< ಪೂರ್ವಕಾಲವೃತ್ತಾಂತ ದ್ವಿತೀಯ ಭಾಗ 35 >

1 ಯೋಷೀಯನು ಯೆಹೋವನಿಗೋಸ್ಕರ ಯೆರೂಸಲೇಮಿನಲ್ಲಿ ಪಸ್ಕಹಬ್ಬವನ್ನು ಆಚರಿಸುವಂತೆ ಮಾಡಿದನು. ಮೊದಲನೆಯ ತಿಂಗಳಿನ ಹದಿನಾಲ್ಕನೆಯ ದಿನದಲ್ಲಿ ಪಸ್ಕದ ಕುರಿಗಳನ್ನು ಕೊಯ್ದರು.
ಯೋಷೀಯನು ಯೆರೂಸಲೇಮಿನಲ್ಲಿ ಯೆಹೋವ ದೇವರಿಗೆ ಪಸ್ಕವನ್ನು ಆಚರಿಸಿದನು. ಮೊದಲನೆಯ ತಿಂಗಳ ಹದಿನಾಲ್ಕನೆಯ ದಿವಸದಲ್ಲಿ ಪಸ್ಕದ ಕುರಿಮರಿಯನ್ನು ವಧಿಸಿದರು.
2 ಯೋಷೀಯನು ಯಾಜಕರನ್ನು ಅವರವರ ಕೆಲಸಕ್ಕೆ ನೇಮಿಸಿ, ಯೆಹೋವನ ಆಲಯದ ಸೇವೆಗಾಗಿ ಅವರನ್ನು ಪ್ರೋತ್ಸಾಹಿಸಿದನು.
ಆಗ ಅವನು ಯಾಜಕರನ್ನು ಅವರವರ ಕೆಲಸಗಳಲ್ಲಿ ನಿಲ್ಲಿಸಿ; ಯೆಹೋವ ದೇವರ ಆಲಯದ ಸೇವೆ ಮಾಡುವುದಕ್ಕೆ ಅವರನ್ನು ಪ್ರೋತ್ಸಾಹಿಸಿದನು.
3 ಎಲ್ಲಾ ಇಸ್ರಾಯೇಲರನ್ನು ಉಪದೇಶಿಸತಕ್ಕವರೂ, ಯೆಹೋವನಿಗೆ ಪ್ರತಿಷ್ಠಿತರೂ ಆದ ಲೇವಿಯರಿಗೆ, “ದಾವೀದನ ಮಗನೂ ಇಸ್ರಾಯೇಲ್ ರಾಜನೂ ಆದ ಸೊಲೊಮೋನನು ಕಟ್ಟಿಸಿದ ದೇವಾಲಯದಲ್ಲಿ ಪವಿತ್ರ ಮಂಜೂಷವನ್ನು ಇರಿಸಿರಿ; ಅದನ್ನು ಹೆಗಲಿನ ಮೇಲೆ ಹೊತ್ತುಕೊಳ್ಳುವ ಅಗತ್ಯವಿಲ್ಲ. ಅದು ನಿಮ್ಮ ಹೆಗಲುಗಳಿಗೆ ಹೊರೆಯಾಗಿರಬಾರದು; ಇನ್ನು ಮುಂದೆ ನಿಮ್ಮ ದೇವರಾದ ಯೆಹೋವನನ್ನೂ, ಆತನ ಪ್ರಜೆಗಳಾದ ಇಸ್ರಾಯೇಲರನ್ನೂ ಸೇವಿಸಿರಿ.
“ಸಮಸ್ತ ಇಸ್ರಾಯೇಲರಿಗೆ ಬೋಧಿಸಿದ ಮತ್ತು ಯೆಹೋವ ದೇವರಿಗೆ ಪ್ರತಿಷ್ಠಿತರಾದ ಲೇವಿಯರಿಗೆ ಪರಿಶುದ್ಧವಾದ ಮಂಜೂಷವು ನಿಮ್ಮ ಭುಜಗಳ ಮೇಲೆ ಭಾರವೆಂದೆಣಿಸದೇ, ನೀವು ಅದನ್ನು ಇಸ್ರಾಯೇಲಿನ ಅರಸನಾಗಿರುವ ದಾವೀದನ ಮಗ ಸೊಲೊಮೋನನು ಕಟ್ಟಿಸಿದ ಆಲಯದಲ್ಲಿ ಇರಿಸಿ, ನಿಮ್ಮ ದೇವರಾದ ಯೆಹೋವ ದೇವರನ್ನೂ, ದೇವಜನರಾದ ಇಸ್ರಾಯೇಲರನ್ನೂ ಸೇವಿಸಿರಿ.
