< ವಿಮೋಚನಕಾಂಡ 14 >

1 ಯೆಹೋವನು ಮೋಶೆಯ ಸಂಗಡ ಮಾತನಾಡಿ
ತರುವಾಯ ಯೆಹೋವ ದೇವರು ಮಾತನಾಡಿ ಮೋಶೆಗೆ,
2 “ಇಸ್ರಾಯೇಲರು ಹಿಂದಿರುಗಿ ಹೋಗಿ ಪೀಹಹೀರೋತಿನ ಪೂರ್ವಕಡೆಯಲ್ಲಿ ಮಿಗ್ದೋಲಿಗೂ ಕೆಂಪು ಸಮುದ್ರಕ್ಕೂ ನಡುವೆ ಬಾಳ್ಚೆಫೋನಿಗೆ ಎದುರಾಗಿ ಇಳಿದುಕೊಳ್ಳಬೇಕೆಂದು ಅವರಿಗೆ ಹೇಳು. ಅದರ ಎದುರಾಗಿಯೇ ಸಮುದ್ರದ ಬಳಿಯಲ್ಲೇ ಅವರು ಇಳಿದುಕೊಳ್ಳಬೇಕು.
“ಇಸ್ರಾಯೇಲರು ಹಿಂತಿರುಗಿ ಹೋಗಿ ಪೀಹಹೀರೋತಿಗೆ ಎದುರಾಗಿ ಮಿಗ್ದೋಲಿಗೂ ಸಮುದ್ರಕ್ಕೂ ಮಧ್ಯದಲ್ಲಿ ಬಾಲ್ಜೆಫೋನಿಗೆ ಎದುರಾಗಿ ಇಳಿದುಕೊಳ್ಳಬೇಕೆಂದು ಅವರಿಗೆ ಹೇಳು. ಅದರ ಎದುರಾಗಿ ನೀವು ಸಮುದ್ರದ ತೀರದಲ್ಲಿ ಇಳಿದುಕೊಳ್ಳಬೇಕು.
3 ಫರೋಹನು ಅದನ್ನು ಕಂಡು ಇಸ್ರಾಯೇಲರನ್ನು ಕುರಿತು, ‘ಅವರಿಗೆ ದಾರಿತಪ್ಪಿದೆ, ಎಲ್ಲಾ ಕಡೆಯಲ್ಲಿಯೂ ಮರುಭೂಮಿ ಅವರನ್ನು ಸುತ್ತುವರಿದಿದೆ’ ಎಂದು ಅಂದುಕೊಳ್ಳುವನು.
ಏಕೆಂದರೆ ಫರೋಹನು ಇಸ್ರಾಯೇಲರ ವಿಷಯದಲ್ಲಿ, ‘ಅವರು ಗಲಿಬಿಲಿಗೊಂಡು ಮರುಭೂಮಿಯನ್ನು ಸುತ್ತುವರಿದ ಪ್ರದೇಶದಲ್ಲಿ ಅತ್ತಿತ್ತ ಹೋಗುತ್ತಿರುವರು,’ ಎಂದುಕೊಳ್ಳುವನು.
4 ನಾನು ಫರೋಹನ ಹೃದಯವನ್ನು ಕಠಿಣಪಡಿಸುವೆನು. ಆದುದರಿಂದ ಅವನು ಅವರನ್ನು ಬೆನ್ನಟ್ಟಿ ಬರುವನು. ಆಗ ನಾನು ಫರೋಹನಲ್ಲಿಯೂ, ಅವನ ಸೈನ್ಯದಲ್ಲಿಯೂ ಮಹಿಮೆಗೊಳ್ಳುವೆನು. ‘ನಾನೇ ಯೆಹೋವನು’ ಎಂದು ಐಗುಪ್ತ್ಯರಿಗೆ ತಿಳಿದು ಬರುವುದು” ಎಂದು ಹೇಳಿದನು. ಯೆಹೋವನು ಆಜ್ಞಾಪಿಸಿದಂತೆಯೇ ಇಸ್ರಾಯೇಲರು ನಡೆದುಕೊಂಡರು.
ಇದಲ್ಲದೆ ಫರೋಹನು ನಿಮ್ಮನ್ನು ಹಿಂದಟ್ಟುವಂತೆ ನಾನು ಅವನ ಹೃದಯವನ್ನು ಕಠಿಣ ಮಾಡುವೆನು. ಫರೋಹನಲ್ಲಿಯೂ, ಅವನ ಎಲ್ಲಾ ಸೈನ್ಯದಲ್ಲಿಯೂ ನನ್ನನ್ನು ಘನಪಡಿಸಿಕೊಳ್ಳುವೆನು. ಆಗ ನಾನೇ ಯೆಹೋವ ದೇವರೆಂದು ಈಜಿಪ್ಟಿನವರು ತಿಳಿಯುವರು,” ಎಂದು ಹೇಳಿದರು. ಅದರಂತೆಯೇ ಇಸ್ರಾಯೇಲರು ಮಾಡಿದರು.
