< ಯೆಹೆಜ್ಕೇಲನು 20 >

1 ಏಳನೆಯ ವರ್ಷದ, ಐದನೆಯ ತಿಂಗಳಿನ ಹತ್ತನೆಯ ದಿನದಲ್ಲಿ ಇಸ್ರಾಯೇಲಿನ ಹಿರಿಯರಲ್ಲಿ ಕೆಲವರು ಯೆಹೋವನನ್ನು ಪ್ರಶ್ನೆ ಕೇಳುವುದಕ್ಕೆ ಬಂದು ನನ್ನ ಮುಂದೆ ಕುಳಿತುಕೊಂಡರು.
ಏಳನೆಯ ವರ್ಷದ, ಐದನೆಯ ತಿಂಗಳಿನ, ಹತ್ತನೆಯ ದಿನದಲ್ಲಿ ಇಸ್ರಾಯೇಲಿನ ಹಿರಿಯರಲ್ಲಿ ಕೆಲವರು ಯೆಹೋವ ದೇವರ ಬಳಿಗೆ ವಿಚಾರಣೆಗಾಗಿ ಬಂದು ನನ್ನ ಮುಂದೆ ಕುಳಿತುಕೊಂಡರು.
2 ಆಗ ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು,
ಆಗ ಯೆಹೋವ ದೇವರ ವಾಕ್ಯವು ನನಗೆ ಬಂದಿತು,
3 “ನರಪುತ್ರನೇ, ಇಸ್ರಾಯೇಲಿನ ಹಿರಿಯರನ್ನು ಸಂಬೋಧಿಸಿ ಹೀಗೆ ಹೇಳು, ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ‘ನನ್ನನ್ನು ಪ್ರಶ್ನೆ ಕೇಳುವುದಕ್ಕೆ ಬಂದಿರೋ? ನನ್ನ ಜೀವದಾಣೆ, ನಾನು ನಿಮಗೆ ಉತ್ತರ ಕೊಡುವುದೇ ಇಲ್ಲ’” ಇದು ಕರ್ತನಾದ ಯೆಹೋವನ ನುಡಿ.
“ಮನುಷ್ಯಪುತ್ರನೇ, ನೀನು ಇಸ್ರಾಯೇಲಿನ ಹಿರಿಯರ ಸಂಗಡ ಮಾತನಾಡಿ ಅವರಿಗೆ ಹೇಳಬೇಕಾದದ್ದೇನೆಂದರೆ, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನನ್ನನ್ನು ಪ್ರಶ್ನೆಕೇಳುವುದಕ್ಕೆ ಬಂದಿರೋ? ನನ್ನ ಜೀವದಾಣೆ, ನಾನು ನಿಮಗೆ ಉತ್ತರ ಕೊಡುವುದೇ ಇಲ್ಲ ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.’
4 “ನರಪುತ್ರನೇ, ಇವರಿಗೆ ನ್ಯಾಯತೀರಿಸಲು ನಿನ್ನ ಮನಸ್ಸು ಸ್ಥಿರವಾಗಿದೆಯೋ? ಇವರ ಪೂರ್ವಿಕರ ದುರಾಚಾರಗಳನ್ನು ಇವರಿಗೆ ಹೀಗೆ ತಿಳಿಸು,
“ನೀನು ಅವರಿಗೆ ನ್ಯಾಯತೀರಿಸುವೆಯೋ? ಮನುಷ್ಯಪುತ್ರನೇ, ನೀನು ಅವರಿಗೆ ನ್ಯಾಯತೀರಿಸುವೆಯೋ? ಹಾಗಾದರೆ ಅವರ ಪಿತೃಗಳ ಅಸಹ್ಯವಾದವುಗಳನ್ನು ಅವರಿಗೆ ತಿಳಿಸು.
5 ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ‘ಯಾವ ದಿನದಲ್ಲಿ ನಾನು ಇಸ್ರಾಯೇಲನ್ನು ಆರಿಸಿಕೊಂಡು, ಯಾಕೋಬ ಸಂತಾನದವರಿಗೆ ಮಾತುಕೊಟ್ಟು, ನಾನು ನಿಮ್ಮ ದೇವರಾದ ಯೆಹೋವನು’ ಎಂದು ಐಗುಪ್ತ ದೇಶದಲ್ಲಿ ಪ್ರಮಾಣ ಪೂರ್ವಕವಾಗಿ ತಿಳಿಯಪಡಿಸಿದೆನೋ,
ಅವರಿಗೆ ಹೇಳಬೇಕಾದದ್ದೇನೆಂದರೆ, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನಾನು ಇಸ್ರಾಯೇಲನ್ನು ಆಯ್ದುಕೊಂಡ ದಿವಸದಲ್ಲಿ ಯಾಕೋಬನ ವಂಶದವರಿಗೆ ನನ್ನ ಕೈಯೆತ್ತಿ, “ನಿಮ್ಮ ಸಾರ್ವಭೌಮ ಯೆಹೋವ ದೇವರು ನಾನೇ” ಎಂದು ಈಜಿಪ್ಟ್ ದೇಶದಲ್ಲಿ ಅವರಿಗೆ ಹೇಳಿದೆನು.
6 ಆ ದಿನದಲ್ಲಿ ನಾನು ಅವರಿಗೆ, ‘ಸಕಲ ದೇಶ ಶಿರೋಮಣಿಯಾದ ದೇಶವನ್ನು ನಿಮಗಾಗಿ ನೋಡಿದ್ದೇನೆ; ನಾನು ನಿಮ್ಮನ್ನು ಐಗುಪ್ತ ದೇಶದೊಳಗಿಂದ ಉದ್ಧರಿಸಿ ಹಾಲೂ ಮತ್ತು ಜೇನೂ ಹರಿಯುವ ಆ ದೇಶಕ್ಕೆ ಸೇರಿಸುವೆನು’ ಎಂದು ಪ್ರಮಾಣಮಾಡಿದೆನು.
ನಾನು ಅವರಿಗೆ ಪ್ರಮಾಣಮಾಡಿ ಈಜಿಪ್ಟ್ ದೇಶದಿಂದ ಹೊರಗೆ ತಂದು, ಅವರಿಗೋಸ್ಕರ ನಾನೇ ನೋಡಿಕೊಂಡಂಥ ಹಾಲೂ ಜೇನೂ ಹರಿಯುವ ಕೀರ್ತಿಯುಳ್ಳ ದೇಶಕ್ಕೆ ಅವರನ್ನು ಆ ದಿವಸದಲ್ಲಿ ಕರೆತಂದೆನು.
7 ‘ನೀವೆಲ್ಲರೂ ನಿಮ್ಮ ಕಣ್ಣಿಗೆ ಕಾಣುವ ಇಷ್ಟವಾದ ಅಸಹ್ಯ ವಸ್ತುಗಳನ್ನು ಬಿಸಾಡಿಬಿಡಿರಿ, ಐಗುಪ್ತದ ವಿಗ್ರಹಗಳಿಂದ ನಿಮ್ಮನ್ನು ಹೊಲಸು ಮಾಡಿಕೊಳ್ಳಬೇಡಿರಿ; ನಾನು ನಿಮ್ಮ ದೇವರಾದ ಯೆಹೋವನು’” ಎಂಬುದಾಗಿ ಅವರನ್ನು ಎಚ್ಚರಿಸಿದೆನು.
ಆಮೇಲೆ ನಾನು ಅವರಿಗೆ, “ನಿಮ್ಮಲ್ಲಿ ಒಬ್ಬೊಬ್ಬನು ತಮ್ಮ ತಮ್ಮ ಕಣ್ಣುಗಳ ಮುಂದೆ ಅಸಹ್ಯವಾದವುಗಳನ್ನು ಬಿಸಾಡಿ ಬಿಡಿರಿ. ಈಜಿಪ್ಟಿನ ವಿಗ್ರಹಗಳಿಂದ ನಿಮ್ಮನ್ನು ಅಶುದ್ಧಪಡಿಸಿಕೊಳ್ಳಬೇಡಿರಿ. ನಿಮ್ಮ ದೇವರಾಗಿರುವ ಯೆಹೋವ ದೇವರು ನಾನಾಗಿರುವೆನು.”
