< ಆದಿಕಾಂಡ 33 >

1 ಯಾಕೋಬನು ಕಣ್ಣೆತ್ತಿ ನೋಡಿದಾಗ, ಏಸಾವನು ನಾನೂರು ಮಂದಿ ಜನರ ಸಮೇತ ಬರುವುದನ್ನು ಕಂಡನು. ಆಗ ಅವನು ಲೇಯಳಿಗೂ ರಾಹೇಲಳಿಗೂ ಇಬ್ಬರು ದಾಸಿಯರಿಗೂ ಅವರವರ ಮಕ್ಕಳನ್ನು ಒಪ್ಪಿಸಿ ಅವರನ್ನು ಬೇರೆ ಬೇರೆ ಮಾಡಿ
ಯಾಕೋಬನು ಕಣ್ಣೆತ್ತಿ ನೋಡಿದಾಗ, ಏಸಾವನು ನಾನೂರು ಮಂದಿ ಮನುಷ್ಯರ ಸಂಗಡ ಬರುತ್ತಿದ್ದನು. ಆಗ ಅವನು ಲೇಯಳಿಗೂ, ರಾಹೇಲಳಿಗೂ, ಇಬ್ಬರು ದಾಸಿಯರಿಗೂ ಅವರವರ ಮಕ್ಕಳನ್ನು ಒಪ್ಪಿಸಿ, ಅವರನ್ನು ಬೇರೆ ಬೇರೆ ಮಾಡಿದನು.
2 ಮುಂದುಗಡೆಯಲ್ಲಿ ದಾಸಿಯರನ್ನೂ ಅವರ ಮಕ್ಕಳನ್ನೂ ಅವರ ಹಿಂದೆ ಲೇಯಳನ್ನೂ ಆಕೆಯ ಮಕ್ಕಳನ್ನೂ ಕಡೆಯಲ್ಲಿ ರಾಹೇಲಳನ್ನೂ ಯೋಸೇಫನನ್ನೂ ನಿಲ್ಲಿಸಿದನು.
ದಾಸಿಯರನ್ನೂ, ಅವರ ಮಕ್ಕಳನ್ನೂ ಮುಂದುಗಡೆಯಲ್ಲಿಯೂ; ಅವರ ಹಿಂದೆ ಲೇಯಳನ್ನೂ, ಆಕೆಯ ಮಕ್ಕಳನ್ನೂ; ಕಟ್ಟಕಡೆಯಲ್ಲಿ ರಾಹೇಲಳನ್ನೂ, ಯೋಸೇಫನನ್ನೂ ಇರಿಸಿದನು.
3 ತಾನೇ ಅವರ ಮುಂದಾಗಿ ಹೋಗಿ ತನ್ನ ಅಣ್ಣನು ಹತ್ತಿರ ಸಮೀಪಿಸುತ್ತಿರುವಾಗ ಏಳು ಸಾರಿ ನೆಲದವರೆಗೆ ತಲೆಬಾಗಿ ನಮಸ್ಕರಿಸಿದನು.
ತಾನೇ ಅವರ ಮುಂದಾಗಿ ಹೋಗಿ ತನ್ನ ಸಹೋದರನ ಬಳಿಗೆ ಬರುವವರೆಗೆ ಏಳು ಸಾರಿ ನೆಲದವರೆಗೆ ಬಗ್ಗಿದನು.
4 ಆಗ ಏಸಾವನು ಅವನನ್ನು ಎದುರುಗೊಳ್ಳುವುದಕ್ಕೆ ಓಡಿ ಬಂದು ಅವನ ಕೊರಳನ್ನು ಅಪ್ಪಿಕೊಂಡು ಮುದ್ದಿಟ್ಟನು. ಅವರಿಬ್ಬರೂ ಅತ್ತರು.
ಆಗ ಏಸಾವನು ಅವನನ್ನು ಎದುರುಗೊಳ್ಳುವುದಕ್ಕೆ ಓಡಿಬಂದು, ಅವನನ್ನು ಅಪ್ಪಿಕೊಂಡು, ಅವನ ಕೊರಳಿನ ಮೇಲೆ ಬಿದ್ದು, ಅವನಿಗೆ ಮುದ್ದಿಟ್ಟನು. ಅವರಿಬ್ಬರೂ ಅತ್ತರು.
