< ಪೂರ್ವಕಾಲವೃತ್ತಾಂತ ದ್ವಿತೀಯ ಭಾಗ 20 >

1 ಇದಾದ ಮೇಲೆ ಮೋವಾಬ್ಯರೂ ಅಮ್ಮೋನಿಯರೂ ಹಾಗೂ ಮೆಗೂನ್ಯರಲ್ಲಿ ಕೆಲವರೂ ಯೆಹೋಷಾಫಾಟನಿಗೆ ವಿರುದ್ಧವಾಗಿ ಯುದ್ಧಕ್ಕೆ ಬಂದರು. 2 ದೂತರು ಬಂದು ಯೆಹೋಷಾಫಾಟನಿಗೆ, “ಮಹಾಸಮೂಹವು ನಿನಗೆ ವಿರುದ್ಧವಾಗಿ ಲವಣ ಸಮುದ್ರದ ಆಚೆಯಲ್ಲಿರುವ ಅರಾಮ್ ಪ್ರಾಂತ್ಯದ ಕಡೆಯಿಂದ ಬಂದು ಈಗ ‘ಏಂಗೆದಿ’ ಎನಿಸಿಕೊಳ್ಳುವ ಹಚಚೋನ್ ತಾಮಾರಿನಲ್ಲಿ ಬಂದು ತಂಗಿದ್ದಾರೆ” ಎಂದು ತಿಳಿಸಿದರು. 3 ಯೆಹೋಷಾಫಾಟನು ಇದನ್ನು ಕೇಳಿ ಹೆದರಿ, ಯೆಹೋವನನ್ನೇ ಆಶ್ರಯಿಸಿಕೊಳ್ಳಬೇಕೆಂದು ನಿರ್ಣಯಿಸಿಕೊಂಡನು. ಯೆಹೂದ್ಯರೆಲ್ಲರೂ ಉಪವಾಸ ಮಾಡಬೇಕೆಂದು ಪ್ರಕಟಿಸಿದನು. 4 ಆಗ ಯೆಹೂದ್ಯರು ಯೆಹೋವನ ಸಹಾಯವನ್ನು ಕೇಳಿಕೊಳ್ಳುವುದಕ್ಕಾಗಿ ತಮ್ಮ ಎಲ್ಲಾ ಪಟ್ಟಣಗಳಿಂದ ಆತನ ಸನ್ನಿಧಿಯಲ್ಲಿ ಸೇರಿ ಬಂದರು. 5 ಯೆಹೂದ್ಯರೂ ಯೆರೂಸಲೇಮಿನವರೂ ಯೆಹೋವನ ಆಲಯದ ಹೊಸ ಪ್ರಾಕಾರದಲ್ಲಿ ಸಭೆಯಾಗಿ ನೆರೆದು ಬಂದಾಗ, ಯೆಹೋಷಾಫಾಟನು ಅದರ ಮುಂದೆ ನಿಂತು, 6 “ಯೆಹೋವನೇ, ನಮ್ಮ ಪೂರ್ವಿಕರ ದೇವರೇ, ಪರಲೋಕದಲ್ಲಿ ದೇವರಾಗಿ ಇರುವಾತನು ನೀನಲ್ಲವೋ? ನೀನು ಜನಾಂಗಗಳನ್ನೂ, ಎಲ್ಲಾ ರಾಜ್ಯಗಳನ್ನು ಆಳುವವನಾಗಿರುವೆ. ಬಲ, ಪರಾಕ್ರಮಗಳು ನಿನ್ನ ಕೈಗಳಲ್ಲಿ ಇರುತ್ತವೆ: ನಿನ್ನೆದುರಿನಲ್ಲಿ ನಿಲ್ಲುವವರು ಯಾರಿದ್ದಾರೆ? 7 ನಮ್ಮ ದೇವರಾದ ನೀನು ನಿನ್ನ ಪ್ರಜೆಗಳಾದ ಇಸ್ರಾಯೇಲರ ಎದುರಿನಿಂದ ಈ ದೇಶದ ನಿವಾಸಿಗಳನ್ನು ಓಡಿಸಿ, ದೇಶವನ್ನು ನಿನ್ನ ಸ್ನೇಹಿತನಾದ ಅಬ್ರಹಾಮನ ಸಂತಾನದವರಿಗೆ ಶಾಶ್ವತ ಸ್ವತ್ತಾಗಿ ಕೊಟ್ಟಿರುವೆಯಲ್ಲಾ? 