< ಪೂರ್ವಕಾಲವೃತ್ತಾಂತ ದ್ವಿತೀಯ ಭಾಗ 30 >

1 ತರುವಾಯ ಹಿಜ್ಕೀಯನು, ಇಸ್ರಾಯೇಲ್ ದೇವರಾದ ಯೆಹೋವನ ಪಸ್ಕಹಬ್ಬವನ್ನು ಆಚರಿಸುವುದಕ್ಕಾಗಿ ಯೆರೂಸಲೇಮಿನಲ್ಲಿರುವ ಯೆಹೋವನ ಆಲಯಕ್ಕೆ ಬರಬೇಕೆಂದು, ಎಲ್ಲಾ ಇಸ್ರಾಯೇಲರಿಗೂ, ಯೆಹೂದ್ಯರಿಗೂ, ಎಫ್ರಾಯೀಮ್ಯರಿಗೂ, ಮನಸ್ಸೆಯವರಿಗೂ ದೂತರ ಮುಖಾಂತರವಾಗಿ ಮತ್ತು ಪತ್ರಗಳ ಮೂಲಕವಾಗಿ ತಿಳಿಯಪಡಿಸಿದನು.
ಆಗ ಅವರು ಇಸ್ರಾಯೇಲಿನ ದೇವರಾದ ಯೆಹೋವ ದೇವರ ಪಸ್ಕವನ್ನು ಆಚರಿಸಲು ಯೆರೂಸಲೇಮಿನಲ್ಲಿ ಯೆಹೋವ ದೇವರ ಆಲಯಕ್ಕೆ ಬರುವಂತೆ ಹಿಜ್ಕೀಯನು ಸಮಸ್ತ ಇಸ್ರಾಯೇಲಿಗೂ ಯೆಹೂದಕ್ಕೂ ಹೇಳಿ ಕಳುಹಿಸಿ ಎಫ್ರಾಯೀಮ್ಯರಿಗೂ ಮನಸ್ಸೆಯವರಿಗೂ ಪತ್ರಗಳನ್ನು ಬರೆದನು.
2 ಎರಡನೆಯ ತಿಂಗಳಿನಲ್ಲಿ ಪಸ್ಕಹಬ್ಬವನ್ನು ಯೆರೂಸಲೇಮಿನಲ್ಲಿ ಆಚರಿಸಬೇಕೆಂದು ಅರಸನು, ಪದಾಧಿಕಾರಿಗಳು ಅಭಿಪ್ರಾಯಪಟ್ಟರು.
ಯೆರೂಸಲೇಮಿನಲ್ಲಿರುವ ಅರಸನೂ ಅವನ ಪ್ರಧಾನರೂ ಸಮಸ್ತ ಸಭೆಯೂ ಎರಡನೆಯ ತಿಂಗಳಲ್ಲಿ ಪಸ್ಕವನ್ನು ಆಚರಿಸಲು ತೀರ್ಮಾನಿಸಿಕೊಂಡರು.
3 ಯಾಕೆಂದರೆ ಯಾಜಕರಲ್ಲಿ ಸಾಕಷ್ಟು ಮಂದಿ ತಮ್ಮನ್ನು ಶುದ್ಧಿಪಡಿಸಿಕೊಂಡಿರಲಿಲ್ಲ. ಜನರು ಯೆರೂಸಲೇಮಿನಲ್ಲಿ ಇನ್ನೂ ಒಟ್ಟಾಗಿ ಸೇರಿ ಬಂದಿರಲಿಲ್ಲವಾದುದರಿಂದ ಕೂಡಲೆ ಪಸ್ಕಹಬ್ಬವನ್ನು ಆಚರಿಸಲು ಸಾಧ್ಯವಾಗುವುದಿಲ್ಲವೆಂದು ಅರಸನಿಗೂ ಅವನ ಸರದಾರರಿಗೂ ಯೆರೂಸಲೇಮಿನ ಸರ್ವಸಂಘದವರಿಗೂ ತಿಳಿದುಕೊಂಡರು.
ಯಾಜಕರು ತಮ್ಮನ್ನು ತಕ್ಕ ಹಾಗೆ ಪ್ರತಿಷ್ಠೆ ಮಾಡಿಕೊಂಡಿರಲಿಲ್ಲ. ಜನರು ಯೆರೂಸಲೇಮಿನಲ್ಲಿ ಇನ್ನೂ ಕೂಡಿರಲಿಲ್ಲವಾದುದರಿಂದ ಆ ಕಾಲದಲ್ಲಿ ಪಸ್ಕಹಬ್ಬವನ್ನು ಆಚರಿಸಲಾರದೆ ಇದ್ದರು.
4 ಈ ಅಭಿಪ್ರಾಯವು ಅರಸನಿಗೂ ಸರ್ವಸಮೂಹಕ್ಕೂ ಸರಿಕಂಡದ್ದರಿಂದ
ಈ ಕಾರ್ಯವು ಅರಸನಿಗೂ ಸಮಸ್ತ ಜನರಿಗೂ ಸ್ಪಷ್ಟವಾಯಿತು.
