< ಎಸ್ತೇರಳು 4 >

1 ಮೊರ್ದೆಕೈಯು ನಡೆದದ್ದನ್ನೆಲ್ಲಾ ಕೇಳಿದಾಗ ತನ್ನ ಬಟ್ಟೆಗಳನ್ನು ಹರಿದುಕೊಂಡು, ಗೋಣಿತಟ್ಟನ್ನು ಸುತ್ತಿಕೊಂಡು, ಬೂದಿಯನ್ನು ತಲೆಯ ಮೇಲೆ ಹಾಕಿಕೊಂಡು, ಪಟ್ಟಣದ ಮಧ್ಯದಲ್ಲಿ ಹೋಗುತ್ತಾ ಮಹಾದುಃಖದಿಂದ ಗೋಳಾಡಿದನು. 2 ಗೋಣಿತಟ್ಟು ಕಟ್ಟಿಕೊಂಡವರು ಅರಮನೆಯ ಒಳಗೆ ಹೋಗಬಾರದೆಂದು ಅಪ್ಪಣೆಯಾಗಿತ್ತು. ಆದುದರಿಂದ ಅವನು ಅರಮನೆಯ ಹೆಬ್ಬಾಗಿಲಿನ ಮುಂದೆ ಬಂದನು. 3 ಯಾವ ಯಾವ ಸಂಸ್ಥಾನಗಳಲ್ಲಿ ಅರಸನ ಆಜ್ಞೆಯೂ ಮತ್ತು ನಿರ್ಣಯವೂ ಪ್ರಕಟವಾದವೋ ಅಲ್ಲೆಲ್ಲಾ ಯೆಹೂದ್ಯರೊಳಗೆ ಮಹಾದುಃಖವೂ, ಉಪವಾಸ, ರೋದನೆ ಮತ್ತು ಪ್ರಲಾಪಗಳೂ ಉಂಟಾದವು. ಅನೇಕರು ಗೋಣಿತಟ್ಟನ್ನು ಹಾಸಿ ಬೂದಿಹಾಕಿಕೊಂಡು ಅದರ ಮೇಲೆ ಕುಳಿತುಕೊಂಡರು. 4 ಎಸ್ತೇರಳ ಸೇವಕಿಯರೂ ಕಂಚುಕಿಗಳೂ ರಾಣಿಯಾದ ಆಕೆಯ ಬಳಿಗೆ ಬಂದು ಈ ವಿಚಾರವನ್ನು ತಿಳಿಸಿದಾಗ ಆಕೆಯು ಬಹಳವಾಗಿ ಕಳವಳಗೊಂಡು ಮೊರ್ದೆಕೈಗೆ ವಸ್ತ್ರಗಳನ್ನು ಕಳುಹಿಸಿ, “ಗೋಣಿತಟ್ಟನ್ನು ತೆಗೆದುಬಿಟ್ಟು, ಇವುಗಳನ್ನು ಧರಿಸಿಕೋ” ಎಂದು ಹೇಳಿಕಳುಹಿಸಿದಳು. ಆದರೆ ಅವನು ಅವುಗಳನ್ನು ಸ್ವೀಕರಿಸಲಿಲ್ಲ. 5 ಆಗ ಆಕೆ ಅರಸನಿಂದ ತನ್ನ ಸೇವೆಗೋಸ್ಕರ ನೇಮಿಸಲ್ಪಟ್ಟಿದ್ದ ಹತಾಕನೆಂಬ ರಾಜ ಕಂಚುಕಿಯನ್ನು ಕರೆಯಿಸಿ, “ನೀನು ಮೊರ್ದೆಕೈಯ ಬಳಿಗೆ ಹೋಗಿ, ಇದಕ್ಕೆ ಕಾರಣವೇನು ಎಂದು ವಿಚಾರಿಸಿಕೊಂಡು ಬಾ” ಎಂದು ಹೇಳಿಕಳುಹಿಸಿದಳು. 6 ಹತಾಕನು ಅರಮನೆಯ ಬಾಗಿಲಿನ ಮುಂದಿರುವ ಪಟ್ಟಣದ ಬಯಲಿಗೆ ಮೊರ್ದೆಕೈಯ ಹತ್ತಿರ ಹೋದನು. 7 ಮೊರ್ದೆಕೈಯು ತನಗೆ ಸಂಭವಿಸಿದ್ದೆಲ್ಲವನ್ನೂ, ಹಾಮಾನನು ಯೆಹೂದ್ಯರನ್ನು ನಾಶಮಾಡಲು ರಾಜಭಂಡಾರಕ್ಕೆ ಕೊಡುತ್ತೇನೆಂದು ನಿಗದಿಪಡಿಸಿದ ಬೆಳ್ಳಿಯ ಹಣ ಇಷ್ಟೆಂಬುದನ್ನೂ ಅವನಿಗೆ ತಿಳಿಸಿದನು. 8 ಅದರೊಂದಿಗೆ ತಮ್ಮನ್ನು ಸಂಹರಿಸುವುದಕ್ಕೋಸ್ಕರ ಶೂಷನಿನಲ್ಲಿ ಪ್ರಕಟವಾದ ರಾಜಶಾಸನದ ಒಂದು ಪ್ರತಿಯನ್ನು ಕೊಟ್ಟು, “ಇದನ್ನು ಎಸ್ತೇರಳಿಗೆ ತೋರಿಸಿ ವಿವರಿಸು; ಮತ್ತು ಆಕೆಯು ಅರಸನ ಬಳಿಗೆ ಹೋಗಿ ಅವನು ಕೃಪೆ ತೋರಿಸುವಂತೆ ಅವನ ಸನ್ನಿಧಿಯಲ್ಲಿ ತನ್ನ ಜನರಿಗೋಸ್ಕರ ಬಿನ್ನಹ ಮಾಡಲಿ” ಎಂದು ಹೇಳಿಕಳುಹಿಸಿದನು. 