8 “‘ಅವರಾದರೋ ನನ್ನ ಮಾತನ್ನು ನಿರಾಕರಿಸಿ, ನನ್ನ ಮೇಲೆ ತಿರುಗಿ ಬಿದ್ದರು; ತಮ್ಮ ಕಣ್ಣಿಗೆ ಕಾಣುವ ಇಷ್ಟವಾದ ಅಸಹ್ಯ ವಸ್ತುಗಳನ್ನು ಯಾರೂ ಬಿಸಾಡಿಬಿಡಲಿಲ್ಲ, ಐಗುಪ್ತದ ವಿಗ್ರಹಗಳನ್ನು ತ್ಯಜಿಸಲಿಲ್ಲ; ಆಗ ನಾನು ಇವರ ಮೇಲೆ ಐಗುಪ್ತ ದೇಶದೊಳಗೆ ನನ್ನ ರೋಷಾಗ್ನಿಯನ್ನು ಸುರಿಸಿ ನನ್ನ ಕೋಪವನ್ನು ತೀರಿಸಿಕೊಳ್ಳುವೆನು’ ಅಂದುಕೊಂಡೆನು.
“‘ಆದರೆ ಅವರು ನನಗೆ ವಿರುದ್ಧವಾಗಿ ತಿರುಗಿಬಿದ್ದರು. ನನಗೆ ಕಿವಿಗೊಡಲಿಲ್ಲ. ಅವರು ತಮ್ಮ ಕಣ್ಣಿಗೆ ಅಸಹ್ಯವಾದವುಗಳನ್ನು ಬಿಸಾಡಲಿಲ್ಲ. ಅವರು ಈಜಿಪ್ಟಿನ ವಿಗ್ರಹಗಳನ್ನು ಬಿಡಲಿಲ್ಲ. ಆಗ ನಾನು ಅವರ ಮೇಲೆ ನನ್ನ ರೋಷವನ್ನು ಸುರಿಸಿ, ಈಜಿಪ್ಟ್ ದೇಶದಲ್ಲಿ ಅವರ ಮೇಲೆ ನನ್ನ ಕೋಪವನ್ನು ತೀರಿಸುವೆನೆಂದು ಹೇಳಿದೆನು.
9 ‘ಆದರೂ ನಿಮ್ಮನ್ನು ಐಗುಪ್ತ ದೇಶದೊಳಗಿಂದ ಪಾರುಮಾಡುವೆನು ಎಂಬುದಾಗಿ ಜನಾಂಗಗಳ ಮುಂದೆಯೇ ನನ್ನನ್ನು ಇವರಿಗೆ ಪ್ರಕಟಿಸಿಕೊಂಡೆನಲ್ಲಾ ಎಂದು ಯೋಚಿಸಿ, ಅವರ ಸುತ್ತಣ ಆ ಜನಾಂಗಗಳ ಮುಂದೆ ನನ್ನ ಹೆಸರು ಅಪಕೀರ್ತಿಗೆ ಗುರಿಯಾಗದಂತೆ ನನ್ನ ಹೆಸರಿನ ನಿಮಿತ್ತವೇ ಸಹಿಸಿಕೊಂಡೆನು.
ಆದರೆ ಅವರು ಯಾರ ಮಧ್ಯದಲ್ಲಿದ್ದರೋ, ನಾನು ಯಾರ ಮುಂದೆ ಅವರನ್ನು ಈಜಿಪ್ಟ್ ದೇಶದಿಂದ ಹೊರಗೆ ತಂದು ನನ್ನನ್ನು ತಿಳಿಯಪಡಿಸಿದೆನೋ ಆ ಜನಾಂಗಗಳ ಕಣ್ಣುಗಳ ಮುಂದೆ ನನ್ನ ಹೆಸರು ಅಪವಿತ್ರವಾಗದ ಹಾಗೆ ನನ್ನ ಹೆಸರಿಗೋಸ್ಕರವೇ ಈ ಕೆಲಸವನ್ನು ಮಾಡಿದೆನು.
10 ೧೦ ಆಗ ನಾನು ಅವರನ್ನು ಐಗುಪ್ತ ದೇಶದೊಳಗಿಂದ ಬಿಡಿಸಿ, ಅರಣ್ಯಕ್ಕೆ ಕರೆದು ತರಲು,
ಆದ್ದರಿಂದ ನಾನು ಅವರನ್ನು ಈಜಿಪ್ಟ್ ದೇಶದಿಂದ ಹೊರಗೆ ಕರೆತಂದು, ಮರುಭೂಮಿಯೊಳಗೆ ಅವರನ್ನು ಬರಮಾಡಿದೆನು.
11 ೧೧ ಕೈಗೊಳ್ಳುವವರಿಗೆ ಜೀವಾಧಾರವಾದ ನನ್ನ ಆಜ್ಞಾವಿಧಿಗಳನ್ನು ಅವರಿಗೆ ತಿಳಿಸಿಕೊಟ್ಟೆನು.
ಯಾವ ಸಂಗತಿಗಳನ್ನು ಮಾಡಿದರೆ ಮನುಷ್ಯನು ಬದುಕುವನೋ? ಆ ನನ್ನ ನಿಯಮಗಳನ್ನು ಅವರಿಗೆ ಕೊಟ್ಟು, ನನ್ನ ನ್ಯಾಯಗಳನ್ನು ಅವರಿಗೆ ತಿಳಿಸಿದೆನು.
12 ೧೨ ಇದಲ್ಲದೆ ತಮ್ಮನ್ನು ಪರಿಶುದ್ಧ ಜನರನ್ನಾಗಿ ಮಾಡಿರುವ ಯೆಹೋವನು ನಾನೇ ಎಂದು ಅವರು ತಿಳಿದುಕೊಳ್ಳುವಂತೆ ನನಗೂ, ಅವರಿಗೂ ಗುರುತಾದ ಸಬ್ಬತ್ ದಿನಗಳನ್ನು ಅವರಿಗೆ ಗುರುತಾಗಿ ನೇಮಿಸಿದೆನು.
ಇದಲ್ಲದೆ ಅವರನ್ನು ಪರಿಶುದ್ಧ ಮಾಡುವ ಯೆಹೋವ ದೇವರು ನಾನೇ ಎಂದು ಅವರು ತಿಳಿಯುವ ಹಾಗೆ ನನಗೂ, ಅವರಿಗೂ ಗುರುತಾಗಿರುವುದಕ್ಕೆ ನನ್ನ ಸಬ್ಬತ್ ದಿನಗಳನ್ನು ನಾನು ಅವರಿಗೆ ಕೊಟ್ಟೆನು.
13 ೧೩ “‘ಆದರೆ ಇಸ್ರಾಯೇಲ್ ವಂಶದವರು ಅರಣ್ಯದಲ್ಲಿ ನನ್ನ ಮೇಲೆ ತಿರುಗಿ ಬಿದ್ದರು. ಕೈಗೊಳ್ಳುವವರಿಗೆ ಜೀವಾಧಾರವಾದ ನನ್ನ ಆಜ್ಞಾವಿಧಿಗಳನ್ನು ಅನುಸರಿಸದೆ ನಿರಾಕರಿಸಿದರು, ನಾನು ನೇಮಿಸಿದ ಸಬ್ಬತ್ ದಿನಗಳನ್ನು ವಿಶೇಷವಾಗಿ ಹೊಲೆಮಾಡಿದರು; ಆಗ ನಾನು ಇವರ ಮೇಲೆ ಅರಣ್ಯದೊಳಗೆ ನನ್ನ ರೋಷಾಗ್ನಿಯನ್ನು ಸುರಿಸಿ ಇವರನ್ನು ಧ್ವಂಸಮಾಡುವೆನು’ ಅಂದುಕೊಂಡೆನು.
