< ಆದಿಕಾಂಡ 19 >

1 ಆ ದೂತರಿಬ್ಬರು ಸಾಯಂಕಾಲದಲ್ಲಿ ಸೊದೋಮಿಗೆ ಬಂದಾಗ ಲೋಟನು ಸೊದೋಮಿನ ಊರು ಬಾಗಿಲಲ್ಲಿ ಕುಳಿತುಕೊಂಡಿದ್ದನು. ಅವನು ಅವರನ್ನು ಕಂಡಾಗ ಎದ್ದು, ಎದುರುಗೊಂಡು ತಲೆ ಬಾಗಿ ನಮಸ್ಕರಿಸಿ,
ದೂತರಿಬ್ಬರು ಸಾಯಂಕಾಲದಲ್ಲಿ ಸೊದೋಮಿಗೆ ಬಂದಾಗ, ಲೋಟನು ಸೊದೋಮಿನ ಬಾಗಿಲಲ್ಲಿ ಕುಳಿತಿದ್ದನು. ಲೋಟನು ಅವರನ್ನು ಎದುರುಗೊಳ್ಳುವುದಕ್ಕೆ ಎದ್ದು ನೆಲದವರೆಗೆ ಬಾಗಿ,
2 “ಸ್ವಾಮಿಗಳೇ, ನಿಮ್ಮ ದಾಸನ ಮನೆಗೆ ಬಂದು ಇಳಿದುಕೊಂಡು ಕಾಲುಗಳನ್ನು ತೊಳೆದುಕೊಳ್ಳಿರಿ; ಬೆಳಿಗ್ಗೆ ನಿಮ್ಮ ಮಾರ್ಗ ಹಿಡಿದುಕೊಂಡು ಹೋಗಬಹುದು” ಅಂದನು. ಅವರು, “ಹಾಗಲ್ಲ, ಬೀದಿಯಲ್ಲೇ ರಾತ್ರಿ ಕಳೆಯುತ್ತೇವೆ” ಎನ್ನಲು
“ಸ್ವಾಮಿಗಳೇ, ನೀವು ನಿಮ್ಮ ದಾಸನ ಮನೆಯಲ್ಲಿ ತಂಗಿ, ರಾತ್ರಿ ಕಳೆಯಿರಿ. ನಿಮ್ಮ ಕಾಲುಗಳನ್ನು ತೊಳೆದುಕೊಳ್ಳಿರಿ. ಬೆಳಿಗ್ಗೆ ಎದ್ದು ನಿಮ್ಮ ಮಾರ್ಗವನ್ನು ಹಿಡಿದು ಹೋಗಬಹುದು,” ಎಂದು ಬೇಡಿಕೊಂಡನು. ಅದಕ್ಕೆ ಅವರು, “ಹಾಗಲ್ಲ, ನಾವು ರಾತ್ರಿಯೆಲ್ಲಾ ಬೀದಿಯಲ್ಲಿ ಇರುತ್ತೇವೆ,” ಎಂದರು.
3 ಅವನು ಅವರನ್ನು ಬಹಳ ಬಲವಂತ ಮಾಡಿದ್ದರಿಂದ ಅವರು ಅವನ ಬಳಿಯಲ್ಲಿ ಇಳಿದುಕೊಳ್ಳುವುದಕ್ಕೆ ಒಪ್ಪಿದರು. ಅವರು ಮನೆಗೆ ಬಂದಾಗ ಅವನು ಹುಳಿಯಿಲ್ಲದ ರೊಟ್ಟಿಗಳನ್ನು ಮಾಡಿ ಔತಣವನ್ನು ಮಾಡಿಸಲು ಅವರು ಊಟಮಾಡಿದರು.
ಅದಕ್ಕವನು ಅವರನ್ನು ಬಹಳವಾಗಿ ಬಲವಂತ ಮಾಡಿದ್ದರಿಂದ, ಅವರು ತಿರುಗಿಬಂದು ಅವನ ಮನೆಯೊಳಕ್ಕೆ ಪ್ರವೇಶಿಸಿದರು. ಅವನು ಅವರಿಗಾಗಿ ಔತಣ ಮಾಡಿಸಿ ಹುಳಿಯಿಲ್ಲದ ರೊಟ್ಟಿಗಳನ್ನು ಸಿದ್ಧಮಾಡಿದನು. ಅವರು ಊಟಮಾಡಿದರು.
4 ಅವರು ಮಲಗುವುದಕ್ಕಿಂತ ಮುಂಚೆ ಹುಡುಗರು ಮುದುಕರು ಸಹಿತವಾಗಿ ಸೊದೋಮಿನ ಪಟ್ಟಣದವರೆಲ್ಲರೂ ಒಗ್ಗಟ್ಟಾಗಿ ಮನೆಯನ್ನು ಮುತ್ತಿಗೆ ಹಾಕಿ,
ಆದರೆ ಅವರು ಮಲಗುವುದಕ್ಕಿಂತ ಮುಂಚೆ ಸೊದೋಮ್ ಪಟ್ಟಣದ ಜನರು, ಹುಡುಗರು ಮೊದಲುಗೊಂಡು ಮುದುಕರವರೆಗೆ ಎಲ್ಲಾ ಜನರೂ ಪ್ರತಿಯೊಂದು ಮೂಲೆಯಿಂದ ಕೂಡಿ, ಮನೆಯನ್ನು ಸುತ್ತಿಕೊಂಡರು.