5 ತರುವಾಯ ಏಸಾವನು ಕಣ್ಣೆತ್ತಿ ಆ ಸ್ತ್ರೀಯರನ್ನೂ ಮಕ್ಕಳನ್ನೂ ಕಂಡು, “ನಿನ್ನ ಜೊತೆಯಲ್ಲಿರುವ ಜನರು ಯಾರು?” ಎಂದು ಕೇಳಲು ಯಾಕೋಬನು ಅವನಿಗೆ, “ದೇವರು ನಿನ್ನ ಸೇವಕನಿಗೆ ಕೃಪೆಯಿಂದ ಅನುಗ್ರಹಿಸಿಕೊಟ್ಟ ಮಕ್ಕಳೇ ಇವರು” ಎಂದು ಹೇಳಿದನು.
ಆಗ ಏಸಾವನು ತನ್ನ ದೃಷ್ಟಿ ಹರಿಸಿ, ಆ ಸ್ತ್ರೀಯರನ್ನೂ, ಮಕ್ಕಳನ್ನೂ ನೋಡಿ, “ನಿನ್ನ ಜೊತೆಯಲ್ಲಿರುವ ಇವರು ಯಾರು?” ಎಂದು ಕೇಳಿದನು. ಅದಕ್ಕವನು, “ದೇವರು ನಿನ್ನ ದಾಸನಿಗೆ ಕೃಪೆಯಿಂದ ಕೊಟ್ಟ ಮಕ್ಕಳು,” ಎಂದನು.
6 ಆಗ ಅವನ ದಾಸಿಯರಿಬ್ಬರೂ ತಮ್ಮ ಮಕ್ಕಳನ್ನು ಕರೆದುಕೊಂಡು ಹತ್ತಿರಕ್ಕೆ ಬಂದು ಅಡ್ಡಬಿದ್ದರು.
ಆಗ ದಾಸಿಯರೂ, ಅವರ ಮಕ್ಕಳೂ ಹತ್ತಿರ ಬಂದು ಅವನಿಗೆ ಅಡ್ಡಬಿದ್ದರು.
7 ಆ ಮೇಲೆ ಲೇಯಳು ತನ್ನ ಮಕ್ಕಳೊಡನೆ ಬಂದು ಅಡ್ಡಬಿದ್ದಳು. ಕೊನೆಗೆ ಯೋಸೇಫನೂ ರಾಹೇಲಳೂ ಬಂದು ಅಡ್ಡಬಿದ್ದರು.
ಲೇಯಳು ಸಹ ತನ್ನ ಮಕ್ಕಳೊಂದಿಗೆ ಹತ್ತಿರ ಬಂದು ಅಡ್ಡಬಿದ್ದಳು. ತರುವಾಯ ಯೋಸೇಫನೂ, ರಾಹೇಲಳೂ ಬಂದು ಅಡ್ಡಬಿದ್ದರು.
8 ಏಸಾವನು, “ನಾನು ದಾರಿಯಲ್ಲಿ ಕಂಡ ಆ ಪಶುಗಳು ಯಾತಕ್ಕೆ?” ಎಂದು ಕೇಳಲು ಯಾಕೋಬನು, “ಸ್ವಾಮಿಯವರ ದಯೆ ನನಗೆ ದೊರಕಬೇಕೆಂದು ನಾನು ತಮಗೆ ಅವುಗಳನ್ನು ಕಳುಹಿಸಿಕೊಟ್ಟೆನು” ಎಂದನು.
ಆಗ ಏಸಾವನು, “ನಾನು ದಾರಿಯಲ್ಲಿ ಕಂಡ ಪಶುಗಳ ಮಂದೆಗಳೆಲ್ಲಾ ಏತಕ್ಕೆ?” ಎಂದು ಕೇಳಿದನು. ಯಾಕೋಬನು, “ನನ್ನ ಒಡೆಯನ ದೃಷ್ಟಿಯಲ್ಲಿ ನನಗೆ ದಯೆ ದೊರಕುವುದಕ್ಕೋಸ್ಕರ,” ಎಂದನು.
9 ಏಸಾವನು ಅದಕ್ಕೆ, “ತಮ್ಮನೇ, ನನಗೆ ಬೇಕಾದಷ್ಟು ಆಸ್ತಿಯುಂಟು, ನಿನ್ನದು ನಿನಗೇ ಇರಲಿ” ಎನ್ನಲು,
ಅದಕ್ಕೆ ಏಸಾವನು, “ನನ್ನ ಸಹೋದರನೇ, ನನಗೆ ಸಾಕಷ್ಟು ಇದೆ. ನಿನಗೆ ಇದ್ದದ್ದು ನೀನೇ ಇಟ್ಟುಕೋ,” ಎಂದನು.
