< ಪೂರ್ವಕಾಲವೃತ್ತಾಂತ ದ್ವಿತೀಯ ಭಾಗ 18 >

1 ಯೆಹೋಷಾಫಾಟನಿಗೆ ಧನಘನತೆಗಳು ಬಹಳವಾಗಿದ್ದವು. ಅವನು ಅಹಾಬನೊಡನೆ ನೆಂಟಸ್ಥಿಕೆಯನ್ನು ಮಾಡಿಕೊಂಡನು.
ಯೆಹೋಷಾಫಾಟನಿಗೆ ಐಶ್ವರ್ಯವೂ, ಘನತೆಯೂ ಅಧಿಕವಾಗಿರುವಾಗ, ಅವನು ಅಹಾಬನ ಸಂಗಡ ಬಂಧುತ್ವ ಮಾಡಿದನು.
2 ಕೆಲವು ವರ್ಷಗಳಾದ ನಂತರ ಅವನ ಬಳಿಗೆ ಸಮಾರ್ಯಕ್ಕೆ ಹೋದನು. ಅಹಾಬನು ಅವನಿಗೂ ಅವನೊಡನೆ ಬಂದ ಜನರಿಗಾಗಿಯೂ ಹಿಂಡುಗಳಿಂದ ಅನೇಕ ದನಕುರಿಗಳನ್ನು ಕೊಯ್ದು ಔತಣವನ್ನು ಏರ್ಪಡಿಸಿದನು. ತನ್ನ ಸಂಗಡ ಯುದ್ಧಕ್ಕಾಗಿ ರಾಮೋತ್ ಗಿಲ್ಯಾದಿಗೆ ಬರಬೇಕೆಂದು ಅವನನ್ನು ಪ್ರೇರೇಪಿಸಿದನು.
ಕೆಲವು ವರ್ಷಗಳ ತರುವಾಯ ಅವನು ಅಹಾಬನ ಬಳಿಗೆ ಸಮಾರ್ಯಕ್ಕೆ ಹೋದನು. ಆಗ ಅಹಾಬನು ಅವನಿಗೋಸ್ಕರವೂ, ಅವನ ಸಂಗಡ ಇದ್ದ ಜನರಿಗೋಸ್ಕರವೂ ಅನೇಕ ಕುರಿದನಗಳನ್ನೂ ವಧಿಸಿ ಔತಣವನ್ನೇರ್ಪಡಿಸಿ, ತನ್ನ ಸಂಗಡ ಯುದ್ಧಕ್ಕಾಗಿ ಗಿಲ್ಯಾದಿನ ರಾಮೋತಿಗೆ ಹೋಗಲು ಪ್ರೇರೇಪಿಸಿದನು.
3 ಇಸ್ರಾಯೇಲರ ಅರಸನಾದ ಅಹಾಬನು ಯೆಹೂದ್ಯರ ಅರಸನಾದ ಯೆಹೋಷಾಫಾಟನನ್ನು, “ನನ್ನ ಜೊತೆಯಲ್ಲಿ ರಾಮೋತ್ ಗಿಲ್ಯಾದಿಗೆ ಬರುತ್ತೀಯೋ?” ಎಂದು ಕೇಳಿದನು. ಅದಕ್ಕೆ ಅವನು, “ನಾನೂ, ನೀನೂ ನನ್ನ ಜನರೂ ನಿನ್ನ ಜನರೂ ಒಂದೇ ಅಲ್ಲವೇ? ನಿನ್ನ ಜೊತೆಯಲ್ಲಿ ಯುದ್ಧಕ್ಕೆ ಬರುವೆನು” ಎಂದು ಉತ್ತರ ಕೊಟ್ಟನು.
ಇಸ್ರಾಯೇಲಿನ ಅರಸನಾದ ಅಹಾಬನು ಯೆಹೂದದ ಅರಸನಾದ ಯೆಹೋಷಾಫಾಟನಿಗೆ, “ನೀನು ಗಿಲ್ಯಾದಿನ ರಾಮೋತಿನ ಮೇಲೆ ಯುದ್ಧಮಾಡಲು ನನ್ನ ಸಂಗಡ ಬರುತ್ತೀಯಾ?” ಎಂದನು. ಅದಕ್ಕವನು, “ನಾನೂ ನೀನೂ, ನನ್ನ ಜನರೂ ನಿನ್ನ ಜನರೂ ಒಂದೇ ಅಲ್ಲವೇ? ನಾವು ಯುದ್ಧದಲ್ಲಿ ನಿನ್ನ ಸಂಗಡ ಇರುವೆವು,” ಎಂದನು.
4 ಯೆಹೋಷಾಫಾಟನು ಇಸ್ರಾಯೇಲರ ಅರಸನಿಗೆ, “ಇಂದು ಯೆಹೋವನ ಆಲೋಚನೆಯನ್ನು ಕೇಳು” ಎಂದು ಕೇಳಿಕೊಂಡನು.
ಆದರೆ ಯೆಹೋಷಾಫಾಟನು ಇಸ್ರಾಯೇಲಿನ ಅರಸನಿಗೆ, “ಈ ಹೊತ್ತು ಮೊದಲು ಯೆಹೋವ ದೇವರ ಆಲೋಚನೆಯನ್ನು ವಿಚಾರಿಸಿರಿ,” ಎಂದನು.
5 ಅನಂತರ ಇಸ್ರಾಯೇಲರ ಅರಸನು ತನ್ನ ರಾಜ್ಯದಲ್ಲಿದ್ದ ನಾನೂರು ಮಂದಿ ಪ್ರವಾದಿಗಳನ್ನು ಸೇರಿಸಿ, “ನಾವು ರಾಮೋತ್ ಗಿಲ್ಯಾದಿನ ಮೇಲೆ ಯುದ್ಧಕ್ಕೆ ಹೋಗಬಹುದೋ? ಹೋಗಬಾರದೋ?” ಎಂದು ಕೇಳಿದನು. ಅವರು, “ಹೋಗಬಹುದು, ದೇವರು ಅದನ್ನು ಅರಸನ ಕೈಗೆ ಒಪ್ಪಿಸುವನು” ಎಂದರು.
