< ವಿಮೋಚನಕಾಂಡ 13 >

1 ಯೆಹೋವನು ಮೋಶೆಯ ಸಂಗಡ ಮಾತನಾಡಿ,
ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ,
2 “ಇಸ್ರಾಯೇಲರಲ್ಲಿ ಹುಟ್ಟಿರುವ ಪ್ರತಿಯೊಂದು ಚೊಚ್ಚಲ ಗಂಡನ್ನು ನನಗಾಗಿ ಪ್ರತಿಷ್ಠಿಸಬೇಕು. ಮನುಷ್ಯರಲ್ಲಾಗಲೀ, ಪಶುಗಳಲ್ಲಾಗಲೀ ಹುಟ್ಟುವ ಪ್ರಥಮ ಗರ್ಭಫಲವು ನನ್ನದಾಗಿದೆ” ಎಂದು ಹೇಳಿದನು.
“ಇಸ್ರಾಯೇಲರಲ್ಲಿ ಹುಟ್ಟಿರುವ ಪ್ರತಿಯೊಂದು ಚೊಚ್ಚಲ ಗಂಡನ್ನು ನನಗಾಗಿ ಮೀಸಲಾಗಿಡು. ಮನುಷ್ಯರಾಗಿರಲಿ, ಪಶುಪ್ರಾಣಿಗಳಾಗಿರಲಿ ಪ್ರಥಮ ಗರ್ಭಫಲವು ನನ್ನದಾಗಿದೆ,” ಎಂದರು.
3 ಮೋಶೆಯು ಇಸ್ರಾಯೇಲರಿಗೆ, “ನೀವು ದಾಸತ್ವದಲ್ಲಿದ್ದ ಐಗುಪ್ತ ದೇಶದೊಳಗಿಂದ ಬಿಡುಗಡೆಯಾದ ಈ ದಿನವನ್ನು ನೆನಪಿನಲ್ಲಿಟ್ಟುಕೊಳ್ಳಿರಿ. ಯೆಹೋವನು ತನ್ನ ಭುಜಬಲದಿಂದ ನಿಮ್ಮನ್ನು ಆ ಸ್ಥಳದಿಂದ ಬಿಡಿಸಿದ್ದಾನೆ. ಈ ದಿನದಲ್ಲಿ ನೀವು ಹುಳಿಬೆರೆಸಿದ್ದನ್ನು ತಿನ್ನಬಾರದು.
ಆಗ ಮೋಶೆಯು ಜನರಿಗೆ, “ನೀವು ಈಜಿಪ್ಟಿನ ದಾಸತ್ವದಿಂದ ಹೊರಬಂದ ಈ ದಿನವನ್ನು ಜ್ಞಾಪಕಮಾಡಿಕೊಳ್ಳಿರಿ. ಏಕೆಂದರೆ ಯೆಹೋವ ದೇವರು ನಿಮ್ಮನ್ನು ತಮ್ಮ ಭುಜಬಲದಿಂದ ಅಲ್ಲಿಂದ ಹೊರಗೆ ಬರಮಾಡಿದ್ದಾರೆ. ಹೀಗಿರುವುದರಿಂದ ಈ ದಿನ ನೀವು ಹುಳಿರೊಟ್ಟಿಯನ್ನು ತಿನ್ನಬಾರದು.
4 ಚೈತ್ರ ಮಾಸದ ಈ ದಿನದಲ್ಲೇ ನೀವು ಹೊರಗೆ ಬಂದಿರುವಿರಿ.
ಅಬೀಬ ತಿಂಗಳಿನ ಈ ದಿನದಲ್ಲಿ ನೀವು ಹೊರಗೆ ಬಂದಿದ್ದೀರಿ.