8 ಅವರು ಈ ದೇಶದಲ್ಲಿ ನೆಲಗೊಂಡು ಇದರಲ್ಲಿ ನಿನ್ನ ಹೆಸರಿಗಾಗಿ ಪವಿತ್ರಾಲಯವನ್ನು ಕಟ್ಟಿದರು. 9 ತಮ್ಮ ಮೇಲೆ ನ್ಯಾಯ ತೀರ್ಪಿನ ಖಡ್ಗ, ಘೋರವ್ಯಾಧಿ, ಕ್ಷಾಮ ಮೊದಲಾದ ಆಪತ್ತುಗಳು ನಮಗೆ ಬರುವಾಗ, ನಾವು ನಿನ್ನ ನಾಮ ಮಹತ್ತು ಇರುವ ಈ ಆಲಯದ ಮುಂದೆಯೂ, ನಿನ್ನ ಮುಂದೆಯೂ ನಿಂತು, ನಮ್ಮ ಇಕ್ಕಟ್ಟಿನಲ್ಲಿ ನಿನಗೆ ಮೊರೆಯಿಡುವುದಾದರೆ ನೀನು ಕೇಳಿ ರಕ್ಷಿಸುವಿ ಎಂದುಕೊಂಡಿದ್ದೇವೆ. 10 ೧೦ ಈ ಅಮ್ಮೋನಿಯರನ್ನೂ, ಮೋವಾಬ್ಯರನ್ನೂ ಸೇಯೀರ್ ಪರ್ವತ ಪ್ರದೇಶದವರನ್ನೂ ನೋಡು, ಇಸ್ರಾಯೇಲರು ಐಗುಪ್ತ ದೇಶದಿಂದ ಬರುತ್ತಿದ್ದಾಗ, ಇವರ ದೇಶದಲ್ಲಿ ನುಗ್ಗಬಾರದೆಂದು ನಿನ್ನಿಂದ ಅಪ್ಪಣೆಹೊಂದಿ, ಇವರನ್ನು ಸಂಹರಿಸದೆ ಬೇರೆ ಮಾರ್ಗವಾಗಿ ಹೋದರಲ್ಲಾ. 11 ೧೧ ಈಗ ಅವರು ಉಪಕಾರಕ್ಕೆ ಅಪಕಾರಮಾಡಿ, ನೀನು ನಮಗೆ ಅನುಗ್ರಹಿಸಿದ ಸ್ವತ್ತಿನೊಳಗಿಂದ ನಮ್ಮನ್ನು ಹೊರ ಓಡಿಸುವುದಕ್ಕಾಗಿ ನಮ್ಮ ಮೇಲೆ ಯುದ್ಧಕ್ಕೆ ಬಂದಿರುತ್ತಾರೆ. 12 ೧೨ ನಮ್ಮ ದೇವರೇ, ಅವರನ್ನು ದಂಡಿಸದೆ ಬಿಡುವಿಯೋ? ನಮ್ಮ ಮೇಲೆ ಬಂದಿರುವ ಈ ಮಹಾಸಮೂಹದ ಮುಂದೆ ನಿಲ್ಲುವುದಕ್ಕೆ ನಮ್ಮಲ್ಲಿ ಬಲವಿಲ್ಲ; ಏನು ಮಾಡಬೇಕೆಂಬುದೂ ತಿಳಿಯದು; ನಮ್ಮ ಕಣ್ಣುಗಳು ನಿನ್ನನ್ನೇ ನೋಡುತ್ತಿವೆ” ಎಂದು ಪ್ರಾರ್ಥಿಸಿದನು. 13 ೧೩ ಎಲ್ಲಾ ಯೆಹೂದ್ಯರೂ ಅವರ ಹೆಂಡತಿ ಮಕ್ಕಳೂ ಯೆಹೋವನ ಸನ್ನಿಧಿಯಲ್ಲಿ ನಿಂತಿದ್ದರು. 