5 ಲೋಟನಿಗೆ, “ಈ ರಾತ್ರಿ ನಿನ್ನ ಬಳಿಗೆ ಬಂದ ಮನುಷ್ಯರು ಎಲ್ಲಿ? ಅವರನ್ನು ಹೊರಕ್ಕೆ ಕರೆದುಕೊಂಡು ಬಾ; ಅವರೊಡನೆ ನಮಗೆ ಸಂಗಮವಾಗಬೇಕೆಂದು” ಕೂಗಿ ಹೇಳಿದರು.
ಅವರು ಲೋಟನನ್ನು ಕರೆದು, “ಈ ರಾತ್ರಿಯಲ್ಲಿ ನಿನ್ನ ಬಳಿಗೆ ಬಂದ ಮನುಷ್ಯರು ಎಲ್ಲಿ? ಅವರನ್ನು ನಮ್ಮ ಬಳಿಗೆ ಕರೆದುಕೊಂಡು ಬಾ, ಅವರೊಡನೆ ಸಂಭೋಗಿಸಬೇಕು,” ಎಂದು ಹೇಳಿದರು.
6 ಲೋಟನು ಅವರ ಬಳಿಗೆ ಹೊರಕ್ಕೆ ಬಂದು ತನ್ನ ಹಿಂದೆ ಕದಹಾಕಿ,
ಆಗ ಲೋಟನು ಅವರ ಬಳಿಗೆ ಬಂದು ಬಾಗಿಲನ್ನು ತನ್ನ ಹಿಂದೆ ಮುಚ್ಚಿಕೊಂಡು,
7 “ಅಣ್ಣಂದಿರೇ, ಈ ದುಷ್ಟತನವನ್ನು ಮಾಡಬೇಡಿರಿ.
“ನನ್ನ ಸಹೋದರರೇ, ಈ ದುಷ್ಟತನವನ್ನು ಮಾಡಬೇಡಿರಿ.
8 ಕೇಳಿರಿ, ನನಗೆ ಪುರುಷನನ್ನು ಅರಿಯದ ಇಬ್ಬರು ಹೆಣ್ಣುಮಕ್ಕಳು ಇದ್ದಾರೆ; ಅವರನ್ನಾದರೂ ನಿಮಗೆ ತಂದು ಒಪ್ಪಿಸುತ್ತೇನೆ; ಅವರನ್ನು ಮನಸ್ಸು ಬಂದಂತೆ ಮಾಡಬಹುದು; ಆದರೆ ಆ ಮನುಷ್ಯರು ನನ್ನ ಆಶ್ರಯಕ್ಕೆ ಬಂದವರು; ಅವರಿಗೆ ಏನೂ ಮಾಡಕೂಡದು” ಎಂದು ಹೇಳಿದನು.
ಗಂಡಸರನ್ನು ಅರಿಯದ ಇಬ್ಬರು ಪುತ್ರಿಯರು ನನಗೆ ಇದ್ದಾರೆ. ಅವರನ್ನು ನಿಮ್ಮ ಬಳಿಗೆ ಕರೆ ತರುವೆನು. ನಿಮ್ಮ ದೃಷ್ಟಿಗೆ ಒಳ್ಳೆಯದೆಂದು ಕಾಣುವ ಹಾಗೆ ನೀವು ಅವರಿಗೆ ಮಾಡಿರಿ. ಆ ಮನುಷ್ಯರಿಗೆ ಮಾತ್ರ ಏನೂ ಮಾಡಬೇಡಿರಿ. ಏಕೆಂದರೆ ಅವರು ನನ್ನ ಮನೆಯ ಆಶ್ರಯಕ್ಕೆ ಬಂದಿದ್ದಾರೆ,” ಎಂದು ಬೇಡಿಕೊಂಡನು.
9 ಅವರು ದಾರಿ ಬಿಡು ಎಂದು ಹೇಳಿ, “ಇವನು ಯಾರೋ ಒಬ್ಬ ಪರದೇಶಿಯಾಗಿ ಬಂದು ಈಗ ನ್ಯಾಯಾಧಿಪತಿಯಾಗಬೇಕೆಂದಿದ್ದಾನೆ; ಆ ಮನುಷ್ಯರಿಗೆ ಕೇಡು ಮಾಡುವುದಕ್ಕಿಂತ ಹೆಚ್ಚಾಗಿ ನಿನಗೇ ಕೇಡು ಮಾಡುತ್ತೇವೆ” ಎಂದು ಹೇಳಿ ಲೋಟನ ಮೇಲೆ ಬಿದ್ದು ಬಹಳವಾಗಿ ತುಳಿದು ಬಾಗಿಲನ್ನು ಮುರಿಯಲು ಸಮೀಪಕ್ಕೆ ಬಂದರು.
ಆದರೆ ಅವರು, “ಹಿಂದಕ್ಕೆ ಸರಿ,” ಎಂದು ಹೇಳಿ, “ಇವನು ಪ್ರವಾಸಿಯಾಗಿ ಬಂದು ನ್ಯಾಯಾಧಿಪತಿಯಾಗಲು ಯತ್ನಿಸುತ್ತಿದ್ದಾನೆ. ಈಗ ನಿನಗೆ ಅವರಿಗಿಂತ ಹೆಚ್ಚು ಕೇಡು ಮಾಡುತ್ತೇವೆ,” ಎಂದರು. ಅವರು ಲೋಟನನ್ನು ಬಲವಾಗಿ ತುಳಿದು, ಬಾಗಿಲನ್ನು ಮುರಿಯಲು ಸಮೀಪಕ್ಕೆ ಬಂದರು.
