< ಧರ್ಮೋಪದೇಶಕಾಂಡ 33 >

1 ದೇವಪುರುಷನಾದ ಮೋಶೆ ದೇಹವನ್ನು ಬಿಡುವುದಕ್ಕಿಂತ ಮುಂಚೆ ಇಸ್ರಾಯೇಲರ ವಿಷಯವಾಗಿ ಹೇಳಿದ ಆಶೀರ್ವಾದವು: 2 “ಯೆಹೋವನು ಸೀನಾಯಿಬೆಟ್ಟದಿಂದ ಬಂದು ಸೇಯೀರ್ ಎಂಬ ಬೆಟ್ಟದ ಸೀಮೆಯೊಳಗಿಂದ ಪ್ರಕಾಶಿಸಿ ಪಾರಾನ್ ಪರ್ವತದಿಂದ ಪ್ರಜ್ವಲಿಸಿ, ಲಕ್ಷಾಂತರ ಪರಿಶುದ್ಧದೂತರ ಮಧ್ಯದಿಂದ ಅವರಿಗೋಸ್ಕರ ದಯಮಾಡಿದನು; ಆತನ ಬಲಪಾರ್ಶ್ವದಲ್ಲಿ ಅಗ್ನಿಸದೃಶವಾದ ಧರ್ಮಶಾಸ್ತ್ರವಿತ್ತು. 3 “ಆತನು ತನ್ನ ಜನರನ್ನು ಪ್ರೀತಿಸುತ್ತಾನೆ. ಯೆಹೋವನೇ, ನಿನ್ನ ಪರಿಶುದ್ಧ ಜನರು ನಿನ್ನ ಆಶ್ರಯದಲ್ಲಿಯೇ ಇದ್ದಾರೆ; ನಿನ್ನ ಚರಣಸನ್ನಿಧಾನದಲ್ಲಿ ಕುಳಿತಿರುವರು; ನೀನು ಹೇಳುವ ಆಜ್ಞೆಗಳನ್ನು ತಪ್ಪದೆ ಪಾಲಿಸಿದರು. 4 ಮೋಶೆಯಾದ, ನಾನು ಯಾಕೋಬನ ಸಂತತಿಯವರಾದ ನಿಮಗೆ ಧರ್ಮಶಾಸ್ತ್ರವನ್ನು ಸ್ವತ್ತಾಗಿ ಕೊಟ್ಟಿದ್ದೇನೆ. 5 ಇಸ್ರಾಯೇಲರ ಕುಲಗಳು ಅವರ ಅಧಿಪತಿಗಳೊಡನೆ ಒಟ್ಟಾಗಿ ಸೇರಿಬಂದಾಗ ಯೆಹೋವನು ತಾನೇ ಯೆಶುರೂನಿನಲ್ಲಿ ಅರಸನಾದನು. 6 “ರೂಬೇನ್ ಕುಲದ ವಿಷಯದಲ್ಲಿ, ‘ರೂಬೇನ್ ಕುಲವು ನಾಶವಾಗದೆ ಉಳಿಯಲಿ; ಆದರೆ ಅದು ಸ್ವಲ್ಪ ಜನರುಳ್ಳದ್ದಾಗಿರುವುದು’ ಎಂದು ಹೇಳಿದನು. 7 “ಯೆಹೂದ ಕುಲದ ವಿಷಯದಲ್ಲಿ, ‘ಯೆಹೋವನೇ, ಯೆಹೂದ ಕುಲದವರ ಮೊರೆಯನ್ನು ಲಾಲಿಸಿ ಅವರನ್ನು ಅವರ ಬಂಧುಗಳೊಡನೆ ಸೇರಿಸು. ಅವರಿಗೋಸ್ಕರ ಯುದ್ಧಮಾಡಿದರಲ್ಲಾ; ಅವರ ಶತ್ರುಗಳಿಂದ ಅವರನ್ನು ರಕ್ಷಿಸು’” ಎಂದು ಹೇಳಿದನು. 