< ವಿಮೋಚನಕಾಂಡ 5 >

1 ಬಳಿಕ ಮೋಶೆ ಮತ್ತು ಆರೋನರು ಫರೋಹನ ಸನ್ನಿಧಿಗೆ ಹೋಗಿ, “ಇಸ್ರಾಯೇಲರ ದೇವರಾದ ಯೆಹೋವನು, ನನ್ನ ಜನರು ನನಗಾಗಿ ಅರಣ್ಯದೊಳಗೆ ಜಾತ್ರೆ ನಡೆಸುವಂತೆ ಅವರಿಗೆ ಅಪ್ಪಣೆ ಕೊಡಬೇಕು ಎಂದು ಹೇಳಿದ್ದಾನೆ” ಅಂದರು.
ತರುವಾಯ ಮೋಶೆಯೂ ಆರೋನನೂ ಹೋಗಿ ಫರೋಹನಿಗೆ, “ಇಸ್ರಾಯೇಲಿನ ಯೆಹೋವ ದೇವರು, ‘ಮರುಭೂಮಿಯಲ್ಲಿ ನನಗೆ ನನ್ನ ಜನರು ಹಬ್ಬವನ್ನಾಚರಿಸುವುದಕ್ಕೆ ಅವರನ್ನು ಹೋಗಗೊಡಿಸು,’ ಎಂದು ಹೇಳುತ್ತಾರೆ,” ಎಂದರು.
2 ಅದಕ್ಕೆ ಫರೋಹನು, “ಯೆಹೋವನೆಂಬುವವನು ಯಾರು? ನಾನು ಅವನ ಮಾತನ್ನು ಕೇಳಿ ಇಸ್ರಾಯೇಲರನ್ನು ಹೋಗಗೊಡಿಸುವುದೇತಕ್ಕೆ? ಯೆಹೋವನು ಯಾರೋ ನನಗೆ ಗೊತ್ತಿಲ್ಲ. ಇದು ಮಾತ್ರವಲ್ಲದೆ, ಇಸ್ರಾಯೇಲರನ್ನು ಹೋಗಲು ನಾನು ಬಿಡುವುದೇ ಇಲ್ಲ” ಅಂದನು.
ಆಗ ಫರೋಹನು, “ನಾನು ಆತನ ಮಾತಿಗೆ ವಿಧೇಯನಾಗಿ ಇಸ್ರಾಯೇಲರನ್ನು ಕಳುಹಿಸಿಬಿಡುವಂತೆ ಆ ಯೆಹೋವ ಯಾರು? ಆ ಯೆಹೋವ ದೇವರನ್ನು ನಾನರಿಯೆನು. ಇಸ್ರಾಯೇಲರನ್ನೂ ಕಳುಹಿಸುವುದಿಲ್ಲ,” ಎಂದನು.
3 ಆಗ ಅವರು, “ಇಬ್ರಿಯರ ದೇವರು ನಮ್ಮನ್ನು ಎದುರುಗೊಂಡನು. ಅಪ್ಪಣೆಯಾದರೆ ನಾವು ಮರುಭೂಮಿಯಲ್ಲಿ ಮೂರು ದಿನ ಪ್ರಯಾಣಮಾಡಿ, ನಮ್ಮ ದೇವರಾದ ಯೆಹೋವನಿಗೋಸ್ಕರ ಯಜ್ಞಮಾಡಿ ಬರುವೆವು. ಇಲ್ಲವಾದರೆ ಆತನು ನಮ್ಮನ್ನು ವ್ಯಾಧಿಯಿಂದಾದರೂ, ಕತ್ತಿಯಿಂದಾದರೂ ಸಂಹಾರಮಾಡುವನು” ಎಂದು ಹೇಳಿದರು.
