< ಯೆಹೆಜ್ಕೇಲನು 12 >

1 ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು, 2 “ನರಪುತ್ರನೇ, ನೀನು ದ್ರೋಹಿ ವಂಶದ ಮಧ್ಯದಲ್ಲಿ ವಾಸಿಸುತ್ತಿರುವೆ. ಆ ವಂಶದವರು ದ್ರೋಹಿಗಳಾಗಿರುವುದರಿಂದ ಕಣ್ಣಿದ್ದರೂ ಕಾಣರು, ಕಿವಿಯಿದ್ದರೂ ಕೇಳರು. 3 “ನರಪುತ್ರನೇ, ವಲಸೆಹೋಗುವುದಕ್ಕೆ ಬೇಕಾದ ಸಾಮಗ್ರಿಗಳನ್ನು ನೀನು ಕೂಡಿಸಿಕೊಂಡು ಹಗಲಿನಲ್ಲಿ ಅವರ ಕಣ್ಣೆದುರಿಗೆ ಹೊರಡು ಅಂದರೆ ನಿನ್ನ ವಾಸಸ್ಥಳವನ್ನು ಬಿಟ್ಟು ಅವರು ನೋಡುವ ಹಾಗೆ ಬೇರೊಂದು ಸ್ಥಳಕ್ಕೆ ಹೋಗು. ಅವರು ದ್ರೋಹಿ ವಂಶದವರಾಗಿದ್ದರೂ ಒಂದು ವೇಳೆ ತಮ್ಮ ದ್ರೋಹವನ್ನು ಮನಸ್ಸಿಗೆ ತಂದುಕೊಳ್ಳಬಹುದು. 4 ನೀನು ನಿನ್ನ ಸಾಮಗ್ರಿಗಳನ್ನು, ವಲಸೆಯ ಸಾಮಗ್ರಿಗಳನ್ನೋ ಎಂಬಂತೆ ಹಗಲಿನಲ್ಲಿ ಅವರ ಕಣ್ಣೆದುರಿಗೆ ಮನೆಯೊಳಗಿಂದ ಆಚೆಗೆ ಹಾಕಿ, ವಲಸೆ ಹೋಗುವವನಂತೆ ಸಾಯಂಕಾಲ ಅವರ ಸಮಕ್ಷಮದಲ್ಲಿ ಹೊರಟು ಹೋಗು. 5 ಅವರು ನೋಡುತ್ತಿರುವಾಗ, ನೀನು ಗೋಡೆಯನ್ನು ತೋಡಿ, ಕಿಂಡಿಯ ಮೂಲಕ ನಿನ್ನ ಸಾಮಗ್ರಿಗಳನ್ನು ಸಾಗಿಸಿಕೊಂಡು ಹೋಗು. 6 ಅವರ ಕಣ್ಣ ಮುಂದೆ, ಅದನ್ನು ಹೆಗಲ ಮೇಲೆ ಹಾಕಿ, ಕತ್ತಲಲ್ಲಿ ಹೊತ್ತುಕೊಂಡು ಹೋಗು; ನೆಲವನ್ನು ನೋಡದಂತೆ ಮುಖವನ್ನು ಮುಚ್ಚಿಕೋ; ನಾನು ನಿನ್ನನ್ನು ಇಸ್ರಾಯೇಲ್ ವಂಶದವರಿಗೆ ಗುರುತನ್ನಾಗಿ ಮಾಡಿದ್ದೇನೆ.” 7 ಆಗ ನಾನು ನನಗಾದ ಅಪ್ಪಣೆಯನ್ನು ನೆರವೇರಿಸಿದೆನು; ಹಗಲಿನಲ್ಲಿ ನನ್ನ ಸಾಮಗ್ರಿಗಳನ್ನು, ವಲಸೆಯ ಸಾಮಗ್ರಿಯನ್ನೋ ಎಂಬಂತೆ ಮನೆಯೊಳಗಿಂದ ಆಚೆಗೆ ಹಾಕಿ, ಸಾಯಂಕಾಲ ನನ್ನ ಕೈಯಿಂದಲೇ ಗೋಡೆಯಲ್ಲಿ ಕಿಂಡಿಯನ್ನು ಮಾಡಿ, ಕತ್ತಲಲ್ಲಿ ಆ ಸಾಮಾನನ್ನು ಆಚೆಗೆ ಸಾಗಿಸಿ, ಅವರ ಕಣ್ಣ ಮುಂದೆ ಹೆಗಲ ಮೇಲೆ ಹೊತ್ತುಕೊಂಡು ಹೋದೆನು. 8 ಬೆಳಿಗ್ಗೆ ಯೆಹೋವನು ಈ ಮಾತನ್ನು ನನಗೆ ದಯಪಾಲಿಸಿದನು, 9 “ನರಪುತ್ರನೇ, ದ್ರೋಹಿ ವಂಶದವರಾದ ಇಸ್ರಾಯೇಲರು, ‘ನೀನು ಏನು ಮಾಡುತ್ತಿರುವೆ?’ ಎಂದು ನಿನ್ನನ್ನು ಕೇಳಿದ್ದಾರಲ್ಲವೆ? 10 ೧೦ ನೀನು ಅವರಿಗೆ ಹೀಗೆ ನುಡಿ, ‘ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ಈ ಹೊರೆಯು ಯೆರೂಸಲೇಮಿನಲ್ಲಿರುವ ರಾಜನಿಗೂ, ಅಲ್ಲಿನ ಇಸ್ರಾಯೇಲ್ ವಂಶದವರೆಲ್ಲರಿಗೂ ಸಂಬಂಧಪಟ್ಟಿದೆ.’ 