< ಅಪೊಸ್ತಲರ ಕೃತ್ಯಗಳ 20 >

1 ಗದ್ದಲವು ನಿಂತ ತರುವಾಯ ಪೌಲನು ಶಿಷ್ಯರನ್ನು ಜೊತೆಗೆ ಕರೆಯಿಸಿ ಧೈರ್ಯಗೊಳಿಸಿ ಅವರ ಅಪ್ಪಣೆ ತೆಗೆದುಕೊಂಡು ಮಕೆದೋನ್ಯಕ್ಕೆ ಹೊರಟನು. 2 ಆ ಸೀಮೆಯಲ್ಲಿ ಸಂಚಾರಮಾಡಿ ಅಲ್ಲಿಯವರನ್ನು ಅನೇಕ ಸಂದೇಶಗಳಿಂದ ಧೈರ್ಯಪಡಿಸಿ ಗ್ರೀಸ್ ದೇಶಕ್ಕೆ ಬಂದನು. 3 ಅಲ್ಲಿ ಮೂರು ತಿಂಗಳು ಕಳೆದ ನಂತರ ಸಿರಿಯ ದೇಶಕ್ಕೆ ಸಮುದ್ರಮಾರ್ಗವಾಗಿ ಹೋಗಬೇಕೆಂದಿದ್ದಾಗ ಅವನಿಗೆ ವಿರುದ್ಧವಾಗಿ ಯೆಹೂದ್ಯರು ಒಳಸಂಚುಮಾಡಿದ್ದು ಅವನಿಗೆ ತಿಳಿದು ಬಂದ್ದುದರಿಂದ ಅವನು ಮಕೆದೋನ್ಯದ ಮಾರ್ಗವಾಗಿ ಹಿಂತಿರುಗಿ ಹೋಗುವುದಕ್ಕೆ ತೀರ್ಮಾನಿಸಿದನು. 4 ಪುರ್ರನ ಮಗನಾದ ಬೆರೋಯ ಪಟ್ಟಣದ ಸೋಪತ್ರನೂ, ಥೆಸಲೋನಿಕದವರಲ್ಲಿ ಅರಿಸ್ತಾರ್ಕನೂ, ಸೆಕುಂದನೂ ದೆರ್ಬೆಪಟ್ಟಣದ ಗಾಯನೂ, ತಿಮೊಥೆಯನೂ, ಆಸ್ಯಸೀಮೆಯವರಲ್ಲಿ ತುಖಿಕನೂ, ತ್ರೊಫಿಮನೂ, ಆಸ್ಯಸೀಮೆಯ ವರೆಗೂ ಅವನ ಜೊತೆಯಲ್ಲಿ ಹೋದರು. 5 ಅವರು ಮುಂಚಿತವಾಗಿ ಹೋಗಿ ನಮಗೋಸ್ಕರ ತ್ರೋವದಲ್ಲಿ ಕಾಯುತ್ತಿದ್ದರು 6 ಹುಳಿಯಿಲ್ಲದ ರೊಟ್ಟಿಯ ಹಬ್ಬದ ದಿನಗಳನ್ನು ಪೂರೈಸಿದ ಮೇಲೆ ನಾವು ಫಿಲಿಪ್ಪಿಯಿಂದ ಹೊರಟು ಹಡಗನ್ನು ಹತ್ತಿ ಐದು ದಿನಗಳಲ್ಲಿ‍ ತ್ರೋವದಲ್ಲಿ ಬಂದು ಅವರನ್ನು ಸೇರಿದೆವು. ಅಲ್ಲಿ ಏಳು ದಿನಗಳ ಕಾಲ ತಂಗಿದ್ದೆವು. 7 ವಾರದ ಮೊದಲನೆಯ ದಿನದಲ್ಲಿ ನಾವು ರೊಟ್ಟಿ ಮುರಿಯುವ ನಿಯಮಕ್ಕಾಗಿ ಸೇರಿಬಂದಾಗ ಪೌಲನು ಅಲ್ಲಿ ನೆರೆದಂತಹ ವಿಶ್ವಾಸಿಗಳಿಗೆ ಬೋಧನೆಮಾಡಿದನು. ಮರುದಿನ ಹೊರಡಬೇಕೆಂದಿದ್ದ ಪೌಲನು ಅವರಿಗೆ ಬೋಧಿಸುತ್ತಾ ಮಧ್ಯರಾತ್ರಿಯವರೆಗೂ ಉಪನ್ಯಾಸವನ್ನು ನೀಡಿದನು. 