ಆಗ ಇಸ್ರಾಯೇಲಿನ ಅರಸನು ನಾನೂರು ಮಂದಿ ಪ್ರವಾದಿಗಳನ್ನು ಕೂಡಿಸಿ ಅವರಿಗೆ, “ನಾನು ಗಿಲ್ಯಾದಿನ ರಾಮೋತಿನ ಮೇಲೆ ಯುದ್ಧಕ್ಕೆ ಹೋಗಬಹುದೋ, ಬೇಡವೋ?” ಎಂದು ಕೇಳಿದನು. ಅದಕ್ಕವರು, “ಹೋಗು, ದೇವರು ಅದನ್ನು ಅರಸನ ಕೈಯಲ್ಲಿ ಒಪ್ಪಿಸಿಕೊಡುವರು,” ಎಂದರು.
6 ಆದರೆ ಯೆಹೋಷಾಫಾಟನು ಇಸ್ರಾಯೇಲರ ಅರಸನಿಗೆ, “ಯೆಹೋವನ ಪ್ರವಾದಿಗಳಲ್ಲಿ ಇವರ ಹೊರತಾಗಿ ನಾವು ವಿಚಾರಿಸಬಹುದಾದ ಬೇರೊಬ್ಬ ಪ್ರವಾದಿ ಇಲ್ಲವೇ?” ಎಂದು ಕೇಳಿದನು.
ಆದರೆ ಯೆಹೋಷಾಫಾಟನು, “ಯೆಹೋವ ದೇವರ ಪ್ರವಾದಿಗಳಲ್ಲಿ ಇವರ ಹೊರತಾಗಿ ನಾವು ವಿಚಾರಿಸುವ ಹಾಗೆ ಬೇರೆ ಪ್ರವಾದಿ ಇಲ್ಲಿ ಇಲ್ಲವೋ?” ಎಂದು ಕೇಳಿದನು.
7 ಅವನು, “ನಮಗೋಸ್ಕರ ಯೆಹೋವನ ಸನ್ನಿಧಿಯಲ್ಲಿ ವಿಚಾರಿಸ ಬಲ್ಲವನಾದ ಒಬ್ಬ ಪ್ರವಾದಿ ಇದ್ದಾನೆ, ಅವನು ಇಮ್ಲನ ಮಗನಾದ ಮೀಕಾಯೆಹು ಎಂಬುವವನು. ಆದರೆ ನಾನು ಅವನನ್ನು ದ್ವೇಷಿಸುತ್ತೇನೆ; ಅವನು ನನ್ನನ್ನು ಕುರಿತು ಯಾವಾಗಲೂ ಶುಭವನ್ನು ನುಡಿಯದೆ, ಅಶುಭವನ್ನೇ ನುಡಿಯುತ್ತಾನೆ” ಎಂದು ಉತ್ತರಕೊಟ್ಟನು. ಅದಕ್ಕೆ ಯೆಹೋಷಾಫಾಟನು, “ಅರಸನು ಹಾಗನ್ನಬಾರದು” ಎಂದನು.
ಆಗ ಇಸ್ರಾಯೇಲಿನ ಅರಸನು ಯೆಹೋಷಾಫಾಟನಿಗೆ, “ನಾವು ಯೆಹೋವ ದೇವರನ್ನು ವಿಚಾರಿಸುವ ಹಾಗೆ ಇಮ್ಲನ ಮಗ ಮೀಕಾಯನೆಂಬ ಇನ್ನೊಬ್ಬನಿದ್ದಾನೆ. ಆದರೆ ನಾನು ಅವನನ್ನು ದ್ವೇಷ ಮಾಡುತ್ತೇನೆ. ಏಕೆಂದರೆ ಅವನು ನನ್ನನ್ನು ಕುರಿತು ಒಳ್ಳೆಯದನ್ನಲ್ಲ ಯಾವಾಗಲೂ ಕೆಟ್ಟದ್ದನ್ನು ಪ್ರವಾದಿಸುತ್ತಾನೆ,” ಎಂದನು. ಅದಕ್ಕೆ ಯೆಹೋಷಾಫಾಟನು, “ಅರಸನು ಹಾಗೆ ಅನ್ನದಿರಲಿ,” ಎಂದನು.
8 ಆಗ ಇಸ್ರಾಯೇಲರ ಅರಸನು ಒಬ್ಬ ಕಂಚುಕಿಯನ್ನು ಕರೆದು ಅವನಿಗೆ, “ಬೇಗ ಹೋಗಿ ಇಮ್ಲನ ಮಗನಾದ ಮೀಕಾಯೆಹುವನ್ನು ಕರೆದುಕೊಂಡು ಬಾ” ಎಂದು ಆಜ್ಞಾಪಿಸಿದನು.
ಆಗ ಇಸ್ರಾಯೇಲಿನ ಅರಸನು ಒಬ್ಬ ಅಧಿಕಾರಿಯನ್ನು ಕರೆದು, “ಇಮ್ಲನ ಮಗನಾದ ಮೀಕಾಯನನ್ನು ಶೀಘ್ರವಾಗಿ ಕರೆದುಕೊಂಡು ಬಾ,” ಎಂದನು.