10 ೧೦ ಆದರೆ ಒಳಗಿದ್ದ ಆ ಮನುಷ್ಯರು ಕೈಚಾಚಿ ಲೋಟನನ್ನು ತಮ್ಮ ಕಡೆಗೆ ಎಳೆದುಕೊಂಡು ಮನೆಯೊಳಗೆ ಸೇರಿಸಿ ಕದ ಮುಚ್ಚಿದರು.
ಆಗ ಲೋಟನ ಮನೆಗೆ ಬಂದಿದ್ದ ಆ ದೂತರಿಬ್ಬರು ತಮ್ಮ ಕೈಯಿಂದ ಲೋಟನನ್ನು ತಮ್ಮ ಕಡೆಗೆ ಒಳಕ್ಕೆ ಎಳೆದುಕೊಂಡು ಬಾಗಿಲನ್ನು ಮುಚ್ಚಿದರು.
11 ೧೧ ಇದಲ್ಲದೆ ಅವರು ಮನೆಯ ಹೊರಗಿದ್ದ ಮನುಷ್ಯರಿಗೆ ಚಿಕ್ಕವರಿಗೂ ದೊಡ್ಡವರಿಗೂ ಕೂಡ ಕಣ್ಣು ಮೊಬ್ಬಾಗುವಂತೆ ಮಾಡಿದ್ದರಿಂದ ಅವರು ಬಾಗಿಲು ಯಾವುದೆಂದು ತಿಳಿಯದೆ ಬೇಸರಗೊಂಡರು.
ಬಾಗಿಲಲ್ಲಿದ್ದವರನ್ನು ಕಿರಿಯರಿಂದ ಹಿರಿಯರವರೆಗೆ ಕುರುಡಾಗುವಂತೆ ಮಾಡಿದರು. ಆಗ ಆ ಊರಿನವರು ಬಾಗಿಲನ್ನು ಕಂಡುಕೊಳ್ಳದೆ ಬೇಸರಗೊಂಡರು.
12 ೧೨ ಆಗ ಆ ದೂತರು ಲೋಟನಿಗೆ, “ಇಲ್ಲಿ ನಿನಗೆ ಇನ್ನಾರಿದ್ದಾರೆ? ಅಳಿಯಂದಿರನ್ನೂ ಗಂಡು ಮತ್ತು ಹೆಣ್ಣು ಮಕ್ಕಳನ್ನೂ ಪಟ್ಟಣದಲ್ಲಿ ನಿನಗಿರುವ ಎಲ್ಲರನ್ನೂ ಊರ ಹೊರಕ್ಕೆ ಕರೆದುಕೊಂಡು ಬಾ.
ಆ ದೂತರಿಬ್ಬರು ಲೋಟನಿಗೆ, “ಇಲ್ಲಿ ನಿನಗೆ ಇನ್ನೂ ಯಾರಾದರೂ ಇದ್ದಾರೋ? ನಿನ್ನ ಅಳಿಯಂದಿರನ್ನೂ, ನಿನ್ನ ಪುತ್ರರನ್ನೂ, ಪುತ್ರಿಯರನ್ನೂ, ಪಟ್ಟಣದಲ್ಲಿ ನಿನಗಿರುವ ಎಲ್ಲರನ್ನೂ ಈ ಸ್ಥಳದಿಂದ ಹೊರಗೆ ಕರೆದುಕೊಂಡು ಬಾ.
13 ೧೩ ನಾವು ಈ ಸ್ಥಳವನ್ನು ನಾಶಮಾಡುವುದಕ್ಕೆ ಬಂದವರು. ಇಲ್ಲಿಯವರ ವಿಷಯವಾಗಿ ಬಲು ದೊಡ್ಡ ಮೊರೆಯು ಯೆಹೋವನಿಗೆ ಮುಟ್ಟಿದ್ದರಿಂದ ಇವರನ್ನು ನಾಶಮಾಡುವುದಕ್ಕಾಗಿ ಆತನು ನಮ್ಮನ್ನು ಕಳುಹಿಸಿದ್ದಾನೆ” ಎಂದು ಹೇಳಿದರು.
ಏಕೆಂದರೆ ಈ ಸ್ಥಳದವರ ಕೂಗು ಯೆಹೋವ ದೇವರ ಸನ್ನಿಧಿಯಲ್ಲಿ ದೊಡ್ಡದಾಗಿರುವುದರಿಂದ ನಾವು ಇದನ್ನು ನಾಶ ಮಾಡುತ್ತೇವೆ. ಯೆಹೋವ ದೇವರು ನಮ್ಮನ್ನು ಕಳುಹಿಸಿದ್ದಾರೆ.”
14 ೧೪ ಆಗ ಲೋಟನು ಹೊರಕ್ಕೆ ಹೋಗಿ ತನ್ನ ಹೆಣ್ಣುಮಕ್ಕಳನ್ನು ಗೊತ್ತುಮಾಡಿಕೊಂಡಿದ್ದ ಅಳಿಯಂದಿರಿಗೆ ಈ ಸಂಗತಿಯನ್ನು ತಿಳಿಸಿ, “ನೀವೆದ್ದು, ಈ ಸ್ಥಳವನ್ನು ಬಿಟ್ಟು ಹೋಗಿರಿ ಯೆಹೋವನು ಈ ಊರನ್ನು ನಾಶಮಾಡುತ್ತಾನೆ” ಎಂದು ಹೇಳಿದನು. ಆದರೆ ಅವರು ಲೋಟನು ಅಪಹಾಸ್ಯ ಮಾಡುತ್ತಿದ್ದಾನೆ ಎಂದುಕೊಂಡರು.
