< ಯೆಹೆಜ್ಕೇಲನು 45 >

1 ನೀವು ದೇಶವನ್ನು ಸ್ವತ್ತಾಗಿ ಹಂಚುವಾಗ ಒಂದು ಭಾಗವನ್ನು ಪ್ರತ್ಯೇಕಿಸಿ ಯೆಹೋವನಿಗೆ ಕಾಣಿಕೆಯಾಗಿ ಸಮರ್ಪಿಸಬೇಕು. ಅದರ ಉದ್ದವು ಇಪ್ಪತ್ತೈದು ಸಾವಿರ ಮೊಳ, ಅಗಲವು ಇಪ್ಪತ್ತು ಸಾವಿರ ಮೊಳ ಇರಲಿ. ಆ ಪ್ರಾಂತ್ಯವೆಲ್ಲಾ ಸುತ್ತುಮುತ್ತಲು ಪರಿಶುದ್ಧವಾಗಿರಬೇಕು. 2 ಈ ಪರಿಶುದ್ಧ ಸ್ಥಳಕ್ಕಾಗಿ ಐನೂರು ಮೊಳ ಉದ್ದದ, ಐನೂರು ಮೊಳ ಅಗಲದ ಚಚ್ಚೌಕವಾಗಿರುವುದು. ಅದರ ಸುತ್ತಲೂ ಐವತ್ತು ಮೊಳ ಅಗಲವಾದ ಭೂಮಿಯು ಇರುವುದು. 3 ಮೊದಲು ಅಳೆದ ಕ್ಷೇತ್ರದಲ್ಲಿ ಇಪ್ಪತ್ತೈದು ಸಾವಿರ ಮೊಳ ಉದ್ದವಾಗಿಯೂ ಮತ್ತು ಹತ್ತು ಸಾವಿರ ಮೊಳ ಅಗಲವಾಗಿಯೂ ಇರುವಂತೆ ನೀನು ಅಳೆಯಬೇಕು. ಇದರಲ್ಲಿ ಪರಿಶುದ್ಧವಾದ ಪವಿತ್ರಾಯಲವು ಇರಬೇಕು. 4 ಇದು ದೇಶದಲ್ಲಿ ಪರಿಶುದ್ಧ ಭಾಗವೂ; ಯೆಹೋವನಿಗೆ ಸೇವೆ ಮಾಡಲು ಸಮೀಪಿಸುವಂತೆ, ಇದು ಪರಿಶುದ್ಧ ಸ್ಥಳದ ಸೇವಕರಾದಂಥ ಯಾಜಕರದಾಗಿರಬೇಕು. ಇದು ಯಾಜಕರ ಮನೆಗಳಿಗೆ ಅಗ್ರಹಾರವಾಗಿಯೂ, ಪವಿತ್ರಾಲಯಕ್ಕೆ ಪವಿತ್ರಸ್ಥಾನವಾಗಿಯೂ ಇರುವುದು. 5 ದೇವಾಲಯದ ಸೇವಕರಾದ ಲೇವಿಯರು ಊರುಗಳನ್ನು ಕಟ್ಟಿಕೊಂಡು ವಾಸಿಸುವಂತೆ ಇಪ್ಪತ್ತೈದು ಸಾವಿರ ಮೊಳ ಉದ್ದವೂ ಮತ್ತು ಹತ್ತು ಸಾವಿರ ಮೊಳ ಅಗಲದ ಕ್ಷೇತ್ರವು ಅವರಿಗೆ ಸ್ವಾಸ್ತ್ಯವಾಗುವುದು. 6 ನೀವು ನನಗೆ ಸಮರ್ಪಿಸುವ ಪರಿಶುದ್ಧ ಭಾಗದ ಪಕ್ಕದಲ್ಲಿ ಐದು ಸಾವಿರ ಮೊಳ ಅಗಲದ, ಇಪ್ಪತ್ತೈದು ಸಾವಿರ ಮೊಳ ಉದ್ದದ ಕ್ಷೇತ್ರವನ್ನು ಪಟ್ಟಣಕ್ಕೆ ಒಳಪಟ್ಟ ಭೂಮಿಯನ್ನಾಗಿ ನೇಮಿಸಬೇಕು. ಅದರಲ್ಲಿ ಇಸ್ರಾಯೇಲ್ ವಂಶದವರಿಗೆಲ್ಲಾ ಹಕ್ಕಿರುವುದು. 