14 ೧೪ ಆಗ ಆ ಸಮೂಹದೊಳಗೆ ಆಸಾಫನ ವಂಶದವನಾದ ಲೇವಿಯನೂ, ಮತ್ತನ್ಯನಿಗೆ ಹುಟ್ಟಿದ ಯೆಗೀಯೇಲನ ಮರಿಮಗನೂ, ಬೆನಾಯನ ಮೊಮ್ಮಗನೂ, ಜೆಕರ್ಯನ ಮಗನೂ ಆದ ಯಹಜೀಯೇಲನ ಮೇಲೆ ಯೆಹೋವನ ಆತ್ಮವು ಬಂದಿತು. 15 ೧೫ ಅವನು, “ಎಲ್ಲಾ ಯೆಹೂದ್ಯರೇ, ಯೆರೂಸಲೇಮಿನವರೇ, ಅರಸನಾದ ಯೆಹೋಷಾಫಾಟನೇ, ಯೆಹೋವನು ಹೇಳುವುದನ್ನು ಕೇಳಿರಿ: ಈ ಮಹಾಸಮೂಹದ ನಿಮಿತ್ತವಾಗಿ ಕಳವಳಗೊಳ್ಳಬೇಡಿರಿ; ಹೆದರಬೇಡಿರಿ; ಯುದ್ಧವು ನಿಮ್ಮದಲ್ಲ; ದೇವರದೇ. 16 ೧೬ ನಾಳೆ ಬೆಳಗ್ಗೆ ಅವರಿಗೆ ವಿರುದ್ಧವಾಗಿ ಹೊರಡಿರಿ; ಇಗೋ ಅವರು ಹಚ್ಚೀಚ್ ಗಟ್ಟದ ಮಾರ್ಗವಾಗಿ ಬರುತ್ತಾರೆ. ಯೆರೂವೇಲ್ ಅರಣ್ಯದ ಮುಂದಿರುವ ಕಣಿವೆಯ ತುದಿಯಲ್ಲಿ ಅವರನ್ನು ಸಂಧಿಸುವಿರಿ. 17 ೧೭ ಈ ಸಮೂಹದೊಂದಿಗೆ ನೀವು ಯುದ್ಧಮಾಡುವುದು ಅವಶ್ಯವಿಲ್ಲ. ಯೆಹೂದ್ಯರೇ, ಯೆರೂಸಲೇಮಿನವರೇ, ಸುಮ್ಮನೆ ನಿಂತುಕೊಂಡು ಯೆಹೋವನು ನಿಮಗೋಸ್ಕರ ಮಾಡುವ ರಕ್ಷಣಾ ಕಾರ್ಯವನ್ನು ನೋಡಿರಿ; ಹೆದರಬೇಡಿರಿ, ಕಳವಳಗೊಳ್ಳಬೇಡಿರಿ. ನಾಳೆ ಅವರೆದುರಿಗೆ ಹೊರಡಿರಿ, ಯೆಹೋವನು ನಿಮ್ಮ ಸಂಗಡ ಇರುವನು” ಎಂದು ಹೇಳಿದನು. 18 ೧೮ ಆಗ ಯೆಹೋಷಾಫಾಟನು ನೆಲದವರೆಗೂ ಬಗ್ಗಿ ನಮಸ್ಕರಿಸಿದನು. ಎಲ್ಲಾ ಯೆಹೂದ್ಯರೂ ಯೆರೂಸಲೇಮಿನವರೂ ಯೆಹೋವನ ಮುಂದೆ ಅಡ್ಡಬಿದ್ದು ನಮಸ್ಕರಿಸಿದರು. 19 ೧೯ ಆಮೇಲೆ ಲೇವಿಯರಲ್ಲಿ ಕೆಹಾತ್ಯರೂ, ಕೋರಹಿಯರೂ ಎದ್ದು, ಇಸ್ರಾಯೇಲ್ ದೇವರಾದ ಯೆಹೋವನನ್ನು ಮಹಾಸ್ವರದಿಂದ ಕೀರ್ತಿಸಿದರು. 