5 ಇಸ್ರಾಯೇಲರು ಓಡಿಹೋದರೆಂಬ ವರ್ತಮಾನವು ಐಗುಪ್ತದ ಅರಸನಾದ ಫರೋಹನಿಗೆ ತಿಳಿದುಬಂದಾಗ, ಅವರ ವಿಷಯದಲ್ಲಿ ಫರೋಹನ ಮತ್ತು ಅವನ ಪರಿವಾರದವರ ಹೃದಯವು ಅವರಿಗೆ ವಿರುದ್ಧವಾಗಿ ಕಠಿಣಗೊಂಡಿತು. ಅವರು, “ಇದೇನು ನಾವು ಮಾಡಿದ್ದು? ನಮಗೆ ದಾಸರಾಗಿದ್ದ ಇಸ್ರಾಯೇಲರನ್ನು ಹೊರಟು ಹೋಗುವುದಕ್ಕೆ ಬಿಟ್ಟೆವಲ್ಲಾ” ಎಂದುಕೊಂಡರು.
ಜನರು ಓಡಿಹೋದರೆಂಬ ವಿಷಯ ಈಜಿಪ್ಟಿನ ಅರಸನಿಗೆ ತಿಳಿಯಿತು. ಆಗ ಫರೋಹನ ಮತ್ತು ಅವನ ಸೇವಕರ ಹೃದಯವು ಅವರಿಗೆ ವಿರೋಧವಾಗಿ ತಿರುಗಿಕೊಂಡಿತು. ಅವರು, “ಇಸ್ರಾಯೇಲರು ನಮ್ಮ ಸೇವೆ ಮಾಡುವುದನ್ನು ಬಿಟ್ಟು ಹೋಗಿಬಿಡುವಂತೆ ನಾವು ಏಕೆ ಮಾಡಿದೆವು?” ಎಂದುಕೊಂಡರು.
6 ಆಗ ಫರೋಹನು ತನ್ನ ರಥಬಲವನ್ನು ಸಿದ್ಧಪಡಿಸಿಕೊಂಡು ತನ್ನ ಭಟರೊಡನೆ ಹೊರಟನು.
ಆಗ ಫರೋಹನು ತನ್ನ ರಥವನ್ನು ಸಿದ್ಧಮಾಡಿ, ತನ್ನ ಸೈನ್ಯವನ್ನು ತನ್ನೊಂದಿಗೆ ತೆಗೆದುಕೊಂಡನು.
7 ಶ್ರೇಷ್ಠವಾದ ಆರುನೂರು ರಥಗಳನ್ನೂ, ಐಗುಪ್ತ ದೇಶದ ಎಲ್ಲಾ ರಥಗಳನ್ನೂ ತೆಗೆದುಕೊಂಡು ಬೆನ್ನಟ್ಟಿ ಹೋದನು. ಆ ಎಲ್ಲಾ ರಥಗಳಲ್ಲಿ ಅಧಿಪತಿಗಳನ್ನೂ ಕರೆಸಿ ಕೊಂಡನು.
ಇದಲ್ಲದೆ ಅವನು ಆರಿಸಿಕೊಂಡ ಅತ್ಯುತ್ತಮ ಆರುನೂರು ರಥಗಳನ್ನೂ, ಈಜಿಪ್ಟಿನ ಎಲ್ಲಾ ರಥಗಳನ್ನೂ, ಅವುಗಳ ಮೇಲೆ ಅಧಿಪತಿಗಳನ್ನೂ ತೆಗೆದುಕೊಂಡನು.
8 ಯೆಹೋವನು ಐಗುಪ್ತ ದೇಶದ ಅರಸನಾದ ಫರೋಹನ ಹೃದಯವನ್ನು ಕಠಿಣಪಡಿಸಿದ್ದರಿಂದ ಅವನು ಇಸ್ರಾಯೇಲರನ್ನು ಬೆನ್ನಟ್ಟಿಹೋದನು. ಆದರೆ ಇಸ್ರಾಯೇಲರು ಯುದ್ಧಸನ್ನದ್ಧರಾಗಿ ಹೊರಟು ಬಂದಿದ್ದರು.
ಈಜಿಪ್ಟಿನ ಅರಸನಾದ ಫರೋಹನ ಹೃದಯವನ್ನು ಯೆಹೋವ ದೇವರು ಕಠಿಣ ಮಾಡಿದ್ದರಿಂದ ಅವನು ಇಸ್ರಾಯೇಲರನ್ನು ಹಿಂದಟ್ಟಿದನು. ಆದರೆ ಇಸ್ರಾಯೇಲರು ಧೈರ್ಯದಿಂದ ಹೊರಗೆ ಹೋದರು.