5 ಅವರು, “ಸರ್ವಜನರು ಇಸ್ರಾಯೇಲ್ ದೇವರಾದ ಯೆಹೋವನಿಗೋಸ್ಕರ ಪಸ್ಕಹಬ್ಬವನ್ನು ಆಚರಿಸುವುದಕ್ಕಾಗಿ ಯೆರೂಸಲೇಮಿಗೆ ಬರಬೇಕು” ಎಂಬುದಾಗಿ ಬೇರ್ಷೆಬದಿಂದ ದಾನ್ ವರೆಗೂ ವಾಸಮಾಡುತ್ತಿದ್ದ ಇಸ್ರಾಯೇಲರೊಳಗೆ ಡಂಗುರ ಹೊಡಿಸಬೇಕೆಂದು ನಿರ್ಣಯಿಸಿದರು. ಜನರಲ್ಲಿ ಹೆಚ್ಚು ಮಂದಿ ಆ ವರೆಗೂ ಧರ್ಮಶಾಸ್ತ್ರವಿಧಿಯ ಪ್ರಕಾರ ಪಸ್ಕಹಬ್ಬವನ್ನು ಆಚರಿಸಿರಲಿಲ್ಲ.
ಆದ್ದರಿಂದ ಅವರು ಯೆರೂಸಲೇಮಿನಲ್ಲಿ ಇಸ್ರಾಯೇಲಿನ ದೇವರಾದ ಯೆಹೋವ ದೇವರಿಗೆ ಪಸ್ಕವನ್ನು ಆಚರಿಸಲು ಬರಬೇಕೆಂದು ಬೇರ್ಷೆಬ ಮೊದಲುಗೊಂಡು ದಾನಿನವರೆಗೂ ಸಮಸ್ತ ಇಸ್ರಾಯೇಲಿನಲ್ಲಿ ಕೂಗಿ ಸಾರಲು ನಿರ್ಣಯಿಸಿದರು. ಯೆಹೋವ ದೇವರ ನಿಯಮದ ಪ್ರಕಾರ ಅವರು ಬಹುಕಾಲದಿಂದ ಪಸ್ಕವನ್ನು ಆಚರಿಸಿರಲಿಲ್ಲ.
6 ಅರಸನ ಮತ್ತು ಅವನ ಪದಾಧಿಕಾರಿಗಳಿಂದ ಪತ್ರಗಳನ್ನು ತೆಗೆದುಕೊಂಡು ಹೋದ ದೂತರು ಇಸ್ರಾಯೇಲ್ ಮತ್ತು ಯೆಹೂದ ದೇಶಗಳಲ್ಲೆಲ್ಲಾ ಸಂಚರಿಸಿ ರಾಜಾಜ್ಞೆಯಂತೆ ಹೀಗೆಂದು ಪ್ರಕಟಿಸಿದರು: “ಇಸ್ರಾಯೇಲರೇ, ಅಬ್ರಹಾಮ್, ಇಸಾಕ್ ಮತ್ತು ಇಸ್ರಾಯೇಲರ ದೇವರಾದ ಯೆಹೋವನ ಕಡೆಗೆ ತಿರುಗಿಕೊಳ್ಳಿರಿ. ಆಗ ಆತನು ನಿಮ್ಮಲ್ಲಿ ಅಶ್ಶೂರದ ಅರಸನ ಕೈಗೆ ಸಿಕ್ಕದಂತೆ ತಪ್ಪಿಸಿಕೊಂಡು ಉಳಿದಿರುವ ನಿಮ್ಮ ಕಡೆಗೆ ತಿರುಗಿಕೊಳ್ಳುವನು.
ಅದೇ ಪ್ರಕಾರ ಓಟಗಾರರು ಅರಸನ ಕೈಯಿಂದಲೂ ಅವನ ಪ್ರಧಾನರ ಕೈಯಿಂದಲೂ ಪತ್ರಗಳನ್ನು ತೆಗೆದುಕೊಂಡು, ಅರಸನ ಅಪ್ಪಣೆಯ ಪ್ರಕಾರ ಸಮಸ್ತ ಇಸ್ರಾಯೇಲ್ ಮತ್ತು ಯೆಹೂದ ದೇಶಗಳಿಗೆ ಹೋಗಿ, “ಇಸ್ರಾಯೇಲರೇ, ಅಬ್ರಹಾಮನ, ಇಸಾಕನ, ಇಸ್ರಾಯೇಲಿನ ದೇವರಾದ ಯೆಹೋವ ದೇವರ ಕಡೆಗೆ ತಿರುಗಿರಿ. ಆಗ ಅವರು ಅಸ್ಸೀರಿಯದ ಅರಸರ ಕೈಗೆ ತಪ್ಪಿಸಿಕೊಂಡ ನಿಮ್ಮ ಉಳಿದವರ ಕಡೆಗೆ ತಿರುಗುವರು.
