< ಧರ್ಮೋಪದೇಶಕಾಂಡ 24 >

1 ಯಾವನಾದರೂ ತಾನು ಮದುವೆಮಾಡಿಕೊಂಡ ಸ್ತ್ರೀಯಲ್ಲಿ ಏನೋ ಅವಲಕ್ಷಣವನ್ನು ಕಂಡು ಅವಳಲ್ಲಿ ಸಂತೋಷಪಡದೆ ಇದ್ದರೆ ಅವನು ತ್ಯಾಗಪತ್ರವನ್ನು ಬರೆದುಕೊಟ್ಟು ಅವಳನ್ನು ಮನೆಯಿಂದ ಕಳುಹಿಸಬೇಕು. 2 ಅವಳು ಮನೆಯಿಂದ ಹೋಗಿ ಮತ್ತೊಬ್ಬನನ್ನು ಮದುವೆಯಾಗಬಹುದು. 3 ಆಕೆ ಎರಡನೆಯ ಗಂಡನಿಂದಲೂ ತಿರಸ್ಕರಿಸಲ್ಪಟ್ಟು, ತ್ಯಾಗಪತ್ರವನ್ನು ಹೊಂದಿ ಕಳುಹಿಸಲ್ಪಟ್ಟರೆ ಅಥವಾ ಎರಡನೆಯ ಗಂಡನು ಸತ್ತರೆ, 4 ಆಗ ಅವಳನ್ನು ಕಳುಹಿಸಿಬಿಟ್ಟ ಮೊದಲನೆಯ ಗಂಡನು ಅವಳನ್ನು ಪುನಃ ತನ್ನ ಹೆಂಡತಿಯಾಗಿ ಸ್ವೀಕರಿಸಬಾರದು; ಅವಳು ಅಶುದ್ಧಳಾದಳು; ಅವಳನ್ನು ಪುನಃ ಸ್ವೀಕರಿಸುವುದು ಯೆಹೋವನಿಗೆ ಅಸಹ್ಯ ಕಾರ್ಯ. ನಿಮ್ಮ ದೇವರಾದ ಯೆಹೋವನು ನಿಮಗೆ ಸ್ವದೇಶವಾಗುವುದಕ್ಕೆ ಕೊಡುವ ದೇಶಕ್ಕೆ ದೋಷವುಂಟಾಗುವಂತೆ ಅವಕಾಶಕೊಡಬಾರದು. 5 ಹೊಸದಾಗಿ ಮದುವೆಮಾಡಿಕೊಂಡವನು ಸೈನ್ಯದವರೊಡನೆ ಯುದ್ಧಕ್ಕೆ ಹೋಗಬಾರದು; ಭಾರವಾದ ಯಾವ ಕೆಲಸವನ್ನೂ ಅವನಿಗೆ ನೇಮಿಸಬಾರದು. ಅವನು ಒಂದು ವರ್ಷದ ವರೆಗೂ ಬಿಡುವಾಗಿ ಮನೆಯಲ್ಲಿ ಇದ್ದುಕೊಂಡು ಪರಿಗ್ರಹಿಸಿದ ಹೆಂಡತಿಯೊಡನೆ ಸುಖವಾಗಿರಲಿ. 6 ಬೀಸುವ ಕಲ್ಲನ್ನು ಪೂರ್ತಿಯಾಗಲಿ ಅಥವಾ ಅರ್ಧವಾಗಲಿ ಒತ್ತೆ ತೆಗೆದುಕೊಳ್ಳಬಾರದು; ಅದು ಜೀವನಾಧಾರವನ್ನೇ ಒತ್ತೆಯಾಗಿ ತೆಗೆದುಕೊಂಡ ಹಾಗಾಗುವುದು. 7 ಯಾವನಾದರೂ ಸ್ವದೇಶದವನಾದ ಇಸ್ರಾಯೇಲನನ್ನು ಕದ್ದು ಅವನನ್ನು ದಾಸತ್ವದಲ್ಲಿ ನಡಿಸಿದ್ದಾಗಲಿ ಅಥವಾ ಮಾರಿಬಿಟ್ಟದ್ದು ಕಂಡುಬಂದರೆ ಕದ್ದವನಿಗೆ ಮರಣಶಿಕ್ಷೆಯಾಗಬೇಕು. ಹೀಗೆ ಅಂಥ ದುಷ್ಟತ್ವವನ್ನು ನಿಮ್ಮ ಮಧ್ಯದಿಂದ ತೆಗೆದುಹಾಕಿಬಿಡಬೇಕು. 