9 ಐಗುಪ್ತ್ಯರು ಅಂದರೆ ಫರೋಹನ ಕುದುರೆಗಳೂ, ರಥಗಳೂ, ಅವನ ರಾಹುತರೂ, ಸೈನ್ಯದವರೆಲ್ಲರೂ ಅವರ ಹಿಂದೆ ಹೊರಟು ಇಸ್ರಾಯೇಲರು ಪೀಹಹೀರೋತಿನ ಹತ್ತಿರ ಬಾಳ್ಚೆಫೋನಿನ ಎದುರಾಗಿ ಸಮುದ್ರ ತೀರದಲ್ಲಿ ಇಳಿದುಕೊಳ್ಳುತ್ತಿರುವಾಗಲೇ ಅವರ ಸಮೀಪಕ್ಕೆ ಬಂದರು.
ಈಜಿಪ್ಟಿನವರು ಅವರನ್ನು ಹಿಂದಟ್ಟಿದರು. ಅವರು ಸಮುದ್ರ ತೀರದಲ್ಲಿ ಇಳಿದುಕೊಂಡಿರುವಾಗ, ಫರೋಹನ ಎಲ್ಲಾ ಕುದುರೆಗಳೂ ರಥಗಳೂ ಕುದುರೆ ಸವಾರರೂ ಅವನ ಸೈನ್ಯವೂ ಪೀಹಹೀರೋತಿನ ಸಮೀಪದಲ್ಲಿ ಬಾಲ್ಜೆಫೋನಿನ ಎದುರಾಗಿ ಇಸ್ರಾಯೇಲರನ್ನು ಸಮೀಪಿಸಿದರು.
10 ೧೦ ಫರೋಹನು ಸಮೀಪಿಸುತ್ತಿರುವಾಗ ಇಸ್ರಾಯೇಲರು ಕಣ್ಣೆತ್ತಿ ತಮ್ಮ ಹಿಂದೆ ಹೊರಟು ಬಂದಿದ್ದ ಐಗುಪ್ತ್ಯರನ್ನು ಕಂಡು, ಬಹಳ ಭಯಪಟ್ಟವರಾಗಿ ಯೆಹೋವನಿಗೆ ಮೊರೆಯಿಟ್ಟರು.
ಫರೋಹನು ಸಮೀಪಕ್ಕೆ ಬರುವುದನ್ನು ಇಸ್ರಾಯೇಲರು ಕಣ್ಣೆತ್ತಿ ನೋಡಿದರು. ಈಜಿಪ್ಟಿನವರು ಅವರ ಹಿಂದೆ ಬರುತ್ತಿರುವುದನ್ನು ಕಂಡು ಇಸ್ರಾಯೇಲರು ಬಹಳ ಭಯಪಟ್ಟು ಯೆಹೋವ ದೇವರಿಗೆ ಮೊರೆಯಿಟ್ಟರು.
11 ೧೧ ಅವರು ಮೋಶೆಗೆ, “ಐಗುಪ್ತ ದೇಶದಲ್ಲಿ ಸಮಾಧಿಗಳಿರಲಿಲ್ಲವೆಂದು ಮರುಭೂಮಿಯಲ್ಲಿ ಸಾಯಲಿ ಎಂದು ನಮ್ಮನ್ನು ಇಲ್ಲಿಗೆ ಕರೆದುಕೊಂಡು ಬಂದೆಯೋ? ಯಾಕೆ ನೀನು ನಮಗೆ ಈ ರೀತಿಮಾಡಿ ಐಗುಪ್ತ ದೇಶದಿಂದ ಕರೆದುಕೊಂಡು ಬಂದೆ?
ಅವರು ಮೋಶೆಗೆ, “ಈಜಿಪ್ಟಿನಲ್ಲಿ ಸಮಾಧಿಗಳು ಇಲ್ಲದ ಕಾರಣ ನಾವು ಮರುಭೂಮಿಯಲ್ಲಿ ಸಾಯುವ ಹಾಗೆ ನಮ್ಮನ್ನು ಕರೆದುಕೊಂಡು ಬಂದೆಯೋ? ಏಕೆ ನೀನು ಈ ಪ್ರಕಾರ ನಮಗೆ ಮಾಡಿ, ನಮ್ಮನ್ನು ಈಜಿಪ್ಟಿನಿಂದ ಕರೆದುಕೊಂಡು ಬಂದೆ?
12 ೧೨ ನಾವು ಐಗುಪ್ತ ದೇಶದಲ್ಲಿರುವಾಗಲೇ, ‘ನೀನು ನಮ್ಮ ಗೊಡವೆಗೆ ಬರಬೇಡ. ನಾವು ಐಗುಪ್ತ್ಯರಿಗೆ ದಾಸರಾಗಿಯೇ ಇರುವೆವು’ ಎಂಬುದಾಗಿ ನಿನಗೆ ಹೇಳಲಿಲ್ಲವೇ. ನಾವು ಈ ಮರುಭೂಮಿಯಲ್ಲಿ ಸಾಯುವುದಕ್ಕಿಂತ ಐಗುಪ್ತ್ಯರಿಗೆ ದಾಸರಾಗಿರುವುದೇ ಮೇಲಲ್ಲವೇ” ಎಂದು ಹೇಳಿದರು.