7 ನಿಮ್ಮ ಪೂರ್ವಿಕರು ಸಹೋದರರೂ ನಡೆದಂತೆ ನೀವೂ ನಡೆಯಬೇಡಿರಿ. ಅವರು ತಮ್ಮ ಪೂರ್ವಿಕರ ದೇವರಾದ ಯೆಹೋವನಿಗೆ ವಿರೋಧವಾಗಿ ದ್ರೋಹಿಗಳಾಗಿದ್ದುದರಿಂದ ಆತನು ಅವರನ್ನು ನಾಶನಕ್ಕೆ ಒಪ್ಪಿಸಿದನು. ಅದಕ್ಕೆ ನೀವೇ ಸಾಕ್ಷಿಗಳು.
ನಿಮ್ಮ ತಂದೆಗಳೂ ಸಹೋದರರೂ ನಡೆದಂತೆ ನೀವೂ ನಡೆಯಬೇಡಿರಿ. ಅವರು ತಮ್ಮ ಪಿತೃಗಳ ದೇವರಾದ ಯೆಹೋವ ದೇವರಿಗೆ ವಿರೋಧವಾಗಿ ದ್ರೋಹಿಗಳಾದದರಿಂದ ಆತನು ಅವರನ್ನು ನಾಶನಕ್ಕೆ ಒಪ್ಪಿಸಿದನು. ಅದಕ್ಕೆ ನೀವೇ ಸಾಕ್ಷಿಗಳು.
8 ಈಗ ನೀವು ನಿಮ್ಮ ಪೂರ್ವಿಕರಂತೆ ರಾಜಾಜ್ಞೆಗೆ ಮಣಿಯದವರಾಗಿರಬೇಡಿರಿ, ಯೆಹೋವನಿಗೆ ಅಧೀನರಾಗಿರಿ. ನಿಮ್ಮ ದೇವರಾದ ಯೆಹೋವನು ಸದಾಕಾಲಕ್ಕೂ ಪ್ರತಿಷ್ಠಿಸಿಕೊಂಡಿರುವ ಪವಿತ್ರಾಲಯಕ್ಕೆ ಬಂದು ಆತನನ್ನು ಆರಾಧಿಸಿರಿ. ಆಗ ನಿಮ್ಮ ಮೇಲಿರುವ ಆತನ ಉಗ್ರಕೋಪವು ತೊಲಗಿಹೋಗುವುದು.
ಆದ್ದರಿಂದ ನಿಮ್ಮ ಪಿತೃಗಳ ಹಾಗೆ ನಿಮ್ಮನ್ನು ಕಠಿಣಪಡಿಸಿಕೊಳ್ಳಬೇಡಿರಿ. ಯೆಹೋವ ದೇವರಿಗೆ ಅಧೀನರಾಗಿ ಅವರು ಯುಗಯುಗಕ್ಕೂ ಪ್ರತಿಷ್ಠೆ ಮಾಡಿದ ಪರಿಶುದ್ಧ ಸ್ಥಾನದಲ್ಲಿ ಪ್ರವೇಶಿಸಿದ ನಿಮ್ಮ ದೇವರಾದ ಯೆಹೋವ ದೇವರನ್ನು ಸೇವಿಸಿರಿ. ಆಗ ದೇವರು ತಮ್ಮ ಕೋಪವನ್ನು ಬಿಟ್ಟು ನಿಮ್ಮ ಕಡೆಗೆ ತಿರುಗುವರು.
9 ನೀವು ಯೆಹೋವನ ಕಡೆಗೆ ತಿರುಗಿಕೊಳ್ಳವುದಾದರೆ ನಿಮ್ಮ ಸಹೋದರರೂ, ಮಕ್ಕಳೂ ತಮ್ಮನ್ನು ಸೆರೆ ಒಯ್ದವರ ದೃಷ್ಟಿಯಲ್ಲಿ ದಯೆಗೆ ಪಾತ್ರರಾಗಿ, ತಿರುಗಿ ಸ್ವದೇಶಕ್ಕೆ ಬರುವರು. ನಿಮ್ಮ ದೇವರಾದ ಯೆಹೋವನು ದಯೆಯೂ, ಕನಿಕರವೂ ಉಳ್ಳವನಾಗಿದ್ದಾನೆ. ಆತನು ತನ್ನ ಕಡೆಗೆ ತಿರುಗಿಕೊಳ್ಳುವ ನಿಮ್ಮನ್ನು ಕಟಾಕ್ಷಿಸದೆ ಇರುವುದಿಲ್ಲ.”
ನೀವು ಯೆಹೋವ ದೇವರ ಕಡೆಗೆ ತಿರುಗಿ ಈ ದೇಶಕ್ಕೆ ಬರುವಂತೆ ತಮ್ಮನ್ನು ಸೆರೆಯಾಗಿ ಒಯ್ದವರ ಸಮ್ಮುಖದಲ್ಲಿ ಅನುಕಂಪವನ್ನು ಹೊಂದುವರು. ಏಕೆಂದರೆ ನಿಮ್ಮ ದೇವರಾದ ಯೆಹೋವ ದೇವರು ಕೃಪೆಯೂ ಅನುಕಂಪವೂ ಉಳ್ಳವರಾಗಿದ್ದಾರೆ. ನೀವು ಅವರ ಕಡೆಗೆ ತಿರುಗಿದರೆ, ಅವರು ನಿಮ್ಮ ಕಡೆಯಿಂದ ತಮ್ಮ ಮುಖವನ್ನು ತಿರುಗಿಸುವುದಿಲ್ಲ,” ಎಂದು ಹೇಳಿದರು.