5 ಯೆಹೋವನು ನಿಮ್ಮ ಪೂರ್ವಿಕರಿಗೆ ಪ್ರಮಾಣಮಾಡಿ ಹೇಳಿದಂತೆ, ನಿಮ್ಮನ್ನು ಹಾಲೂ ಮತ್ತು ಜೇನೂ ಹರಿಯುವ ದೇಶಕ್ಕೆ ಅಂದರೆ ಕಾನಾನ್ಯರು, ಹಿತ್ತಿಯರು, ಅಮೋರಿಯರು, ಹಿವ್ವಿಯರು, ಯೆಬೂಸಿಯರು ವಾಸವಾಗಿರುವ ದೇಶಕ್ಕೆ ಕರೆದು ತಂದು ಅದನ್ನು ನಿಮಗೆ ಕೊಟ್ಟಾಗ ನೀವು ಈ ತಿಂಗಳಲ್ಲಿ ಈ ಆಚರಣೆಯನ್ನು ನಡೆಸಬೇಕು.
ಆದ್ದರಿಂದ ಯೆಹೋವ ದೇವರು ನಿಮ್ಮ ಪಿತೃಗಳಿಗೆ ಪ್ರಮಾಣ ಮಾಡಿದ ಹಾಲೂ ಜೇನೂ ಹರಿಯುವ ದೇಶಕ್ಕೆ ಅಂದರೆ ಕಾನಾನ್ಯರ, ಹಿತ್ತಿಯರ, ಅಮೋರಿಯರ, ಹಿವ್ವಿಯರ, ಯೆಬೂಸಿಯರ ದೇಶಕ್ಕೆ ನಿಮ್ಮನ್ನು ಕರೆತಂದು ಅದನ್ನು ನಿಮಗೆ ಕೊಟ್ಟಾಗ ಈ ಹಬ್ಬವನ್ನು ಈ ತಿಂಗಳಲ್ಲಿ ಆಚರಿಸಬೇಕು.
6 ಏಳು ದಿನ ನೀವು ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕು, ಏಳನೆಯ ದಿನದಲ್ಲಿ ಯೆಹೋವನ ಘನಕ್ಕಾಗಿ ಹಬ್ಬವನ್ನು ಆಚರಿಸಬೇಕು.
ನೀವು ಹುಳಿಯಿಲ್ಲದ ರೊಟ್ಟಿಯನ್ನು ಏಳು ದಿವಸ ತಿನ್ನಬೇಕು. ಏಳನೆಯ ದಿನದಲ್ಲಿ ಯೆಹೋವ ದೇವರಿಗೆ ಹಬ್ಬವನ್ನಾಚರಿಸಬೇಕು.
7 ಆ ಏಳು ದಿನವೂ ನೀವು ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕು. ಮಾತ್ರವಲ್ಲದೆ, ನಿಮ್ಮಲ್ಲಿ ಹುಳಿಹಿಟ್ಟು ಕಾಣಿಸಬಾರದು. ಇಲ್ಲವೆ ಹುಳಿಹಿಟ್ಟು ನಿಮ್ಮ ಗಡಿಯಲ್ಲೇ ಕಾಣಬಾರದು.
ಆ ಏಳು ದಿನಗಳಲ್ಲಿ ಹುಳಿಯಿಲ್ಲದ ರೊಟ್ಟಿಯನ್ನು ತಿನ್ನಬೇಕು. ಅಲ್ಲದೆ ನಿಮ್ಮ ಬಳಿಯಲ್ಲಿ ಹುಳಿಯಾಗಲಿ ಇಲ್ಲವೆ ಹುಳಿಹಿಟ್ಟಾಗಲಿ ನಿಮ್ಮ ಯಾವ ಮೇರೆಯಲ್ಲೂ ಕಾಣಬಾರದು.
8 ಆ ದಿನದಲ್ಲಿ ನೀವು ನಿಮ್ಮ ಮಕ್ಕಳಿಗೆ, ನಮ್ಮ ಜನರು ಐಗುಪ್ತ ದೇಶದಿಂದ ಹೊರಟು ಬಂದಾಗ ಯೆಹೋವನು ನಮಗೋಸ್ಕರ ಮಾಡಿದ್ದನ್ನು ನೆನಪು ಮಾಡಿಕೊಳ್ಳುವುದಕ್ಕಾಗಿ ಈ ಆಚರಣೆಯನ್ನು ಆಚರಿಸುತ್ತೇವೆ.