ಆಗ ಅವರು ಫರೋಹನಿಗೆ, “ಹಿಬ್ರಿಯರ ದೇವರು ನಮ್ಮನ್ನು ಸಂದರ್ಶಿಸಿದ್ದಾರೆ. ಆದ್ದರಿಂದ ನಾವು ಮರುಭೂಮಿಯಲ್ಲಿ ಮೂರು ದಿವಸ ಪ್ರಯಾಣಮಾಡಿ, ನಮ್ಮ ಯೆಹೋವ ದೇವರಿಗೆ ಯಜ್ಞ ಅರ್ಪಿಸುವುದಕ್ಕೆ ನಾವು ಹೋಗಬೇಕು. ಇಲ್ಲವಾದರೆ ಅವರು ಉಪದ್ರವದಿಂದಲೋ ಖಡ್ಗದಿಂದಲೋ ನಮ್ಮನ್ನು ದಂಡಿಸುವರು,” ಎಂದರು.
4 ಐಗುಪ್ತರ ಅರಸನು ಅವರಿಗೆ, “ಮೋಶೆ ಮತ್ತು ಆರೋನರೇ, ಈ ಜನರು ತಮ್ಮ ಕೆಲಸವನ್ನು ಮಾಡದಂತೆ ಯಾಕೆ ಅಡ್ಡಿ ಮಾಡುತ್ತೀರಿ? ನಿಮ್ಮ ಬಿಟ್ಟೀ ಕೆಲಸಕ್ಕೆ ಹೋಗಿರಿ” ಎಂದು ಹೇಳಿದನು.
ಈಜಿಪ್ಟಿನ ಅರಸನು ಅವರಿಗೆ, “ಮೋಶೆಯೇ, ಆರೋನನೇ, ಜನರು ತಮ್ಮ ಕೆಲಸಗಳನ್ನು ಮಾಡದಂತೆ ಏಕೆ ಮಾಡುತ್ತೀರಿ? ನಿಮ್ಮ ಬಿಟ್ಟೀ ಕೆಲಸಗಳಿಗೆ ಹೋಗಿ,” ಎಂದನು.
5 ಫರೋಹನು, “ಇಬ್ರಿಯರು ದೇಶದಲ್ಲಿ ಹೆಚ್ಚಾಗಿದ್ದಾರೆ. ಅವರು ತಮ್ಮ ಬಿಟ್ಟೀ ಕೆಲಸಗಳನ್ನು ಮಾಡದಂತೆ ನಿಲ್ಲಿಸಿ ಬಿಡುತ್ತಿದ್ದೀರಲ್ಲಾ?” ಎಂದನು.
ಇದಲ್ಲದೆ ಫರೋಹನು, “ಈಗ ಹಿಬ್ರಿಯರು ಈ ದೇಶದಲ್ಲಿ ಹೆಚ್ಚಿದ್ದಾರೆ. ನೀವು ಅವರನ್ನು ಅವರ ಬಿಟ್ಟಿಕೆಲಸಗಳಿಂದ ನಿಲ್ಲಿಸಿಬಿಡುತ್ತೀರಲ್ಲಾ?” ಎಂದನು.
6 ಆ ದಿನದಲ್ಲಿ ಫರೋಹನು ಬಿಟ್ಟೀಮಾಡಿಸುವವರನ್ನು ಮತ್ತು ಅವರ ಅಧಿಕಾರಿಗಳನ್ನು ಕರೆಯಿಸಿ,
ಅದೇ ದಿನದಲ್ಲಿ ಫರೋಹನು ಬಿಟ್ಟಿಕೆಲಸ ಮಾಡಿಸುವವರಿಗೂ ಅವರ ಮೇಲ್ವಿಚಾರಕರಿಗೂ,
7 “ಇನ್ನು ಮೇಲೆ ನೀವು ಆ ಜನರಿಗೆ ಇಟ್ಟಿಗೆ ಮಾಡುವುದಕ್ಕೆ ಹುಲ್ಲನ್ನು ಕೊಡಬಾರದು. ಅವರೇ ಹೋಗಿ ಹುಲ್ಲನ್ನು ಶೇಖರಿಸಿಕೊಳ್ಳಲಿ,
“ನೀವು ಇನ್ನು ಇಟ್ಟಿಗೆಗಳನ್ನು ಮಾಡುವುದಕ್ಕೆ ಮೊದಲಿನ ಹಾಗೆ ಜನರಿಗೆ ಒಣಹುಲ್ಲನ್ನು ಕೊಡಬೇಡಿರಿ. ಅವರೇ ಹೋಗಿ ಹುಲ್ಲನ್ನು ಕೂಡಿಸಿಕೊಳ್ಳಲಿ.