10 ೧೦ ದೂತರು ಎಫ್ರಾಯೀಮ್, ಮನಸ್ಸೆ, ಜೆಬುಲೂನ್ ಪ್ರಾಂತ್ಯಗಳಲ್ಲಿ, ಪಟ್ಟಣದಿಂದ ಪಟ್ಟಣಕ್ಕೆ ಹೋದರು. ಜನರು ಅವರನ್ನು ಕಂಡು ನಕ್ಕು ಗೇಲಿಮಾಡಿದರು.
ಹೀಗೆಯೇ ಓಟಗಾರರು ಎಫ್ರಾಯೀಮನ, ಮನಸ್ಸೆಯ ದೇಶದಲ್ಲಿ ಜೆಬುಲೂನ್ ಪರ್ಯಂತರ ಸಂಚರಿಸಿ, ಪಟ್ಟಣ ಪಟ್ಟಣವನ್ನು ಹಾದುಹೋದರು. ಆದರೆ ಜನರು ಇವರನ್ನು ನೋಡಿ ನಕ್ಕು ಗೇಲಿ ಮಾಡಿದರು.
11 ೧೧ ಕೆಲವು ಮಂದಿ ಆಶೇರ್ಯರೂ, ಮನಸ್ಸೆಯವರೂ, ಜೆಬುಲೂನ್ಯರೂ ಮಾತ್ರ ತಮ್ಮನ್ನು ತಗ್ಗಿಸಿಕೊಂಡು ಯೆರೂಸಲೇಮಿಗೆ ಬಂದರು.
ಆದರೂ ಆಶೇರ್, ಮನಸ್ಸೆ, ಜೆಬುಲೂನ್, ಇವರಲ್ಲಿ ಕೆಲವರು ತಮ್ಮನ್ನು ತಗ್ಗಿಸಿಕೊಂಡು ಯೆರೂಸಲೇಮಿಗೆ ಬಂದರು.
12 ೧೨ ಯೆಹೂದ್ಯರಾದರೋ ದೇವರ ಕೃಪಾಹಸ್ತದಿಂದ ಪ್ರೇರಣೆಹೊಂದಿ ಏಕ ಮನಸ್ಸುಳ್ಳವರಾಗಿ, ಯೆಹೋವನ ವಾಕ್ಯಕ್ಕೆ ಅನುಸಾರವಾಗಿ ಅರಸನಿಂದಲೂ, ಪದಾಧಿಕಾರಿಗಳಿಂದಲೂ ಹೊರಟ ಆಜ್ಞೆಯನ್ನು ಕೈಕೊಂಡರು.
ಇದಲ್ಲದೆ ಯೆಹೋವ ದೇವರ ವಾಕ್ಯದಿಂದ ಉಂಟಾದ ಅರಸನ ಪ್ರಧಾನರ ಆಜ್ಞೆಯನ್ನು ಕೈಗೊಳ್ಳಲು ಅವರಿಗೆ ಒಂದೇ ಹೃದಯವನ್ನು ಕೊಡಲು ದೇವರ ಕೈ ಯೆಹೂದದವರ ಮೇಲೆ ಇತ್ತು.
13 ೧೩ ಹೀಗೆ, ಅನೇಕಾನೇಕ ಜನರು ಎರಡನೆಯ ತಿಂಗಳಿನಲ್ಲಿ ಹುಳಿಯಿಲ್ಲದ ರೊಟ್ಟಿಗಳ ಹಬ್ಬವನ್ನು ಆಚರಿಸುವುದಕ್ಕಾಗಿ ಯೆರೂಸಲೇಮಿನಲ್ಲಿ ಸೇರಿಬಂದರು; ಆ ಜನಸಮೂಹವು ಮಹಾಸಮೂಹವಾಗಿತ್ತು.
ಎರಡನೆಯ ತಿಂಗಳಲ್ಲಿ ಹುಳಿಯಿಲ್ಲದ ರೊಟ್ಟಿಗಳ ಹಬ್ಬವನ್ನು ಆಚರಿಸುವುದಕ್ಕೆ ಯೆರೂಸಲೇಮಿನಲ್ಲಿ ಬಹಳ ಜನರು ಕೂಡಿಕೊಂಡು ಮಹಾ ದೊಡ್ಡ ಸಮೂಹವಾಯಿತು.