ಆಗ ಲೋಟನು ಹೊರಟುಹೋಗಿ, ತನ್ನ ಪುತ್ರಿಯರನ್ನು ಗೊತ್ತುಮಾಡಿದ್ದ ಅಳಿಯಂದಿರ ಸಂಗಡ ಮಾತನಾಡಿ, “ಎದ್ದು ಈ ಸ್ಥಳದಿಂದ ಹೊರಡಿರಿ. ಏಕೆಂದರೆ ಯೆಹೋವ ದೇವರು ಈ ಪಟ್ಟಣವನ್ನು ನಾಶಮಾಡುವುದಕ್ಕಿದ್ದಾರೆ,” ಎಂದನು. ಆದರೆ ಅವನು ತನ್ನ ಅಳಿಯಂದಿರಿಗೆ ಪರಿಹಾಸ್ಯಮಾಡುವಂತೆ ಕಾಣಿಸಿದನು.
15 ೧೫ ಹೊತ್ತು ಮೂಡುವುದಕ್ಕೆ ಮುಂಚೆ ಆ ದೂತರು ಲೋಟನಿಗೆ, “ನೀನೆದ್ದು ಇಲ್ಲಿರುವ ನಿನ್ನ ಹೆಂಡತಿಯನ್ನೂ ನಿನ್ನ ಇಬ್ಬರು ಹೆಣ್ಣುಮಕ್ಕಳನ್ನೂ ಬೇಗ ಕರೆದುಕೊಂಡು ಹೋಗು; ಊರಿಗೆ ಉಂಟಾಗುವ ದಂಡನೆಯಿಂದ ನಿನಗೂ ನಾಶವುಂಟಾದೀತು” ಎಂದು ಹೇಳಿ ತ್ವರೆಪಡಿಸಿದರು.
ಸೂರ್ಯೋದಯವಾಗುವ ಮೊದಲು ದೂತರು ಲೋಟನನ್ನು ತ್ವರೆಪಡಿಸಿ, “ಈ ಪಟ್ಟಣಕ್ಕೆ ಉಂಟಾಗುವ ದಂಡನೆಯಿಂದ ನೀನು ನಾಶವಾಗದ ಹಾಗೆ ಎದ್ದು ನಿನ್ನ ಹೆಂಡತಿಯನ್ನೂ ಇಲ್ಲಿರುವ ನಿನ್ನ ಪುತ್ರಿಯರನ್ನೂ ಕರೆದುಕೊಂಡು ನಡೆ,” ಎಂದರು.
16 ೧೬ ಅವನು ತಡಮಾಡಲು ಯೆಹೋವನು ಅವನನ್ನು ಕನಿಕರಿಸಿದ್ದರಿಂದ ಆ ಮನುಷ್ಯರು ಅವನನ್ನೂ ಅವನ ಹೆಂಡತಿ ಮಕ್ಕಳನ್ನೂ ಕೈಹಿಡಿದು ಹೊರಗೆ ತಂದು ಪಟ್ಟಣದ ಆಚೆಗೆ ಬಿಟ್ಟರು.
ಅವರು ತಡಮಾಡಿದಾಗ ಯೆಹೋವ ದೇವರು ಅವನನ್ನು ಕನಿಕರಿಸಿದ್ದರಿಂದ, ಆ ದೂತರು ಅವನ ಕೈಯನ್ನೂ, ಅವನ ಹೆಂಡತಿಯ ಕೈಯನ್ನೂ, ಅವನ ಇಬ್ಬರು ಪುತ್ರಿಯರ ಕೈಗಳನ್ನೂ ಹಿಡಿದು, ಅವರನ್ನು ಪಟ್ಟಣದ ಹೊರಗೆ ತಂದುಬಿಟ್ಟರು.
17 ೧೭ ಅವರನ್ನು ಹೊರಗೆ ತಂದ ಮೇಲೆ ಅವರಲ್ಲಿ ಒಬ್ಬನು, “ಓಡಿಹೋಗು, ಪ್ರಾಣವನ್ನು ಉಳಿಸಿಕೋ; ಹಿಂದಕ್ಕೆ ತಿರುಗಿ ನೋಡಬೇಡ; ಈ ಪ್ರದೇಶದೊಳಗೆ ಎಲ್ಲಿಯೂ ನಿಲ್ಲದೆ ಬೆಟ್ಟದ ಸೀಮೆಗೆ ಓಡಿಹೋಗು; ನಿನಗೂ ನಾಶವುಂಟಾದೀತು” ಎಂದನು.
ಅವರನ್ನು ಹೊರಗೆ ತಂದಮೇಲೆ ಅವರಲ್ಲಿ ಒಬ್ಬನು, “ಹಿಂದಕ್ಕೆ ನೋಡಬೇಡ. ಸುತ್ತಲಿರುವ ಯಾವ ಮೈದಾನದಲ್ಲಿಯೂ ನಿಂತುಕೊಳ್ಳಬೇಡ. ನೀನು ನಾಶವಾಗದ ಹಾಗೆ ತಪ್ಪಿಸಿಕೊಂಡು ಬೆಟ್ಟಕ್ಕೆ ಓಡಿಹೋಗು,” ಎಂದನು.