8 ಆದರೂ ಅವರು ಈವರೆಗೆ ಮಾಡಿದ ಇಟ್ಟಿಗೆಗಳ ಲೆಕ್ಕದಲ್ಲಿ ಏನೂ ಕಡಿಮೆಯಾಗಬಾರದು ಎಂದು ಅವರಿಗೆ ಹೇಳಬೇಕು. ಅವರು ಮೈಗಳ್ಳರೇ, ಆದುದರಿಂದಲೇ ಅವರು, ‘ನಾವು ಹೋಗಿ ನಮ್ಮ ದೇವರಿಗೆ ಯಜ್ಞಮಾಡಿ ಬರುವುದಕ್ಕೆ ಅಪ್ಪಣೆಯಾಗಬೇಕು’ ಎಂದು ಕೂಗಿಕೊಳ್ಳುತ್ತಿದ್ದಾರೆ.
ಅವರು ಈವರೆಗೆ ಮಾಡಿದ ಇಟ್ಟಿಗೆಗಳ ಲೆಕ್ಕದಲ್ಲಿ ಏನೂ ಕಡಿಮೆ ಮಾಡಬಾರದೆಂದು ಅವರಿಗೆ ಹೇಳಬೇಕು. ಅವರು ಮೈಗಳ್ಳರೇ, ಆದ್ದರಿಂದ ಅವರು, ‘ನಾವು ಹೋಗಿ ನಮ್ಮ ದೇವರಿಗೆ ಯಜ್ಞವನ್ನು ಅರ್ಪಿಸೋಣ,’ ಎಂದು ಕೂಗುತ್ತಾರೆ.
9 ಈ ಜನರು ವ್ಯರ್ಥವಾದ ಮಾತುಗಳಿಗೆ ಗಮನ ಕೊಡದಂತೆ ನೀವು ಅವರ ಮೇಲೆ ಹೆಚ್ಚು ಕೆಲಸವನ್ನು ಹೊರಿಸಿರಿ. ಅವರು ದುಡಿಯಲಿ” ಎಂದು ಆಜ್ಞಾಪಿಸಿದನು.
ಈ ಜನರು ಸುಳ್ಳು ಮಾತುಗಳಿಗೆ ಲಕ್ಷ್ಯಕೊಡದಂತೆ ಅವರ ಮೇಲೆ ಹೆಚ್ಚು ಕೆಲಸಗಳನ್ನು ಹೊರಿಸಿರಿ. ಅವರು ದುಡಿಯಲಿ,” ಎಂದು ಆಜ್ಞಾಪಿಸಿದನು.
10 ೧೦ ಆಗ ಬಿಟ್ಟೀಕೆಲಸವನ್ನು ಮಾಡಿಸುವವರೂ ಮತ್ತು ಅಧಿಕಾರಿಗಳೂ ಹೊರಗೆ ಹೋಗಿ ಆ ಜನರಿಗೆ, “ನಿಮಗೆ ಹುಲ್ಲನ್ನು ಕೊಡಬಾರದೆಂದು ಫರೋಹನ ಅಪ್ಪಣೆಯಾಗಿದೆ.
ಆಗ ಬಿಟ್ಟಿಕೆಲಸವನ್ನು ಮಾಡಿಸುವವರೂ ಮೇಲ್ವಿಚಾರಕರೂ ಹೊರಗೆ ಹೋಗಿ ಜನರಿಗೆ, “ಫರೋಹನು ಹೀಗೆ ಹೇಳುತ್ತಾನೆ: ‘ನಾನು ನಿಮಗೆ ಒಣಹುಲ್ಲು ಕೊಡುವುದಿಲ್ಲ.