8 ಲೇವಿ ಕುಲದ ವಿಷಯದಲ್ಲಿ, “ಯೆಹೋವನೇ ನಿನ್ನ ನಿರ್ಣಯವನ್ನು ತಿಳಿಸುವ ಊರೀಮ್ ಮತ್ತು ತುಮ್ಮೀಮ್ ಎಂಬ ವಸ್ತುಗಳು ನಿನ್ನ ಭಕ್ತರಾದ ಇವರ ವಶದಲ್ಲಿ ಉಂಟಷ್ಟೆ. ನೀನು ಮಸ್ಸದಲ್ಲಿ ಅವರನ್ನು ಪರೀಕ್ಷಿಸಿದಿಯಲ್ಲಾ; ಮೆರೀಬದಲ್ಲಿ ನೀರು ಹೊರಟ ಸ್ಥಳದ ಹತ್ತಿರ ಅವರೊಡನೆ ವಿವಾದಮಾಡಿದಿ. 9 ಅವರು ನಿನ್ನ ಆಜ್ಞೆಯನ್ನು ಅನುಸರಿಸುತ್ತಾ ನಿನ್ನ ನಿಬಂಧನೆಯನ್ನು ಕೈಕೊಳ್ಳುವವರಾಗಿ ತಾಯಿತಂದೆಗಳನ್ನು ‘ಪರಿಚಯವಿಲ್ಲವೆಂದೂ, ಅಣ್ಣತಮ್ಮಂದಿರನ್ನು ಅರಿಯವೆಂದೂ ಮತ್ತು ಸ್ವಂತ ಮಕ್ಕಳನ್ನು ಗುರುತಿಲ್ಲವೆಂದೂ’ ಹೇಳಿಬಿಟ್ಟರಲ್ಲಾ. 10 ೧೦ ಅವರು ಯಾಕೋಬ್ ವಂಶದವರಿಗೆ ನಿನ್ನ ನಿರ್ಣಯಗಳನ್ನು ತಿಳಿಸುವರು; ಇಸ್ರಾಯೇಲರಿಗೆ ನಿನ್ನ ಧರ್ಮಶಾಸ್ತ್ರವನ್ನು ಕಲಿಸುವರು. ನಿನ್ನ ಸನ್ನಿಧಿಯಲ್ಲಿ ಧೂಪಹಾಕುವರು; ನಿನ್ನ ಯಜ್ಞವೇದಿಯ ಮೇಲೆ ಸರ್ವಾಂಗಹೋಮಗಳನ್ನು ಸಮರ್ಪಿಸುವರು. 11 ೧೧ ಯೆಹೋವನೇ, ಅವರ ಆಸ್ತಿಯನ್ನು ವೃದ್ಧಿಪಡಿಸು; ಅವರ ಸೇವೆಯು ನಿನಗೆ ಸಮರ್ಪಕವಾಗಿರಲಿ; ಅವರಿಗೆ ವಿರುದ್ಧವಾಗಿ ಬರುವವರ ನಡುವನ್ನು ಮುರಿದು ಅವರ ವೈರಿಗಳು ಪುನಃ ಎದ್ದು ಬಾರದಂತೆ ಮಾಡು” ಎಂದು ಹೇಳಿದನು. 12 ೧೨ ಬೆನ್ಯಾಮೀನ್ ಕುಲದವರ ವಿಷಯದಲ್ಲಿ, “ಯೆಹೋವನು ಇವರ ಬೆಟ್ಟಗಳ ತಪ್ಪಲುಗಳಲ್ಲೇ ವಾಸಿಸುತ್ತಾ ಇವರನ್ನು ಯಾವಾಗಲೂ ಆವರಿಸಿಕೊಂಡಿರುವುದರಿಂದ ಆತನ ಪ್ರಿಯರಾದ ಇವರು ನಿರ್ಭಯವಾಗಿ ವಾಸಿಸುವರು” ಎಂದು ಹೇಳಿದನು. 