10 ೧೦ ಯಾಕೋಬನು, “ಹಾಗಲ್ಲ, ನಿನಗೆ ನನ್ನ ಮೇಲೆ ದಯೆಯಿದ್ದರೆ, ನಾನು ಸಮರ್ಪಿಸುವ ಕಾಣಿಕೆಯನ್ನು ಅಂಗೀಕರಿಸಬೇಕು. ನಿನ್ನನ್ನು ನೋಡಿದ್ದು ದೇವರನ್ನು ನೋಡಿದ ಹಾಗಾಯಿತು, ನನ್ನನ್ನು ಪ್ರೀತಿಯಿಂದ ಅಂಗೀಕರಿಸಿದ್ದೇ ವಿಶೇಷ ಸಂಗತಿಯಾಗಿದೆ.
ಆಗ ಯಾಕೋಬನು, “ಹಾಗಲ್ಲ, ಈಗ ನಿನ್ನ ದೃಷ್ಟಿಯಲ್ಲಿ ನಾನು ದಯೆ ಹೊಂದಿದ್ದೆನಾದರೆ, ನನ್ನ ಕಾಣಿಕೆಯನ್ನು ನನ್ನ ಕೈಯಿಂದ ತೆಗೆದುಕೊಳ್ಳಬೇಕು. ಏಕೆಂದರೆ ನಾನು ದೇವರ ಮುಖವನ್ನು ಕಂಡಂತೆ, ನಿನ್ನ ಮುಖವನ್ನು ಕಂಡದ್ದಕ್ಕಾಗಿಯೂ, ನೀನು ನನ್ನನ್ನು ಮೆಚ್ಚಿದ್ದಕ್ಕಾಗಿಯೂ,
11 ೧೧ ದೇವರು ನನಗೆ ಕೃಪೆಯನ್ನು ತೋರಿದ್ದರಿಂದ ನನಗೆ ಸಮೃದ್ಧಿಯುಂಟಾಯಿತು. ಆದಕಾರಣ ನಾನು ಸಮರ್ಪಿಸುವ ಉಡುಗೊರೆಯನ್ನು ನೀನು ದಯವಿಟ್ಟು ಅಂಗೀಕರಿಸಬೇಕು” ಎಂದು ಹೇಳಿ ಏಸಾವನನ್ನು ಬಲವಂತ ಮಾಡಿದ್ದರಿಂದ ಅವನು ಆ ಉಡುಗೊರೆಯನ್ನು ತೆಗೆದುಕೊಂಡನು.
ನಿನಗೋಸ್ಕರ ತಂದಿರುವ ನನ್ನ ಕಾಣಿಕೆಯನ್ನು ಸ್ವೀಕರಿಸಬೇಕೆಂದು ಬೇಡುತ್ತೇನೆ. ದೇವರು ನನ್ನೊಂದಿಗೆ ಕೃಪೆಯಿಂದ ವರ್ತಿಸಿದ್ದರಿಂದ ನನಗೆ ಬೇಕಾದಷ್ಟು ಇವೆ,” ಎಂದು ಹೇಳಿ, ಅವನನ್ನು ಬಲವಂತ ಮಾಡಿದ್ದರಿಂದ ಏಸಾವನು ಅದನ್ನು ತೆಗೆದುಕೊಂಡನು.
12 ೧೨ ತರುವಾಯ ಏಸಾವನು, “ನಾವು ಮುಂದಕ್ಕೆ ಪ್ರಯಾಣವನ್ನು ಬೆಳೆಸೋಣ. ನಾನು ಮುಂದಾಗಿ ಹೋಗುತ್ತೇನೆ” ಎಂದನು.
ತರುವಾಯ ಏಸಾವನು, “ನಾವು ಮುಂದಕ್ಕೆ ಪ್ರಯಾಣವನ್ನು ಬೆಳೆಸೋಣ. ನಾನು ನಿನ್ನ ಮುಂದೆ ಹೋಗುವೆನು,” ಎಂದನು.