7 ರಾಜನ ಸ್ವತ್ತು ನೀವು ಮೀಸಲಾಗಿ ಸಮರ್ಪಿಸುವ ಕ್ಷೇತ್ರಕ್ಕೂ, ಪಟ್ಟಣಕ್ಕೆ ಒಳಪಟ್ಟ ಭೂಮಿಗೂ ಎರಡು ಕಡೆಗಳಲ್ಲಿರುವುದು; ನೀವು ಮೀಸಲಾಗಿ ಸಮರ್ಪಿಸುವ ಕ್ಷೇತ್ರದ ಮತ್ತು ಪಟ್ಟಣಕ್ಕೆ ಒಳಪಟ್ಟ ಭೂಮಿಯ ಪಶ್ಚಿಮ ಕಡೆಯಲ್ಲಿ ಹರಡುವುದು, ಪೂರ್ವದಿಂದ ಪೂರ್ವಕ್ಕೂ ಹರಡುವುದು, ಅದರ ಉದ್ದವು ಪಶ್ಚಿಮದಿಂದ ಪೂರ್ವಕ್ಕೂ ಒಂದು ಕುಲದ ಸ್ವತ್ತಿನ ಉದ್ದಕ್ಕೆ ಸರಿಸಮಾನವಾಗಿರುವುದು. 8 ಅದು ಅವನಿಗೆ ಇಸ್ರಾಯೇಲಿನಲ್ಲಿ ಭೂಸ್ವಾಸ್ತ್ಯವಾಗುವುದು; ಇನ್ನು ಮೇಲೆ ನನ್ನ ಪ್ರಭುಗಳು ನನ್ನ ಪ್ರಜೆಗಳನ್ನು ಹಿಂಸಿಸುವುದಿಲ್ಲ; ದೇಶದ ಭೂಮಿಯನ್ನು ಇಸ್ರಾಯೇಲರಿಗೆ ಕುಲಕ್ಕೆ ತಕ್ಕಂತೆ ಹಂಚುವರು. 9 ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಇಸ್ರಾಯೇಲಿನ ಪ್ರಭುಗಳೇ, ಇನ್ನು ಸಾಕು, ಕೊಳ್ಳೆಯನ್ನೂ ಬಲಾತ್ಕಾರವನ್ನೂ ತ್ಯಜಿಸಿ, ನೀತಿನ್ಯಾಯಗಳನ್ನು ನಡೆಸಿರಿ. ನನ್ನ ಜನರ ಬಾಧ್ಯತೆಗಳನ್ನು ತಪ್ಪಿಸುವ ಅನ್ಯಾಯವನ್ನು ಬಿಟ್ಟುಬಿಡಿರಿ. ಇದು ಕರ್ತನಾದ ಯೆಹೋವನ ನುಡಿ. 10 ೧೦ ನಿಮ್ಮ ತಕ್ಕಡಿಯೂ, ಧಾನ್ಯದ ಅಳತೆಯೂ, ರಸದ್ರವ್ಯದ ಅಳತೆಯೂ ನ್ಯಾಯವಾಗಿಯೇ ಇರಬೇಕು. 11 ೧೧ ಏಫಾ (ಧಾನ್ಯದ ಅಳತೆ) ಮತ್ತು ಬತ್ (ರಸದ್ರವ್ಯದ ಅಳತೆ) ಒಂದೇ ಪ್ರಮಾಣವಾಗಿರಬೇಕು. ಬತ್ ಎಂಬುದು ಹೋಮೆರಿನ ಹತ್ತನೆಯ ಒಂದು ಪಾಲು, ಏಫಾ ಎಂಬುದು ಹೋಮೆರಿನ ಹತ್ತನೆಯ ಒಂದು ಪಾಲು; ಈ ಎರಡೂ ಹೋಮೆರ್ ಅಳತೆಗೆ ಸಂಬಂಧವಾಗಿರಬೇಕು. 12 ೧೨ ತೊಲೆಯು ಇಪ್ಪತ್ತು ಗೇರಾ ತೂಕವಾಗಿರಬೇಕು; ನಿಮ್ಮಲ್ಲಿ ಸಲ್ಲುವ ಮಾನೆಯು ಇಪ್ಪತ್ತು, ಇಪ್ಪತ್ತೈದು ಅಥವಾ ಹದಿನೈದು ತೊಲಾ ತೂಕದ್ದಾಗಿರಲಿ.” 