13 ೧೩ ಯೋಸೇಫ್ ಕುಲಗಳ ವಿಷಯದಲ್ಲಿ, “ಅವರ ಸೀಮೆಗೆ ಯೆಹೋವನ ಆಶೀರ್ವಾದವಾಗಲಿ. ಮೇಲಣ ಆಕಾಶದಿಂದುಂಟಾಗುವ ಮಂಜು, ಕೆಳಗಣ ಸಾಗರದ ಸೆಲೆ, 14 ೧೪ ವರ್ಷ ವರ್ಷಕ್ಕೂ, ತಿಂಗಳು ತಿಂಗಳಿಗೂ ಆಗುವ ಬೆಳೆ, 15 ೧೫ ಅನಾದಿಯಾದ ಪರ್ವತಗಳ ಉತ್ಪನ್ನ, ಶಾಶ್ವತವಾದ ಬೆಟ್ಟಗಳಿಂದುಂಟಾಗುವ ಮೇಲು, 16 ೧೬ ಭೂಮಿಯಲ್ಲಿ ಸಮೃದ್ಧಿಯಾಗಿ ಬೆಳೆಯುವ ಫಲ ಇವೆಲ್ಲವುಗಳಲ್ಲಿ ಶ್ರೇಷ್ಠವಾದದ್ದೂ ಮತ್ತು (ಹೋರೇಬ್ ಬೆಟ್ಟದಲ್ಲಿನ) ಪೊದೆಯಲ್ಲಿ ವಾಸಿಸಿದಾತನ ದಯೆಯೂ ಯೋಸೇಫ್ ವಂಶದವರ ಪಾಲಿಗೆ ಬರಲಿ; ಅಣ್ಣತಮ್ಮಂದಿರಿಗೆ ಪ್ರಭುವಾಗಿರುವ ಮತ್ತು ಕುಲದವರ ಶಿರಸ್ಸಾಗಿರುವ ಇವನ ಮೇಲೆ ಆಶೀರ್ವಾದ ಉಂಟಾಗಲಿ. 17 ೧೭ ಯೋಸೇಫನ ಜ್ಯೇಷ್ಠಸಂತತಿಯವರು ಗೂಳಿಯೋಪಾದಿಯಲ್ಲಿ ಗಾಂಭೀರ್ಯವುಳ್ಳವರು. ಅವರ ಕೊಂಬುಗಳು ಕಾಡುಕೋಣದ ಕೊಂಬುಗಳಷ್ಟು (ಬಲವುಳ್ಳವು); ಅವುಗಳಿಂದ ಭೂಮಂಡಲದ ಜನಾಂಗಗಳನ್ನೆಲ್ಲಾ ಇರಿದು ಓಡಿಸುವರು. ಎಫ್ರಾಯೀಮ್ ಕುಲದ ಕೊಟ್ಯಾಂತರ ಜನರೂ ಮನಸ್ಸೆ ಕುಲದ ಲಕ್ಷಾಂತರ ಮಂದಿಯೂ ಇಂಥವರೇ” ಎಂದು ಹೇಳಿದನು. 18 ೧೮ ಜೆಬುಲೂನ್ಯರ ಮತ್ತು ಇಸ್ಸಾಕಾರ್ಯರ ವಿಷಯದಲ್ಲಿ, “ಜೆಬುಲೂನ್ಯರೇ, ನಿಮ್ಮ ಪ್ರಯಾಣಗಳಲ್ಲಿ ಸಂತೋಷವಾಗಿರಿ; ಇಸ್ಸಾಕಾರ್ಯರೇ, ನಿಮ್ಮ ಪಾಳೆಯಗಳಲ್ಲಿ ಆನಂದವಾಗಿರಿ. 