ನಾವು ಈಜಿಪ್ಟ್ ದೇಶದಲ್ಲಿದ್ದಾಗಲೇ, ‘ನೀನು ನಮ್ಮ ಗೊಡವೆಗೆ ಬರಬೇಡ, ನಾವು ಈಜಿಪ್ಟಿನವರಿಗೆ ಸೇವೆಮಾಡುತ್ತೇವೆ,’ ಎಂದು ನಿನಗೆ ಹೇಳಲಿಲ್ಲವೇ? ನಾವು ಮರುಭೂಮಿಯಲ್ಲಿ ಸಾಯುವುದಕ್ಕಿಂತ ಈಜಿಪ್ಟಿನವರಿಗೆ ಸೇವೆ ಮಾಡುವುದೇ ಒಳ್ಳೆಯದಾಗಿತ್ತಲ್ಲಾ?” ಎಂದು ಹೇಳಿದರು.
13 ೧೩ ಆದರೆ ಮೋಶೆ ಆ ಜನರಿಗೆ, “ನೀವು ಅಂಜಬೇಡಿರಿ. ಸುಮ್ಮನೆ ನಿಂತುಕೊಂಡಿದ್ದು ಯೆಹೋವನು ಈ ಹೊತ್ತು ನಿಮ್ಮನ್ನು ರಕ್ಷಿಸುವ ರೀತಿಯನ್ನು ನೋಡಿರಿ. ನೀವು ಈ ಹೊತ್ತು ನೋಡುವ ಐಗುಪ್ತ್ಯರನ್ನು ಇನ್ನು ಮುಂದೆ ಎಂದಿಗೂ ನೋಡುವುದಿಲ್ಲ.
ಅದಕ್ಕೆ ಮೋಶೆಯು ಜನರಿಗೆ, “ನೀವು ಭಯಪಡಬೇಡಿರಿ, ದೃಢವಾಗಿ ನಿಲ್ಲಿರಿ. ಯೆಹೋವ ದೇವರು ನಿಮಗೆ ಈ ಹೊತ್ತು ತೋರಿಸುವ ರಕ್ಷಣೆಯನ್ನು ನೋಡಿರಿ. ನೀವು ಈ ಹೊತ್ತು ನೋಡುವ ಈಜಿಪ್ಟಿನವರನ್ನು ಇನ್ನು ಮುಂದೆ ಎಂದೆಂದಿಗೂ ನೋಡುವುದಿಲ್ಲ.
14 ೧೪ ಯೆಹೋವನೇ ನಿಮಗಾಗಿ ಯುದ್ಧಮಾಡುವನು. ನೀವಂತು ಸುಮ್ಮನೇ ನಿಂತುಕೊಂಡಿರಿ” ಎಂದು ಹೇಳಿದನು.
ಯೆಹೋವ ದೇವರು ನಿಮಗೋಸ್ಕರ ಯುದ್ಧಮಾಡುವರು, ಆದರೆ ನೀವು ವಿಶ್ರಾಂತಿಯಿಂದಿರಿ,” ಎಂದನು.
15 ೧೫ ಆಗ ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ, “ನೀನು ನನಗೆ ಮೊರೆಯಿಡುವುದೇನು? ಮುಂದಕ್ಕೆ ಹೊರಡಬೇಕೆಂದು ಇಸ್ರಾಯೇಲರಿಗೆ ಹೇಳು.
ಆಗ ಯೆಹೋವ ದೇವರು ಮೋಶೆಗೆ, “ನೀನು ನನಗೆ ಮೊರೆಯಿಡುವುದೇನು? ಇಸ್ರಾಯೇಲರಿಗೆ ಮುಂದಕ್ಕೆ ಹೊರಡಬೇಕೆಂದು ಹೇಳು.
16 ೧೬ ನೀನು ನಿನ್ನ ಕೋಲನ್ನು ಎತ್ತಿ ಸಮುದ್ರದ ಮೇಲೆ ಕೈಚಾಚಿ ಅದನ್ನು ವಿಭಾಗಿಸು, ಆಗ ಇಸ್ರಾಯೇಲರು ಸಮುದ್ರದ ಮಧ್ಯದಲ್ಲಿ ಒಣಗಿದ ನೆಲದ ಮೇಲೆ ನಡೆದುಕೊಂಡು ಹೋಗುವರು.
ನೀನು ನಿನ್ನ ಕೋಲನ್ನು ಎತ್ತಿ, ನಿನ್ನ ಕೈಯನ್ನು ಸಮುದ್ರದ ಮೇಲೆ ಚಾಚಿ, ಅದನ್ನು ವಿಭಾಗಿಸು. ಆಗ ಇಸ್ರಾಯೇಲರು ಸಮುದ್ರದ ಮಧ್ಯದಲ್ಲಿ ಒಣಗಿದ ನೆಲದ ಮೇಲೆ ಹೋಗುವರು.