“‘ಆದರೆ ಇಸ್ರಾಯೇಲ್ ಜನರು ಮರುಭೂಮಿಯಲ್ಲಿಯೂ ನನಗೆ ವಿರುದ್ಧವಾಗಿ ತಿರುಗಿಬಿದ್ದರು. ಅವರು ನನ್ನ ಆಜ್ಞೆಗಳನ್ನು ಅನುಸರಿಸಲಿಲ್ಲ, ನನ್ನ ಅಪ್ಪಣೆಗಳನ್ನು ತಿರಸ್ಕರಿಸಿದರು. ಅವುಗಳಿಗೆ ವಿಧೇಯನಾಗುವವನು ಅವುಗಳಿಂದ ಜೀವಿಸುವನು. ನನ್ನ ಸಬ್ಬತ್ ದಿನಗಳನ್ನು ಅಪವಿತ್ರಗೊಳಿಸಿದರು. ಆಗ ನಾನು ಅವರ ಮೇಲೆ ನನ್ನ ರೋಷವನ್ನು ಸುರಿದು, ಅವರನ್ನು ಮರುಭೂಮಿಯಲ್ಲಿ ನಾಶಮಾಡುವೆನೆಂದು ಹೇಳಿದೆನು.
14 ೧೪ ‘ಆದರೂ ಯಾವ ಜನಾಂಗಗಳ ಮುಂದೆ ಅವರನ್ನು ಪಾರುಮಾಡಿದೆನೋ, ಆ ಜನಾಂಗಗಳ ಮುಂದೆ ನನ್ನ ಹೆಸರು ಅಪಕೀರ್ತಿಗೆ ಗುರಿಯಾಗಬಾರದೆಂದು ನನ್ನ ಹೆಸರಿನ ನಿಮಿತ್ತವೇ ಸಹಿಸಿಕೊಂಡೆನು.
ಆದರೆ ನಾನು ಅವರನ್ನು ಯಾರ ಕಣ್ಣುಗಳ ಮುಂದೆ ಬರಮಾಡಿದೆನೋ, ಆ ಜನಾಂಗಗಳ ದೃಷ್ಟಿಯಲ್ಲಿ ಅಪವಿತ್ರವಾಗದ ಹಾಗೆ ನನ್ನ ಹೆಸರಿಗಾಗಿಯೇ ಕೆಲಸ ಮಾಡಿದೆನು.
15 ೧೫ ಆ ಮೇಲೆ ಸಕಲ ದೇಶ ಶಿರೋಮಣಿಯಾದ ಯಾವ ದೇಶವನ್ನು ವಾಗ್ದಾನಮಾಡಿದೆನೋ, ಹಾಲೂ ಮತ್ತು ಜೇನು ಹರಿಯುವ ಆ ದೇಶಕ್ಕೆ ನಿಮ್ಮನ್ನು ಸೇರಿಸುವುದಿಲ್ಲ ಎಂದು ಅರಣ್ಯದಲ್ಲಿ ಅವರಿಗೆ ಪ್ರಮಾಣ ಮಾಡಿದೆನು.
ಆದರೂ ಹಾಲೂ ಜೇನೂ ಹರಿಯುವಂಥ ದೇಶಗಳಿಗೆ ಕೀರ್ತಿಯಾಗಿರುವಂಥ ಆ ದೇಶದಲ್ಲಿ ಅವರನ್ನು ಸೇರಿಸುವುದಿಲ್ಲವೆಂದು ಮರುಭೂಮಿಯಲ್ಲಿ ಅವರಿಗೆ ನನ್ನ ಕೈಯೆತ್ತಿ ಪ್ರಮಾಣಮಾಡಿದೆನು.
16 ೧೬ ಏಕೆಂದರೆ ಅವರ ಹೃದಯವು ತಮ್ಮ ವಿಗ್ರಹಗಳಲ್ಲಿ ಆಸಕ್ತರಾಗಿ, ಅವರು ನನ್ನ ಆಜ್ಞಾವಿಧಿಗಳನ್ನು ಅನುಸರಿಸದೆ ನಿರಾಕರಿಸಿ, ನಾನು ನೇಮಿಸಿದ ಸಬ್ಬತ್ ದಿನಗಳನ್ನು ಹೊಲೆ ಮಾಡಿದವರಾಗಿದ್ದರು.
ಅವರ ಹೃದಯವು ತಮ್ಮ ವಿಗ್ರಹಗಳಲ್ಲಿ ಆಸಕ್ತವಾಗಿ, ನನ್ನ ನಿಯಮಗಳನ್ನು ಅನುಸರಿಸದೆ ನಿರಾಕರಿಸಿ, ನಾನು ನೇಮಿಸಿದ ವಿಶ್ರಾಂತಿಯ ದಿನಗಳನ್ನು ಅಪವಿತ್ರ ಮಾಡಿದ್ದರು.
17 ೧೭ ಆದರೂ ನಾನು ಅವರನ್ನು ನಾಶ ಮಾಡಲಿಲ್ಲ; ನನ್ನ ಕಟಾಕ್ಷವು ಅವರನ್ನು ಉಳಿಸಿತು; ನಾನು ಅವರನ್ನು ಅರಣ್ಯದಲ್ಲಿ ನಿರ್ಮೂಲಮಾಡಲಿಲ್ಲ.’”
ಆದರೂ ಅವರನ್ನು ನಾನು ನಾಶಮಾಡದ ಹಾಗೆ ನನ್ನ ಕಣ್ಣು ಕನಿಕರಿಸಿತು. ನಾನು ಅವರನ್ನು ಮರುಭೂಮಿಯಲ್ಲಿ ಅಂತ್ಯಗೊಳಿಸಲಿಲ್ಲ.
18 ೧೮ ಆ ಮೇಲೆ ನಾನು ಅರಣ್ಯದಲ್ಲಿ ಅವರ ಸಂತಾನದವರಿಗೆ, “ನೀವು ನಿಮ್ಮ ತಂದೆಗಳ ಆಜ್ಞೆಗಳನ್ನು ಅನುಸರಿಸದೆ, ಅವರ ವಿಧಿಗಳನ್ನು ಕೈಕೊಳ್ಳದೆ, ಅವರ ವಿಗ್ರಹಗಳಿಂದ ನಿಮ್ಮನ್ನು ಹೊಲಸು ಮಾಡಿಕೊಳ್ಳದೆ ಇರಬೇಕು.
ಮರುಭೂಮಿಯಲ್ಲಿ ನಾನು ಅವರ ಮಕ್ಕಳಿಗೆ ಹೇಳಿದ್ದೇನೆಂದರೆ, “ನೀವು ನಿಮ್ಮ ತಂದೆಗಳ ನಿಯಮಗಳನ್ನು ಅನುಸರಿಸಬೇಡಿರಿ, ಅವರ ನ್ಯಾಯಗಳನ್ನು ಕೈಕೊಳ್ಳಬೇಡಿರಿ, ಅವರ ವಿಗ್ರಹಗಳಿಂದ ನಿಮ್ಮನ್ನು ಅಪವಿತ್ರಮಾಡಿಕೊಳ್ಳಬೇಡಿರಿ.
19 ೧೯ ನಾನು ನಿಮ್ಮ ದೇವರಾದ ಯೆಹೋವನು; ನೀವು ನನ್ನ ಆಜ್ಞೆಗಳನ್ನು ಅನುಸರಿಸಿ, ನನ್ನ ವಿಧಿಗಳನ್ನು ಕೈಕೊಂಡು ನಡೆಯಿರಿ.
ನಾನೇ ಯೆಹೋವ ದೇವರೂ ನಿಮ್ಮ ದೇವರೂ ಆಗಿದ್ದೇನೆ. ನನ್ನ ನಿಯಮಗಳಲ್ಲೇ ನಡೆಯಿರಿ ಮತ್ತು ನನ್ನ ನ್ಯಾಯಗಳನ್ನು ಜಾಗರೂಕತೆಯಿಂದ ಕೈಗೊಂಡು ಅವುಗಳನ್ನೇ ಮಾಡಿರಿ.
20 ೨೦ ನಾನು ನೇಮಿಸಿದ ಸಬ್ಬತ್ ದಿನಗಳನ್ನು ನನ್ನ ಪರಿಶುದ್ಧ ದಿನಗಳೆಂದು ಆಚರಿಸಿರಿ; ನಾನು ನಿಮ್ಮ ದೇವರಾದ ಯೆಹೋವನು ಎಂದು ನೀವು ತಿಳಿದುಕೊಳ್ಳುವಂತೆ ಅವು ನಿಮಗೂ ಮತ್ತು ನನಗೂ ಗುರುತಾಗಿರುವುವು” ಎಂದು ಹೇಳಿದೆನು.