9 ಇಸ್ರಾಯೇಲರ ಅರಸನೂ ಯೆಹೂದ್ಯರ ಅರಸನಾದ ಯೆಹೋಷಾಫಾಟನೂ ರಾಜವಸ್ತ್ರಗಳನ್ನು ಧರಿಸಿಕೊಂಡು ಸಮಾರ್ಯ ಪಟ್ಟಣದ ಹೆಬ್ಬಾಗಿಲಿನ ಹತ್ತಿರವಿರುವ ಬಯಲಿನಲ್ಲಿ ತಮ್ಮ ತಮ್ಮ ಆಸನಗಳ ಮೇಲೆ ಕುಳಿತುಕೊಂಡಿರಲು. ಎಲ್ಲಾ ಪ್ರವಾದಿಗಳು ಅವರ ಮುಂದೆ ಪರವಶರಾಗಿ ಪ್ರವಾದಿಸತೊಡಗಿದರು.
ಇಸ್ರಾಯೇಲಿನ ಅರಸನೂ, ಯೆಹೂದದ ಅರಸನಾದ ಯೆಹೋಷಾಫಾಟನೂ ರಾಜವಸ್ತ್ರಗಳನ್ನು ಧರಿಸಿಕೊಂಡು, ಸಮಾರ್ಯದ ಬಾಗಿಲಿನ ಮುಂದೆ ಬಯಲಿನಲ್ಲಿ ತಮ್ಮ ತಮ್ಮ ಸಿಂಹಾಸನಗಳ ಮೇಲೆ ಕುಳಿತುಕೊಂಡಿದ್ದರು. ಸಕಲ ಪ್ರವಾದಿಗಳೂ ಅವರ ಮುಂದೆ ಪ್ರವಾದಿಸುತ್ತಿದ್ದರು.
10 ೧೦ ಅವರಲ್ಲಿ ಕೆನಾನನ ಮಗನಾದ ಚಿದ್ಕೀಯ ಎಂಬವನು ಕಬ್ಬಿಣದ ಕೊಂಬುಗಳನ್ನು ಮಾಡಿಸಿ ತಲೆಗೆ ಕಟ್ಟಿಕೊಂಡು ಬಂದು, “ಕೊಂಬುಗಳಿಂದಲೋ ಎಂಬಂತೆ ನೀನು ಅರಾಮ್ಯರನ್ನು ಇರಿದು ಕೊಂದುಹಾಕುವಿ ಎಂಬುದಾಗಿ ಯೆಹೋವನು ಹೇಳುತ್ತಾನೆ” ಎಂದನು.
ಆಗ ಕೆನಾನನ ಮಗನಾದ ಚಿದ್ಕೀಯನು, “ತನಗೆ ಕಬ್ಬಿಣದ ಕೊಂಬುಗಳನ್ನು ಮಾಡಿಕೊಂಡು, ‘ಇವುಗಳಿಂದ ನೀನು ಅರಾಮ್ಯರನ್ನು ನಿರ್ಮೂಲ ಮಾಡುವವರೆಗೂ ಇರಿದು ಹಾಕುವೆ,’ ಎಂದು ಯೆಹೋವ ದೇವರು ಹೇಳುತ್ತಾರೆ,” ಎಂದನು.
11 ೧೧ ಉಳಿದ ಪ್ರವಾದಿಗಳೂ ಇದೇ ತರದ ಮಾತುಗಳನ್ನು ನುಡಿದು, “ರಾಮೋತ್ ಗಿಲ್ಯಾದಿಗೆ ಹೋಗು; ನೀನು ಜಯಶಾಲಿಯಾಗಿ ಬರುವಿ; ಯೆಹೋವನು ಅದನ್ನು ಅರಸನ ಕೈಗೆ ಒಪ್ಪಿಸುವನು” ಎಂದರು.
ಸಮಸ್ತ ಪ್ರವಾದಿಗಳೂ ಹಾಗೆಯೇ ಪ್ರವಾದಿಸಿ, “ಗಿಲ್ಯಾದಿನ ರಾಮೋತಿಗೆ ಹೋಗಿ ಜಯ ಹೊಂದು. ಯೆಹೋವ ದೇವರು ಅದನ್ನು ಅರಸನ ಕೈಯಲ್ಲಿ ಒಪ್ಪಿಸಿಕೊಡುವರು,” ಎಂದರು.
12 ೧೨ ಇತ್ತ ಮೀಕಾಯೆಹುವನ್ನು ಕರೆಯುವುದಕ್ಕೆ ಬಂದಿದ್ದ ದೂತನು ಅವನಿಗೆ, “ಎಲ್ಲಾ ಪ್ರವಾದಿಗಳೂ ಏಕ ಮನಸ್ಸಿನಿಂದ ಅರಸನಿಗೆ ಶುಭವನ್ನೇ ತಿಳಿಸುತ್ತಿದ್ದಾರೆ; ದಯವಿಟ್ಟು ನೀನೂ ಅವರಂತೆ ಶುಭವನ್ನೇ ತಿಳಿಸು” ಎಂದು ಹೇಳಿದನು.
ಆದರೆ ಮೀಕಾಯನನ್ನು ಕರೆಯಲು ಹೋದ ದೂತನು ಅವನಿಗೆ, “ನೋಡು, ಎಲ್ಲ ಪ್ರವಾದಿಗಳು ಏಕಮನಸ್ಸಿನಿಂದ ಅರಸನಿಗೆ ಒಳ್ಳೆಯದನ್ನೇ ಪ್ರವಾದಿಸಿದ್ದಾರೆ. ನಿನ್ನ ಮಾತು ಅವರಲ್ಲಿ ಒಬ್ಬನ ಮಾತಿನ ಹಾಗೆಯೇ ಇರಲಿ; ಒಳ್ಳೆಯ ಮಾತು ಆಡು,” ಎಂದನು.