13 ೧೩ ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನೀವು ನಿಮ್ಮ ದೋಷಪರಿಹಾರಕ್ಕಾಗಿ ಧಾನ್ಯನೈವೇದ್ಯವನ್ನೂ, ಸರ್ವಾಂಗಹೋಮವನ್ನೂ, ಸಮಾಧಾನಯಜ್ಞವನ್ನೂ ಮಾಡುವುದಕ್ಕೋಸ್ಕರ ಸಮರ್ಪಿಸತಕ್ಕದು ಏನೆಂದರೆ ಒಂದು ಹೋಮೆರ್ ಅಳತೆಯ ಗೋದಿಯಲ್ಲಿ ಏಫಾ ಅಳತೆಯ ಆರನೆಯ ಒಂದು ಪಾಲು; ಒಂದು ಹೋಮೆರ್ ಅಳತೆಯ ಜವೆಗೋದಿಯಲ್ಲಿ ಏಫಾ ಅಳತೆಯ ಆರನೆಯ ಒಂದು ಪಾಲು. 14 ೧೪ ಒಂದು ಬತ್ ಎಣ್ಣೆಯಲ್ಲಿ ಸಮರ್ಪಿಸಬೇಕಾದ ಭಾಗವೆಷ್ಟೆಂದರೆ ಒಂದು ಕೋರ್ ಅಂದರೆ ಹತ್ತು ಬತ್ ಅಥವಾ ಒಂದು ಹೋಮೆರ್ ಅಳತೆಯ ಎಣ್ಣೆಯಲ್ಲಿ ಒಂದು ಬತ್ ಅಳತೆಯ ಹತ್ತನೆಯ ಒಂದು ಪಾಲು. (ಹತ್ತು ಬತ್ ಅಂದರೆ ಒಂದು ಹೋಮೆರ್) 15 ೧೫ ಇನ್ನೂರು ಕುರಿಗಳಲ್ಲಿ ಇಸ್ರಾಯೇಲಿನ ನೀರಾವರಿಯ ಹುಲ್ಗಾವಲಿನ ಒಂದು ಕುರಿ; ಇವುಗಳನ್ನು ದೇಶದ ಸಕಲ ಜನರು ಇಸ್ರಾಯೇಲಿನ ಅರಸನಿಗೆ ಸರ್ವಾಂಗಹೋಮ ಮತ್ತು ಸಮಾಧಾನಬಲಿಯಾಗಿ ಒಪ್ಪಿಸಬೇಕು” ಇದು ಕರ್ತನಾದ ಯೆಹೋವನ ನುಡಿ. 16 ೧೬ ದೇಶದ ಸಕಲ ಜನರು ಇಸ್ರಾಯೇಲಿನ ಅರಸನಿಗೆ ಈ ಕಾಣಿಕೆಯನ್ನು ಒಪ್ಪಿಸತಕ್ಕದ್ದು. 17 ೧೭ ಉತ್ಸವಗಳಲ್ಲಿಯೂ, ಅಮಾವಾಸ್ಯೆಗಳಲ್ಲಿಯೂ, ಸಬ್ಬತ್ ದಿನಗಳಲ್ಲಿಯೂ ಇಸ್ರಾಯೇಲ್ ವಂಶದವರಿಗೆ ನೇಮಕವಾದ ಎಲ್ಲಾ ಹಬ್ಬಗಳಲ್ಲಿಯೂ ಸರ್ವಾಂಗಹೋಮ ಪಶು, ಧಾನನೈವೇದ್ಯ ಪಾನನೈವೇದ್ಯ, ಇವುಗಳನ್ನು ಒದಗಿಸುವುದು ಅರಸನ ಕರ್ತವ್ಯವಾಗಿದೆ; ಇಸ್ರಾಯೇಲ್ ವಂಶದ ದೋಷ ನಿವಾರಣೆಗಾಗಿ ಅವನು ದೋಷಪರಿಹಾರಕ ಯಜ್ಞಪಶು, ಧಾನ್ಯನೈವೇದ್ಯ, ಸರ್ವಾಂಗಹೋಮ ಪಶು, ಸಮಾಧಾನ ಯಜ್ಞಪಶು, ಇವುಗಳನ್ನು ಒಪ್ಪಿಸತಕ್ಕದ್ದು. 18 ೧೮ ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಮೊದಲನೆಯ ತಿಂಗಳಿನ, ಮೊದಲನೆಯ ದಿನದಲ್ಲಿ ನೀವು ಪೂರ್ಣಾಂಗವಾದ ಹೋರಿಯನ್ನು ಆರಿಸಿಕೊಂಡು ಪವಿತ್ರಾಲಯವನ್ನು ಶುದ್ಧೀಕರಿಸಬೇಕು. 