13 ೧೩ ಅದಕ್ಕೆ ಯಾಕೋಬನು, “ನನ್ನ ಮಕ್ಕಳು ಎಳೇ ಪ್ರಾಯದವರು ಇದಲ್ಲದೆ ಎಳೆಯ ದನಕುರಿಗಳು ನನ್ನ ಬಳಿಯಲ್ಲಿರುವುದು ಪ್ರಭುವಿಗೆ ತಿಳಿದಿದೆ. ಒಂದು ದಿನ ಹೆಚ್ಚಾಗಿ ಅವುಗಳನ್ನು ನಡಿಸಿದರೆ ಆಡುಕುರಿಗಳ ಹಿಂಡುಗಳೆಲ್ಲವೂ ಸತ್ತು ಹೋದಾವು.
ಅದಕ್ಕೆ ಯಾಕೋಬನು ಅವನಿಗೆ, “ಮಕ್ಕಳು ಎಳೆಯ ಪ್ರಾಯದವರಿದ್ದಾರೆ, ಇದಲ್ಲದೆ ಎಳೆಯ ದನಕುರಿಗಳು ನನ್ನ ಬಳಿಯಲ್ಲಿರುವುದು ನನ್ನ ಒಡೆಯನಿಗೆ ತಿಳಿದಿದೆ. ಒಂದು ದಿನ ಹೆಚ್ಚಾಗಿ ಅವುಗಳನ್ನು ನಡೆಸಿದರೆ, ಎಲ್ಲಾ ಮಂದೆಯು ಸತ್ತು ಹೋದಾವು.
14 ೧೪ ತಾವು ದಯವಿಟ್ಟು ಸೇವಕನಿಗಿಂತಲೂ ಮುಂಚೆ ಹೋಗಬಹುದು ನಾನು ನನ್ನ ಮುಂದಿರುವ ಆಡುಕುರಿಗಳ ನಡಿಗೆಗೂ ಮಕ್ಕಳ ಶಕ್ತಿಗೂ ಸರಿಯಾಗಿ ಮೆಲ್ಲಮೆಲ್ಲನೆ ನಡೆದು ನನ್ನ ಪ್ರಭುವಿನ ಸೀಮೆಯಾಗಿರುವ ಸೇಯೀರಿಗೆ ಬರುತ್ತೇನೆ” ಎಂದನು.
ಆದ್ದರಿಂದ ನನ್ನ ಒಡೆಯನೇ, ನೀನು ನಿನ್ನ ಸೇವಕನಿಗಿಂತಲೂ ಮುಂಚೆ ಹೋಗಬಹುದು. ನಾನು ನನ್ನ ಒಡೆಯನ ಬಳಿಗೆ ಸೇಯೀರಿಗೆ ಬರುವವರೆಗೆ, ನನ್ನ ಮುಂದಿರುವ ಮಂದೆಗಳ ನಡಿಗೆಗೂ, ಮಕ್ಕಳ ನಡಿಗೆಗೂ ತಕ್ಕ ಹಾಗೆ ಮೆಲ್ಲಗೆ ನಡೆದು ಬರುವೆನು,” ಎಂದನು.
15 ೧೫ ಏಸಾವನು, “ನನ್ನ ಆಳುಗಳಲ್ಲಿ ಕೆಲವರನ್ನು ನಿನ್ನ ಸಂಗಡ ಬಿಟ್ಟು ಹೋಗುತ್ತೇನೆ” ಎನ್ನಲು ಯಾಕೋಬನು, “ಅದರ ಅಗತ್ಯವೇನು? ಒಡೆಯನೇ, ತಮ್ಮ ದಯೆ ನನ್ನ ಮೇಲಿದ್ದರೆ ಸಾಕು” ಎಂದು ಹೇಳಿದನು.
ಅದಕ್ಕೆ ಏಸಾವನು, “ನನ್ನ ಬಳಿಯಲ್ಲಿರುವ ಜನರಲ್ಲಿ ಕೆಲವರನ್ನು ನಿನ್ನ ಬಳಿಯಲ್ಲಿ ಬಿಟ್ಟು ಹೋಗುತ್ತೇನೆ,” ಅನ್ನಲು. ಯಾಕೋಬನು, “ಅದರ ಅಗತ್ಯವೇನು? ನನ್ನ ಒಡೆಯನ ದೃಷ್ಟಿಯಲ್ಲಿ ನನಗೆ ದಯೆ ದೊರಕಲಿ,” ಎಂದನು.
16 ೧೬ ಹೀಗೆ ಏಸಾವನು ಆ ದಿನವೇ ಸೇಯೀರ್ ಸೀಮೆಗೆ ಹೊರಟುಹೋದನು.
