< ಧರ್ಮೋಪದೇಶಕಾಂಡ 9 >

1 ಇಸ್ರಾಯೇಲರೇ ಕೇಳಿರಿ, ನಿಮಗಿಂತ ಮಹಾ ಬಲಿಷ್ಠ ಜನಾಂಗಗಳನ್ನೂ ಮತ್ತು ಆಕಾಶವನ್ನು ಮುಟ್ಟುವ ಕೋಟೆಕೊತ್ತಲುಗಳುಳ್ಳ ಪಟ್ಟಣಗಳನ್ನೂ ಸ್ವಾಧೀನ ಮಾಡಿಕೊಳ್ಳುವುದಕ್ಕೆ ನೀವು ಈ ಯೊರ್ದನ್ ನದಿಯನ್ನು ಇಂದು ದಾಟಲಿದ್ದೀರಿ. 2 ಆ ದೇಶದ ಅನಾಕ್ಯರು ಬಲಿಷ್ಠರು ಮತ್ತು ಎತ್ತರವಾದ ಪುರುಷರು ಆಗಿದ್ದಾರೆ. ಅವರ ವಿಷಯ ನಿಮಗೆ ತಿಳಿದೇ ಇದೆ, “ಅನಾಕ್ಯರ ಮುಂದೆ ನಿಲ್ಲಬಲ್ಲವರು ಯಾರಿದ್ದಾರೆ?” ಎಂಬ ಮಾತನ್ನು ಕೇಳಿದ್ದೀರಿ. 3 ಆದುದರಿಂದ ನಿಮ್ಮ ದೇವರಾದ ಯೆಹೋವನು ತಾನೇ ವಿರೋಧಿಗಳನ್ನು ದಹಿಸುವ ಬೆಂಕಿಯೋಪಾದಿಯಲ್ಲಿ ನಿಮ್ಮ ಮುಂದೆ ಹೋಗುತ್ತಾನೆಂದು ಈಗ ತಿಳಿದುಕೊಳ್ಳಿರಿ. ಆತನೇ ಅವರನ್ನು ನಾಶಮಾಡುವನು; ಆತನೇ ಅವರನ್ನು ನಿಮ್ಮ ಮುಂದೆ ಸೋತುಹೋಗುವಂತೆ ಮಾಡುವನು. ಯೆಹೋವನು ನಿಮಗೆ ಹೇಳಿದಂತೆ ನೀವು ಅವರನ್ನು ಹೊರಡಿಸಿ, ಬೇಗನೆ ನಾಶಮಾಡುವಿರಿ. 4 ನಿಮ್ಮ ದೇವರಾದ ಯೆಹೋವನು ಅವರನ್ನು ನಿಮ್ಮ ಎದುರಿನಿಂದ ಹೊರಡಿಸಿದ ನಂತರ ನೀವು ನಿಮ್ಮ ಮನಸ್ಸಿನಲ್ಲಿ, “ಯೆಹೋವನು ನಮ್ಮನ್ನು ಈ ದೇಶಕ್ಕೆ ಕರೆತಂದು ಅದನ್ನು ನಮಗೆ ಸ್ವಾಧೀನಪಡಿಸಿದ್ದಕ್ಕೆ ಕಾರಣ ನಮ್ಮ ಸದಾಚಾರವೇ” ಅಂದುಕೊಳ್ಳಬಾರದು. ಆ ಜನಾಂಗಗಳ ದುರ್ನಡತೆಯ ದೆಸೆಯಿಂದಲೇ ಯೆಹೋವನು ನಿಮ್ಮ ಎದುರಿನಿಂದ ಅವರನ್ನು ಹೊರಡಿಸುತ್ತಾನೆ. 