17 ೧೭ ನಾನಂತೂ ಐಗುಪ್ತ್ಯರ ಹೃದಯಗಳನ್ನು ಕಠಿಣಪಡಿಸುವೆನು. ಅವರು ಇವರನ್ನು ಹಿಂದಟ್ಟುವರು. ಆಗ ನಾನು ಫರೋಹನ ಮೇಲೆಯೂ, ಅವನ ಸಮಸ್ತ ಸೈನ್ಯದವರ ಮೇಲೆಯೂ, ರಥಗಳ ಮೇಲೆಯೂ ಮತ್ತು ಕುದುರೆಗಳ ಮೇಲೆಯೂ ಪ್ರಖ್ಯಾತಿಗೊಳ್ಳುವೆನು.
ನಾನು ಈಜಿಪ್ಟಿನವರ ಹೃದಯವನ್ನು ಕಠಿಣ ಮಾಡುತ್ತೇನೆ. ಅವರು ಇವರನ್ನು ಹಿಂದಟ್ಟುವರು. ಇದಲ್ಲದೆ ಫರೋಹನ ಮೇಲೆಯೂ ಅವನ ಎಲ್ಲಾ ಸೈನ್ಯದ ಮೇಲೆಯೂ ಅವನ ರಥಗಳ ಮೇಲೆಯೂ ಕುದುರೆಯ ಸವಾರರ ಮೇಲೆಯೂ ನನ್ನನ್ನು ಘನಪಡಿಸಿಕೊಳ್ಳುವೆನು.
18 ೧೮ ನಾನು ಫರೋಹನನಲ್ಲಿಯೂ ಅವನ ರಥಗಳಲ್ಲಿಯೂ, ಕುದುರೆಗಳಲ್ಲಿಯೂ ಪ್ರಖ್ಯಾತಿ ಹೊಂದಿದ ನಂತರ ನಾನೇ ಯೆಹೋವನು ಎಂಬುದನ್ನು ಐಗುಪ್ತ್ಯರು ತಿಳಿದುಕೊಳ್ಳುವರು” ಎಂದನು.
ನಾನು ಫರೋಹನ ಮೇಲೆಯೂ ಅವನ ರಥಗಳ ಮೇಲೆಯೂ ಅವನ ಕುದುರೆ ಸವಾರರ ಮೇಲೆಯೂ ನನ್ನನ್ನು ಘನಪಡಿಸಿಕೊಂಡಾಗ, ನಾನೇ ಯೆಹೋವ ದೇವರೆಂದು ಈಜಿಪ್ಟಿನವರು ತಿಳಿದುಕೊಳ್ಳುವರು,” ಎಂದರು.
19 ೧೯ ಆಗ ಇಸ್ರಾಯೇಲರ ದಂಡಿನ ಮುಂದೆ ಹೋಗುತ್ತಿದ್ದ ದೇವದೂತನು ತನ್ನ ಸ್ಥಳವನ್ನು ಬಿಟ್ಟು ಅವರ ಹಿಂದಕ್ಕೆ ಬಂದನು. ಅವರ ಮುಂದಾಗಿ ಹೋಗುತ್ತಿದ್ದ ಮೇಘಸ್ತಂಭವು ಅಲ್ಲಿಂದ ಬಂದು ಅವರ ಹಿಂದೆ ನಿಂತುಕೊಂಡಿತು.
ಆಗ ಇಸ್ರಾಯೇಲ್ ದಂಡಿನ ಮುಂದೆ ಹೋಗುತ್ತಿದ್ದ ದೇವದೂತನು ತನ್ನ ಸ್ಥಳವನ್ನು ಬಿಟ್ಟು ಅವರ ಹಿಂದೆ ಬಂದನು. ಅವರ ಮುಂದೆ ಇದ್ದ ಮೇಘಸ್ತಂಭವು ಅಲ್ಲಿಂದ ಬಂದು ಅವರ ಹಿಂದೆ ನಿಂತುಕೊಂಡಿತು.
20 ೨೦ ಆ ಮೇಘಸ್ತಂಭವು ಐಗುಪ್ತ್ಯರ ಪಾಳೆಯಕ್ಕೂ, ಇಸ್ರಾಯೇಲರ ಪಾಳೆಯಕ್ಕೂ ನಡುವೆ ಬಂದಿತು. ಅದು ಐಗುಪ್ತ್ಯರಿಗೆ ಕತ್ತಲನ್ನೂ, ಇಸ್ರಾಯೇಲರಿಗೆ ರಾತ್ರಿಯಲ್ಲಿ ಬೆಳಕನ್ನು ಕೊಟ್ಟಿದ್ದರಿಂದ ಆ ರಾತ್ರಿಯೆಲ್ಲಾ ಒಬ್ಬರ ಹತ್ತಿರಕ್ಕೆ ಒಬ್ಬರು ಬರಲಾಗಲಿಲ್ಲ.
