< ಅರಸುಗಳು - ಪ್ರಥಮ ಭಾಗ 13 >

1 ಆಗ ಯೆಹೂದ ದೇಶದವನಾದ ಒಬ್ಬ ದೇವರ ಮನುಷ್ಯನು ಯೆಹೋವನಿಂದ ಕಳುಹಿಸಲ್ಪಟ್ಟವನಾಗಿ ಬೇತೇಲಿಗೆ ಬಂದನು. ಯಾರೊಬ್ಬಾಮನು ಧೂಪಹಾಕುವುದಕ್ಕಾಗಿ ಯಜ್ಞವೇದಿಯ ಹತ್ತಿರ ನಿಂತುಕೊಂಡಿದ್ದನು 2 ಆಗ ಆ ಮನುಷ್ಯನು ಯೆಹೋವನ ಅಪ್ಪಣೆಯಿಂದ ಯಜ್ಞವೇದಿಯನ್ನು ಕುರಿತು, “ವೇದಿಯೇ, ವೇದಿಯೇ, ದಾವೀದನ ಸಂತಾನದಲ್ಲಿ ಯೋಷೀಯನು ಎಂಬ ಒಬ್ಬ ಮನುಷ್ಯನು ಹುಟ್ಟುವನು. ಅವನು ನಿನ್ನ ಮೇಲೆ ಧೂಪಹಾಕುವ ಪೂಜಾಸ್ಥಳಗಳ ಯಾಜಕರನ್ನು ಹಿಡಿದು, ಅವರನ್ನು ನಿನ್ನ ಮೇಲೆಯೇ ಯಜ್ಞಮಾಡುವನು. ಮನುಷ್ಯರ ಎಲುಬುಗಳು ನಿನ್ನ ಮೇಲೆ ಸುಡಲ್ಪಡುವವು ಎಂದು ಯೆಹೋವನು ಹೇಳುತ್ತಾನೆ” ಅಂದನು. 3 ಇದಲ್ಲದೆ ಅವನು, “ನನ್ನ ಮಾತು ಯೆಹೋವನದು ಎಂಬುವುದಕ್ಕೆ ಯಜ್ಞವೇದಿಯು ಸೀಳಿ ಅದರ ಮೇಲಣ ಬೂದಿಯು ಬಿದ್ದುಹೋಗುವುದೇ ಗುರುತಾಗಿರುವುದು” ಎಂದು ಹೇಳಿದನು. 4 ಬೇತೇಲಿನ ಯಜ್ಞವೇದಿಯ ಬಳಿಯಲ್ಲಿ ನಿಂತಿದ್ದ ಅರಸನು ಆ ದೇವರ ಮನುಷ್ಯನು ವೇದಿಗೆ ವಿರುದ್ಧವಾಗಿ ನುಡಿದಿದ್ದನ್ನು ಕೇಳಿ, “ಕೈಚಾಚಿ ಅವನನ್ನು ಹಿಡಿಯಿರಿ” ಎಂದು ಆಜ್ಞಾಪಿಸಿದನು. ಕೂಡಲೇ ಅವನ ಕೈ ಬತ್ತಿ ಹೋಯಿತು. ಅವನು ಅದನ್ನು ಹಿಂದಕ್ಕೆ ತೆಗೆದುಕೊಳ್ಳಲು ಅಗಲ್ಲಿಲ್ಲ. 5 ಯಜ್ಞವೇದಿಯು ಸೀಳಿ ಅದರ ಮೇಲಣ ಬೂದಿಯು ಬಿದ್ದುಹೋಯಿತು. ಹೀಗೆ ಆ ದೇವರ ಮನುಷ್ಯನು ಯೆಹೋವನ ಅಪ್ಪಣೆಯಿಂದ ಹೇಳಿದ ಗುರುತು ನೆರವೇರಿತು. 