4 ಇಸ್ರಾಯೇಲರ ಅರಸನಾದ ದಾವೀದನೂ, ಅವನ ಮಗನಾದ ಸೊಲೊಮೋನನೂ ಬರೆದು ನೇಮಿಸಿದಂತೆ ನಿಮ್ಮ ನಿಮ್ಮ ಗೋತ್ರವರ್ಗಗಳ ಪ್ರಕಾರ ಸಿದ್ಧರಾಗಿದ್ದು,
ಇದಲ್ಲದೆ ಇಸ್ರಾಯೇಲಿನ ಅರಸನಾದ ದಾವೀದನ ಮತ್ತು ಅವನ ಮಗನಾದ ಸೊಲೊಮೋನನ ಬರಹದ ಪ್ರಕಾರವಾಗಿಯೂ, ನಿಮ್ಮ ಗೋತ್ರ ವರ್ಗಗಳ ಪ್ರಕಾರವಾಗಿಯೂ ಸಿದ್ಧಮಾಡಿಕೊಳ್ಳಿರಿ.
5 ನಿಮ್ಮ ಸಹೋದರರಾದ ಇಸ್ರಾಯೇಲರ ಒಂದೊಂದು ಗೋತ್ರಶಾಖೆಗಳಿಗಾಗಿ ನಿಮ್ಮಲ್ಲಿ ಒಂದೊಂದು ಗುಂಪಿನವರು ಪವಿತ್ರಸ್ಥಾನದಲ್ಲಿ ನಿಂತು ಪಸ್ಕದ ಕುರಿಯನ್ನು ವಧಿಸಲಿ
“ಇದರ ಹೊರತಾಗಿ, ಪವಿತ್ರ ಸ್ಥಳಗಳು ಸಾಮಾನ್ಯ ಜನರ ಭಾಗಗಳಿಗೆ ಅನುಗುಣವಾಗಿ ನಿಲ್ಲಬೇಕು, ಲೇವಿಯರು ಕೂಡ ಕುಲಗಳ ಭಾಗಗಳಿಗೆ ಅನುಗುಣವಾಗಿ ನಿಲ್ಲಬೇಕು.
6 ಮೋಶೆಯಿಂದ ಪ್ರಕಟವಾದ ಯೆಹೋವನ ವಿಧಿಗನುಸಾರವಾಗಿ ನಿಮ್ಮ ಸಹೋದರರು ಪಸ್ಕಭೋಜನ ಮಾಡುವಂತೆ ನೀವು ನಿಮ್ಮನ್ನು ಶುದ್ಧಿಪಡಿಸಿಕೊಂಡು ಅವರಿಗಾಗಿ ಎಲ್ಲವನ್ನೂ ಸಿದ್ಧಮಾಡಿರಿ” ಎಂದು ಆಜ್ಞಾಪಿಸಿದನು.
ಪಸ್ಕದ ಕುರಿಮರಿಯನ್ನು ವಧಿಸಿ ನಿಮ್ಮನ್ನು ಪ್ರತಿಷ್ಠೆ ಮಾಡಿಕೊಂಡು, ಯೆಹೋವ ದೇವರು ಮೋಶೆಯ ಮುಖಾಂತರವಾಗಿ ಹೇಳಿದ ವಾಕ್ಯದ ಪ್ರಕಾರ ನಿಮ್ಮ ಸಹೋದರರು ಮಾಡುವ ಹಾಗೆ ಅವರನ್ನು ಸಿದ್ಧಮಾಡಿರಿ,” ಎಂದನು.
7 ಯೋಷೀಯನು ಹಬ್ಬಕ್ಕೆ ಬಂದ ಜನರಿಗೆ ಪಸ್ಕಯಜ್ಞಕ್ಕಾಗಿ ರಾಜಕೀಯ ಸೊತ್ತಿನಿಂದ ಮೂವತ್ತು ಸಾವಿರ ಆಡುಮರಿಗಳನ್ನೂ, ಕುರಿಮರಿಗಳನ್ನೂ, ಮೂರು ಸಾವಿರ ಹೋರಿಗಳನ್ನೂ ದಾನಮಾಡಿದನು.
ಆಗ ಯೋಷೀಯನು ಸಿದ್ಧವಾಗಿದ್ದ ಸಮಸ್ತ ಸಾಮಾನ್ಯ ಜನರಿಗೆ ಪಸ್ಕದ ಆಡುಮರಿಗೋಸ್ಕರ ಮಂದೆಯಿಂದ ಮೂವತ್ತು ಸಾವಿರ ಕುರಿಮರಿಗಳನ್ನೂ, ಮೇಕೆಯ ಮರಿಗಳನ್ನೂ ಕೊಟ್ಟನು. ಇದಲ್ಲದೆ ಮೂರು ಸಾವಿರ ಎತ್ತುಗಳನ್ನೂ ಕೊಟ್ಟನು. ಇವೆಲ್ಲಾ ಅರಸನ ಸ್ವಂತ ಸೊತ್ತಿನಿಂದಲೇ ಕೊಟ್ಟನು.