8 ನಾವು ಕೂಡಿದ್ದ ಮೇಲಂತಸ್ತಿನಲ್ಲಿ ಅನೇಕ ದೀಪಗಳಿದ್ದವು. 9 ಯೂತಿಖನೆಂಬ ಒಬ್ಬ ಯೌವನಸ್ಥನು ಕಿಟಿಕಿಯ ಹೊಸ್ತಿಲಿನಲ್ಲಿ ಕುಳಿತುಕೊಂಡು ಗಾಢನಿದ್ರೆಯಿಂದ ತೂಕಡಿಸುತ್ತಿದ್ದನು. ಪೌಲನು ಇನ್ನೂ ಬೋಧನೆ ಮಾಡುತ್ತಾ ಇದ್ದಾಗ ಆ ಯೌವನಸ್ಥನು ಗಾಢವಾದ ನಿದ್ರೆಯಿಂದ ತೂಕಡಿಸಿ ಮೂರನೆಯ ಅಂತಸ್ತಿನಿಂದ ಕೆಳಕ್ಕೆ ಬಿದ್ದುಬಿಟ್ಟನು; ಅವನನ್ನು ಎಬ್ಬಿಸಲು ಹೋದಾಗ ಅವನು ಸತ್ತುಹೋಗಿದ್ದನು. 10 ೧೦ ಆದರೆ ಪೌಲನು ಇಳಿದು ಹೋಗಿ ಅವನ ಮೇಲೆ ಬಿದ್ದು ತಬ್ಬಿಕೊಂಡು; “ಗೋಳಾಡಬೇಡಿರಿ, ಅವನು ಜೀವಂತವಾಗಿದ್ದಾನೆ” ಎಂದು ಹೇಳಿದನು. 11 ೧೧ ಆಗ ಅವನು ಮೇಲಕ್ಕೆ ಹೋಗಿ ರೊಟ್ಟಿ ಮುರಿದು ಊಟಮಾಡಿ ಬಹಳ ಹೊತ್ತು ಬೆಳಗಾಗುವ ತನಕ ಮಾತನಾಡಿ ಹೊರಟುಹೋದನು. 12 ೧೨ ಅವರು ಜೀವಿತನಾದ ಆ ಹುಡುಗನನ್ನು ಕರೆದುಕೊಂಡು ಬರಲು ಅವರಿಗೆ ಬಹಳ ಸಮಾಧಾನವಾಯಿತು. 13 ೧೩ ನಾವು ಮೊದಲೇ ಅಲ್ಲಿಗೆ ಹೋಗಿ ಅಸ್ಸೊಸಿನಲ್ಲಿ ಪೌಲನನ್ನು ತಮ್ಮೊಂದಿಗೆ ಹತ್ತಿಸಿಕೊಳ್ಳಬೇಕೆಂದು ಸಮುದ್ರ ಪ್ರಯಾಣಮಾಡಿದೆವು. ಪೌಲನು ಹಾಗೆಯೇ ನಮಗೆ ಅಪ್ಪಣೆ ಮಾಡಿ ತಾನು ಕಾಲುನಡಿಗೆಯಾಗಿ ಹೋಗಬೇಕೆಂದು ಮನಸ್ಸು ಮಾಡಿದ್ದನು. 14 ೧೪ ಅಸ್ಸೊಸಿನಲ್ಲಿ ಅವನು ನಮ್ಮನ್ನು ಕೂಡಿಕೊಂಡಾಗ ನಾವು ಅವನನ್ನು ಹಡಗಿನಲ್ಲಿ ಸೇರಿಸಿಕೊಂಡು ಮಿತಿಲೇನೆ ಪಟ್ಟಣಕ್ಕೆ ಹೊರಟೆವು. 15 ೧೫ ಅಲ್ಲಿಂದ ಹೊರಟು ಮರುದಿನ ಖೀಯೊಸ್‍ ದ್ವೀಪಕ್ಕೆ ಎದುರಾಗಿ ಬಂದು ಅದರ ಮರುದಿನ ಸಾಮೊಸಿನ ಹತ್ತಿರ ಬಂದೆವು. ಮರುದಿನ ಮಿಲೇತಕ್ಕೆ ಸೇರಿದೆವು. 