18 ೧೮ ಅದಕ್ಕೆ ಲೋಟನು, “ಕರ್ತನೇ, ಅದು ನನ್ನಿಂದಾಗದು;
ಅದಕ್ಕೆ ಲೋಟನು, “ಸ್ವಾಮಿ, ಅದು ನನ್ನಿಂದಾಗದು.
19 ೧೯ ನೀನು ನಿನ್ನ ದಾಸನ ಮೇಲೆ ದಯೆ ಇಟ್ಟು ನನ್ನ ಪ್ರಾಣವನ್ನು ಉಳಿಸಿದ್ದು ಬಹು ವಿಶೇಷವಾದ ಉಪಕಾರವೇ; ಆದರೆ ಬೆಟ್ಟಕ್ಕೆ ಓಡಿ ಹೋಗಲಾರೆನು; ನಾನು ಹೋಗುತ್ತಿರುವಾಗ ಆ ವಿಪತ್ತು ನನಗೂ ಉಂಟಾಗಿ ಸತ್ತೇನು.
ಈಗ ನಿನ್ನ ದಾಸನಿಗೆ ನಿನ್ನ ದೃಷ್ಟಿಯಲ್ಲಿ ದಯೆ ದೊರಕಿದೆ. ನನ್ನ ಪ್ರಾಣವನ್ನು ಉಳಿಸುವ ಹಾಗೆ ನೀನು ನನಗೆ ಮಾಡಿದ ದಯೆ ದೊಡ್ಡದು. ಆದರೆ ನಾನು ತಪ್ಪಿಸಿಕೊಂಡು ಬೆಟ್ಟಕ್ಕೆ ಓಡಿಹೋಗಲಾರೆನು, ನನಗೆ ವಿಪತ್ತು ಉಂಟಾಗಿ ಸತ್ತೇನು.
20 ೨೦ ಆಗೋ, ಅಲ್ಲಿ ಒಂದು ಪಟ್ಟಣ ಹತ್ತಿರವಾಗಿದೆ; ಅದು ಸಣ್ಣದು; ಅಲ್ಲಿಗಾದರೂ ಹೋಗುವುದಕ್ಕೆ ಅಪ್ಪಣೆಯಾದರೆ ನನ್ನ ಪ್ರಾಣ ಉಳಿಯುವುದು; ಆ ಊರು ಸಣ್ಣದಲ್ಲವೇ?” ಎಂದನು.
ಆ ಪಟ್ಟಣವನ್ನು ನೋಡಿರಿ. ನಾನು ಅಲ್ಲಿಗೆ ಓಡಿಹೋಗಲು ಸಮೀಪವಾಗಿದೆ ಮತ್ತು ಅದು ಸಣ್ಣದು. ನಾನು ತಪ್ಪಿಸಿಕೊಂಡು ಅಲ್ಲಿಗೆ ಹೋಗುತ್ತೇನೆ. ಇದರಿಂದ ನನ್ನ ಪ್ರಾಣವು ಉಳಿಯುವುದು,” ಎಂದನು.
21 ೨೧ ಅದಕ್ಕಾತನು, “ಈ ವಿಷಯದಲ್ಲಿಯೂ ನಿನ್ನ ಬೇಡಿಕೆಯನ್ನು ಅನುಗ್ರಹಿಸಿದ್ದೇನೆ, ನೋಡು; ನೀನು ಹೇಳಿದ ಊರನ್ನು ನಾನು ಕೆಡವಿ ಹಾಕುವುದಿಲ್ಲ.
ದೂತನು ಅವನಿಗೆ, “ಈ ವಿಷಯದಲ್ಲಿಯೂ ನಾನು ನಿನ್ನ ಬೇಡಿಕೆಯನ್ನು ಅಂಗೀಕರಿಸಿದ್ದೇನೆ. ನೋಡು, ನೀನು ಹೇಳಿದ ಆ ಊರನ್ನು ನಾನು ಕೆಡವಿ ಹಾಕುವುದಿಲ್ಲ.
22 ೨೨ ಬೇಗ ಅಲ್ಲಿಗೆ ಹೋಗಿ ತಪ್ಪಿಸಿಕೋ; ನೀನು ಆ ಪಟ್ಟಣವನ್ನು ಮುಟ್ಟುವ ತನಕ ನಾನೇನೂ ಮಾಡುವುದಕ್ಕಾಗುವುದಿಲ್ಲ” ಎಂದನು. ಇದರಿಂದ ಆ ಊರಿಗೆ ಚೋಗರ್ ಎಂದು ಹೆಸರಾಯಿತು.
ಬೇಗನೆ ತಪ್ಪಿಸಿಕೊಂಡು ಅಲ್ಲಿಗೆ ಹೋಗು, ಏಕೆಂದರೆ ನೀನು ಅಲ್ಲಿ ಸೇರುವ ತನಕ ನಾನೇನೂ ಮಾಡಲಾರೆನು,” ಎಂದನು. ಆದ್ದರಿಂದ ಆ ಊರಿಗೆ ಚೋಗರ್ ಎಂದು ಹೆಸರಾಯಿತು.
