< ಧರ್ಮೋಪದೇಶಕಾಂಡ 13 >

1 ಯಾವ ಪ್ರವಾದಿಯಾಗಲಿ ಅಥವಾ ಕನಸುಗಾರನೇ ಆಗಲಿ ನಿಮ್ಮ ಮಧ್ಯದಲ್ಲಿ ಬಂದು, ನಿಮಗೆ ಗೊತ್ತಿಲ್ಲದ ಇತರ ದೇವರುಗಳನ್ನು ತೋರಿಸಿ,
ನಿಮ್ಮ ಮಧ್ಯೆ ಯಾವ ಪ್ರವಾದಿಯೇ ಆಗಲಿ, ಕನಸುಗಾರನೇ ಆಗಲಿ, ಎದ್ದು ಬಂದು ನಿಮಗೆ ಗೊತ್ತಿಲ್ಲದ ಇತರ ದೇವರುಗಳನ್ನು ಸೂಚನೆ ಮಾಡಿ,
2 “ಈ ದೇವತೆಗಳನ್ನು ಅವಲಂಬಿಸಿ ಅವುಗಳನ್ನು ಸೇವಿಸೋಣ” ಎಂದು ಬೋಧಿಸುತ್ತಾ, ಆ ಬೋಧನೆಯನ್ನು ಸ್ಥಾಪಿಸುವುದಕ್ಕೆ ಒಂದು ಅದ್ಭುತವನ್ನಾಗಲಿ ಅಥವಾ ಮಹತ್ಕಾರ್ಯವನ್ನಾಗಲಿ ತೋರಿಸಿಕೊಡುತ್ತೇನೆಂದು ಹೇಳಿ ಅವನು ಹೇಳಿದಂತೆಯೇ ನಡೆದರೂ ನೀವು ಅವನ ಮಾತಿಗೆ ಕಿವಿಗೊಡಬಾರದು.
“ಈ ದೇವತೆಗಳನ್ನು ಅವಲಂಬಿಸಿ ಪೂಜಿಸೋಣ,” ಎಂದು ಬೋಧಿಸಬಹುದು. ಆ ಬೋಧನೆಯನ್ನು ರುಜುವಾತುಪಡಿಸಲು ಒಂದು ಅದ್ಭುತವನ್ನಾಗಲಿ, ಮಹತ್ಕಾರ್ಯವನ್ನಾಗಲಿ ತೋರಿಸಿಕೊಡುತ್ತೇನೆಂದು ಸಹ ಹೇಳಬಹುದು.
3 ಏಕೆಂದರೆ ನಿಮ್ಮ ದೇವರಾದ ಯೆಹೋವನು, “ಇವರು ಸಂಪೂರ್ಣ ಹೃದಯದಿಂದಲೂ ಮತ್ತು ಸಂಪೂರ್ಣ ಮನಸ್ಸಿನಿಂದಲೂ ತನ್ನನ್ನೇ ಪ್ರೀತಿಸುವವರು ಹೌದೋ ಅಲ್ಲವೋ” ಎಂಬುದನ್ನು ತಿಳಿದುಕೊಳ್ಳುವುದಕ್ಕೆ ನಿಮ್ಮನ್ನು ಪರೀಕ್ಷಿಸುತ್ತಾನೆ.
ಅವನು ಹೇಳಿದಂತೆಯೇ ಅದು ನಡೆದರೂ ನೀವು ಅವನ ಮಾತಿಗೆ ಕಿವಿಗೊಡಬಾರದು. ಏಕೆಂದರೆ ನಿಮ್ಮ ದೇವರಾದ ಯೆಹೋವ ದೇವರು ನೀವು ನಿಮ್ಮ ಪೂರ್ಣಹೃದಯದಿಂದಲೂ ನಿಮ್ಮ ಪೂರ್ಣಪ್ರಾಣದಿಂದಲೂ ನಿಮ್ಮ ದೇವರಾದ ಯೆಹೋವ ದೇವರನ್ನು ಪ್ರೀತಿಸುತ್ತೀರೋ ಇಲ್ಲವೋ ಎಂಬುದನ್ನು ಕಂಡುಕೊಳ್ಳುವುದಕ್ಕೆ ನಿಮ್ಮನ್ನು ಪರೀಕ್ಷಿಸುತ್ತಾರೆ.