13 ೧೩ ಅದಕ್ಕೆ ಮೀಕಾಯೆಹುವು, “ಯೆಹೋವನಾಣೆ, ನನ್ನ ದೇವರು ಹೇಳುವುದನ್ನೇ ನುಡಿಯುತ್ತೇನೆ” ಎಂದು ಉತ್ತರಕೊಟ್ಟನು.
ಅದಕ್ಕೆ ಮೀಕಾಯನು, “ಯೆಹೋವ ದೇವರ ಜೀವದಾಣೆ, ನನ್ನ ದೇವರು ಏನು ಹೇಳುವರೋ, ಅದನ್ನೇ ಮಾತನಾಡುವೆನು,” ಎಂದನು.
14 ೧೪ ಅವನು ಅರಸನ ಬಳಿಗೆ ಬಂದಾಗ ಅರಸನು, “ಮೀಕಾಯೆಹುವೇ? ನಾವು ರಾಮೋತ್ ಗಿಲ್ಯಾದಿನ ಮೇಲೆ ಯುದ್ಧಕ್ಕಾಗಿ ಹೋಗಬಹುದೋ? ಹೋಗಬಾರದೋ? ಎಂದು ಕೇಳಿದನು. ಅವನು, ಹೋಗಬಹುದು, ಕೃತಾರ್ಥನಾಗಿ ಬರುವಿರಿ, ವೈರಿಗಳು ನಿನ್ನ ಕೈವಶವಾಗುವರು” ಎಂದು ಹೇಳಿದನು.
ಅವನು ಅರಸನ ಬಳಿಗೆ ಬಂದಾಗ, ಅರಸನು ಅವನಿಗೆ, “ಮೀಕಾಯೆಹುವೇ, ನಾವು ಗಿಲ್ಯಾದಿನ ರಾಮೋತ್ ವಿರುದ್ಧವಾಗಿ ಯುದ್ಧಕ್ಕೆ ಹೋಗಬಹುದೋ ಅಥವಾ ಬೇಡವೋ?” ಎಂದನು. ಆಗ ಅವನು, “ಹೋಗಿ ಜಯ ಹೊಂದಿರಿ. ಅವರು ನಿಮ್ಮ ಕೈವಶರಾಗುವರು,” ಎಂದನು.
15 ೧೫ ಆಗ ಅರಸನು ಅವನಿಗೆ, “ಸತ್ಯವನ್ನೇ ತಿಳಿಸಬೇಕೆಂದು ಯೆಹೋವನ ಹೆಸರಿನಲ್ಲಿ ನಾನು ನಿನ್ನಿಂದ ಎಷ್ಟು ಸಾರಿ ಪ್ರಮಾಣ ಮಾಡಿಸಬೇಕು?” ಎಂದನು
ಆಗ ಅರಸನು ಅವನಿಗೆ, “ನೀನು ಯೆಹೋವ ದೇವರ ಹೆಸರಿನಲ್ಲಿ ಸತ್ಯವನ್ನಲ್ಲದೆ ಬೇರೊಂದು ನನಗೆ ಹೇಳಬಾರದೆಂದು ನಾನು ಎಷ್ಟು ಸಾರಿ ನಿನಗೆ ಆಣೆ ಇಡಬೇಕು?” ಎಂದನು.
16 ೧೬ ಆಗ ಅವನು, “ಇಸ್ರಾಯೇಲರೆಲ್ಲರೂ ಕುರುಬನಿಲ್ಲದ ಕುರಿ ಹಿಂಡುಗಳಂತೆ ಬೆಟ್ಟಗಳಲ್ಲಿ ಚದರಿ ಹೋದದ್ದನ್ನು ಕಂಡೆನು; ಆಗ ಯೆಹೋವನು, ‘ಇವರು ಒಡೆಯನಿಲ್ಲದವರಾಗಿ ಇರುತ್ತಾರೆ; ಸಮಾಧಾನದಿಂದ ತಮ್ಮ ತಮ್ಮ ಮನೆಗಳಿಗೆ ಹೋಗಲಿ’” ಎಂಬುದಾಗಿ ಉತ್ತರಕೊಟ್ಟನು.
ಅದಕ್ಕೆ ಮೀಕಾಯನು, “ಇಸ್ರಾಯೇಲರೆಲ್ಲರು ಕುರುಬನಿಲ್ಲದ ಕುರಿಗಳಂತೆ ಬೆಟ್ಟಗಳ ಮೇಲೆ ಚದರಿಹೋದದ್ದನ್ನು ಕಂಡೆನು. ಆಗ ಯೆಹೋವ ದೇವರು, ‘ಇವರಿಗೆ ಯಜಮಾನನು ಇಲ್ಲ. ಪ್ರತಿ ಮನುಷ್ಯನು ತನ್ನ ತನ್ನ ಮನೆಗೆ ಸಮಾಧಾನವಾಗಿ ಹಿಂದಿರುಗಿ ಹೋಗಲಿ,’ ಎಂಬುದಾಗಿ ಹೇಳಿದರು,” ಎಂದನು.
17 ೧೭ ಆಗ ಇಸ್ರಾಯೇಲರ ಅರಸನು ಯೆಹೋಷಾಫಾಟನಿಗೆ, “ಈ ಪ್ರವಾದಿಯು ನನಗೆ ಯಾವಾಗಲೂ ಶುಭವನ್ನಲ್ಲ, ಅಶುಭವನ್ನೇ, ತಿಳಿಸುತ್ತಾನೆಂದು ನಾನು ನಿನಗೆ ಹೇಳಲಿಲ್ಲವೋ?” ಎಂದನು.
ಆಗ ಇಸ್ರಾಯೇಲಿನ ಅರಸನು ಯೆಹೋಷಾಫಾಟನಿಗೆ, “ಇವನು ನನ್ನನ್ನು ಕುರಿತು ಒಳ್ಳೆಯದನ್ನಲ್ಲ ಕೆಟ್ಟದ್ದನ್ನೇ ಪ್ರವಾದಿಸುವನೆಂದು ನಾನು ನಿನಗೆ ಹೇಳಲಿಲ್ಲವೇ?” ಎಂದನು.