ಆ ದಿನದಲ್ಲಿ ನಿಮ್ಮ ಮಕ್ಕಳಿಗೆ, ‘ನಾವು ಈಜಿಪ್ಟಿನಿಂದ ಹೊರಗೆ ಬಂದಾಗ ಯೆಹೋವ ದೇವರು ನಮಗೆ ಮಾಡಿದ್ದನ್ನು ಸ್ಮರಿಸುವುದಕ್ಕಾಗಿ ಇದನ್ನು ಆಚರಿಸುತ್ತೇವೆ,’ ಎಂದು ತಿಳಿಸಬೇಕು.
9 ಯೆಹೋವನು ತನ್ನ ಭುಜಬಲದಿಂದ ನಿಮ್ಮನ್ನು ಐಗುಪ್ತ ದೇಶದಿಂದ ಬಿಡಿಸಿದ್ದರಿಂದ ಆತನ ನಿಯಮವನ್ನು ಕುರಿತು ನೀವು ಹೇಳಬೇಕು. ಈ ಆಚರಣೆಯು ನಿಮ್ಮ ಕೈಗಳ ಮೇಲೆ ಗುರುತಾಗಿಯೂ, ಹಣೆಗೆ ಕಟ್ಟಿಕೊಂಡಿರುವ ಜ್ಞಾಪಕಪಟ್ಟಿಯಂತೆಯೂ ಇರಬೇಕು.
ಏಕೆಂದರೆ ಯೆಹೋವ ದೇವರು ನಿಮ್ಮನ್ನು ತಮ್ಮ ಭುಜಬಲದಿಂದ ಈಜಿಪ್ಟಿನಿಂದ ಹೊರಗೆ ಬರಮಾಡಿದ್ದಾರೆ. ಆದ್ದರಿಂದ ದೇವರ ನಿಯಮವು ನಿಮ್ಮ ಬಾಯಲ್ಲಿ ಇರುವಂತೆ, ಈ ಆಚರಣೆಯು ನಿಮ್ಮ ಕೈಯಲ್ಲಿ ಗುರುತಾಗಿಯೂ ನಿಮ್ಮ ಹಣೆಯಲ್ಲಿ ಜ್ಞಾಪಕಾರ್ಥವಾಗಿಯೂ ಇರಬೇಕು.
10 ೧೦ ಹೀಗಿರುವುದರಿಂದ ಪ್ರತಿವರ್ಷವು ನಿಯಮಿತವಾದ ಕಾಲದಲ್ಲಿ ನೀವು ಈ ಆಚರಣೆಯನ್ನು ಮಾಡಬೇಕು.
ಹೀಗಿರುವುದರಿಂದ ನೀವು ಪ್ರತಿ ವರುಷವು ನೇಮಿತವಾದ ಕಾಲದಲ್ಲಿ ಈ ಶಾಸನವನ್ನು ಕೈಗೊಳ್ಳಬೇಕು.
11 ೧೧ “ಯೆಹೋವನು ನಿಮಗೂ ನಿಮ್ಮ ಪೂರ್ವಿಕರಿಗೂ ಪ್ರಮಾಣಮಾಡಿದ ಪ್ರಕಾರ ನಿಮ್ಮನ್ನು ಕಾನಾನ್ಯರ ದೇಶಕ್ಕೆ ಬರಮಾಡಿ ಆ ದೇಶವನ್ನು ನಿಮಗೆ ಕೊಟ್ಟ ನಂತರ,
“ಯೆಹೋವ ದೇವರು ನಿಮಗೂ ನಿಮ್ಮ ಪಿತೃಗಳಿಗೂ ಪ್ರಮಾಣ ಮಾಡಿದ ಪ್ರಕಾರ, ನಿಮ್ಮನ್ನು ಕಾನಾನ್ಯರ ದೇಶಕ್ಕೆ ಬರಮಾಡಿ, ಅದನ್ನು ನಿಮಗೆ ಕೊಟ್ಟನಂತರ,
12 ೧೨ ನಿಮ್ಮಲ್ಲಿಯೂ ನಿಮ್ಮ ಪಶುಗಳಲ್ಲಿಯೂ ಹುಟ್ಟುವ ಪ್ರಥಮ ಗರ್ಭಫಲವು ಗಂಡಾದ ಪಕ್ಷಕ್ಕೆ ಅದು ಯೆಹೋವನ ಭಾಗವೆಂದು ತಿಳಿದುಕೊಂಡು ಅದನ್ನು ಆತನಿಗೆ ಸಮರ್ಪಿಸಬೇಕು.