4 ಆತನು ಹೇಳುವ ಮಾರ್ಗದಲ್ಲೇ ನೀವು ನಡೆದು, ಆತನಲ್ಲಿಯೇ ಭಯಭಕ್ತಿಯುಳ್ಳವರಾಗಿ, ಆತನ ಆಜ್ಞೆಗಳನ್ನೇ ಅನುಸರಿಸಿ, ಆತನಿಗೇ ವಿಧೇಯರಾಗಿ, ಆತನನ್ನೇ ಸೇವಿಸುತ್ತಾ ಹೊಂದಿಕೊಂಡಿರಬೇಕು.
ನಿಮ್ಮ ದೇವರಾದ ಯೆಹೋವ ದೇವರನ್ನೇ ಅನುಸರಿಸಿ, ಅವರಿಗೆ ಭಯಪಟ್ಟು, ಅವರ ಆಜ್ಞೆಗಳನ್ನು ಕಾಪಾಡಿ, ಅವರ ಮಾತನ್ನು ಕೇಳಿ, ಅವರ ಸೇವೆಮಾಡುತ್ತಾ ಅವರನ್ನೇ ಅಂಟಿಕೊಳ್ಳಬೇಕು.
5 ಆ ಪ್ರವಾದಿಗೆ ಅಥವಾ ಆ ಕನಸುಗಾರನಿಗೆ ಮರಣ ಶಿಕ್ಷೆಯಾಗಬೇಕು. ದಾಸತ್ವದಲ್ಲಿದ್ದ ನಿಮ್ಮನ್ನು ಬಿಡುಗಡೆಮಾಡಿ, ಐಗುಪ್ತದೇಶದೊಳಗಿಂದ ಕರೆದುಕೊಂಡು ಬಂದ ನಿಮ್ಮ ದೇವರಾದ ಯೆಹೋವನಿಗೆ ವಿರುದ್ಧವಾಗಿ ಅವನು ದ್ರೋಹದ ಮಾತುಗಳನ್ನಾಡಿ, ನಿಮ್ಮ ದೇವರಾದ ಯೆಹೋವನು ಹೇಳಿದ ಮಾರ್ಗದಿಂದ ನಿಮ್ಮನ್ನು ತಪ್ಪಿಸಬೇಕೆಂದಿದ್ದನಲ್ಲಾ. ಅವನನ್ನು ಕೊಲ್ಲಿಸಿ, ಆ ದುಷ್ಟತ್ವವನ್ನು ನಿಮ್ಮ ಮಧ್ಯದಿಂದ ತೆಗೆದುಹಾಕಬೇಕು.
ಆ ಪ್ರವಾದಿಯನ್ನು, ಕನಸು ಕಾಣುವವನಿಗೆ ಮರಣದಂಡನೆ ವಿಧಿಸಬೇಕು. ಏಕೆಂದರೆ ಈಜಿಪ್ಟ್ ದೇಶದೊಳಗಿಂದ ನಿಮ್ಮನ್ನು ಹೊರಗೆ ಬರಮಾಡಿ, ದಾಸತ್ವದಿಂದ ನಿಮ್ಮನ್ನು ವಿಮೋಚಿಸಿದ ನಿಮ್ಮ ದೇವರಾದ ಯೆಹೋವ ದೇವರಿಂದ ತಿರುಗುವಂತೆ ಮತ್ತು ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ನಡೆಯಲು ಆಜ್ಞಾಪಿಸಿದ ಮಾರ್ಗದಿಂದ ನಿಮ್ಮನ್ನು ತಪ್ಪಿಸುವಂತೆ ಅವನು ಮಾತನಾಡಿದ್ದಾನೆ. ಹೀಗೆ ನೀವು ಕೆಟ್ಟದ್ದನ್ನು ನಿಮ್ಮಿಂದ ತೆಗೆದುಹಾಕಬೇಕು.