ನನ್ನ ಸಬ್ಬತ್ ದಿನಗಳನ್ನು ಪರಿಶುದ್ಧ ಮಾಡಿರಿ, ನಾನೇ ನಿಮ್ಮ ದೇವರಾದ ಯೆಹೋವ ದೇವರು ಎಂದು ಅವು ನಿಮಗೂ ನನಗೂ, ನೀವು ತಿಳಿಯುವ ಹಾಗೆ ಗುರುತುಗಳಾಗಿರುವುವು.”
21 ೨೧ “ಆದರೆ ಆ ಸಂತಾನದವರಾದರೋ ನನ್ನ ಮೇಲೆ ತಿರುಗಿ ಬಿದ್ದರು; ನನ್ನ ಆಜ್ಞೆಗಳನ್ನು ಅನುಸರಿಸಲಿಲ್ಲ; ಕೈಗೊಂಡವರಿಗೆ ಜೀವಾಧಾರವಾದ ನನ್ನ ವಿಧಿಗಳನ್ನು ಅನುಸರಿಸಿ ನಡೆಯಲಿಲ್ಲ; ನಾನು ನೇಮಿಸಿದ ಸಬ್ಬತ್ ದಿನಗಳನ್ನು ಹೊಲೆ ಮಾಡಿದರು; ಆದುದರಿಂದ ನಾನು ಅರಣ್ಯದಲ್ಲಿ ಇವರ ಮೇಲೆ ನನ್ನ ರೋಷಾಗ್ನಿಯನ್ನು ಸುರಿಸಿ, ನನ್ನ ಕೋಪವನ್ನು ತೀರಿಸಿಕೊಳ್ಳುವೆನು” ಅಂದುಕೊಂಡೆನು.
“‘ಆದರೆ ಮಕ್ಕಳು ನನಗೆ ವಿರೋಧವಾಗಿ ತಿರುಗಿಬಿದ್ದರು. ಯಾವವುಗಳನ್ನು ಮನುಷ್ಯನು ಮಾಡಿದರೆ ಬದುಕುವನೋ, ಆ ನನ್ನ ನಿಯಮಗಳಲ್ಲಿ ನಡೆಯಲಿಲ್ಲ ಮತ್ತು ನನ್ನ ನ್ಯಾಯಗಳನ್ನು ಜಾಗರೂಕತೆಯಿಂದ ಪಾಲಿಸಿ ನಡೆಯಲಿಲ್ಲ. ನನ್ನ ಸಬ್ಬತ್ ದಿನಗಳನ್ನು ಅಪವಿತ್ರಪಡಿಸಿದಿರಿ. ಆಗ ಅವರ ಮೇಲೆ ನನ್ನ ರೋಷವನ್ನು ಸುರಿದುಬಿಡುವೆನೆಂದೂ, ನನ್ನ ಕೋಪವನ್ನು ಮರುಭೂಮಿಯಲ್ಲಿ ಅವರ ಮೇಲೆ ತೀರಿಸಿ ಬಿಡುವೆನೆಂದೂ ಹೇಳಿದೆನು.
22 ೨೨ “ಆದರೂ ನಾನು ಯಾವ ಜನಾಂಗಗಳ ಮುಂದೆ ಅವರನ್ನು ಪಾರು ಮಾಡಿದೆನೋ ಆ ಜನಾಂಗಗಳ ಮುಂದೆ ನನ್ನ ಹೆಸರು ಅಪಕೀರ್ತಿಗೆ ಗುರಿಯಾಗಬಾರದೆಂದು ನನ್ನ ಹೆಸರಿನ ನಿಮಿತ್ತವೇ ಸಹಿಸಿಕೊಂಡು ಕೈಯನ್ನು ಹಿಂದಕ್ಕೆ ತೆಗೆದುಕೊಂಡೆನು.
ಆದರೂ ನಾನು ನನ್ನ ಕೈಯನ್ನು ಹಿಂತೆಗೆದು, ನಾನು ಅವರನ್ನು ಯಾರ ಕಣ್ಣುಗಳ ಮುಂದೆ ಹೊರಗೆ ಬರಮಾಡಿದೆನೋ, ಆ ಜನಾಂಗಗಳ ದೃಷ್ಟಿಯಲ್ಲಿ ನನ್ನ ಹೆಸರು ಅಪವಿತ್ರವಾಗದ ಹಾಗೆ, ನನ್ನ ಹೆಸರಿಗೋಸ್ಕರವೇ ಕೆಲಸ ಮಾಡಿದೆನು.
23 ೨೩ ನಾನು ಅವರನ್ನು ಅನ್ಯಜನಾಂಗಗಳಲ್ಲಿ ಚದರಿಸುತ್ತೇನೆಂದೂ ದೇಶದಲ್ಲಿ ಹರಡಿಸುತ್ತೇನೆಂದೂ ಮರುಭೂಮಿಯಲ್ಲಿ ಪ್ರಮಾಣ ಮಾಡಿ ಹೇಳಿದೆ.
ನಾನು ಅವರನ್ನು ಇತರ ಜನಾಂಗಗಳಲ್ಲಿ ಚದರಿಸುತ್ತೇನೆಂದೂ, ದೇಶಗಳಲ್ಲಿ ಹರಡಿಸುತ್ತೇನೆಂದೂ ಮರುಭೂಮಿಯಲ್ಲಿ ಅವರ ಮೇಲೆ ಕೈಯೆತ್ತಿ ಪ್ರಮಾಣಮಾಡಿದೆನು.
24 ೨೪ ಏಕೆಂದರೆ ನನ್ನ ಜನರು ನನ್ನ ಆಜ್ಞೆಗಳನ್ನು ಕೈಕೊಳ್ಳದೆ, ನನ್ನ ವಿಧಿಗಳನ್ನು ನಿರಾಕರಿಸಿ ನಾನು ನೇಮಿಸಿದ ಸಬ್ಬತ್ ದಿನಗಳನ್ನು ಹೊಲೆಮಾಡಿ, ತಮ್ಮ ಪೂರ್ವಿಕರ ವಿಗ್ರಹಗಳ ಮೇಲೆ ಕಣ್ಣುಹಾಕಿದ್ದರಿಂದ, ನಾನು ನಿಮ್ಮನ್ನು ಜನಾಂಗಗಳಲ್ಲಿ ಚದರಿಸಿ, ದೇಶ ದೇಶಗಳಿಗೆ ಚೆಲ್ಲಾಪಿಲ್ಲಿಯಾಗಿಸುವೆನು.” ಎಂದು ಅರಣ್ಯದಲ್ಲಿ ಅವರಿಗೆ ಪ್ರಮಾಣಮಾಡಿದೆನು.
ಏಕೆಂದರೆ ಅವರು ನನ್ನ ನ್ಯಾಯಗಳಲ್ಲಿ ನಡೆಯದೆ, ನನ್ನ ನಿಯಮಗಳನ್ನು ಅಲಕ್ಷಿಸಿ, ನನ್ನ ಸಬ್ಬತ್ ದಿನಗಳನ್ನು ಅಪವಿತ್ರಪಡಿಸಿದರು. ತಮ್ಮ ಪಿತೃಗಳ ವಿಗ್ರಹಗಳ ಕಡೆಗೆ ಕಣ್ಣಿಟ್ಟಿದ್ದರು.
25 ೨೫ “ಇದಲ್ಲದೆ, ನಾನೇ ಯೆಹೋವನು ಎಂದು ಅವರು ತಿಳಿದುಕೊಳ್ಳುವಂತೆ ನಾನು ಅವರಿಗೆ ಅಹಿತವಾದ ಆಜ್ಞೆಗಳನ್ನೂ, ಜೀವಾಧಾರವಲ್ಲದ ವಿಧಿಗಳನ್ನೂ ನೇಮಿಸಿದೆನು.