18 ೧೮ ಅದಕ್ಕೆ ಮಿಕಾಯೆಹುವು, “ಅದಿರಲಿ, ಯೆಹೋವನ ವಾಕ್ಯವನ್ನು ಕೇಳಿರಿ, ಯೆಹೋವನು ತನ್ನ ಸಿಂಹಾಸನದ ಮೇಲೆ ಕುಳಿತುಕೊಂಡದ್ದನ್ನೂ ಪರಲೋಕಸೈನ್ಯಗಳು ಆತನ ಎಡಬಲಗಡೆಗಳಲ್ಲಿ ನಿಂತಿದ್ದನ್ನೂ ಕಂಡೆನು.
ಆಗ ಮೀಕಾಯನು, “ಆದ್ದರಿಂದ ಯೆಹೋವ ದೇವರ ವಾಕ್ಯವನ್ನು ಕೇಳು. ಯೆಹೋವ ದೇವರು ತಮ್ಮ ಸಿಂಹಾಸನದ ಮೇಲೆ ಕುಳಿತುಕೊಂಡಿರುವುದನ್ನೂ ಆಕಾಶದ ಸಮಸ್ತ ಸೈನ್ಯವು ಅವರ ಬಲಗಡೆ ಮತ್ತು ಎಡಗಡೆಯಲ್ಲಿ ನಿಂತಿರುವುದನ್ನೂ ನಾನು ಕಂಡೆನು.
19 ೧೯ ಯೆಹೋವನು ತನ್ನ ಹತ್ತಿರ ನಿಂತವರನ್ನು, ‘ಇಸ್ರಾಯೇಲರ ಅರಸನಾದ ಅಹಾಬನು ಹತನಾಗಿ ಬೀಳುವಂತೆ ಅವನನ್ನು ರಾಮೋತ್ ಗಿಲ್ಯಾದಿನ ಯುದ್ಧಕ್ಕೆ ಹೋಗಲು ಯಾರು ಪ್ರೇರೇಪಿಸ ಬಲ್ಲಿರಿ?’ ಎಂದು ಕೇಳಿದಾಗ, ಒಬ್ಬನು ಒಂದು ವಿಧವಾಗಿಯೂ ಇನ್ನೊಬ್ಬನು ಇನ್ನೊಂದು ವಿಧವಾಗಿಯೂ ಉತ್ತರಕೊಟ್ಟರು.
ಆಗ ಯೆಹೋವ ದೇವರು, ‘ಇಸ್ರಾಯೇಲಿನ ಅರಸನಾದ ಅಹಾಬನು ಹೋಗಿ ಗಿಲ್ಯಾದಿನ ರಾಮೋತಿನಲ್ಲಿ ಬೀಳುವ ಹಾಗೆ ಅವನನ್ನು ಮರುಳುಗೊಳಿಸುವವನು ಯಾರು?’ ಎಂದರು. “ಒಬ್ಬನು ಒಂದು ವಿಧವಾಗಿಯೂ ಮತ್ತೊಬ್ಬನು ಇನ್ನೊಂದು ವಿಧವಾಗಿಯೂ ಹೇಳುತ್ತಿದ್ದರು.
20 ೨೦ ಕಡೆಯಲ್ಲಿ ಒಂದು ಆತ್ಮವು ಯೆಹೋವನ ಮುಂದೆ ಬಂದು ನಿಂತು ಆತನಿಗೆ, ‘ನಾನು ಹೋಗಿ ಅವನನ್ನು ಪ್ರೇರೇಪಿಸುವೆನು’ ಎಂದಿತು. ‘ಹೇಗೆ ಪ್ರೇರೇಪಿಸುವಿ?’ ಎಂದು ಯೆಹೋವನು ಕೇಳಲು,
ಕೊನೆಯಲ್ಲಿ, ಒಂದು ಆತ್ಮವು ಹೊರಟುಬಂದು ಯೆಹೋವ ದೇವರ ಮುಂದೆ ನಿಂತು, ‘ನಾನು ಅವನನ್ನು ಮರುಳುಗೊಳಿಸುತ್ತೇನೆ,’ ಎಂದಿತು. “ಆಗ ಯೆಹೋವ ದೇವರು, ‘ಅದು ಹೇಗೆ?’ ಎಂದರು.
21 ೨೧ ಅದು, ‘ನಾನು ಅಸತ್ಯವನ್ನಾಡುವ ಆತ್ಮವಾಗಿ ಅವನ ಎಲ್ಲಾ ಪ್ರವಾದಿಗಳ ಒಳಗೆ ಸೇರುವೆನು’ ಎಂದು ಉತ್ತರಕೊಟ್ಟಿತು. ಆಗ ಯೆಹೋವನು ಅದಕ್ಕೆ, ‘ಹೋಗಿ ಅದರಂತೆ ಮಾಡು; ಅವನನ್ನು ಪ್ರೇರೇಪಿಸು ನೀನು ಸಫಲನಾಗುವಿ’ ಎಂದನು.
“ಅದಕ್ಕದು, ‘ನಾನು ಹೊರಟು ಅವನ ಎಲ್ಲಾ ಪ್ರವಾದಿಗಳ ಬಾಯಲ್ಲಿ ಸುಳ್ಳನ್ನಾಡುವ ಆತ್ಮವಾಗಿರುವೆನು,’ ಎಂದಿತು. “ಅದಕ್ಕೆ ಯೆಹೋವ ದೇವರು, ‘ನೀನು ಅವನನ್ನು ಮರುಳುಗೊಳಿಸುವೆ ಮತ್ತು ಜಯಿಸುವೆ, ಹೊರಟುಹೋಗಿ ಹಾಗೆ ಮಾಡು,’ ಎಂದರು.