14 ೧೪ ಅವರು ಯೆರೂಸಲೇಮಿನಲ್ಲಿದ್ದ ಯಜ್ಞವೇದಿಗಳನ್ನೂ ಎಲ್ಲಾ ಧೂಪವೇದಿಗಳನ್ನೂ ತೆಗೆದುಕೊಂಡು ಹೋಗಿ ಕಿದ್ರೋನ್ ಹಳ್ಳದಲ್ಲಿ ಬಿಸಾಡಿಬಿಟ್ಟರು.
ಆಗ ಅವರು ಎದ್ದು ಯೆರೂಸಲೇಮಿನಲ್ಲಿದ್ದ ಬಲಿಪೀಠಗಳನ್ನು ಮತ್ತು ಧೂಪಪೀಠಗಳನ್ನು ತೆಗೆದುಹಾಕಿದರು. ಆ ಧೂಪಪೀಠಗಳನ್ನೆಲ್ಲಾ ತೆಗೆದುಕೊಂಡುಹೋಗಿ ಕಿದ್ರೋನ್ ಹಳ್ಳದಲ್ಲಿ ಹಾಕಿದರು.
15 ೧೫ ನಂತರ ಎರಡನೆಯ ತಿಂಗಳಿನ ಹದಿನಾಲ್ಕನೆಯ ದಿನದಲ್ಲಿ ಪಸ್ಕಹಬ್ಬಕ್ಕಾಗಿ ಕುರಿಮರಿಗಳನ್ನು ಕೊಯ್ದರು. ಆಗ ಯಾಜಕರೂ, ಲೇವಿಯರೂ ನಾಚಿಕೆಪಟ್ಟು, ತಮ್ಮನ್ನು ಶುದ್ಧಿಪಡಿಸಿಕೊಂಡು ಯೆಹೋವನ ಆಲಯದಲ್ಲಿ ಸರ್ವಾಂಗಹೋಮಗಳನ್ನ ಸಮರ್ಪಿಸಿದರು.
ಎರಡನೆಯ ತಿಂಗಳ ಹದಿನಾಲ್ಕನೆಯ ದಿವಸದಲ್ಲಿ ಪಸ್ಕದ ಕುರಿಮರಿಯನ್ನು ವಧಿಸಿದರು. ಯಾಜಕರೂ, ಲೇವಿಯರೂ ನಾಚಿಕೆಪಟ್ಟು ತಮ್ಮನ್ನು ಪ್ರತಿಷ್ಠೆ ಮಾಡಿಕೊಂಡು, ಯೆಹೋವ ದೇವರ ಆಲಯದೊಳಗೆ ದಹನಬಲಿಗಳನ್ನು ತಂದರು.
16 ೧೬ ಅವರು ತಮ್ಮ ತಮ್ಮ ಸ್ಥಳಗಳಲ್ಲಿ ನಿಂತು, ದೇವರ ಮನುಷ್ಯನಾದ ಮೋಶೆಯ ಧರ್ಮಶಾಸ್ತ್ರದಿಂದ ತಮಗೆ ನೇಮಕವಾದ ಸೇವೆಯನ್ನು ಮಾಡುತ್ತಿದ್ದರು. ಯಾಜಕರೂ ಲೇವಿಯರ ಕೈಯಿಂದ ರಕ್ತವನ್ನು ತೆಗೆದುಕೊಂಡು ಅದನ್ನು ಪ್ರೋಕ್ಷಿಸಿದರು.
ಇದಲ್ಲದೆ ಅವರು ದೇವರ ಮನುಷ್ಯನಾದ ಮೋಶೆಯ ನಿಯಮದ ಹಾಗೆ ತಮ್ಮ ಪದ್ಧತಿಯ ಪ್ರಕಾರ ತಮ್ಮ ತಮ್ಮ ಸ್ಥಳದಲ್ಲಿ ನಿಂತು, ಯಾಜಕರು, ಲೇವಿಯರ ಕೈಯಿಂದ ರಕ್ತವನ್ನು ತೆಗೆದುಕೊಂಡು ಚಿಮುಕಿಸಿದರು.
17 ೧೭ ಸಮೂಹದಲ್ಲಿ ಅನೇಕರು ತಮ್ಮನ್ನು ಶುದ್ಧಿಪಡಿಸಿಕೊಳ್ಳದೆ ಇದ್ದುದರಿಂದ ಅಶುದ್ಧರಾದವರೆಲ್ಲರ, ಪಸ್ಕಹಬ್ಬದ ಯಜ್ಞಪಶುಗಳು ಯೆಹೋವನಿಗೆ ಮೀಸಲಾಗುವಂತೆ ಅವುಗಳನ್ನು ಲೇವಿಯರೇ ವಧಿಸಿದರು.
ಜನರಲ್ಲಿ ಅನೇಕರು ಅಪರಿಶುದ್ಧರಾಗಿದ್ದರು. ಆದ್ದರಿಂದ ಲೇವಿಯರು ಅಶುದ್ಧರಾದ ಎಲ್ಲರ ನಿಮಿತ್ತ ಅವರನ್ನು ಯೆಹೋವ ದೇವರಿಗೆ ಪ್ರತಿಷ್ಠೆ ಮಾಡುವ ಹಾಗೆ ಪಸ್ಕದ ಬಲಿಗಳನ್ನು ವಧಿಸುವುದಕ್ಕೆ ಇದ್ದರು.