ಅದು ಈಜಿಪ್ಟಿನ ದಂಡಿಗೂ ಇಸ್ರಾಯೇಲರ ದಂಡಿಗೂ ನಡುವೆ ಬಂದಿತು. ಮೇಘಸ್ತಂಭವು ಈಜಿಪ್ಟಿನವರಿಗೆ ಕತ್ತಲನ್ನೂ ಇಸ್ರಾಯೇಲರಿಗೆ ಬೆಳಕನ್ನೂ ನೀಡಿತು. ಆ ರಾತ್ರಿಯೆಲ್ಲಾ ಒಬ್ಬರ ಹತ್ತಿರ ಒಬ್ಬರು ಬರಲಾಗಲಿಲ್ಲ.
21 ೨೧ ಮೋಶೆ ಸಮುದ್ರದ ಮೇಲೆ ಕೈಚಾಚಿದಾಗ, ಯೆಹೋವನು ಆ ರಾತ್ರಿಯೆಲ್ಲಾ ಮೂಡಣ ದಿಕ್ಕಿನಿಂದ ಬಲವಾದ ಬಿರುಗಾಳಿಯನ್ನು ಬೀಸುವಂತೆ ಮಾಡಿ ಸಮುದ್ರದ ನೀರನ್ನು ಒಂದು ಕಡೆಗೆ ನೂಕಿ ಅದರ ತಳದಲ್ಲಿ ಒಣನೆಲವು ಕಾಣಿಸುವಂತೆ ಮಾಡಿದನು. ನೀರು ಇಬ್ಭಾಗವಾಯಿತು.
ಆಗ ಮೋಶೆಯು ಸಮುದ್ರದ ಮೇಲೆ ತನ್ನ ಬಲಗೈಯನ್ನು ಚಾಚಲಾಗಿ, ಯೆಹೋವ ದೇವರು ರಾತ್ರಿಯೆಲ್ಲಾ ಬಲವಾದ ಪೂರ್ವದಿಕ್ಕಿನ ಗಾಳಿಯಿಂದ ಸಮುದ್ರವನ್ನು ಹಿಂದಕ್ಕೆ ಹೋಗುವಂತೆ ಸಮುದ್ರವನ್ನು ಸರಿಸಿ, ಒಣ ನೆಲ ಕಾಣಿಸುವಂತೆ ಮಾಡಿದರು. ಆಗ ನೀರು ವಿಭಾಗವಾಯಿತು.
22 ೨೨ ಇಸ್ರಾಯೇಲರು ಸಮುದ್ರದ ಮಧ್ಯದಲ್ಲಿ ಒಣನೆಲದಲ್ಲಿ ನಡೆದುಹೋದರು. ನೀರು ಅವರ ಎಡಗಡೆ ಮತ್ತು ಬಲಗಡೆಗಳಲ್ಲಿ ಗೋಡೆಯಂತೆ ನಿಂತುಕೊಂಡಿತು.
ಹೀಗೆ ಇಸ್ರಾಯೇಲರು ಸಮುದ್ರದ ಮಧ್ಯದಲ್ಲಿ ಒಣಗಿದ ನೆಲದ ಮೇಲೆ ನಡೆದುಹೋದರು. ನೀರು ಅವರಿಗೆ ಎಡಗಡೆ ಮತ್ತು ಬಲಗಡೆಗಳಲ್ಲಿ ಗೋಡೆಯಾಗಿ ನಿಂತಿತ್ತು.
23 ೨೩ ಐಗುಪ್ತ್ಯರೂ ಅಂದರೆ ಫರೋಹನ ಕುದುರೆಗಳೂ, ರಥಗಳೂ, ರಾಹುತರೂ ಅವರನ್ನು ಬೆನ್ನಟ್ಟುವವರಾಗಿ ಅವರ ಹಿಂದೆಯೇ ಸಮುದ್ರದೊಳಗೆ ಬಂದರು.
ಈಜಿಪ್ಟಿನವರೂ ಫರೋಹನ ಎಲ್ಲಾ ಕುದುರೆಗಳೂ ಅವನ ರಥಗಳೂ ಕುದುರೆ ಸವಾರರೂ ಅವರನ್ನು ಹಿಂದಟ್ಟಿ, ಅವರ ಹಿಂದೆ ಸಮುದ್ರದ ಮಧ್ಯದಲ್ಲಿ ಸೇರಿದರು.
24 ೨೪ ಬೆಳಗಿನ ಜಾವದಲ್ಲಿ ಯೆಹೋವನು ಆ ಅಗ್ನಿ ಸ್ತಂಭ ಮತ್ತು ಮೇಘ ಸ್ತಂಭದೊಳಗಿನಿಂದ ಐಗುಪ್ತ್ಯರ ದಂಡಿನ ಕಡೆಗೆ ನೋಡಿ ಅವರಲ್ಲಿ ಗಲಿಬಿಲಿಯನ್ನು ಉಂಟುಮಾಡಿದನು.