11 ೧೧ ನಿಮಗೆ ಹುಲ್ಲು ಎಲ್ಲಿ ದೊರಕುವುದೋ ಅಲ್ಲಿಗೆ ನೀವೇ ಹೋಗಿ ತೆಗೆದುಕೊಳ್ಳಿರಿ. ಆದರೂ ನೀವು ಮಾಡಬೇಕಾದ ಕೆಲಸದಲ್ಲಿ ಸ್ವಲ್ಪವೂ ಕಡಿಮೆಯಾಗಬಾರದು” ಎಂದು ಹೇಳಿದರು.
ನಿಮಗೆ ಹುಲ್ಲು ಎಲ್ಲಿ ದೊರಕುವುದೋ, ಅಲ್ಲಿಗೆ ನೀವೇ ಹೋಗಿ ತೆಗೆದುಕೊಳ್ಳಿರಿ. ಆದರೆ ನಿಮ್ಮ ಕೆಲಸವು ಏನೂ ಕಡಿಮೆಯಾಗಬಾರದು,’ ಎಂದು ಹೇಳಿದ್ದಾನೆ,” ಎಂದರು.
12 ೧೨ ಹೀಗಿರಲಾಗಿ ಜನರು ಹುಲ್ಲನ್ನು ಕೂಡಿಸಿಕೊಳ್ಳುವುದಕ್ಕಾಗಿ ಐಗುಪ್ತ ದೇಶದಲ್ಲೆಲ್ಲಾ ಚದರಿಹೋಗಿ ಹುಡುಕತೊಡಗಿದರು.
ಆಗ ಜನರು ಒಣಹುಲ್ಲಿಗಾಗಿ ಕಳೆಕೀಳಿಸುವುದಕ್ಕೆ ಈಜಿಪ್ಟ್ ದೇಶದಲ್ಲೆಲ್ಲಾ ಚದರಿಹೋದರು.
13 ೧೩ ಇದಲ್ಲದೆ ಬಿಟ್ಟೀ ಕೆಲಸ ಮಾಡಿಸುವವರು, “ನಿಮಗೆ ಹುಲ್ಲು ಇದ್ದಾಗ ಹೇಗೋ ಹಾಗೆ ಪ್ರತಿದಿನದ ಕೆಲಸವನ್ನು ಅದೇ ದಿನದಲ್ಲೇ ಮುಗಿಸಬೇಕು” ಎಂದು ಹೇಳಿ ಅವರನ್ನು ಅವಸರ ಪಡಿಸಿದರು.
ಇದಲ್ಲದೆ ಬಿಟ್ಟಿಕೆಲಸ ಮಾಡಿಸುವವರು, “ಹುಲ್ಲು ಇದ್ದಾಗ ನಿಮ್ಮ ಕೆಲಸಗಳನ್ನು ಮಾಡಿದಂತೆಯೇ, ಪ್ರತಿಯೊಂದು ದಿನದಲ್ಲಿ, ಆ ದಿನದ ಕೆಲಸವನ್ನು ತೀರಿಸಿಬಿಡಬೇಕು,” ಎಂದು ಹೇಳಿ ಅವರನ್ನು ತ್ವರೆಪಡಿಸಿದರು.
14 ೧೪ ಫರೋಹನ ಅಧಿಕಾರಿಗಳು ತಾವೇ ನೇಮಿಸಿದ ಇಸ್ರಾಯೇಲರ ಮೇಲ್ವಿಚಾರಕರಿಗೆ, “ನೀವು ಮೊದಲು ಇಟ್ಟಿಗೆಗಳ ಲೆಕ್ಕ ಒಪ್ಪಿಸುತ್ತಿದ್ದಂತೆ ನಿನ್ನೆ ಹಾಗೂ ಈ ಹೊತ್ತು ಯಾಕೆ ಒಪ್ಪಿಸಲಿಲ್ಲ” ಎಂದು ಹೇಳಿ ಅವರನ್ನು ಹೊಡೆದರು.