5 ನೀವು ಅವರ ದೇಶಕ್ಕೆ ಬಂದು ಅದನ್ನು ಸ್ವಾಧೀನ ಮಾಡಿಕೊಳ್ಳುವುದಕ್ಕೆ ನಿಮ್ಮ ಸದಾಚಾರವಾಗಲಿ, ನಿಮ್ಮ ಒಳ್ಳೆಯ ಸ್ವಭಾವವೇ ಆಗಲಿ ಕಾರಣವಲ್ಲ. ಆ ಜನಾಂಗಗಳ ದುರ್ನಡತೆಯ ದೆಸೆಯಿಂದಲೂ ನಿಮ್ಮ ದೇವರಾದ ಯೆಹೋವನು ನಿಮ್ಮ ಪೂರ್ವಿಕರಾದ ಅಬ್ರಹಾಮ್, ಇಸಾಕ್ ಮತ್ತು ಯಾಕೋಬರಿಗೆ ಪ್ರಮಾಣಪೂರ್ವಕವಾಗಿ ಮಾಡಿದ ವಾಗ್ದಾನವನ್ನು ನೆರವೇರಿಸಬೇಕೆಂದಿದ್ದರಿಂದಲೂ ಅವರನ್ನು ನಿಮ್ಮ ಎದುರಿನಿಂದ ಹೊರಡಿಸಿಬಿಡುತ್ತಾನೆ. 6 ನಿಮ್ಮ ದೇವರಾದ ಯೆಹೋವನು ಆ ಉತ್ತಮ ದೇಶವನ್ನು ನಿಮಗೆ ಸ್ವದೇಶವಾಗಿ ಕೊಡುವುದು ನಿಮ್ಮ ಸದಾಚಾರದ ಫಲವಲ್ಲವೆಂದು ಚೆನ್ನಾಗಿ ತಿಳಿದುಕೊಳ್ಳಿರಿ. ನೀವು ಆತನ ಆಜ್ಞೆಯನ್ನು ಪಾಲಿಸದ ಮೊಂಡ ಜನರೇ ಆಗಿದ್ದೀರಿ. 7 ನೀವು ಅರಣ್ಯದಲ್ಲಿ ನಿಮ್ಮ ದೇವರಾದ ಯೆಹೋವನಿಗೆ ಕೋಪಹುಟ್ಟಿಸಿದ್ದನ್ನು ನೆನಪುಮಾಡಿಕೊಳ್ಳಿರಿ; ಅದನ್ನು ಮರೆಯಬೇಡಿರಿ. ನೀವು ಐಗುಪ್ತದೇಶವನ್ನು ಬಿಟ್ಟಂದಿನಿಂದ ಈ ಸ್ಥಳಕ್ಕೆ ಬಂದ ದಿನದವರೆಗೂ ಯೆಹೋವನ ಆಜ್ಞೆಗಳನ್ನು ಧಿಕ್ಕರಿಸುವವರಾಗಿದ್ದೀರಿ. 8 ಉದಾಹರಣೆಗೆ, ಹೋರೇಬಿನಲ್ಲಿ ನೀವು ಯೆಹೋವನಿಗೆ ಕೋಪವನ್ನು ಹುಟ್ಟಿಸಿದಿರಿ. ಆಗ ಆತನು ಬಲು ಸಿಟ್ಟುಗೊಂಡು ನಿಮ್ಮನ್ನು ಧ್ವಂಸ ಮಾಡಬೇಕೆಂದಿದ್ದನು. 9 ಯೆಹೋವನು ನಿಮ್ಮ ಸಂಗಡ ಮಾಡಿದ ನಿಬಂಧನೆಯನ್ನು ಬರೆದ ಆ ಕಲ್ಲಿನ ಹಲಿಗೆಗಳನ್ನು ತೆಗೆದುಕೊಳ್ಳುವುದಕ್ಕೆ ನಾನು ಬೆಟ್ಟವನ್ನು ಹತ್ತಿದ್ದಾಗ ನಾನು ಅನ್ನ ಪಾನಗಳನ್ನು ಬಿಟ್ಟು ಹಗಲಿರುಳು ನಲ್ವತ್ತು ದಿನ ಆ ಬೆಟ್ಟದಲ್ಲಿದ್ದೆನು. 