22 ೨೨ ನೋಡು, ಯೆಹೋವನು ನಿನ್ನ ವಿಷಯದಲ್ಲಿ ಕೇಡು ನುಡಿದು, ನಿನ್ನ ಪ್ರವಾದಿಗಳಲ್ಲಿ ಅಸತ್ಯವನ್ನಾಡುವ ಆತ್ಮವನ್ನು ಕಳುಹಿಸಿದ್ದಾನೆ” ಎಂದು ಹೇಳಿದನು.
“ಆದ್ದರಿಂದ ಇಗೋ, ಯೆಹೋವ ದೇವರು ಈ ನಿನ್ನ ಪ್ರವಾದಿಗಳ ಬಾಯಿಯಲ್ಲಿ ಸುಳ್ಳನ್ನಾಡುವ ಆತ್ಮವನ್ನು ಇಟ್ಟಿದ್ದಾರೆ. ಇದಲ್ಲದೆ ಯೆಹೋವ ದೇವರು ನಿನ್ನನ್ನು ಕುರಿತು ಕೇಡನ್ನು ಹೇಳಿದ್ದಾರೆ,” ಎಂದನು.
23 ೨೩ ಆಗ ಕೆನಾನನ ಮಗನಾದ ಚಿದ್ಕೀಯನು ಮೀಕಾಯೆಹುವಿನ ಬಳಿಗೆ ಹೋಗಿ ಅವನ ಕೆನ್ನೆಗೆ ಒಂದು ಏಟು ಹಾಕಿ, “ಯೆಹೋವನ ಆತ್ಮವು ನನ್ನನ್ನು ಬಿಟ್ಟು ನಿನ್ನೊಂದಿಗೆ ಮಾತನಾಡುವುದಕ್ಕಾಗಿ ಯಾವ ಮಾರ್ಗವಾಗಿ ಬಂದಿತು?” ಎಂದನು.
ಆಗ ಕೆನಾನನ ಮಗನಾದ ಚಿದ್ಕೀಯನು ಸಮೀಪಕ್ಕೆ ಬಂದು ಮೀಕಾಯನ ಕೆನ್ನೆಯ ಮೇಲೆ ಹೊಡೆದು, “ಯೆಹೋವ ದೇವರ ಆತ್ಮವು ನನ್ನನ್ನು ಬಿಟ್ಟು, ನಿನ್ನ ಸಂಗಡ ಮಾತನಾಡಲು ಯಾವ ಮಾರ್ಗವಾಗಿ ಬಂದಿತು?” ಎಂದನು.
24 ೨೪ ಅದಕ್ಕೆ ಮೀಕಾಯೆಹುವು, “ನೀನು ಅಡಗಿಕೊಳ್ಳುವುದಕ್ಕೆ ಒಳಗಿನ ಕೋಣೆಗೆ ಹೋಗುವ ದಿನದಲ್ಲಿ ಅದು ನಿನಗೆ ಗೊತ್ತಾಗುವುದು” ಎಂದು ಉತ್ತರ ಕೊಟ್ಟನು.
ಅದಕ್ಕೆ ಮೀಕಾಯನು, “ಇಗೋ, ನಿನ್ನನ್ನು ಬಚ್ಚಿಟ್ಟುಕೊಳ್ಳಲು ಒಳಕೊಠಡಿಗೆ ನೀನು ಹೋಗುವ ದಿವಸದಲ್ಲಿ ನೋಡುವೆ,” ಎಂದನು.
25 ೨೫ ಆಗ ಇಸ್ರಾಯೇಲರ ಅರಸನು ಸೇವಕರಿಗೆ, “ಮೀಕಾಯೆಹುವನ್ನು ಹಿಡಿದುಕೊಂಡು ಹೋಗಿ ಪಟ್ಟಣದ ಅಧಿಕಾರಿಯಾದ ಆಮೋನನಿಗೂ ರಾಜಪುತ್ರನಾದ ಯೋವಾಷನಿಗೂ ಒಪ್ಪಿಸಿರಿ.
ಆಗ ಇಸ್ರಾಯೇಲಿನ ಅರಸನು ಹೇಳಿದ್ದೇನೆಂದರೆ, “ನೀವು ಮೀಕಾಯನನ್ನು ಹಿಡಿದು ಪಟ್ಟಣದ ಅಧಿಪತಿಯಾದ ಆಮೋನನ ಬಳಿಗೂ, ಅರಸನ ಮಗನಾದ ಯೋವಾಷನ ಬಳಿಗೂ ತೆಗೆದುಕೊಂಡುಹೋಗಿ,
26 ೨೬ ಅವರಿಗೆ, ‘ನಾನು ಸುರಕ್ಷಿತನಾಗಿ ಹಿಂದಿರುಗುವವರೆಗೂ ಇವನನ್ನು ಸೆರೆಯಲ್ಲಿಟ್ಟು ಸೆರೆಮನೆಯ ಅನ್ನಪಾನಗಳನ್ನೇ ಕೊಟ್ಟು ಕುಗ್ಗಿಸಬೇಕೆಂದು ಅರಸನು ಹೇಳಿದ್ದಾನೆ’ ಎಂದು ಹೇಳಿರಿ” ಎಂಬುದಾಗಿ ಆಜ್ಞಾಪಿಸಿದನು.
‘ನಾನು ಸಮಾಧಾನವಾಗಿ ತಿರುಗಿ ಬರುವವರೆಗೂ ನೀವು ಇವನನ್ನು ಸೆರೆಮನೆಯಲ್ಲಿಟ್ಟು, ಅವನಿಗೆ ರೊಟ್ಟಿ ಮತ್ತು ನೀರನ್ನು ಬಿಟ್ಟು ಮತ್ತೇನೂ ಕೊಡಬೇಡಿರೆಂದು ಅರಸನು ಹೇಳಿದ್ದಾನೆ’ ಎಂದು ತಿಳಿಸು,” ಎಂದನು.