ಹೀಗೆ ಏಸಾವನು ಆ ದಿನವೇ ತನ್ನ ಮಾರ್ಗವಾಗಿ ಸೇಯೀರಿಗೆ ಹಿಂದಿರುಗಿ ಹೋದನು.
17 ೧೭ ಯಾಕೋಬನು ಪ್ರಯಾಣಮಾಡಿ ಸುಕ್ಕೋತಿಗೆ ಬಂದನು. ಅಲ್ಲಿ ತನಗೋಸ್ಕರ ಮನೆಯನ್ನೂ ದನಗಳಿಗೆ ಆಶ್ರಯವನ್ನೂ ಮಾಡಿಸಿದನು. ಆದುದರಿಂದ ಆ ಸ್ಥಳಕ್ಕೆ “ಸುಕ್ಕೋತ್” ಎಂದು ಹೆಸರಾಯಿತು.
ಯಾಕೋಬನು ಪ್ರಯಾಣಮಾಡಿ, ಸುಕ್ಕೋತಿಗೆ ಹೋಗಿ, ಮನೆಯನ್ನು ಕಟ್ಟಿಸಿಕೊಂಡನು. ಇದಲ್ಲದೆ ತನ್ನ ಪಶುಗಳಿಗೆ ಹಟ್ಟಿಗಳನ್ನು ಮಾಡಿಸಿದನು. ಆದ್ದರಿಂದ ಆ ಸ್ಥಳಕ್ಕೆ ಸುಕ್ಕೋತ್ ಎಂದು ಹೆಸರಾಯಿತು.
18 ೧೮ ಯಾಕೋಬನು ಪದ್ದನ್ ಅರಾಮಿನಿಂದ ಬಂದು, ಕಾನಾನ್ ದೇಶದ ಶೆಕೆಮ್ ಪಟ್ಟಣವನ್ನು ಸುರಕ್ಷಿತವಾಗಿ ಸೇರಿದನು. ಆ ಊರಿನ ಬಳಿಯಲ್ಲಿ ತನ್ನ ಗುಡಾರಗಳನ್ನು ಹಾಕಿಸಿಕೊಂಡನು.
ಯಾಕೋಬನು ಪದ್ದನ್ ಅರಾಮಿನಿಂದ ಬಂದು, ಕಾನಾನ್ ದೇಶದ ಶೆಕೆಮ್ ಪಟ್ಟಣವನ್ನು ಸೇರಿ, ಅದರ ಮುಂದೆ ತನ್ನ ಗುಡಾರಗಳನ್ನು ಹಾಕಿದನು.
19 ೧೯ ಅವನು ತನ್ನ ಗುಡಾರಗಳನ್ನು ಹಾಕಿಸಿದ ಭೂಮಿಯನ್ನು ಹಮೋರನ ಮಕ್ಕಳಿಗೆ ನೂರು ನಾಣ್ಯ ಕೊಟ್ಟು ಅವರಿಂದ ಕೊಂಡುಕೊಂಡನು. ಹಮೋರನು ಶೆಕೆಮನ ತಂದೆ.
ಅವನು ತನ್ನ ಗುಡಾರಗಳನ್ನು ಹಾಕಿದ ಭೂಮಿಯನ್ನು ಶೆಕೆಮಿನ ತಂದೆ ಹಮೋರನ ಮಕ್ಕಳ ಕೈಯಿಂದ ನೂರು ನಾಣ್ಯಗಳಿಗೆ ಕೊಂಡುಕೊಂಡನು.
20 ೨೦ ಅಲ್ಲಿ ಯಾಕೋಬನು ಯೆಹೋವನ ಯಜ್ಞವೇದಿಯನ್ನು ಕಟ್ಟಿಸಿ ಅದಕ್ಕೆ “ಏಲ್ ಎಲೋಹೆ ಇಸ್ರಾಯೇಲ್” ಎಂದು ಹೆಸರಿಟ್ಟನು.
ಅಲ್ಲಿ ಬಲಿಪೀಠವನ್ನು ಕಟ್ಟಿಸಿ ಅದಕ್ಕೆ, ಏಲೆಲೋಹೇ ಇಸ್ರಾಯೇಲ್ ಎಂದು ಹೆಸರಿಟ್ಟನು.

< ಆದಿಕಾಂಡ 33 >