6 ಅರಸನು ಆ ಮನುಷ್ಯನಿಗೆ, “ನಿನ್ನ ದೇವರಾದ ಯೆಹೋವನು ಪ್ರಸನನ್ನಾಗುವಂತೆ ಬೇಡಿಕೊಂಡು ನಾನು ನನ್ನ ಕೈಯನ್ನು ಹಿಂತೆಗೆಯುವುದಕ್ಕಾಗುವ ಹಾಗೆ ಆತನನ್ನು ನನಗೋಸ್ಕರ ಪ್ರಾರ್ಥಿಸು” ಎಂದು ಕೇಳಿದನು. ದೇವರ ಮನುಷ್ಯನು ಯೆಹೋವನನ್ನು ಬೇಡಿಕೊಂಡಿದ್ದರಿಂದ ಅರಸನ ಕೈ ವಾಸಿಯಾಗಿ ಮುಂಚಿನಂತೆ ಆಯಿತು. 7 ಆಗ ಅರಸನು ಅವನಿಗೆ, “ನನ್ನ ಮನೆಗೆ ಬಾ, ಸ್ವಲ್ಪ ಊಟ ಮಾಡಿ ವಿಶ್ರಾಂತಿ ಪಡೆದುಕೋ. ನಾನು ನಿನಗೆ ಬಹುಮಾನವನ್ನು ಕೊಡುತ್ತೇನೆ” ಎಂದನು. 8 ಆದರೆ ದೇವರ ಮನುಷ್ಯನು ಅರಸನಿಗೆ, “ನೀನು ನನಗೆ ನಿನ್ನ ಆಸ್ತಿಯಲ್ಲಿ ಅರ್ಧವನ್ನು ಕೊಟ್ಟರೂ, ನಾನು ನಿನ್ನ ಸಂಗಡ ಬರುವುದಿಲ್ಲ. ಇಲ್ಲಿ ಅನ್ನ ಪಾನಗಳನ್ನು ತೆಗೆದುಕೊಳ್ಳುವುದಿಲ್ಲ. 9 ಇಲ್ಲಿ ಅನ್ನಪಾನಗಳನ್ನು ತೆಗೆದುಕೊಳ್ಳಬಾರದೆಂದೂ ಮತ್ತು ಹಿಂದಿರುಗಿ ಹೋಗುವಾಗ ಬೇರೆ ದಾರಿಯಿಂದ ಹೋಗಬೇಕೆಂತಲೂ ನನಗೆ ಯೆಹೋವನ ಅಪ್ಪಣೆಯಾಗಿದೆ” ಎಂದು ಹೇಳಿದನು. 10 ೧೦ ಆ ದೇವರ ಮನುಷ್ಯನು ಬಂದ ದಾರಿಯನ್ನು ಬಿಟ್ಟು ಇನ್ನೊಂದು ದಾರಿಯನ್ನು ಹಿಡಿದು ಹೊರಟು ಹೋದನು. 11 ೧೧ ಬೇತೇಲಿನಲ್ಲಿ ಒಬ್ಬ ವೃದ್ಧ ಪ್ರವಾದಿಯು ವಾಸವಾಗಿದ್ದನು. ಅವನ ಮಕ್ಕಳು ಬಂದು ದೇವರ ಮನುಷ್ಯನು ಆ ದಿನ ಬೇತೇಲಿನಲ್ಲಿ ಮಾಡಿದ್ದನ್ನೂ ಮತ್ತು ಅವನು ಅರಸನಿಗೆ ಹೇಳಿದ್ದನ್ನೂ ತಮ್ಮ ತಂದೆಗೆ ತಿಳಿಸಿದರು. 12 ೧೨ ತಂದೆಯು ಅವರನ್ನು, “ಅವನು ಯಾವ ದಾರಿಯಿಂದ ಹೋದನು?” ಎಂದು ಕೇಳಲು ಅವರು ಯೆಹೂದ ದೇಶದವನಾದ ಆ ದೇವರ ಮನುಷ್ಯನು ಹೋದ ದಾರಿಯನ್ನು ತೋರಿಸಿದರು. 