ನಿಮ್ಮಲ್ಲಿಯೂ ನಿಮ್ಮ ಪಶುಪ್ರಾಣಿಗಳಲ್ಲಿಯೂ ಹುಟ್ಟುವ ಪ್ರತಿಯೊಂದು ಗರ್ಭದ ಪ್ರಥಮ ಫಲವನ್ನು ನೀವು ಯೆಹೋವ ದೇವರಿಗೆ ಕೊಡಬೇಕು.
13 ೧೩ ಮೊದಲು ಹುಟ್ಟಿದ ಕತ್ತೆಯ ಚೊಚ್ಚಲಮರಿಗೆ ಬದಲಾಗಿ ಕುರಿಮರಿಯನ್ನು ಬಿಡಿಸಿಕೊಳ್ಳಬಹುದು. ಹಾಗೆ ಬಿಡಿಸದೆ ಹೋದರೆ ಅದರ ಕುತ್ತಿಗೆ ಮುರಿದು ಕೊಲ್ಲಬೇಕು. ಮನುಷ್ಯರ ಚೊಚ್ಚಲ ಗಂಡು ಮಕ್ಕಳನ್ನು ಯೆಹೋವನಿಗಾಗಿ ಬಿಡಿಸಿಕೊಳ್ಳಲೇ ಬೇಕು.
ಕತ್ತೆಯ ಚೊಚ್ಚಲು ಮರಿಗೆ ಬದಲಾಗಿ ಕುರಿಮರಿಯನ್ನು ಕೊಟ್ಟು ವಿಮೋಚಿಸಿಕೊಳ್ಳಬೇಕು. ಹಾಗೆ ವಿಮೋಚಿಸಿಕೊಳ್ಳದೆ ಹೋದರೆ ಅದರ ಕುತ್ತಿಗೆ ಮುರಿಯಬೇಕು. ಮನುಷ್ಯರಲ್ಲಿ ಚೊಚ್ಚಲ ಗಂಡು ಮಕ್ಕಳನ್ನು ಬದಲುಕೊಟ್ಟು, ವಿಮೋಚಿಸಲೇಬೇಕು.
14 ೧೪ ಮುಂದೆ ನಿಮ್ಮ ಮಕ್ಕಳು, ‘ಇದರ ಅರ್ಥ ಏನು?’ ಎಂದು ನಿಮ್ಮನ್ನು ವಿಚಾರಿಸುವಾಗ ನೀವು ಅವರಿಗೆ, ‘ನಾವು ದಾಸತ್ವದಲ್ಲಿದ್ದ ಐಗುಪ್ತ ದೇಶದಿಂದ ಯೆಹೋವನು ತನ್ನ ಭುಜಬಲದಿಂದ ನಮ್ಮನ್ನು ಬಿಡಿಸಿದನು.
“ಮುಂದೆ ಬರುವ ಕಾಲದಲ್ಲಿ ನಿಮ್ಮ ಪುತ್ರರು ನಿಮಗೆ, ‘ಇದರ ಅರ್ಥವೇನು?’ ಎಂದು ಕೇಳುವಾಗ, ನೀವು ಅವರಿಗೆ, ‘ಯೆಹೋವ ದೇವರು ತಮ್ಮ ಭುಜಬಲದಿಂದ ನಮ್ಮನ್ನು ಈಜಿಪ್ಟಿನ ದಾಸತ್ವದೊಳಗಿಂದ ಹೊರಗೆ ಬರಮಾಡಿದ್ದಾರೆ.