ಫರೋಹನ ಅಧಿಕಾರಿಗಳು ತಾವೇ ನೇಮಿಸಿದ ಇಸ್ರಾಯೇಲರ ಮೇಲ್ವಿಚಾರಕರಿಗೆ, “ನೀವು ಮೊದಲು ಇಟ್ಟಿಗೆಗಳ ಲೆಕ್ಕವನ್ನು ಒಪ್ಪಿಸಿದಂತೆ ನಿನ್ನೆ ಈ ಹೊತ್ತು ಏಕೆ ಒಪ್ಪಿಸಲಿಲ್ಲ,” ಎಂದು ಹೇಳಿ ಅವರನ್ನು ಹೊಡೆಸಿದರು.
15 ೧೫ ಹೀಗಿರಲು ಇಸ್ರಾಯೇಲರ ಮೇಲ್ವಿಚಾರಕರು ಫರೋಹನ ಬಳಿಗೆ ಹೋಗಿ, “ಏಕೆ ನಿನ್ನ ದಾಸರಿಗೆ ಹೀಗೆ ಮಾಡುತ್ತಿರುವಿರಿ ಸ್ವಾಮೀ?
ಇಸ್ರಾಯೇಲರ ಮೇಲ್ವಿಚಾರಕರು ಫರೋಹನ ಬಳಿಗೆ ಹೋಗಿ, “ಏಕೆ ನಿಮ್ಮ ದಾಸರಿಗೆ ಹೀಗೆ ಮಾಡುತ್ತೀರಿ?
16 ೧೬ ನಿನ್ನ ದಾಸರಿಗೆ, ನೇಮಿಸಿದ ಅಧಿಕಾರಿಗಳು ಹುಲ್ಲನ್ನು ಕೊಡದೆ ‘ಇಟ್ಟಿಗೆಗಳನ್ನು ಮಾಡಿರಿ!’ ಎಂದು ಹೇಳುತ್ತಾ ನಮ್ಮನ್ನು ಹೊಡೆಯುತ್ತಿದ್ದಾರೆ. ಹೀಗೆ ನಿನ್ನ ಜನರು ಮಾಡುತ್ತಿರುವುದು ಪಾಪಕಾರ್ಯವಾಗಿದೆ” ಎಂದು ಗೋಳಾಡಿದರು.
ನಿಮ್ಮ ದಾಸರಿಗೆ ನೇಮಿಸಿದ ಅಧಿಕಾರಿಗಳು ಹುಲ್ಲನ್ನು ಕೊಡದೆ, ‘ಇಟ್ಟಿಗೆಗಳನ್ನು ಮಾಡಿರಿ’ ಎಂದು ನಮಗೆ ಹೇಳುತ್ತಾ ನಮ್ಮನ್ನು ಹೊಡೆಯುತ್ತಿದ್ದಾರೆ. ಆದರೆ ತಪ್ಪು ನಿಮ್ಮ ಸ್ವಂತ ಜನರಲ್ಲಿಯೇ ಇದೆ,” ಎಂದರು.
17 ೧೭ ಅದಕ್ಕೆ ಅವನು, “ನೀವು ಮೈಗಳ್ಳರು, ನೀವು ಮೈಗಳ್ಳರಾದ ಕಾರಣ, ‘ನಾವು ಹೋಗಿ ಯೆಹೋವನಿಗೆ ಯಜ್ಞವನ್ನರ್ಪಿಸಿ ಬರಬೇಕು’ ಎಂದು ಹೇಳುತ್ತಿದ್ದೀರಿ.