23 ೨೩ ಲೋಟನು ಚೋಗರ್ ಮುಟ್ಟುವಷ್ಟರಲ್ಲಿ ಸೂರ್ಯನು ಉದಯಿಸಿದನು.
ಲೋಟನು ಚೋಗರಿಗೆ ಬಂದಾಗ ಸೂರ್ಯೋದಯವಾಗಿತ್ತು.
24 ೨೪ ಆಗ ಯೆಹೋವನು ಸೊದೋಮ್ ಗೊಮೋರಗಳ ಮೇಲೆ ಆಕಾಶದಿಂದ ಅಗ್ನಿಗಂಧಕಗಳನ್ನು ಸುರಿಸಿ
ಆಗ ಯೆಹೋವ ದೇವರು ಸೊದೋಮ್ ಮತ್ತು ಗೊಮೋರದ ಮೇಲೆ ಗಂಧಕವನ್ನೂ, ಬೆಂಕಿಯನ್ನೂ ಆಕಾಶದಿಂದ ಸುರಿಸಿದರು.
25 ೨೫ ಆ ಪಟ್ಟಣಗಳನ್ನೂ ಸುತ್ತಲಿರುವ ಸೀಮೆಯೆಲ್ಲವನ್ನೂ ಊರುಗಳಲ್ಲಿದ್ದ ಜನರೆಲ್ಲರನ್ನೂ ಭೂಮಿಯ ಮೇಲಣ ಎಲ್ಲಾ ಬೆಳೆಯನ್ನೂ ಹಾಳುಮಾಡಿದನು.
ಹೀಗೆ ದೇವರು ಆ ಪಟ್ಟಣಗಳನ್ನೂ, ಅಲ್ಲಿಯ ಪ್ರದೇಶವನ್ನೂ, ಪಟ್ಟಣಗಳ ಎಲ್ಲಾ ನಿವಾಸಿಗಳನ್ನೂ, ಭೂಮಿಯ ಮೇಲೆ ಬೆಳೆದ ಬೆಳೆಯನ್ನೂ ಅಳಿಸಿಬಿಟ್ಟರು.
26 ೨೬ ಲೋಟನ ಹೆಂಡತಿ ಅವನ ಹಿಂದೆ ಬರುತ್ತಿರುವಾಗ ಹಿಂತಿರುಗಿ ನೋಡಿದ್ದರಿಂದ ಉಪ್ಪಿನ ಕಂಬವಾದಳು.
ಆದರೆ ಲೋಟನ ಹಿಂದೆ ಬರುತ್ತಿದ್ದ ಅವನ ಹೆಂಡತಿಯು ಹಿಂದಿರುಗಿ ನೋಡಿ ಉಪ್ಪಿನ ಸ್ತಂಭವಾದಳು.
27 ೨೭ ಇತ್ತಲಾಗಿ ಅಬ್ರಹಾಮನು ಬೆಳಿಗ್ಗೆ ಎದ್ದು ತಾನು ಯೆಹೋವನ ಸನ್ನಿಧಿಯಲ್ಲಿ ನಿಂತಿದ್ದ ಸ್ಥಳಕ್ಕೆ ತಿರುಗಿ ಬಂದು ಸೊದೋಮ್ ಗೊಮೋರಗಳ ಕಡೆಗೂ
ಅಬ್ರಹಾಮನು ಬೆಳಿಗ್ಗೆ ಎದ್ದು, ತಾನು ಯೆಹೋವ ದೇವರ ಸನ್ನಿಧಿಯಲ್ಲಿ ನಿಂತಿದ್ದ ಆ ಸ್ಥಳಕ್ಕೆ ಹೋದನು.
28 ೨೮ ಸೊದೋಮ್ ಗೊಮೋರದ ಸುತ್ತಲಿನ ಎಲ್ಲಾ ದಿಕ್ಕುಗಳ ಕಡೆಗೂ ನೋಡಿದಾಗ, ಅಯ್ಯೋ, ಆ ಪ್ರದೇಶದಿಂದ ಹೊಗೆಯು ಆವಿಗೆಯ ಹೊಗೆಯಂತೆ ಮೇಲಕ್ಕೇರುತ್ತಿತ್ತು.
ಅವನು ಸೊದೋಮ್ ಗೊಮೋರಗಳ ಕಡೆಗೂ ಮೈದಾನದ ಎಲ್ಲಾ ಪ್ರದೇಶಗಳ ಕಡೆಗೂ ನೋಡಿದನು. ಆ ಪ್ರದೇಶದಿಂದ ಹೊಗೆಯು ಕುಲುಮೆಯ ಹೊಗೆಯಂತೆ ಏರುತ್ತಿತ್ತು.
29 ೨೯ ದೇವರು ಆ ಪ್ರದೇಶದ ಪಟ್ಟಣಗಳನ್ನು ನಾಶಮಾಡಿದಾಗ, ಅಬ್ರಹಾಮನನ್ನು ನೆನಪುಮಾಡಿಕೊಂಡನು. ಲೋಟನು ವಾಸವಾಗಿದ್ದ ಪಟ್ಟಣಗಳನ್ನು ಹಾಳುಮಾಡಿ ಆ ಸ್ಥಳದೊಳಗಿಂದ ಲೋಟನನ್ನು ಹೊರಗೆ ಕಳುಹಿಸಿ ಪಾರುಮಾಡಿದನು.