6 ಒಡಹುಟ್ಟಿದ ಅಣ್ಣತಮ್ಮಂದಿರಾಗಲಿ, ಮಗನಾಗಲಿ, ಮಗಳಾಗಲಿ, ಪ್ರಾಣಪ್ರಿಯಳಾದ ಹೆಂಡತಿಯಾಗಲಿ, ಆಪ್ತಮಿತ್ರನಾಗಲಿ ಇತರ ದೇವರುಗಳನ್ನು ತೋರಿಸಿ, “ನಿಮಗೂ ನಿಮ್ಮ ಪೂರ್ವಿಕರಿಗೂ ಗೊತ್ತಿಲ್ಲದ ಆ ದೇವರುಗಳನ್ನು ಸೇವಿಸೋಣ ಬನ್ನಿರಿ” ಎಂದು ರಹಸ್ಯವಾಗಿ ಆಕರ್ಷಿಸಿ, ನಿಮಗೆ ಬೋಧಿಸಿದರೆ,
ನಿನ್ನ ಸಹೋದರನಾಗಲಿ, ಮಗನಾಗಲಿ, ಮಗಳಾಗಲಿ, ಪ್ರೀತಿಯ ಹೆಂಡತಿಯಾಗಲಿ, ಪ್ರಾಣ ಸ್ನೇಹಿತನಾಗಲಿ, “ನೀವೂ, ನಿಮ್ಮ ಪಿತೃಗಳೂ ತಿಳಿಯದ ಬೇರೆ ದೇವರುಗಳನ್ನು
7 ಆ ದೇವರುಗಳು ಹತ್ತಿರವಿರುವ ಜನಾಂಗಗಳ ದೇವರುಗಳಾದರೂ, ದೂರವಾದವರ ದೇವರುಗಳಾದರೂ, ಭೂಲೋಕದ ಯಾವ ಭಾಗದವರ ದೇವರುಗಳಾದರೂ
ನಿಮಗೆ ಸಮೀಪವಾಗಲಿ, ನಿಮಗೆ ದೂರವಾಗಲಿ ಭೂಮಿಯ ಒಂದು ಕಡೆಯಿಂದ ಅದರ ಮತ್ತೊಂದು ಕಡೆಯವರೆಗೆ ನಿಮ್ಮ ಸುತ್ತಲಿರುವ ಜನರ ದೇವರುಗಳನ್ನು ಸೇವಿಸೋಣ,” ಎಂದು ನಿಮ್ಮನ್ನು ಅಂತರಂಗದಲ್ಲಿ ಪ್ರೇರೇಪಿಸಿದರೆ,
8 ನೀವು ಸಮ್ಮತಿಸಲೂ ಬಾರದು ಮತ್ತು ಕಿವಿಗೊಡಲೂಬಾರದು. ಅವನನ್ನು ಕನಿಕರಿಸಲೂಬಾರದು, ತಪ್ಪಿಸಲೂಬಾರದು, ಬಚ್ಚಿಡಲೂಬಾರದು ಅವನನ್ನು ಕೊಲ್ಲಿಸಲೇಬೇಕು.
ನೀವು ಅವರಿಗೆ ಸಮ್ಮತಿಸಬಾರದು. ಅವರ ಮಾತನ್ನು ಕೇಳಬಾರದು. ನೀವು ಅವರನ್ನು ಕನಿಕರಿಸಬಾರದು ಇಲ್ಲವೆ ಬಚ್ಚಿಡಬಾರದು.
9 ಆ ಶಿಕ್ಷೆಯನ್ನು ನಡಿಸುವಾಗ ತಪ್ಪು ಕಂಡವನೇ ಮೊದಲು ಕೈಹಾಕಬೇಕು.