10 ೧೦ ಆಗ ಯೆಹೋವನು ತನ್ನ ಕೈಯಿಂದಲೇ ಬರೆದ ಆ ಎರಡು ಕಲ್ಲಿನ ಹಲಿಗೆಗಳನ್ನು ನನ್ನ ವಶಕ್ಕೆ ಕೊಟ್ಟನು. ನೀವು ಸಭೆ ಕೂಡಿದ ದಿನದಲ್ಲಿ ಯೆಹೋವನು ಆ ಬೆಟ್ಟದ ಮೇಲೆ ಅಗ್ನಿಜ್ವಾಲೆಯೊಳಗಿಂದ ನಿಮ್ಮ ಸಂಗಡ ಹೇಳಿದ ಮಾತುಗಳು ಆ ಹಲಿಗೆಗಳಲ್ಲಿದ್ದವು. 11 ೧೧ ಆ ನಲ್ವತ್ತು ದಿನಗಳು ಕಳೆದ ಮೇಲೆ ಯೆಹೋವನು ತನ್ನ ಆಜ್ಞೆಗಳಿರುವ ಆ ಎರಡು ಕಲ್ಲಿನ ಹಲಿಗೆಗಳನ್ನು ನನಗೆ ಕೊಟ್ಟು, “ನೀನು ಬೇಗ ಇಲ್ಲಿಂದ ಹೋಗು; 12 ೧೨ ನೀನು ಐಗುಪ್ತ ದೇಶದಿಂದ ಕರೆದುಕೊಂಡು ಬಂದ ನಿನ್ನ ಜನರು ಕೆಟ್ಟುಹೋದರು. ನಾನು ಅವರಿಗೆ ಆಜ್ಞಾಪಿಸಿದ ಮಾರ್ಗವನ್ನು ಅವರು ಬೇಗನೆ ಬಿಟ್ಟುಹೋಗಿ ತಮಗೆ ಬೇಕಾದ ಲೋಹದ ವಿಗ್ರಹವನ್ನು ಮಾಡಿಸಿಕೊಂಡಿದ್ದಾರೆ” ಎಂದು ಹೇಳಿದನು. 13 ೧೩ ಅದಲ್ಲದೆ ಆತನು ನನಗೆ, “ಈ ಜನರ ಸ್ವಭಾವವನ್ನು ನಾನು ನೋಡುತ್ತಾ ಬಂದಿದ್ದೇನೆ; ಇವರು ನನ್ನ ಆಜ್ಞೆಗೆ ಅವಿಧೇಯರಾದವರು. 14 ೧೪ ಬಿಡು, ನಾನು ಅವರನ್ನು ನಾಶಮಾಡಿ, ಅವರ ಹೆಸರನ್ನು ಭೂಮಿಯ ಮೇಲೆ ಉಳಿಯದಂತೆ ಮಾಡುವೆನು. ತರುವಾಯ ಅವರಿಗಿಂತಲೂ ಮಹಾ ಬಲಿಷ್ಠ ಜನಾಂಗವು ನಿನ್ನಿಂದುಂಟಾಗುವಂತೆ ಮಾಡುವೆನು” ಎಂದು ಹೇಳಿದನು. 15 ೧೫ ಆಗ ನಾನು ಆ ಎರಡು ಆಜ್ಞಾಶಾಸನಗಳನ್ನು ನನ್ನ ಎರಡು ಕೈಗಳಲ್ಲಿ ಹಿಡಿದುಕೊಂಡು ಬೆಂಕಿಯಿಂದ ಉರಿಯುವ ಆ ಬೆಟ್ಟದಿಂದ ಇಳಿದು ಬಂದು ನೋಡಲಾಗಿ 16 ೧೬ ನೀವು ನಿಮ್ಮ ದೇವರಾದ ಯೆಹೋವನಿಗೆ ದ್ರೋಹಿಗಳಾಗಿ ಲೋಹದ ಬಸವನನ್ನು ಮಾಡಿಸಿಕೊಂಡು, ಯೆಹೋವನು ನಿಮಗೆ ಆಜ್ಞಾಪಿಸಿದ್ದ ಮಾರ್ಗವನ್ನು ಬೇಗನೆ ಬಿಟ್ಟು ಹೋದದ್ದು ನನಗೆ ಕಂಡುಬಂತು. 