9 ಹತಾಕನು ಹಿಂದಿರುಗಿ ಬಂದು ಎಸ್ತೇರಳಿಗೆ ಮೊರ್ದೆಕೈಯ ಮಾತುಗಳನ್ನು ತಿಳಿಸಿದನು. 10 ೧೦ ಎಸ್ತೇರಳು ಅವನನ್ನು ಪುನಃ ಮೊರ್ದೆಕೈಯ ಬಳಿಗೆ ಕಳುಹಿಸಿ, 11 ೧೧ “ಅರಸನು ತನ್ನ ಬಳಿಗೆ ಬರಲು ಹೇಳಿದ ಹೊರತು ಅವನ ಬಳಿಗೆ ಒಳಗಣ ಪ್ರಾಕಾರಕ್ಕೆ ಹೋಗುವವರು ಮರಣದಂಡನೆಗೆ ಪಾತ್ರರಾಗುವರು ಎಂಬ ಒಂದೇ ನಿಯಮವು ಎಲ್ಲಾ ಸ್ತ್ರೀಪುರುಷರಿಗುಂಟು. ಯಾರ ಕಡೆಗೆ ಅವನು ತನ್ನ ಸುವರ್ಣದಂಡವನ್ನು ಚಾಚುವನೋ ಅವರು ಮಾತ್ರ ಜೀವದಿಂದುಳಿಯುವರು ಎಂಬುದು ಅರಸನ ಎಲ್ಲಾ ಸೇವಕರಿಗೂ ಮತ್ತು ಸಂಸ್ಥಾನಗಳ ಎಲ್ಲಾ ಜನರಿಗೂ ಗೊತ್ತು. ನನಗಂತೂ ಮೂವತ್ತು ದಿನಗಳಿಂದ ಅರಸನ ಬಳಿಗೆ ಹೋಗುವುದಕ್ಕೆ ಆಮಂತ್ರಣವಾಗಲಿಲ್ಲ” ಎಂದು ಹೇಳಿಸಿದಳು. 12 ೧೨ ಹತಾಕನು ಎಸ್ತೇರಳ ಮಾತುಗಳನ್ನು ಮೊರ್ದೆಕೈಗೆ ತಿಳಿಸಿದನು. 13 ೧೩ ಅವನು ಎಸ್ತೇರಳಿಗೆ, “ಯೆಹೂದ್ಯರೆಲ್ಲಾ ನಾಶವಾದರೂ ನಾನೊಬ್ಬಳು ಅರಮನೆಯಲ್ಲಿರುವುದರಿಂದ ಉಳಿಯುವೆನು ಎಂದು ಭಾವಿಸಿಕೊಳ್ಳಬೇಡ. 14 ೧೪ ನೀನು ಈಗ ಸುಮ್ಮನಿದ್ದುಬಿಟ್ಟರೆ ಬೇರೆ ಕಡೆಯಿಂದ ಯೆಹೂದ್ಯರಿಗೆ ಸಹಾಯವೂ, ವಿಮೋಚನೆಯೂ ಉಂಟಾದಾವು; ನೀನಾದರೋ ನಿನ್ನ ತಂದೆಯ ಮನೆಯವರೊಡನೆ ನಾಶವಾಗುವಿ. ಇದಲ್ಲದೆ ನೀನು ಇಂಥ ಸಂದರ್ಭಕ್ಕಾಗಿಯೇ ಪಟ್ಟಕ್ಕೆ ಬಂದಿರಬಹುದು” ಎಂದು ಹೇಳಿಕಳುಹಿಸಿದನು. 15 ೧೫ ಆಗ ಎಸ್ತೇರಳು ಮೊರ್ದೆಕೈಗೆ, “ನೀನು ಹೋಗಿ ಶೂಷನಿನಲ್ಲಿ ಸಿಕ್ಕುವ ಎಲ್ಲಾ ಯೆಹೂದ್ಯರನ್ನು ಕೂಡಿಸು; 16 ೧೬ ನೀವೆಲ್ಲರೂ ಮೂರು ದಿನ ಹಗಲಿರುಳು ಅನ್ನಪಾನಗಳನ್ನು ಬಿಟ್ಟು ನನಗೋಸ್ಕರ ಉಪವಾಸ ಮಾಡಿರಿ; ಅದರಂತೆ ನಾನೂ ನನ್ನ ಸೇವಕಿಯರೊಡನೆ ಉಪವಾಸದಿಂದಿರುವೆನು. ಅನಂತರ ನಾನು ವಿಧಿಮೀರಿ ಅರಸನ ಬಳಿಗೆ ಹೋಗುವೆನು, ಸತ್ತರೆ ಸಾಯುತ್ತೇನೆ” ಎಂದು ಹೇಳಿಸಿದಳು. 17 ೧೭ ಮೊರ್ದೆಕೈ ಹಿಂದಿರುಗಿ ಹೋಗಿ ಎಸ್ತೇರಳು ಹೇಳಿದಂತೆಯೇ ಮಾಡಿದನು.

< ಎಸ್ತೇರಳು 4 >