8 ಅವನ ಸರದಾರರು ಜನರಿಗೂ, ಯಾಜಕರಿಗೂ, ಲೇವಿಯರಿಗೂ ಯಜ್ಞಪಶುಗಳನ್ನು ಸಂತೋಷವಾಗಿ ಕೊಟ್ಟರು. ದೇವಾಲಯದ ಪ್ರಧಾನರಾದ ಹಿಲ್ಕೀಯ, ಜೆಕರ್ಯ, ಯೆಹೀಯೇಲ್ ಎಂಬುವವರು ಯಾಜಕರಿಗೆ ಎರಡು ಸಾವಿರದ ಆರು ನೂರು ಪಸ್ಕದ ಕುರಿಮರಿಗಳನ್ನೂ, ಮುನ್ನೂರು ಹೋರಿಗಳನ್ನೂ ಕೊಟ್ಟರು.
ಹಾಗೆಯೇ ಅವನ ಪ್ರಧಾನರು ಜನರಿಗೂ, ಯಾಜಕರಿಗೂ, ಲೇವಿಯರಿಗೂ ಮನಃಪೂರ್ವಕವಾಗಿ ಕೊಟ್ಟರು. ದೇವರ ಆಲಯದ ನಾಯಕರಾದ ಹಿಲ್ಕೀಯನೂ, ಜೆಕರ್ಯನೂ, ಯೆಹೀಯೇಲನೂ ಪಸ್ಕದ ಬಲಿಗೋಸ್ಕರ ಎರಡು ಸಾವಿರದ ಆರುನೂರು ಪಸ್ಕದ ಬಲಿಗಳನ್ನೂ, ಮುನ್ನೂರು ಎತ್ತುಗಳನ್ನೂ ಯಾಜಕರಿಗೆ ಕೊಟ್ಟರು.
9 ಲೇವಿಯರಲ್ಲಿ ಮುಖ್ಯಸ್ಥರಾದ ಕೋನನ್ಯ, ಸೆಮಾಯ, ನೆತನೇಲ್ ಎಂಬ ಅಣ್ಣತಮ್ಮಂದಿರೂ, ಹಷಲ್ಯ, ಯೆಗೀಯೇಲ್, ಯೋಜಾಬಾದ್ ಎಂಬವರೂ ಲೇವಿಯರಿಗೆ ಐದು ಸಾವಿರ ಪಸ್ಕದ ಕುರಿಮರಿಗಳನ್ನೂ, ಐನೂರು ಹೋರಿಗಳನ್ನೂ ದಾನಮಾಡಿದರು.
ಇದಲ್ಲದೆ ಲೇವಿಯರಲ್ಲಿ ಪ್ರಧಾನರಾದ ಕೋನನ್ಯನೂ, ಅವನ ಸಹೋದರನಾದ ಶೆಮಾಯನೂ, ನೆತನೆಯೇಲನೂ, ಹಷಬ್ಯನೂ, ಯೆಹಿಯೇಲನೂ, ಯೋಜಾಬಾದನೂ ಪಸ್ಕದ ಬಲಿಗಳ ನಿಮಿತ್ತವಾಗಿ ಐದು ಸಾವಿರ ಪಸ್ಕದ ಬಲಿಗಳನ್ನೂ, ಐನೂರು ಎತ್ತುಗಳನ್ನೂ ಲೇವಿಯರಿಗೆ ಕೊಟ್ಟರು.
10 ೧೦ ಸೇವೆಯ ಸಂಬಂಧವಾದದ್ದೆಲ್ಲವನ್ನೂ ಏರ್ಪಡಿಸಿದನಂತರ ಯಾಜಕರು ತಮ್ಮ ತಮ್ಮ ಸ್ಥಳಗಳಲ್ಲಿಯೂ, ಲೇವಿಯರು ಅರಸನ ಅಪ್ಪಣೆಯಂತೆ ವರ್ಗವರ್ಗಗಳಾಗಿಯೂ ನಿಂತರು;
ಹೀಗೆ ಅರಸನ ಆಜ್ಞೆಯ ಪ್ರಕಾರ ಸೇವೆಯನ್ನು ಸಿದ್ಧಮಾಡಲಾಯಿತು. ಯಾಜಕರು ತಮ್ಮ ತಮ್ಮ ಸ್ಥಳಗಳಲ್ಲಿಯೂ, ಲೇವಿಯರು ತಮ್ಮ ತಮ್ಮ ಸರತಿಗಳಲ್ಲಿಯೂ ನಿಂತಿದ್ದರು.
11 ೧೧ ಲೇವಿಯರು ಪಸ್ಕದ ಪಶುಗಳನ್ನು ವಧಿಸಿದರು. ಯಾಜಕರು ಇವರ ಕೈಯಿಂದ ರಕ್ತವನ್ನು ತೆಗೆದುಕೊಂಡು ಪ್ರೋಕ್ಷಿಸಿದರು.