ದೇವರು ಆ ಬಯಲುಸೀಮೆಯ ಪಟ್ಟಣಗಳನ್ನು ನಾಶಮಾಡಿದಾಗ, ಲೋಟನು ವಾಸವಾಗಿದ್ದ ಪಟ್ಟಣಗಳನ್ನು ನಾಶಮಾಡಿದರು. ಆದರೆ ಅಬ್ರಹಾಮನನ್ನು ಜ್ಞಾಪಕಮಾಡಿಕೊಂಡು, ಲೋಟನನ್ನು ಹೊರಗೆ ಕಳುಹಿಸಿ ಪಾರು ಮಾಡಿದರು.
30 ೩೦ ಲೋಟನು ಚೋಗರಿನಲ್ಲಿರುವುದಕ್ಕೆ ಹೆದರಿ ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಕರೆದುಕೊಂಡು ಬೆಟ್ಟವನ್ನು ಹತ್ತಿ ಅಲ್ಲಿ ವಾಸಮಾಡಿದನು. ಅವನೂ ಅವನ ಇಬ್ಬರು ಹೆಣ್ಣುಮಕ್ಕಳೂ ಒಂದು ಗವಿಯಲ್ಲಿ ವಾಸಮಾಡಿದರು.
ಲೋಟನು ಚೋಗರಿನಲ್ಲಿ ವಾಸಿಸಲು ಭಯಪಟ್ಟು, ತನ್ನ ಇಬ್ಬರು ಪುತ್ರಿಯರ ಸಂಗಡ ಬೆಟ್ಟದ ಮೇಲೆ ಹೋಗಿ ವಾಸಮಾಡಿದನು. ಅಲ್ಲಿ ಅವನೂ ಅವನ ಇಬ್ಬರು ಪುತ್ರಿಯರೂ ಒಂದು ಗವಿಯಲ್ಲಿ ವಾಸವಾಗಿದ್ದರು.
31 ೩೧ ಹೀಗಿರುವಲ್ಲಿ ಹಿರೀಮಗಳು ತನ್ನ ತಂಗಿಗೆ, “ನಮ್ಮ ತಂದೆ ಮುದುಕನಷ್ಟೆ; ಸರ್ವಲೋಕದ ಪದ್ಧತಿಯ ಮೇರೆಗೆ ನಮ್ಮನ್ನು ಮದುವೆ ಮಾಡಿಕೊಳ್ಳುವ ಪುರುಷರು ಎಲ್ಲಿಯೂ ಇಲ್ಲ;
ಆಗ ಹಿರಿಯ ಮಗಳು ಚಿಕ್ಕವಳಿಗೆ, “ನಮ್ಮ ತಂದೆಯು ಮುದುಕನಾಗಿದ್ದಾನೆ. ಲೋಕದ ಎಲ್ಲಾ ಕ್ರಮದ ಪ್ರಕಾರ ನಮ್ಮೊಂದಿಗಿರಲು ನಮ್ಮ ಸುತ್ತಲಿನ ಪ್ರದೇಶದಲ್ಲಿ ಪುರುಷರಿಲ್ಲ.
32 ೩೨ ನಾವು ತಂದೆಗೆ ದ್ರಾಕ್ಷಾರಸವನ್ನು ಕುಡಿಸಿ, ಅವನ ಸಂಗಡ ಮಲಗಿಕೊಂಡು ತಂದೆಯಿಂದ ಸಂತಾನವನ್ನು ಪಡೆದುಕೊಳ್ಳೋಣ” ಎಂದು ಹೇಳಿದಳು.
ಆದ್ದರಿಂದ ನಾವು ನಮ್ಮ ತಂದೆಗೆ ದ್ರಾಕ್ಷಾರಸವನ್ನು ಕುಡಿಸಿ, ನಾವು ಅವನ ಸಂಗಡ ಮಲಗಿಕೊಳ್ಳೋಣ. ಏಕೆಂದರೆ ನಾವು ನಮ್ಮ ತಂದೆಯ ಸಂತಾನವನ್ನು ಉಳಿಸಬೇಕು,” ಎಂದಳು.
33 ೩೩ ಆ ರಾತ್ರಿ ಅವರು ತಂದೆಗೆ ದ್ರಾಕ್ಷಾರಸವನ್ನು ಕುಡಿಸಿದಾಗ ಹಿರೀ ಮಗಳು ಅವನ ಸಂಗಡ ಮಲಗಿಕೊಂಡಳು; ಯಾವಾಗ ಮಲಗಿಕೊಂಡಳೋ ಯಾವಾಗ ಎದ್ದು ಹೋದಳೋ ಅವನಿಗೇನೂ ತಿಳಿಯಲಿಲ್ಲ.
ಆ ರಾತ್ರಿಯಲ್ಲಿ ಅವರು ತಮ್ಮ ತಂದೆಗೆ ದ್ರಾಕ್ಷಾರಸವನ್ನು ಕುಡಿಸಿದರು. ಆಗ ಹಿರಿಯ ಮಗಳು ಬಂದು ತನ್ನ ತಂದೆಯ ಸಂಗಡ ಮಲಗಿಕೊಂಡಳು. ಅವಳು ಮಲಗಿಕೊಂಡದ್ದೂ, ಎದ್ದು ಹೋದದ್ದೂ ಅವನಿಗೆ ತಿಳಿಯಲಿಲ್ಲ.