19 ೧೯ ಅವರು ಸಮುದ್ರದಿಂದ ಐಶ್ವರ್ಯವನ್ನು ಹೊಂದಿ ಮರಳಿನಲ್ಲಿ, ಭೂಮಿಯೊಳಗೆ ಅಡಗಿರುವ ಸಂಪತ್ತನ್ನು ಪಡೆಯುವರು. ಅನ್ಯಜನಗಳನ್ನು ತಮ್ಮ ಬೆಟ್ಟದ ಸೀಮೆಗೆ ಕರೆಯಿಸಿ ಅಲ್ಲಿ ನ್ಯಾಯವಾದ ಯಜ್ಞಗಳನ್ನು ಸಮರ್ಪಿಸುವರು” ಎಂದು ಹೇಳಿದನು. 20 ೨೦ ಗಾದ್ ಕುಲದವರ ವಿಷಯದಲ್ಲಿ, “ಗಾದ್ಯರ ಪ್ರದೇಶವನ್ನು ವಿಸ್ತಾರಮಾಡಿದ ಯೆಹೋವನಿಗೆ ಸ್ತೋತ್ರ. ಅವರು ಸಿಂಹದಂತೆ ಹೊಂಚಿಕೊಂಡು (ಶತ್ರುಗಳ) ಭುಜವನ್ನೂ ಅಥವಾ ಶಿರಸ್ಸನ್ನೂ ಮುರಿಯುತ್ತಾರೆ. 21 ೨೧ ಅವರು ದೇಶದ ಮೊದಲನೆಯ ಭಾಗವನ್ನು ತಮಗೋಸ್ಕರ ತೆಗೆದುಕೊಂಡರು; ಅಲ್ಲಿ ಪ್ರಧಾನನಿಗೆ ಯೋಗ್ಯವಾದ ಸ್ವತ್ತು ದೊರಕಿತು. ಅವರು ಜನಾಧಿಪತಿಗಳ ಜೊತೆಯಲ್ಲಿ ಬಂದು ಇಸ್ರಾಯೇಲರೊಡನೆ ಯೆಹೋವನ ಆಜ್ಞೆಯನ್ನು ನೆರವೇರಿಸಿ ಆತನ ನ್ಯಾಯವನ್ನು ಸ್ಥಾಪಿಸಿದರು” ಎಂದು ಹೇಳಿದನು. 22 ೨೨ ದಾನ್ ಕುಲದ ವಿಷಯದಲ್ಲಿ, “ದಾನ್ ಕುಲವು ಬಾಷಾನ್ ಸೀಮೆಯಿಂದ ಹೊರಟು ಹಾರಿಬರುವ ಪ್ರಾಯದ ಸಿಂಹದಂತಿದೆ” ಎಂದು ಹೇಳಿದನು. 23 ೨೩ ನಫ್ತಾಲಿ ಕುಲದ ವಿಷಯದಲ್ಲಿ, “ನಫ್ತಾಲಿ ಕುಲವೇ, ನೀನು ಯೆಹೋವನ ದಯೆಯನ್ನು ಹೊಂದಿ ಸಂತೃಪ್ತನಾದೆ; ಆತನ ಆಶೀರ್ವಾದದಿಂದ ನಿನಗೆ ಸಮೃದ್ಧಿಯುಂಟು. (ಕಿನ್ನೆರೆತ್) ಸಮುದ್ರವೂ ದಕ್ಷಿಣಪ್ರದೇಶವೂ ನಿನಗೆ ಸ್ವಾಸ್ತ್ಯವಾಗಲಿ” ಎಂದು ಹೇಳಿದನು. 24 ೨೪ ಆಶೇರ್ ಕುಲದ ವಿಷಯದಲ್ಲಿ, “ಪುತ್ರಶ್ರೇಷ್ಠರಾದ ಆಶೇರ್ಯರು ಭಾಗ್ಯವನ್ನು ಹೊಂದಲಿ; ಅವರು ಸಹೋದರರ ದಯೆಯನ್ನು ಪಡೆಯಲಿ; ಅವರು ಎಣ್ಣೆಯಲ್ಲೇ ಕಾಲನ್ನು ಅದ್ದಲಿ. 