27 ೨೭ ಮೀಕಾಯೆಹುವು ಅರಸನಿಗೆ, “ನೀನು ಸುರಕ್ಷಿತನಾಗಿ ಬರುವುದಾದರೆ, ನಾನು ನುಡಿದದ್ದು ಯೆಹೋವನ ಮಾತಲ್ಲ” ಎಂದು ಹೇಳಿ, “ಮಹಾ ಜನರೇ, ನನ್ನ ಮಾತನ್ನು ಗಮನದಲ್ಲಿಟ್ಟುಕೊಳ್ಳಿರಿ” ಎಂದು ಕೂಗಿ ಹೇಳಿದನು.
ಅದಕ್ಕೆ ಮೀಕಾಯನು, “ನೀನು ಸಮಾಧಾನದಿಂದ ನಿಜವಾಗಿ ಬಂದರೆ, ಯೆಹೋವ ದೇವರು ನನ್ನ ಮುಖಾಂತರ ಮಾತನಾಡಿಲ್ಲ, ಎಂದು ಹೇಳಿ; ಜನರೇ, ನೀವೆಲ್ಲರೂ ನನ್ನ ಮಾತನ್ನು ಗಮನದಲ್ಲಿಡಿರಿ!” ಎಂದು ಕೂಗಿ ಹೇಳಿದನು.
28 ೨೮ ಇಸ್ರಾಯೇಲರ ಅರಸನೂ ಹಾಗೂ ಯೆಹೂದ್ಯರ ಅರಸನಾದ ಯೆಹೋಷಾಫಾಟನೂ ರಾಮೋತ್ ಗಿಲ್ಯಾದಿಗೆ ಯುದ್ಧಕ್ಕೆ ಹೊರಟರು.
ಹೀಗೆಯೇ ಇಸ್ರಾಯೇಲಿನ ಅರಸನೂ, ಯೆಹೂದದ ಅರಸನಾದ ಯೆಹೋಷಾಫಾಟನೂ ಗಿಲ್ಯಾದಿನ ರಾಮೋತಿಗೆ ಹೋದರು.
29 ೨೯ ಇಸ್ರಾಯೇಲರ ಅರಸನು ಯೆಹೋಷಾಫಾಟನಿಗೆ, “ನಾನು ವೇಷ ಹಾಕಿಕೊಂಡು ಯುದ್ಧ ಭೂಮಿಗೆ ಬರುತ್ತೇನೆ; ನೀನಾದರೋ ನಿನ್ನ ರಾಜವಸ್ತ್ರಗಳನ್ನು ಧರಿಸಿಕೊಂಡೇ ಬಾ” ಎಂದು ಹೇಳಿ ವೇಷ ಹಾಕಿಕೊಂಡನು; ತರುವಾಯ ಯುದ್ಧ ಭೂಮಿಗೆ ಹೋದರು.
ಆಗ ಇಸ್ರಾಯೇಲಿನ ಅರಸನು ಯೆಹೋಷಾಫಾಟನಿಗೆ, “ನಾನು ವೇಷಹಾಕಿಕೊಂಡು ಯುದ್ಧದಲ್ಲಿ ಪ್ರವೇಶಿಸುವೆನು. ಆದರೆ ನೀನು ನಿನ್ನ ರಾಜವಸ್ತ್ರಗಳನ್ನು ಧರಿಸಿಕೊಂಡಿರು,” ಎಂದನು. ಹಾಗೆಯೇ ಇಸ್ರಾಯೇಲಿನ ಅರಸನು ವೇಷಹಾಕಿಕೊಂಡು ಯುದ್ಧಕ್ಕೆ ಹೋದನು.
30 ೩೦ ಅರಾಮ್ಯರ ಅರಸನು ತನ್ನ ರಥಬಲದ ಅಧಿಪತಿಗಳಿಗೆ, “ನೀವು ಶತ್ರುಗಳ ಸಾಧಾರಣ ಸೈನಿಕರನ್ನೂ, ಅಧಿಪತಿಗಳನ್ನೂ ಬಿಟ್ಟು ಇಸ್ರಾಯೇಲರ ಅರಸನಿಗೇ ಗುರಿಯಿಡಿರಿ” ಎಂದು ಆಜ್ಞಾಪಿಸಿದ್ದನು.
ಅರಾಮಿನ ಅರಸನು ತನ್ನ ರಥಗಳ ಮೇಲೆ ಅಧಿಕಾರವುಳ್ಳವರಿಗೆ, “ನೀವು ಶತ್ರುಗಳ ಸಾಧಾರಣ ಸೈನಿಕರನ್ನೂ ಅಧಿಪತಿಗಳನ್ನೂ ಬಿಟ್ಟು ಇಸ್ರಾಯೇಲಿನ ಅರಸನನ್ನು ಮಾತ್ರ ಗುರಿಯಾಗಿಸಿಕೊಂಡು ಯುದ್ಧಮಾಡಿರಿ,” ಎಂದು ಆಜ್ಞಾಪಿಸಿದನು.