17 ೧೭ ಅದನ್ನು ನೋಡಿ ನಾನು ಕೈಯಲ್ಲಿದ್ದ ಆ ಎರಡು ಶಿಲಾಶಾಸನಗಳನ್ನು ನಿಮಗೆದುರಾಗಿಯೇ ನೆಲಕ್ಕೆ ಹಾಕಿ ಒಡೆದುಬಿಟ್ಟೆನು. 18 ೧೮ ನೀವು ಹೀಗೆ ಅಪರಾಧಮಾಡಿ ಯೆಹೋವನ ದೃಷ್ಟಿಯಲ್ಲಿ ಕೆಟ್ಟದ್ದನ್ನು ನಡಿಸಿ ಆತನನ್ನು ಕೋಪಗೊಳಿಸಿದ ಕಾರಣ ನಾನು ಮೊದಲಿನಂತೆ ಅನ್ನ ಪಾನಗಳನ್ನು ಬಿಟ್ಟು ನಲ್ವತ್ತು ದಿನಗಳು ಹಗಲಿರುಳು ಯೆಹೋವನ ಸನ್ನಿಧಿಯಲ್ಲೇ ಬಿದ್ದಿದ್ದೆನು. 19 ೧೯ ಯೆಹೋವನು ನಿಮ್ಮ ಮೇಲೆ ಬಹುಕೋಪಗೊಂಡು ನಿಮ್ಮನ್ನು ನಾಶಮಾಡಬೇಕೆಂದು ಆಲೋಚಿಸಿದ್ದರಿಂದ ನಾನು ಹೆದರಿಕೊಂಡೆನು. ಆದರೆ ಆ ಸಮಯದಲ್ಲಿಯೂ ಆತನು ನನ್ನ ಮನವಿಯನ್ನು ಕೇಳಿದನು. 20 ೨೦ ಅದಲ್ಲದೆ ಯೆಹೋವನು ಆರೋನನ ಮೇಲೆ ಬಹಳ ಸಿಟ್ಟುಗೊಂಡು ಅವನನ್ನೂ ನಾಶಮಾಡಬೇಕೆಂದಿದ್ದರಿಂದ ನಾನು ಅವನಿಗೋಸ್ಕರವಾಗಿಯೂ ಆ ಸಮಯದದಲ್ಲಿ ಪ್ರಾರ್ಥಿಸಿದೆನು. 21 ೨೧ ಮತ್ತು ನೀವು ಯಾವುದರ ಮೂಲಕ ಪಾಪವನ್ನು ಮಾಡಿದ್ದಿರೋ ಆ ಬಸವನನ್ನು ನಾನು ತೆಗೆದುಕೊಂಡು ಬೆಂಕಿಯಿಂದ ಸುಟ್ಟು, ಒಡೆದು, ಅರೆದು ಧೂಳುಮಾಡಿ, ಬೆಟ್ಟದಿಂದ ಹರಿಯುವ ಹಳ್ಳದಲ್ಲಿ ಬೀಸಾಡಿಬಿಟ್ಟೆ. 22 ೨೨ ತಬೇರಾ, ಮಸ್ಸಾ, ಕಿಬ್ರೋತ್ ಹತಾವಾ ಎಂಬ ಸ್ಥಳಗಳಲ್ಲಿಯೂ ನೀವು ಯೆಹೋವನಿಗೆ ಕೋಪವನ್ನು ಹುಟ್ಟಿಸಿದ್ದಿರಿ. 