ಬೆಳಗಿನ ಜಾವದಲ್ಲಿ ಯೆಹೋವ ದೇವರು ಅಗ್ನಿ ಮೇಘಗಳ ಸ್ತಂಭದೊಳಗಿಂದ ಈಜಿಪ್ಟಿನ ದಂಡಿನ ಮೇಲೆ ದೃಷ್ಟಿಯಿಟ್ಟು, ಈಜಿಪ್ಟಿನ ದಂಡನ್ನು ಗಾಬರಿಗೊಳಿಸಿದರು.
25 ೨೫ ಯೆಹೋವನು ಅವರ ರಥಗಳ ಚಕ್ರದ ಕೀಲುಗಳಲ್ಲಿ ವ್ಯತ್ಯಾಸ ಮಾಡಿಬಿಟ್ಟದ್ದರಿಂದ ಐಗುಪ್ತರು ಬಹು ಕಷ್ಟದಿಂದ ರಥಗಳನ್ನು ಸಾಗಿಸಿಕೊಂಡು ಹೋಗಬೇಕಾಯಿತು. ಆಗ ಐಗುಪ್ತ್ಯರು, “ನಾವು ಇಸ್ರಾಯೇಲರ ಮುಂದೆ ನಿಲ್ಲಲಾರೆವು, ಓಡಿ ಹೋಗೋಣ, ಯೆಹೋವನು ಅವರಿಗೋಸ್ಕರ ನಮಗೆ ವಿರೋಧವಾಗಿ ಯುದ್ಧಮಾಡುತ್ತಿದ್ದಾನೆ” ಎಂದು ಹೇಳಿಕೊಂಡರು.
ಅವರ ರಥಗಳ ಚಕ್ರಗಳನ್ನು ತೆಗೆದುಬಿಟ್ಟು ಕಷ್ಟದಿಂದ ಅವರು ಹೋಗುವಂತೆ ಮಾಡಿದರು. ಆಗ ಈಜಿಪ್ಟಿನವರು, “ಇಸ್ರಾಯೇಲರ ಎದುರಿನಿಂದ ಓಡಿಹೋಗೋಣ. ಏಕೆಂದರೆ ಯೆಹೋವ ದೇವರು ಈಜಿಪ್ಟಿನವರಿಗೆ ವಿರೋಧವಾಗಿ ಯುದ್ಧಮಾಡುತ್ತಾರೆ,” ಎಂದು ಹೇಳಿಕೊಂಡರು.
26 ೨೬ ಅಷ್ಟರಲ್ಲಿ ಯೆಹೋವನು ಮೋಶೆಗೆ, “ಸಮುದ್ರದ ಮೇಲೆ ನಿನ್ನ ಕೈಚಾಚು, ಆಗ ಅದರ ನೀರು ಮೊದಲಿನಂತೆ ಬಂದು ಐಗುಪ್ತ್ಯರನ್ನೂ, ಅವರ ರಥಗಳನ್ನೂ, ರಾಹುತರನ್ನೂ ಮುಳುಗಿಸುವುದು” ಎಂದು ಹೇಳಿದನು.
ಆಗ ಯೆಹೋವ ದೇವರು ಮೋಶೆಗೆ, “ಈಜಿಪ್ಟಿನವರನ್ನೂ ಅವರ ರಥಗಳ ಕುದುರೆಯ ಸವಾರರನ್ನೂ ಸಮುದ್ರವು ಮುಳುಗಿಸುವಂತೆ ಸಮುದ್ರದ ಮೇಲೆ ಕೈಚಾಚು,” ಎಂದರು.
27 ೨೭ ಮೋಶೆ ಸಮುದ್ರದ ಮೇಲೆ ಕೈಚಾಚಿದನು. ಬೆಳಗಾಗುವಾಗಲೇ ಸಮುದ್ರದ ನೀರು ಮೊದಲಿದ್ದಂತೆಯೇ ತುಂಬಿಕೊಂಡಿತು. ಐಗುಪ್ತ್ಯರು ಓಡಿಹೋಗುತ್ತಾ ಅದರ ಎದುರಾಗಿಯೇ ಬಂದರು. ಹೀಗೆ ಯೆಹೋವನು ಐಗುಪ್ತ್ಯರನ್ನು ಸಮುದ್ರದೊಳಗೆ ತಳ್ಳಿಬಿಟ್ಟನು.
ಆಗ ಮೋಶೆಯು ಸಮುದ್ರದ ಮೇಲೆ ಕೈಚಾಚಲಾಗಿ ಸಮುದ್ರವು ಬೆಳಗಾಗುವಾಗಲೇ ಮೊದಲಿನಂತೆ ತುಂಬಿಕೊಂಡಿತು. ಈಜಿಪ್ಟಿನವರು ಓಡಿಹೋಗುತ್ತಾ ಅದಕ್ಕೆ ಎದುರಾಗಿಯೇ ಬಂದರು. ಹೀಗೆ ಯೆಹೋವ ದೇವರು ಈಜಿಪ್ಟಿನವರನ್ನು ಸಮುದ್ರದೊಳಗೆ ಕೆಡವಿಬಿಟ್ಟರು.