18 ೧೮ ಜನರಲ್ಲಿ ಅನೇಕರು ಅಂದರೆ, ಹೆಚ್ಚಾಗಿ ಎಫ್ರಾಯೀಮ್, ಮನಸ್ಸೆ, ಇಸ್ಸಾಕಾರ್, ಹಾಗು ಜೆಬುಲೂನ್ ಪ್ರಾಂತ್ಯಗಳವರು ತಮ್ಮನ್ನು ಶುದ್ಧಿಪಡಿಸಿಕೊಳ್ಳದೆ ಧರ್ಮಶಾಸ್ತ್ರಕ್ಕೆ ವಿರುದ್ಧವಾದ ರೀತಿಯಿಂದ ಪಸ್ಕದ (ಹಬ್ಬ) ಭೋಜನವನ್ನು ಮಾಡಿದರು. ಆದರೆ ಹಿಜ್ಕೀಯನು, “ಯೆಹೋವನೇ, ದಯಾಪರನಾದ ದೇವರೇ, ಅವರೆಲ್ಲರಿಗೆ ಕ್ಷಮೆಯನ್ನು ಅನುಗ್ರಹಿಸು” ಎಂದು ವಿಜ್ಞಾಪನೆ ಮಾಡಿದನು.
ಎಫ್ರಾಯೀಮ್, ಮನಸ್ಸೆ, ಇಸ್ಸಾಕಾರ್, ಜೆಬುಲೂನ್ ಇವರಲ್ಲಿ ಅನೇಕರು ತಮ್ಮನ್ನು ಶುದ್ಧಮಾಡಿಕೊಳ್ಳದೆ ಮೋಶೆಯ ನಿಯಮಕ್ಕೆ ವಿರುದ್ಧ ರೀತಿಯಿಂದ ಪಸ್ಕದ ಭೋಜನವನ್ನು ಮಾಡಿದರು. ಆದರೆ ಹಿಜ್ಕೀಯನು ಅವರಿಗೋಸ್ಕರ ಪ್ರಾರ್ಥಿಸಿ, “ಯಾವನಾದರೂ ಪರಿಶುದ್ಧ ಸ್ಥಾನದ ಶುದ್ಧಿಯ ಪ್ರಕಾರ ಶುಚಿಯಾಗದೆ ಇದ್ದರೂ,
19 ೧೯ ದೇವಾಲಯಕ್ಕೆ ಯಾತ್ರಿಕರಾಗಿ ಬಂದಿರುವವರಲ್ಲಿ ಇರಬೇಕಾದ ಪರಿಶುದ್ಧತ್ವವು ಅನೇಕರಲ್ಲಿ ಇಲ್ಲದಿದ್ದರೂ ಪೂರ್ವಿಕರ ದೇವರಾದ ಯೆಹೋವನನ್ನು ಹುಡುಕಬೇಕೆಂದು ಮನಸ್ಸುಮಾಡಿರುವವರಿಗೆಲ್ಲರಿಗೂ ಕ್ಷಮೆಯನ್ನು ಅನುಗ್ರಹಿಸು ಎಂದು ವಿಜ್ಞಾಪನೆ ಮಾಡಿದನು.
ಯೆಹೋವ ದೇವರೇ, ತಮ್ಮ ಪಿತೃಗಳ ದೇವರಾದ ನಿಮ್ಮನ್ನು ಹುಡುಕಬೇಕೆಂದು ಮನಸ್ಸು ಮಾಡುವವರಿಗೆಲ್ಲ ಕ್ಷಮೆಯನ್ನು ಅನುಗ್ರಹಿಸಿರಿ,” ಎಂದು ವಿಜ್ಞಾಪನೆ ಮಾಡಿದನು.
20 ೨೦ ಯೆಹೋವನು ಹಿಜ್ಕೀಯನ ಪ್ರಾರ್ಥನೆಯನ್ನು ಲಾಲಿಸಿ ಜನರನ್ನು ಸ್ವಸ್ಥಗೊಳಿಸಿದನು.
ಯೆಹೋವ ದೇವರು ಹಿಜ್ಕೀಯನ ಮಾತನ್ನು ಕೇಳಿ, ಜನರನ್ನು ಸ್ವಸ್ಥಮಾಡಿದರು.
21 ೨೧ ಯೆರೂಸಲೇಮಿನಲ್ಲಿ ಸೇರಿಬಂದಿದ್ದ ಇಸ್ರಾಯೇಲರು ಏಳು ದಿನಗಳವರೆಗೂ ಮಹಾ ಸಂತೋಷದಿಂದ ಹುಳಿಯಿಲ್ಲದ ರೊಟ್ಟಿಗಳ ಹಬ್ಬವನ್ನು ಆಚರಿಸುತ್ತಾ ಇದ್ದರು. ಲೇವಿಯರೂ, ಯಾಜಕರೂ ಮಹಾವಾದ್ಯಗಳೊಡನೆ ಯೆಹೋವನನ್ನು ಪ್ರತಿದಿನವೂ ಸ್ತುತಿ ಕೀರ್ತಿಸುತ್ತಾ ಇದ್ದರು.