31 ೩೧ ರಥಬಲದ ಅಧಿಪತಿಗಳು ಯೆಹೋಷಾಫಾಟನನ್ನು ಕಂಡಾಗ ಅವನೇ ಇಸ್ರಾಯೇಲರ ಅರಸನೆಂದು ನೆನೆದು, ಅವನಿಗೆ ವಿರುದ್ಧವಾಗಿ ಯುದ್ಧ ಮಾಡುವುದಕ್ಕೆ ಸುತ್ತಿಕೊಂಡರು. ಆಗ ಯೆಹೋಷಾಫಾಟನು ಯೆಹೋವನನ್ನು ಸಹಾಯಕ್ಕಾಗಿ ಕೂಗಿದನು. ಆಗ ದೇವರಾದ ಯೆಹೋವನು ಅವನ ನೆರವಿಗೆ ಬಂದು, ಶತ್ರುಗಳನ್ನು ಅವನ ಕಡೆಯಿಂದ ಹೊರಟು ಹೋಗುವಂತೆ ಮಾಡಿದನು.
ಆದ್ದರಿಂದ ರಥಗಳ ಅಧಿಪತಿಗಳು ಯೆಹೋಷಾಫಾಟನನ್ನು ಕಂಡಾಗ, “ಇವನೇ ಇಸ್ರಾಯೇಲಿನ ಅರಸನು,” ಎಂದು ಹೇಳಿ ಅವನ ಸಂಗಡ ಯುದ್ಧಮಾಡುವುದಕ್ಕೆ ತಿರುಗಿಕೊಂಡರು. ಆದರೆ ಯೆಹೋಷಾಫಾಟನು ಕೂಗಿಕೊಂಡನು. ಆಗ ಯೆಹೋವ ದೇವರು ಅವನಿಗೆ ಸಹಾಯಮಾಡಿ, ಶತ್ರುಗಳನ್ನು ಅವನ ಕಡೆಯಿಂದ ತೊಲಗಿಸಿದರು.
32 ೩೨ ಅವನು ಇಸ್ರಾಯೇಲರ ಅರಸನಲ್ಲವೆಂಬುದು ರಥಬಲದ ಅಧಿಪತಿಗಳಿಗೆ ಗೊತ್ತಾದಾಗ ಅವರು ಅವನನ್ನು ಬಿಟ್ಟು ಹಿಂತಿರುಗಿದರು.
ಅವನು ಇಸ್ರಾಯೇಲಿನ ಅರಸನಲ್ಲವೆಂದು ರಥಗಳ ಅಧಿಪತಿಗಳಿಗೆ ಗೊತ್ತಾದಾಗ, ಅವರು ಅವನನ್ನು ಬಿಟ್ಟುಹೋದರು.
33 ೩೩ ಅರಾಮ್ಯರ ಒಬ್ಬ ಸೈನಿಕನು ಗುರಿಯಿಡದೆ ಸುಮ್ಮನೆ ಒಂದು ಬಾಣವನ್ನೆಸೆಯಲು, ಆ ಬಾಣವು ಇಸ್ರಾಯೇಲರ ಅರಸನಿಗೆ, ಅವನ ಕವಚದ ಸಂದಿನಲ್ಲಿ ತಾಕಿತು. ಆಗ ಅವನು ತನ್ನ ಸಾರಥಿಗೆ, “ರಥವನ್ನು ತಿರುಗಿಸಿ ನನ್ನನ್ನು ರಣರಂಗದಿಂದ ಆಚೆಗೆ ತೆಗೆದುಕೊಂಡು ಹೋಗು; ನನಗೆ ದೊಡ್ಡ ಗಾಯವಾಗಿದೆ” ಎಂದು ಹೇಳಿದನು.
ಆದರೆ ಅರಾಮ್ಯರ ಸೈನಿಕನೊಬ್ಬನು ಗುರಿ ಇಡದೆ ಬಿಲ್ಲಿಗೆ ಬಾಣವನ್ನೇರಿಸಿ ಹೊಡೆಯಲು, ಅದು ಇಸ್ರಾಯೇಲಿನ ಅರಸನಿಗೆ, ಅವನ ಕವಚದ ಸಂದಿನಲ್ಲಿ ಬಂದು ತಾಕಿತು. ಆದ್ದರಿಂದ ಅವನು ತನ್ನ ರಥ ನಡೆಸುವವನಿಗೆ, “ನೀನು ರಥವನ್ನು ತಿರುಗಿಸಿ ನನ್ನನ್ನು ಸೈನ್ಯದೊಳಗಿಂದ ಆಚೇಕಡೆಗೆ ತೆಗೆದುಕೊಂಡು ಹೋಗು, ನನಗೆ ದೊಡ್ಡ ಗಾಯವಾಗಿದೆ,” ಎಂದನು.
34 ೩೪ ಆ ದಿನ ಯುದ್ಧವು ಬಹು ಘೋರವಾಗಿದ್ದುದರಿಂದ ಇಸ್ರಾಯೇಲರ ಅರಸನು ಸಾಯಂಕಾಲದವರೆಗೂ ಅರಾಮ್ಯರ ಎದುರಾಗಿ ತನ್ನ ರಥದಲ್ಲೇ ಆತುಕೊಂಡಿರಬೇಕಾಯಿತು. ಸೂರ್ಯಾಸ್ತಮಾನವಾದಾಗ ಅವನು ಸತ್ತನು.
ಆ ದಿವಸವೆಲ್ಲಾ ಯುದ್ಧವು ಬಹು ಘೋರವಾದದ್ದರಿಂದ ಇಸ್ರಾಯೇಲಿನ ಅರಸನಾದ ಅಹಾಬನು ಸಾಯಂಕಾಲದವರೆಗೂ ಅರಾಮ್ಯರಿಗೆ ಎದುರಾಗಿ ರಥದಲ್ಲಿಯೇ ಆತುಕೊಂಡು ನಿಂತಿದ್ದನು, ಸೂರ್ಯನು ಅಸ್ತಮಿಸಿದಾಗ ಅವನು ಮರಣಹೊಂದಿದನು.

< ಪೂರ್ವಕಾಲವೃತ್ತಾಂತ ದ್ವಿತೀಯ ಭಾಗ 18 >