ನಾನೇ ಯೆಹೋವ ದೇವರು ಎಂದು ಅವರು ತಿಳಿದುಕೊಳ್ಳುವಂತೆ ನಾನು ಅವರಿಗೆ ಅಹಿತವಾದ ನಿಯಮಗಳನ್ನೂ, ಅವರು ಬದುಕಬಾರದ ನ್ಯಾಯಗಳನ್ನೂ ಕೊಟ್ಟೆನು.
26 ೨೬ ಅವರು ತಮ್ಮ ಚೊಚ್ಚಲಮಕ್ಕಳನ್ನು ಆಹುತಿಕೊಟ್ಟು ಅರ್ಪಿಸುತ್ತಿದ್ದ ಬಲಿಗಳಿಂದಲೇ ಅವರನ್ನು ಹೊಲೆಗೆಡಿಸಿ, ಕೇವಲ ದುರಾವಸ್ಥೆಗೆ ತಂದೆನು.”
ಅವರು ತಮ್ಮ ಚೊಚ್ಚಲು ಮಕ್ಕಳನ್ನು ಆಹುತಿಕೊಟ್ಟು ಅರ್ಪಿಸುತ್ತಿದ್ದ ಬಲಿಗಳಿಂದಲೇ ಅವರನ್ನು ಹೊಲೆಗೆಡಿಸಿ, ಕೇವಲ ದುರವಸ್ಥೆಗೆ ತಂದೆನು. ಆಗ ನಾನೇ ಯೆಹೋವ ದೇವರೆಂದು ಅವರು ತಿಳಿದುಕೊಳ್ಳುವರು.’
27 ೨೭ ಹೀಗಿರಲು, “ನರಪುತ್ರನೇ, ಇಸ್ರಾಯೇಲ್ ವಂಶದವರಿಗೆ ಈ ಮಾತನ್ನು ಹೇಳು, ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ‘ನಿಮ್ಮ ಪೂರ್ವಿಕರು ಇನ್ನೂ ಒಂದು ದ್ರೋಹವನ್ನು ಮಾಡಿ ನನ್ನನ್ನು ದೂಷಿಸಿದ್ದಾರೆ.
“ಆದ್ದರಿಂದ ಮನುಷ್ಯಪುತ್ರನೇ, ನೀನು ಇಸ್ರಾಯೇಲಿನ ಮನೆತನದವರ ಸಂಗಡ ಮಾತನಾಡಿ ಅವರಿಗೆ, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನನಗೆ ವಿರುದ್ಧವಾಗಿ ಬಹಳ ಅಪರಾಧಮಾಡಿದ್ದರಲ್ಲಿಯೂ ನಿಮ್ಮ ಪಿತೃಗಳು ನನ್ನನ್ನು ದೂಷಿಸಿದರು.
28 ೨೮ ನಾನು ಪ್ರಮಾಣ ಪೂರ್ವಕವಾಗಿ ಅವರಿಗೆ ವಾಗ್ದಾನ ಮಾಡಿದ ದೇಶಕ್ಕೆ ಅವರನ್ನು ಸೇರಿಸಿದ ಮೇಲೆ ಅವರು ಎತ್ತರವಾದ ಎಲ್ಲಾ ಗುಡ್ಡಗಳನ್ನೂ, ಸೊಂಪಾಗಿ ಬೆಳೆದಿರುವ ಎಲ್ಲಾ ಮರಗಳನ್ನೂ ನೋಡಿ ಅಲ್ಲಿ ಯಜ್ಞಪಶುಗಳನ್ನು ವಧಿಸಿ, ನನ್ನನ್ನು ರೇಗಿಸುವ ನೈವೇದ್ಯವನ್ನರ್ಪಿಸಿ, ಸುಗಂಧ ಹೋಮಮಾಡಿ, ಪಾನದ್ರವ್ಯವನ್ನು ಸುರಿದು, ಬಲಿ ಅರ್ಪಿಸುತ್ತಿದ್ದರು.’
ನಾನು ಪ್ರಮಾಣಪೂರ್ವಕವಾಗಿ ಅವರಿಗೆ ವಾಗ್ದಾನಮಾಡಿದ ದೇಶದಲ್ಲಿ ನಾನು ಅವರನ್ನು ಬರಮಾಡಿದ ಮೇಲೆ ಅವರು ಎತ್ತರವಾದ ಎಲ್ಲಾ ಗುಡ್ಡಗಳನ್ನೂ, ಸೊಂಪಾಗಿ ಬೆಳೆದಿರುವ ಮರಗಳನ್ನೂ ನೋಡಿ, ಅಲ್ಲಿ ತಮ್ಮ ಬಲಿಗಳನ್ನರ್ಪಿಸಿ ಸುವಾಸನೆಗಳನ್ನಿಟ್ಟು ಪಾನದ್ರವ್ಯವನ್ನು ಸುರಿದರು.
29 ೨೯ ನೀವು ಹೋಗುವ, ‘ಬಾಮಾ ಎಂಬ ಪೂಜಾಸ್ಥಾನ ಇದು ಎಂಥ ಸ್ಥಳ?’” (ಇಂದಿನ ವರೆಗೂ ಇಂಥಾ ಪೂಜಾಸ್ಥಾನಗಳಿಗೆ ಬಾಮಾ ಎಂದೇ ಹೆಸರು).
ಆಗ ನಾನು ಅವರಿಗೆ ಹೇಳಿದ್ದೇನೆಂದರೆ: ನೀವು ಹೋಗುವ ಈ ಎತ್ತರವಾದ ಸ್ಥಳವು ಏನು? ಅದಕ್ಕೆ ಈ ದಿನದವರೆಗೂ ಬಾಮಾ ಎಂದು ಕರೆಯುವರು.’”
30 ೩೦ ಇಸ್ರಾಯೇಲ್ ವಂಶದವರಿಗೆ ಹೀಗೆ ಹೇಳು, ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನಿಮ್ಮ ಪೂರ್ವಿಕರಂತೆ ನಿಮ್ಮನ್ನು ನೀವೇ ಹೊಲಸು ಮಾಡಿಕೊಳ್ಳುತ್ತೀರೋ? ಅವರು ಪೂಜಿಸುತ್ತಿದ್ದ ಅಸಹ್ಯ ವಸ್ತುಗಳನ್ನು ನೀವೂ ಪೂಜಿಸಿ ದೇವದ್ರೋಹ ಮಾಡುತ್ತೀರೋ?
“ಆದ್ದರಿಂದ ನೀನು ಇಸ್ರಾಯೇಲಿನ ಮನೆತನದವರಿಗೆ ಹೇಳಬೇಕಾದದ್ದೇನೆಂದರೆ, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನಿಮ್ಮ ಪಿತೃಗಳ ಹಾಗೆ ನಿಮ್ಮನ್ನು ಅಪವಿತ್ರಪಡಿಸಿಕೊಳ್ಳುತ್ತೀರೋ? ಅವರ ಅಸಹ್ಯವಾದ ವಿಗ್ರಹಗಳ ಹಿಂದೆ ಹೋಗುತ್ತೀರೋ?
31 ೩೧ ನೀವು ಬಲಿಯರ್ಪಿಸುತ್ತಾ ನಿಮ್ಮ ಮಕ್ಕಳನ್ನು ಆಹುತಿಕೊಟ್ಟು ಇಂದಿನವರೆಗೂ ನಿಮ್ಮನ್ನು ಅಶುದ್ಧ ಮಾಡಿಕೊಳ್ಳುತ್ತಿದ್ದೀರೋ? ಇಸ್ರಾಯೇಲ್ ವಂಶದವರೇ, ನಾನು ನಿಮ್ಮಂಥವರಿಗೆ ದೈವೋತ್ತರವನ್ನು ದಯಪಾಲಿಸಬಹುದೋ? ನನ್ನ ಜೀವದಾಣೆ, ನಿಮಗೆ ದೈವೋತ್ತರವನ್ನು ದಯಪಾಲಿಸುವುದಿಲ್ಲ” ಇದು ಕರ್ತನಾದ ಯೆಹೋವನ ನುಡಿ.