25 ೨೫ ನಿಮ್ಮ ಕೋಟೆಯ ಬಾಗಿಲುಗಳಿಗೆ ಕಬ್ಬಿಣದ ಮತ್ತು ತಾಮ್ರದ ಅಗುಳಿಗಳು ಇರಲಿ; ನೀವು ಇರುವವರೆಗೂ ನಿಮಗೆ ಬಲವಿರಲಿ” ಎಂದು ಹೇಳಿದನು. 26 ೨೬ ಯೆಶುರೂನೇ, ನಿಮ್ಮ ದೇವರಿಗೆ ಸಮಾನರು ಯಾರು ಇಲ್ಲ; ಆತನು ಆಕಾಶವನ್ನೇರಿ ಮೇಘಾರೂಢನಾಗಿ ಮಹಾಗಾಂಭೀರ್ಯದಿಂದ ನಿಮ್ಮ ಸಹಾಯಕ್ಕೆ ಬರುವನು. 27 ೨೭ ಆದಿಯಿಂದಲೂ ದೇವರೇ ನಿಮಗೆ ನಿವಾಸಸ್ಥಾನವಾಗಿದ್ದಾನಲ್ಲಾ; ಸದಾ ದೇವರ ಹಸ್ತವೇ ನಿಮಗೆ ಆಧಾರ. ಆತನು “ನಿಮ್ಮೆದುರಿನಿಂದ ಶತ್ರುಗಳನ್ನು ಹೊರಡಿಸಿ ಅವರನ್ನು ಸಂಹರಿಸಿರಿ” ಎಂದು ಆಜ್ಞಾಪಿಸಿದನು; 28 ೨೮ ಆದಕಾರಣ ಇಸ್ರಾಯೇಲರು ಆಕಾಶದಿಂದ ಮಂಜು ಸುರಿದು, ಧಾನ್ಯವೂ ಮತ್ತು ದ್ರಾಕ್ಷಾರಸವೂ ಸಮೃದ್ಧಿಯಾಗಿರುವ ದೇಶದಲ್ಲೇ ಸೇರಿ ನಿರ್ಭಯವಾಗಿ ವಾಸಿಸುವವರಾದರು, ಯಾಕೋಬನ ವಂಶದವರು ಸುರಕ್ಷಿತರಾದರು. 29 ೨೯ “ಇಸ್ರಾಯೇಲರೇ, ನೀವು ಎಷ್ಟೋ ಧನ್ಯರು; ನಿಮ್ಮಷ್ಟು ಭಾಗ್ಯವಂತರು ಯಾರಿದ್ದಾರೆ? ನೀವು ಯೆಹೋವನ ಅನುಗ್ರಹದಿಂದ ಜಯವನ್ನು ಹೊಂದಿದವರು. ಆತನೇ ನಿಮ್ಮನ್ನು ಕಾಯುವ ಗುರಾಣಿಯು, ನಿಮ್ಮ ಗೌರವವನ್ನು ಕಾಪಾಡುವ ಕತ್ತಿಯೂ ಆಗಿದ್ದಾನೆ. ಆದ್ದರಿಂದ ನಿಮ್ಮ ಶತ್ರುಗಳು ನಿಮ್ಮ ಮುಂದೆ ಮುದುರಿಕೊಳ್ಳುತ್ತಾರೆ; ನೀವೋ ಅವರಿಗಿದ್ದ ಎತ್ತರವಾದ ಸೀಮೆಯಲ್ಲಿ ಜಯಶಾಲಿಗಳಾಗಿ ಸಂಚರಿಸುತ್ತೀರಿ” ಎಂಬುದೇ.

< ಧರ್ಮೋಪದೇಶಕಾಂಡ 33 >