23 ೨೩ ಅದಲ್ಲದೆ ಕಾದೇಶ್ ಬರ್ನೇಯದಲ್ಲಿ ಯೆಹೋವನು ನಿಮಗೆ, “ಬೆಟ್ಟದ ಸೀಮೆಯನ್ನು ಹತ್ತಿ ನಾನು ನಿಮಗೆ ಕೊಟ್ಟಿರುವ ದೇಶವನ್ನು ಸ್ವಾಧೀನಮಾಡಿಕೊಳ್ಳಿರಿ” ಎಂದು ಅಪ್ಪಣೆಕೊಟ್ಟಾಗಲೂ ನೀವು ನಿಮ್ಮ ದೇವರಾದ ಯೆಹೋವನ ಆ ಆಜ್ಞೆಯನ್ನು ಧಿಕ್ಕರಿಸಿ, ಆತನನ್ನು ನಂಬದೆ, ಆತನ ಮಾತನ್ನು ಅಲಕ್ಷ್ಯ ಮಾಡಿದಿರಿ. 24 ೨೪ ನನಗೆ ನಿಮ್ಮ ಪರಿಚಯವಾದಂದಿನಿಂದಲೂ ನೀವು ಯೆಹೋವನಿಗೆ ದ್ರೋಹಿಗಳಾಗಿ ನಡೆದುಕೊಂಡಿದ್ದೀರಿ. 25 ೨೫ ಯೆಹೋವನು ನಿಮ್ಮನ್ನು ನಾಶಮಾಡಬೇಕೆಂದಿದ್ದರಿಂದ ನಾನು ಆ ನಲ್ವತ್ತು ದಿನವೂ ಹಗಲಿರುಳು ಆತನ ಸನ್ನಿಧಿಯಲ್ಲಿ ಬಿದ್ದಿದ್ದೆನು. 26 ೨೬ ನಾನು ಆತನನ್ನು ಬೇಡಿಕೊಳ್ಳುತ್ತಾ, “ಕರ್ತನಾದ ಯೆಹೋವನೇ, ನೀನು ನಿನ್ನ ಮಹಿಮೆಯಿಂದ ರಕ್ಷಿಸಿ ನಿನ್ನ ಭುಜಬಲದಿಂದ ಐಗುಪ್ತ್ಯರಿಂದ ಬಿಡುಗಡೆಮಾಡಿದ ನಿನ್ನ ಸ್ವಕೀಯ ಜನರನ್ನು ನಾಶಮಾಡಬೇಡ. 27 ೨೭ ಇವರ ಮೊಂಡುತನ, ದುಷ್ಟತ್ವ, ಪಾಪ ಇವುಗಳನ್ನು ಮನಸ್ಸಿಗೆ ತೆಗೆದುಕೊಳ್ಳದೆ ನಿನ್ನ ಸೇವಕರಾದ ಅಬ್ರಹಾಮ್, ಇಸಾಕ್ ಮತ್ತು ಯಾಕೋಬರನ್ನು ನೆನಪಿಗೆ ತಂದುಕೋ. 28 ೨೮ ನೀನು ಯಾವ ದೇಶದಿಂದ ನಮ್ಮನ್ನು ಬರಮಾಡಿದಿಯೋ ಆ ದೇಶದವರು, ‘ಯೆಹೋವನು ಇಸ್ರಾಯೇಲರಿಗೆ ವಾಗ್ದಾನಮಾಡಿದ ದೇಶಕ್ಕೆ ಅವರನ್ನು ಸೇರಿಸಲಾರದೆ ಹಗೆಮಾಡಿ ಅರಣ್ಯದಲ್ಲಿ ಕೊಲ್ಲುವುದಕ್ಕೆ ಕರೆದುಕೊಂಡು ಹೋದನು’ ಎಂದು ಹೇಳುವುದಕ್ಕೆ ಆಸ್ಪದವಾದೀತು. 29 ೨೯ ಇವರು ಮಹಾಶಕ್ತಿಯಿಂದಲೂ ಮತ್ತು ಭುಜಬಲದಿಂದಲೂ ನೀನು ಬಿಡಿಸಿದ ನಿನ್ನ ಸ್ವಕೀಯ ಜನರಲ್ಲವೇ” ಎಂದು ಬಿನ್ನೈಸಿದೆನು.

< ಧರ್ಮೋಪದೇಶಕಾಂಡ 9 >