8 ಕುಷ್ಠರೋಗಿಗಳ ವಿಷಯದಲ್ಲಿ ಯಾಜಕರಾದ ಲೇವಿಯರು ಬೋಧಿಸುವಂತೆಯೇ ಮಾಡುವುದಕ್ಕೆ ನೀವು ಜಾಗರೂಕರಾಗಿರಬೇಕು. ನಾನು ಅವರಿಗೆ ಆಜ್ಞಾಪಿಸಿದ ನಿಯಮಗಳನ್ನೇ ನೀವು ಅನುಸರಿಸಬೇಕು. 9 ನೀವು ಐಗುಪ್ತದೇಶದಿಂದ ಬಂದಾಗ ದಾರಿಯಲ್ಲಿ ನಿಮ್ಮ ದೇವರಾದ ಯೆಹೋವನು ಮಿರ್ಯಾಮಳಿಗೆ ಮಾಡಿದ್ದನ್ನು ನೆನಪುಮಾಡಿಕೊಳ್ಳಿರಿ. 10 ೧೦ ಮತ್ತೊಬ್ಬನಿಗೆ ಸಾಲಕೊಡುವಾಗ ಒತ್ತೆಯನ್ನು ತೆಗೆದುಕೊಳ್ಳುವುದಕ್ಕೆ ಅವನ ಮನೆಯೊಳಕ್ಕೆ ಹೋಗದೆ ಹೊರಗೆ ಇರಬೇಕು. 11 ೧೧ ಸಾಲತೆಗೆದುಕೊಂಡವನೇ ಒತ್ತೆಯ ಸಾಮಾನುಗಳನ್ನು ತಂದುಕೊಡಬೇಕು. 12 ೧೨ ಅವನು ಕೇವಲ ಬಡತನದಿಂದ ತನ್ನ ಕಂಬಳಿಯನ್ನೇ ಒತ್ತೆಯಾಗಿ ಇಟ್ಟ ಸಂದರ್ಭದಲ್ಲಿ ಹೊತ್ತುಮುಣುಗಿದಾಗ ಅದನ್ನು ಹಿಂದಕ್ಕೆ ಕೊಡಬೇಕು. 13 ೧೩ ಅದನ್ನು ಇಟ್ಟುಕೊಂಡು ರಾತ್ರಿ ಮಲಗಬಾರದು; ಅವನು ಅದನ್ನು ಹೊದ್ದುಕೊಂಡೇ ಮಲಗಿಕೊಳ್ಳಬೇಕಲ್ಲಾ; ಅದಲ್ಲದೆ ಅವನು ನಿಮ್ಮನ್ನು ಹರಸುವನು, ಮತ್ತು ನೀವು ಮಾಡಿದ್ದು ಧರ್ಮಕಾರ್ಯವೆಂದು ನಿಮ್ಮ ದೇವರಾದ ಯೆಹೋವನು ತಿಳಿದುಕೊಳ್ಳುವನು. 14 ೧೪ ನೀವು ಸ್ವದೇಶದವರಲ್ಲಿಯಾಗಲಿ ಅಥವಾ ನಿಮ್ಮಲ್ಲಿರುವ ಅನ್ಯದೇಶದವರಲ್ಲಿಯಾಗಲಿ ಗತಿಯಿಲ್ಲದ ಬಡ ಕೂಲಿಯವನಿಗೆ 15 ೧೫ ಏನೂ ಅನ್ಯಾಯಮಾಡದೆ ದಿನದ ಕೂಲಿಯನ್ನು ಆ ದಿನದಲ್ಲೇ ಹೊತ್ತುಮುಣುಗುವುದಕ್ಕೆ ಮುಂಚಿತವಾಗಿ ಅವನಿಗೆ ಕೊಡಬೇಕು. ಅವನಿಗೆ ಬೇರೆ ಗತಿಯಿಲ್ಲದ್ದರಿಂದ ಅದನ್ನೇ ಎದುರುನೋಡುತ್ತಾನಲ್ಲಾ. ನೀವು ಕೊಡದಿದ್ದರೆ ಅವನು ಯೆಹೋವನಿಗೆ ಮೊರೆಯಿಟ್ಟಾನು; ಆಗ ನೀವು ದೋಷಿಗಳಾಗಿ ಕಂಡುಬಂದೀರಿ. 