ಲೇವಿಯರು ಪಸ್ಕದ ಕುರಿಮರಿಯನ್ನು ವಧಿಸಿದ ತರುವಾಯ, ಯಾಜಕರು ಅವರ ಕೈಯಿಂದ ರಕ್ತವನ್ನು ತೆಗೆದುಕೊಂಡು ಚಿಮುಕಿಸಿದರು. ಆದರೆ ಲೇವಿಯರು ಚರ್ಮವನ್ನು ಸುಲಿದರು,
12 ೧೨ ಲೇವಿಯರು ಚರ್ಮ ಸುಲಿದು ಹೋಮಕ್ಕಾಗಿ ಪ್ರತ್ಯೇಕಿಸತಕ್ಕದ್ದನ್ನು ಪ್ರತ್ಯೇಕಿಸಿ ಜನರಿಗೆ ಆಯಾ ಗೋತ್ರಶಾಖೆಗಳಿಗನುಸಾರವಾಗಿ ಕೊಟ್ಟರು. ಇವರು ಅದನ್ನು ಮೋಶೆಯ ಧರ್ಮಶಾಸ್ತ್ರವಿಧಿಯ ಮೇರೆಗೆ ಯೆಹೋವನಿಗೆ ಸಮರ್ಪಿಸಬೇಕಾಯಿತು. ಹೋರಿಗಳ ವಿಷಯದಲ್ಲಿಯೂ ಅದೇ ಕ್ರಮವನ್ನು ಅನುಸರಿಸಿದರು.
ಮೋಶೆಯ ಗ್ರಂಥದಲ್ಲಿ ಬರೆದಿರುವಂತೆ, ಜನರ ವಂಶಗಳ ಮನೆಗಳ ಪ್ರಕಾರ, ಯೆಹೋವ ದೇವರಿಗೆ ಅರ್ಪಿಸಲು ಅವರು ಕೊಡುವ ಹಾಗೆ ದಹನಬಲಿಗಳನ್ನು ತೆಗೆದು ಇಟ್ಟರು. ಹಾಗೆಯೇ ಎತ್ತುಗಳನ್ನು ತೆಗೆದಿಟ್ಟರು.
13 ೧೩ ಆಮೇಲೆ ಲೇವಿಯರು ಪಸ್ಕದ ಮಾಂಸವನ್ನು ನಿಯಮದ ಪ್ರಕಾರ ಬೆಂಕಿಯಲ್ಲಿ ಸುಟ್ಟು ದೇವರಿಗೆ ಕಾಣಿಕೆಯಾಗಿ ಸಮರ್ಪಿತವಾದ ಪಶುಗಳ ಮಾಂಸವನ್ನು ಕೊಪ್ಪರಿಗೆ, ಬಾನೆ, ಹಂಡೆಗಳಲ್ಲಿ ಬೇಯಿಸಿ, ಬೇಗನೆ ತಂದು ಜನರಿಗೆ ಬಡಿಸಿದರು.
ಹೀಗೆ ಕಟ್ಟಳೆಯ ಪ್ರಕಾರ ಪಸ್ಕದ ಮಾಂಸವನ್ನು ಬೆಂಕಿಯಿಂದ ಸುಟ್ಟರು. ಆದರೆ ಪರಿಶುದ್ಧವಾದವುಗಳನ್ನು ಗಡಿಗೆಗಳಲ್ಲಿಯೂ, ತಪ್ಪಲೆಗಳಲ್ಲಿಯೂ, ಕೊಪ್ಪರಿಗೆಗಳಲ್ಲಿಯೂ ಬೇಯಿಸಿ, ಶೀಘ್ರವಾಗಿ ಜನರೆಲ್ಲರಿಗೆ ಕಳುಹಿಸಿದರು.
14 ೧೪ ತರುವಾಯ ತಮಗೋಸ್ಕರವೂ ಯಾಜಕರಿಗೋಸ್ಕರವೂ ಸಿದ್ಧಮಾಡಿದರು. ಆರೋನನ ಮಕ್ಕಳಾದ ಯಾಜಕರು ರಾತ್ರಿಯವರೆಗೂ ಸರ್ವಾಂಗಹೋಮಗಳನ್ನೂ, ಕೊಬ್ಬನ್ನೂ ಸರ್ಮಪಿಸುತ್ತಾ ಇದ್ದುದರಿಂದ ಲೇವಿಯರು ತಮಗೋಸ್ಕರ ಹೇಗೋ ಹಾಗೆ ಆರೋನನ ಮಕ್ಕಳಾದ ಯಾಜಕರಿಗೋಸ್ಕರ ಭೋಜನ ಸಿದ್ಧಮಾಡಿದರು.