34 ೩೪ ಮಾರನೆಯ ದಿನ ಹಿರಿಯವಳು ಕಿರಿಯವಳಿಗೆ, “ನಿನ್ನೆಯ ರಾತ್ರಿ ನಾನೇ ಅಪ್ಪನ ಸಂಗಡ ಮಲಗಿಕೊಂಡೆನು; ಈ ರಾತ್ರಿಯೂ ಅವನಿಗೆ ದ್ರಾಕ್ಷಾರಸವನ್ನು ಕುಡಿಸೋಣ; ಆ ಮೇಲೆ ನೀನು ಅವನ ಸಂಗಡ ಮಲಗಿಕೋ; ಹೀಗೆ ನಮ್ಮ ತಂದೆಯಿಂದ ಸಂತಾನವನ್ನು ಪಡೆದುಕೊಳ್ಳೋಣ” ಎಂದು ಹೇಳಿದಳು.
ಮರುದಿನ ಹಿರಿಯವಳು ಚಿಕ್ಕವಳಿಗೆ, “ಕಳೆದ ರಾತ್ರಿ ತಂದೆಯ ಸಂಗಡ ನಾನು ಮಲಗಿಕೊಂಡೆನು. ಈ ರಾತ್ರಿಯಲ್ಲಿಯೂ ಅವನಿಗೆ ದ್ರಾಕ್ಷಾರಸವನ್ನು ಕುಡಿಸಿ, ನೀನು ಹೋಗಿ ಅವನ ಸಂಗಡ ಮಲಗಿಕೋ. ಏಕೆಂದರೆ ನಾವು ನಮ್ಮ ತಂದೆಯ ಸಂತಾನವನ್ನು ಉಳಿಸಬೇಕು,” ಎಂದಳು.
35 ೩೫ ಆ ರಾತ್ರಿಯೂ ಅವರು ತಂದೆಗೆ ದ್ರಾಕ್ಷಾರಸವನ್ನು ಕುಡಿಸಿದ ಮೇಲೆ ಕಿರಿಯ ಮಗಳು ಅವನ ಸಂಗಡ ಮಲಗಿಕೊಂಡಳು; ಅವಳು ಯಾವಾಗ ಮಲಗಿದಳೋ ಯಾವಾಗ ಎದ್ದು ಹೋದಳೋ ಅವನಿಗೇನೂ ತಿಳಿಯಲಿಲ್ಲ.
ಹಾಗೆ ಆ ರಾತ್ರಿಯಲ್ಲಿಯೂ ತಮ್ಮ ತಂದೆಗೆ ದ್ರಾಕ್ಷಾರಸವನ್ನು ಕುಡಿಸಿದರು. ಆಗ ಚಿಕ್ಕವಳು ಎದ್ದು, ಅವನ ಸಂಗಡ ಮಲಗಿಕೊಂಡಳು. ಅವಳು ಮಲಗಿಕೊಂಡದ್ದೂ, ಎದ್ದು ಹೋದದ್ದೂ ಅವನಿಗೆ ತಿಳಿಯಲಿಲ್ಲ.
36 ೩೬ ಹೀಗೆ ಲೋಟನ ಇಬ್ಬರು ಹೆಣ್ಣುಮಕ್ಕಳು ತಂದೆಯಿಂದ ಬಸುರಾದರು.
ಈ ಪ್ರಕಾರ ಲೋಟನ ಇಬ್ಬರು ಪುತ್ರಿಯರು ತಮ್ಮ ತಂದೆಯಿಂದ ಗರ್ಭಿಣಿಯರಾದರು.
37 ೩೭ ಹಿರಿಯವಳು ಗಂಡು ಮಗುವನ್ನು ಹೆತ್ತು ಅದಕ್ಕೆ “ಮೋವಾಬ್” (ತಂದೆಯಿಂದ ಹುಟ್ಟಿದವನು) ಎಂದು ಹೆಸರಿಟ್ಟಳು. ಇಂದಿನ ವರೆಗೂ ಇರುವ ಮೋವಾಬ್ಯರಿಗೆ ಅವನೇ ಮೂಲಪುರುಷನು.
ಹಿರಿಯ ಮಗಳು ಮಗನನ್ನು ಹೆತ್ತು, ಅವನಿಗೆ ಮೋವಾಬ್ ಎಂದು ಹೆಸರಿಟ್ಟಳು. ಈಗಿನ ಮೋವಾಬ್ಯರಿಗೂ ಇವನೇ ತಂದೆ.
38 ೩೮ ಕಿರಿಯ ಮಗಳು ಗಂಡು ಮಗುವನ್ನು ಹೆತ್ತು ಅದಕ್ಕೆ “ಬೆನಮ್ಮಿ” (ರಕ್ತ ಸಂಬಂಧಿಕನ ಮಗ) ಎಂದು ಹೆಸರಿಟ್ಟಳು. ಇಂದಿನವರೆಗೂ ಇರುವ ಅಮ್ಮೋನಿಯರಿಗೆ ಇವನೇ ಮೂಲಪುರುಷನು.
ಚಿಕ್ಕವಳು ಸಹ ಮಗನನ್ನು ಹೆತ್ತು, ಅವನಿಗೆ ಬೆನಮ್ಮಿ ಎಂದು ಹೆಸರಿಟ್ಟಳು. ಈಗಿನ ಅಮ್ಮೋನಿಯರಿಗೂ ಇವನೇ ತಂದೆ.

< ಆದಿಕಾಂಡ 19 >