ಅದಕ್ಕೆ ಅವನು, “ನೀವು ಮೈಗಳ್ಳರು, ನೀವು ಮೈಗಳ್ಳರಾದ ಕಾರಣ, ನೀವು, ‘ನಾವು ಹೋಗಿ ಯೆಹೋವ ದೇವರಿಗೆ ಯಜ್ಞವನ್ನರ್ಪಿಸುತ್ತೇವೆ,’ ಎಂದು ಹೇಳುತ್ತೀರಿ.
18 ೧೮ ಆದ್ದರಿಂದ ಈಗ ಕೆಲಸಕ್ಕೆ ನಡೆಯಿರಿ ನಿಮಗೆ ಹುಲ್ಲನ್ನು ಕೊಡುವುದಿಲ್ಲ. ಆದರೂ ನೇಮಿಸಿದ ಇಟ್ಟಿಗೆಗಳ ಲೆಕ್ಕವನ್ನು ತಪ್ಪದೆ ಒಪ್ಪಿಸಬೇಕು” ಅಂದನು.
ಆದ್ದರಿಂದ ಈಗ ಹೋಗಿ ಕೆಲಸಮಾಡಿರಿ. ಹುಲ್ಲನ್ನು ನಿಮಗೆ ಕೊಡುವುದಕ್ಕಾಗುವುದಿಲ್ಲ. ಆದರೂ ನೇಮಿಸಿದ್ದ ಇಟ್ಟಿಗೆಗಳನ್ನು ನೀವು ತಯಾರಿಸಬೇಕು,” ಎಂದನು.
19 ೧೯ ದಿನ ದಿನವೂ ಒಪ್ಪಿಸಬೇಕಾದ ಇಟ್ಟಿಗೆಗಳ ಲೆಕ್ಕ ಕಡಿಮೆಯಾಗಬಾರದೆಂಬ ಅಪ್ಪಣೆಯಾಗಿದ್ದರಿಂದ ಇಸ್ರಾಯೇಲರ ಮೇಲ್ವಿಚಾರಕರು ತಾವು ದುರವಸ್ಥೆಯಲ್ಲಿ ಸಿಕ್ಕಿಕೊಂಡಿವೆಂದು ತಿಳಿದುಕೊಂಡರು.
ದಿನದಿನವೂ ಒಪ್ಪಿಸಬೇಕಾದ ಇಟ್ಟಿಗೆಗಳ ಲೆಕ್ಕ ಕಡಿಮೆಯಾಗಬಾರದೆಂದು ಅಪ್ಪಣೆಯಾದ್ದರಿಂದ, ಇಸ್ರಾಯೇಲರ ಮೇಲ್ವಿಚಾರಕರು ತಾವು ದುರವಸ್ಥೆಯಲ್ಲಿ ಇದ್ದೇವೆಂದು ತಿಳಿದುಕೊಂಡರು.
20 ೨೦ ಅವರು ಫರೋಹನ ಬಳಿಯಿಂದ ಹೊರಗೆ ಬಂದಾಗ ತಮ್ಮನ್ನು ಎದುರುಗೊಳ್ಳುವುದಕ್ಕೆ ನಿಂತಿದ್ದ ಮೋಶೆ ಮತ್ತು ಆರೋನರನ್ನು ನೋಡಿ
ಅವರು ಫರೋಹನ ಬಳಿಯಿಂದ ಹೊರಗೆ ಬಂದಾಗ, ದಾರಿಯಲ್ಲಿ ಕಾದಿದ್ದ ಮೋಶೆಯನ್ನೂ, ಆರೋನನನ್ನೂ ಸಂಧಿಸಿದರು.