13 ೧೩ ಆಗ ಅವನು ತನ್ನ ಮಕ್ಕಳಿಗೆ, “ಕತ್ತೆಗೆ ತಡಿಹಾಕಿರಿ” ಎಂದು ಆಜ್ಞಾಪಿಸಿಲು ಅವರು ತಡಿಹಾಕಿದರು. ಅವನು ಕತ್ತೆಯ ಮೇಲೆ ಕುಳಿತುಕೊಂಡು ಹೊರಟನು. 14 ೧೪ ದೇವರ ಮನುಷ್ಯನ ಹಿಂದೆ ಹೋಗಿ ಏಲಾ ವೃಕ್ಷದ ಕೆಳಗೆ ಕುಳಿತ್ತಿದ್ದ ಅವನನ್ನು ಕಂಡು, “ಯೆಹೂದದಿಂದ ಬಂದ ದೇವರ ಮನುಷ್ಯನು ನೀನೋ?” ಎಂದು ಕೇಳಿದನು. ಅವನು ಹೌದೆಂದನು. 15 ೧೫ ಆಗ ಆ ಮುದುಕನು ಅವನಿಗೆ, “ನೀನು ನನ್ನ ಮನೆಗೆ ಬಂದು ಊಟಮಾಡು” ಎಂದು ಹೇಳಿದನು. 16 ೧೬ ಅದಕ್ಕೆ ಅವನು, “ನಾನು ನಿನ್ನ ಸಂಗಡ ಬರವುದಿಲ್ಲ ಮತ್ತು ಈ ಸ್ಥಳದಲ್ಲಿ ಅನ್ನಪಾನಗಳನ್ನು ತೆಗೆದುಕೊಳ್ಳುವುದಿಲ್ಲ. 17 ೧೭ ಇಲ್ಲಿ ಅನ್ನಪಾನಗಳನ್ನು ತೆಗೆದುಕೊಳ್ಳಬಾರದೆಂದೂ, ಬಂದ ದಾರಿಯನ್ನು ಬಿಟ್ಟು ಬೇರೆ ದಾರಿಯಿಂದ ಹಿಂದಿರುಗಿ ಹೋಗಬೇಕೆಂದು ನನಗೆ ಯೆಹೋವನ ಅಪ್ಪಣೆಯಾಗಿದೆ” ಎಂದು ಉತ್ತರಕೊಟ್ಟನು. 18 ೧೮ ಆಗ ಆ ಮುದುಕನು, “ನಾನು ನಿನ್ನಂತೆ ಪ್ರವಾದಿಯಾಗಿದ್ದೇನೆ. ಒಬ್ಬ ದೇವದೂತನು ನನಗೆ ಕಾಣಿಸಿಕೊಂಡು, ನಿನ್ನನ್ನು ಕರೆದುಕೊಂಡು ಬರಬೇಕೆಂದೂ ನಿನಗೆ ಅನ್ನಪಾನಗಳನ್ನು ಕೊಡಬೇಕೆಂದೂ ಯೆಹೋವನ ಹೆಸರಿನಲ್ಲಿ ಆಜ್ಞಾಪಿಸಿದ್ದಾನೆ” ಎಂದು ಹೇಳಿದನು. ಆದರೆ ದೇವರ ಮನುಷ್ಯನಿಗೆ ಪ್ರವಾದಿ ಹೇಳಿದ ಮಾತು ಸುಳ್ಳಾಗಿತ್ತು. 19 ೧೯ ದೇವರ ಮನುಷ್ಯನು ಆ ಪ್ರವಾದಿಯ ಮಾತನ್ನು ನಂಬಿ ಅವನ ಮನೆಗೆ ಹೋಗಿ ಅನ್ನಪಾನಗಳನ್ನು ತೆಗೆದುಕೊಂಡನು. 20 ೨೦ ಅವರು ಊಟಮಾಡುತ್ತಿರುವಾಗ ದೇವರ ಮನುಷ್ಯನನ್ನು ತನ್ನ ಮನೆಗೆ ಕರೆದುಕೊಂಡು ಬಂದ ಪ್ರವಾದಿಗೆ ಯೆಹೋವನು ಒಂದು ವಾಕ್ಯವನ್ನು ದಯಪಾಲಿಸಿದನು. 