ನಿಮ್ಮ ದಾನಗಳನ್ನು ತರುವಾಗಲೂ, ಬೆಂಕಿಯಲ್ಲಿ ನಿಮ್ಮ ಮಕ್ಕಳನ್ನು ಯಜ್ಞವಾಗಿ ಅರ್ಪಿಸುವಾಗಲೂ, ನೀವು ಇಂದಿನವರೆಗೂ ನಿಮ್ಮ ಎಲ್ಲಾ ವಿಗ್ರಹಗಳಿಂದ ನಿಮ್ಮನ್ನು ಅಪವಿತ್ರಪಡಿಸಿಕೊಳ್ಳುತ್ತಿದ್ದೀರಿ. ಹೀಗಿರುವಾಗ ಇಸ್ರಾಯೇಲ್ ವಂಶದವರೇ, ನೀವು ನನ್ನನ್ನು ವಿಚಾರಿಸಲು ಅನುಮತಿಸಬೇಕೆ? ನನ್ನ ಜೀವದಾಣೆ ನಾನು ನಿಮ್ಮನ್ನು ವಿಚಾರಿಸಲು ಅನುಮತಿಸುವುದಿಲ್ಲ, ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.
32 ೩೨ “ನಾವು ಜನಾಂಗಗಳಂತೆ, ಅನ್ಯದೇಶಗಳವರಂತೆ ಮರಕಲ್ಲುಗಳ ಬೊಂಬೆಗಳನ್ನು ಭಜಿಸುವೆವು ಎಂದು ನಿಮ್ಮ ಮನಸ್ಸಿನಲ್ಲಿ ಹುಟ್ಟುವ ಯೋಚನೆಯು ಖಂಡಿತ ನೆರವೇರುವುದಿಲ್ಲ.”
“‘“ನಾವು ಇತರ ಜನಾಂಗಗಳ ಹಾಗೆ ಮತ್ತು ಇತರ ದೇಶಗಳವರ ಹಾಗೆ ಇದ್ದು ಮರಕ್ಕೂ ಕಲ್ಲಿಗೂ ಸೇವೆ ಮಾಡುತ್ತೇವೆಂದು ನಿಮ್ಮ ಮನಸ್ಸಿನಲ್ಲಿ ಹುಟ್ಟುವ ಯೋಚನೆಯು ಎಷ್ಟು ಮಾತ್ರಕ್ಕೂ ನೆರವೇರದು.”
33 ೩೩ ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನನ್ನ ಜೀವದಾಣೆ, ನಾನು ಶಿಕ್ಷಾಹಸ್ತವನ್ನೆತ್ತಿ, ಭುಜಪರಾಕ್ರಮವನ್ನು ತೋರಿಸಿ, ರೋಷಾಗ್ನಿಯನ್ನು ಸುರಿಸುತ್ತಾ ನಿಮ್ಮ ಮೇಲೆ ದೊರೆತನ ಮಾಡುವೆನು.
ಸಾರ್ವಭೌಮ ಯೆಹೋವ ದೇವರು ಹೇಳುವುದೇನೆಂದರೆ, ನನ್ನ ಜೀವದಾಣೆ, ನಿಶ್ಚಯವಾಗಿ ಬಲವಾದ ಕೈಯಿಂದಲೂ, ಚಾಚಿದ ತೋಳಿನಿಂದಲೂ, ಸುರಿಸಿದ ರೋಷದಿಂದಲೂ ನಾನು ನಿಮ್ಮ ಮೇಲೆ ಅಧಿಕಾರ ನಡೆಸುತ್ತೇನೆ.
34 ೩೪ ಹೌದು, ನಾನು ಶಿಕ್ಷಾಹಸ್ತವನ್ನೆತ್ತಿ ಭುಜಪರಾಕ್ರಮವನ್ನು ತೋರಿಸಿ, ರೋಷಾಗ್ನಿಯನ್ನು ಸುರಿಸುತ್ತಾ ನಿಮ್ಮನ್ನು ಜನಾಂಗಗಳೊಳಗಿಂದ ಪಾರುಮಾಡಿ ನೀವು ಚದರಿಹೋಗಿರುವ ದೇಶಗಳಿಂದ ನಿಮ್ಮನ್ನು ಕೂಡಿಸುವೆನು.
ಬಲವಾದ ಕೈಯಿಂದಲೂ, ಚಾಚಿದ ತೋಳಿನಿಂದಲೂ, ಸುರಿಸಿದ ರೋಷದಿಂದಲೂ, ನಿಮ್ಮನ್ನು ಜನರೊಳಗಿಂದ ಹೊರತಂದು ನೀವು ಚದರಿಹೋಗಿರುವ ದೇಶಗಳೊಳಗಿಂದ ನಿಮ್ಮನ್ನು ಒಂದಾಗಿ ಕೂಡಿಸುವೆನು.
35 ೩೫ ಜನಾಂಗಗಳ ಮಧ್ಯದ ಅರಣ್ಯಕ್ಕೆ ಕರೆ ತಂದು ಅಲ್ಲೇ ಮುಖಾಮುಖಿಯಾಗಿ ನಿಮ್ಮೊಂದಿಗೆ ವಾದಿಸುವೆನು.
ನಿಮ್ಮನ್ನು ಜನರಿರುವ ಮರುಭೂಮಿಯೊಳಗೆ ತಂದು, ನಿಮ್ಮೊಂದಿಗೆ ಅಲ್ಲಿ ಮುಖಾಮುಖಿಯಾಗಿ ನ್ಯಾಯತೀರ್ಪು ಮಾಡುವೆನು.
36 ೩೬ ನಾನು ಐಗುಪ್ತದ ಅರಣ್ಯದಲ್ಲಿ ನಿಮ್ಮ ಪೂರ್ವಿಕರ ಸಂಗಡ ವಾದಿಸಿದಂತೆ, ನಿಮ್ಮ ಸಂಗಡಲೂ ವಾದಿಸುವೆನು” ಇದು ಕರ್ತನಾದ ಯೆಹೋವನ ನುಡಿ.
ಅದೇ ರೀತಿ ನಾನು ನಿಮ್ಮ ಪಿತೃಗಳ ಸಂಗಡ ಈಜಿಪ್ಟ್ ದೇಶದ ಮರುಭೂಮಿಯಲ್ಲಿ ನ್ಯಾಯತೀರ್ಪು ಮಾಡಿದೆನು. ಈಗಲೂ ನಿಮ್ಮ ಸಂಗಡ ನ್ಯಾಯತೀರ್ಪು ಮಾಡುವೆನು, ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.
37 ೩೭ “ನಾನು ನಿಮ್ಮನ್ನು ಲೆಕ್ಕಿಸುವಂತೆ, ದಂಡನೆಯ ಕೋಲಿನ ಕೆಳಗೆ ಹೋಗುವಂತೆ ಮಾಡಿ, ಒಡಂಬಡಿಕೆಯ ಕಟ್ಟಿನಿಂದ ಬಂಧಿಸುವೆನು.
ನೀವು ನನ್ನ ಕೋಲಿನ ಕೆಳಗೆ ನಡೆಯುವಾಗ, ನನ್ನ ಗಮನವು ನಿಮ್ಮ ಮೇಲೆ ಇರುತ್ತದೆ ಮತ್ತು ನಾನು ನಿಮ್ಮನ್ನು ಒಡಂಬಡಿಕೆಗೆ ತರುತ್ತೇನೆ.
38 ೩೮ ನನಗೆ ತಿರುಗಿ ಬಿದ್ದು ದ್ರೋಹಿಗಳಾದವರನ್ನು ನಿಮ್ಮೊಳಗಿಂದ ಕಳುಹಿಸಿ ಬಿಡುವೆನು; ಅವರು ಪ್ರವಾಸಿಗಳಾಗಿದ್ದ ದೇಶದಿಂದ ನಾನು ಅವರನ್ನು ಪಾರು ಮಾಡಿದರೂ, ಅವರು ಇಸ್ರಾಯೇಲ್ ದೇಶಕ್ಕೆ ಸೇರುವುದೇ ಇಲ್ಲ; ನಾನೇ ಯೆಹೋವನು” ಎಂದು ನಿಮಗೆ ಗೊತ್ತಾಗುವುದು.