ಆ ಶಿಕ್ಷೆಯನ್ನು ನಡೆಸುವಾಗ ತಪ್ಪು ಕಂಡವನೇ ಮೊದಲು ಕಲ್ಲು ಎಸೆಯಬೇಕು, ತರುವಾಯ ಜನರೆಲ್ಲರೂ ಎಸೆಯಲಿ.
10 ೧೦ ತರುವಾಯ ಜನರೆಲ್ಲರೂ ಕೈಹಾಕಲಿ, ದಾಸತ್ವದಲ್ಲಿದ್ದ ನಿಮ್ಮನ್ನು ಬಿಡುಗಡೆಮಾಡಿ, ಐಗುಪ್ತ ದೇಶದೊಳಗಿಂದ ಕರೆದುಕೊಂಡು ಬಂದ ನಿಮ್ಮ ದೇವರಾದ ಯೆಹೋವನ ಆಶ್ರಯದಿಂದ ಅವನು ನಿಮ್ಮನ್ನು ತಪ್ಪಿಸಬೇಕೆಂದಿದ್ದರಿಂದ ಅವನನ್ನು ಕಲ್ಲೆಸೆದು ಕೊಲ್ಲಲೇಬೇಕು.
ಗುಲಾಮಗಿರಿಯಲ್ಲಿದ್ದ ನಿಮ್ಮನ್ನು ಬಿಡುಗಡೆ ಮಾಡಿ, ಈಜಿಪ್ಟ್ ದೇಶದಿಂದ ಕರೆದುತಂದ ನಿಮ್ಮ ದೇವರಾದ ಯೆಹೋವ ದೇವರ ಆಶ್ರಯದಿಂದ ಅಂಥವರು ನಿಮ್ಮನ್ನು ತಪ್ಪಿಸಬೇಕೆಂದು ಇದ್ದುದರಿಂದ, ಅಂಥವರನ್ನು ಕಲ್ಲು ಎಸೆದು ಕೊಲ್ಲಬೇಕು.
11 ೧೧ ಇದನ್ನು ಇಸ್ರಾಯೇಲರೆಲ್ಲರೂ ಕೇಳಿ ಭಯಪಟ್ಟು ಅಂಥ ದುಷ್ಕಾರ್ಯವನ್ನು ಇನ್ನು ಮುಂದೆ ಮಾಡದೆ ಇರುವರು.
ಇಸ್ರಾಯೇಲರೆಲ್ಲಾ ಇದನ್ನು ಕೇಳಿ ಭಯಪಟ್ಟು, ಇನ್ನು ಮೇಲೆ ಕೆಟ್ಟದ್ದನ್ನು ಮಾಡದೆ ಇರುವರು.
12 ೧೨ ನಿಮ್ಮ ದೇವರಾದ ಯೆಹೋವನು ನಿಮ್ಮ ನಿವಾಸಕ್ಕಾಗಿ ಕೊಡುವ ಯಾವುದಾದರೂ ಒಂದು ಊರಿನ ವಿಷಯದಲ್ಲಿ,
ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ವಾಸಮಾಡುವುದಕ್ಕೆ ಕೊಡುವ ಯಾವುದಾದರೂ ಪಟ್ಟಣದಲ್ಲಿ