15 ೧೫ ಫರೋಹನು ಹಠಹಿಡಿದು ನಮ್ಮನ್ನು ಹೋಗಗೊಡಿಸದೇ ಇದ್ದಾಗ ಯೆಹೋವನು ಐಗುಪ್ತ ದೇಶದಲ್ಲಿ ಮನುಷ್ಯರ ಚೊಚ್ಚಲಮಕ್ಕಳನ್ನು, ಪಶುಗಳ ಚೊಚ್ಚಲು ಮರಿಗಳನ್ನು ಅಂತೂ ಆ ದೇಶದಲ್ಲಿ ಚೊಚ್ಚಲಾಗಿದ್ದ ಎಲ್ಲವನ್ನು ಸಂಹಾರ ಮಾಡಿದನು. ಆದಕಾರಣ ಗಂಡಾಗಿ ಹುಟ್ಟುವ ಪ್ರಥಮ ಗರ್ಭಫಲವನ್ನೆಲ್ಲಾ ನಾವು ಯೆಹೋವನಿಗೆ ಸಮರ್ಪಿಸುವುದುಂಟು. ಮನುಷ್ಯರಿಂದಾದ ಪ್ರಥಮ ಗರ್ಭಫಲವನ್ನಾದರೋ ಅದನ್ನು ಬದಲುಕೊಟ್ಟು ಬಿಡಿಸುತ್ತೇವೆ’” ಎಂದು ಹೇಳಬೇಕು.
ಫರೋಹನು ಹಟಮಾರಿತನದಿಂದ ನಮ್ಮನ್ನು ಕಳುಹಿಸದೆ ಇದ್ದಾಗ, ಯೆಹೋವ ದೇವರು ಈಜಿಪ್ಟ್ ದೇಶದಲ್ಲಿ ಚೊಚ್ಚಲಾದದ್ದನ್ನೆಲ್ಲಾ ಎಂದರೆ, ಮನುಷ್ಯರ ಹಾಗೂ ಪಶುಪ್ರಾಣಿಗಳ ಚೊಚ್ಚಲಾದವುಗಳನ್ನು ಕೊಂದುಹಾಕಿದರು. ಆದ್ದರಿಂದ ಚೊಚ್ಚಲ ಗಂಡುಗಳನ್ನೆಲ್ಲಾ ಯೆಹೋವ ದೇವರಿಗೆ ಅರ್ಪಿಸುತ್ತೇವೆ. ನಮ್ಮ ಪುತ್ರರಲ್ಲಿ ಚೊಚ್ಚಲಾದವರೆಲ್ಲರನ್ನು ವಿಮೋಚಿಸುತ್ತೇವೆ,’
16 ೧೬ ಯೆಹೋವನು ಭುಜಬಲದಿಂದ ನಿಮ್ಮನ್ನು ಐಗುಪ್ತ ದೇಶದಿಂದ ಬಿಡಿಸಿದ ಸಂಗತಿಯನ್ನು ನೀವು ಜ್ಞಾಪಕದಲ್ಲಿಟ್ಟುಕೊಳ್ಳುವುದರ ಗುರುತಾಗಿ ಅದನ್ನು ನಿಮ್ಮ ಕೈಗಳ ಮೇಲೆಯೂ, ಹಣೆಯ ಮೇಲೆ ಜ್ಞಾಪಕಪಟ್ಟಿಯಂತೆಯೂ ಇರಬೇಕು.
ಇದು ನಿಮ್ಮ ಕೈಯಲ್ಲಿ ಗುರುತಾಗಿಯೂ ನಿಮ್ಮ ಹಣೆಯ ಮೇಲೆ ಸಂಕೇತವಾಗಿಯೂ ಇರಲಿ. ಏಕೆಂದರೆ ಯೆಹೋವ ದೇವರು ತಮ್ಮ ಭುಜಬಲದಿಂದ ನಮ್ಮನ್ನು ಈಜಿಪ್ಟಿನೊಳಗಿಂದ ಹೊರಗೆ ಬರಮಾಡಿದ್ದಾರೆ ಎಂದು ಹೇಳಬೇಕು,” ಎಂದರು.