16 ೧೬ ಮಕ್ಕಳ ಪಾಪಕ್ಕಾಗಿ ತಂದೆಗೂ, ತಂದೆಯ ಪಾಪಕ್ಕಾಗಿ ಮಕ್ಕಳಿಗೂ ಮರಣಶಿಕ್ಷೆಯಾಗಬಾರದು. ಪ್ರತಿಯೊಬ್ಬನೂ ತನ್ನ ಪಾಪಫಲವನ್ನು ತಾನೇ ಅನುಭವಿಸಬೇಕು. 17 ೧೭ ನೀವು ಪರದೇಶಿಯ ಅಥವಾ ದಿಕ್ಕಿಲ್ಲದವನ ವ್ಯಾಜ್ಯವನ್ನು ವಿಚಾರಿಸುವಾಗ ನ್ಯಾಯವನ್ನು ಬಿಟ್ಟು ತೀರ್ಪು ಕೊಡಬಾರದು. ವಿಧವೆಯಿಂದ ಉಡುವ ಬಟ್ಟೆಯನ್ನು ಒತ್ತೆಯಿಡಿಸಿಕೊಳ್ಳಬಾರದು. 18 ೧೮ ನೀವೇ ಐಗುಪ್ತದೇಶದಲ್ಲಿ ದಾಸರಾಗಿದ್ದಾಗ ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಬಿಡಿಸಿದನೆಂಬುವುದನ್ನು ನೆನಪುಮಾಡಿಕೊಳ್ಳಿರಿ; ಅದಕ್ಕಾಗಿಯೇ ಇದನ್ನು ಆಜ್ಞಾಪಿಸಿದ್ದೇನೆ. 19 ೧೯ ನೀವು ಪೈರುಗಳನ್ನು ಕೊಯ್ಯುವಾಗ ಒಂದು ಸಿವುಡನ್ನು ಹೊಲದಲ್ಲೇ ಮರೆತುಬಂದರೆ ಅದನ್ನು ತರುವುದಕ್ಕೆ ಹಿಂದಕ್ಕೆ ಹೋಗಬಾರದು; ಪರದೇಶಿ, ಅನಾಥ, ವಿಧವೆ ಇಂಥವರಿಗೋಸ್ಕರ ಇರಲಿ. ನೀವು ಹೀಗೆ ನಡೆದುಕೊಂಡರೆ ನಿಮ್ಮ ದೇವರಾದ ಯೆಹೋವನು ನಿಮ್ಮ ಎಲ್ಲಾ ಕೆಲಸಗಳಲ್ಲಿಯೂ ನಿಮ್ಮನ್ನು ಅಭಿವೃದ್ಧಿಪಡಿಸುವನು. 20 ೨೦ ಎಣ್ಣೆಯಮರಗಳ ರೆಂಬೆಗಳನ್ನು ಹೊಡೆದು ಕಾಯಿಗಳನ್ನು ಉದುರಿಸಿದ ಮೇಲೆ ಪುನಃ ಉದುರಿಸುವುದಕ್ಕೆ ಹೋಗಬಾರದು; ಮಿಕ್ಕ ಕಾಯಿಗಳು ಪರದೇಶಿ, ಅನಾಥ, ವಿಧವೆ ಇಂಥವರಿಗೋಸ್ಕರ ಇರಲಿ. 21 ೨೧ ದ್ರಾಕ್ಷಿತೋಟದ ಬೆಳೆಯನ್ನು ಕೂಡಿಸಿಕೊಳ್ಳುವಾಗ ಹಕ್ಕಲಾಯಬಾರದು; ಅದು ಪರದೇಶಿ, ಅನಾಥ, ವಿಧವೆ ಇಂಥವರಿಗೋಸ್ಕರ ಇರಲಿ. 22 ೨೨ ನೀವೇ ಐಗುಪ್ತದೇಶದಲ್ಲಿ ದಾಸರಾಗಿದ್ದದ್ದು ಜ್ಞಾಪಕದಲ್ಲಿರಬೇಕು; ಅದಕ್ಕಾಗಿಯೇ ಇದನ್ನು ನಿಮಗೆ ಆಜ್ಞಾಪಿಸಿದ್ದೇನೆ.

< ಧರ್ಮೋಪದೇಶಕಾಂಡ 24 >