ಆದ್ದರಿಂದ ಯೆರೂಸಲೇಮಿನಲ್ಲಿದ್ದ ಇಸ್ರಾಯೇಲರು ಹುಳಿಯಿಲ್ಲದ ರೊಟ್ಟಿಗಳ ಹಬ್ಬವನ್ನು ಏಳು ದಿವಸ ಸಂತೋಷದಿಂದ ಆಚರಿಸಿದರು. ಲೇವಿಯರೂ ಯಾಜಕರೂ ಯೆಹೋವ ದೇವರಿಗೆ ಸಮರ್ಪಿತವಾದ ಮಹಾ ಶಬ್ದದ ವಾದ್ಯಗಳಿಂದ ಯೆಹೋವ ದೇವರಿಗೆ ಹಾಡಿ ಪ್ರತಿದಿನವೂ ಯೆಹೋವ ದೇವರನ್ನು ಸ್ತುತಿಸಿದರು.
22 ೨೨ ಹಿಜ್ಕೀಯನು ಯೆಹೋವನ ಸೇವೆಯಲ್ಲಿ ನಿಪುಣರಾದ ಎಲ್ಲಾ ಲೇವಿಯರೊಡನೆ ಪ್ರೀತಿಯಿಂದ ಮಾತನಾಡಿದನು. ನೇಮಕವಾದ ಏಳು ದಿನಗಳ ಹಬ್ಬದವರೆಗೂ ಜನರು ಸಮಾಧಾನ ಯಜ್ಞಗಳನ್ನು ಅರ್ಪಿಸುತ್ತಾ ತಮ್ಮ ಪೂರ್ವಿಕರ ದೇವರಾದ ಯೆಹೋವನನ್ನು ತಮ್ಮ ದೇವರೆಂದು ಅರಿಕೆಮಾಡಿಕೊಳ್ಳುತ್ತಾ ಔತಣಮಾಡಿದರು.
ಹಿಜ್ಕೀಯನು ಯೆಹೋವ ದೇವರ ಕಾರ್ಯಗಳಲ್ಲಿ ಒಳ್ಳೆಯ ತಿಳುವಳಿಕೆಯನ್ನು ಹೊಂದಿದ್ದ ಸಮಸ್ತ ಲೇವಿಯರೊಡನೆ ಉತ್ತೇಜನದ ಮಾತುಗಳಿಂದ ಮಾತನಾಡಿದನು. ಅವರು ಹಬ್ಬವನ್ನು ಏಳು ದಿನಗಳವರೆಗೂ ಸಮಾಧಾನದ ಬಲಿಗಳನ್ನು ಅರ್ಪಿಸುತ್ತಾ, ತಮ್ಮ ಪಿತೃಗಳ ದೇವರಾದ ಯೆಹೋವ ದೇವರನ್ನು ಸ್ತುತಿಸುತ್ತಾ, ಔತಣಮಾಡಿ ಆಚರಿಸಿದರು.
23 ೨೩ ಅಲ್ಲದೆ ಸಮೂಹದವರು ಇನ್ನೂ ಏಳು ದಿನಗಳ ಕಾಲ ಹಬ್ಬವನ್ನು ಆ ಆಚರಿಸಬೇಕೆಂದು ತೀರ್ಮಾನಿಸಿ ಇನ್ನೂ ಏಳು ದಿನಗಳ ಕಾಲ ಬಹಳ ಸಂತೋಷದಿಂದ ಹಬ್ಬವನ್ನು ಆಚರಿಸಿದರು
ಅಲ್ಲದೆ ಕೂಟವೆಲ್ಲಾ ಇನ್ನೂ ಏಳು ದಿವಸಗಳ ಕಾಲ ಹಬ್ಬವನ್ನು ಆಚರಿಸಬೇಕೆಂದು ತಿರ್ಮಾನಿಸಿ ಇನ್ನೂ ಏಳು ದಿನಗಳ ಕಾಲ ಬಹಳ ಸಂತೋಷದಿಂದ ಹಬ್ಬವನ್ನು ಆಚರಿಸಿದರು.
24 ೨೪ ಹೂದದ ಅರಸನಾದ ಹಿಜ್ಕೀಯನು ಹಿಂಡುಗಳಿಂದ ಸಾವಿರ ಹೋರಿಗಳನ್ನೂ, ಏಳು ಸಾವಿರ ಕುರಿಗಳನ್ನೂ, ಪದಾಧಿಕಾರಿಗಳು ಸಾವಿರ ಹೋರಿಗಳನ್ನೂ, ಹತ್ತು ಸಾವಿರ ಕುರಿಗಳನ್ನೂ ಯಜ್ಞಕ್ಕಾಗಿ ದಾನಮಾಡಿದರು. ಯಾಜಕರಲ್ಲಿ ಬಹು ಮಂದಿ ತಮ್ಮನ್ನು ಶುದ್ಧಿಪಡಿಸಿಕೊಂಡರು.