19 ೧೯ ಆಗ ಯಾಜಕನು ಆ ದೋಷಪರಿಹಾರಕ ಯಜ್ಞಪಶುವಿನ ರಕ್ತದಲ್ಲಿ ಸ್ವಲ್ಪವನ್ನು ತೆಗೆದುಕೊಂಡು ದೇವಸ್ಥಾನದ ಬಾಗಿಲ ಚೌಕಟ್ಟಿಗೂ, ಯಜ್ಞವೇದಿಯ ದೊಡ್ಡ ಅಂತಸ್ತಿನ ನಾಲ್ಕು ಮೂಲೆಗಳಿಗೂ ಒಳಗಿನ ಅಂಗಳದ ಹೆಬ್ಬಾಗಿಲಿನ ಕಂಬಗಳಿಗೂ ಹಚ್ಚಬೇಕು. 20 ೨೦ ಅದೇ ಮೇರೆಗೆ ಏಳನೆಯ ತಿಂಗಳಿನ, ಮೊದಲನೆಯ ದಿನದಲ್ಲಿ ನೀನು ಯಜ್ಞಮಾಡಿ, ಯಾರಾದರೂ ಆಕಸ್ಮಾತ್ತಾಗಿ ಮಾಡಿದ ತಪ್ಪಿನಿಂದಾಗಲಿ, ಬುದ್ಧಿಹೀನರ ಅವಿವೇಕದಿಂದಾಗಲಿ ದೇವಾಲಯಕ್ಕೆ ಸಂಭವಿಸಿದ ದೋಷವನ್ನೆಲ್ಲಾ ಪರಿಹರಿಸಬೇಕು. 21 ೨೧ “ಮೊದಲನೆಯ ತಿಂಗಳಿನ, ಹದಿನಾಲ್ಕನೆಯ ದಿನದಲ್ಲಿ, ಏಳು ದಿನದ ಪಸ್ಕಹಬ್ಬವನ್ನು ಆಚರಿಸಬೇಕು; ಹುಳಿಯಿಲ್ಲದ ರೊಟ್ಟಿಯನ್ನೇ ತಿನ್ನಬೇಕು. 22 ೨೨ ಆ ದಿನದಲ್ಲಿ ಪ್ರಭುವು ತನ್ನ ನಿಮಿತ್ತವೂ, ದೇಶದ ಜನರೆಲ್ಲರ ನಿಮಿತ್ತವೂ ದೋಷಪರಿಹಾರಕ ಯಜ್ಞಕ್ಕಾಗಿ ಒಂದು ಹೋರಿಯನ್ನು ಒಪ್ಪಿಸಲಿ. 23 ೨೩ ಹಬ್ಬದ ಏಳು ದಿನಗಳಲ್ಲಿಯೂ ಯೆಹೋವನಿಗೆ ಸಮರ್ಪಿಸತಕ್ಕ ಸರ್ವಾಂಗಹೋಮಕ್ಕಾಗಿ ಅವನು ಏಳು ದಿನಗಳವರೆಗೆ ದಿನವೊಂದಕ್ಕೆ ಪೂರ್ಣಾಂಗವಾದ ಏಳು ಹೋರಿಗಳನ್ನೂ, ಏಳು ಟಗರುಗಳನ್ನೂ ಒದಗಿಸಲಿ ಮತ್ತು ದೋಷಪರಿಹಾರಕ ಯಜ್ಞವಾಗಿ ಪ್ರತಿ ದಿನವೂ ಒಂದು ಹೋತವನ್ನು ಕೊಡಲಿ. 24 ೨೪ ಇದಲ್ಲದೆ ಒಂದೊಂದು ಹೋರಿಯ ಮತ್ತು ಟಗರಿನ ಸಂಗಡ ಮೂವತ್ತು ಸೇರು ಗೋದಿಹಿಟ್ಟನ್ನೂ, ಆರಾರು ಸೇರು ಎಣ್ಣೆಯನ್ನೂ ಧಾನ್ಯನೈವೇದ್ಯಕ್ಕಾಗಿ ಒಪ್ಪಿಸಬೇಕು. 25 ೨೫ “ಏಳನೆಯ ತಿಂಗಳಿನ ಹದಿನೈದನೆಯ ದಿನದಲ್ಲಿ ಪ್ರಾರಂಭವಾಗುವ ಹಬ್ಬದ ಏಳು ದಿನಗಳಲ್ಲಿಯೂ ಅವನು ದೋಷಪರಿಹಾರಕ ಯಜ್ಞಪಶು, ಸರ್ವಾಂಗಹೋಮ ಪಶು, ಧಾನ್ಯನೈವೇದ್ಯ ಎಣ್ಣೆ, ಇವುಗಳನ್ನು ಅದೇ ಕ್ರಮದಂತೆ ಕೊಡಬೇಕು.”

< ಯೆಹೆಜ್ಕೇಲನು 45 >