21 ೨೧ ಅವನು ಆ ಯೆಹೂದ ದೇಶದವನಾದ ಆ ದೇವರ ಮನುಷ್ಯನಿಗೆ, “ನಿನ್ನ ದೇವರಾದ ಯೆಹೋವನು ನಿನಗೆ ಈ ಸ್ಥಳದಲ್ಲಿ ಅನ್ನಪಾನಗಳನ್ನು ತೆಗೆದುಕೊಳ್ಳಬಾರದೆಂದು ಆಜ್ಞಾಪಿಸಿದರೂ ನೀನು ಆತನ ಆಜ್ಞೆಯನ್ನು ಮೀರಿ ಅವಿಧೇಯನಾಗಿ, 22 ೨೨ ಅನ್ನಪಾನಗಳನ್ನು ತೆಗೆದುಕೊಳ್ಳುವುದಕ್ಕೋಸ್ಕರ ಹಿಂದಿರುಗಿ ಬಂದದ್ದರಿಂದ, ನಿನ್ನ ಶವವು ನಿನ್ನ ಕುಟುಂಬ ಸ್ಮಶಾನಭೂಮಿಯನ್ನು ಸೇರುವುದೇ ಇಲ್ಲವೆಂದು ಯೆಹೋವನು ಹೇಳುತ್ತಾನೆ” ಅಂದನು. 23 ೨೩ ಅನ್ನಪಾನಗಳನ್ನು ತೆಗೆದುಕೊಂಡ ನಂತರ ಅವನು ತಾನು ಕರೆದುಕೊಂದು ಬಂದಿದ್ದ ಪ್ರವಾದಿಗೋಸ್ಕರ ಕತ್ತೆಗೆ ತಡಿಹಾಕಿಸಿದನು. 24 ೨೪ ದೇವರ ಮನುಷ್ಯನು ಸ್ವಲ್ಪ ದೂರ ಹೋದ ನಂತರ ಒಂದು ಸಿಂಹವು ಅವನಿಗೆ ಎದುರಾಗಿ ಬಂದು ಅವನನ್ನು ಕೊಂದು ಹಾಕಿತು. ಅವನ ಶವವು ದಾರಿಯಲ್ಲಿಯೇ ಬಿದ್ದಿತ್ತು. ಕತ್ತೆಯೂ ಸಿಂಹವೂ ಶವದ ಹತ್ತಿರ ನಿಂತುಕೊಂಡಿದ್ದವು. 25 ೨೫ ಹಾದುಹೋಗುವವರು ಶವವು ದಾರಿಯಲ್ಲಿ ಬಿದ್ದಿರುವುದನ್ನೂ, ಸಿಂಹವು ಅದರ ಬಳಿಯಲ್ಲಿ ನಿಂತಿರುವುದನ್ನೂ ಕಂಡು ವೃದ್ಧ ಪ್ರವಾದಿಯ ಊರಿಗೆ ಬಂದು ಅದನ್ನು ತಿಳಿಸಿದರು. 26 ೨೬ ಅವನನ್ನು ಹಿಂದಕ್ಕೆ ಕರೆದುಕೊಂಡು ಹೋಗಿದ್ದ ಪ್ರವಾದಿಯು ಈ ಸುದ್ದಿಯನ್ನು ಕೇಳಿ ಅವರಿಗೆ, “ಆ ಶವವು ದೇವರ ಮನುಷ್ಯನದೇ ಆಗಿರಬೇಕು. ಅವನು ಯೆಹೋವನ ಆಜ್ಞೆಗೆ ಅವೀಧೆಯನಾದ್ದರಿಂದ ಯೆಹೋವನು ಅವನ ವಿಷಯದಲ್ಲಿ ತಾನು ಹೇಳಿದ ಮಾತು ನೆರವೇರುವಂತೆ ಅವನನ್ನು ಸಿಂಹದ ಬಾಯಿಗೆ ಒಪ್ಪಿಸಿದನು. ಅದು ಅವನ ಮೇಲೆ ಹಾರಿ ಅವನನ್ನು ಕೊಂದುಬಿಟ್ಟಿತು” ಎಂದು ಹೇಳಿದನು. 