20 ೨೦ ಅವರು ಮರುದಿನ ಬೆಳಿಗ್ಗೆ ಎದ್ದು ತೆಕೋವ ಅರಣ್ಯಕ್ಕೆ ಹೊರಟರು. ಹೊರಡುವಾಗ, ಯೆಹೋಷಾಫಾಟನು ಅವರಿಗೆ, “ಯೆಹೂದ್ಯರೇ, ಯೆರೂಸಲೇಮಿನವರೇ, ನನ್ನ ಮಾತನ್ನು ಕೇಳಿರಿ, ಯೆಹೋವನಲ್ಲಿ ಭರವಸವಿಡಿರಿ, ಆಗ ನೀವು ಸುರಕ್ಷಿತರಾಗಿರುವಿರಿ; ಆತನ ಪ್ರವಾದಿಗಳನ್ನು ನಂಬಿರಿ, ಆಗ ನೀವು ಸಫಲರಾಗುವಿರಿ” ಎಂದು ಹೇಳಿದನು. 21 ೨೧ ಆ ನಂತರ ಅವನು ಜನರೊಂದಿಗೆ ಸಮಾಲೋಚನೆ ಮಾಡಿ ಯೆಹೋವನನ್ನು ಸ್ತುತಿಸಿ ಹಾಡುವುದಕ್ಕಾಗಿ ಕೆಲವರನ್ನು ಆರಿಸಿಕೊಂಡು ಅವರಿಗೆ, “ಪರಿಶುದ್ಧವಸ್ತ್ರ ಅಲಂಕಾರ ಭೂಷಣದೊಡನೆ ಭಟರ ಮುಂದೆ ಹೋಗುತ್ತಾ, ‘ಯೆಹೋವನಿಗೆ ಕೃತಜ್ಞತಾಸ್ತುತಿಮಾಡಿರಿ, ಆತನ ಕೃಪೆಯು ಶಾಶ್ವತವಾದದ್ದು’ ಎಂದು ಭಜಿಸಿರಿ” ಎಂಬುದಾಗಿ ಆಜ್ಞಾಪಿಸಿದನು. 22 ೨೨ ಅವರು ಉತ್ಸಾಹ ಧ್ವನಿಯಿಂದ ಕೀರ್ತಿಸುವುದಕ್ಕೆ ಪ್ರಾರಂಭಿಸಿದರು. ಆಗ ಯೆಹೋವನು ಯೆಹೂದ್ಯರಿಗೆ ವಿರುದ್ಧವಾಗಿ ಬಂದ ಅಮ್ಮೋನಿಯರನ್ನೂ, ಮೋವಾಬ್ಯರನ್ನೂ, ಸೇಯೀರ್ ಪರ್ವತದವರನ್ನೂ ನಾಶಮಾಡುವುದಕ್ಕಾಗಿ ಹೊಂಚು ಹಾಕುವವರನ್ನು ಬರಮಾಡಿದನು. 23 ೨೩ ಅಮ್ಮೋನಿಯರೂ, ಮೋವಾಬ್ಯರೂ ಸೇಯೀರ್ ಪರ್ವತದವರ ಮೇಲೆ ಬಿದ್ದು ಅವರನ್ನು ಸಂಪೂರ್ಣವಾಗಿ ಸಂಹರಿಸಿಬಿಟ್ಟರು. ಅಮ್ಮೋನಿಯರನ್ನು ಮುಗಿಸಿಬಿಟ್ಟ ಮೇಲೆ ತಾವೇ ಒಬ್ಬರನ್ನೊಬ್ಬರು ಕೊಲ್ಲುವುದಕ್ಕೆ ಪ್ರಾರಂಭಿಸಿದರು. 