13 ೧೩ ಅಲ್ಲಿ ವಾಸವಾಗಿರುವ ಇಸ್ರಾಯೇಲರಲ್ಲಿ ಕೆಲವು ಜನ ದುಷ್ಟರು ನಿಮಗೆ ಗೊತ್ತಿಲ್ಲದ ಇತರ ದೇವರುಗಳನ್ನು ತಮ್ಮ ಊರಿನವರಿಗೆ ತೋರಿಸಿ, “ಆ ದೇವರುಗಳನ್ನು ಸೇವಿಸೋಣ ಬನ್ನಿರಿ” ಎಂದು ಹೇಳಿ ಅವರನ್ನು ಸನ್ಮಾರ್ಗದಿಂದ ತಪ್ಪಿಸಿದ್ದಾರೆಂಬ ಸುದ್ದಿಯನ್ನು ನೀವು ಕೇಳಿದರೆ,
ದುಷ್ಟಜನರು ಎದ್ದು ತಮ್ಮ ಪಟ್ಟಣದಲ್ಲಿರುವ ಜನರನ್ನು, “ನೀವು ತಿಳಿಯದಿರುವ ಇತರ ದೇವರುಗಳನ್ನು ಪೂಜಿಸೋಣ ಬನ್ನಿರಿ,” ಎಂದು ಹೇಳಿ ದುರ್ಮಾಗಕ್ಕೆ ಎಳೆದಿದ್ದಾರೆ ಎಂಬ ಸುದ್ದಿ ನಿಮಗೆ ತಿಳಿಸಿದರೆ,
14 ೧೪ ಆ ಸಂಗತಿಯನ್ನು ಚೆನ್ನಾಗಿ ವಿಚಾರಿಸಿ ತಿಳಿದುಕೊಳ್ಳಬೇಕು. ಅಂತಹ ಅಸಹ್ಯಕಾರ್ಯವು ಇಸ್ರಾಯೇಲರಲ್ಲಿ ನಡೆದದ್ದು
ನೀವು ಹುಡುಕಿ ಶೋಧಿಸಿ ಚೆನ್ನಾಗಿ ವಿಚಾರಣೆ ಮಾಡಬೇಕು. ಆ ಕಾರ್ಯವು ನಿಶ್ಚಯವಾಗಿ ಸತ್ಯವಾದರೆ, ಅಂಥ ಅಸಹ್ಯವು ನಿಮ್ಮಲ್ಲಿ ನಡೆದದ್ದಾದರೆ,
15 ೧೫ ನಿಜವೆಂದು ತಿಳಿದುಬಂದರೆ ಆ ಊರನ್ನು ಸಂಪೂರ್ಣವಾಗಿ ಹಾಳು ಮಾಡಿ, ಅದರಲ್ಲಿರುವ ಎಲ್ಲಾ ಜನರನ್ನೂ, ದನಗಳನ್ನೂ ಕತ್ತಿಯಿಂದ ಸಂಹರಿಸಿಡಬೇಕು.
ಆ ಊರನ್ನು ಸಂಪೂರ್ಣವಾಗಿ ನಾಶಮಾಡಬೇಕು. ಅದನ್ನೂ, ಅದರಲ್ಲಿರುವ ಎಲ್ಲದನ್ನೂ, ಅದರ ಪಶುಗಳನ್ನೂ ಸಹ ಶಪಿಸಿ ಖಡ್ಗದಿಂದ ನಿರ್ಮೂಲ ಮಾಡಬೇಕು.
16 ೧೬ ಅದರಲ್ಲಿರುವ ಎಲ್ಲಾ ಸಾಮಾನುಗಳನ್ನು ಗ್ರಾಮಮಧ್ಯದಲ್ಲಿ ಕೂಡಿಸಿ, ಊರನ್ನೂ ಅದರಲ್ಲಿರುವ ಎಲ್ಲಾ ಸಾಮಾನುಗಳನ್ನೂ ನಿಮ್ಮ ದೇವರಾದ ಯೆಹೋವನಿಗೋಸ್ಕರ ಸಂಪೂರ್ಣವಾಗಿ ಸುಟ್ಟುಬಿಡಬೇಕು. ಅದು ಪುನಃ ಕಟ್ಟಲ್ಪಡದೆ ಯಾವಾಗಲೂ ಹಾಳುದಿಬ್ಬವಾಗಿರಬೇಕು.