27 ೨೭ ಅವನು, “ಕತ್ತೆಗೆ ತಡಿಹಾಕಿರಿ” ಎಂದು ಮಕ್ಕಳಿಗೆ ಆಜ್ಞಾಪಿಸಲು ಅವರು ತಡಿಹಾಕಿದರು. 28 ೨೮ ಅವನು ಹೋಗಿ ಶವವು ದಾರಿಯಲ್ಲಿ ಬಿದ್ದಿರುವುದನ್ನೂ ಕತ್ತೆಯೂ ಸಿಂಹವೂ ಅದರ ಬಳಿಯಲ್ಲಿ ನಿಂತಿರುವುದನ್ನು ಕಂಡನು. ಸಿಂಹವು ಶವವನ್ನು ತಿನ್ನಲಿಲ್ಲ, ಕತ್ತೆಯನ್ನು ಕೊಲ್ಲಲೂ ಇಲ್ಲ. 29 ೨೯ ಪ್ರವಾದಿಯು ದೇವರ ಮನುಷ್ಯನ ಶವವನ್ನು ಹೂಣಿಟ್ಟು, ಗೋಳಾಡಬೇಕೆಂದು ಕತ್ತೆಯ ಮೇಲೆ ಹಾಕಿ, ತನ್ನ ಊರಿಗೆ ತೆಗೆದುಕೊಂಡು ಬಂದು, 30 ೩೦ ತನ್ನ ಸ್ಮಶಾನಭೂಮಿಯಲ್ಲಿ ಅದನ್ನು ಸಮಾಧಿಮಾಡಿದನು. ಅವರು, “ಅಯ್ಯೋ, ನನ್ನ ಸಹೋದರನೇ!” ಎಂದು ಗೋಳಾಡಿದರು. 31 ೩೧ ಅನಂತರ ಅವನು ತನ್ನ ಮಕ್ಕಳಿಗೆ, “ನಾನು ಸತ್ತಾಗ ನನ್ನ ಶವವನ್ನು ದೇವರ ಮನುಷ್ಯನ ಶವವಿರುವಲ್ಲೇ ಸಮಾಧಿಮಾಡಿರಿ. ನನ್ನ ಎಲುಬುಗಳನ್ನು ಅವನ ಎಲುಬುಗಳು ಇರುವಲ್ಲೇ ಇಡಿರಿ. 32 ೩೨ ಅವನು ಯೆಹೋವನ ಅಪ್ಪಣೆಯಿಂದ ಬೇತೇಲಿನ ಯಜ್ಞವೇದಿಗೆ ವಿರುದ್ಧವಾಗಿಯೂ ಸಮಾರ್ಯದ ಪಟ್ಟಣಗಳಲ್ಲಿರುವ ಎಲ್ಲಾ ಪೂಜಾಸ್ಥಳಗಳ ವಿರುದ್ಧವಾಗಿಯೂ, ಹೇಳಿದ ಮಾತುಗಳು ಸಂದೇಹವಿಲ್ಲದೆ ನೆರವೇರುವವು” ಎಂದನು. 33 ೩೩ ಇಷ್ಟಾದರೂ ಯಾರೊಬ್ಬಾಮನು ತನ್ನ ದುರ್ಮಾರ್ಗವನ್ನು ಬಿಡದೆ, ಪುನಃ ಕನಿಷ್ಠರಾದ ಜನರನ್ನು ಪೂಜಾಸ್ಥಳಗಳ ಯಾಜಕರನ್ನಾಗಿ ಪ್ರತಿಷ್ಠಿಸಿದನು. 34 ೩೪ ಈ ಕಾರಣದಿಂದ ಯಾರೊಬ್ಬಾಮನ ಕುಟುಂಬದವರು ಪಾಪಿಗಳಾಗಿ ಭೂಲೋಕದಿಂದ ತೆಗೆದುಹಾಕಲ್ಪಟ್ಟು ನಿರ್ನಾಮವಾದರು.

< ಅರಸುಗಳು - ಪ್ರಥಮ ಭಾಗ 13 >