24 ೨೪ ಯೆಹೂದ್ಯರು ಅರಣ್ಯದಲ್ಲಿನ ಬುರುಜಿಗೆ ಬಂದು ಆ ಸಮೂಹವಿದ್ದ ಕಡೆಗೆ ನೋಡಿದಾಗ, ನೆಲದ ಮೇಲೆ ಬಿದ್ದಿರುವ ಹೆಣಗಳ ಹೊರತಾಗಿ, ಜೀವದಿಂದುಳಿದವರು ಯಾರು ಕಾಣಿಸಲಿಲ್ಲ. 25 ೨೫ ಯೆಹೋಷಾಫಾಟನೂ ಅವನ ಜನರೂ ಸುಲಿಗೆ ಮಾಡುವುದಕ್ಕೋಸ್ಕರ ಅಲ್ಲಿಗೆ ಹೋದರು. ಅವರಿಗೆ ದ್ರವ್ಯ, ವಸ್ತ್ರ, ಶ್ರೇಷ್ಠಾಯುಧಗಳು ರಾಶಿರಾಶಿಯಾಗಿ ಸಿಕ್ಕಿದವು. ಅವರು ಹೊರಲಾರದಷ್ಟು ಸುಲಿಗೆಮಾಡಿದರು, ಕೊಳ್ಳೆಯು ಬಲು ಹೆಚ್ಚಾಗಿದ್ದುದರಿಂದ ಅವರು ಮೂರು ದಿನಗಳ ವರೆಗೂ ಕೂಡಿಸುತ್ತಿದ್ದರು. 26 ೨೬ ನಾಲ್ಕನೆಯ ದಿನದಲ್ಲಿ ಬೆರಾಕ ತಗ್ಗಿನಲ್ಲಿ ಕೂಡಿಬಂದರು. ಅವರು ಅಲ್ಲಿ ಯೆಹೋವನನ್ನು ಸ್ತುತಿಸಿದ್ದರಿಂದ ಆ ಸ್ಥಳಕ್ಕೆ ಇಂದಿನ ವರೆಗೂ ಬೆರಾಕ ತಗ್ಗು ಎಂಬ ಹೆಸರಿದೆ. 27 ೨೭ ಆ ನಂತರ ಯೆಹೂದ್ಯರೂ ಯೆರೂಸಲೇಮಿನವರೂ ಅವರ ಮುಂದೆ ಯೆಹೋಷಾಫಾಟನೂ ಯೆಹೋವನು ತಮಗೆ ಶತ್ರುಗಳ ಮೇಲೆ ಜಯವನ್ನು ಅನುಗ್ರಹಿಸಿದ್ದಾನೆಂದು ಜಯಘೋಷ ಮಾಡುತ್ತಾ ಯೆರೂಸಲೇಮಿಗೆ ಹಿಂತಿರುಗಿದರು. 28 ೨೮ ಅವರು ಸ್ವರಮಂಡಲ, ಕಿನ್ನರಿ, ತುತ್ತೂರಿ, ಇವುಗಳೊಡನೆ ಯೆರೂಸಲೇಮಿನಲ್ಲಿರುವ ಯೆಹೋವನ ಆಲಯಕ್ಕೆ ಬಂದರು. 29 ೨೯ ಯೆಹೋವನು ತಾನೇ ಇಸ್ರಾಯೇಲರ ಶತ್ರುಗಳೊಡನೆ ಯುದ್ಧಮಾಡಿದನೆಂಬ ಸುದ್ದಿಯು ಅನ್ಯದೇಶಗಳ ರಾಜ್ಯಗಳವರಿಗೆ ಮುಟ್ಟಿದಾಗ ಅವರೆಲ್ಲರೂ ಬಹುಭೀತರಾದರು. 30 ೩೦ ಹೀಗೆ ದೇವರ ಅನುಗ್ರಹದಿಂದ ಸುತ್ತಮುತ್ತಲಿನ ವೈರಿಗಳು ಭಯಭೀತರಾದರು. ಯೆಹೋಷಾಫಾಟನ ರಾಜ್ಯಕ್ಕೆ ಶತ್ರುಗಳ ಭಯತಪ್ಪಿ ಸಮಾಧಾನ ಉಂಟಾಯಿತು. 