ತಿರುಗಿಬಿದ್ದವರನ್ನೂ ನನಗೆ ವಿರೋಧವಾಗಿ ಅಪರಾಧ ಮಾಡಿದವರನ್ನೂ ನಿಮ್ಮೊಂದಿಗೆ ಶುದ್ಧಮಾಡುತ್ತೇನೆ. ಅವರು ಪ್ರವಾಸಿಗಳಾಗಿದ್ದ ದೇಶದೊಳಗಿಂದ ಅವರನ್ನು ಹೊರಗೆ ತರುತ್ತೇನೆ. ಆದರೆ ಅವರು ಇಸ್ರಾಯೇಲ್ ದೇಶದೊಳಗೆ ಹೋಗದ ಹಾಗೆ ಮಾಡಿ, ನಾನೇ ಯೆಹೋವ ದೇವರೆಂಬುದನ್ನು ಅವರಿಗೆ ತಿಳಿಸುತ್ತೇನೆ.
39 ೩೯ ಇಸ್ರಾಯೇಲ್ ವಂಶದವರೇ, ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಹೋಗಿರಿ, ನಿಮ್ಮ ವಿಗ್ರಹಗಳನ್ನು ಸೇವಿಸಿಕೊಳ್ಳಿರಿ; ಇನ್ನು ಮುಂದೆ ನನ್ನ ಮಾತನ್ನು ಕೇಳಿಯೇ ಕೇಳುವಿರಿ, ಇನ್ನು ಮೇಲಾದರೂ ನನ್ನ ಪರಿಶುದ್ಧ ನಾಮವನ್ನು ನಿಮ್ಮ ಬಲಿಗಳಿಂದಲೂ, ವಿಗ್ರಹಗಳಿಂದಲೂ ನೀವು ಅಪಕೀರ್ತಿಗೆ ಗುರಿಮಾಡುವುದೇ ಇಲ್ಲ.”
“‘ನಿಮ್ಮ ವಿಷಯವಾಗಿ, ಓ ಇಸ್ರಾಯೇಲಿನ ಮನೆತನದವರೇ, ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಹೋಗಿರಿ, ನಿಮ್ಮ ನಿಮ್ಮ ವಿಗ್ರಹಗಳನ್ನು ಸೇವಿಸಿರಿ. ಆದರೆ ನಂತರ ನೀವು ಖಂಡಿತವಾಗಿಯೂ ನನ್ನ ಮಾತನ್ನು ಕೇಳುತ್ತೀರಿ ಮತ್ತು ನಿಮ್ಮ ದಾನಗಳಿಂದಲೂ, ನಿಮ್ಮ ವಿಗ್ರಹಗಳಿಂದಲೂ ಇನ್ನು ಮೇಲೆ ನನ್ನ ಪರಿಶುದ್ಧ ಹೆಸರನ್ನು ಅಪವಿತ್ರಪಡಿಸಬೇಡಿರಿ.
40 ೪೦ ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ದೇಶದಲ್ಲಿ ಇಸ್ರಾಯೇಲ್ ವಂಶದವರೆಲ್ಲರೂ ನನ್ನ ಪರಿಶುದ್ಧವಾದ ಬೆಟ್ಟದಲ್ಲಿ, ಇಸ್ರಾಯೇಲಿನ ಪರ್ವತಾಗ್ರದಲ್ಲಿ ನನ್ನನ್ನು ಸೇವಿಸುವರು; ಅಲ್ಲೇ ಅವರಿಗೆ ಪ್ರಸನ್ನನಾಗುವೆನು, ಅಲ್ಲೇ ನಿಮ್ಮ ಕಾಣಿಕೆಗಳನ್ನೂ, ಉತ್ತಮ ನೈವೇದ್ಯಗಳನ್ನೂ, ಮೀಸಲಾದ ಎಲ್ಲವನ್ನೂ ಬರಮಾಡಿಕೊಳ್ಳುವೆನು.
ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ, ನನ್ನ ಪರಿಶುದ್ಧ ಪರ್ವತದಲ್ಲಿಯೇ, ಇಸ್ರಾಯೇಲಿನ ಉನ್ನತ ಪರ್ವತದಲ್ಲಿಯೇ ಇಸ್ರಾಯೇಲಿನ ಮನೆತನದವರೆಲ್ಲರೂ, ದೇಶದಲ್ಲಿರುವವರೆಲ್ಲರೂ ನನ್ನನ್ನು ಸೇವಿಸುವರು. ನಾನು ಅಲ್ಲಿ ಅವರಿಗೆ ಮೆಚ್ಚಿ, ನಿಮ್ಮ ಉತ್ತಮ ಅರ್ಪಣೆಗಳನ್ನೂ, ನಿಮ್ಮ ಕಾಣಿಕೆಗಳ ಪ್ರಥಮ ಫಲವನ್ನೂ, ನಿಮ್ಮ ಎಲ್ಲಾ ಪರಿಶುದ್ಧ ಸಂಗತಿಗಳನ್ನೂ ಅಂಗೀಕರಿಸುವೆನು.
41 ೪೧ ನಾನು ನಿಮ್ಮನ್ನು ಜನಾಂಗಗಳೊಳಗಿಂದ ಪಾರುಮಾಡಿ, ನೀವು ಚದರಿಹೋಗಿರುವ ದೇಶಗಳಿಂದ ತಂದು ಕೂಡಿಸುವಾಗ ನಿಮ್ಮ ಸುಗಂಧಹೋಮವನ್ನು ಅಂಗೀಕರಿಸಿ, ನಿಮಗೆ ಪ್ರಸನ್ನನಾಗುವೆನು; ಸಕಲ ಜನಾಂಗಗಳೆದುರಿಗೆ ನಿಮ್ಮ ರಕ್ಷಣೆಯ ಮೂಲಕ ನನ್ನ ಗೌರವವನ್ನು ಕಾಪಾಡಿಕೊಳ್ಳುವೆನು.
ನಾನು ನಿಮ್ಮನ್ನು ಇತರ ಜನಾಂಗಗಳೊಳಗಿಂದ ಹೊರತಂದು, ನೀವು ಚದರಿಸುವ ದೇಶದೊಳಗಿಂದ ಕೂಡಿಸುವಾಗ, ನಿಮ್ಮನ್ನು ಸುವಾಸನೆಯಂತೆ ಅಂಗೀಕರಿಸುವೆನು. ಇತರ ಜನಾಂಗಗಳ ಮುಂದೆ ನನ್ನನ್ನು ಪರಿಶುದ್ಧನೆಂದು ತೋರಿಸುವೆನು.
42 ೪೨ ನಾನು ಪ್ರಮಾಣಮಾಡಿ, ನಿಮ್ಮ ಪೂರ್ವಿಕರಿಗೆ ಯಾವ ದೇಶವನ್ನು ಕೊಟ್ಟೆನೋ, ಆ ಇಸ್ರಾಯೇಲ್ ದೇಶಕ್ಕೆ ನಿಮ್ಮನ್ನು ಬರಮಾಡುವಾಗ ನಾನೇ ಯೆಹೋವನು ಎಂದು ನಿಮಗೆ ಗೊತ್ತಾಗುವುದು.
ನಾನು ನಿಮ್ಮ ಮೇಲೆ ಇಸ್ರಾಯೇಲ್ ದೇಶದಲ್ಲಿ ನನ್ನ ಕೈಯೆತ್ತಿ ನಿಮ್ಮ ಪಿತೃಗಳಿಗೆ ಕೊಟ್ಟ ದೇಶದಿಂದ ನಿಮ್ಮನ್ನು ಕರೆದುಕೊಂಡು ಬರುವಾಗ, ನಾನೇ ಯೆಹೋವ ದೇವರೆಂದು ತಿಳಿದುಕೊಳ್ಳುವಿರಿ.