ತರುವಾಯ ತಮಗೋಸ್ಕರ, ಯಾಜಕರಿಗೋಸ್ಕರ ಭೋಜನವನ್ನು ಸಿದ್ಧಮಾಡಿದರು. ಏಕೆಂದರೆ ಆರೋನನ ಮಕ್ಕಳಾದ ಯಾಜಕರು ರಾತ್ರಿಯ ಪರ್ಯಂತರ ದಹನಬಲಿಗಳನ್ನೂ, ಕೊಬ್ಬನ್ನೂ ಅರ್ಪಿಸುವುದರಲ್ಲಿದ್ದರು. ಆದ್ದರಿಂದ ಲೇವಿಯರು ತಮಗೋಸ್ಕರವೂ, ಆರೋನನ ಮಕ್ಕಳಾದ ಯಾಜಕರಿಗೋಸ್ಕರವೂ ಭೋಜನವನ್ನು ಸಿದ್ಧಮಾಡಿದರು.
15 ೧೫ ಆಸಾಫ್ಯರಾದ ಗಾಯಕರು, ಅರಸನಾದ ದಾವೀದನ ಮತ್ತು ಆಸಾಫ್, ಹೇಮಾನ್, ಅರಸನ ದರ್ಶಿಯಾದ ಯೆದುತೂನ್ ಇವರ ಆಜ್ಞಾನುಸಾರವಾಗಿ ತಮ್ಮ ಸ್ಥಳದಲ್ಲಿ ನಿಂತಿದ್ದರು; ದ್ವಾರಪಾಲಕರು ಆಯಾ ಬಾಗಿಲುಗಳನ್ನು ಕಾಯುತ್ತಿದ್ದರು. ಅವರ ಸಹೋದರರಾದ ಲೇವಿಯರು ಅವರ ಭೋಜನಕ್ಕೆ ಸಿದ್ಧಮಾಡುತ್ತಿದ್ದದರಿಂದ ಅವರು ತಮ್ಮ ತಮ್ಮ ಸೇವೆಯನ್ನು ಬಿಡುವುದಕ್ಕೆ ಕಾರಣವಿರಲಿಲ್ಲ.
ದಾವೀದನೂ, ಆಸಾಫನೂ, ಹೇಮಾನನೂ, ಅರಸನ ಪ್ರವಾದಿಯಾದ ಯೆದುತೂನನೂ ಇವರ ಆಜ್ಞೆಯ ಪ್ರಕಾರ ಆಸಾಫನ ಮಕ್ಕಳಾದ ಹಾಡುಗಾರರು ತಮ್ಮ ಸ್ಥಳದಲ್ಲಿದ್ದರು. ದ್ವಾರಪಾಲಕರು ಬಾಗಿಲಲ್ಲಿ ಇದ್ದರು. ಅವರು ತಮ್ಮ ಸೇವೆಯನ್ನು ಬಿಡಲು ಆಗದೆ ಇತ್ತು. ಏಕೆಂದರೆ ಅವರ ಸಹೋದರರಾದ ಲೇವಿಯರಿಗೋಸ್ಕರ ಭೋಜನವನ್ನು ಸಿದ್ಧಮಾಡುತ್ತಿದ್ದರು.
16 ೧೬ ಈ ಪ್ರಕಾರ ಅರಸನಾದ ಯೋಷೀಯನ ಅಪ್ಪಣೆಯಂತೆ ಪಸ್ಕವನ್ನು ಆಚರಿಸುವುದಕ್ಕೂ ಯೆಹೋವನ ಯಜ್ಞವೇದಿಯ ಮೇಲೆ ಸರ್ವಾಂಗಹೋಮಗಳನ್ನರ್ಪಿಸುವುದಕ್ಕೂ ಯೆಹೋವನ ಸೇವೆಯ ಸಂಬಂಧವಾದದ್ದೆಲ್ಲವೂ ಆ ದಿನವೇ ಸಿದ್ಧವಾಯಿತು.
ಹೀಗೆಯೇ ಅರಸನಾದ ಯೋಷೀಯನ ಆಜ್ಞೆಯ ಪ್ರಕಾರ ಪಸ್ಕವನ್ನು ಆಚರಿಸುವುದಕ್ಕೂ, ಯೆಹೋವ ದೇವರ ಬಲಿಪೀಠದ ಮೇಲೆ ದಹನಬಲಿಗಳನ್ನು ಅರ್ಪಿಸುವುದಕ್ಕೂ, ಅದೇ ಸಮಯದಲ್ಲಿ ಯೆಹೋವ ದೇವರ ಸೇವೆಯು ಸಿದ್ಧವಾಯಿತು.
17 ೧೭ ಕೂಡಿಬಂದಿದ್ದ ಇಸ್ರಾಯೇಲರು ಆ ಕಾಲದಲ್ಲಿ ಪಸ್ಕಹಬ್ಬವನ್ನೂ ಏಳು ದಿನಗಳವರೆಗೆ ಹುಳಿಯಿಲ್ಲದ ರೊಟ್ಟಿಗಳ ಜಾತ್ರೆಯನ್ನೂ ಆಚರಿಸಿದರು.
ಸಿದ್ಧವಾಗಿದ್ದ ಇಸ್ರಾಯೇಲರು ಆ ಕಾಲದಲ್ಲಿ ಪಸ್ಕವನ್ನು ಹುಳಿಯಿಲ್ಲದ ರೊಟ್ಟಿಗಳ ಹಬ್ಬವನ್ನೂ ಏಳು ದಿವಸ ಆಚರಿಸಿದರು.