28 ೨೮ ನೀರು ಮೊದಲಿನಂತೆ ಬಂದು ಆ ರಥಗಳನ್ನೂ, ರಾಹುತರನ್ನೂ, ಅವರ ಹಿಂದೆ ಸಮುದ್ರದೊಳಗೆ ಹೋಗಿದ್ದ ಫರೋಹನ ಸೈನ್ಯದವರೆಲ್ಲರನ್ನೂ ಮುಳುಗಿಸಿಬಿಟ್ಟಿತ್ತು, ಅವರಲ್ಲಿ ಒಬ್ಬರಾದರೂ ಉಳಿಯಲಿಲ್ಲ.
ನೀರು ತಿರುಗಿಬಂದು ರಥಗಳೂ ಕುದುರೆಗಳೂ ಸವಾರರೂ ಅವರ ಹಿಂದೆ ಸಮುದ್ರದಲ್ಲಿ ಬರುತ್ತಿದ್ದ ಫರೋಹನ ಎಲ್ಲಾ ಸೈನ್ಯವೂ ಹೀಗೆ ಒಬ್ಬರೂ ಉಳಿಯದಂತೆ ಮುಳುಗಿಸಿತು.
29 ೨೯ ಇಸ್ರಾಯೇಲರಾದರೋ, ಸಮುದ್ರದೊಳಗೆ ಒಣನೆಲದಲ್ಲೇ ನಡೆದುಹೋದರು. ನೀರು ಅವರ ಎಡಗಡೆ ಮತ್ತು ಬಲಗಡೆಗಳಲ್ಲಿ ಗೋಡೆಯಂತೆ ನಿಂತಿತ್ತು.
ಆದರೆ ಇಸ್ರಾಯೇಲರು ಸಮುದ್ರದ ಮಧ್ಯದಲ್ಲಿದ್ದ ಒಣಗಿದ ನೆಲದ ಮೇಲೆ ನಡೆದುಹೋದರು. ನೀರು ಅವರಿಗೆ ಎಡಗಡೆ ಮತ್ತು ಬಲಗಡೆಗಳಲ್ಲಿ ಗೋಡೆಯಂತಿತ್ತು.
30 ೩೦ ಆ ದಿನದಲ್ಲಿ ಯೆಹೋವನು ಇಸ್ರಾಯೇಲ್ಯರನ್ನು ಐಗುಪ್ತ್ಯರ ಕೈಯಿಂದ ರಕ್ಷಿಸಿದನು. ಐಗುಪ್ತ್ಯರು ಸತ್ತು ಸಮುದ್ರ ತೀರದಲ್ಲಿ ಬಿದ್ದಿರುವುದನ್ನು ಇಸ್ರಾಯೇಲರು ನೋಡಿದರು.
ಆ ದಿನದಲ್ಲಿ ಯೆಹೋವ ದೇವರು ಈ ಪ್ರಕಾರ ಇಸ್ರಾಯೇಲರನ್ನು ಈಜಿಪ್ಟಿನವರ ಕೈಯಿಂದ ರಕ್ಷಿಸಿದರು. ಇಸ್ರಾಯೇಲರು ಸಮುದ್ರ ತೀರದಲ್ಲಿ ಸತ್ತ ಈಜಿಪ್ಟಿನವರನ್ನು ನೋಡಿದರು.
31 ೩೧ ಯೆಹೋವನು ಐಗುಪ್ತ್ಯರಲ್ಲಿ ಮಾಡಿದ ಈ ಪರಾಕ್ರಮ ಕಾರ್ಯವನ್ನು ಇಸ್ರಾಯೇಲರು ನೋಡಿ ಯೆಹೋವನಿಗೆ ಭಯಪಟ್ಟು ಆತನಲ್ಲಿಯೂ ಆತನ ಸೇವಕನಾದ ಮೋಶೆಯಲ್ಲಿಯೂ ನಂಬಿಕೆಯನ್ನಿಟ್ಟರು.
ಈಜಿಪ್ಟಿನವರ ಮೇಲೆ ಯೆಹೋವ ದೇವರು ಮಾಡಿದ ದೊಡ್ಡ ಕಾರ್ಯವನ್ನು ನೋಡಿದಾಗ, ಇಸ್ರಾಯೇಲರು ಯೆಹೋವ ದೇವರಿಗೆ ಭಯಪಟ್ಟು, ಅವರಲ್ಲಿಯೂ ಅವರ ಸೇವಕನಾದ ಮೋಶೆಯಲ್ಲಿಯೂ ನಂಬಿಕೆಯಿಟ್ಟರು.

< ವಿಮೋಚನಕಾಂಡ 14 >