11 ೧೧ ಇದನ್ನೂ ನುಡಿ, ‘ನಾನು ನಿಮಗೆ ಗುರುತಾಗಿದ್ದೇನೆ; ನಾನು ಮಾಡಿದಂತೆಯೇ ಅವರಿಗಾಗುವುದು; ಅವರು ವಲಸೆಯಾಗಿ ಸೆರೆ ಹೋಗುವರು. 12 ೧೨ ಅವರಲ್ಲಿನ ರಾಜನು ಹೆಗಲ ಮೇಲೆ ಹೊರೆಯನ್ನು ಹೊತ್ತುಕೊಂಡು ಕತ್ತಲಲ್ಲಿ ಹೊರಟು ಹೋಗುವನು; ಅವರು ಗೋಡೆಯನ್ನು ತೋಡಿ, ಕಿಂಡಿಯ ಮೂಲಕ ತಮ್ಮ ಸಾಮಗ್ರಿಗಳನ್ನು ಆಚೆಗೆ ಸಾಗಿಸುವರು; ಅವನು ಮುಖವನ್ನು ಮುಚ್ಚಿಕೊಳ್ಳುವನು, ಭೂಮಿಯು ಅವನ ಕಣ್ಣಿಗೆ ಕಾಣಿಸುವುದಿಲ್ಲ.’ 13 ೧೩ ನಾನು ಅವನಿಗೆ ನನ್ನ ಬಲೆಯೊಡ್ಡುವೆನು, ನಾನು ಹಾಕಿದ ಉರುಲಿನಲ್ಲಿ ಸಿಕ್ಕಿಬೀಳುವನು; ಕಸ್ದೀಯರ ದೇಶವಾದ ಬಾಬಿಲೋನಿಗೆ ಅವನನ್ನು ಒಯ್ಯುವೆನು, ಅಲ್ಲೇ ಇದ್ದು ಸಾಯುವನು, ಆದರೂ ಆ ದೇಶವನ್ನು ನೋಡುವುದಿಲ್ಲ. 14 ೧೪ ಅವನ ಸುತ್ತಲಿನ ಸಕಲ ಸಹಾಯಕರನ್ನೂ, ಅವನ ಸಮಸ್ತ ವ್ಯೂಹಗಳವರನ್ನೂ ನಾನು ಎಲ್ಲಾ ಕಡೆಯ ಗಾಳಿಗೂ ತೂರಿ ಅವರ ಹಿಂದೆ ಕತ್ತಿಯನ್ನು ಬೀಸುವೆನು. 15 ೧೫ “ನಾನು ಅವರನ್ನು ಜನಾಂಗಗಳೊಳಗೆ ಚದರಿಸಿಬಿಟ್ಟು ಅನ್ಯದೇಶಗಳಲ್ಲಿ ಚೆಲ್ಲಾಪಿಲ್ಲಿ ಮಾಡುವಾಗ ನಾನೇ ಯೆಹೋವನು ಎಂದು ಅವರಿಗೆ ಗೊತ್ತಾಗುವುದು. 16 ೧೬ ನಾನು ಕೆಲವರನ್ನು ಖಡ್ಗ, ಕ್ಷಾಮ, ವ್ಯಾಧಿಗಳಿಂದ ಉಳಿಸಿ ಅವರು ತಮ್ಮ ಅಸಹ್ಯ ಕಾರ್ಯಗಳ ವಿಷಯವನ್ನು ತಾವು ಸೇರಿದ ಜನಾಂಗಗಳಲ್ಲಿ ತಿಳಿಸುವುದಕ್ಕೆ ಅವಕಾಶ ಮಾಡುವೆನು; ನಾನೇ ಯೆಹೋವನು ಎಂದು ಆ ಜನಾಂಗಗಳಿಗೂ ಗೊತ್ತಾಗುವುದು.” 17 ೧೭ ಇದಲ್ಲದೆ ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು, 18 ೧೮ “ನರಪುತ್ರನೇ, ನೀನು ಅನ್ನವನ್ನು ನಡುಗುತ್ತಾ ತಿನ್ನು ಮತ್ತು ನೀರನ್ನು ಹೆದರಿಕೆಯಿಂದ ಕುಡಿ. 19 ೧೯ ಆ ದೇಶದಲ್ಲಿರುವ ಜನರಿಗೆ ಹೀಗೆ ಹೇಳು, ‘ಕರ್ತನಾದ ಯೆಹೋವನು ಇಸ್ರಾಯೇಲ್ ದೇಶದ ಯೆರೂಸಲೇಮಿನ ನಿವಾಸಿಗಳ ವಿಷಯವಾಗಿ ಇಂತೆನ್ನುತ್ತಾನೆ, ಅವರು ಅನ್ನವನ್ನು ನಡಗುತ್ತಾ ತಿನ್ನುವರು ಮತ್ತು ನೀರನ್ನು ಹೆದರಿಕೆಯಿಂದ ಕುಡಿಯುವರು; ಏಕೆಂದರೆ ಆ ದೇಶದವರೆಲ್ಲರು ಬಲಾತ್ಕಾರಿಗಳಾಗಿರುವುದರಿಂದ ಅಲ್ಲಿನ ಸೊತ್ತೆಲ್ಲಾ ಸೂರೆಯಾಗಿ, ದೇಶವು ಬರಿದಾಗುವುದು. 