31 ೩೧ ಯೆಹೂದ್ಯರ ಅರಸನಾದ ಯೆಹೋಷಾಫಾಟನು ಪಟ್ಟಕ್ಕೆ ಬಂದಾಗ ಮೂವತ್ತೈದು ವರ್ಷದವನಾಗಿದ್ದನು. ಇವನು ಯೆರೂಸಲೇಮಿನಲ್ಲಿ ಇಪ್ಪತ್ತೈದು ವರ್ಷ ಆಡಳಿತ ನಡೆಸಿದನು. ಶಿಲ್ಹಿಯ ಮಗಳಾದ ಅಜೂಬಳೆಂಬಾಕೆಯು ಅವನ ತಾಯಿ. 32 ೩೨ ಇವನು ತನ್ನ ತಂದೆಯಾದ ಆಸನ ಮಾರ್ಗದಲ್ಲಿ ನಡೆಯುತ್ತಾ ಅದನ್ನು ಮೀರದೆ ಯೆಹೋವನ ದೃಷ್ಟಿಯಲ್ಲಿ ಒಳ್ಳೆಯವನಾಗಿ ನಡೆದುಕೊಂಡನು. 33 ೩೩ ಅದರೂ ಪೂಜಾಸ್ಥಳಗಳನ್ನು ಹಾಳುಮಾಡಲಿಲ್ಲ. ಜನರು ತಮ್ಮ ಪೂರ್ವಿಕರ ದೇವರ ಮೇಲೆ ಮನಸ್ಸಿಟ್ಟಿರಲಿಲ್ಲ, ದೇವರ ಕಡೆಗೆ ತಿರುಗಿಕೊಳ್ಳಲೂ ಇಲ್ಲ. 34 ೩೪ ಯೆಹೋಷಾಫಾಟನ ಉಳಿದ ಪೂರ್ವೋತ್ತರ ಚರಿತ್ರೆಯು ಇಸ್ರಾಯೇಲ್ ರಾಜರ ಗ್ರಂಥದಲ್ಲಿ ಅಡಕವಾಗಿರುವ ಹನಾನೀಯ ಮಗನಾದ ಯೇಹುವಿನ ವೃತ್ತಾಂತದಲ್ಲಿ ಬರೆಯಲಾಗಿದೆ. 35 ೩೫ ಯೆಹೂದ್ಯರ ಅರಸನಾದ ಯೆಹೋಷಾಫಾಟನು ಇಸ್ರಾಯೇಲರ ಅರಸನೂ, ಬಹು ದುರಾಚಾರಿಯೂ ಆದ ಅಹಜ್ಯನೊಡನೆ ಒಡಬಂಡಿಕೆ ಮಾಡಿಕೊಂಡನು. 36 ೩೬ ಅವರು ತಾರ್ಷೀಷಿಗೆ ಹೋಗುವುದಕ್ಕಾಗಿ ಹಡುಗುಗಳನ್ನು ಕಟ್ಟಬೇಕೆಂದು ಒಡಬಂಡಿಕೆ ಮಾಡಿಕೊಂಡು ಅವುಗಳನ್ನು ಎಚ್ಯೋನ್ ಗೆಬೆರಿನಲ್ಲಿ ಕಟ್ಟಿಸಿದರು. 37 ೩೭ ಆಗ ಮಾರೇಷಾ ಊರಿನ ದೋದಾವಾಹುವಿನ ಮಗನಾದ ಎಲೀಯೆಜರನು ಯೆಹೋಷಾಫಾಟನಿಗೆ ವಿರುದ್ಧವಾಗಿ, “ನೀನು ಅಹಜ್ಯನೊಡನೆ ಒಡಬಂಡಿಕೆ ಮಾಡಿಕೊಂಡದ್ದರಿಂದ ಯೆಹೋವನು ನಿನ್ನ ಕೆಲಸವನ್ನು ಹಾಳು ಮಾಡುವನು” ಎಂದು ಪ್ರವಾದಿಸಿದನು. ಆ ಹಡುಗುಗಳು ಒಡೆದು ಹೋದುದರಿಂದ ತಾರ್ಷೀಷಿಗೆ ಪ್ರಯಾಣ ಮಾಡಲು ಸಾಧ್ಯವಾಗಲಿಲ್ಲ.

< ಪೂರ್ವಕಾಲವೃತ್ತಾಂತ ದ್ವಿತೀಯ ಭಾಗ 20 >