18 ೧೮ ಇಂಥಾ ಪಸ್ಕಹಬ್ಬವು ಪ್ರವಾದಿಯಾದ ಸಮುವೇಲನ ದಿನಗಳಿಂದ ಇಸ್ರಾಯೇಲರಲ್ಲಿ ನಡೆಯಲೇ ಇಲ್ಲ. ಯೋಷೀಯನೂ, ಯಾಜಕರೂ, ಲೇವಿಯರೂ ಕೂಡಿಬಂದಿದ್ದ ಇಸ್ರಾಯೇಲರು, ಯೆಹೂದ್ಯರು, ಯೆರೂಸಲೇಮಿನವರೂ ಪಸ್ಕಹಬ್ಬವನ್ನು ಆಚರಿಸಿದಂತೆ ಇಸ್ರಾಯೇಲ್ ರಾಜರಲ್ಲಿ ಒಬ್ಬನೂ ಆಚರಿಸಲಿಲ್ಲ.
ಪ್ರವಾದಿಯಾದ ಸಮುಯೇಲನ ದಿವಸಗಳು ಮೊದಲುಗೊಂಡು ಇಸ್ರಾಯೇಲಿನಲ್ಲಿ ಇಂಥಾ ಪಸ್ಕವನ್ನು ಆಚರಿಸಿರಲಿಲ್ಲ. ಇಸ್ರಾಯೇಲಿನ ಸಮಸ್ತ ಅರಸರಲ್ಲಿ ಯೋಷೀಯನೂ, ಯಾಜಕರೂ, ಲೇವಿಯರೂ, ಸಿದ್ಧವಾಗಿದ್ದ ಯೆಹೂದ ಹಾಗೂ ಇಸ್ರಾಯೇಲರೆಲ್ಲರೂ, ಯೆರೂಸಲೇಮಿನ ನಿವಾಸಿಗಳೂ ಆಚರಿಸಿದ ಪಸ್ಕದ ಹಾಗೆ ಯಾರೂ ಆಚರಿಸಲಿಲ್ಲ.
19 ೧೯ ಈ ಪಸ್ಕಹಬ್ಬವು ಯೋಷೀಯನ ಆಳ್ವಿಕೆಯ ಹದಿನೆಂಟನೆಯ ವರ್ಷದಲ್ಲಿ ನಡೆಯಿತು.
ಯೋಷೀಯನ ಆಳ್ವಿಕೆಯ ಹದಿನೆಂಟನೆಯ ವರ್ಷದಲ್ಲಿ ಈ ಪಸ್ಕಹಬ್ಬವನ್ನು ಆಚರಿಸಲಾಯಿತು.
20 ೨೦ ಯೋಷೀಯನು ದೇವಾಲಯದ ವಿಷಯದಲ್ಲಿ ಈ ಎಲ್ಲಾ ವ್ಯವಸ್ಥೆಯನ್ನು ಮಾಡಿದನಂತರ ಐಗುಪ್ತದ ಅರಸನಾದ ನೆಕೋ ಎಂಬುವವನು ಯುದ್ಧಮಾಡುವುದಕ್ಕೋಸ್ಕರ ಯೂಫ್ರೆಟಿಸ್ ನದಿಯ ತೀರದಲ್ಲಿದ್ದ ಕರ್ಕೆಮೀಷಿಗೆ ಹೋದನು.
ಯೋಷೀಯನು ಮಹಾ ದೇವಾಲಯದ ವಿಷಯದಲ್ಲಿ ಈ ಎಲ್ಲಾ ವ್ಯವಸ್ಥೆಯನ್ನು ಮಾಡಿದ ನಂತರ, ಈಜಿಪ್ಟಿನ ಅರಸ ನೆಕೋ ಎಂಬವನು ಯುದ್ಧಮಾಡುವುದಕ್ಕಾಗಿ ಯೂಫ್ರೇಟೀಸ್ ನದಿಯ ತೀರದಲ್ಲಿದ್ದ ಕರ್ಕೆಮೀಷಿಗೆ ಬಂದನು. ಯೋಷೀಯನು ಅವನನ್ನು ಯುದ್ಧದಲ್ಲಿ ಎದುರಿಸಲು ಹೋದನು.