ಇದಲ್ಲದೆ ಆ ಊರಿನ ಎಲ್ಲಾ ಸಾಮಗ್ರಿಗಳನ್ನು ಅದರ ಬೀದಿಯ ಮಧ್ಯದಲ್ಲಿ ಕೂಡಿಸಿ, ಆ ಪಟ್ಟಣವನ್ನೂ, ಅದರ ಎಲ್ಲಾ ವಸ್ತುವನ್ನೂ ಸಂಪೂರ್ಣವಾಗಿ ನಿಮ್ಮ ದೇವರಾದ ಯೆಹೋವ ದೇವರಿಗೆ ದಹನಬಲಿಯಾಗಿ ಸುಟ್ಟುಬಿಡಬೇಕು. ಅದು ಎಂದಿಗೂ ಹಾಳುದಿಬ್ಬವಾಗಿರಬೇಕು; ಇನ್ನು ಮೇಲೆ ಅದನ್ನು ಕಟ್ಟಬಾರದು; ಆ ಶಾಪಗ್ರಸ್ತ ವಸ್ತುಗಳಲ್ಲಿ ಏನನ್ನೂ ತೆಗೆದುಕೊಳ್ಳಬಾರದು.
17 ೧೭ “ಕೇವಲ ಯೆಹೋವನಿಗೇ ಆಗಲಿ” ಎಂದು ನೀವು ಗೊತ್ತು ಮಾಡಿದ್ದರಲ್ಲಿ ಸ್ವಲ್ಪವನ್ನಾದರೂ ತೆಗೆದುಕೊಳ್ಳಬಾರದು. ನಾನು ಈಗ ನಿಮಗೆ ಬೋಧಿಸುವ ಆತನ ಎಲ್ಲಾ ಆಜ್ಞೆಗಳನ್ನು ಕೈಕೊಂಡು ಆತನ ದೃಷ್ಟಿಗೆ ಸರಿಯಾದದ್ದನ್ನು ಮಾಡಬೇಕು.
ಇದಲ್ಲದೆ ನೀವು ನಿಮ್ಮ ದೇವರಾದ ಯೆಹೋವ ದೇವರ ಸ್ವರವನ್ನು ಕೇಳಿ, ನಾನು ಈ ಹೊತ್ತು ನಿಮಗೆ ಆಜ್ಞಾಪಿಸುವ ಅವರ ಎಲ್ಲಾ ಆಜ್ಞೆಗಳನ್ನು ಕಾಪಾಡಿ,
18 ೧೮ ನೀವು ಹೀಗೆ ನಡೆದು ನಿಮ್ಮ ದೇವರಾದ ಯೆಹೋವನ ಮಾತಿಗೆ ಕಿವಿಗೊಟ್ಟರೆ, ಆಗ ಆತನು ತನ್ನ ರೋಷಾಗ್ನಿಯನ್ನು ಬಿಟ್ಟು ನಿಮಗೆ ದಯೆಯನ್ನು ತೋರಿಸಿ, ನಿಮ್ಮನ್ನು ಕರುಣಿಸಿ, ತಾನು ನಿಮ್ಮ ಪೂರ್ವಿಕರಿಗೆ ವಾಗ್ದಾನ ಮಾಡಿದಂತೆ ನಿಮ್ಮ ಸಂತತಿಯನ್ನು ಹೆಚ್ಚಿಸುವನು.
ನಿಮ್ಮ ದೇವರಾದ ಯೆಹೋವ ದೇವರ ದೃಷ್ಟಿಯಲ್ಲಿ ಸರಿಯಾದದ್ದನ್ನು ಮಾಡಿದಾಗ ಯೆಹೋವ ದೇವರು ತಮ್ಮ ಕೋಪವನ್ನು ಬಿಟ್ಟು, ತಿರುಗಿ ನಿಮಗೆ ದಯೆಯನ್ನು ತೋರಿಸಿ, ನಿಮ್ಮ ಮೇಲೆ ಕನಿಕರಪಟ್ಟು, ಅವರು ನಿಮ್ಮ ಪಿತೃಗಳಿಗೆ ಪ್ರಮಾಣ ಮಾಡಿದಂತೆ ನಿಮ್ಮನ್ನು ಅಭಿವೃದ್ಧಿಪಡಿಸುವರು.

< ಧರ್ಮೋಪದೇಶಕಾಂಡ 13 >