16 ೧೬ ಪೌಲನು ತನಗೆ ಸಾಧ್ಯವಾದರೆ ಪಂಚಾಶತ್ತಮ ದಿನದ ಹಬ್ಬಕ್ಕೆ ಯೆರೂಸಲೇಮಿನಲ್ಲಿರಬೇಕೆಂದು ಅವಸರಪಡುತ್ತಾ ಇದ್ದುದರಿಂದ ಆಸ್ಯಸೀಮೆಯಲ್ಲಿ ಕಾಲವನ್ನು ಕಳೆಯುವುದಕ್ಕೆ ಮನಸ್ಸಿಲ್ಲದೆ ಎಫೆಸ ಪಟ್ಟಣವನ್ನು ದಾಟಿಹೋಗಬೇಕೆಂದು ತೀರ್ಮಾನಿಸಿಕೊಂಡಿದ್ದನು. 17 ೧೭ ಅವನು ಮಿಲೇತದಿಂದ ಎಫೆಸಕ್ಕೆ ಹೇಳಿಕಳುಹಿಸಿ ಅಲ್ಲಿಯ ಸಭೆಯ ಹಿರಿಯರನ್ನು ಕರಿಸಿದನು. 18 ೧೮ ಅವರು ಅವನ ಬಳಿಗೆ ಬಂದಾಗ ಅವರಿಗೆ ಅವನು ಹೇಳಿದ್ದೇನಂದರೆ; “ನಾನು ಆಸ್ಯಸೀಮೆಯಲ್ಲಿ ಕಾಲಿಟ್ಟ ಮೊದಲನೆಯ ದಿನದಿಂದ ನಿಮ್ಮ ಮಧ್ಯೆ ಎಲ್ಲಾ ಕಾಲಗಳಲ್ಲಿಯೂ ಹೇಗೆ ನಡೆದುಕೊಂಡೆನೆಂಬುದನ್ನು ನೀವೇ ಬಲ್ಲಿರಿ. 19 ೧೯ ಯೆಹೂದ್ಯರ ಒಳಸಂಚುಗಳಿಂದ ಸಂಭವಿಸಿದ ಸಂಕಷ್ಟಗಳಲ್ಲಿ, ನಾನು ಅತಿ ನಮ್ರತೆಯಿಂದಲೂ, ಕಣ್ಣೀರಿನಿಂದಲೂ ಕರ್ತನ ಸೇವೆ ಮಾಡುತ್ತಿದ್ದೇನೆ. 20 ೨೦ ನಾನು ನಿಮಗೆ ಹಿತಕರವಾದದ್ದೆಲ್ಲವನ್ನು ಹೇಳುವುದಕ್ಕೂ, ಸಭೆಯಲ್ಲಿಯೂ, ಮನೆಮನೆಯಲ್ಲಿಯೂ, ಉಪದೇಶಿಸುವದಕ್ಕೂ ಹಿಂತೆಗೆಯದೆ 21 ೨೧ ಯೆಹೂದ್ಯರಿಗೂ, ಗ್ರೀಕರಿಗೂ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳಬೇಕೆಂತಲೂ, ನಮ್ಮ ಕರ್ತನಾದ ಯೇಸುವಿನ ಮೇಲೆ ನಂಬಿಕೆಯಿಡಬೇಕೆಂತಲೂ ದೃಢವಾಗಿ ಬೋಧಿಸುವವನಾಗಿದ್ದೆನು, ಇದೆಲ್ಲಾ ನಿಮಗೇ ತಿಳಿದಿದೆ. 22 ೨೨ ಇಗೋ, ನಾನು ಈಗ ಪವಿತ್ರಾತ್ಮನ ನಿರ್ಬಂಧವುಳ್ಳವನಾಗಿ ಯೆರೂಸಲೇಮಿಗೆ ಹೋಗುತ್ತಿದ್ದೇನೆ. ಅಲ್ಲಿ ನನಗೆ ಏನು ಸಂಭವಿಸುವುದೋ ನಾನರಿಯೆನು. 23 ೨೩ ನಿನಗೆ ಬೇಡಿಗಳೂ, ಹಿಂಸೆಗಳೂ ಕಾದುಕೊಂಡಿವೆ ಎಂದು ಪವಿತ್ರಾತ್ಮನು ಎಲ್ಲಾ ಪಟ್ಟಣಗಳಲ್ಲಿಯೂ ನನಗೆ ಎಚ್ಚರಿಕೆ ನೀಡಿದ್ದಾನೆ ಎಂಬುದನ್ನು ಬಲ್ಲೆನು. 