17 ೧೭ ಫರೋಹನು ಇಸ್ರಾಯೇಲರಿಗೆ ಹೋಗುವುದಕ್ಕೆ ಅಪ್ಪಣೆ ಕೊಟ್ಟಾಗ, ಫಿಲಿಷ್ಟಿಯರ ದೇಶದ ಮಾರ್ಗವು ಸಮೀಪವಾಗಿದ್ದರೂ ದೇವರು ಆ ದಾರಿಯಲ್ಲಿ ಅವರನ್ನು ಹೋಗಗೊಡಿಸಲಿಲ್ಲ. ಏಕೆಂದರೆ, “ದೇವರು, ಜನರು ಯುದ್ಧವನ್ನು ನೋಡಿ ಗಾಬರಿಯಾಗಿ ಮನಸ್ಸನ್ನು ಬದಲಾಯಿಸಿಕೊಂಡು ಐಗುಪ್ತಕ್ಕೆ ಹಿಂದಿರುಗಿ ಹೋದಾರೂ” ಎಂದು ಹೇಳಿದನು.
ಫರೋಹನು ಜನರನ್ನು ಕಳುಹಿಸಿಬಿಟ್ಟಾಗ, ಫಿಲಿಷ್ಟಿಯರ ದೇಶದ ದಾರಿಯು ಸಮೀಪವಿದ್ದರೂ ದೇವರು ಅವರನ್ನು ಅದರಲ್ಲಿ ನಡೆಸಲಿಲ್ಲ. ಏಕೆಂದರೆ ದೇವರು, “ಜನರು ಯುದ್ಧವನ್ನು ನೋಡಿ, ಮನಸ್ಸನ್ನು ಬೇರೆಮಾಡಿಕೊಂಡು, ಈಜಿಪ್ಟಿಗೆ ಹಿಂದಿರುಗಿಯಾರು,” ಎಂದು ಹೇಳಿದರು.
18 ೧೮ ಹೀಗಿರುವುದರಿಂದ ಯೆಹೋವನು ಜನರನ್ನು ಕೆಂಪುಸಮುದ್ರದ ಸಮೀಪದಲ್ಲಿರುವ ಮರುಭೂಮಿಯನ್ನು ಬಳಸಿಕೊಂಡು ಹೋಗುವಂತೆ ಮಾಡಿದನು. ಆದರೂ ಇಸ್ರಾಯೇಲರು ಯುದ್ಧಸನ್ನದ್ದರಾಗಿ ಐಗುಪ್ತ ದೇಶದೊಳಗಿಂದ ಹೊರಟುಬಂದರು.
ಹೀಗಿರುವುದರಿಂದ ಯೆಹೋವ ದೇವರು ಜನರನ್ನು ಕೆಂಪುಸಮುದ್ರದ ಮರುಭೂಮಿಯಲ್ಲಿ ಸುತ್ತಿಕೊಂಡು ಹೋಗುವಂತೆ ಮಾಡಿದರು. ಇಸ್ರಾಯೇಲರು ಯುದ್ಧಸನ್ನದ್ಧರಾಗಿ ಈಜಿಪ್ಟ್ ದೇಶದೊಳಗಿಂದ ಹೋದರು.
19 ೧೯ ಇದಲ್ಲದೆ ಯೋಸೇಫನು ಇಸ್ರಾಯೇಲರಿಗೆ, “ದೇವರು ನಿಸ್ಸಂದೇಹವಾಗಿ ನಿಮ್ಮನ್ನು ಪರಾಂಬರಿಸಿ ತನ್ನ ವಾಗ್ದಾನವನ್ನು ನೆರವೇರಿಸುವವನಾಗಿರುವುದರಿಂದ ನೀವು ಹೋಗುವಾಗ ನನ್ನ ದೇಹದ ಅಸ್ತಿಮೂಳೆಗಳನ್ನು ನಿಮ್ಮ ಸಂಗಡ ತೆಗೆದುಕೊಂಡು ಹೋಗಬೇಕು” ಎಂದು ಖಂಡಿತವಾದ ಪ್ರಮಾಣವನ್ನು ಮಾಡಿಸಿದ್ದರಿಂದ ಮೋಶೆಯು ಅವನ ಮೂಳೆಗಳನ್ನು ತನ್ನ ಸಂಗಡ ತೆಗೆದುಕೊಂಡು ಹೋದನು.