20 ೨೦ ಆಗ ಜನ ತುಂಬಿದ ಊರುಗಳು ಹಾಳಾಗಿ ದೇಶವು ಬೀಡುಬೀಳುವುದು; ನಾನೇ ಯೆಹೋವನು ಎಂದು ನಿಮಗೆ ಗೊತ್ತಾಗುವುದು.’” 21 ೨೧ ಆಮೇಲೆ ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು, 22 ೨೨ “ನರಪುತ್ರನೇ, ಕ್ಲುಪ್ತಕಾಲವು ದೂರ ಹೋಗುತ್ತಲಿದೆ; ದಿವ್ಯದರ್ಶನಗಳೆಲ್ಲಾ ನಿರರ್ಥಕ ಎಂಬುದಾಗಿ ಇಸ್ರಾಯೇಲ್ ದೇಶದವರು ಆಡಿಕೊಳ್ಳುವ ಈ ಗಾದೆ ಮಾತು ಎಂಥದ್ದು?” 23 ೨೩ ಅವರಿಗೆ ಹೀಗೆ ಹೇಳು, “ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ನಾನು ಈ ಗಾದೆಯನ್ನು ಬಳಸುವುದನ್ನು ನಿಲ್ಲಿಸಿಬಿಡುವೆನು, ಅದು ಇಸ್ರಾಯೇಲಿನಲ್ಲಿ ಇನ್ನು ಸಲ್ಲದು; ನಾನು ನುಡಿಯುವ ಈ ಮಾತನ್ನು ಕೇಳಿರಿ, ‘ಕ್ಲುಪ್ತಕಾಲವು ಸಮೀಪಿಸಿದೆ, ದಿವ್ಯದರ್ಶನಗಳೆಲ್ಲಾ ಸಾರ್ಥಕವಾಗುವ ಕಾಲ ಸಮೀಪಿಸಿದೆ. 24 ೨೪ ಇನ್ನು ಮೇಲೆ ಇಸ್ರಾಯೇಲ್ ವಂಶದವರಲ್ಲಿ ಯಾರಿಗೂ ಸುಳ್ಳು ದರ್ಶನವಾಗದು, ಮೋಸದ ಕಣಿಯೂ ಇರದು. 25 ೨೫ ನಾನೇ ಯೆಹೋವನು; ನಾನು ನುಡಿದೇ ನುಡಿಯುವೆನು; ನಾನು ನುಡಿದ ಮಾತು ನೆರವೇರುವುದು, ಇನ್ನು ನಿಧಾನವಾಗದು; ದ್ರೋಹಿ ವಂಶದವರೇ, ನಾನು ನಿಮ್ಮ ಕಾಲದಲ್ಲಿ ನುಡಿಯುವುದು ಮಾತ್ರವಲ್ಲದೆ ನುಡಿದದ್ದನ್ನು ನೆರವೇರಿಸುವೆನು’” ಇದು ಕರ್ತನಾದ ಯೆಹೋವನ ವಾಕ್ಯ. 26 ೨೬ ಮತ್ತು ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು, 27 ೨೭ “ನರಪುತ್ರನೇ, ಇಗೋ, ಇಸ್ರಾಯೇಲ್ ವಂಶದವರು, ‘ಇವನಿಗಾದ ದಿವ್ಯದರ್ಶನವು ಮುಂದೆ ಬಹುದೂರ ಕಾಲಕ್ಕೆ ಸಂಬಂಧಪಟ್ಟದ್ದು; ಬಹಳ ದಿನಗಳ ಮೇಲೆ ಆಗತಕ್ಕದ್ದನ್ನು ಮುಂತಿಳಿಸುತ್ತಾನೆ’ ಎಂದು ಹೇಳುತ್ತಾರೆ. 28 ೨೮ “ಆದಕಾರಣ ನೀನು ಅವರಿಗೆ ಹೀಗೆ ಹೇಳು, ‘ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ಇನ್ನು ಮೇಲೆ ನನ್ನ ಮಾತುಗಳಲ್ಲಿ ಯಾವುದೂ ನೆರವೇರದೆ ಇರದು; ನಾನಾಡುವ ಮಾತು ನೆರವೇರುವುದು ಖಂಡಿತ’ ಇದು ಕರ್ತನಾದ ಯೆಹೋವನ ನುಡಿ.”

< ಯೆಹೆಜ್ಕೇಲನು 12 >