ಯೆಹೂದದ ಅರಸನಾದ ಹಿಜ್ಕೀಯನು ಸಭೆಗೆ 1,000 ಹೋರಿಗಳನ್ನೂ 7,000 ಕುರಿಗಳನ್ನೂ ಕೊಟ್ಟನು. ಇದಲ್ಲದೆ ಪ್ರಧಾನರು ಕೂಟಕ್ಕೆ 1,000 ಹೋರಿಗಳನ್ನೂ 10,000 ಕುರಿಗಳನ್ನೂ ಕೊಟ್ಟರು. ಯಾಜಕರಲ್ಲಿ ಅನೇಕರು ತಮ್ಮನ್ನು ಪ್ರತಿಷ್ಠೆ ಮಾಡಿಕೊಂಡರು.
25 ೨೫ ಯೆಹೂದ್ಯರ ಸರ್ವಸಮೂಹದವರೂ, ಯಾಜಕರು, ಲೇವಿಯರೂ, ಇಸ್ರಾಯೇಲ್ ಪ್ರಾಂತ್ಯಗಳಿಂದ ಸೇರಿಬಂದವರೆಲ್ಲರೂ ಹಾಗು ಇಸ್ರಾಯೇಲ್ ಯೆಹೂದ ಪ್ರಾಂತ್ಯಗಳಲ್ಲಿದ್ದ ಪ್ರವಾಸಿಗಳು ಈ ಉತ್ಸವದಲ್ಲಿ ಪಾಲುಗೊಂಡಿದ್ದರು.
ಯೆಹೂದದ ಸಮೂಹದವರೆಲ್ಲರೂ ಯಾಜಕರೂ, ಲೇವಿಯರೂ, ಇಸ್ರಾಯೇಲಿನಿಂದ ಬಂದ ಸಮಸ್ತ ಜನರೂ, ಇಸ್ರಾಯೇಲಿನ ದೇಶದಿಂದ ಬಂದ ಪರದೇಶಿಗಳೂ, ಯೆಹೂದದಲ್ಲಿ ವಾಸವಾಗಿರುವವರೂ ಸಂತೋಷಪಟ್ಟರು.
26 ೨೬ ದಾವೀದನ ಮಗನೂ ಇಸ್ರಾಯೇಲರ ಅರಸನೂ ಆದ ಸೊಲೊಮೋನನ ಕಾಲದಿಂದ ಯೆರೂಸಲೇಮಿನಲ್ಲಿ ಅಂಥ ಉತ್ಸವವು ನಡೆದಿರಲಿಲ್ಲವಾದುದರಿಂದ ಯೆರೂಸಲೇಮಿನಲ್ಲಿ ಮಹಾಸಂತೋಷವುಂಟಾಯಿತು.
ಹೀಗೆಯೇ ಯೆರೂಸಲೇಮಿನಲ್ಲಿ ಮಹಾ ಸಂತೋಷ ಉಂಟಾಗಿತ್ತು. ಇಸ್ರಾಯೇಲಿನ ಅರಸನಾದ ದಾವೀದನ ಮಗ ಸೊಲೊಮೋನನ ಕಾಲದಿಂದ ಯೆರೂಸಲೇಮಿನಲ್ಲಿ ಅಂಥಾ ಆಚರಣೆಯು ನಡೆದಿರಲಿಲ್ಲ.
27 ೨೭ ಆಮೇಲೆ ಯಾಜಕರಾಗಿದ್ದ ಲೇವಿಯರು ಎದ್ದು ನಿಂತು ಜನರನ್ನು ಆಶೀರ್ವದಿಸಿದರು. ಅವರ ಪ್ರಾರ್ಥನೆಯ ಸ್ವರವು ದೇವರಿಗೆ ಕೇಳಿಸಿತು; ಅವರ ಪ್ರಾರ್ಥನೆಯು ಪರಲೋಕದಲ್ಲಿರುವ ಆತನ ಪರಿಶುದ್ಧ ನಿವಾಸಕ್ಕೆ ತಲುಪಿತು.
ಆಗ ಯಾಜಕರೂ ಲೇವಿಯರೂ ಎದ್ದು ಜನರನ್ನು ಆಶೀರ್ವದಿಸಿದರು. ದೇವರು ಅವರ ಪ್ರಾರ್ಥನೆಯನ್ನು ಕೇಳಿದರು. ಅವರ ಪ್ರಾರ್ಥನೆಯು ದೇವರ ಪರಿಶುದ್ಧ ನಿವಾಸ ಸ್ಥಾನವಾದ ಪರಲೋಕಕ್ಕೆ ತಲುಪಿತು.

< ಪೂರ್ವಕಾಲವೃತ್ತಾಂತ ದ್ವಿತೀಯ ಭಾಗ 30 >