ಆಗ ಮೋಶೆಯು ತನ್ನೊಂದಿಗೆ ಯೋಸೇಫನ ಎಲುಬುಗಳನ್ನು ತೆಗೆದುಕೊಂಡು ಹೋದನು. ಏಕೆಂದರೆ ಯೋಸೇಫನು ಇಸ್ರಾಯೇಲರಿಗೆ, “ದೇವರು ನಿಜವಾಗಿಯೂ ನಿಮ್ಮ ಸಹಾಯಕ್ಕೆ ಬರುವರು. ಆಗ ನೀವು ನನ್ನ ಎಲುಬುಗಳನ್ನು ಇಲ್ಲಿಂದ ನಿಮ್ಮ ಕೂಡ ತೆಗೆದುಕೊಂಡು ಹೋಗಬೇಕು,” ಎಂದು ಹೇಳಿ ಅವರಿಂದ ದೃಢಪ್ರಮಾಣ ಮಾಡಿಸಿದ್ದನು.
20 ೨೦ ಅವರು ಸುಕ್ಕೋತಿನಿಂದ ಪ್ರಯಾಣ ಮಾಡಿ ಮರಳುಗಾಡಿನ ಅಂಚಿನಲ್ಲಿರುವ ಏತಾಮಿನಲ್ಲಿ ಪಾಳೆಯಮಾಡಿ ಇಳಿದುಕೊಂಡರು.
ಹೀಗೆ ಅವರು ಸುಕ್ಕೋತಿನಿಂದ ಪ್ರಯಾಣಮಾಡಿ, ಏತಾಮಿನ ಮರುಭೂಮಿಯ ಅಂಚಿನಲ್ಲಿ ಇಳಿದುಕೊಂಡರು.
21 ೨೧ ಯೆಹೋವನು ಹಗಲು ಹೊತ್ತಿನಲ್ಲಿ ದಾರಿತೋರಿಸುವುದಕ್ಕೆ ಮೇಘಸ್ತಂಭದಲ್ಲಿಯೂ, ರಾತ್ರಿವೇಳೆಯಲ್ಲಿ ಬೆಳಕುಕೊಡುವುದಕ್ಕೆ ಅಗ್ನಿಸ್ತಂಭದಲ್ಲಿಯೂ ಇದ್ದು ಅವನ್ನು ನಡೆಸುತಿದ್ದನು. ಈ ರೀತಿಯಲ್ಲಿ ಅವರು ಹಗಲಿರುಳು ಪ್ರಯಾಣಮಾಡಿದರು.
ಇದಲ್ಲದೆ ಅವರು ಹಗಲೂ ರಾತ್ರಿಯೂ ಪ್ರಯಾಣ ಮಾಡುವ ಹಾಗೆ ಯೆಹೋವ ದೇವರು ಹಗಲಲ್ಲಿ ಅವರಿಗೆ ದಾರಿ ತೋರಿಸುವುದಕ್ಕೆ ಮೇಘದ ಸ್ತಂಭದಲ್ಲಿಯೂ ರಾತ್ರಿಯಲ್ಲಿ ಅವರಿಗೆ ಬೆಳಕು ಕೊಡುವುದಕ್ಕೆ ಅಗ್ನಿಯ ಸ್ತಂಭದಲ್ಲಿಯೂ ಅವರ ಮುಂದೆ ಹೋದರು.
22 ೨೨ ಹಗಲಿನಲ್ಲಿ ಮೇಘಸ್ತಂಭವಾಗಿ, ರಾತ್ರಿಯಲ್ಲಿ ಅಗ್ನಿಸ್ತಂಭವಾಗಿ ಜನರನ್ನು ಬಿಟ್ಟು ಹೋಗದೆ ಅಲ್ಲಿಯೇ ಇರುತ್ತಿದ್ದನು.
ದೇವರು ಹಗಲಲ್ಲಿ ಮೇಘಸ್ತಂಭವನ್ನೂ ರಾತ್ರಿಯಲ್ಲಿ ಅಗ್ನಿಸ್ತಂಭವನ್ನೂ ಜನರ ಎದುರಿನಿಂದ ತೆಗೆದುಬಿಡಲಿಲ್ಲ.

< ವಿಮೋಚನಕಾಂಡ 13 >