24 ೨೪ ಆದರೆ ಪ್ರಾಣವನ್ನು ಉಳಿಸಿಕೊಳ್ಳುವುದೇ ಶ್ರೇಷ್ಠವೆಂದು ನಾನು ಎಣಿಸುವುದಿಲ್ಲ; ದೇವರ ಕೃಪೆಯ ವಿಷಯವಾದ ಸುವಾರ್ತೆಯನ್ನು ಆಸಕ್ತಿಯಿಂದ ಸಾಕ್ಷ್ಯಪೂರಕವಾಗಿ ಸಾರುವ ನಿಯೋಗವನ್ನು ಕರ್ತನಾದ ಯೇಸುವಿನಿಂದ ನಾನು ಹೊಂದಿದ್ದೇನೆ ಈ ನಿಯೋಗವನ್ನು ಪೂರ್ಣಗೊಳಿಸುವುದೊಂದೇ ನನ್ನ ಅಪೇಕ್ಷೆಯಾಗಿದೆ. 25 ೨೫ ಇಗೋ, ಇಷ್ಟು ದಿನ ನಿಮ್ಮಲ್ಲಿ ಸಂಚಾರಮಾಡಿ ದೇವರ ರಾಜ್ಯವನ್ನು ಸಾರಿದವನಾದ ನನ್ನ ಮುಖವನ್ನು ಇನ್ನು ಮೇಲೆ ನಿಮ್ಮಲ್ಲಿ ಒಬ್ಬರೂ ನೋಡುವುದಿಲ್ಲವೆಂದು ಬಲ್ಲೆನು. 26 ೨೬ ಆದಕಾರಣ ನಾನು ಈ ಹೊತ್ತು ಖಂಡಿತವಾಗಿ ಹೇಳುತ್ತೇನೆ, ನಿಮ್ಮಲ್ಲಿ ಯಾರಾದರೂ ನಾಶವಾದರೆ ಅದು ನನ್ನ ತಪ್ಪಿನಿಂದಲ್ಲ. 27 ೨೭ ಏಕೆಂದರೆ ಒಂದನ್ನೂ ಮರೆಮಾಡದೆ ದೇವರ ಸಂಕಲ್ಪವನ್ನೆಲ್ಲಾ ನಿಮಗೆ ತಿಳಿಸಿದ್ದೇನೆ. 28 ೨೮ ಕರ್ತನು ತನ್ನ ಸ್ವಂತ ರಕ್ತದಿಂದ ಸಂಪಾದಿಸಿಕೊಂಡ ದೇವರ ಸಭೆಯನ್ನು ಪರಿಪಾಲಿಸುವುದಕ್ಕಾಗಿ ಪವಿತ್ರಾತ್ಮನು ನಿಮ್ಮನ್ನೇ ಆ ಗುಂಪಿನಲ್ಲಿ ಅಧ್ಯಕ್ಷರನ್ನಾಗಿ ಇಟ್ಟಿರುವುದರಿಂದ ನಿಮ್ಮ ವಿಷಯದಲ್ಲಿಯೂ, ಎಲ್ಲಾ ಹಿಂಡಿನ ವಿಷಯದಲ್ಲಿಯೂ ಎಚ್ಚರಿಕೆಯಾಗಿರಿ. 29 ೨೯ ನಾನು ಹೋದ ಮೇಲೆ ಕ್ರೂರವಾದ ತೋಳಗಳು ನಿಮ್ಮೊಳಗೆ ಬರುವುದೆಂದು ನಾನು ಬಲ್ಲೆನು; ಅವು ಹಿಂಡನ್ನು ಕನಿಕರಿಸುವುದಿಲ್ಲ. 30 ೩೦ ಇದಲ್ಲದೆ ನಿಮ್ಮಲ್ಲೇ ಕೆಲವರು ಎದ್ದು ಅಸತ್ಯವಾದ ಬೋಧನೆಗಳನ್ನು ಮಾಡಿ ಶಿಷ್ಯರನ್ನು ತಮ್ಮ ಕಡೆಗೆ ಎಳೆದುಕೊಳ್ಳುವರು. 