದ್ದು. 32 ೩೨ ಹೀಗಿರಲಾಗಿ ನೀವು ಜ್ಞಾನಪ್ರಕಾಶವನ್ನು ಹೊಂದಿದ ಮೇಲೆ ಕಷ್ಟಾನುಭವವೆಂಬ ಬಹು ಹೋರಾಟವನ್ನು ಸಹಿಸಿಕೊಂಡ ಹಿಂದಿನ ದಿನಗಳನ್ನು ನೆನಪಿಗೆ ತಂದುಕೊಳ್ಳಿರಿ. 33 ೩೩ ಕೆಲವು ಸಾರಿ ನೀವು ನಿಂದೆಗಳನ್ನೂ, ಸಂಕಟಗಳನ್ನೂ, ಅನುಭವಿಸಿ ಹಾಸ್ಯಕ್ಕೆ ಗುರಿಯಾದಿರಿ. ಕೆಲವು ಸಾರಿ ಅಂಥವುಗಳನ್ನು ಅನುಭವಿಸಿದವರಲ್ಲಿ ಪಾಲುಗಾರರಾಗಿದ್ದು ಕಷ್ಟಾನುಭವಿಗಳಾದಿರಿ. 34 ೩೪ ನೀವು ಸೆರೆಯವರಿಗೆ ಅನುತಾಪ ತೋರಿಸಿ, ನಿಮಗೋಸ್ಕರವಾಗಿ ಉತ್ತಮವಾಗಿಯೂ, ಸ್ಥಿರವಾಗಿಯೂ ಇರುವ ಆಸ್ತಿಯುಂಟೆಂದು ಚೆನ್ನಾಗಿ ಅರಿತುಕೊಂಡು, ನಿಮ್ಮ ಸೊತ್ತನ್ನು ಸುಲುಕೊಳ್ಳುವವರಿಗೆ ಸಂತೋಷದಿಂದ ಬಿಟ್ಟು ಕೊಟ್ಟಿದ್ದೀರಿ. 35 ೩೫ ಆದ್ದರಿಂದ ನಿಮ್ಮ ಧೈರ್ಯವನ್ನು ಬಿಟ್ಟುಬಿಡಬೇಡಿರಿ. ಅದಕ್ಕೆ ಮಹಾ ಪ್ರತಿಫಲ ಉಂಟು. 36 ೩೬ ನೀವು ದೇವರ ಚಿತ್ತವನ್ನು ನೆರವೇರಿಸಿದ ಮೇಲೆ ವಾಗ್ದಾನವನ್ನು ಹೊಂದಬೇಕಾದರೆ ನಿಮಗೆ ತಾಳ್ಮೆಯು ಅವಶ್ಯವಾಗಿದೆ. 37 ೩೭ “ಬರುವಾತನು ಇನ್ನು ಸ್ವಲ್ಪ ಕಾಲದಲ್ಲಿ ಬರುವನು ತಡಮಾಡುವುದಿಲ್ಲ. 38 ೩೮ ಆದರೆ ನನ್ನವನಾಗಿರುವ ನೀತಿವಂತನು ನಂಬಿಕೆಯಿಂದಲೇ ಬದುಕುವನು, ಅವನು ಅದರಿಂದ ಹಿಂಜರಿದರೆ ಅವನಲ್ಲಿ ನನಗೆ ಮೆಚ್ಚಿಕೆಯಿರುವುದಿಲ್ಲ.” 39 ೩೯ ನಾವಾದರೋ ಹಿಂಜರಿದವರಾಗಿ ನಾಶವಾಗುವವರಲ್ಲ, ನಂಬುವವರಾಗಿ ಆತ್ಮರಕ್ಷಣೆಯನ್ನು ಹೊಂದುವವರಾಗಿದ್ದೇವೆ.

< ಇಬ್ರಿಯರಿಗೆ ಬರೆದ ಪತ್ರಿಕೆ 10 >