21 ೨೧ ಮೋಶೆ ಹಾಗು ಆರೋನರಿಗೆ, “ಯೆಹೋವನು ನಿಮ್ಮನ್ನು ನೋಡಿ ನ್ಯಾಯತೀರಿಸಲಿ. ಏಕೆಂದರೆ ಫರೋಹನು ಮತ್ತು ಅವನ ಸೇವಕರೂ ನಮ್ಮನ್ನು ನೋಡಿ ಅಸಹ್ಯಪಡುವಂತೆ ನೀವು ಮಾಡಿರುವಿರಿ. ನಮ್ಮನ್ನು ಸಂಹಾರಮಾಡುವುದಕ್ಕೆ ಅವರ ಕೈಗೆ ಕತ್ತಿಯನ್ನು ಕೊಟ್ಟಿದ್ದೀರಿ” ಅಂದರು. “ಯೆಹೋವನು ನಿಮ್ಮ ತಪ್ಪನ್ನು ವಿಚಾರಿಸಿ ತಕ್ಕ ಶಿಕ್ಷೆಯನ್ನು ವಿಧಿಸಲಿ” ಎಂದು ಹೇಳಿದರು.
ಅವರು ಮೋಶೆ ಆರೋನರಿಗೆ, “ಯೆಹೋವ ದೇವರು ನಿಮ್ಮನ್ನು ನೋಡಿ ನ್ಯಾಯತೀರಿಸಲಿ! ಏಕೆಂದರೆ ನೀವೇ ಫರೋಹನ ಮುಂದೆಯೂ ಅವನ ದಾಸರ ಮುಂದೆಯೂ ನಮ್ಮನ್ನು ಅವರು ಹೇಸಿಕೊಳ್ಳುವಂತೆ ಮಾಡಿದಿರಿ. ನಮ್ಮನ್ನು ಸಂಹರಿಸುವುದಕ್ಕೆ ನೀವು ಅವರ ಕೈಗೆ ಖಡ್ಗವನ್ನು ಕೊಟ್ಟಿದ್ದೀರಿ,” ಎಂದರು.
22 ೨೨ ಆಗ ಮೋಶೆಯು ಯೆಹೋವನ ಬಳಿಗೆ ಹಿಂತಿರುಗಿ ಬಂದು, “ಸ್ವಾಮೀ, ಈ ಜನರಿಗೆ ಕೇಡನ್ನು ಮಾಡಿದ್ದೀಯಲ್ಲಾ? ನನ್ನನ್ನು ಕಳುಹಿಸಿದ್ದು ಯಾಕೆ?
ಆಗ ಮೋಶೆಯು ಯೆಹೋವ ದೇವರ ಬಳಿಗೆ ಬಂದು, “ಸ್ವಾಮಿ, ಈ ಜನರಿಗೆ ಏಕೆ ಕಷ್ಟವನ್ನು ಕೊಟ್ಟಿದ್ದೀರಿ? ಏಕೆ ನನ್ನನ್ನು ಕಳುಹಿಸಿದಿರಿ?
23 ೨೩ ನಾನು ಫರೋಹನ ಬಳಿಗೆ ಹೋಗಿ ನಿನ್ನ ಹೆಸರಿನಲ್ಲಿ ಮಾತನಾಡಿದಂದಿನಿಂದ ಅವನು ಈ ಜನರಿಗೆ ಕೇಡನ್ನೇ ಮಾಡುತ್ತಿದ್ದಾನೆ. ನೀನು ನಿನ್ನ ಜನರನ್ನು ಎಷ್ಟು ಮಾತ್ರವೂ ತಪ್ಪಿಸಲಿಲ್ಲವಲ್ಲ” ಎಂದು ಹೇಳಿದನು.
ನಾನು ಫರೋಹನ ಬಳಿಗೆ ಬಂದು ನಿಮ್ಮ ಹೆಸರಿನಲ್ಲಿ ಮಾತನಾಡಿದಂದಿನಿಂದ, ಈ ಜನರಿಗೆ ಅವನು ಕೇಡನ್ನೇ ಮಾಡುತ್ತಿದ್ದಾನೆ. ನೀವು ನಿಮ್ಮ ಜನರನ್ನು ರಕ್ಷಿಸಲಿಲ್ಲವಲ್ಲಾ,” ಎಂದನು.

< ವಿಮೋಚನಕಾಂಡ 5 >