43 ೪೩ ನೀವು ನಿಮ್ಮನ್ನು ಹೊಲಸು ಮಾಡಿಕೊಂಡಿರುವ ನಿಮ್ಮ ನಡತೆಯನ್ನೂ, ನಿಮ್ಮ ಎಲ್ಲಾ ಕಾರ್ಯಗಳನ್ನೂ ಅಲ್ಲಿ ಜ್ಞಾಪಕಕ್ಕೆ ತಂದುಕೊಂಡು, ನೀವು ನಡೆಸಿರುವ ಸಕಲ ದುಷ್ಕೃತ್ಯಗಳ ನಿಮಿತ್ತ ನಿಮ್ಮನ್ನು ನೋಡಿ ನೀವೇ ಅಸಹ್ಯಪಡುವಿರಿ.
ಅಲ್ಲಿ ನೀವು ನಿಮ್ಮ ಮಾರ್ಗಗಳನ್ನು ಬಿಟ್ಟು, ನೀವು ಯಾವ ಸಂಗತಿಗಳಿಂದ ಅಶುದ್ಧವಾಗಿದ್ದೀರೋ, ಆ ನಿಮ್ಮ ಕ್ರಿಯೆಗಳನ್ನೆಲ್ಲಾ ಜ್ಞಾಪಕ ಮಾಡಿಕೊಳ್ಳುವಿರಿ. ನೀವು ಮಾಡಿದ ನಿಮ್ಮ ಎಲ್ಲಾ ಕೆಟ್ಟತನದ ನಿಮಿತ್ತವಾಗಿ ನಿಮ್ಮ ಸ್ವಂತ ದೃಷ್ಟಿಯಲ್ಲಿಯೇ ನೀವು ಅಸಹ್ಯರಾಗುವಿರಿ.
44 ೪೪ ಇಸ್ರಾಯೇಲ್ ವಂಶದವರೇ, ನಿಮ್ಮ ದುರ್ನಡತೆಗೂ, ದುಷ್ಕೃತ್ಯಗಳಿಗೂ ತಕ್ಕ ಹಾಗೆ ನಾನು ನಿಮ್ಮನ್ನು ದಂಡಿಸದೆ, ನನ್ನ ಹೆಸರಿನ ನಿಮಿತ್ತವೇ ನಾನು ನಿಮ್ಮನ್ನು ಸಹಿಸಿಕೊಂಡಿರುವಾಗ ನಾನೇ ಯೆಹೋವನು ಎಂದು ನಿಮಗೆ ಗೊತ್ತಾಗುವುದು” ಇದು ಕರ್ತನಾದ ಯೆಹೋವನ ನುಡಿ.
ಇಸ್ರಾಯೇಲಿನ ಮನೆತನದವರೇ, ನಿಮ್ಮ ದುರ್ಮಾರ್ಗಗಳ ಪ್ರಕಾರವಲ್ಲ, ನಿಮ್ಮ ದುಷ್ಕೃತ್ಯಗಳ ಪ್ರಕಾರವಲ್ಲ, ನನ್ನ ಹೆಸರಿನ ನಿಮಿತ್ತ ನಿಮ್ಮನ್ನು ಸಹಿಸಿಕೊಂಡಿರುವಾಗ, ನಾನೇ ಯೆಹೋವ ದೇವರೆಂದು ತಿಳಿದುಕೊಳ್ಳುವಿರಿ, ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.’”
45 ೪೫ ಆ ಮೇಲೆ ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು,
ಯೆಹೋವ ದೇವರ ವಾಕ್ಯವು ನನಗೆ ಬಂದಿತು:
46 ೪೬ “ನರಪುತ್ರನೇ, ನೀನು ದಕ್ಷಿಣಾಭಿಮುಖನಾಗಿ ಆ ಕಡೆಗೆ ಮಾತನಾಡುತ್ತಾ ದಕ್ಷಿಣ ಸೀಮೆಯ ವನದ ಪ್ರಸ್ತಾಪವನ್ನೆತ್ತಿ,
“ಮನುಷ್ಯಪುತ್ರನೇ, ದಕ್ಷಿಣದ ಕಡೆಗೆ ಮುಖಮಾಡಿ, ದಕ್ಷಿಣದ ಕಡೆಗೆ ಮಾತನಾಡು. ದಕ್ಷಿಣ ಬಯಲು ಮರುಭೂಮಿಗೆ ವಿರೋಧವಾಗಿ ಪ್ರವಾದಿಸು.
47 ೪೭ ಆ ವನಕ್ಕೆ ಹೀಗೆ ಪ್ರವಾದಿಸು, ಯೆಹೋವನ ಮಾತನ್ನು ಕೇಳು, ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ‘ಆಹಾ, ನಾನು ನಿನ್ನೊಳಗೆ ಬೆಂಕಿಯನ್ನು ಹೊತ್ತಿಸುವೆನು, ಅದು ನಿನ್ನಲ್ಲಿನ ಎಲ್ಲಾ ಹಸಿರು ಮರಗಳನ್ನೂ, ಒಣಮರಗಳನ್ನೂ ನುಂಗಿ ಬಿಡುವುದು; ಧಗಧಗಿಸುವ ಉರಿಯು ಆರದೆ ದಕ್ಷಿಣದಿಂದ ಉತ್ತರದವರೆಗೆ ಎಲ್ಲರ ಮುಖಗಳು ಸುಟ್ಟು ಹೋಗುವವು.
ದಕ್ಷಿಣದ ಮರುಭೂಮಿಗೆ ಹೇಳಬೇಕಾದದ್ದೇನೆಂದರೆ: ‘ಯೆಹೋವ ದೇವರ ವಾಕ್ಯವನ್ನು ಕೇಳು. ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಇಗೋ, ನಾನು ನಿನ್ನಲ್ಲಿ ಬೆಂಕಿ ಹಚ್ಚುತ್ತೇನೆ. ಅದು ನಿನ್ನಲ್ಲಿರುವ ಎಲ್ಲಾ ಹಸಿಮರಗಳನ್ನು ಮತ್ತು ಎಲ್ಲಾ ಒಣ ಮರಗಳನ್ನು ತಿಂದುಬಿಡುವುದು. ಉರಿಯುವ ಜ್ವಾಲೆ ಆರಿಹೋಗುವುದಿಲ್ಲ. ದಕ್ಷಿಣ ಮೊದಲುಗೊಂಡು ಉತ್ತರದವರೆಗೂ ಎಲ್ಲಾ ಮುಖಗಳು ಅದರಲ್ಲಿ ಸುಟ್ಟುಹೋಗುವುವು.
48 ೪೮ ಅದನ್ನು ಹೊತ್ತಿಸಿದವನು ಯೆಹೋವನಾದ ನಾನೇ ಎಂಬುದು ಸಕಲ ನರಪ್ರಾಣಿಗಳಿಗೂ ಗೋಚರವಾಗುವುದು; ಅದು ಆರಿಹೋಗದು.’
ಯೆಹೋವ ದೇವರಾದ ನಾನೇ ಅದನ್ನು ಹಚ್ಚಿದೆನೆಂದು ಪ್ರತಿಯೊಬ್ಬರೂ ತಿಳಿದುಕೊಳ್ಳುವರು, ಅದು ಆರಿಹೋಗುವುದಿಲ್ಲ.’”
49 ೪೯ “ಆಗ ನಾನು, ‘ಅಯ್ಯೋ, ಕರ್ತನಾದ ಯೆಹೋವನೇ, ಇವನು ಒಗಟುಗಾರನಲ್ಲವೇ?’ ಎಂದು ಈ ಜನರು ನನ್ನ ವಿಷಯವಾಗಿ ಅಂದುಕೊಳ್ಳುತ್ತಾರೆ” ಎಂಬುದಾಗಿ ಅರಿಕೆಮಾಡಿದೆನು.
ಆಗ ನಾನು, “ಅಯ್ಯೋ, ಸಾರ್ವಭೌಮ ಯೆಹೋವ ದೇವರೇ, ‘ಅವನು ಸಾಮ್ಯಗಳನ್ನು ಹೇಳುವುದಿಲ್ಲವೇ?’ ಎಂದು ನನ್ನ ವಿಷಯದಲ್ಲಿ ಅವರು ಹೇಳುತ್ತಾರೆ,” ಎಂದೆನು.

< ಯೆಹೆಜ್ಕೇಲನು 20 >