31 ೩೧ ಆದಕಾರಣ ನಾನು ಕಣ್ಣೀರು ಸುರಿಸುತ್ತಾ ಮೂರು ವರ್ಷ ಹಗಲಿರುಳು ಎಡೆಬಿಡದೆ ಪ್ರತಿಯೊಬ್ಬನಿಗೆ ಬುದ್ಧಿ ಹೇಳಿದೆನೆಂಬುದನ್ನು ನೀವು ನೆನಪಿಸಿಕೊಂಡು ಎಚ್ಚರವಾಗಿರಿ. 32 ೩೨ ನಾನೀಗ ನಿಮ್ಮನ್ನು ದೇವರಿಗೂ, ಆತನ ಕೃಪಾವಾಕ್ಯಕ್ಕೂ ಒಪ್ಪಿಸಿಕೊಡುತ್ತೇನೆ. ಆತನು ನಿಮ್ಮಲ್ಲಿ ಭಕ್ತಿವೃದ್ಧಿಯನ್ನುಂಟುಮಾಡುವುದಕ್ಕೂ, ಪರಿಶುದ್ಧರೊಂದಿಗೆ ನಿಮಗೆ ಹಕ್ಕನ್ನು ಅನುಗ್ರಹಿಸುವುದಕ್ಕೆ ಶಕ್ತನಾಗಿದ್ದಾನೆ. 33 ೩೩ ನಾನು ಯಾರ ಬೆಳ್ಳಿಬಂಗಾರವನ್ನಾಗಲಿ, ಉಡಿಗೆತೊಡಿಗೆಯನ್ನಾಗಲಿ ಬಯಸಲಿಲ್ಲ. 34 ೩೪ ಈ ಕೈಗಳಿಂದಲೇ ಕೆಲಸಮಾಡಿ, ನನ್ನ ಕೊರತೆಗಳನ್ನೂ, ನನ್ನ ಜೊತೆಯಲ್ಲಿದ್ದವರ ಕೊರತೆಗಳನ್ನು ನೀಗಿಸಿದ್ದನ್ನು ನೀವೇ ಬಲ್ಲಿರಿ. 35 ೩೫ ಎಲ್ಲಾ ವಿಷಯಗಳಲ್ಲಿ ನಾನು ನಿಮಗೆ ಮಾದರಿ ತೋರಿಸಿದ್ದೇನೆ. ನೀವು ಹಾಗೆಯೇ ದುಡಿದು ಬಲವಿಲ್ಲದವರಿಗೆ ಉಪಕಾರಮಾಡಬೇಕು; ಮತ್ತು; ‘ತೆಗೆದುಕೊಳ್ಳುವುದಕ್ಕಿಂತ ಕೊಡುವುದೇ ಹೆಚ್ಚಿನ ಭಾಗ್ಯವೆಂಬುದಾಗಿ’ ಕರ್ತನಾದ ಯೇಸು ತಾನೇ ಹೇಳಿದ ಮಾತುಗಳನ್ನು ನೆನಪಿನಲ್ಲಿಟ್ಟುಕೊಂಡಿರಬೇಕು” ಅಂದನು. 36 ೩೬ ಈ ಮಾತುಗಳನ್ನು ಅವನು ಹೇಳಿದ ಮೇಲೆ ಮೊಣಕಾಲೂರಿಕೊಂಡು ಅವರೆಲ್ಲರ ಸಂಗಡ ಪ್ರಾರ್ಥನೆಮಾಡಿದನು. 37 ೩೭ ಬಳಿಕ ಪೌಲನು; “ನೀವು ನನ್ನ ಮುಖವನ್ನು ಇನ್ನೆಂದೂ ಕಾಣಲಾರಿರಿ” ಅನ್ನಲು, ಅವರೆಲ್ಲರು ವ್ಯಥೆಪಟ್ಟು, ದುಃಖದಿಂದ ಅಳುತ್ತಾ, ಅವನ ಕೊರಳನ್ನು ತಬ್ಬಿಕೊಂಡು ಅವನಿಗೆ ಮುದ್ದಿಟ್ಟರು. 38 ೩೮ ತರುವಾಯ ಅವರು ಹಡಗಿನವರೆಗೆ ಅವನ ಸಂಗಡ ಹೋಗಿ ಅವನನ್ನು ಬೀಳ್ಕೊಟ್ಟರು.

< ಅಪೊಸ್ತಲರ ಕೃತ್ಯಗಳ 20 >