21 ೨೧ ಯೋಷೀಯನು ಅವನಿಗೆ ವಿರುದ್ಧವಾಗಿ ಹೊರಡಲು ನೆಕೋವನು ಅವನ ಬಳಿಗೆ ದೂತರನ್ನು ಕಳುಹಿಸಿ, “ಯೆಹೂದದ ಅರಸನೇ, ನನ್ನ ಗೊಡವೆ ನಿನಗೇಕೆ? ನಾನು ಈ ಸಾರಿ ಯುದ್ಧಕ್ಕೆ ಹೊರಟದ್ದು ನಿನಗೆ ವಿರುದ್ಧವಾಗಿ ಅಲ್ಲ. ನನ್ನ ಶತ್ರುವಂಶಕ್ಕೆ ವಿರುದ್ಧವಾಗಿ, ನಾನು ಮುನ್ನುಗ್ಗಬೇಕೆಂದು ದೇವರ ಅಪ್ಪಣೆಯಾಗಿದೆ. ನನ್ನೊಂದಿಗಿರುವ ದೇವರಿಗೆ ವಿರುದ್ಧ ಕೈಯೆತ್ತುವುದನ್ನು ಬಿಡು. ಇಲ್ಲವಾದರೆ ಆತನು ನಿನ್ನನ್ನು ನಾಶಮಾಡುವನು” ಎಂದು ಹೇಳಿಸಿದನು.
ಆದರೆ ಇವನು ಯೋಷೀಯನ ಬಳಿಗೆ ಸೇವಕರನ್ನು ಕಳುಹಿಸಿ, “ಯೆಹೂದದ ಅರಸನೇ, ನನಗೆ ನೀನು ಏನು? ಈ ಹೊತ್ತು ನಿನ್ನ ಮೇಲೆ ಅಲ್ಲ. ನಾನು ಯುದ್ಧಮಾಡುವ ವೈರಿಯ ಮೇಲೆಯೇ ದಾಳಿಮಾಡುತ್ತೇನೆ. ತ್ವರೆಮಾಡು ಎಂದು ದೇವರು ನನಗೆ ಹೇಳಿದ್ದಾರೆ. ನನ್ನ ಸಂಗಡ ಇರುವ ದೇವರು ನಿನ್ನನ್ನು ನಾಶಮಾಡದ ಹಾಗೆ ನೀನು ದೇವರ ಮುಂದೆ ಸುಮ್ಮನಿರು.”
22 ೨೨ ಆದರೆ ಯೋಷೀಯನು ಅವನನ್ನು ಬಿಟ್ಟು ಹಿಂದಿರುಗಲಿಲ್ಲ. ದೈವೋಕ್ತಿಯಾಗಿದ್ದ ನೆಕೋವಿನ ಮಾತಿಗೆ ಕಿವಿಗೊಡದೆ, ವೇಷಹಾಕಿಕೊಂಡು ಅವನೊಡನೆ ಕಾದಾಡುವುದಕ್ಕೆ ಮೆಗಿದ್ದೋ ಬಯಲಿಗೆ ಹೋದನು.
ಆದಾಗ್ಯೂ ಯೋಷೀಯನು ತನ್ನ ಮುಖವನ್ನು ಅವನ ಕಡೆಯಿಂದ ತಿರುಗಿಸದೆ, ಅವನ ಸಂಗಡ ಯುದ್ಧಮಾಡಲು ತನ್ನ ವೇಷ ಮರೆಸಿಕೊಂಡು ಹೋದನು. ಯೋಷೀಯನು ದೇವರ ಬಾಯಿಂದ ಬಂದ ನೆಕೋ ಎಂಬವನ ಮಾತುಗಳನ್ನು ಕೇಳದೆ ಮೆಗಿದ್ದೋ ತಗ್ಗಿನಲ್ಲಿ ಯುದ್ಧಮಾಡಲು ಬಂದನು.
23 ೨೩ ಅಲ್ಲಿ ಬಿಲ್ಲುಗಾರರು ಅರಸನಾದ ಯೋಷೀಯನಿಗೆ ಬಾಣವನ್ನೆಸೆದಾಗ ಅವನು ತನ್ನ ಸೇವಕರಿಗೆ, “ನನಗೆ ದೊಡ್ಡ ಗಾಯವಾಯಿತು, ನನ್ನನ್ನು ಆಚೆಗೆ ತೆಗೆದುಕೊಂಡು ಹೋಗಿರಿ” ಎಂದನು.
ಆಗ ಬಿಲ್ಲುಗಾರರು ಅರಸನಾದ ಯೋಷೀಯನ ಮೇಲೆ ಬಾಣವನ್ನು ಎಸೆದರು. ಅರಸನು ತನ್ನ ಸೇವಕರಿಗೆ, “ನನ್ನನ್ನು ಆಚೆಗೆ ಒಯ್ಯಿರಿ, ಏಕೆಂದರೆ ಬಹು ಗಾಯಪಟ್ಟಿದ್ದೇನೆ,” ಎಂದನು.
24 ೨೪ ಸೇವಕರು ಅವನನ್ನು ಯುದ್ಧರಥದಿಂದಿಳಿಸಿ, ಅವನ ಎರಡನೆಯ ರಥದಲ್ಲಿ ಮಲಗಿಸಿ ಯೆರೂಸಲೇಮಿಗೆ ತೆಗೆದುಕೊಂಡು ಹೋಗಲು ಅಲ್ಲಿ ಸತ್ತನು. ಅವನ ಶವವನ್ನು ಅವನ ಪೂರ್ವಿಕರ ಸ್ಮಶಾನದಲ್ಲಿ ಸಮಾಧಿಮಾಡಿದರು. ಎಲ್ಲಾ ಯೆಹೂದ್ಯರೂ ಯೆರೂಸಲೇಮಿನವರೂ ಯೋಷೀಯನ ವಿಷಯವಾಗಿ ಗೋಳಾಡಿದರು.
ಆದ್ದರಿಂದ ಅವನ ಸೇವಕರು ಆ ರಥದೊಳಗಿಂದ ಅವನನ್ನು ತೆಗೆದುಕೊಂಡು, ಅವನಿಗಿದ್ದ ಎರಡನೆಯ ರಥದಲ್ಲಿ ಅವನನ್ನು ಇರಿಸಿ ಯೆರೂಸಲೇಮಿಗೆ ತಂದರು. ಅವನು ಅಲ್ಲಿ ಮರಣ ಹೊಂದಲು, ಅವನ ಶವವನ್ನು ಅವನ ಪಿತೃಗಳ ಸ್ಮಶಾನದಲ್ಲಿ ಸಮಾಧಿಮಾಡಿದರು. ಸಮಸ್ತ ಯೆಹೂದ ಮತ್ತು ಯೆರೂಸಲೇಮಿನವರು ಯೋಷೀಯನಿಗೋಸ್ಕರ ದುಃಖಪಟ್ಟರು.
25 ೨೫ ಯೆರೆಮೀಯನು ಯೋಷೀಯನನ್ನು ಕುರಿತು ಶೋಕಗೀತವನ್ನು ರಚಿಸಿದನು. ಎಲ್ಲಾ ಗಾಯಕರೂ ಗಾಯಕಿಯರೂ ಅವನನ್ನು ಇಂದಿನ ವರೆಗೆ ತಮ್ಮ ಶೋಕಗೀತಗಳಲ್ಲಿ ವರ್ಣಿಸುತ್ತಿರುತ್ತಾರೆ. ಆ ಗೀತೆಗಳನ್ನು ಹಾಡುವುದು ಇಸ್ರಾಯೇಲರಲ್ಲಿ ಒಂದು ಪದ್ಧತಿಯಾಗಿದೆ. ಅವು ಶೋಕಗೀತಗ್ರಂಥದಲ್ಲಿ ಬರೆದಿರುತ್ತವೆ.
ಯೆರೆಮೀಯನು ಯೋಷೀಯನಿಗೋಸ್ಕರ ದುಃಖ ಗೀತವನ್ನು ಬರೆದನು. ಹಾಡುಗಾರರೂ, ಹಾಡುಗಾರ್ತಿಯರೂ ಯೋಷೀಯನನ್ನು ಇದುವರೆಗೂ ತಮ್ಮ ಗೋಳಾಟ ಪದ್ಯಗಳಲ್ಲಿ ಸ್ಮರಿಸಿಕೊಳ್ಳುತ್ತಾರೆ. ಇದು ಇಸ್ರಾಯೇಲಿನಲ್ಲಿ ಸಂಪ್ರದಾಯವಾಯಿತು ಮತ್ತು ಈ ಗೀತೆಗಳು ಪ್ರಲಾಪಗಳಲ್ಲಿ ಬರೆದಿರುತ್ತವೆ.
26 ೨೬ ಯೋಷೀಯನ ಉಳಿದ ಚರಿತ್ರೆಯೂ ಯೆಹೋವನ ಧರ್ಮಶಾಸ್ತ್ರ ಅನುಸಾರವಾದ ಅವನ ಭಕ್ತಿಕಾರ್ಯಗಳೂ,
ಯೋಷೀಯನ ಮಿಕ್ಕಾದ ಕ್ರಿಯೆಗಳು ಯೆಹೋವ ದೇವರ ನಿಯಮದಲ್ಲಿ ಬರೆದಿರುವ ಪ್ರಕಾರ, ಅವನು ಮಾಡಿದ ಭಕ್ತಿಕಾರ್ಯಗಳೂ,
27 ೨೭ ಅವನ ಪೂರ್ವೋತ್ತರ ವೃತ್ತಾಂತವೂ ಇಸ್ರಾಯೇಲರ ಮತ್ತು ಯೆಹೂದ್ಯ ರಾಜರ ಗ್ರಂಥದಲ್ಲಿ ಬರೆದಿರುತ್ತವೆ.
ಅವನ ಕ್ರಿಯೆಗಳೂ, ಮೊದಲನೆಯವುಗಳೂ, ಕಡೆಯವುಗಳೂ ಇಸ್ರಾಯೇಲ್ ಯೆಹೂದದ ಅರಸರ ಪುಸ್ತಕದಲ್ಲಿ ಬರೆದಿರುತ್ತವೆ.

< ಪೂರ್ವಕಾಲವೃತ್ತಾಂತ ದ್ವಿತೀಯ ಭಾಗ 35 >